ಯಡಿಯೂರಪ್ಪ ಎದುರಿಸಬೇಕಾದ ಸಂಕೀರ್ಣ ಸವಾಲುಗಳು


ಅರಕೆರೆ ಜಯರಾಮ್‌, Aug 1, 2019, 5:34 AM IST

q 0

ಕುಮಾರಸ್ವಾಮಿ ಸರಕಾರ ಪತನಗೊಂಡು ಇದೀಗ ಭಾರತೀಯ ಜನತಾಪಕ್ಷ ಯಶಸ್ವಿಯಾಗಿ ಅಧಿಕಾರಕ್ಕೆ ಮರಳಿದ್ದು, ಇದರ ವಿಜಯೋತ್ಸವವನ್ನು ಆಚರಿಸಲು ಬಿಜೆಪಿ ಪಾಲಿಗೆ ಎಲ್ಲ ವಿಧದ ಕಾರಣಗಳೂ ಇವೆಯಾದರೂ ಸದ್ಯ ಅದರೆದುರಲ್ಲಿ ಕಗ್ಗಂಟಾಗಿರುವ ಸಮಸ್ಯೆಗಳೂ ಇವೆಯೆನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಇನ್ನೂ ವಿಷಣ್ಣ ಭಾವದಿಂದಲೇ ಇದ್ದಾರೆ. ಸದನದಲ್ಲಿ ನೂತನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಬಹುಮತವಿದೆಯೇ ಇಲ್ಲವೇ ಎಂಬುದನ್ನು ಸೂಕ್ಷ್ಮವಾಗಿ ಪರೀಕ್ಷಿಸುವ ಗೋಜಿಗೂ ಅವರು ಹೋಗಿಲ್ಲ. ಯಡಿಯೂರಪ್ಪ ಅವರು ಮಂಡಿಸಿದ ವಿಶ್ವಾಸಮತ ಗೊತ್ತುವಳಿಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಗೊತ್ತುವಳಿಯನ್ನು ಮತಕ್ಕೆ ಹಾಕುವಂತೆ ವಿರೋಧ ಪಕ್ಷಗಳು ಒತ್ತಾಯಿಸಿದ್ದಲ್ಲಿ, ಬಿಜೆಪಿಯ ನಿಜವಾದ ಬಲ ಏನೆಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳುವ ಸಾಧ್ಯತೆಯಿತ್ತು.

ಬಿ.ಎಸ್‌. ವೈ ಅವರ ಮಟ್ಟಿಗೆ ‘ಈಗ’ ಎಂಬ ಪದವನ್ನು ಬಳಸುವುದು ಸಮಂಜಸವಾಗಲಾರದು. ಕಾರಣ, ಕಳೆದ 12 ವರ್ಷಗಳಲ್ಲಿ ಅವರು ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಇದೊಂದು ದಾಖಲೆ ಸಂಖ್ಯೆಯೂ ಪುನರಾಗಮನವೂ ಹೌದು.

