ಅವಸಾನದ ಹಾದಿಯಲ್ಲಿ ಬಿಎಸ್ಎನ್ಎಲ್ ಸ್ಥಿರ ದೂರವಾಣಿ
Team Udayavani, Jun 8, 2018, 11:51 AM IST
ನಿಮ್ಮ ತಾಲೂಕು ಕೇಂದ್ರದ ಬಿಎಸ್ಎನ್ಎಲ್ ಸ್ಥಿರ ದೂರವಾಣಿಯ ಕಚೇರಿಗೆ ಒಂದು ಸಲ ಹೋಗಿ ನೋಡಿ. ಇಲ್ಲಿ ವೈವಿಧ್ಯಮಯ ದೂರವಾಣಿಗಳ ವಸ್ತು ಸಂಗ್ರಹಾಲಯ ಸ್ಥಾಪಿಸುತ್ತಿದ್ದಾರೆಯೇ ಎಂಬ ಗುಮಾನಿ ಬಂದರೆ ಅಚ್ಚರಿಯೇನಿಲ್ಲ. ರಾಶಿ ರಾಶಿ ದೂರವಾಣಿಗಳು, ನಿಸ್ತಂತು ದೂರವಾಣಿಗೆ ಬೇಕಾಗುವ ಕೆಟ್ಟುಹೋದ ಬ್ಯಾಟರಿಗಳು, ಸಂಪರ್ಕಕ್ಕೆ ಶಕ್ತಿ ಹೆಚ್ಚಿಸುವ ಆ್ಯಂಟೆನಾಗಳು ರಾಶಿ ಬಿದ್ದಿವೆ. ಈ ರಾಶಿಯ ಮುಂದೆ ನಿರ್ಲಿಪ್ತ ಭಾವದಿಂದ ಕುಳಿತಿರುವ ಅಧಿಕಾರಿಯ ಮುಂದೆ ವಿನೀತರಾಗಿ ನಿಂತು, “ಸರ್, ನನ್ನ ದೂರವಾಣಿ ಕೆಟ್ಟುಹೋಗಿದೆ. ನಾನಿರುವುದು ಹಳ್ಳಿಯಲ್ಲಿ. ಇದನ್ನೊಂದು ದುರಸ್ತಿ ಮಾಡಿಸಿಕೊಡಿ’ ಎಂದು ಪ್ರಾರ್ಥಿಸಿ. ಆಗ ಅಧಿಕಾರಿ ಯಾವ ಮುಲಾಜೂ ಇಡದೆ, “ನಿಮಗೆ
ಹೇಳಿದ ತಕ್ಷಣ ದುರಸ್ತಿ ಮಾಡಿಸಿಕೊಡಲು ನಮ್ಮಲ್ಲಿ ಸಿಬ್ಬಂದಿ ಇಲ್ಲ. ನೀವು ಸರತಿ ಪ್ರಕಾರ ಕಾಯುವುದಾದರೆ ಇನ್ನೊಂದು ಎಂಟು ದಿವಸದಲ್ಲಿ ದುರಸ್ತಿಯಾಗಬಹುದು. ಇಲ್ಲ, ನಿಮಗೆ ಅವಸರ ಇದೆ ಅಂತಾದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು’ ಎಂದು ಅತ್ಯಂತ ನಿಷ್ಠುರವಾಗಿ ಹೇಳುತ್ತಾರೆ. ಪರ್ಯಾಯ ಅಂದರೆ ಹಾಳಾದ ದೂರವಾಣಿಯನ್ನು ತಂದುಕೊಟ್ಟು ಕೊನೆಯ ಸಲಾಮು ಹೇಳಿ ಬೇರೆ ದೂರವಾಣಿ ಕಂಪೆನಿಯ ಕಡೆಗೆ ಮುಖ ಮಾಡುವುದು.
