ಹಳ್ಳಿಗಳ ಮನೆ ಮನೆಗೂ ಬೀಳುತ್ತಿದೆ ಬೀಗ


Team Udayavani, Oct 6, 2018, 6:00 AM IST

3.jpg

ಈ ದಿಸೆಯಲ್ಲಿ ಆಶಾಕಿರಣಗಳೂ ಇವೆ. ಹೊರಗಡೆ ಹೋಗಿರುವ, ಈಗ ನಿವೃತ್ತಿ ಹಂತದಲ್ಲಿರುವ ಹಲವರಿಗೆ ತಮ್ಮ ಊರುಗಳ ಕುರಿತು ಪ್ರೀತಿ ಇದೆ. ಮರಳಿ ಹೋಗೋಣ ಎನ್ನುವ ರೀತಿಯ ಅರೆ ಮನಸ್ಸು ಇದೆ.ಅವರು ಆರ್ಥಿಕವಾಗಿ ಸಬಲರು. ಮರಳಿ ಊರಿಗೆ ಬಂದರೆ ಊರಿಗೇ ಜೀವಕಳೆ ತುಂಬುವ ಸಾಮರ್ಥ್ಯ ಅವರಿಗಿದೆ. ಇಲ್ಲಿ ಹೊಸ ಆರ್ಥಿಕ, ಸಾಮಾಜಿಕ ಅವಕಾಶಗಳನ್ನು ತರುವ ಶಕ್ತಿಯೂ ಅವರಿಗಿದೆ. ಬಹುಶಃ ಈ ಹಿನ್ನೆಲೆಯಲ್ಲಿ ಆಗಬೇಕಿರುವುದು ಹಳ್ಳಿಗಳ ಮೂಲಸೌಕರ್ಯ ಅಭಿವೃದ್ಧಿ. 

ಉತ್ತರ ಕನ್ನಡ ಜಿಲ್ಲೆಯ ಒಂದು ಹಳ್ಳಿ. ಗಾಂಧೀಜಿ ಕನಸು ಕಂಡಂಥ ರೀತಿಯ ಸಾಂಸ್ಕೃತಿಕವಾಗಿ ಸಂಪದ್ಭರಿತವಾದ ಹಳ್ಳಿ ಅದು. ಅಡಿಕೆ, ತೆಂಗು, ಬಾಳೆಗಳಿಂದ ತುಂಬಿ, ಅಪೂರ್ವ ನಿಸರ್ಗ ಸಿರಿಗೆ ರೂಪಕವಾದದ್ದು. ಹೆಚ್ಚಿನ ಜನರಿಗೆ ಅರ್ಧ ಎಕರೆಯಿಂದ ಹಿಡಿದು ಆರೇಳು ಎಕರೆ ಜಮೀನು. ಸರಾಸರಿ ಸುಮಾರು ಒಂದು ಎಕರೆ ಅಡಿಕೆ ತೋಟ. ಸಾಲವಿಲ್ಲದ ಜೀವನ. ಆದರೆ ಕೈಯಲ್ಲೇನೂ ಉಳಿಯುತ್ತಿರಲಿಲ್ಲ. ಏಕೆಂದರೆ ಆಗಲೂ ಕೃಷಿಕನಿಗೆ ಕಷ್ಟವೇ. ಬೆಳೆಗೆ ಬೆಲೆಯಿಲ್ಲ. ಮೇಲಾಗಿ ಪ್ರತಿ ಕುಟುಂಬದಲ್ಲಿಯೂ ಎಂಟು ಹತ್ತು ಮಕ್ಕಳು. ಅಲ್ಲದೆ ಹಣ ಮಾಡುವುದೇ ಬದುಕೆಂಬ ರೀತಿಯಲ್ಲಿ ಜನ ಬದುಕಿರಲಿಲ್ಲ. ಇಂತಹ ಸ್ಥಿತಿಯಲ್ಲಿ ತಂದೆ ತಾಯಿಗೆ ಮಕ್ಕಳನ್ನು ಉಚ್ಚ ಶಿಕ್ಷಣಕ್ಕಾಗಿ ಹತ್ತಿರದ ಪಟ್ಟಣಕ್ಕೆ ಕಳುಹಿಸಲೂ ಸಾಮರ್ಥ್ಯವಿರಲಿಲ್ಲ.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಎಪ್ಪತ್ತ‌ರ ದಶಕದಲ್ಲಿ ಜಾರಿಗೆ ತಂದ ಉಚಿತ ಉನ್ನತ ಶಿಕ್ಷಣ ವ್ಯವಸ್ಥೆ  ಮತ್ತು ಉಚಿತ ಬಸ್‌ ಪಾಸ್‌ ವ್ಯವಸ್ಥೆ ಈ ಹಳ್ಳಿಯ ಮತ್ತು ಇಂತಹ ಹಳ್ಳಿಗಳ ಯುವಕ ಯುವತಿಯರಿಗೆ ಬೇರೊಂದು ಬದುಕಿನ ದಾರಿ ತೋರಿಸಿಕೊಟ್ಟಿತು. ಅವರೆಲ್ಲರೂ ಕಾಲೇಜಿಗೆ ಹೋಗಿ ಉಚ್ಚ ಶಿಕ್ಷಣ ಪಡೆದುಕೊಂಡರು. ನಂತರ ಸರಕಾರಿ, ಬ್ಯಾಂಕ್‌ ಇತ್ಯಾದಿ ನೌಕರಿ ಹುಡುಕಿ ಹೊರಗಡೆ ಹೋದರು. ಇದು ಕ್ರಮೇಣ ಬೇರೊಂದು ಸಮಸ್ಯೆ ಸೃಷ್ಟಿಸಿತು. ಅದೇ, ಹಳ್ಳಿಯಿಂದ ಯುವಕರ ವಲಸೆ. ಜಿಲ್ಲೆಯಿಂದ ಜನ ಹೊರಬೀಳಲಾರಂಭಿಸಿದ ಮೊದಲ ಹಂತ ಇದು. 

