ಐಎಂಎ ವಂಚನೆ ಮತ್ತು ಹಲಾಲ್ ಬ್ಯಾಂಕಿಂಗ್‌ ಪರಿಕಲ್ಪನೆ


ಅರಕೆರೆ ಜಯರಾಮ್‌, Jun 27, 2019, 5:00 AM IST

IMA-Jewellers-726

ಇಸ್ಲಾಮಿಕ್‌ ಬ್ಯಾಂಕಿಂಗ್‌ ನಡೆಸುತ್ತಿರುವುದಾಗಿ ಹೇಳುವ ಕಂಪನಿಗಳತ್ತ ಆಕರ್ಷಿತರಾಗುತ್ತಿರುವ ಜನರು ತಿಳಿಯಬೇಕಾದ್ದು ಏನೆಂದರೆ, ಪಾಕಿಸ್ಥಾನದಲ್ಲಿ ಕೂಡ ಒಟ್ಟು ಬ್ಯಾಂಕಿಂಗ್‌ ವಹಿವಾಟನ್ನು ಗಮನಿಸಿದರೆ ಇಸ್ಲಾಮಿಕ್‌ ಬ್ಯಾಂಕ್‌ಗಳ ಪಾಲು ತೀರಾ ಸಣ್ಣದು. 2018ರ ಅಂಕಿಅಂಶಗಳನ್ನು ಪರಿಶೀಲಿಸಿದರೆ, ಪಾಕಿಸ್ಥಾನದ ಒಟ್ಟು ಠೇವಣಿಗಳ ಪೈಕಿ ಇಸ್ಲಾಮಿಕ್‌ ಬ್ಯಾಂಕ್‌ಗಳಲ್ಲಿರುವುದು ಶೇ. 14.6ರಷ್ಟು ಮಾತ್ರ.

ರಾಜ್ಯದಲ್ಲಿ ಬೆಳಕಿಗೆ ಬಂದಿರುವ ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ ಬಹು ಆಯಾಮಗಳನ್ನು ಒಳಗೊಂಡಿದ್ದು, ಹಲಾಲ್ ಅಥವಾ ಇಸ್ಲಾಮಿಕ್‌ ಬ್ಯಾಂಕಿಂಗ್‌ ಎಂದು ಕರೆಯಲಾಗುವ ಆರ್ಥಿಕ ವ್ಯವಸ್ಥೆಯ ಕುರಿತಾಗಿ ಜನರ ಗಮನವನ್ನು ಮೊದಲ ಬಾರಿಗೆ ಸೆಳೆಯಿತು. ಈ ವರೆಗೆ ಜನರಿಗೆ ಸರಕಾರಿ ಸ್ವಾಮ್ಯದ, ಖಾಸಗಿ ಹಾಗೂ ಸರಕಾರ ಬ್ಯಾಂಕ್‌ಗಳ ಪರಿಚಯವಷ್ಟೇ ಇತ್ತು. ಅವುಗಳೊಂದಿಗೆ ಮಾತ್ರ ವ್ಯವಹರಿಸುತ್ತಿದ್ದರು. ಐಎಂಎ ಹೆಸರಿನಲ್ಲಿರುವ ಮೊದಲ ಅಕ್ಷರ ‘ಐ’ ಇಸ್ಲಾಮಿಕ್‌ ಎಂಬುದನ್ನು ಸೂಚಿಸುತ್ತಿರಬಹುದು. ಅಡ್ವೈಸರಿ ಎಂಬ ಪದವನ್ನು ಉದೇಶಪೂರ್ವಕವಾಗಿಯೇ ಬಳಸಿದಂತಿದೆ. ಹೂಡಿಕೆದಾರರು ಇಂಟರ್‌ ನ್ಯಾಶನಲ್ ಮಾನಿಟರಿ ಫ‌ಂಡ್‌ (ಐಎಂಎಫ್) ಎಂದು ತಪ್ಪಾಗಿ ತಿಳಿದುಕೊಳ್ಳಲಿ ಎಂಬ ದುರಾಲೋಚನೆಯೂ ಇದರಲ್ಲಿ ಇದ್ದೀತು.

