ಪ್ರಥಮ ವಿಶ್ವ ಸಮರದ ಕೆಲವು ನೆನಪುಗಳು


Team Udayavani, Nov 14, 2018, 8:13 AM IST

x-45.jpg

ಬಳ್ಳಾರಿಯಲ್ಲಿ ಮೃತಪಟ್ಟ ಅತ್ಯುನ್ನತ ಶ್ರೇಣಿಯ ಟರ್ಕಿಶ್‌ ಸೇನಾನಿಯೆಂದರೆ ಜ| ಆಘಾ ಪಾಶ ಅಬ್ದುಲ್‌ ಸಲಾಮ್‌. ಬಳ್ಳಾರಿಯಲ್ಲಿ ಕಂಟೋನ್ಮೆಂಟ್‌ (ಸೇನಾ ವಸತಿ) ಯಾಕಿದೆ ಎಂದು ಅನೇಕರು ಇಂದು ಕೂಡ ಅಚ್ಚರಿ ಪಡುತ್ತಾರೆ. ಬಳ್ಳಾರಿ ಕಂಟೋನ್ಮೆಂಟ್‌ (ಕನಾಟ್‌ ಬರಾಕು) ಬ್ರಿಟಿಷ್‌ ಭೂ ಸೇನೆಯ ಮದ್ರಾಸ್‌ ತುಕಡಿಯ ಕೇಂದ್ರ ಕಚೇರಿಯಾಗಿತ್ತು.

ಸರಿಯಾಗಿ ನೂರು ವರ್ಷಗಳ ಹಿಂದೆ, ಅಂದರೆ 1918ರ ನವೆಂಬರ್‌ 11ರಂದು ಪೂರ್ವಾಹ್ನ 11 ಗಂಟೆ, 11 ನಿಮಿಷಕ್ಕೆ ಸರಿಯಾಗಿ ಮೊದಲನೆಯ ಮಹಾಯುದ್ಧ ಅಂತ್ಯಗೊಂಡಿತು. ಈ ಮಹಾಸಮರದಲ್ಲಿ ಗೆಲುವು ಸಾಧಿಸಿದ್ದು ಬ್ರಿಟನ್‌ ಹಾಗೂ ಫ್ರಾನ್ಸ್‌ ನೇತೃತ್ವದ ಮೈತ್ರಿಕೂಟದ ರಾಷ್ಟ್ರಗಳು. ಭಾರೀ ಹಾನಿ ಹಾಗೂ ಹಾಹಾಕಾರದೊಂದಿಗೆ ಸೋಲು ಅನುಭವಿಸಿದ್ದು ಕೈಸರ್‌ (ಚಕ್ರವರ್ತಿ ವಿಲ್‌ಹೆಲ್ಮ್) ನೇತೃತ್ವದ ಜರ್ಮನಿ, ಆಸ್ಟ್ರಿಯಾ – ಹಂಗೇರಿ, ಬಲ್ಗೇರಿಯಾ ಹಾಗೂ ಟರ್ಕಿಯನ್ನೊಳಗೊಂಡ ಶತ್ರುಸೇನೆ - ಈ ನಾಲ್ಕೂ ಪರಾಜಿತ ರಾಷ್ಟ್ರಗಳು ರಾಜಪ್ರಭುತ್ವದ ದೇಶಗಳು. 

ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ ಇದು ಇಬ್ಬರು ಸೋದರ ಸಂಬಂಧಿಗಳ ನಡುವೆ ನಡೆದ ವಿಶ್ವ ಸಮರವಾಗಿತ್ತು. ಈ ಇಬ್ಬರು “ಕಸಿನ್‌’ಗಳೆಂದರೆ – ಇಂಗ್ಲೆಂಡಿನ ಐದನೆಯ ಜಾರ್ಜ್‌ ಮತ್ತು ಜರ್ಮನಿಯ ದ್ವಿತೀಯ ಕೈಸರ್‌ ವಿಲ್‌ಹೆಲ್ಮ್. ಇವರು ವಿಕ್ಟೋರಿಯಾ ರಾಣಿಯ ಮೊಮ್ಮಕ್ಕಳು ರಾಣಿಯ ಪುತ್ರರು ಹಾಗೂ ಪುತ್ರಿಯರು ಯುರೋಪಿನ ಇತರ ಅರಸೊತ್ತಿಗೆ ಕುಟುಂಬಗಳ ರಾಜಕುಮಾರಿ ಹಾಗೂ ರಾಜಕುಮಾರರನ್ನು ಮದುವೆಯಾಗಿದ್ದರು. ವಿಲ್‌ಹೆಲ್ಮ್ (1859 – 1941) ವಿಕ್ಟೋರಿಯಾ ರಾಣಿಯ ಹಿರಿಯ ಮಗಳ ಮಗ; ಐದನೆಯ ಜಾರ್ಜ್‌ (1865-1936) ಏಳನೆಯ ಎಡ್ವರ್ಡ್‌ ದೊರೆಯ ಪುತ್ರ. ಪ್ರಥಮ ಮಹಾಯುದ್ಧದಲ್ಲಿ ಪ್ರಧಾನಪಾತ್ರ ನಿರ್ವಹಿಸಿದ ಇನ್ನೋರ್ವ ವ್ಯಕ್ತಿ ರಶ್ಯದ ಝಾರ್‌ ನಿಕೋಲಸ್‌ (ದ್ವಿತೀಯ), ಬ್ರಿಟಿಷ್‌ ರಾಜವಂಶದೊಂದಿಗೆ ಸಂಬಂಧ ಹೊಂದಿದ್ದವರೇ. ನಿಕೊಲಸ್‌ ಅವರ ತಾಯಿ, ಏಳನೆಯ ಎಡ್ವರ್ಡ್‌ ದೊರೆಯ ಪತ್ನಿ (ರಾಣಿ)ಯ ಸಹೋದರಿ. ದ್ವಿತೀಯ ವಿಲ್‌ಹೆಲ್ಮ್, ಆಗಿನ ಜರ್ಮನಿಯ ಪ್ರಧಾನ ಪ್ರಾಂತ್ಯವಾದ ಪರ್ಶಿಯಾದ ದೊರೆಯಾಗಿದ್ದರೆಂಬ ಮಾತನ್ನೂ ಇಲ್ಲಿ ಹೇಳಬೇಕಾಗಿದೆ. 19ನೆಯ ಶತಮಾನದ ವರೆಗೆ ಏಕೀಕೃತ (ಸಂಯುಕ್ತ) ಜರ್ಮನಿ ಎನ್ನುವಂಥದ್ದು ಇರಲೇ ಇಲ್ಲ. 39 ಪ್ರಾಂತ್ಯಗಳನ್ನು ವಿಲೀನಗೊಳಿಸಿ ಏಕೀಕೃತ ಜರ್ಮನಿಯನ್ನು ಅಸ್ತಿತ್ವಕ್ಕೆ ತಂದ ರಾಜನೀತಿ ತಜ್ಞನೆಂದರೆ ಜರ್ಮನಿಯ ಪ್ರಥಮ ಚಾನ್ಸೆಲರ್‌ ಓಟೋ ವಾನ್‌ ಬಿಸ್ಮಾರ್ಕ್‌. 

