ಸಂಪುಟ ವಿಸ್ತರಣೆ ಹಿಂದಿನ ವಿಚಿತ್ರ-ವಿಲಕ್ಷಣ ರಾಜಕಾರಣ


Team Udayavani, Jun 12, 2019, 5:50 AM IST

h-36

‘ಎ’ ಅಥವಾ ‘ಬಿ’ಗೆ ಮಂತ್ರಿಗಿರಿ ಸಿಕ್ಕಿತೆನ್ನುವುದು ಕೇವಲ ಆ ಶಾಸಕರ ಪಕ್ಷಗಳಿಗೆ, ಅವರ ಕ್ಷೇತ್ರಗಳಿಗೆ, ಜಾತಿಗಳಿಗೆ ಮಾತ್ರ ಆಸಕ್ತಿ ಹುಟ್ಟಿಸಬಹುದಷ್ಟೆ. ಕ್ಷುಲ್ಲಕ ಜಗಳಗಳನ್ನು ಬಿಟ್ಟರೆ, ಆಡಳಿತದ ‘ಪ್ರಗತಿ ವರದಿ’ಯನ್ನು ನೀಡುವಷ್ಟು ಸಾಧನೆ ಮೈತ್ರಿ ಸರಕಾರದ ಲೆಕ್ಕದ ಪುಸ್ತಕದಲ್ಲಿ ದಾಖಲಾಗದೆ ಇರುವುದರಿಂದ, ಇಬ್ಬರೋ ಮೂವರೋ ಹೊಸ ಸಚಿವರನ್ನು ಸೇರ್ಪಡೆಗೊಳಿಸಿಕೊಂಡಲ್ಲಿ ಕಾರ್ಯ ನಿರ್ವಹಣೆ ಸುಧಾರಿಸುವ ಸಾಧ್ಯತೆ ಏನೇನೂ ಇಲ್ಲ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಇಂದಿನಂಥ ವಿಚಿತ್ರ ವಿಲಕ್ಷಣ ರಾಜಕೀಯ ನಡೆದಿಲ್ಲ. ಸಚಿವ ಸಂಪುಟ ವಿಸ್ತರಣೆಯ ಮೂಲಕ ಮೈತ್ರಿಕೂಟ ಸರಕಾರ ಯಾವ ದಿಕ್ಕಿನತ್ತ ಸಾಗಲು ಬಯಸಿದೆ ಎಂದು ಎಲ್ಲರೂ ಈಗ ವಿಸ್ಮಯ ಪಡುವಂತಾಗಿದೆ.

ಆಡಳಿತಾರೂಢ ಪಕ್ಷಗಳಾದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಎರಡೂ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಜನರಿಂದ ಸಾರಾಸಗಟಾಗಿ ತಿರಸ್ಕೃತವಾಗಿವೆ. ಉಭಯ ಪಕ್ಷಗಳಿಗೂ ಮುಂದಿನ ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಲು ಬೇಕಾದ ನೈತಿಕ ಬಲ ಎಳ್ಳಷ್ಟೂ ಇಲ್ಲ. ಆದರೂ ಸಂವಿಧಾನ ಅವುಗಳ ಕಡೆಗಿದೆ! ಸಂವಿಧಾನದ ದೃಷ್ಟಿಯಿಂದ ಲೋಕಸಭಾ ಚುನಾವಣಾ ಫ‌ಲಿತಾಂಶ ಹಾಗೂ ರಾಜ್ಯ ಸರಕಾರದ ಆಡಳಿತದ ಮುಂದುವರಿಕೆ ಎರಡೂ ಭಿನ್ನ ಸಂಗತಿಗಳು. ಈಗ ಉಭಯ ಪಕ್ಷಗಳೂ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡುವ ನಿಟ್ಟಿನಲ್ಲಿ ನಿರ್ಧಾರವೊಂದನ್ನು ತೆಗೆದುಕೊಳ್ಳಬಹುದಾಗಿದೆ. ಆದರೂ ವಿಧಾನಸಭೆ ಇನ್ನೂ ಕೇವಲ ಒಂದು ವರ್ಷವನ್ನಷ್ಟೇ ಪೂರೈಸಿರುವುದರಿಂದ ಹಾಗೂ ಕಷ್ಟಪಟ್ಟು ಸಂಪಾದಿಸಿರುವ ವಿಧಾನಸಭಾ ಸದಸ್ಯತ್ವವನ್ನು ಇಷ್ಟು ಬೇಗ ತ್ಯಜಿಸಲು ಎಲ್ಲ ಶಾಸಕರಿಗೂ ಪ್ರಾಯಶಃ ಇಷ್ಟವಿಲ್ಲದಿರುವುದರಿಂದ ವಿಧಾನಸಭಾ ವಿಸರ್ಜನೆಯಂಥ ಸಾಹಸಕ್ಕೆ ಇಷ್ಟು ಬೇಗನೆ ಧುಮುಕಲು ಉಭಯ ಪಕ್ಷದವರಿಗೂ ಸಾಧ್ಯವಿಲ್ಲವೇನೋ ಎಂದಷ್ಟೇ ಈಗ ಹೇಳಬಹುದಾಗಿದೆ.

