ಸಾಲ ಮನ್ನಾ: ರಾಜಕೀಯ ಪಕ್ಷಗಳ ಅಸ್ತ್ರ


Team Udayavani, Jun 12, 2017, 4:17 PM IST

party.jpg

ಒಂದು ದಿನದ ಮಟ್ಟಿಗೆ ರಾಜ್ಯದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನ ಜನಪ್ರತಿನಿಧಿಗಳು ಪಕ್ಷ ಪಕ್ಕಕ್ಕಿಟ್ಟು ರಾಜ್ಯದ ರೈತರ ಬಗ್ಗೆ ಪ್ರಾಮಾಣಿಕ ಕಾಳಜಿ ವಹಿಸಿದರೆ ಇದು ದೊಡ್ಡ ಪ್ರಶ್ನೆಯೇ ಅಲ್ಲ. ಆ ವಿಚಾರದಲ್ಲಿ ತಮಿಳುನಾಡು ಜನಪ್ರತಿನಿಧಿಗಳು ನಮ್ಮ ಜನಪ್ರತಿನಿಧಿಗಳಿಗೆ ಮಾದರಿಯಾಗಬೇಕಿತ್ತು.ಆದರೆ, ದುರದೃಷ್ಟಕರ ಎಂದರೆ ಯಾರೂ ಪಕ್ಷ ಪ್ರೀತಿ ಬಿಟ್ಟು ಮಾತನಾಡಲು ಸಿದ್ಧರಿಲ್ಲ. ಸಾಲ ಮನ್ನಾ ವಿಚಾರದಲ್ಲಿ ರೈತರ ಜತೆ ನಾವಿದ್ದೇವೆ ಎಂದು ಕೇಂದ್ರ ಅಥವಾ ರಾಜ್ಯ ಸರಕಾರ ಮುಂದಡಿ ಇಡಬಹುದಲ್ಲವೇ? ರೈತರ ಸಾಲ ಮನ್ನಾ ವಿಚಾರದಲ್ಲಿ ಆತ್ಮವಂಚನೆ ಯಾಕೆ? ನಮಗೆ ಸಾಲ ಮನ್ನಾ ಮಾಡಲು ಇಷ್ಟವಿಲ್ಲ ಅಥವಾ ನಾವು ಮಾಡುವುದಿಲ್ಲ ಎಂದು ಖಡಾ ಖಂಡಿತವಾಗಿ ಆಳುವ ಸರಕಾರಗಳು ಒಮ್ಮೆ ಘೋಷಿಸಿದರೆ ರೈತರು ತಮ್ಮ ಕಷ್ಟ ತಾವು ಪಟ್ಟುಕೊಳ್ಳುತ್ತಾರೆ. ಆದರೆ, ಇದಕ್ಕೆ ಯಾವ ಆಡಳಿತಾರೂಢ ಪಕ್ಷಗಳೂ ಸಿದ್ಧವಿಲ್ಲ. “ಸಮಸ್ಯೆ ಜೀವಂತ ಇರಬೇಕು, ಅದರಡಿ ರಾಜಕೀಯದ ಬೇಳೆ ಬೇಯಿಸಿಕೊಳ್ಳಬೇಕು’ ಎಂಬ ಸಿದ್ಧಾಂತ ರಾಜಕಾರಣಿಗಳದ್ದು.

ರೈತರ ಸಾಲ ಮನ್ನಾ ಪ್ರಸ್ತುತ ದೇಶವ್ಯಾಪಿ ಬಹುಚರ್ಚಿತ ವಿಷಯವಾಗಿದೆ. ಇದು ರಾಜಕೀಯ ಸ್ವರೂಪವೂ ಪಡೆದು ಆಡಳಿತ ಹಾಗೂ ಪ್ರತಿಪಕ್ಷಕ್ಕೆ “ಅಸ್ತ್ರ’ವೂ ಆಗಿದೆ. ರೈತರು, ಕೃಷಿಕರು ಎಂದಾಕ್ಷಣ ಭಾವನಾತ್ಮಕವಾಗಿ ಮಾತನಾಡುವ ರಾಜಕಾರಣಿಗಳು ರೈತರ ಸಾಲಮನ್ನಾ ಎಂದಾಕ್ಷಣ ಲೆಕ್ಕಾಚಾರಕ್ಕೆ ಮುಂದಾಗುತ್ತಾರೆ. 