ಪ್ರಥಮ ಮಹಾಯುದ್ಧ ಕುರಿತಂತೆ ಈಚೆಗೆ ಹಲವಾರು ಲೇಖನಗಳು ಪ್ರಕಟವಾಗಿವೆ. ಬ್ರಿಟಿಷ್‌ ಸಾಮ್ರಾಜ್ಯದ ಪರವಾಗಿ ಹೋರಾಡಿ ಜರ್ಮನಿ ಮತ್ತದರ ಮಿತ್ರ ರಾಷ್ಟ್ರಗಳನ್ನು ಪರಾಭವಗೊಳಿಸಿದ ಭಾರತೀಯ ಸೈನಿಕರ ಕಾರ್ಯನಿರ್ವಹಣೆಯ ಮೇಲೆ ವಿಶೇಷ ಒತ್ತು ನೀಡಿ ಬರೆಯಲಾಗಿರುವ ಲೇಖನಗಳಿವು. ಇದೇ ಅಂಕಣದಲ್ಲಿ ಮೈಸೂರ್‌ ಲಾನ್ಸರ್ ಕುರಿತಂತೆ ಪ್ರಕಟವಾಗಿರುವ ಬರಹವನ್ನೂ ಒಳಗೊಂಡಂತೆ, ಭಾರತೀಯ ಸೈನಿಕರು ಮಾಡಿದ್ದ ತ್ಯಾಗವನ್ನು ಎತ್ತಿ ಹೇಳುವ ಬರಹಗಳೂ ಬಂದಿವೆ. ಪ್ರಥಮ ಮಹಾಯುದ್ಧದಲ್ಲಿ ಹೋರಾಡಿದ್ದ ಅನೇಕ ಭಾರತೀಯ ಸೈನಿಕರ ಮೂಲ ಸ್ಥಳಗಳು ಇಂದು ಭಾರತದ ಸರಹದ್ದಿನೊಳಗಿಲ್ಲ; ಅವು ಪಕ್ಕದ ಪಾಕಿಸ್ತಾನದಲ್ಲಿವೆ. ಅಂದ ಹಾಗೆ, ಜರ್ಮನಿ ಮತ್ತದರ ಮಿತ್ರ ರಾಷ್ಟ್ರಗಳ ಸೋಲಿಗೆ ಕಾರಣವಾದ ಹೋರಾಟಕ್ಕೆ ಭಾರತೀಯ ಸೈನಿಕರು ನೀಡಿದ್ದ ಕೊಡುಗೆಯನ್ನು ಇತಿಹಾಸಕಾರರು ಹಾಗೂ ಪಾಶ್ಚಾತ್ಯ ಲೇಖಕರು ಗುರುತಿಸಿರುವುದು ತೀರಾ ಇತ್ತೀಚಿನ ವರ್ಷಗಳಲ್ಲಷ್ಟೆ. 

ಭಾರತೀಯ ಸೈನಕಿರ ಕೆಚ್ಚೆದೆಯ ತ್ಯಾಗವನ್ನು ಈಗ ತಡವಾಗಿ ಯಾದರೂ ಗುರುತಿಸಲಾಗಿದೆ. ನಮ್ಮ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಭಾನುವಾರ ಫ್ರಾನ್ಸಿನ ವಿಲಿಯರ್ ಗ್ರಿಸ್‌ಲೇನ್‌ನಲ್ಲಿ ಪ್ರಪ್ರ ಥಮ ಭಾರತೀಯ ನಿರ್ಮಿತ ಯುದ್ಧ ಸ್ಮಾರಕವನ್ನು ಉದ್ಘಾಟಿಸಿ ದ್ದಾರೆ; ಇದೊಂದು ಅತ್ಯಂತ ಸಮಂಜಸವಾದ ಗೌರವಾರ್ಪಣೆ. 

ಪಡಿತರ ವ್ಯವಸ್ಥೆ ಮೈಸೂರೇ ಮೊದಲು 
ದ್ವಿತೀಯ ಮಹಾಯುದ್ಧ ನಮ್ಮ ದೇಶದ ನಿತ್ಯ ಜೀವನದ ಮೇಲೆ ಎಸಗಿದ ಹಾನಿಯ ಪ್ರಮಾಣಕ್ಕೆ ಹೋಲಿಸಿದರೆ ಪ್ರಥಮ ಮಹಾಯುದ್ಧದ ದುಷ್ಪ್ರಭಾವ ಕಡಿಮೆ ಎಂದೇ ಹೇಳಬಹುದು. ಇಂಥ ಯುದ್ಧವೊಂದು ವಸ್ತುತಃ ಸಂಪರ್ಕ ಮಾಧ್ಯಮವೇ ಇಲ್ಲದಿದ್ದ ಕಾಲದಲ್ಲಿ ಘಟಿಸಿದ್ದರಿಂದ ಸಾರ್ವಜನಿಕರಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲವೆಂದೂ ಹೇಳಬಹುದು. 