ಸಂಪುಟ ವಿಸ್ತರಣೆ ಪ್ರಕ್ರಿಯೆಯ ಬಗ್ಗೆ ಹೇಳುವುದಾದರೆ, ಈ ಸರ್ಕಸ್ಸಿನಲ್ಲಿ ಸಾರ್ವಜನಿಕ ಹಿತಾಸಕ್ತಿಯೆಂಬುದು ಇಲ್ಲವೇ ಇಲ್ಲ. ಯಾರೋ ‘ಎ’ ಅಥವಾ ‘ಬಿ’ಗೆ ಮಂತ್ರಿಗಿರಿ ಸಿಕ್ಕಿತೆನ್ನುವುದು ಕೇವಲ ಆ ಶಾಸಕರ ಪಕ್ಷಗಳಿಗೆ, ಅವರ ಮತದಾರ ಕ್ಷೇತ್ರಗಳಿಗೆ ಹಾಗೂ ಅವರ ಜಾತಿ-ಸಮುದಾಯಗಳಿಗೆ ಮಾತ್ರ ಆಸಕ್ತಿ ಹುಟ್ಟಿಸಬಹುದಷ್ಟೆ. ಕೊನೆಯೇ ಇಲ್ಲವೆನಿಸುವ ಕ್ಷುಲ್ಲಕ ಜಗಳಗಳನ್ನು ಬಿಟ್ಟರೆ, ಆಡಳಿತದ ‘ಪ್ರಗತಿ ವರದಿ’ಯನ್ನು ನೀಡುವಷ್ಟು ಸಾಧನೆ ಮೈತ್ರಿ ಸರಕಾರದ ಲೆಕ್ಕದ ಪುಸ್ತಕದಲ್ಲಿ ದಾಖಲಾಗದೆ ಇರುವುದರಿಂದ, ಈಗ ಇಬ್ಬರೋ ಮೂವರೋ ಹೊಸ ಸಚಿವರನ್ನು ಸೇರ್ಪಡೆಗೊಳಿಸಿಕೊಂಡಲ್ಲಿ ಸರಕಾರದ ಕಾರ್ಯನಿರ್ವಹಣೆ ಇನ್ನಷ್ಟು ಸುಧಾರಿಸುವ ಸಾಧ್ಯತೆ ಏನೇನೂ ಇಲ್ಲ. ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅಥವಾ ರೋಶನ್‌ ಬೇಗ್‌ರಂಥವರು ಸಂಪುಟ ಸೇರ್ಪಡೆಗೆ ತಮ್ಮ ಪ್ರಯತ್ನಗಳನ್ನು ನಡೆಸುತ್ತಿದ್ದಾರಾದರೂ, ಹೊಸ ಮುಖಗಳಿಗೆ ಅವಕಾಶ ನೀಡಲು ಇದು ಸಕಾಲ ಎಂದೇ ಹೇಳಬೇಕಾಗಿದೆ. ಜೆಡಿಎಸ್‌ಗೂ ಈ ಮಾತು ಅನ್ವಯವಾಗುತ್ತದೆ ಮಂತ್ರಿಗಿರಿ ಕುರಿತ ರಾಮಲಿಂಗಾರೆಡ್ಡಿಯವರ ಹಕ್ಕು ಸಾಧನೆಯನ್ನು ಬೇರೆಯೇ ದೃಷ್ಟಿಕೋನದಿಂದ ಪರಿಗಣಿಸಬೇಕಾಗಿದೆ ಎಂಬ ವಾದವೊಂದು ಕೇಳಿಬಂದಿರುವುದು ತುಂಬಾ ತಮಾಷೆಯ ಸಂಗತಿಯಾಗಿದೆ. ಅವರನ್ನು ಸಂಪುಟದಲ್ಲಿ ಸ್ಥಾಪಿಸಬೇಕಾಗಿರುವುದು ಹಿರಿಯ ‘ಎಂಎಲ್ಎಗಳ ಕೋಟಾದಲ್ಲೇ’ ಹೊರತು ಒಕ್ಕಲಿಗ ಅಥವಾ ‘ರೆಡ್ಡಿ ಕೋಟಾ’ದಲ್ಲಿ ಅಲ್ಲ…

ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ವಿಧಾನಸಭಾ ವಿಸರ್ಜನೆಯ ಪ್ರಶ್ನೆಯೇ ಇಲ್ಲ ಎಂದಿದ್ದಾರೆಂದು ವರದಿಗಳು ಹೇಳುತ್ತಿವೆ. ಹಾಗಿದ್ದ ಮೇಲೆ ಹೊಸ ಸರಕಾರ ರಚಿಸುವಂತೆ ಬಿಜೆಪಿಗೀಗ ಆಹ್ವಾನ ನೀಡಬೇಕಾಗುತ್ತದೆ. ಆದರೆ ಮೈತ್ರಿ ಸರಕಾರ ಬಿದ್ದರಷ್ಟೇ ಅಂಥದೊಂದು ಸಂದರ್ಭ ಉದ್ಭವಿಸುವುದಲ್ಲವೆ?

ಇನ್ನು, ಕಮಲ ಕಾರ್ಯಚರಣೆಗೆ ಸಂಬಂಧಿಸಿದಂತೆ ಬಿಜೆಪಿಯ ಒಳಗೆ ಅಸಮ್ಮತಿಯ ಕೂಗುಗಳು ಕೇಳಿಸುತ್ತಿವೆ. ಇದರ ಜತೆಗೆ ಇನ್ನೊಂದು ಅಭಿಪ್ರಾಯವೂ ಪ್ರಕಟವಾಗಿದೆ. ಅದೆಂದರೆ ರಾಷ್ಟಮಟ್ಟದಲ್ಲೀಗ ಪುನರಾಯ್ಕೆಗೊಂಡಿರುವ ಬಿಜೆಪಿ, ವಿರೋಧ ಪಕ್ಷಗಳ ಆಳ್ವಿಕೆಯಿರುವ ರಾಜ್ಯಗಳ ಸರಕಾರವನ್ನು ಉರುಳಿಸುವಷ್ಟು ತನ್ನನ್ನು ಕೀಳುಮಟ್ಟಕ್ಕೆ ಇಳಿಸಿಕೊಳ್ಳಬಾರದು ಎಂಬುದಾಗಿದೆ. ವಿಜಯದ ಸಂತೋಷದಲ್ಲಿರುವ ಬಿಜೆಪಿ, ಈಗ ವಿಶಾಲ ಮನಸ್ಸಿನಿಂದ ನಡೆದುಕೊಳ್ಳಬೇಕು.ಯಡಿಯೂರಪ್ಪನವರಿಗೆ ಏನಾಯಿತು ನೋಡಿ – ತಮ್ಮ ಪಕ್ಷ ಸದನದಲ್ಲಿ ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲದೆ ಅಧಿಕಾರ ಕಳೆದುಕೊಳ್ಳುವ ಮೂಲಕ ಅವರು ಎಲ್ಲರ ಪಾಲಿಗೆ ಲೇವಡಿಯ ವಸ್ತುವಾದರು. ಮುಖ್ಯಮಂತ್ರಿಯಾಗಿ ಅವರು ಕಂಡ ಮೂರನೆಯ ಅವಧಿ, ಎರಡೇ ದಿನಗಳ ಅಚ್ಚರಿಯಾಗಿ ಪರ್ಯವಸಾನ ಹೊಂದಿತು. ಅವರು 2018ರ ಮೇ 17ರಿಂದ ಎರಡೇ ಎರಡು ದಿನಗಳವರೆಗೆ ಮುಖ್ಯಮಂತ್ರಿಯ ಕುರ್ಚಿಯಲ್ಲಿದ್ದರು; ರಾಜ್ಯಪಾಲ ವಜೂಭಾಯ್‌ ವಾಲಾ ಕೂಡ ಯಡಿಯೂರಪ್ಪ ಅವರನ್ನು ಸರಕಾರ ರಚಿಸುವಂತೆ ಆಹ್ವಾನಿಸಿದ್ದು ಒಂದು ಪ್ರಮಾದದ ನಡೆಯೇ ಆಗಿತ್ತು. ಯಡಿಯೂರಪ್ಪನವರು 2007ರ ನವೆಂಬರ್‌ 12ರಿಂದ 19ರವರೆಗೆ, ಅರ್ಥಾತ್‌ ಎಂಟು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿ, ಅವರ ದ್ವಿತೀಯ ಕಿರು ಅವಧಿಯ ಮುಖ್ಯಮಂತ್ರಿಗಿರಿಯಾಗಿತ್ತು. ಕಳೆದ ವರ್ಷದಲ್ಲಿ ಅಸ್ತಿತ್ವಕ್ಕೆ ಒಂದು ಎರಡೇ ದಿನಗಳಲ್ಲಿ ಉರುಳಿದ ಅವರ ಸರಕಾರ, ನಮ್ಮ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯ ಸರಕಾರವಾಗಿತ್ತು.

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಶಾಸಕರ ನಡವಳಿಕೆ ಕುರಿತಂತೆ ಒಂದು ಶ್ಲಾಘನೀಯ ಅಂಶವೆಂದರೆ, ಈ ಶಾಸಕರುಗಳು ಇದುವರೆಗೂ ತಮ್ಮ ಏಕತಾಭಾವವನ್ನು ಹಾಗೂ ಪಕ್ಷನಿಷ್ಠೆಯನ್ನು ಗಟ್ಟಿಯಾಗಿ ಉಳಿಸಿಕೊಂಡಿರುವುದು. ರಮೇಶ್‌ ಜಾರಕಿಹೊಳಿಯಂಥವರಷ್ಟೇ (ತಮ್ಮ ಕಾಂಗ್ರೆಸ್‌ ಪಕ್ಷದ ಶಾಸಕರಿಂದ ರಾಜೀನಾಮೆ ಕೊಡಿಸುವ ವಿಚಾರದಲ್ಲಿ) ಸ್ವಲ್ಪ ಗದ್ದಲವೆಬ್ಬಿಸುತ್ತಿದ್ದಾರೆ. ಆದರೆ ಇದರ ಫ‌ಲಿತಾಂಶವನ್ನು ಪಡೆಯುವಲ್ಲಿ ಹಾಗೂ ಅದನ್ನು ಲೋಕದ ಮುಂದೆ ಪ್ರದರ್ಶಿಸುವಲ್ಲಿ ಅವರು ವಿಫ‌ಲರಾಗಿದ್ದಾರೆ. ಜಾರಕಿಹೊಳಿ ಅವರು ತಮ್ಮ ಪಕ್ಷದ ಸಹೋದ್ಯೋಗಿಗಳ ಮೇಲೆ ಪ್ರಭಾವ ಬೀರುವಷ್ಟು ಮಜಬೂತಾದ ನಿಲುವನ್ನು ಹೊಂದಿಲ್ಲದಿರುವುದೇ ಬಹುಶಃ ಇದಕ್ಕೆ ಕಾರಣ. ಉಭಯ ಪಕ್ಷಗಳ ಕೆಲ ಶಾಸಕರನ್ನು ಬಿಜೆಪಿ ಅಪಹರಿಸುವುದನ್ನು ತಡೆಯಲೆಂದು ಅವರನ್ನು ರೆಸಾರ್ಟ್‌ಗಳಲ್ಲಿ ಕೂಡಿ ಹಾಕಲಾಗಿತ್ತೇನೋ ನಿಜ. ಆದರೆ ಅವರನ್ನು ಹಾಗೆ ಪ್ರತ್ಯೇಕವಾಗಿ ಒಂದೆಡೆ ದೀರ್ಘ‌ಕಾಲ ಕೂಡಿ ಹಾಕುವುದು ಸಾಧ್ಯವಿಲ್ಲದ ಮಾತು.