ಇಂಥ ನಿಷ್ಠುರದ, ಬೇಜವಾಬ್ದಾರಿಯ ಅಧಿಕಾರಿಗಳಿಂದಾಗಿಯೇ ಇಂದು ಒಂದು ಕಾಲದಲ್ಲಿ ಎಲ್ಲರೂ ಅರ್ಜಿ ಸಲ್ಲಿಸಿ, ಮುಂಗಡ ಠೇವಣಿ ನೀಡಿ ತುದಿಗಾಲಿನಲ್ಲಿ ಕಾಯುತ್ತಿದ್ದ ಸ್ಥಿರ ದೂರವಾಣಿ ಎಂಬ ಅಭಿಮಾನದ ವಸ್ತು ಶಾಶ್ವತ ಅವಸಾನದ ಅಂಚು ತಲುಪಿದೆ. ಅಧಿಕಾರಿಗಳ ನಿರ್ಲಕ್ಷ್ಯದ ಪ್ರತೀಕವಾಗಿ ಕಚೇರಿ ಮ್ಯೂಸಿಯಮ್ ಆಗಿ ಪರಿವರ್ತನೆಯಾಗುತ್ತಿದೆ.
160 ವರ್ಷಗಳಿಂದ ದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ಟೆಲಿಗ್ರಾಫ್ ಸೌಲಭ್ಯವನ್ನು 2013ರ ಜುಲೈ 15ರಂದು ಸ್ಥಗಿತಗೊಳಿಸಿದ ಭಾರತ ಸಂಚಾರ ನಿಗಮ ತನ್ನ ಅಲಕ್ಷ್ಯ ಮತ್ತು ನಿರಾಸಕ್ತಿಯ ಒಂದೇ ಕಾರಣಕ್ಕೆ ಸ್ಥಿರ ದೂರವಾಣಿಗಳ ಸೇವೆಯನ್ನು ಕ್ರಮಶಃ ನಿಲುಗಡೆಯ ಹಾದಿಯಲ್ಲಿ ಕೊಂಡೊಯ್ಯುತ್ತಿರುವುದು ಸ್ಪಷ್ಟವಾಗಿದೆ. ಸುಮಾರು ಎರಡು ಲಕ್ಷ ಮಂದಿಗೆ ನೌಕರಿ ನೀಡಿದ ಸಂಸ್ಥೆಯ ಆದಾಯ ಗಳಿಕೆಯಲ್ಲಿ ಪ್ರಗತಿಯಾಗಬೇಕೆಂಬ ಆಸ್ಥೆಯಿಂದ ಅದು ದೂರ ಸರಿಯುತ್ತಿದೆ. ರಾಮ ವಿಲಾಸ್ ಪಾಸ್ವಾನ್ ಸಂಪರ್ಕ ಸಚಿವರಾಗಿದ್ದ ಎರಡು ದಶಕಗಳ ಹಿಂದಿನ ಕಾಲದಲ್ಲಿ ಹಳ್ಳಿಗಳಿಗೆ ದೂರವಾಣಿ ಸೌಲಭ್ಯ ನೀಡುವಲ್ಲಿ ಆದ್ಯತೆ ನೀಡಿದರು. ಕಂಬ ಹಾಕಿ ತಂತಿ ಎಳೆಯುವುದು ಕಷ್ಟ ಎನಿಸಿದ ಹಳ್ಳಿಯ ಸ್ಥಳಗಳಿಗೆ ಸಂಪರ್ಕ ಸಿಗಲು ದೊಡ್ಡ ಗೋಪುರಗಳನ್ನು ಕಟ್ಟಿಸಲು ಅನಂತರ ಸಂಸ್ಥೆ ವ್ಯವಸ್ಥೆ ಮಾಡಿತು. ಸಂಸದರ ಕೋಟಾ ಮೂಲಕ ಪ್ರತಿಯೊಂದು ಹಳ್ಳಿಗೂ ದೂರವಾಣಿ ಸಿಗುವಂತಾಯಿತು.
ಈಗಲೂ ಸ್ಥಿರ ದೂರವಾಣಿಯನ್ನು ಪ್ರೀತಿಸುವ ಸಾಕಷ್ಟು ಮಂದಿ ನಮ್ಮಲ್ಲಿದ್ದಾರೆ. ಸಂಚಾರಿ ದೂರವಾಣಿ ಮೂಲಕ ಹಣ ರವಾನೆ ಮಾಡಿ ಎಂದು ಹೇಳುವ ಮಾತು ಕೇಳುವುದಕ್ಕಷ್ಟೇ ಸೀಮಿತ. ಯಾಕೆಂದರೆ ಬಹುತೇಕ ಮೊಬೈಲ್ ಸಂಸ್ಥೆಗಳು ಪಟ್ಟಣಗಳನ್ನೇ ಕೇಂದ್ರೀಕರಿಸಿ ಗೋಪುರಗಳನ್ನು ಕಟ್ಟಿಸುತ್ತವೆ. ಹಳ್ಳಿಗಳಲ್ಲಿ ಇಂದಿಗೂ 3ಜಿ ಅಂತರ್ಜಾಲದ ಸೌಲಭ್ಯ ತಲುಪಿಲ್ಲ. ಇಂಥ ಕಡೆಗಳಲ್ಲಿ ಬಿಎಸ್ ಎನ್ಎಲ್ ನಿಸ್ತಂತು ದೂರವಾಣಿಗೆ 2ಜಿ ಅಂತರ್ಜಾಲ ಸಂಪರ್ಕ ಸಿಗುವಂತೆ ಮಾಡಿತ್ತು. ಎಷ್ಟೇ ಬಳಸಿದರೂ ತಿಂಗಳಿಗೆ ಅಂತರ್ಜಾಲದ ಬಾಡಿಗೆ 250 ರೂ. ಮತ್ತು ದೂರವಾಣಿಯ ಬಾಡಿಗೆ ದರ 30 ರೂಪಾಯಿ ಸಲ್ಲಿಸಿದರೆ ಸಾಕಾಗುತ್ತಿತ್ತು. ಆದರೆ ಇದ್ದಕ್ಕಿದ್ದಂತೆಯೇ ಸಂಸ್ಥೆ ದೂರವಾಣಿಗಳಿಗೆ ಬಾಡಿಗೆ ದರವನ್ನು ತಿಂಗಳಿಗೆ 160 ರೂಪಾಯಿಗಳಿಗೇರಿಸಿದೆ. ಇದಕ್ಕೆ ಶೇ. 18ರಷ್ಟು ಜಿಎಸ್ಟಿ ದರ ಕೊಡಬೇಕು. ಇಷ್ಟೇ ಹಣದಲ್ಲಿ ಸಂಚಾರಿ ದೂರವಾಣಿಯಲ್ಲಿ ಎರಡು ತಿಂಗಳು ಮಾತನಾಡಬಹುದು.
ಕೆಲವು ಕಾಲ ಸ್ಥಿರ ದೂರವಾಣಿಯಲ್ಲಿ ರಾತ್ರಿ ಒಂಭತ್ತರಿಂದ ಬೆಳಗಿನ ಏಳರ ತನಕ ಯಾವುದೇ ದೂರವಾಣಿಗೆ ಮಿತಿಯಿಲ್ಲದಷ್ಟು ಹೊತ್ತು ಉಚಿತವಾಗಿ ಕರೆ ಮಾಡಿ ಮಾತನಾಡಲು ಅವಕಾಶವಿತ್ತು. ಈಗ ಈ ಉಚಿತ ಸೌಲಭ್ಯದ ಅವಕಾಶ ರಾತ್ರಿ ಹತ್ತೂವರೆಯಿಂದ ಬೆಳಗಿನ ಆರರ ತನಕ ಮಾತ್ರ ಎಂದು ಬದಲಾಯಿಸಿರುವುದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