1914ರಿಂದ 1918ರವರೆಗಿನ ಅವಧಿಯಲ್ಲಿ ನಡೆದ ಯುದ್ಧ ಇದು; ಆ ದಿನಗಳಲ್ಲಿ ರೇಡಿಯೋ ಆಗಲಿ, ಟೆಲಿಫೋನ್‌ ಆಗಲಿ ಇರಲಿಲ್ಲ. ಕರ್ನಾಟಕಕ್ಕೆ ಟೆಲಿವಿಜನ್‌ ಬಂದುದು 64 ವರ್ಷಗಳ ಬಳಿಕ. ಪ್ರಥಮ ಜಾಗತಿಕ ಯುದ್ಧದ ದಿನಗಳಲ್ಲಿ ದೈನಿಕ ಸುದ್ದಿ ಮಾಧ್ಯಮವೇನೋ ಇತ್ತು; ಆದರೆ ಆ ವೃತ್ತಪತ್ರಿಕೆಗಳ ಸಂಖ್ಯೆ ಹಾಗೂ ಪ್ರಸಾರ ಸಂಖ್ಯೆ ತೀರಾ ಕಡಿಮೆ. ಜನಸಾಮಾನ್ಯರ ಪಾಲಿಗೆ ಆಗ ಜಗತ್ತೆಂಬುದು ಎಲ್ಲೋ ದೂರದಲ್ಲಿತ್ತು. ಅಲ್ಲೇನು ನಡೆಯುತ್ತಿತ್ತು ಎಂಬುದು ಅವರಿಗೆ ತಿಳಿಯುತ್ತಲೇ ಇರಲಿಲ್ಲ. ಇನ್ನು ಅಗತ್ಯ ವಸ್ತುಗಳ ಕೊರತೆ ಹಾಗೂ ಬೆಲೆಯೇರಿಕೆಯ ಅನುಭವ ಕೊಂಚ ಮಟ್ಟಿಗೆ ಉಂಟಾದುದೇನೋ ನಿಜವೇ. ಕುತೂಹಲಕಾರಿ ಸಂಗತಿಯೆಂದರೆ, ಪ್ರಥಮ ಮಹಾಯುದ್ಧದ ದಿನಗಳಲ್ಲಿ ಅಗತ್ಯವಸ್ತುಗಳ ಪಡಿತರ ವ್ಯವಸ್ಥೆಯನ್ನು ದೇಶದಲ್ಲೇ ಪ್ರಪ್ರಥಮವಾಗಿ ಜಾರಿಗೊಳಿಸಿದ ರಾಜ್ಯವೆಂದರೆ, ರಾಜಪ್ರಭುತ್ವ ಚಾಲ್ತಿಯಲ್ಲಿದ್ದ ನಮ್ಮ ಮೈಸೂರು ಪ್ರಾಂತ್ಯ. ಪಡಿತರ ವ್ಯವಸ್ಥೆ ಆಗ ಸೀಮೆ ಎಣ್ಣೆಗೆ ಸೀಮಿತವಾಗಿತ್ತು. ಅಂದಿನ ಕೆಲವರು ಸೀಮೆ ಎಣ್ಣೆಯ ಕಾಳಸಂತೆ ವ್ಯವಹಾರದಿಂದ, ಅಥವಾ ಸೇನೆಗೆ ಪೂರೈಕೆ ಮಾಡುವ ಏಜೆನ್ಸಿ ಮೂಲಕ ಸೂಪರ್‌ ಶ್ರೀಮಂತರಾದರು ಎಂದು ಹೇಳಿದರೆ ಅಂಥವರ ಇಂದಿನ ಪೀಳಿಗೆಯ ಕುಟುಂಬ ಸದಸ್ಯರಿಗೆ ಇರಿಸುಮುರು ಸಾದೀತೇನೋ. ಹೌದು, ನಾವು ಕನಿಷ್ಠ ಕಳೆದೊಂದು ಶತಮಾನ ದಿಂದಲೂ ಕಾಳಸಂತೆ ವ್ಯವಹಾರ ಹಾಗೂ ಕಾಳಧನದೊಂದಿಗೆ ಬದುಕುತ್ತ ಬಂದಿದ್ದೇವೆ. ಆದರೆ ಮೊದಲ ಮಹಾಯುದ್ಧದ ಪಶ್ಚಾತ್‌ ಪರಿಣಾಮವೊಂದನ್ನು ನಮ್ಮ ದೇಶ ಇನ್ನೂ ಮರೆಯಲು ಸಾಧ್ಯವಾಗಿಲ್ಲ. ಅದೆಂದರೆ ಇನ್‌ಫ‌ುಯೆಂಜಾ ಎಂಬ ಸಾಂಕ್ರಾಮಿಕ ಜಾಡ್ಯ.

ಯುದ್ಧಕ್ಕೆ ಭಾರತೀಯರ ಮೊದಲ ಬಲಿ ಚೆನ್ನೈಯಲ್ಲಿ!
ಪ್ರಥಮ ಮಹಾಯುದ್ಧದ ಕಾವು ಭುಗಿಲೆದ್ದದ್ದು ಬಹುತೇಕ ಯುರೋಪಿಯನ್‌ ಪ್ರದೇಶದಲ್ಲೆನ್ನುವುದು ನಿಜವಾದರೂ ಅದು ಈಜಿಪ್ತ್ ಹಾಗೂ ಪ್ಯಾಲಸ್ತೀನ್‌ ಮತ್ತು ಮೆಸಪೊಟೇಮಿಯಾ (ಇಂದಿನ ಇರಾಕ್‌)ದಂಥ ಏಶ್ಯಾದ ಭಾಗಗಳಿಗೂ ಹರಡಿತು. ಅಲ್ಪ ಪ್ರಮಾಣದಲ್ಲಿ ಭಾರತಕ್ಕೂ ತಲುಪಿತು. ಅದರಲ್ಲೂ ಬೆಂಗಳೂರಿನಿಂದ ಹೆಚ್ಚೇನೂ ದೂರವಿಲ್ಲದ ಚೆನ್ನೈಗೂ ಹರಡಿತು. ವಾಸ್ತವವಾಗಿ ಪ್ರಥಮ ಮಹಾಯುದ್ಧದಲ್ಲಿ ಯೂರೋಪಿನಲ್ಲಿ ಭಾರತೀಯ ಸೈನಿಕರು ಸಾವಿ ಗೀಡಾಗುವುದಕ್ಕಿಂತ ಎಷ್ಟೋ ಮೊದಲೇ ನಮ್ಮ ಪೂರ್ವ ಕರಾವಳಿ ಯಲ್ಲಿ ಸಂಭವಿಸಿದ ಯುದ್ಧದಲ್ಲಿ ನಮ್ಮ ಸೈನಿಕರು ಪ್ರಾಣತೆತ್ತರು. ಯುದ್ಧ ಆರಂಭವಾಗಿ ಕೇವಲ ಎರಡೇ ತಿಂಗಳಲ್ಲಿ ಜರ್ಮನ್‌ ನೌಕಾಪಡೆಯ “ಎಸ್‌ಎಂಎಸ್‌ ಎಂಬೆನ್‌’ ಎಂಬ ಲಘು ಪಹರೆ ನೌಕೆ 1914ರ ಸೆ. 22ರ ರಾತ್ರಿ ಸದ್ದಿಲ್ಲದಂತೆ ಚೆನ್ನೈ ಬಂದರನ್ನು ತಲುಪಿ, ಯದ್ವಾತದ್ವಾ ಬಾಂಬೆಸೆತ ಆರಂಭಿಸಿತು. ಈ ಬಾಂಬುಗಳು ಮದ್ರಾಸ್‌ ಹೈಕೋರ್ಟ್‌ ಕಟ್ಟಡ, ಮದ್ರಾಸ್‌ ಬಂದರು ಮಂಡಳಿಯ ಕಟ್ಟಡದ ಗೋಡೆಗಳಿಗೆ ಅಪ್ಪಳಿಸಿದವು. ಅಲ್ಲದೆ ಬರ್ಮಾ ತೈಲ ಕಂಪೆನಿಯ ಬೃಹತ್‌ ಗಾತ್ರದ ಪೆಟ್ರೋಲಿಯಂ ಟ್ಯಾಂಕುಗಳಿಗೆ ಬಡಿದ ಪರಿಣಾಮ ವಾಗಿ ಭಾರೀ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿತು. ಮದ್ರಾಸ್‌ ಬಂದರಿನಲ್ಲಿ ನಿಲುಗಡೆಯ ಸ್ಥಿತಿಯಲ್ಲಿದ್ದ ವ್ಯಾಪಾರಿ ಹಡಗೊಂದರಲ್ಲಿದ್ದ ಐವರು ಸೈನಿಕರು ಮೃತಪಟ್ಟರು. ಇನ್ನಿತರ ಹಲವರು ಗಾಯ ಗೊಂಡರು. ಇದು ಈ ಯುದ್ಧದಲ್ಲಿ ನಡೆದ ಭಾರತೀಯರ ಪ್ರಥಮ ಮಾರಣಹೋಮ. ಈ ಬಾಂಬ್‌ದಾಳಿಯ ಉದ್ದೇಶ ಇಂಗ್ಲೀಷರ ವಾಣಿಜ್ಯ ವ್ಯವಹಾರವನ್ನು ಅಸ್ತವ್ಯಸ್ತಗೊಳಿಸುವಂತೆ ಭಾರತೀಯ ನಾಗರಿಕರಿಗೆ ಪ್ರೇರಣೆ ನೀಡುವುದಾಗಿತ್ತು ಎಂದು ಈ ಘಟನೆಯ ಬಳಿಕ ಎಂಬೆxನ್‌ ನೌಕೆಯ ಕಫ್ತಾನ ಹೇಳಿಕೊಂಡನಂತೆ. ಈ ಬಾಂಬ್‌ ದಾಳಿ ಘಟನೆ ಚೆನ್ನೈಯ ಜನರಲ್ಲಿ ಭಾರೀ ಕಳವಳ ಹಾಗೂ ಹತಾಶ ಭಾವವನ್ನು ಉಂಟು ಮಾಡಿತ್ತು; ಸಾವಿರಾರು ಮಂದಿ ಸುರಕ್ಷಿತ ಸ್ಥಳಗಳನ್ನು ಅರಸಿ ನಗರದಿಂದ ಸಿಕ್ಕ ಸಿಕ್ಕೆಡೆಗಳಿಗೆ ಓಡಿ ಹೋದರು.

ನೆನಪಿಡಬೇಕಾದ ಇನ್ನೂ ಒಂದು ಸಂಗತಿಯಿದೆ. ಅದೆಂದರೆ ನಮ್ಮ ಕರ್ನಾಟಕದ ಬಳ್ಳಾರಿ ನಗರವನ್ನು ಬ್ರಿಟಿಷರು ಆ ದಿನಗಳಲ್ಲಿ ಯುದ್ಧ ಕೈದಿಗಳ ಪ್ರಧಾನ ಶಿಬಿರವನ್ನಾಗಿ ಮಾರ್ಪಡಿಸಿಕೊಂಡಿದ್ದರು. ಯುದ್ಧ ಸಂದರ್ಭದಲ್ಲಿ ಸುಯೆಜ್‌ ಕಾಲುವೆಯಲ್ಲಿ ಸೆರೆ ಸಿಕ್ಕ ಓಟೋಮನ್‌ ಟರ್ಕಿಶ್‌ ಸೇನೆಯ ಸೈನಿಕರನ್ನು ಬಳ್ಳಾರಿ ಯುದ್ಧ ಶಿಬಿರದಲ್ಲಿ ಇರಿಸಲಾಗಿತ್ತು. ಇಲ್ಲಿ ಕೂಡ ಒಂದು ದುರಂತ ಸಂಭವಿಸಿತು; ಇದು ಕಲ್ಕತ್ತದ ಕುಖ್ಯಾತ “ಬ್ಲಾಕ್‌ ಹೋಲ್‌’ ದುರಂತದಂತೆಯೇ ಘಟಿಸಿತು. ಟರ್ಕಿಶ್‌ ಸಮರ ಕೈದಿಗಳನ್ನು ತುಂಬಲಾಗಿದ್ದ ಗೂಡ್ಸ್‌ ರೈಲೊಂದು ಬಳ್ಳಾರಿಯತ್ತ ಬರುತ್ತಿತ್ತು. ಈ ರೈಲಿನ ವ್ಯಾಗನ್‌ ಒಂದರ ಬಾಗಿಲ ಅಗುಳಿಯನ್ನು ನಿರ್ಲಕ್ಷ್ಯದಿಂದಲೋ ಅಥವಾ ಉದ್ದೇಶಪೂರ್ವಕವಾಗಿಯೋ ಹೊರಗಡೆಯಿಂದ ಹಾಕಲಾಗಿತ್ತು. ರೈಲು ಬಳ್ಳಾರಿಯನ್ನು ತಲುಪಿದಾಗ ಈ ವ್ಯಾಗನ್‌ನ ಒಳಗಿದ್ದ ಸೈನಿಕರು ಉಸಿರುಕಟ್ಟಿ ಸತ್ತಿದ್ದು ಗೊತ್ತಾಯಿತು. 