ಬಿಜೆಪಿ ಈಗ ‘ಅಪರೇಶನ್‌ ಕಮಲ’ದ ಗೋಜಿಗೆ ಹೋಗದೆ, ಸಹಜವಾಗಿ ಅಧಿಕಾರಕ್ಕೆ ಹಿಡಿಯಬೇಕೆಂದರೆ ಅದಕ್ಕೆ ಒಂದೇ ಒಂದು ಮಾರ್ಗವಿದೆ. ಅದೆಂದರೆ, ಕಾಂಗ್ರೆಸ್‌ ಅಥವಾ ಜೆಡಿಎಸ್‌ನ ‘ಬಹುಸಂಖ್ಯೆಯ ಸದಸ್ಯರನ್ನೊಳಗೊಂಡ ಬಣ’ಗಳು ಬಿಜೆಪಿಯಲ್ಲಿ ವಿಲೀನವಾಗಲೆಂದು ಬಯಸುವುದು ಹಾಗೂ ಹಾಗೊಂದು ಸಾಧ್ಯತೆಯ ಬಗ್ಗೆ ನಂಬಿಕೆಯಿರಿಕೊಳ್ಳುವುದು. ಕರ್ನಾಟಕದ ಬಿಜೆಪಿಯ ಒಂದು ದುರದೃಷ್ಟವೆಂದರೆ, (ಅಥವಾ ದೇಶದ ಮಟ್ಟಿಗೆ ಆರೋಗ್ಯಕರವಾದ ಒಂದು ವಿದ್ಯಮಾನವೆಂದರೆ) ನಮ್ಮ ಸಂವಿಧಾನದ 91ನೆಯ ತಿದ್ದುಪಡಿ (2003)ಶಾಸಕಾಂಗ ಪಕ್ಷಗಳಿಂದ ಸಿಡಿದು ಬರುವ ಬಣಗಳಿಗೆ ಮಾನ್ಯತೆ ನೀಡುವುದಿಲ್ಲ ಎಂಬುದೇ ಆಗಿದೆ. ಶಾಸಕಾಂಗ ಪಕ್ಷದ ಮೂರನೆಯ ಎರಡರಷ್ಟು ಸದಸ್ಯರ ಗುಂಪು ಹೊರಬಂದು ಇನ್ನೊಂದು ಪಕ್ಷದೊಂದಿಗೆ ವಿಲೀನಗೊಂಡರೆ ಮಾತ್ರ, ಇಂಥ ವಿಲಯನಕ್ಕೆ ಮಾನ್ಯತೆ ಸಿಗುತ್ತದೆ. ಈ ಹಿಂದೆ ಮಾಡಲಾಗಿರುವ ಸಂವಿಧಾನದ 52ನೆಯ ತಿದ್ದುಪಡಿಯಲ್ಲಿನ ನಿಯಮದಡಿಯಲ್ಲಿ ಶಾಸಕಾಂಗ ಪಕ್ಷದ ಅಥವಾ ಸಂಸದೀಯ ಪಕ್ಷದ ಸದಸ್ಯರುಗಳ ಪೈಕಿ ಮೂರನೆಯ ಒಂದರಷ್ಟು ಸದಸ್ಯರು ತಮ್ಮ ಪಕ್ಷದಿಂದ ಹೊರಬಿದ್ದು ಇನ್ನೊಂದು ಪಕ್ಷದೊಂದಿಗೆ ಸೇರ್ಪಡೆಗೊಂಡರೆ ಅಂಥ ಬಣಕ್ಕೆ ಮಾನ್ಯತೆ ದೊರೆಯುತ್ತಿತ್ತು. ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದ ದಿನಗಳಲ್ಲಿ ಈ ಪದ್ಧತಿಯನ್ನು ಕೈಬಿಡಲಾಯಿತು.