2015 ಜನವರಿಯಲ್ಲಿ ದೇಶದಲ್ಲಿ 1. 64 ಕೋಟಿ ಸ್ಥಿರ ದೂರವಾಣಿಗಳನ್ನು ಬಳಸಲಾಗುತ್ತಿತ್ತು. ಈ ವರ್ಷ ಮಾರ್ಚ್ ತಿಂಗಳಲ್ಲಿ ಅದು 1. 23 ಕೋಟಿಗಳಿಗೆ ಇಳಿದಿದೆ ಎನ್ನುತ್ತಿವೆ ಲೆಕ್ಕಾಚಾರಗಳು. ಅಂದರೆ ಶೇ. 25ರಷ್ಟು ಕುಸಿದಿರುವುದು ಮೂರು ವರ್ಷಗಳಲ್ಲಿ. ಹಾಗಿದ್ದರೆ ಈ ಸೌಲಭ್ಯ ಶಾಶ್ವತವಾಗಿ ಕೊನೆಯುಸಿರೆಳೆಯಲು ಹೆಚ್ಚು ಕಾಲ ಬೇಕಾಗಿಲ್ಲ. ಬೇರೆ ಬೇರೆ ಕಂಪೆನಿಗಳು ದೂರವಾಣಿ ಸೌಲಭ್ಯ ನೀಡುತ್ತ ಮಾರುಕಟ್ಟೆಯನ್ನು ಆವರಿಸುವಾಗಲೂ ಶೇ. 60ರ ಗಡಿಯಲ್ಲಿದ್ದ ಭಾರತ ಸಂಚಾರ ನಿಗಮ ಹೀಗೆ ತನ್ನ ಅನಾಸ್ಥೆಯಿಂದಲೇ ಶೀಘ್ರವೇ ದಂತಕತೆಯಾಗಬಹುದೆ? ಬ್ರಾಡ್ಬ್ಯಾಂಡ್ ಸೌಲಭ್ಯಕ್ಕಾಗಿ ನೆಲದಾಳದಲ್ಲಿ ಹಾಕಿದ ಕೇಬಲ್, ಒಎಫ್ಸಿ, ತಂತಿಗಳು, ಕಂಬಗಳು ಎಲ್ಲದರ ಮೂಲಕ ಇತಿಹಾಸ ಸೃಷ್ಟಿಸಿದ್ದ ಸಂಸ್ಥೆ ಇದಕ್ಕೆಲ್ಲ ಖರ್ಚಾದ ಹಣವನ್ನು ಲೆಕ್ಕ ಹಾಕಿದಂತೆ ಕಾಣಿಸುವುದಿಲ್ಲ.
ಇಂದಿಗೂ ಈ ಸಂಸ್ಥೆಯ ಬ್ರಾಡ್ಬ್ಯಾಂಡ್ ಸೌಲಭ್ಯಕ್ಕಾಗಿ ಕಾದು ನಿಂತ ಗ್ರಾಮೀಣ ಜನಗಳಿದ್ದಾರೆ. ಇತರ ಕಂಪೆನಿಗಳಿಗಿಂತ ಅದು ಹೆಚ್ಚು ವೇಗ ಹೊಂದಿದೆ ಮತ್ತು ದರ ಕಡಿಮೆ ಎಂಬ ಭಾವನೆಯೂ ಇದೆ. ಆದರೆ ಅಧಿಕಾರಿಗಳಿಗೆ ಸಂಸ್ಥೆ ಉಳಿಯಬೇಕೆಂಬ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದನ್ನು ಜನಪ್ರಿಯಗೊಳಿಸುವ ಬದಲು ಕೊನೆಗೊಳಿಸುವ ಕಡೆಗೇ ಹೆಚ್ಚು ಒಲವು ತೋರುವಂತೆ ಕಾಣುತ್ತದೆ. ಗ್ರಾಹಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ಅಧಿಕಾರಿಗಳ ಆಯ್ಕೆಯಿಲ್ಲ. ನಮಗೆ ಸಂಬಳ ಬರುತ್ತದೆ, ಜನಸೇವೆಯ ಕಳಕಳಿ ನಮಗೆ ಅಗತ್ಯವಿಲ್ಲ ಎನ್ನುವಂತಹ ನೌಕರರ ಹೆಚ್ಚಳ ಇದು ಸಂಸ್ಥೆಯ ಕಚೇರಿಯನ್ನು ಮ್ಯೂಸಿಯಂ ಆಗಿ ಬದಲಾಯಿಸುವಂತಾಗಿದೆ.