ರೈತರ ಸಾಲ ಮನ್ನಾ ಮಾಡಿದರೆ ದೇಶದ ಹಣಕಾಸು ವ್ಯವಸ್ಥೆಗೆ ಪೆಟ್ಟು ಬೀಳುತ್ತದೆ ಎಂಬುದು ಒಂದು ವಾದವಾದರೆ, ಉದ್ಯಮಿಗಳ ಸಾವಿರಾರು ಕೋಟಿ ರೂ. ಸಾಲ ಮನ್ನಾ ಮಾಡುವುದಾದರೆ ರೈತರದು ಯಾಕೆ ಮಾಡಬಾರದು ಎಂಬ ಪ್ರಶ್ನೆಯೂ ಇದೆ. ಇದೊಂದು ಸೂಕ್ಷ್ಮ ವಿಚಾರ. ಆದರೆ, ಇಲ್ಲಿ ಸಮಸ್ಯೆ ಎಂಬ “ಚೆಂಡು’ ಒಂದು ಅಂಗಳದಿಂದ ಮತ್ತೂಂದು ಅಂಗಳಕ್ಕೆ ಎಸೆಯಲ್ಪಡುತ್ತಿರುವುದು ಸೋಜಿಗ. 

ರಾಜ್ಯದ ಮಟ್ಟಿಗೆ ಹೇಳುವುದಾದರೆ, ಈ ಹಿಂದೆ ಅಧಿಕಾರದಲ್ಲಿದ್ದಾಗ ಸಾಲ ಮನ್ನಾ ಸಾಧ್ಯವೇ ಇಲ್ಲ ಎಂದಿದ್ದ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ  ಈಗ ನಾವು ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡ್ತೇವೆ ಎನ್ನುತ್ತಿದ್ದಾರೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಹಿಂದೊಮ್ಮೆ ನಾವು ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆವು.  ಈಗ ಮತ್ತೆ ಆಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡ್ತೇನೆ ಎಂದು ಘೋಷಿಸಿದ್ದಾರೆ.

ಅಧಿಕಾರದಲ್ಲಿರುವ ಕಾಂಗ್ರೆಸ್‌, ಕೇಂದ್ರ ಸರ್ಕಾರ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡಿದರೆ ನಾವು  ಈಗಲೇ ಸಹಕಾರ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡಲು ಸಿದ್ಧ ಎಂದು ಹೇಳುತ್ತಿದೆ. ಹೀಗಾಗಿ, ರೈತರ ಸಾಲಮನ್ನಾ ಮೂರೂ ಪಕ್ಷಗಳಿಗೆ ರಾಜಕೀಯ “ಅಸ್ತ್ರ’ವಾಗಿರುವುದಂತೂ ನಿಜ.
ಸರ್ಕಾರದ ಪರಿಹಾರಕ್ಕಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಸಾಲ ಮನ್ನಾ ನಿರೀಕ್ಷೆಯಲ್ಲಿ ಸಹಕಾರ ಅಥವಾ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಮಾಡುವುದೂ ಇಲ್ಲ. ಹಾಗೆ ಹೇಳುವುದಾದರೆ, ಸಹಕಾರ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಪಡೆದ ಸಾಲದ ಪ್ರಮಾಣದಷ್ಟೇ ಖಾಸಗಿ ಲೇವಾದೇವಿದಾರರು, ಎಪಿಎಂಸಿಗಳ ಮಂಡಿ ಮಾಲೀಕರು, ಸಕ್ಕರೆ ಕಾರ್ಖಾನೆ ಮಾಲೀಕರ ಬಳಿ ರೈತರು ಸಾಲ ಪಡೆದಿರುತ್ತಾರೆ.