ಏನಿದ್ದರೂ ಈ ವಿಷಯದಲ್ಲಿ ಬಿಜೆಪಿ ನೆರೆಯ ತೆಲಂಗಾಣದಲ್ಲಿ ಘಟಿಸಿರುವ ವಿದ್ಯಮಾನದಿಂದ ಪಾಠ ಕಲಿಯಬಹುದಾಗಿದೆ. ತೆಲಂಗಾಣ ಕಾಂಗ್ರೆಸ್‌ನ 19 ಸದಸ್ಯರ ಪೈಕಿ 12 ಮಂದಿ ಪಕ್ಷದಿಂದ ಹೊರಬಿದ್ದು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌ಗೆ) ಸೇರ್ಪಡೆಗೊಂಡಿದ್ದಾರೆ. ಈ 12 ಮಂದಿಯಲ್ಲಿ ರಾಜ್ಯದ ಮಾಜಿ ಗೃಹ ಸಚಿವೆ ಸಬಿತಾ ಇಂದ್ರ ರೆಡ್ಡಿಯವರೂ ಇದ್ದಾರೆ. ಕಳೆದ ವರ್ಷ ನಡೆದಿರುವ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿರುವ ಕಾಂಗ್ರೆಸ್‌ ಈಗ ಇನ್ನೊಂದು ಪ್ರಬಲ ಪ್ರಹಾರವನ್ನು ಅನುಭವಿಸುವುದರೊಂದಿಗೆ ಅಕ್ಷರಶಃ ವಿನಾಶದ ಹಾದಿಗೆ ಬಂದು ಬಿದ್ದಿದೆ. ಆಡಳಿತಾರೂಢ ಟಿಆರ್‌ಎಸ್‌ನ ಪಾಲಿಗೆ ಇಂಥದೊಂದು ಬೆಳವಣಿಗೆ ಭಾರೀ ಇರಿಸುಮುರಿಸನ್ನೇ ಉಂಟು ಮಾಡಿದೆ – ನಿಜಕ್ಕೂ ಇದು ಭರ್ಜರಿ ಬಹುಮತದ ಭಾಗ್ಯವೇ ಸರಿ!

ಆದರೆ ಕರ್ನಾಟಕದ ಬಿಜೆಪಿಯ ಪಾಲಿಗೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ನಿಂದ ಇಂಥದೊಂದು ಬೃಹತ್‌ ಬಣ ಕಾಲ್ತೆಗೆದು ತನ್ನೊಂದಿಗೆ ವಿಲೀನಗೊಳ್ಳುವ ಸಾಧ್ಯತೆ ನಿಜಕ್ಕೂ ಕೈಗೆಟುಕದ ವಿಚಾರವೆಂದೇ ಹೇಳಬೇಕಾಗಿದೆ. ಬಿಜೆಪಿಯ ಜೊತೆ ಕಾಂಗ್ರೆಸ್‌ನ ಬಣ ವಿಲೀನಗೊಳ್ಳಬೇಕಾದರೆ, ಅಥವಾ ಸದನದಲ್ಲಿ ಪ್ರತ್ಯೇಕ ಗುಂಪು ಎನ್ನಿಸಿಕೊಳ್ಳಬೇಕಾದರೆ ಕಾಂಗ್ರೆಸ್‌ನ 79 ಸದಸ್ಯರ ಪೈಕಿ 53 ಮಂದಿ ಹೊರಬೀಳಬೇಕು. ಇನ್ನು, ಜೆಡಿಎಸ್‌ನಿಂದ, ಈಗಿರುವ 37 ಸದಸ್ಯರ ಪೈಕಿ 25 ಮಂದಿ ಕಾಲ್ತೆಗೆಯಬೇಕು.

