20 ವರ್ಷಗಳಲ್ಲಿ ಅಮೆರಿಕ ಎಡವಿದ್ದೆಲ್ಲಿ?


Team Udayavani, Aug 23, 2021, 6:30 AM IST

20 ವರ್ಷಗಳಲ್ಲಿ ಅಮೆರಿಕ ಎಡವಿದ್ದೆಲ್ಲಿ?

“ಅಮೆರಿಕವು 4 ಅಧ್ಯಕ್ಷರನ್ನು ಬದಲಾಯಿಸಿ, ಸಾವಿ ರಾರು ಪ್ರಾಣಗಳನ್ನು ಬಲಿಪಡೆದು, ಕೋಟಿಗಟ್ಟಲೆ ವೆಚ್ಚಮಾಡಿ, 20 ವರ್ಷಗಳನ್ನು ಸವೆಸಿ… ಸಾಧಿಸಿ ದ್ದೇನು? ತಾಲಿಬಾನ್‌ ಇದ್ದ ಜಾಗಕ್ಕೆ  ಅದೇ ತಾಲಿಬಾನನ್ನು ತಂದು ಕೂರಿಸಿದ್ದು.’

ಅಫ್ಘಾನಿಸ್ಥಾನ ತಾಲಿಬಾನ್‌ ವಶಕ್ಕೆ ಬರುತ್ತಿದ್ದಂತೆ ಇಂಥದ್ದೊಂದು ಹಾಸ್ಯದ ತುಣುಕು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡತೊಡಗಿತ್ತು. ಮೇಲ್ನೋಟಕ್ಕೆ ಇದು ಹಾಸ್ಯವೆನಿಸಬಹುದು. ಆದರೆ ಇದು ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸಂಪೂರ್ಣ ವೈಫ‌ಲ್ಯಕ್ಕೆ ಹಿಡಿದ ಕನ್ನಡಿ.

20 ವರ್ಷಗಳ ಕಾಲ ಅಲ್ಲಿ ನೆಲೆ ನಿಂತರೂ ಅಫ್ಘಾನ್‌ ಅನ್ನು ಮರುನಿರ್ಮಾಣ ಮಾಡುವಲ್ಲಿ ಅಮೆರಿಕ ಸೋತಿದೆ. ಕೇವಲ 10 ದಿನಗಳಲ್ಲಿ ಇಡೀ ದೇಶವನ್ನೇ ತಾಲಿಬಾನ್‌ ಉಗ್ರರು ವಶ ಮಾಡಿಕೊಳ್ಳುತ್ತಿದ್ದರೂ ಏನೂ ಮಾಡದೇ ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಅಫ್ಘಾನ್‌ ನಾಗರಿಕರನ್ನು ನಡುನೀರಿನಲ್ಲಿ ಕೈಬಿಟ್ಟು ಹೊರನಡೆದಿದೆ. ಹೀಗಾಗಿ ಅಫ್ಘಾನ್‌ಗೆ ಅಂಟಿಕೊಂಡ “ಸಾಮ್ರಾಜ್ಯಗಳ ಶ್ಮಶಾನ’ (ಗ್ರೇವಿಯಾರ್ಡ್‌ ಆಫ್ ಎಂಪಾಯರ್ಸ್‌)ವೆಂಬ ಹಣೆಪಟ್ಟಿಯು ಶಾಶ್ವತವಾಗಿ ಉಳಿಯುವಂತಾಗಿದೆ.