ವಿಧಾನಸಭೆಯ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಸದಸ್ಯರು ಆಳುವ ಪಕ್ಷದ ಆಸನಗಳ ಕಡೆಗೆ ಹೆಜ್ಜೆ ಹಾಕಲು ಅನುವು ಮಾಡಿಕೊಟ್ಟದ್ದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 17 ಶಾಸಕರ ಬಂಡಾಯವೆನ್ನುವುದು ನಿಜ; ಇದೇ ವೇಳೆ, ಈ ಅತೃಪ್ತ ಶಾಸಕರು ಬಿಜೆಪಿಯ ಪಾಲಿಗೆ ಒಂದು ‘ಹೊರೆ’ಯಾಗುವ ಸಾಧ್ಯತೆಯೂ ಇದೆ ಎನ್ನುವುದನ್ನು ಅಲ್ಲಗಳೆಯಲಾಗದು. ಯಡಿಯೂರಪ್ಪನವರ ಎರಡನೆಯ ಸರಕಾರ (2008-2011) ಬಳ್ಳಾರಿ ಗಣಿ ದೊರೆಗಳ ಕಾಟ ಅನುಭವಿಸಿದ್ದರೆ, ಇದೀಗ ಈ ನಾಲ್ಕನೆಯ ಸರಕಾರ ಈ 17 ಅತೃಪ್ತರ ಶಾಸಕರ ಅಪಾಯ ಸಾಧ್ಯತೆಯನ್ನು ಎದುರಿಸುತ್ತಿದೆ. ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ, ಈ ಬಂಡಾಯ ಶಾಸಕರನ್ನು 2023ರ ಮೇವರೆಗೆ (ಈ ವಿಧಾನಸಭೆಯ ಅವಧಿ ಅಂತ್ಯಗೊಳ್ಳುವ ತನಕ) ಅನರ್ಹಗೊಳಿಸಿದ್ದೇ ಒಳ್ಳೆಯದಾಯಿತು. ನಿರ್ಗಮಿತರಾಗಲಿದ್ದ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ಅವರು ಸಂವಿಧಾನದ 10ನೆಯ ಪರಿಚ್ಛೇದದಲ್ಲಿನ ನಿಯಮಾವಳಿಯನ್ವಯ ಕೊಟ್ಟ ತೀರ್ಮಾನ ಇದು. ಈ ಪರಿಚ್ಛೇದದಡಿ ಹಾಗೂ 191 (2)ನೆಯ ವಿಧಿಯಡಿ ಈ ಶಾಸಕರುಗಳ ಸದಸ್ಯತ್ವ ರದ್ದಾಗಿರುವುದರಿಂದ ಇವರುಗಳು ಪ್ರಸಕ್ತ (15ನೆಯ) ವಿಧಾನಸಭೆಯನ್ನು ಮರಳಿ ಪ್ರವೇಶಿಸುವಂತಿಲ್ಲ ಎಂದು ರಮೇಶ್‌ ಕುಮಾರ್‌ ಅವರದೇ ಅಧಿಕೃತ ಧಾಟಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಒಂದು ರೀತಿಯಲ್ಲಿ ರಮೇಶ್‌ ಕುಮಾರ್‌ ಸರಿಯಾದುದನ್ನೇ ಮಾಡಿದ್ದಾರೆ.

ವ್ಯಕ್ತಿಯೊಬ್ಬ ಉಪ ಚುನಾವಣೆಗೆ ನಿಂತು ಅದೇ ಸದನಕ್ಕೆ ಹಿಂದಿರುಗಲು ಅವಕಾಶವಿದೆಯೆಂದಾದರೆ, ಪಕ್ಷಾಂತರ ಮಾಡಿದ್ದಕ್ಕಾಗಿ ವಿಧಿಸಲಾಗುವ ಅನರ್ಹತಾ ಶಿಕ್ಷೆಗೆ ಯಾವುದೇ ಅರ್ಥವೂ ಇರುವುದಿಲ್ಲ. ರಮೇಶ್‌ ಕುಮಾರ್‌ ಅವರ ಕ್ರಮವನ್ನು ವಿರೋಧಿಸಿದವರೂ ಇದ್ದಾರೆ. ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ ಇಂಥವರಲ್ಲೊಬ್ಬರು. ಅನರ್ಹಗೊಂಡ ಶಾಸಕನೊಬ್ಬ ಸದನಕ್ಕೆ ಮರು ಆಯ್ಕೆಗೊಂಡಲ್ಲಿ, ಆತ ಚುನಾಯಿತರಿಗೆ ಅವಕಾಶವಿರುವ ಹುದ್ದೆ (ಮಂತ್ರಿಗಿರಿ)ಯನ್ನು ಪಡೆಯುವಂತಿಲ್ಲ; ಆತನಿಗೆ ಇದೇ ಶಿಕ್ಷೆ ಎಂಬುದನ್ನು ಗಮನಿಸಬೇಕಾಗಿದೆ. ಈ ಸಂದರ್ಭದಲ್ಲಿ ತಮಿಳುನಾಡಿನ ಪೂರ್ವೋದಾಹರಣೆಯನ್ನು ನೆನಪಿಗೆ ತಂದುಕೊಳ್ಳಬೇಕು. ಅಲ್ಲಿನ 18 ಎಐಎಡಿಎಂಕೆ ಶಾಸಕರನ್ನು 2017ರ ಸೆಪ್ಟೆಂಬರ್‌ನಲ್ಲಿ ಅನರ್ಹಗೊಳಿಸಲಾಗಿತ್ತು; ಬಳಿಕ ಉಪಚುನಾವಣೆಯಲ್ಲಿ ಇವರುಗಳಿಗೆ ಮರು ಆಯ್ಕೆಯಾಗಿ ಬರಲು ಅವಕಾಶ ಮಾಡಿಕೊಡಲಾಯಿತು. ಸ್ವಾರಸ್ಯವೆಂದರೆ, ಹಾಗೆ ಮರು ಆಯ್ಕೆಗೊಂಡವರು ಕೇವಲ ಒಬ್ಬ ಶಾಸಕ ಮಾತ್ರ. ಇವರೆಲ್ಲರೂ ಜೈಲಲ್ಲಿರುವ ವಿ.ಕೆ. ಶಶಿಕಲಾ ನೇತೃತ್ವದ ಎಐಎಡಿಎಂಕೆ ಬಣಕ್ಕೆ ಪಕ್ಷಾಂತರ ಮಾಡಿದ್ದ ಹಿನ್ನೆಲೆಯಲ್ಲಿ ಇವರುಗಳನ್ನು ಸ್ಪೀಕರ್‌ ಪಿ. ಧನಪಾಲ್ ಅವರು ಅನರ್ಹಗೊಳಿಸಿದ್ದರು. ಈ ಆದೇಶವನ್ನು ರದ್ದು ಮಾಡಿದ ಆಗಿನ ಮುಖ್ಯ ಚುನಾವಣಾ ಆಯುಕ್ತ ಓ.ಪಿ. ರಾವತ್‌ ಅವರು, ಅನರ್ಹಗೊಂಡಿದ್ದ ಸದಸ್ಯರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದರು.

ನಿರೀಕ್ಷೆಯಂತೆಯೇ ನಮ್ಮ 17 ಮಂದಿ ಮಾಜಿ ಶಾಸಕರ ವಿಷಯ ಸುಪ್ರೀಂಕೋರ್ಟಿನೆದುರು ಬರಲಿದೆ. ಕೆಲವರು ಈಗಾಗಲೇ ಸ್ಪೀಕರ್‌ ಅವರ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನ ಬಾಗಿಲನ್ನು ಬಡಿದೂ ಆಗಿದೆ. ಸದನದಿಂದ ಹೊರ ಹಾಕಲ್ಪಟ್ಟ ಈ ಮಾಜಿ ಶಾಸಕರು ಸುಪ್ರೀಂಕೋರ್ಟಿನ ಮುಂದೆ ಮೊರೆಯಿಡುವ ಅವಕಾಶವೇನೋ ಇದೆ; ಆದರೆ ನ್ಯಾಯ ವಂಚಿತರಾದ ನಮ್ಮ ಎಷ್ಟೋ ಅನುಕೂಲವಂತ ನಾಗರಿಕರು ಕನಿಷ್ಠ ಮುನ್ಸಿಫ್ ಕೋರ್ಟಿನ ಬಾಗಿಲು ಬಡಿಯಲೂ ಹಿಂದೆಮುಂದೆ ನೋಡುವ ಪರಿಸ್ಥಿತಿ ಇದೆ ಎಂಬುದನ್ನು ಅಗತ್ಯವಾಗಿ ಗಮನಿಸಬೇಕಾಗಿದೆ. ಈಗ ನಮ್ಮ ಪರಮೋಚ್ಚ ನ್ಯಾಯಾಲಯ, ಇಷ್ಟೇ ಮುಖ್ಯವಾದ ಇತರ ಪ್ರಕರಣಗಳನ್ನು ಬದಿಗೊತ್ತಿ, ಈ 17 ಮಂದಿಯ ದೂರುಗಳನ್ನು ತುರ್ತು ವಿಷಯವೆಂದು ಪರಿಗಣಿಸಿ ವಿಚಾರಣೆಗೆ ಸ್ವೀಕರಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ! ಹಾಗೆ ನೋಡಿದರೆ ಸುಪ್ರೀಂ ಕೋರ್ಟನ್ನು ಸಂಕಷ್ಟದಲ್ಲಿರುವ ಸರಕಾರಗಳ ಹಾಗೂ ಶಾಸಕರ ಪಾಲಿಗೆ ನೆರವು ನೀಡುವ ಆಶ್ರಯ ಸ್ಥಾನವೆಂದು ಪರಿಗಣಿಸಲು ಸಾಧ್ಯವಿಲ್ಲ. ಕೆಲವೊಂದು ಪ್ರಕರಣಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಹೇಳುವುದಾದರೆ, ಕಳೆದ ಅನೇಕ ವರ್ಷಗಳಿಂದ ನ್ಯಾಯಾಲಯಗಳಿಂದ ಸೂಕ್ತ ನ್ಯಾಯ ಹಾಗೂ ಪರಿಹಾರ ದೊರಕೀತೆಂದು ಕಾದು ಕುಳಿತಿರುವ ಸಾವಿರಾರು ನಾಗರಿಕರಿದ್ದಾರೆ. ಇನ್ನು, ಆರ್ಥಿಕ ಅಪರಾಧಿಗಳು ಹಾಗೂ ಭ್ರಷ್ಟಾಚಾರ ನಿರತ ವ್ಯಕ್ತಿಗಳಿಗೆಂದೇ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾವಕ್ಕೆ ಅನೇಕಾನೇಕ ಮಂದಿ ಆಕ್ಷೇಪ ವ್ಯಕ್ತಪಡಿಸಿಲ್ಲವೆ? ಶೀಘ್ರ ನ್ಯಾಯದಾನ ದೊರೆಯಲಿ ಎಂದು ಮೊರೆಯಿಡುತ್ತಿರುವವರು ಇವರಷ್ಟೇ ಅಲ್ಲ ಎನ್ನುವುದು ನಿಜವಲ್ಲವೆ? ಮೇಲ್ಮನವಿಗಳು ಹಾಗೂ ಕೋರ್ಟಿನ ಆದೇಶಕ್ಕೆ ಸ್ಪಷ್ಟನೆ ಕೋರುವ ಅರ್ಜಿಗಳೊಂದಿಗೆ ಸುಪ್ರೀಂಕೋರ್ಟಿಗೆ ಮೊರೆಯಿಡುವ ಮೂಲಕ ತಮ್ಮ ಸರಕಾರವನ್ನು ಬಚಾಯಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ವಿಫ‌ಲರಾದರು. ಸರಕಾರದ ಪತನವನ್ನು ತಡೆಯಲು ಈ ಎರಡೂ ಮಿತ್ರಪಕ್ಷಗಳ ನಾಯಕರು ಶಕ್ತಿಮೀರಿ ಪ್ರಯತ್ನಿಸಿದ್ದರು.

ಈಗ 17 ಮಂದಿಯ ಸದಸ್ಯತ್ವ ರದ್ದಾಗಿರುವುದರಿಂದ ಇನ್ನು ಆರು ತಿಂಗಳೊಳಗೆ ಈ 17 ಸ್ಥಾನಗಳಿಗೆ ಉಪಚುನಾವಣೆ ನಡೆಯಬೇಕು. ಸುಪ್ರೀಂ ಕೋರ್ಟು ಈ ಮೊಕದ್ದಮೆಗಳ ವಿಚಾರಣೆಯನ್ನು ಆರು ತಿಂಗಳಿಗೂ ಹೆಚ್ಚು ಕಾಲ ನಡೆಸಿದರೆ, ಇದೇ ವೇಳೆ ಚುನಾವಣಾ ಆಯೋಗ ಅಷ್ಟರೊಳಗೆ ಉಪಚುನಾವಣೆ ಪ್ರಕ್ರಿಯೆಯನ್ನು ಹಮ್ಮಿಕೊಂಡರೆ, ಈ 17 ಮಂದಿ ವಿಧಾನಸಭೆಯನ್ನು ಮರು ಪ್ರವೇಶಿಸುವುದು ಸಾಧ್ಯವಾಗಲಾರದು. ಇಂಥ ಮರುಪ್ರವೇಶಿಸುವುದು ಸಾಧ್ಯವಾಗಲಾರದು. ಇಂಥ ಪರಿಸ್ಥಿತಿ ಎದುರಾದರೆ ಬಿಜೆಪಿಗೆ ಲಾಭವೇ ಆಗಲಿದೆ; ಅದು ತನ್ನ ನಿಷ್ಠಾವಂತರನ್ನು ಕಣಕ್ಕಿಳಿಸಿ ಅವರನ್ನು ಗೆಲ್ಲಿಸುವಲ್ಲಿ ತನ್ನ ಎಲ್ಲ ಪ್ರಯತ್ನಗಳನ್ನು ಧಾರೆಯೆರೆಯಬಹುದಾಗಿದೆ.