ಆದರೆ, ಇಲ್ಲಿ ವಿಷಯ, ಸಾಲಮನ್ನಾದ್ದಲ್ಲ. ರಾಜಕೀಯ ಪಕ್ಷಗಳು ಸಾಲಮನ್ನಾ ವಿಚಾರದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿ ರೈತಾಪಿ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಆಗುತ್ತಿದೆ.
ಸಹಕಾರ ಬ್ಯಾಂಕುಗಳಲ್ಲಿ ಶೇ.80 ರಷ್ಟು ರೈತರಿಗೆ 25 ಸಾವಿರ ರೂ. ಮೇಲೆ ಸಾಲ ಸಿಕ್ಕಿಲ್ಲ. ಒಂದೊಮ್ಮೆ ಮನ್ನಾ ಆಗಿದ್ದೇ ಆದರೆ 25 ಸಾವಿರ ರೂ. ಇನ್ನು ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಮನ್ನಾ ಮಾಡಿದರೂ 50 ರಿಂದ 1 ಲಕ್ಷ ರೂ.ವರೆಗೆ ಮಿತಿ ನಿಗದಿ ಮಾಡಿ ಮಾಡಬಹುದು. ಇದರಿಂದ ರೈತನ ಬದುಕು ಬಂಗಾರವಾಗಿ ಹೋಗುತ್ತದೆ ಎಂದಲ್ಲ. ತಕ್ಷಣಕ್ಕೆ ಸ್ವಲ ಮಟ್ಟಿಗೆ ನಿರಾಳವಾಗಬಹುದು. ಆದರೆ, ಆಡಳಿತ ನಡೆಸುವ ಪಕ್ಷಗಳು ಇದನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುವುದು ಎಷ್ಟು ಸೂಕ್ತ ಎಂಬುದಷ್ಟೇ ಪ್ರಶ್ನೆ. 

ಕರ್ನಾಟಕ ಒಳಗೊಂಡಂತೆ ಇಡೀ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಪ್ರಮುಖವಾಗಿ ರೈತರ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟ ಕಾರಣ. ಬರ ಮತ್ತಿತರರ ಸಂದರ್ಭಗಳಲ್ಲಿ ಬೆಳೆ ಕೈಗೆ ಸಿಗದೆ ಖಾಸಗಿ ಲೇವಾದೇವಿದಾರರು, ಸಹಕಾರ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಮಾಡಿದ ರೈತರು ಕಂಗಾಲಾಗುವುದು ಸಾಮಾನ್ಯ. ಬೆಳೆ ಕೈಗೆ ಸಿಕ್ಕು ನ್ಯಾಯಯುತ ಬೆಲೆ ಸಿಕ್ಕರೆ ಯಾವ ರೈತನೂ ಸರ್ಕಾರದ ನೆರವಿಗಾಗಿ ಕೈ ಒಡ್ಡುವುದಿಲ್ಲ. ಆದರೆ, ಕರ್ನಾಟಕದಂತಹ ರಾಜ್ಯದಲ್ಲಿ ನಿರಂತರ ಬರ ಅಥವಾ ನೆರೆಯಿಂದಾಗಿ ರೈತರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ.