ಹಲಾಲ್ ಅಥವಾ ಇಸ್ಲಾಮಿಕ್‌ ಬ್ಯಾಂಕ್‌ನ ಅಸ್ತಿತ್ವವೂ ರಾಜ್ಯದ ಮುಸ್ಲಿಮರಲ್ಲಿ ಹೆಚ್ಚುತ್ತಿರುವ ಸಂಪ್ರದಾಯವಾದಿತನಕ್ಕೆ ನಿದರ್ಶನವಾಗುತ್ತಿದೆ. ಮುಸ್ಲಿಮರ ಒಂದು ವರ್ಗವು ತಮ್ಮ ಹಣವನ್ನು ಶರೀಯತ್‌ ನಿಯಮಗಳಿಗೆ ಬದ್ಧವಾದ ಹಣಕಾಸು ಸಂಸ್ಥೆಯಲ್ಲಿ ಹೂಡಿಕೆ ಮಾಡಬೇಕೆಂಬ ಭಾವನೆ ತಳೆದಿರುವುದು ಸ್ಪಷ್ಟ. ಇಸ್ಲಾಮಿಕ್‌ ಬ್ಯಾಂಕ್‌ ಬೇರೆ ಹಣಕಾಸು ಸಂಸ್ಥೆಗಳಂತಲ್ಲ. ಅದು ಠೇವಣಿಗಳನ್ನು ಸ್ವೀಕರಿಸುವುದಿಲ್ಲ, ಪಾವತಿಸಿದ ಹಣಕ್ಕೆ ಬಡ್ಡಿಯನ್ನೂ (ರಿಬಾ) ಕೊಡುವುದಿಲ್ಲ. ಸಾಲ ಪಡೆಯುವವರಿಂದಲೂ ಬಡ್ಡಿ ವಸೂಲು ಮಾಡುವುದಿಲ್ಲ. ಇಂಥ ಸಂಸ್ಥೆಗಳಲ್ಲಿ ಹಣವಿಡುವ ಪ್ರತಿಯೊಬ್ಬರನ್ನೂ ಪಾಲುದಾರರನ್ನಾಗಿ ಪರಿಗಣಿಸಲಾಗುತ್ತದೆ. ವಿಶೇಷ ತನಿಖಾ ದಳ ಐಎಂಎ ಜುವೆಲರಿ ಕಂಪನಿಯಲ್ಲಿ ಹೂಡಿಕೆ ಮಾಡಿರುವ ಸಾವಿರಾರು ಜನರಿಗೆ ನೆರವಾಗುವ ಸಲುವಾಗಿ 2014ರ ಕರ್ನಾಟಕ ಠೇವಣಿದಾರರ ಹಿತರಕ್ಷಣ ಕಾಯ್ದೆ (ಕೆಪಿಐಡಿ)ಯನ್ನು ಈ ಪ್ರಕರಣಕ್ಕೆ ಅನ್ವಯಿಸಿದೆ.

ರಾಷ್ಟ್ರೀಯ ಮಟ್ಟದಲ್ಲೂ ಲಕ್ಷಾಂತರ ಜನರನ್ನು ದಿವಾಳಿ ಎಬ್ಬಿಸಿದ ಇಂತಹ ಹಗರಣಗಳ ವಿಚಾರವಾಗಿ ತುರ್ತಾಗಿ ಕಠಿನ ಕ್ರಮ ಕೈಗೊಳ್ಳಲು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅಂಕಿತ ಹಾಕಿರುವ ಅನಿಯಂತ್ರಿತ ಠೇವಣಿ ಯೋಜನೆಗಳ ವಿಧೇಯಕ 2019ನ್ನು ಜಾರಿಗೆ ತರುವ ಅಗತ್ಯವಿದೆ. ಈ ವಿಧೇಯಕವು ಮೋಸಗೊಳಿಸುವ ಹೂಡಿಕೆ ಯೋಜನೆಗಳನ್ನು ತರುವ ಹೂಡಿಕೆದಾರರನ್ನು ನಿಯಂತ್ರಿಸಿ, ಗ್ರಾಹಕರ ಹಿತರಕ್ಷಣೆ ಮಾಡಬಲ್ಲ ಹಲವು ಕಾನೂನುಗಳನ್ನು ಒಳಗೊಂಡಿದೆ. ಐಎಂಎ ಹಗರಣ ಹೇಗೆ ನಡೆಯಿತು ಎಂಬುದು ಈಗ ಎಲ್ಲರಿಗೂ ತಿಳಿಸಿದೆ. ಬ್ಯಾಂಕಿಂಗ್‌ ಹೊರತಾದ ಹಣಕಾಸು ಸಂಸ್ಥೆಗಳ ನಿಯಂತ್ರಣಕ್ಕೆ ತನಿಖಾ ಸಂಸ್ಥೆಗಳು ಹೆಚ್ಚು ಆಸ್ಥೆ ವಹಿಸಿಲ್ಲ ಎಂಬುದೂ ಇದರಿಂದ ವಿದಿತವಾಗುತ್ತದೆ.

ಐಎಂಎ ಕೂಡ ಹಣ ದ್ವಿಗುಣಗೊಳಿಸುವುದಾಗಿ ಹೇಳಿ ಠೇವಣಿ ಸಂಗ್ರಹಿಸಲು ಆರಂಭಿಸಿತು. ದಂಧೆಯ ಹೆಸರೇ ಅದರ ಹಣೆಬರಹವನ್ನೂ ಹೇಳುವಂತಿದೆ. ಪಿರಾಮಿಡ್‌ ಮಾದರಿಯ ಈ ಮೋಸದ ಯೋಜನೆ ಕಡಿಮೆ ‘ರಿಸ್ಕ್’ನಲ್ಲಿ ಹೆಚ್ಚು ಆದಾಯ ಕಲ್ಪಿಸುವ ಭರವಸೆ ನೀಡುತ್ತದೆ. ಹೊಸ ಹೂಡಿಕೆದಾರರ ಠೇವಣಿ ಹಣವನ್ನು ಹಳೆಯ ಹೂಡಿಕೆದಾರರಿಗೆ ಪಾವತಿಸಿ ವಿಶ್ವಾಸ ಗಳಿಸುತ್ತಾರೆ. ಹೊಸ ಹೂಡಿಕೆ ಕುಸಿದೊಡನೆ ಈ ಯೋಜನೆ ಸಂಕಷ್ಟಕ್ಕೆ ಸಿಲುಕುತ್ತದೆ. ಸಹಾರಾ ಹಾಗೂ ಶಾರದಾ ಸ್ಕೀಮ್‌ಗಳು ಬೆಳಕಿಗೆ ಬರುವುದಕ್ಕೂ ಸಾಕಷ್ಟು ಮೊದಲೇ 30 ವರ್ಷಗಳ ಹಿಂದೆಯೇ ಪಂಜಾಬ್‌ನಲ್ಲಿ ನಿರ್ಮಲ್ ಕುಮಾರ್‌ ಭಾಂಗೋ ಎಂಬ ಹಾಲು ವ್ಯಾಪಾರಿಯೊಬ್ಬ ಇಂಥದೇ ಯೋಜನೆ ಪರಿಚಯಿಸಿ, ಜನರಿಗೆ ಟೋಪಿ ಹಾಕಿದ್ದ. ಸಿಬಿಐ ಆತನನ್ನು ಹಾಗೂ ಸಹಚರರನ್ನು ಬಂಧಿಸುವ ಹೊತ್ತಿಗೆ ಆ ಹಣ ದ್ವಿಗುಣ ಯೋಜನೆ 45 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು. ಬರೊಬ್ಬರಿ ಐದೂವರೆ ಲಕ್ಷ ಜನರು ಹೂಡಿಕೆ ಮಾಡಿದ್ದರು!