ವಿಧಾನಸಭೆಯಲ್ಲಿ ಬಹುಮತ ದಕ್ಕಿಸಿಕೊಳ್ಳುವುದಕ್ಕಾಗಿ ನಡೆದಿರುವ (ನಡೆದಿದೆಯೆಂದು ಹೇಳಲಾಗುತ್ತಿರುವ) ಕಮಲ ಕಾರ್ಯಾಚರಣೆಯ ಬಗ್ಗೆ ಹೇಳುವುದಾದರೆ, ಬಹುಶಃ ಪಕ್ಷವು ನಿಮ್ಮನ್ನು ಉಪಚುನಾವಣೆಯಲ್ಲಿ ನಮ್ಮದೇ ಅಭ್ಯರ್ಥಿಗಳೆಂದು ಕಣಕ್ಕಿಳಿಸುತ್ತೇವೆಂದು ಈ 17 ಮಂದಿಗೆ ಭರವಸೆ ನೀಡಿರಬೇಕು. ಇಲ್ಲವಾದರೆ ಎ.ಎಚ್. ವಿಶ್ವನಾಥ್‌, ಮುನಿರತ್ನ, ರಮೇಶ್‌ ಜಾರಕಿಹೊಳಿ ಅಥವಾ ರೋಶನ್‌ ಬೇಗ್‌ರಂಥ ಅತ್ಯಂತ ಪ್ರಭಾವಶಾಲಿ, ಸಮರ್ಥರು ಬಿಜೆಪಿಯ ಬಲೆಗೆ ಬೀಳುತ್ತಿರಲಿಲ್ಲ. ಬೇಗ್‌ ಅವರಂತೂ ಹಲಾಲ್ ಬ್ಯಾಂಕಿಂಗ್‌ ಹೆಸರಲ್ಲಿ ನಡೆದ ಐಎಂಎ ವಂಚನೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ವಿಚಾರಣೆಗೊಳಪಡುವ ಎಷ್ಟೋ ಮುಂಚಿತವಾಗಿಯೇ ಸಿದ್ದರಾಮಯ್ಯ ಅವರ ಸರ್ವಾಧಿಕಾರಿ ಧೋರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬೇಗ್‌ ಅವರ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ. 45ರಷ್ಟು ಮುಸ್ಲಿಂ ಮತದಾರರಿದ್ದಾರೆ. ಬಿಜೆಪಿ ಜತೆಗಿನ ಸ್ನೇಹದ ಮಟ್ಟಿಗೆ ಅಲ್ಲವಾದರೂ, ಕಾಂಗ್ರೆಸ್‌ನ ವಿರುದ್ಧ ಬಂಡಾಯವೆದ್ದಿರುವ ಅವರ ನಡವಳಿಕೆ ಯಾವುದೋ ಒಂದು ಲೆಕ್ಕಾಚಾರದ ಅಪಾಯಕಾರಿ ಉಪಾಯವಾಗಿ ಕಂಡು ಬಂದಿದೆ.