ಮಳೆ ಬಾರದೆ ನೀರಿಲ್ಲದೆ ಬೆಳೆ ಒಣಗುವುದು ಒಂದೆಡೆಯಾದರೆ ಮತ್ತೂಂದೆಡೆ ಅಕಾಲಿಕ ಮಳೆ ಬಂದು ಹಾಕಿದ ಬೆಳೆ ನಾಶವಾಗುವುದು. ಕೃಷಿ, ತೋಟಗಾರಿಕೆ, ಕಂದಾಯ, ಪಶು ಸಂಗೋಪನೆ, ಸಹಕಾರ, ಹವಾಮಾನ ಇಲಾಖೆ ಸಮನ್ವಯತೆಯಿಂದ ಯಾವ ಪ್ರದೇಶದಲ್ಲಿ ಯಾವ ಬೆಳೆ ಹಾಕಬಹುದು, ಮಳೆಯ ಮುನ್ಸೂಚನೆ ಮತ್ತಿತರ ಮಾಹಿತಿ ರೈತನಿಗೆ ಕಾಲ ಕಾಲಕ್ಕೆ ಕೊಡುವ ಹಾಗೂ ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ತೆಗೆಯುವ ತಂತ್ರಜ್ಞಾನಕ್ಕೆ ರೈತನನ್ನು ಸಜ್ಜುಗೊಳಿಸಿದ್ದರೆ ಇಂದು ಸಾಲಮನ್ನಾ ವಿಚಾರ ನಗಣ್ಯವಾಗುತ್ತಿತ್ತು. ಆದರೆ, ನಮ್ಮ ಕೃಷಿ-ತೋಟಗಾರಿಕೆ ವಿಶ್ವವಿದ್ಯಾಲಯಗಳಾಗಲಿ, ಸರ್ಕಾರಗಳಾಗಲಿ ಆ ಬಗ್ಗೆ ಹೆಚ್ಚು ಒತ್ತು ಕೊಟ್ಟಿಲ್ಲ. ಹೀಗಾಗಿ, ರೈತನೇ ಮಳೆ ನಂಬಿ ದೇವರ ಮೇಲೆ ಬಾರ ಹಾಕಿ ಬಿತ್ತನೆ ಮಾಡುವುದು, ಬೆಳೆ ಬಂದರೆ ಸರಿ, ಇಲ್ಲದಿದ್ದರೆ ಗ್ರಹಚಾರ ಎಂದು ತಲೆ ಮೇಲೆ ಕೈ ಹೊತ್ತಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಕರ್ನಾಟಕದಲ್ಲಿ  10 ಕೋಟಿ ರೂ.ಗಳಷ್ಟು ಸಹಕಾರ ಸಂಘಗಳಲ್ಲಿ ಉಳಿದ 43 ಸಾವಿರ ಕೋಟಿ ರೂ.ಗಳಷ್ಟು ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಸಾಲ ಮಾಡಿದ್ದಾರೆ. ವಾಣಿಜ್ಯ ಬ್ಯಾಂಕುಗಳ ಸಾಲ ಕೇಂದ್ರ ಸರ್ಕಾರ ಮನ್ನಾ ಮಾಡಿದರೆ ನಾವು ಸಹಕಾರ ಸಂಘಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡುತ್ತೇವೆ ಎಂಬುದು ರಾಜ್ಯ ಸರ್ಕಾರದ ವಾದ. ಮೊದಲು ನೀವು ಸಹಕಾರ ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಿ, ಆ ನಂತರ ನಾವು ಪರಿಶೀಲನೆ ಮಾಡ್ತೇವೆ ಎಂಬುದು ಕೇಂದ್ರ ಸರ್ಕಾರದ ವಾದ. 

ಕರ್ನಾಟಕದಲ್ಲಿ ಪ್ರತಿಪಕ್ಷ ಬಿಜೆಪಿ ಸಹಕಾರ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ. ಆದರೆ, ವಾಣಿಜ್ಯ ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಕೆಲಸ ಮಾಡುವುದಿಲ್ಲ. ಅದೇ ರೀತಿ ಆಡಳಿತಾರೂಢ ಕಾಂಗ್ರೆಸ್‌, ಕೇಂದ್ರ ಸರ್ಕಾರ ರೈತರು ವಾಣಿಜ್ಯ ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಲಿ ಎಂದು ಒತ್ತಾಯಿಸುತ್ತದೆ. ತಮ್ಮದೇ ಸರ್ಕಾರ ರಾಜ್ಯದಲ್ಲಿದ್ದರೂ ಸಹಕಾರ ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಮನ್ನಾಗೆ ಮನಸ್ಸು ಮಾಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಸಹಕಾರ ಬ್ಯಾಂಕುಗಳಲ್ಲಿನ ರೈತರು ಮಾಡಿರುವ ಸಾಲ ಮನ್ನಾ ಅಸಾಧ್ಯವಲ್ಲ.