ಐಎಂಎ ಹೂಡಿಕೆ ಯೋಜನೆ ಕರ್ನಾಟಕದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದರೂ ಈ ಮಾದರಿಯ ಹಲಾಲ್ ಅಥವಾ ಇಸ್ಲಾಮಿಕ್‌ ಬ್ಯಾಂಕಿಂಗ್‌ ಪಾಕಿಸ್ಥಾನ ಸಹಿತ ಹಲವು ಮುಸ್ಲಿಂ ಬಾಹುಳ್ಯದ ರಾಷ್ಟ್ರಗಳಲ್ಲಿ ಆದಾಗಲೇ ಬೆಳೆಯುತ್ತಿದೆ. ಪೆಟ್ರೋಲಿಯಂ ವಹಿವಾಟು ಉತ್ತುಂಗದಲ್ಲಿದ್ದ ಸಮಯದಲ್ಲಿ ಸಾಕಷ್ಟು ಲಾಭ ಮಾಡಿಕೊಂಡ ಸೌದಿ ಅರೇಬಿಯಾ, ಪರ್ಷಿಯಾ ಮುಂತಾದ ಗಲ್ಫ್ ರಾಷ್ಟ್ರಗಳಲ್ಲಿ ಇಸ್ಲಾಮಿಕ್‌ ಬ್ಯಾಂಕಿಂಗ್‌ ಪ್ರಚಲಿತಕ್ಕೆ ಬಂದಿತು. ತೈಲೋತ್ಪನ್ನಗಳಿಂದ ಬಂದ ಡಾಲರ್‌ಗಳ ಮಳೆಯೇ ಅಲ್ಲಿ ಸುರಿಯುತ್ತಿತ್ತು. ವಿಶೇಷವಾಗಿ ಸೌದಿ ಅರೇಬಿಯಾ ತನ್ನ ಹೆಚ್ಚುವರಿ ಆದಾಯವನ್ನು ಭಾರತ ಹಾಗೂ ಇತರ ರಾಷ್ಟ್ರಗಳಲ್ಲಿ ವಹಾಬಿ ಇಸ್ಲಾಂ ಅನ್ನು ಪ್ರಚುರಪಡಿಸಲು ಬಳಸಿತು. ಈ ಹೊಸ ಇಸ್ಲಾಮೀಕರಣ ಇಸ್ಲಾಮಿಕ್‌ ಬ್ಯಾಂಕಿಂಗ್‌ ವ್ಯವಸ್ಥೆಗೂ ಹುರುಪು ನೀಡಿತು. ಇಸ್ಲಾಮಿಕ್‌ ಬ್ಯಾಂಕಿಂಗ್‌ನಲ್ಲಿ ಬಡ್ಡಿ ಕೊಡುವುದು ಅಥವಾ ಶುಲ್ಕ ಹೇರುವುದು ನಿಷಿದ್ಧ. ಸಾಂಪ್ರದಾಯಿಕ ಬ್ಯಾಂಕಿಂಗ್‌ಗೆ ಸಮನಾಗಿ ಪಾಕಿಸ್ಥಾನದಲ್ಲಿ ಇಸ್ಲಾಮಿಕ್‌ ಬ್ಯಾಂಕಿಂಗ್‌ ವೃದ್ಧಿಸಿದೆ. ಆ ದೇಶದಲ್ಲಿ ಎಂಟು ಪ್ರಮುಖ ಇಸ್ಲಾಮಿಕ್‌ ಬ್ಯಾಂಕ್‌ಗಳಿವೆ. ವಾಣಿಜ್ಯ ಬ್ಯಾಂಕ್‌ಗಳು ಕೂಡ ಇಸ್ಲಾಮಿಕ್‌ ಬ್ಯಾಂಕಿಂಗ್‌ ವಹಿವಾಟು ನಡೆಸುವ ಶಾಖೆಗಳನ್ನು ಹೊಂದಿವೆ. ಆ ದೇಶದಲ್ಲಿಯೂ ಸುಧಾರಣವಾದಿಗಳು ಹಾಗೂ ಕೆಲವು ಸೆಕ್ಯುಲರ್‌ ಮನಃಸ್ಥಿತಿಯ ಚಿಂತಕರು ಈ ಮಾದರಿಯ ಬ್ಯಾಂಕಿಂಗ್‌ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. 2004ರಷ್ಟು ಹಿಂದೆಯೇ ಪಾಕಿಸ್ಥಾನದ ಸಂಸತ್ತಿನಲ್ಲಿ ಹಿಂದೂ ಸದಸ್ಯರೊಬ್ಬರು ಇಸ್ಲಾಮಿಕ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಟೀಕಿಸುವ ಧೈರ್ಯ ತೋರಿದ್ದರು. ಮುಸ್ಲಿಂ ಸಂಪ್ರದಾಯ ಹಾಗೂ ನಿಯಮಗಳಿಗೆ ಈ ವ್ಯವಸ್ಥೆ ವಿರುದ್ಧವಾಗಿದೆ ಎಂದು ಚಿಂತಕರೊಬ್ಬರ ಹೇಳಿಕೆಯನ್ನು ಉಲ್ಲೇಖೀಸಿ ಅವರು ಮಾತನಾಡಿದ್ದರು. ಈ ಹೇಳಿಕೆ ಸಂಸತ್ತಿನಲ್ಲಿ ಕೋಲಾಹಲವೆಬ್ಬಿಸಿತು. ಪುಣ್ಯಕ್ಕೆ, ಅವರ ಮೇಲೆ ಧರ್ಮ ನಿಂದನೆಯ ಕಠಿನ ಕಾನೂನು ಜಾರಿಯಾಗಲಿಲ್ಲ.