ಅನರ್ಹಗೊಂಡಿರುವ 17 ಶಾಸಕರಲ್ಲಿ ಎ.ಎಚ್. ವಿಶ್ವನಾಥ್‌ರಂಥ ಕೇವಲ ಕೆಲವರಷ್ಟೇ ಬಿಜೆಪಿ ಅಥವಾ ಇತರ ಯಾವುದೇ ಪಕ್ಷಕ್ಕೆ ನಿಜವಾದ ಆಸ್ತಿಯಾಗಿರುತ್ತಾರೆ ಎನ್ನಬಹುದು. ಮುನಿರತ್ನ, ರೋಶನ್‌ಬೇಗ್‌ ಹಾಗೂ ಎಂ.ಟಿ.ಬಿ. ನಾಗರಾಜ್‌ ಅವರಂಥವರು ತಮ್ಮ ರಾಜಕೀಯ ವೃತ್ತಿಗೆ ತಟ್ಟಿರುವ ಕಳಂಕದಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಇಂಥವರೇ ಇದ್ದರೆ ಬಿಜೆಪಿ ಹೇಗಿರುತ್ತದೆಂದು ಒಮ್ಮೆ ಕಲ್ಪಿಸಿಕೊಳ್ಳಿ. ಸುಪ್ರೀಂಕೋರ್ಟ್‌ ತಮ್ಮ ಪರವಾಗಿ ತೀರ್ಪಿತ್ತರೆ ತಮಗೆ ಮಂತ್ರಿಗಿರಿ ದಯಪಾಲಿಸಬೇಕೆಂದು ಅನರ್ಹಗೊಂಡ ಶಾಸಕರು ಈಗಾಗಲೇ ಲಾಬಿ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಯಾವುದೇ ದೃಷ್ಟಿಯಿಂದ ನೋಡಿದರೂ ಪಕ್ಷಕ್ಕಾಗಿ ತಮ್ಮ ಜೀವಮಾನ ಸವೆಸಿರುವ ಶಾಸಕರಿಗೆ, ಹಾಗೆಯೇ ವರ್ಷಗಟ್ಟಲೇ ಪಕ್ಷಕ್ಕೆ ಸೇವೆ ಸಲ್ಲಿಸಿ ಶಾಸಕರಾಗಿರುವವರಿಗೆ ಇದರಿಂದ ಅನ್ಯಾಯವೇ ಆಗುತ್ತದೆ. ಈ ಹಿಂದೆ ಆಪರೇಶನ್‌ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡಿದ್ದವರಲ್ಲಿ ಹೆಚ್ಚಿನವರು 2013ರ ವಿಧಾನಸಭಾ ಚುನಾವಣೆಯಲ್ಲಿ ಸೋತದ್ದನ್ನು ನೋಡಿಯೇ ಇದ್ದೇವೆ. ಏನೇ ಇದ್ದರೂ ಬಿಜೆಪಿ ಕಮಲ ಕಾರ್ಯಚರಣೆಯನ್ನು ಅತಿಯೆಂಬಷ್ಟು ನಡೆಸಿದೆ. ಸರಕಾರ ಸುಭದ್ರವಾಗಿದೆಯೆಂದು ಮನದಟ್ಟಾದ ಕೂಡಲೇ ಅದು ವಿಪಕ್ಷೀಯ ಶಾಸಕರನ್ನು ಸೆಳೆಯುವ ಕೆಲಸವನ್ನು ನಿಲ್ಲಿಸಬೇಕಿತ್ತು.

ಬಳ್ಳಾರಿಯ ಅಕ್ರಮ ಗಣಿ ಲಾಬಿಯ ಮುಖಂಡ ಜಿ. ಜನಾರ್ದನ ರೆಡ್ಡಿಯವರನ್ನು ಬಿಜೆಪಿ ಅತಿಯಾಗಿ ಅವಲಂಬಿಸಿತು; ಇದರಿಂದ ಅದು ಪಾಠ ಕಲಿಯಬೇಕಿತ್ತು. ಆ ಲಾಬಿಯೊಂದಿಗೆ ಸಂಪರ್ಕವಿರಿಸಿಕೊಂಡವರನ್ನು ಸಚಿವ ಸಂಪುಟದಿಂದ ದೂರವೇ ಇರಿಸಲು ಬೇಕಾದ ಗರಿಷ್ಠ ಎಚ್ಚರವನ್ನು ಪಕ್ಷ ಇರಿಸಿಕೊಳ್ಳಬೇಕಾಗಿದೆ. ಇಂಥವರಲ್ಲೊಬ್ಬರಾದ ಬಿ. ಶ್ರೀರಾಮುಲು. ಅವರು ಉಪಮುಖ್ಯಮಂತ್ರಿ ಪದವಿಯ ಮೇಲೆ ಕಣ್ಣಿಟ್ಟಿದ್ದಾರೆಂಬ ವರದಿಗಳಿವೆ. ಬಿಎಸ್‌ವೈ ಸರಕಾರಕ್ಕಿರುವ ಒಂದು ಅನುಕೂಲತೆಯೆಂದರೆ, ಕೇಂದ್ರದಲ್ಲಿ ಹಾಗೂ ಬಹುತೇಕ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿಯ ಆಡಳಿತವೇ ಇದೆ. ರಾಜ್ಯಪಾಲ ವಜೂಭಾೖವಾಲಾ ಅವರ ಅಧಿಕಾರಾವಧಿ ಮುಕ್ತಾಯದ ಹಂತದಲ್ಲಿದ್ದು , ಅವರಿಗೆ ಎರಡನೆಯ ಅವಧಿ ಸಿಗದಿದ್ದರೂ, ಮುಂದೆ ರಾಜ್ಯಪಾಲರಾಗುವವರು ಬಿಎಸ್‌ವೈ ಆ್ಯಂಡ್‌ ಕಂಪೆನಿಯ ಮಿತ್ರನೇ ಆಗಿರಬೇಕಾಗುತ್ತದೆ. ಅದೃಷ್ಟ ಕೈಕೊಟ್ಟಿದ್ದ ತಮ್ಮ ಎರಡನೆಯ ಮುಖ್ಯಮಂತ್ರಿತ್ವದ ಅವಧಿಯಲ್ಲಿ ಯಡಿಯೂರಪ್ಪ ಅವರು ತಮ್ಮನ್ನು ಕಂಡರಾಗದಂತೆ ನಡೆದುಕೊಳ್ಳುತ್ತಿದ್ದ ರಾಜ್ಯಪಾಲ ಎಚ್.ಆರ್‌. ಭಾರದ್ವಾಜ್‌ ಅವರೊಂದಿಗೆ ಏಗಬೇಕಾಗಿ ಬಂತು. ಅಕ್ರಮ ಡಿನೋಟಿಫಿಕೇಶನ್‌ ಕೇಸಿನಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸುವ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದವರು ಭಾರದ್ವಾಜರೇ. ದಸ್ತಗಿರಿಯ ಅವಮಾನ ಹಾಗೂ 23 ದಿನಗಳ ಜೈಲುವಾಸವನ್ನು ಅವರು (ಲೋಕಾಯುಕ್ತದ ವಿಶೇಷ ನ್ಯಾಯಾಲಯದ ವಿವಾದಾತ್ಮಕ ಆದೇಶದ ಫ‌ಲವಾಗಿ) ಅನುಭವಿಸಬೇಕಾಯಿತು. ಆಮೇಲೆ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡರೂ 2015ರಲ್ಲಿ, ಉಚ್ಚನ್ಯಾಯಾಲಯ, ರಾಜ್ಯಪಾಲ ಭಾರದ್ವಾಜ್‌ ಅವರ ‘ಮಂಜೂರಾತಿ ಆದೇಶ’ವನ್ನು ರದ್ದುಪಡಿಸಿತು.

ಅನರ್ಹ ಶಾಸಕರಲ್ಲಿ ಕೆಲವರ ನಿಕಟ ಸಂಬಂಧಿಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂಬಂಥ ಕಳವಳಕಾರಿ ವರದಿಗಳು ಪ್ರಕಟ/ಪ್ರಸಾರವಾಗಿವೆ. ಬಿಜೆಪಿ ರಾಜ್ಯದ ಜನರನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ; ಇಂಥ ಧೋರಣೆಯೊಂದಿಗೆ ವಿಧಾನಸಭಾ ಸದಸ್ಯತ್ವ ಕಳೆದುಕೊಂಡ ಮಂದಿಯೊಡನೆ ಇಂಥ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳುವ ಹಾಗಿಲ್ಲ ಅಥವಾ ಅವರಿಗೆ ಇಂಥ ಭರವಸೆಯನ್ನೂ ನೀಡುವಂತಿಲ್ಲ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.