ಇತ್ತೀಚಿನ ವರ್ಷಗಳಲ್ಲಿ ಬಳ್ಳಾರಿಯಲ್ಲಿ ಟರ್ಕಿಯ ಬಲಿದಾನಿಗಳ ನೆನಪಿಗಾಗಿ ಸುಂದರವಾದ ಸ್ಮಾರಕವೊಂದನ್ನು ದಿಲ್ಲಿಯಲ್ಲಿರುವ ಟರ್ಕಿ ರಾಯಭಾರಿ ಕಚೇರಿ ನಿರ್ಮಿಸಿದೆ. ಬಳ್ಳಾರಿಯಲ್ಲಿ ಮೃತಪಟ್ಟ ಅತ್ಯುನ್ನತ ಶ್ರೇಣಿಯ ಟರ್ಕಿಶ್‌ ಸೇನಾನಿಯೆಂದರೆ ಜ| ಆಘಾ ಪಾಶ ಅಬ್ದುಲ್‌ ಸಲಾಮ್‌. ಬಳ್ಳಾರಿಯಲ್ಲಿ ಕಂಟೋನ್ಮೆಂಟ್‌ (ಸೇನಾ ವಸತಿ) ಯಾಕಿದೆ ಎಂದು ಅನೇಕರು ಇಂದು ಕೂಡ ಅಚ್ಚರಿ ಪಡುತ್ತಾರೆ. ಬಳ್ಳಾರಿ ಕಂಟೋನ್ಮೆಂಟ್‌ (ಕನಾಟ್‌ ಬರಾಕು) ಬ್ರಿಟಿಷ್‌ ಭೂ ಸೇನೆಯ ಮದ್ರಾಸ್‌ ತುಕಡಿಯ ಕೇಂದ್ರ ಕಚೇರಿಯಾಗಿತ್ತು. ಮೊದಲ ಮಹಾಯುದ್ಧದ ಬಳಿಕ ಸೇನಾ ತುಕಡಿಯ ಕೇಂದ್ರವನ್ನು ತಂಪನೆಯ ಹವೆಯ ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್‌ಗೆ ಸ್ಥಳಾಂತರಿಸಲಾಯಿತು. ಎಷ್ಟೆಂದರೂ ಬಳ್ಳಾರಿ ಕಡು ಉಷ್ಣ ಹವೆಯ ಪ್ರದೇಶ ತಾನೆ?

ಹಾಗೆ ನೋಡಿದರೆ ಚೆನ್ನೈ ಮೇಲೆ ಅಂದು ಎಂಬೆನ್‌ ಪಹರೆ ನೌಕೆ ನಡೆಸಿದ ಬಾಂಬ್‌ ದಾಳಿ ಘಟನೆ ಯುರೋಪನ್ನೇ ಕೇಂದ್ರೀಕರಿಸಿಕೊಂಡಿದ್ದ ಮೊದಲ ಮಹಾಯುದ್ಧದ ಕೇವಲ ಒಂದು ನೇರ ಸ್ಪರ್ಶವಷ್ಟೇ. ಮಹಾಯುದ್ಧವೆಂಬುದು ನಮ್ಮ ಬಾಗಿಲ ಬಳಿಯಲ್ಲೇ ನಡೆದ ಉದಾಹರಣೆಯೆಂದರೆ ಬರ್ಮಾದಲ್ಲಿ ದ್ವಿತೀಯ ಮಹಾಯುದ್ಧದಲ್ಲಿ ನಡೆದ ಹೋರಾಟ. ಬರ್ಮಾದಲ್ಲಿ ನಡೆದುದು ಜಪಾನೀ ಸೇನೆ (ನಾಝಿ ಜರ್ಮನಿಯ ಮೈತ್ರಿ ಸೇನೆ) ಹಾಗೂ ಬ್ರಿಟಿಶ್‌ ಭಾರತೀಯ ಸೇನೆಯ ನಡುವಣ ಹೋರಾಟ. ಆ ಯುದ್ಧದಲ್ಲಿ ಜಪಾನೀ ಸೇನೆ ಕಲ್ಕತ್ತದ ಮೇಲೆ ಬಾಂಬ್‌ ದಾಳಿ ನಡೆಸಿತ್ತು. (1942ರ ಡಿಸೆಂಬರ್‌ 12ರಂದು). ಆದರೆ ಹಾಗೆ ಎಸೆದ ಬಾಂಬುಗಳು ಗುರಿತಪ್ಪಿದವು; ಹಳೇ ಹೌರಾ ಸೇತುವೆ ಬಚಾವಾಯಿತು.