ಅಮೆರಿಕದ ಪಡೆಯಿಂದ ತರಬೇತಿ ಪಡೆದ 3 ಲಕ್ಷದಷ್ಟು ಅಫ್ಘಾನ್‌ ಸೈನಿಕರಿದ್ದರೂ ಕೇವಲ 80 ಸಾವಿರದಷ್ಟಿದ್ದ ತಾಲಿಬಾನಿಗಳ ಮುಂದೆ ಸೋತು ಶರಣಾದರು. ಉಗ್ರರ ವಿರುದ್ಧ ಸಿಡಿಯಬೇಕಾಗಿದ್ದ ಅಫ್ಘಾನ್‌ ಸೈನಿಕರು ತಮ್ಮ ನೆಲೆಗಳಲ್ಲೇ ಆಹಾರವಿಲ್ಲದೇ ಹಸಿವಿನಿಂದ ಬಳಲಿದರು, ಅವರ ಬಂದೂಕುಗಳೂ ಮೌನವಾದವು. ಬಘ್ರಾಮ್‌ನಂತಹ ಪ್ರಮುಖ ವಾಯು ನೆಲೆಯೂ ಖಾಲಿಯಾಯಿತು, ಅತ್ಯಾಧುನಿಕ ಮೂಲಸೌಕರ್ಯಗಳನ್ನು ಹೊಂದಿದ್ದ ಒಂದೊಂದೇ ನೆಲೆಗಳನ್ನು ಕಳೆದುಕೊಳ್ಳುತ್ತಾ ಬಂದರು.

ಒಟ್ಟಿನಲ್ಲಿ ಬರೋಬ್ಬರಿ 20 ವರ್ಷಗಳ ಕಾಲ ಅಫ್ಘಾನ್‌ನಲ್ಲಿ ನೆಲೆಯೂರಿದ್ದ ಅಮೆರಿಕವು ಆ ದೇಶವನ್ನು ಮತ್ತೆ ನರಕಕ್ಕೆ ನೂಕಿತು. ಅಮೆರಿಕದ ಈ  ವೈಫ‌ಲ್ಯಕ್ಕೆ ಕಾರಣವೇನು?

ಎರಡನೇ ವಿಶ್ವಯುದ್ಧಕ್ಕೂ ಮುನ್ನ ಅಮೆರಿಕವು ಬಹುತೇಕ ಎಲ್ಲ ಪ್ರಮುಖ ಯುದ್ಧಗಳಲ್ಲೂ ಜಯ ಸಾಧಿಸಿತ್ತು. ಆದರೆ, 2ನೇ ವಿಶ್ವಯುದ್ಧದ ಅನಂತರ ಆ ದೇಶಕ್ಕೆ ಹೇಳಿಕೊಳ್ಳುವಂಥ ಗೆಲುವು ದಕ್ಕಲಿಲ್ಲ.

1991ರ ಗಲ್ಫ್ ಯುದ್ಧದಲ್ಲಿ ಗೆದ್ದೆವೆಂದು ಅಮೆರಿಕ ಬೀಗಿದರೂ, ಅದು ನಿರ್ಣಾಯಕ ಹಾಗೂ ಸ್ಪಷ್ಟ ಗೆಲುವು ಆಗಿರಲಿಲ್ಲ. ಕೊರಿಯಾ, ಇರಾಕ್‌, ಲಿಬಿಯಾಗಳಲ್ಲೂ ಅಮೆರಿಕ ವೈಫಲ್ಯವನ್ನೇ ಎದು ರಿಸಿತು. ವಿಶ್ವಯುದ್ಧದಂಥ ಸಾಂಪ್ರದಾಯಿಕ ಸಮರ ಗಳಲ್ಲಿ ಅಮೆರಿಕ ಸೇನೆ ಜಯ ಗಳಿಸುವುದು ಸುಲಭ. ಏಕೆಂದರೆ ಅಲ್ಲಿ ಶತ್ರು ಯಾರೆಂಬ ನಿಖರತೆ ಇರುತ್ತದೆ. ಗುರಿಯೂ ಸ್ಪಷ್ಟವಿರುತ್ತದೆ. ತನ್ನ ಕಣ್ಣಿಗೆ ಕಾಣುವ ಶತ್ರುವನ್ನು ಸೋಲಿಸುವಂಥ ಶಕ್ತಿ ಅಮೆರಿಕಕ್ಕಿದೆ. ಆದರೆ ಶತ್ರು ಕಣ್ಣಿಗೆ ಕಾಣದೇ ಇದ್ದರೆ? ನೈಜ ಸಮಸ್ಯೆ ಇರುವುದೇ ಅಲ್ಲಿ. ಅಫ್ಘಾನ್‌, ಇರಾಕ್‌ನಲ್ಲೂ ಆಗಿದ್ದಿದೇ.