ಕೆಲ ರಾಜಕೀಯ ವಿಶ್ಲೇಷಕರು ಕರ್ನಾಟಕದ ಈಗಿನ ರಾಜಕೀಯ ಸನ್ನಿವೇಶವನ್ನು 1984ರ ಲೋಕಸಭಾ ಚುನಾವಣೆಯ ಬಳಿಕದ ರಾಜಕೀಯ ಸಂದರ್ಭದೊಂದಿಗೆ ಸಮೀಕರಿಸುತ್ತಿದ್ದಾರಾದರೂ, ಅಂದಿನ ಪರಿಸ್ಥಿತಿ ಇಂದಿಗಿಂತ ತೀರಾ ಭಿನ್ನವಾಗಿತ್ತು. ಅಂದು ಕಾಂಗ್ರೆಸ್‌ 28 ಲೋಕಸಭಾ ಸ್ಥಾನಗಳ ಪೈಕಿ 24ನ್ನು ಬಾಚಿಕೊಂಡಿತ್ತು; ಈ ಹಿನ್ನೆಲೆಯಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ವಿಧಾನಸಭೆಯನ್ನು ವಿಸರ್ಜಿಸುವಂತೆ ಶಿಫಾರಸು ಮಾಡಿದರು. ಆ ಚುನಾವಣೆಯಲ್ಲಿ ಜನತಾಪಾರ್ಟಿ ಕೇವಲ ನಾಲ್ಕು ಸ್ಥಾನಗಳಲ್ಲಷ್ಟೆ ಗೆಲುವು ಸಾಧಿಸಿತ್ತು. ಆ ಹೊತ್ತಿಗೆ ಹೆಗಡೆ 28 ತಿಂಗಳ ಆಡಳಿತವನ್ನು ಪೂರೈಸಿದ್ದರು. (ಒಂದು ವರ್ಷವನ್ನಷ್ಟೇ ಪೂರೈಸಿದ ಕುಮಾರಸ್ವಾಮಿಯವರಂತಲ್ಲ). ಗಮನಿಸಬೇಕಾದ ಇನ್ನೊಂದು ಅಂಶವೆಂದರೆ 1984ರ ಲೋಕಸಭಾ ಚುನಾವಣೆಯ ಫ‌ಲಶ್ರುತಿಯೆಂದರೆ, ಅದು ಕಾಂಗ್ರೆಸ್‌ನ ಭರ್ಜರಿ ವಿಜಯ. 1977ರಲ್ಲೂ ಕಾಂಗ್ರೆಸ್‌ 28ರ ಪೈಕಿ 26 ಸ್ಥಾನಗಳನ್ನು ಗೆಲ್ಲುವ ಮೂಲಕ ಮಹಾವಿಜಯವನ್ನು ದಾಖಲಿಸಿತ್ತು. ಪಕ್ಷಾಂತರ ಕಾಯ್ದೆಯೆಂಬುದು ಇಲ್ಲದಿದ್ದ ಆ ಕಾಲದಲ್ಲಿ ಹೆಗಡೆ ಸರಕಾರದ ಬುಡ ಅಕ್ಷರಶಃ ಅಲುಗಾಡುತ್ತಿತ್ತು; ಶಾಸಕರಲ್ಲಿ ಕೆಲವರು ಪಕ್ಷ ನಿಷ್ಠೆಯನ್ನು ಬದಲಿಸುತ್ತಿದ್ದ ಸಮಯ ಅದು. ಇಂಥ ಹಾರುಗುದುರೆ ಶಾಸಕರಲ್ಲಿ ಪಾವಗಡದ ಶಾಸಕ ಉಗ್ರನರಸಿಂಹಪ್ಪ ಅವರೂ ಒಬ್ಬರು.