ಅದೇ ರೀತಿ ಕೇಂದ್ರ ಸಚಿವರಾದ ಅನಂತಕುಮಾರ್‌, ಸದಾನಂದಗೌಡ, ರಮೇಶ್‌ಜಿಗಜಿಣಗಿ, ಕೇಂದ್ರ ರಾಜಕಾರಣದಲ್ಲಿ ಸಕ್ರಿಯರಾಗಲು  ರಾಜ್ಯದಿಂದ ಮೂರು ಬಾರಿ ರಾಜ್ಯಸಭೆ ಪ್ರವೇಶಿಸಿದ್ದ ವೆಂಕಯ್ಯನಾಯ್ಡು, ಇದೀಗ ರಾಜ್ಯದಿಂದ ರಾಜ್ಯಸಭೆಗೆ ಹೋಗಿ ಮಂತ್ರಿಯಾಗಿರುವ ನಿರ್ಮಲಾ ಸೀತಾರಾಮನ್‌, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಧಾನಿ ಮುಂದೆ ಪಟ್ಟು ಹಿಡಿದು ಕುಳಿತರೆ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಬಗೆಹರಿಯಲಾರದ ಸಮಸ್ಯೆಯಲ್ಲ. ಆದರೆ, ಇಚ್ಛಾಶಕ್ತಿ ಯಾರಿಗೂ ಇಲ್ಲ.

ತ‌ಮಿಳುನಾಡಿನಲ್ಲಿ 7760 ಕೋಟಿ ರೂ., ಮಹಾರಾಷ್ಟ್ರದಲ್ಲಿ 30 ಸಾವಿರ ಕೋಟಿ ರೂ., ಉತ್ತರ ಪ್ರದೇಶದಲ್ಲಿ 36,359 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಆಂಧ್ರಪ್ರದೇಶದಲ್ಲಿ 43 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ಭರವಸೆ ನೀಡಲಾಗಿದೆ. ಹೀಗಾಗಿ ರಾಜ್ಯದ ರೈತರು ಸರ್ಕಾರದತ್ತ ಆಸೆಗಣ್ಣಿನಿಂತ ನೋಡುವಂತಾಗಿದೆ.

ಹಿಂದೆ ಯುಪಿಎ ಸರ್ಕಾರ 65 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿತ್ತು ಎಂದು ಪ್ರತಿಪಾದಿಸುವ ಕಾಂಗ್ರೆಸ್‌, ಇದೀಗ ರಾಜ್ಯದಲ್ಲಿ ನಾವು ಆಡಳಿತ ನಡೆಸುತ್ತಿದ್ದೇವೆ, ರೈತರ ಜತೆಗಿದ್ದೇವೆ ಎಂದು ಸಾಲ ಮನ್ನಾ ಮಾಡುವ  ಮನಸ್ಸು ಮಾಡುತ್ತಿಲ್ಲ. ಯುಪಿಎ ಸರ್ಕಾರವಷ್ಟೇ ಅಲ್ಲ, ನಮಗೂ ರೈತರ ಬಗ್ಗೆ ಕಾಳಜಿ ಇದೆ ಎಂದು ಈಗಿನ ಬಿಜೆಪಿ ಸರ್ಕಾರವೂ ಸಾಲಮನ್ನಾಗೆ ಮುಂದಾಗುತ್ತಿಲ್ಲ. 