ಉಗ್ರವಾದದ ನಿರ್ಮೂಲನೆಯ ಉದ್ದೇಶವಿಟ್ಟುಕೊಂಡು ಅಫ್ಘಾನ್‌ ಪ್ರವೇಶಿಸಿದ್ದ ಅಮೆರಿಕ, ಅನಂತರ ಆ ದೇಶದಲ್ಲಿ ಪ್ರಜಾಸತ್ತೆ ರೂಪಿಸುವ, ದೇಶವನ್ನು ಮರುನಿರ್ಮಾಣ ಮಾಡುವ ಗುರಿಯನ್ನು ಹಾಕಿಕೊಂಡಿತು. ಆದರೆ ಇವೆಲ್ಲದಕ್ಕೂ ಬಳಸಿದ ಕಾರ್ಯತಂತ್ರ ಮಾತ್ರ ದುರ್ಬಲವಾಗಿತ್ತು. ಯಾವುದೇ ಆಕ್ರಮಿತ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಉತ್ತೇಜನ ನೀಡುವುದು, ಆ ಮೂಲಕ ಅಲ್ಲಿ ಭದ್ರತೆ ಹಾಗೂ ಸ್ಥಿರತೆ ಪುನಃ ಸ್ಥಾಪಿಸುವುದು ನೈತಿಕವಾಗಿ ಸಮರ್ಥ ನೀಯ ಮತ್ತು ಪರಿಣಾಮಕಾರಿ ಮಾರ್ಗ ಹೌದಾ ದರೂ, ರಾಜಕೀಯ ಸುಧಾರಣೆ ಯಶಸ್ವಿಯಾಗ ಬೇಕೆಂದರೆ ಅಲ್ಲಿನ ಸ್ಥಳೀಯ ಸಮಾಜ ಮತ್ತು ರಾಜಕೀಯ ಸಂಸ್ಕೃತಿಯಿಂದಲೇ ಅದು ಕುಡಿಯೊಡೆಯಬೇಕು.

ಅಫ್ಘಾನಿಸ್ಥಾನದಲ್ಲಿ ಅಂತಾರಾಷ್ಟ್ರೀಯ ಸಂಘ ಟನೆಗಳಾದ ವಿಶ್ವಸಂಸ್ಥೆ, ಕೋಟಿಗಟ್ಟಲೆ ದೇಣಿಗೆ ನೀಡುವಂಥ ಲಾಭ ರಹಿತ ಹಾಗೂ ಸ್ವತಂತ್ರ ಸಂಸ್ಥೆಗಳು ಮೂಟೆಗಟ್ಟಲೆ ಡಾಲರ್‌ಗಳನ್ನು ಸುರಿದು, ಸಾಕಷ್ಟು ಸಮಯ ವ್ಯಯಿಸಿ, ಪ್ರಜಾಪ್ರಭುತ್ವವನ್ನು ನಿರ್ಮಿಸಲು, ಸಂವಿಧಾನವನ್ನು ರಚಿಸಲು, ಹೊಸ ರಾಜಕೀಯ ಸಮಾಜವನ್ನು ನಿರ್ಮಿಸಲು ಪ್ರಯ ತ್ನಿಸಿದವು. ಆದರೆ ಇವೆಲ್ಲವೂ ಹೊರಗಿನವರ ಪ್ರಯತ್ನವಾಗಿತ್ತೇ ವಿನಾ ಸ್ಥಳೀಯವಾಗಿ ಹುಟ್ಟಿದ ಪರಿಕಲ್ಪನೆಯಾಗಿರಲಿಲ್ಲ. ಇದೇ ಕಾರಣಕ್ಕೆ ಇರಾಕ್‌ನಲ್ಲಾಗಲೀ, ಅಫ್ಘಾನ್‌ನಲ್ಲಾಗಲೀ ದೇಶ ಕಟ್ಟುವ ಕೆಲಸ ಯಶಸ್ವಿಯಾಗಲಿಲ್ಲ.