ಇಸ್ಲಾಮಿಕ್‌ ಬ್ಯಾಂಕಿಂಗ್‌ ನಡೆಸುತ್ತಿರುವುದಾಗಿ ಹೇಳುವ ಕಂಪನಿಗಳತ್ತ ಆಕರ್ಷಿತರಾಗುತ್ತಿರುವ ಜನರು ತಿಳಿಯಬೇಕಾದ್ದು ಏನೆಂದರೆ, ಪಾಕಿಸ್ಥಾನದಲ್ಲಿ ಕೂಡ ಒಟ್ಟು ಬ್ಯಾಂಕಿಂಗ್‌ ವಹಿವಾಟನ್ನು ಗಮನಿಸಿದರೆ ಇಸ್ಲಾಮಿಕ್‌ ಬ್ಯಾಂಕ್‌ಗಳ ಪಾಲು ತೀರಾ ಸಣ್ಣದು. 2018ರ ಅಂಕಿಅಂಶಗಳನ್ನು ಪರಿಶೀಲಿಸಿದರೆ, ಪಾಕಿಸ್ಥಾನದ ಒಟ್ಟು ಠೇವಣಿಗಳ ಪೈಕಿ ಇಸ್ಲಾಮಿಕ್‌ ಬ್ಯಾಂಕ್‌ಗಳಲ್ಲಿರುವುದು ಶೇ. 14.6ರಷ್ಟು ಮಾತ್ರ. ಸಾಂಪ್ರದಾಯಿಕ ಬ್ಯಾಂಕಿಂಗ್‌ ವ್ಯವಸ್ಥೆಗೆ ಹೋಲಿಸಿದರೆ ಇಸ್ಲಾಮಿಕ್‌ ಬ್ಯಾಂಕಿಂಗ್‌ ಅಭಿವೃದ್ಧಿ ತೀವ್ರಗತಿಯಲ್ಲಿದೆ ಎಂಬ ವಾದವೂ ಇದೆ. ಬೆಂಗಳೂರಿನಲ್ಲಿ ಐಎಂಎ ಅಥವಾ ಇತರ ಕಡೆಗಳಲ್ಲಿ ಬೇರಾವುದೇ ಟೋಪಿ ಯೋಜನೆ ಸಾವಿರಾರು ಮುಸ್ಲಿಮರನ್ನು ಮುಳುಗಿಸಿದ್ದು ಇಸ್ಲಾಮಿಕ್‌ ಅಥವಾ ಹಲಾಲ್ ಎಂಬ ಆಕರ್ಷಣೆಯ ಮೂಲಕ ಅಲ್ಲ ಎಂಬುದು ಗಮನಾರ್ಹ. ವಾರ್ಷಿಕ ಶೇ. 84ರಷ್ಟು ಪ್ರತಿಫ‌ಲ ಕೊಡುವುದಾಗಿ ಒಡ್ಡಿರುವ ಆಮಿಷವೇ ಬೃಹತ್‌ ಪ್ರಮಾಣದ ಹೂಡಿಕೆ ಹರಿದುಬರುವಂತೆ ಮಾಡಿದೆ. ಈ ಮೋಸಕ್ಕೆ ಐಎಂಎ ಅಥವಾ ಇನ್ನಾವುದೇ ಕಂಪೆನಿ ಮಾತ್ರ ಕಾರಣ ಎನ್ನಲಾಗದು. ಪಾಲುದಾ ರರಾಗಲು ಬಯಸಿ ಹಲವರು ತಾವಾಗಿಯೇ ಮೋಸ ಹೋಗಿದ್ದಾರೆ. ಬ್ಯಾಂಕ್‌ಗಳು ಠೇವಣಿಗೆ ಕೊಡುವ ಬಡ್ಡಿಗಿಂತ ಇದರಲ್ಲಿ ಆದಾಯ ಜಾಸ್ತಿ ಎಂಬುದು ಹೂಡಿಕೆಗೊಂಡು ಕಾರಣ. ಐಎಂಎ ಕಂಪೆನಿಯಲ್ಲಿ ತಾವು ಹೂಡಿದ ಹಣ ವಾಪಸ್‌ ಪಡೆಯಲಾರದ ಸ್ಥಿತಿ ಈ ಜನರನ್ನು ಹೆಚ್ಚು ಕಂಗೆಡಿಸಿದೆ. ಅಮಾನತ್‌ ಸಹಕಾರ ಬ್ಯಾಂಕ್‌ನ ಶಾಕ್‌ನಿಂದ ಹೊರಬರಲು ಒದ್ದಾಡುತ್ತಿದ್ದ ಸಾವಿರಾರು ಮುಸ್ಲಿಮರಿಗೆ ಐಎಂಎ ಕಂಪೆನಿಯ ಮೋಸ ಮತ್ತಷ್ಟು ಆಘಾತ ತಂದೊಡ್ಡಿದೆ. ಐಎಂಎ ಹಾಗೂ ಅಮಾನತ್‌ ಬ್ಯಾಂಕ್‌ಗಳ ನಿರ್ದೇಶಕರ ಪಟ್ಟಿಯಲ್ಲಿ ಇರುವ ಹೆಸರುಗಳು ಬಹುತೇಕ ಅವೇ. ಅಮಾನತ್‌ ಸಹಕಾರ ಬ್ಯಾಂಕನ್ನು ಕೆನರಾ ಬ್ಯಾಂಕ್‌ನಲ್ಲಿ ವಿಲೀನಗೊಳಿಸುವ ಕುರಿತಾದ ಚರ್ಚೆಯೂ ಕೆಲ ಸಮಯದ ಹಿಂದೆ ನಡೆದಿತ್ತು!

ಹಲಾಲ್ ಅಥವಾ ಇಸ್ಲಾಮಿಕ್‌ ಬ್ಯಾಂಕಿಂಗ್‌ ವ್ಯವಸ್ಥೆ ಹಣದ ಬದಲು ವಸ್ತುಗಳನ್ನು (ಚಿನ್ನ, ಕಟ್ಟಡ ಇತ್ಯಾದಿ) ಅವಲಂಬಿಸಿದೆ ಎಂದು ಹೇಳುವುದಿದೆ. ಇಂತಹ ಒಂದು ಆಸ್ತಿಯಾಗಿ ಶಿವಾಜಿನಗರ ವೃತ್ತದ ಬಳಿ ಐಎಂಎ ಕಟ್ಟಿಸಿದ ಒಬೇದುಲ್ಲಾ ಸರಕಾರಿ ಶಾಲೆ ನನ್ನನ್ನು ಬಹುವಾಗಿ ಆಕರ್ಷಿಸಿತ್ತು. ಬೆಂಗಳೂರು ದಂಡು ಬ್ರಿಟಿಷ್‌ ಅಥವಾ ಮದ್ರಾಸ್‌ ಸರಕಾರದ ಅಧೀನದಲ್ಲಿದ್ದ ಸಂದರ್ಭದಲ್ಲಿ ಈ ಪ್ರದೇಶವನ್ನು ‘ಬ್ಲ್ಯಾಕ್‌ ಪಳ್ಳಿ’ ಎಂದು ವ್ಯಂಗ್ಯವಾಗಿ ಕರೆಯುತ್ತಿದ್ದರು. ಕಲಾಸಿಪಾಳ್ಯದ ಸ್ಕೌಟ್ ಮುಖ್ಯ ಕಚೇರಿ ಸಮೀಪವಿರುವ ಉರ್ದು ಮಾಧ್ಯಮ ಶಾಲೆ ಹಾಗೂ ಚನ್ನಪಟ್ಟಣದಲ್ಲಿರುವ ಶಾಲೆಯೊಂದಿಗೆ ಇದನ್ನು ಹೋಲಿಸಿ ನೋಡಿದರೆ ನಿಮಗೇ ತಿಳಿದೀತು. ಇಂತಹ ಹಣ ದ್ವಿಗುಣದ ಯೋಜನೆಗಳಿಂದ ಮೋಸ ಹೋಗುವವರು ಮುಸ್ಲಿಮರು ಮಾತ್ರವಲ್ಲ. ಎಲ್ಲ ಧರ್ಮ, ಜಾತಿ, ಜನಾಂಗದ ಜನರೂ ಇಂಥ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕವೂ ಇಂತಹ ಹಲವು ‘ಏಳು ದಿನಗಳ ಅದ್ಭುತ’ಗಳನ್ನು ಕಂಡಿದೆ, ಮೋಸ ಹೋಗಿದೆ.