ಇಂದು ಪಕ್ಷಾಂತರ ಕಾಯ್ದೆ ಅತ್ಯಂತ ಬಿಗಿಯಾಗಿದೆ, ಗಟ್ಟಿ ಮುಟ್ಟಾಗಿದೆ. ಆದ್ದರಿಂದಲೇ ನಮ್ಮ ಇಂದಿನ ದಿನಗಳ ಮುಖ್ಯಮಂತ್ರಿಗಳು ಹಿಂದಿನವರಿಗಿಂತ ಹೆಚ್ಚು ಸುಶಿಕ್ಷಿತರು! ಇಂದಿನವರು ಆರಾಮವಾಗಿ ನಮ್ಮ ಕುಮಾರಸ್ವಾಮಿಯವರಂತೆ ರಾಜಧಾನಿಯಿಂದ ಹೊರಬಿದ್ದು ತಿರುಗಾಟ ನಡೆಸಿ ಹಿಂದಿರುಗಬಹುದಾಗಿದೆ. ಅವರಂತೆ ಗ್ರಾಮವಾಸದಂಥ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯರೂಪಕ್ಕಿಳಿಸಲೂ ಸಾಧ್ಯವಾಗಿದೆ.

ಇದೆಲ್ಲದರ ಹಿನ್ನೆಲೆಯಲ್ಲಿ ಒಂದು ಮಾತನ್ನಂತೂ ತಳ್ಳಿ ಹಾಕಲಾಗದು. ಅದೆಂದರೆ, ಮುಖ್ಯಮಂತ್ರಿಗಿರಿಯ ಆಕಾಂಕ್ಷೆಯನ್ನು ಬಿ.ಎಸ್‌. ಯಡಿಯೂರಪ್ಪನವರು ಸದ್ಯದ ಮಟ್ಟಿಗೆ ಬಿಟ್ಟುಕೊಡುವುದೇ ಚೆನ್ನ. ಮೈತ್ರಿ ಸರಕಾರ ಅದಾಗಿಯೇ ಉರುಳುವ ತನಕ ಕಾದು ನೋಡುವುದೇ ಒಳಿತು. ಉಭಯ ಪಕ್ಷಗಳ ಕನಿಷ್ಠ ಎಂಟು ಮಂದಿಯಾದರೂ ರಾಜೀನಾಮೆ ನೀಡುವವರೆಗೆ, ಅಥವಾ ಎರಡು ಪಕ್ಷಗಳ ಪೈಕಿ ಒಂದರ ಮೂರನೆಯ ಎರಡರಷ್ಟು ಸಂಖ್ಯೆಯ ಸದಸ್ಯರು ಬಿಜೆಪಿಗೆ ಸೇರುವವರೆಗೆ, ಅಥವಾ ತಾವೇ ಪ್ರತ್ಯೇಕ ಗುಂಪೊಂದನ್ನು ರೂಪಿಸಿಕೊಳ್ಳುವವರೆಗೆ ಕಾಯುವುದೇ ಉತ್ತಮವೆಂದು ತೋರುತ್ತದೆ. ಇನ್ನೊಂದು ಪರ್ಯಾಯ ಆಯ್ಕೆಯೆಂದರೆ, ಜೆಡಿಎಸ್‌ ತನ್ನ ಸದ್ಯದ ಮೈತ್ರಿಯನ್ನು ಮುರಿದುಕೊಂಡು ಬಿಜೆಪಿಯತ್ತ ನಡೆದು ಅದು ರೂಪಿಸುವ ಸರಕಾರಕ್ಕೆ ಬೆಂಬಲ ನೀಡುವುದು. ಆದರೆ ತಮ್ಮ ಜಾತಿವಾದಿ ಧೋರಣೆಯ ಹೊರತಾಗಿ ಜಾತ್ಯತೀತ ನಿಲುವನ್ನು ಘಂಟಾಘೋಷವಾಗಿ ಮೊಳಗಿಸುತ್ತಿರುವ ಜೆಡಿಎಸ್‌ ನಾಯಕರು ಇಂಥದೊಂದು ಆಯ್ಕೆಗೆ ಸಿದ್ಧರಿದ್ದಾರೆಯೆ?

ಟಾಪ್ ನ್ಯೂಸ್

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.