ನಾಗರಿಕರನ್ನು ಕೇಂದ್ರವಾಗಿರಿಸಿಕೊಂಡು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಮನ ವೊಲಿಸುವ, ಅವರಲ್ಲಿ ರಾಷ್ಟ್ರೀಯ ಅಸ್ಮಿತೆಯನ್ನು ಬಡಿದೆಬ್ಬಿಸುವ, ರಾಜಕೀಯ ಸಂಸ್ಥೆಗಳನ್ನು ಸ್ಥಾಪಿಸಿ, ಪ್ರಜಾಸತ್ತೆಯ ಕುರಿತು ಆಳವಾದ ವಿಶ್ವಾಸ ಮೂಡಿಸುವಂಥ ಕೆಲಸವನ್ನು ಮಾಡಲು ಸೇನಾ ಪಡೆಗಳಿಗೆ ಸಾಧ್ಯವಾಗಲಿಲ್ಲ. ಇದಕ್ಕೆ ಇನ್ನೊಂದು  ಕಾರಣವೇನೆಂದರೆ, ಅಮೆರಿಕಕ್ಕೆ ಅಫ್ಘಾನ್‌ನ ಮರು ಸ್ಥಾಪನೆ ಅಥವಾ ಶಾಂತಿ ಸ್ಥಾಪನೆ ಉದ್ದೇಶಕ್ಕಿಂತಲೂ ಹೆಚ್ಚಾಗಿ, ಆ ದೇಶದ ಮೇಲಿನ ರಷ್ಯಾ ಹಾಗೂ ಚೀನ ಪ್ರಾಬಲ್ಯವನ್ನು ಕುಗ್ಗಿಸುವುದು, ಅಲ್ಲಿರುವ ಅಪಾರ ಖನಿಜ ಸಂಪತ್ತಿನಲ್ಲಿ ಹೂಡಿಕೆ ಮಾಡುವುದು ಮತ್ತು ಅದನ್ನು ಉಳಿಸಿಕೊಳ್ಳುವುದೇ ಆದ್ಯತೆಯಾಗಿತ್ತು. ಜತೆಗೆ, ಪ್ರಜಾಸತ್ತೆಯ ಹೆಸರಲ್ಲಿ ಅಧಿಕಾರಕ್ಕೆ ಬಂದ ಸರಕಾರವೂ ಜನಪರ ಆಡಳಿತ ನೀಡಲಿಲ್ಲ. ದುರ್ಬಲ ರಾಜಕೀಯ ನಾಯಕತ್ವವು ಪ್ರಜಾಪ್ರಭುತ್ವದ ಬೇರನ್ನು ಬಲಿಷ್ಠಗೊಳ್ಳಲು ಬಿಡಲಿಲ್ಲ.