ಆಸ್ಟ್ರಿಯಾ-ಹಂಗೇರಿಯ (ಈಗ ಇದು ಬೋಸ್ನಿಯಾ- ಹರ್ಜೆಗೋವಿನಾ) ನಗರವಾದ ಸರಯೇವೋದಲ್ಲಿ ನಡೆದ ಆಸ್ಟ್ರಿಯಾದ ಆರ್ಕ್‌ಡ್ನೂಕ್‌ ಫ್ರಾನ್‌l ಫ‌ರ್ಡಿನಾಂಡ್‌ ಹತ್ಯೆಯನ್ನು ತನ್ನ “ತಾಯ್ನೆಲವೇ’ ಆಗಿದ್ದ ಇಂಗ್ಲೆಂಡಿನ ಮೇಲೆ ಯುದ್ಧ ಸಾರಲು ಬಳಸಿಕೊಂಡ ಕೈಸರ್‌ ವಿಲ್‌ಹೆಲ್ಮ್ (ದ್ವಿತೀಯ) ಬಗ್ಗೆ ಇಲ್ಲಿ ಒಂದೆರಡು ಮಾತುಗಳನ್ನು ಬರೆದರೆ ಅದು ಅಪ್ರಾಸಂಗಿಕವಾಗಲಾರದೇನೋ. ಕೈಸರ್‌ ವಿಲ್‌ಹೆಲ್ಮ್ ಓರ್ವ ಆಂಶಿಕ ಅಂಗವಿಕಲ ವ್ಯಕ್ತಿ; ಆತನ ಎಡತೋಳು, ಬಲತೋಳಿಗಿಂತ ಗಿಡ್ಡವಿತ್ತು. ಜನನದ ವೇಳೆ ಪೃಷ್ಠಭಾಗ ಅಥವಾ ಕಾಲುಗಳು ಮುಂದಾಗಿದ್ದ ಸ್ಥಿತಿಯಲ್ಲಿ ತಾಯ ಗರ್ಭದಿಂದ ಹೊರಬಂದ ಪರಿಣಾಮ ಇದಾಗಿತ್ತು. ಈ ವಿಕಲತೆ ವಿಲ್‌ಹೆಲ್ಮ್ ಮನಸ್ಸಿನಲ್ಲಿ ವಿಕ್ಷಿಪ್ತತೆಯನ್ನು ಹುಟ್ಟುಹಾಕಿತ್ತು. ಇದು ಅನೇಕ ತೆರನ ಭಾವನಾತ್ಮಕ ಸಮಸ್ಯೆಗಳಿಗೆ ಹಾದಿ ಮಾಡಿಕೊಟ್ಟಿತ್ತು. ಬ್ರಿಟನ್‌ನಲ್ಲಿ ಜನಿಸಿದ್ದ ಆತನಿಗೆ ಬ್ರಿಟಿಷರ ಮೇಲೆ ಎಲ್ಲಿಲ್ಲದ ಅಸೂಯೆಯಿತ್ತು. ಭಾರತದ ರಾಷ್ಟ್ರೀಯವಾದಿಗಳಿಗಿಂತಲೂ ಅಧಿಕವಾದ ದ್ವೇಷ ಬ್ರಿಟಿಷರ ಮೇಲಿತ್ತು. ಆತ ಒಬ್ಬ ಸೋಗಿನ ನಡೆಯ ಉಬ್ಟಾಳು ವ್ಯಕ್ತಿಯಾಗಿ ಹಾದು ಸದಾ ಸಮರ ಸಾರಲು ಹಾತೊರೆಯುತ್ತಿದ್ದ ಯುದ್ಧಕೋರ ರಾಜಕಾರಣಿಯಾಗಿದ್ದ. ಈ ವ್ಯಕ್ತಿ ದೇಶಭ್ರಷ್ಟನಾಗಿ ಹಾಲೆಂಡಿನ ಉಟ್ರೆಕ್ಟ್‌ನ ಸಮೀಪ 1941ರಲ್ಲಿ ಮರಣ ಕಂಡದ್ದನ್ನು ಇತಿಹಾಸದ ಪುಟಗಳು ಎತ್ತಿ ತೋರಿಸುತ್ತವೆ. 

ಟಾಪ್ ನ್ಯೂಸ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.