ಪಂಜಾಬ್ ರಾಜ್ಯದಲ್ಲಿ ಬಿಎಸ್ಎನ್ಎಲ್ ಸ್ಥಿರ ದೂರವಾಣಿಗೆ ಕೊನೆಯ ನಮಸ್ಕಾರ ಹೇಳಿದವರ ಸಂಖ್ಯೆ ದೊಡ್ಡದಿದೆ. ದೇಶದ ದೂರವಾಣಿ ಸಂಸ್ಥೆಗಳಲ್ಲಿ ಐದನೆಯ ಸ್ಥಾನದಲ್ಲಿದ್ದ ಈ ಸಂಸ್ಥೆ ಐದು ಟೆಲಿಕಾಮ್ ಕಾರ್ಖಾನೆಗಳನ್ನು ಹೊಂದಿದೆ. ನೌಕರರಿಗಾಗಿ ಮೂರು ತರಬೇತಿ ಸಂಸ್ಥೆಗಳಿವೆ. ವಿಶೇಷ ದೂರವಾಣಿ ಸಂಪರ್ಕ ಘಟಕಗಳು ಸಾಕಷ್ಟಿವೆ. ನಗರಗಳಲ್ಲಿ 20. 82 ದಶಲಕ್ಷ, ಗ್ರಾಮಗಳಲ್ಲಿ 3. 51 ಮಿಲಿಯನ್ ಸ್ಥಿರ ದೂರವಾಣಿ ಚಂದಾದಾರರನ್ನು ಹೊಂದಿದ್ದ ಅದು ಈಗ ಕ್ರಮಾಗತ ಇಳಿಕೆಯ ಹಾದಿ ಸೇರಿಕೊಂಡಿದೆ. ಜಿಯೋ ಸಂಸ್ಥೆ ಶೇ.50ರ ಗಡಿ ದಾಟುವಾಗ ಸರಕಾರಿ ಸ್ವಾಮ್ಯದ ಒಂದು ಸಂಸ್ಥೆ ಶೇ.6ಕ್ಕಿಂತ ಕೆಳಗಿಳಿಯತೊಡಗಿದೆ ಎಂಬ ವರದಿಯನ್ನು ನೋಡಿದರೆ ಏನಿದರ ಅರ್ಥ? ಖಾಸಗಿ
ಬೆಳವಣಿಗೆಗೆ ಸರಕಾರಿ ಸಂಸ್ಥೆಯ ಉದ್ಯೋಗಿಗಳು ಮಣೆ ಹಾಕುತ್ತಿದ್ದಾರೆಯೇ ಅಲ್ಲ ಸರಕಾರ ನೀಡುವ ಸೌಕರ್ಯಗಳ ಕೊರತೆ ಕಾರಣವೇ ಎಂಬ ಪ್ರಶ್ನೆ ಮೂಡುತ್ತದೆ. ಇಲ್ಲಿ ಇದೊಂದು ಸೇವೆ ಎಂಬ ಭಾವನೆಯಿರುವ ಅಧಿಕಾರಿಗಳ ಕೊರತೆಯಿದೆ.
ದೂರುಗಳಿಗೆ ತಕ್ಷಣ ಸ್ಪಂದಿಸುವ ಮನೋಧರ್ಮ ಮಾಯವಾಗಿದೆ. ಮಿತಿಮೀರಿದ ಬಾಡಿಗೆಯನ್ನು ಇಳಿಸಲು ಸಂಸ್ಥೆ ಸಿದ್ಧವಾಗಿಲ್ಲ. ಆರೇಳು ಮಂದಿ ಕೂಡಿ ಕೇಳಿದರೆ ಸ್ಥಿರ ದೂರವಾಣಿಗೆ ಬ್ರಾಡ್ ಬ್ಯಾಂಡ್ ಸೌಲಭ್ಯ ನೀಡಬೇಕೆಂಬ ಕಾಯಿದೆಯನ್ನು ಪರಿಗಣಿಸುವುದಿಲ್ಲ. ಭಾರತ ಪ್ರಗತಿ ಹೊಂದಿದೆ ನಿಜ. ಆದರೆ ಸಂಪರ್ಕಕ್ಕೆ ಭಾರತ ಸಂಚಾರಿ ನಿಗಮದ ದೂರವಾಣಿ ಬಿಟ್ಟರೆ ಬೇರೆ ಇಲ್ಲವೆಂಬ ದುಃಸ್ಥಿತಿ ಎದುರಿಸುತ್ತಿರುವ ಹಳ್ಳಿಗಳು ಹಾಗೆಯೇ ಇವೆ.
*ಪ.ರಾಮಕೃಷ್ಣಶಾಸ್ತ್ರಿ