ಅಫ್ಘಾನ್‌ ಸೇನೆಯನ್ನು ಬಲಪಡಿಸಲು ಅಮೆರಿಕವು ಸಾಕಷ್ಟು ಹಣ ಸುರಿದರೂ ಸೇನೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಲೇ ಇಲ್ಲ. ಪರಿಣಾಮವೆಂಬಂತೆ, ಉನ್ನತ ಹುದ್ದೆಯಲ್ಲಿರುವವರು ಉಂಡು ತೇಗಿದರು. ಕೆಳಮಟ್ಟದ ಸೈನಿಕರು ಬಡವಾಗುತ್ತಾ ಸಾಗಿದರು. ಅಷ್ಟೇ ಅಲ್ಲ, ತಾಲಿಬಾನ್‌ ಮತ್ತು ಅಮೆರಿಕದ ನಡುವೆ ಒಪ್ಪಂದ ಏರ್ಪಟ್ಟ ಬಳಿಕವಂತೂ ಸೈನಿಕರಿಗೆ ಸರಿಯಾಗಿ ವೇತನವನ್ನೂ ನೀಡದೆ ಸತಾಯಿಸಲಾಯಿತು. ಈ ಎಲ್ಲ ಬೆಳವಣಿಗೆಗಳಿಂದ ಹತಾಶರಾಗಿದ್ದ ಸೈನಿಕರು, ತಾಲಿಬಾನ್‌ ಲಗ್ಗೆಯಿಟ್ಟಾಗ ಹೋರಾಡುವ ಕಿಚ್ಚನ್ನೇ ಮರೆತು ಅನಾಮತ್ತಾಗಿ ಶರಣಾಗಿಬಿಟ್ಟರು. ಸೇನೆಯ ಜತೆಗೆ ಅಫ್ಘಾನ್‌ ಸರಕಾರ ಕೂಡ “ಸ್ವಾವಲಂಬನೆ’ ಎಂಬ ಪದವನ್ನೇ ಮರೆತು, ಎಲ್ಲದಕ್ಕೂ ಅಮೆರಿಕ ಸೇನೆಯನ್ನೇ ಅವಲಂಬಿಸಿತ್ತು. ಅಧಿಕಾರವನ್ನು ನಿರ್ವಹಿಸಲು ಎಲ್ಲಿ ಸ್ಥಳೀಯ ನಾಯಕರು ವಿದೇಶಿ ಸೇನಾಪಡೆಗಳನ್ನು ಅವಲಂಬಿಸಿ ರುತ್ತಾರೋ, ಅಲ್ಲಿ ನ್ಯಾಯಸಮ್ಮತತೆ, ಪರಿಣಾಮಕಾರಿ ಆಡಳಿತ, ರಾಷ್ಟ್ರೀಯ ಅಸ್ಮಿತೆ ಮೂಡಿಸಲು ಸಾಧ್ಯವಾಗದು ಎಂಬುದಕ್ಕೆ ವೆಸ್ಟ್‌ ಬ್ಯಾಂಕ್‌, ಗಾಜಾ, ಲೆಬನಾನ್‌, ಸೊಮಾಲಿಯಾ, ಇರಾಕ್‌ಗಳ ಉದಾಹರಣೆಯಿದ್ದರೂ ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಅಮೆರಿಕ, ಅಫ್ಘಾನ್‌ ಆಡಳಿತ ಎರಡೂ ಸೋತವು.

ಇಲ್ಲಿ ಗಮನಿಸಬೇಕಾದ ಮತ್ತೂಂದು ಪ್ರಮುಖ ಅಂಶವಿದೆ. ಅದೇನೆಂದರೆ, ವಾಸ್ತವದಲ್ಲಿ ಯುದ್ಧ ಪೀಡಿತ ದೇಶವು ತಾಲಿಬಾನ್‌ ವಶಕ್ಕೆ ಬಂದಿದ್ದು ಆಗಸ್ಟ್‌ 15ಕ್ಕಲ್ಲ. ಬದಲಿಗೆ, 2020ರ ಫೆ. 29ರಂದು. ಇದು ಅಮೆರಿಕದ ಹಿಂದಿನ ಟ್ರಂಪ್‌ ಸರಕಾರ ತಾಲಿಬಾನ್‌ ಜತೆ ಒಪ್ಪಂದ ಮಾಡಿಕೊಂಡ ದಿನ. ಯಾವಾಗ ಆ ಒಪ್ಪಂದಕ್ಕೆ ಸಹಿ ಬಿತ್ತೋ, ಅಂದೇ ಅಫ್ಘಾನ್‌ನ ಪತನ ಆರಂಭವಾಯಿತು. ಅದನ್ನು ಶಾಂತಿ ಒಪ್ಪಂದ ಎಂದು ಅಮೆರಿಕ ಕರೆಯಿತು. ಆದರೆ ಅದು ತಾಲಿಬಾನ್‌ ಮತ್ತು ಅಮೆರಿಕದ ನಡುವಿನ ಒಪ್ಪಂದವಾಗಿತ್ತೇ ವಿನಾ, ಅಫ್ಘಾನ್‌ ಸರಕಾರ ಅದರ ಭಾಗವಾಗಿರಲೇ  ಇಲ್ಲ. 2021ರ ಮೇ ತಿಂಗಳೊಳಗೆ ನಮ್ಮ ಸೇನೆಯನ್ನು ಹಿಂಪಡೆಯುತ್ತೇವೆ ಎಂದು ಟ್ರಂಪ್‌ ಘೋಷಿಸಿ ಬಿಟ್ಟರು. ಅಫ್ಘಾನ್‌ನಲ್ಲಿನ ಅಮೆರಿಕದ ಹೂಡಿಕೆಗಳಿಗೆ ಸಮಸ್ಯೆ ಆಗಬಾರದು, ಅಲ್‌ ಕಾಯಿದಾದಂತಹ ಉಗ್ರರಿಗೆ ಆಶ್ರಯ ನೀಡಬಾರದು ಎಂಬ ಎರಡೇ ಎರಡು ಷರತ್ತುಗಳನ್ನು ಹಾಕಿ, ಆತುರಾತುರವಾಗಿ ಟ್ರಂಪ್‌ ಆ ಒಪ್ಪಂದಕ್ಕೆ ಸಹಿ ಹಾಕಿಬಿಟ್ಟರು.