ರಾಜ್ಯದಲ್ಲಿ ನಿರಂತರ ಬರ ಹಿನ್ನೆಲೆಯಲ್ಲಿ ಸುಮಾರು 1 ಲಕ್ಷ ಕೋಟಿ ರೂ. ಮೊತ್ತದ ಬೆಳೆನಷ್ಟವಾಗಿದೆ. ರೈತರು ಯಾವ ರೀತಿಯಲ್ಲಿ ಸಂಕಷ್ಟದಲ್ಲಿರಬಹುದು ಎಂಬುದು ಇದರಿಂದ ಅರ್ಥವಾಗುತ್ತದೆ. ರಾಜ್ಯದಲ್ಲಿ ಸಾಲಮನ್ನಾಗೆ ಒತ್ತಾಯಿಸಿ ರೈತರು ಬೀದಿಗಿಳಿದಿಲ್ಲ. ರೈತ ಸಂಘಟನೆಗಳು ಬೀದಿಗಿಳಿದಿವೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಜನಪ್ರತಿನಿಧಿಗಳು “ನೀ ಮೊದಲಾ, ನಾ ಮೊದಲಾ’ ಎಂಬ ಹಗ್ಗಜಗ್ಗಾಟದಲ್ಲಿದ್ದಾರೆ.

ಮತ್ತೂಂದು ವಿಚಾರ ಎಂದರೆ ಬರ ಪರಿಹಾರದ್ದು. ಕೇಂದ್ರ ಸರ್ಕಾರ ನಾವು ಹಿಂದೆಂದೂ ಕೊಡದಷ್ಟು ಹಣ ಕೊಟ್ಟಿದ್ದೇವೆ ಎಂದರೆ, ರಾಜ್ಯ ಸರ್ಕಾರ ನಾವು ಕೇಳಿದಷ್ಟು ಕೊಟ್ಟಿಲ್ಲ ಎಂದು ಹೇಳುತ್ತದೆ.  ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ, ಬಜೆಟ್‌ ಅಧಿವೇಶನ, ಇದೀಗ ಮಳೆಗಾಲದ ಅಧಿವೇಶನ, ಬಹುಶಃ ಮುಂದೆ ನಡೆಯಲಿರುವ ಚಳಿಗಾಲದ ಅಧಿವೇಶನ ಅದರಿಂದಾಚೆಗೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆವರೆಗೂ ಬರ ಪರಿಹಾರದ ಚರ್ಚೆ ನಡೆಯುತ್ತಲೇ ಇರುತ್ತದೆ.

ಬೆಳೆನಷ್ಟಕ್ಕೆ ಸರ್ಕಾರ ಕೊಡುವ ಪರಿಹಾರ ಬಿಡಿಗಾಸು. ರೈತನ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳ ಬಾಡಿಗೆ, ಶ್ರಮ ಇದನ್ನು ಲೆಕ್ಕ ಹಾಕಿದರೆ ಸರ್ಕಾರ ಕೊಡುವ ಪರಿಹಾರ ಯಾವುದಕ್ಕೂ ಸಾಲದು. ಕುಡಿಯುವ ನೀರು ಪೂರೈಕೆ ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವುದೇ ಬರ ಪರಿಹಾರ ಎಂಬಂತಾಗಿದೆ. ದುಡಿಯುವ ಕೈಗಳಿಗೆ ಕೆಲಸ, ಪರ್ಯಾಯ ಬೆಳೆಯ ಸಲಹೆ ನೀಡುವ ಕೆಲಸ ಆಗುತ್ತಿಲ್ಲ. ಒಂದಂತೂ ನಿಜ. ರಾಜ್ಯದಲ್ಲಿ ಬರ ನಿರ್ವಹಣಾ ವ್ಯವಸ್ಥೆ ಬಗ್ಗೆ  ಈಗಲೇ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ನಮ್ಮ ಕೃಷಿ ವ್ಯವಸ್ಥೆ ಕುಸಿತ ಕಂಡು ರೈತರು ಕೃಷಿಯಿಂದ ವಿಮುಖರಾಗುವ ಕಾಲ ದೂರವಿಲ್ಲ. ಆಗ, ಆಹಾರಕ್ಕಾಗಿ ಹಾಹಾಕಾರ ಉಂಟಾದರೂ ಆಶ್ಚರ್ಯವಿಲ್ಲ.

– ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.