ಬ್ಯಾಂಕ್‌ಗಳಲ್ಲಿ ಇಡುವ ಹಣಕ್ಕೆ ಆರ್‌ಬಿಐ ನಿಗದಿಮಾಡಿರುವ ಬಡ್ಡಿಯ ಮೊತ್ತ ತೀರಾ ಕನಿಷ್ಠವಾಗಿದ್ದು, ಜನರನ್ನು ಸೆಳೆಯುವಲ್ಲಿ ವಿಫ‌ಲವಾಗಿದೆ. ಇದೇ ಕಾರಣಕ್ಕಾಗಿ ಜನರು ಇಂತಹ ಟೋಪಿ ಯೋಜನೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಸುಮಾರು ಎರಡು ದಶಕಗಳಿಂದಲೂ ಹೂಡಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಬ್ಯಾಂಕ್‌ಗಳು ಠೇವಣಿಗಳ ಮೇಲಿನ ಬಡ್ಡಿದರವನ್ನು ಕಡಿತ ಮಾಡುತ್ತಲೇ ಬಂದಿವೆ. ನಿವೃತ್ತಿ ವೇತನ ಇಲ್ಲದ ಅಥವಾ ಕಡಿಮೆ ಮೊತ್ತದ ನಿವೃತ್ತಿ ವೇತನ ಪಡೆಯುತ್ತಿರುವ ಹಿರಿಯ ನಾಗರಿಕರು ಹಾಗೂ ಅಷ್ಟೋ ಇಷ್ಟೋ ಕಾಸು ಕೂಡಿಸಿಟ್ಟು ಅದಕ್ಕೊಂದು ಸುರಕ್ಷಿತ ಜಾಗ ಹುಡುಕುತ್ತಿರುವ ಬಡ ಮತ್ತು ಮಧ್ಯಮ ವರ್ಗದವರೇ ಇದರಿಂದ ಹೆಚ್ಚು ಪೆಟ್ಟು ತಿಂದವರು. ಆದಾಯದ ಮೂಲದಿಂದಲೇ ತೆರಿಗೆ ಕಡಿತ ಮಾಡುವ ಪದ್ಧತಿಯನ್ನು ಯುಪಿಎ ಸರಕಾರದ ಹಣಕಾಸು ಸಚಿವ ಪಿ. ಚಿದಂಬರಂ ಜಾರಿಗೊಳಿಸಿದ್ದು ಜನ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವುದರಿಂದ ದೂರ ಸರಿಯಲು ಮತ್ತೂಂದು ಕಾರಣವಾಗಿದೆ. ಠೇವಣಿಗಳ ಮೇಲೆ ಕಡಿಮೆ ಬಡ್ಡಿ ನೀಡುತ್ತಿರುವುದರಿಂದ ಕೈಗಾರಿಕೆ ಹಾಗೂ ವಾಣಿಜ್ಯದಲ್ಲಿ ಹೂಡಿಕೆಗೆ ಉತ್ತೇಜನ ಸಿಕ್ಕಿದೆಯೇ ಎಂಬುದರ ಕುರಿತು ಚರ್ಚೆ ನಡೆಸಬೇಕು.

ಈಗಲೂ ಬ್ಯಾಂಕ್‌ಗಳು ಮನೆ ಕಟ್ಟಲು, ಕಾರು ಕೊಳ್ಳಲು ಧಾರಾಳವಾಗಿ ಸಾಲ ಕೊಡುತ್ತಿವೆ. ಆದರೆ, ಕಂಪನಿಗಳಿಗೆ ಸಾಲ ಕೊಡಲು ಹಿಂದೇಟು ಹಾಕುತ್ತಿವೆ. ಶೈಕ್ಷಣಿಕ ಸಾಲವೂ ನಿರ್ಲಜ್ಜ ಖಾಸಗಿ ಕಾಲೇಜುಗಳತ್ತ ಮಕ್ಕಳ ಹೆತ್ತವರನ್ನು ಆಕರ್ಷಿಸುವ ಉದ್ದೇಶವನ್ನೇ ಹೊಂದಿದೆ. ವೈದ್ಯಕೀಯ ವಿಮೆಯೂ ರೋಗಿಗಳಿಂದ ಹಣ ಕೀಳುವ ದಂಧೆಯೇ ಆಗಿದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.