ಇಷ್ಟೆಲ್ಲ ಆಗುತ್ತಿದ್ದರೂ ಅಫ್ಘಾನ್‌ ಸರಕಾರ, ಸೇನೆಯನ್ನು ದೂರವಿಡಲಾಗಿತ್ತು. ದೇಶದ ಭವಿಷ್ಯವು ನಿರ್ಣಾಯಕ ಘಟ್ಟದಲ್ಲಿದ್ದಾಗ ಇವರು ಮೂಕ ಪ್ರೇಕ್ಷಕ ರಾಗಬೇಕಾಯಿತು. ಸರಕಾರ ಮತ್ತು ತಾಲಿಬಾನ್‌ ನಡುವೆ ಶಾಂತಿಯುತ ಸಂಧಾನ ಏರ್ಪಡಿಸುವ ಪ್ರಯತ್ನವನ್ನೂ ಈ ಒಪ್ಪಂದ ಮಾಡಲಿಲ್ಲ. ಸೇನೆ ವಾಪಸಾತಿ ಬಳಿಕ ದೇಶದಲ್ಲಿ ತಾಲಿಬಾನ್‌ ಅಸ್ಥಿರತೆ ಸೃಷ್ಟಿಸದಂತೆ, ಮಾನವ ಹಕ್ಕುಗಳನ್ನು ರಕ್ಷಿಸುವಂತೆ, ಉಗ್ರ ಸಂಘಟನೆಗಳಿಗೆ ನೆರವು, ಆಶ್ರಯ ನೀಡದಂತೆ ಖಡಕ್ಕಾದ ಷರತ್ತಾಗಲೀ, ಒಪ್ಪಂದದ ಅಂಶ ಉಲ್ಲಂ ಸಿದರೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯಾಗಲೀ ಪ್ರಸ್ತಾವಿಸಲೇ ಇಲ್ಲ. ಇದು ತಾಲಿಬಾನಿಗರಿಗೆ ವರವಾಗಿ ಪರಿಣಮಿಸಿದರೆ, ದೊಡ್ಡಣ್ಣನ ಅತಿದೊಡ್ಡ ವೈಫ‌ಲ್ಯವೆಂದು ಇತಿಹಾಸದ ಪುಟದಲ್ಲಿ ದಾಖಲಾಯಿತು. ಅಫ್ಘಾನ್ನರ ಬದುಕು ನರಕ ಸದೃಶವಾಯಿತು.

 

-ಹಲೀಮತ್‌ ಸಅದಿಯಾ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.