ಕ್ರಮೇಣ ಶಿಕ್ಷಣದ ಅವಕಾಶಗಳು ಬೆಳೆಯುತ್ತಲೇ ಹೋದವು. ಹಳ್ಳಿಯ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಅವಕಾಶಗಳನ್ನು ಕಲ್ಪಿಸಿದವರು ಮಾಜಿ ಮುಖ್ಯಮಂತ್ರಿ  ವೀರಪ್ಪ ಮೊಯ್ಲಿ. ಅವರು ಜಾರಿಗೆ ತಂದ ಸಿ.ಇ.ಟಿ ವ್ಯವಸ್ಥೆ ಗ್ರಾಮೀಣ ವಿದ್ಯಾರ್ಥಿಗಳಿಗೆ, ಪ್ರತಿಭಾವಂತರಿಗೆ ತಾಂತ್ರಿಕ ಶಿಕ್ಷಣದ ಬಾಗಿಲುಗಳನ್ನು ತೆರೆಯಿತು. ಫೀಸ್‌ ಕೂಡ ತುಂಬ ಕಡಿಮೆಯೇ ಇತ್ತು. ಹಳ್ಳಿಗರಿಗೆ ಶಿಕ್ಷಣ ಒದಗಿಸುವತ್ತ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಗ್ರಾಮೀಣರಿಗಾಗಿ ಸಿ.ಇ.ಟಿ. ಸೀಟ್‌ಗಳನ್ನು ಮೀಸಲಾಗಿಟ್ಟರು. ಇಷ್ಟಾದರೂ ತಂದೆ ತಾಯಿಗೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದು ಸುಲಭವಾಗಿರಲಿಲ್ಲ. ಆದರೂ ಏನೋ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸಿದರು. ಅಡಿಕೆ ದರವೂ ಈಗ ತುಸು ಬಂದಿತ್ತು. ಹೀಗಾಗಿ ಆಕಾಂಕ್ಷಿಗಳಿಗೆ ಉನ್ನತ ಶಿಕ್ಷಣ ಕೈಗೆ ಎಟುಕಿ ಹೋಯಿತು.  ಅದೇ ಸಂದರ್ಭದಲ್ಲಿಯೇ ದೇಶದಲ್ಲಿ ಖಾಸಗೀಕರಣ ಆರಂಭವಾಗಿದ್ದು. ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಅವಕಾಶಗಳನ್ನು ಸೃಷ್ಟಿಸಿದವರಲ್ಲಿ ಒಬ್ಬರು ಕೈಗಾರಿಕಾ ಸಚಿವರಾಗಿದ್ದ ಆರ್‌.ವಿ. ದೇಶಪಾಂಡೆ. ತಾಂತ್ರಿಕ ಶಿಕ್ಷಣ ಪಡೆದಿದ್ದ ಯುವಕ ಯುವತಿಯರು ಬೆಂಗಳೂರು ಬಸ್‌ ಹತ್ತಿದರು. ಹೀಗೆ ಆರಂಭವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಳ್ಳಿಗಳಿಂದ ಬೃಹತ್‌ ಪ್ರಮಾಣದಲ್ಲಿ ಯುವಕ ಯುವತಿಯರ ಹೊರ ವಲಸೆ. ಊರು ತೊರೆದ ಅವರು ಅಲ್ಲಿಯೇ ಹೆಚ್ಚು ಕಡಿಮೆ ಉಳಿದು ಬಿಟ್ಟರು. ಇದು ಜಿಲ್ಲೆಯಿಂದ ಭಾರೀ ಪ್ರಮಾಣದಲ್ಲಿ ಯುವ ಜನರು ವಲಸೆ ಹೋದ ಎರಡನೆಯ ಹಂತ.

ವಲಸೆಯ ಪರಿಣಾಮವೇನಾಯಿತೆಂದರೆ ಕೇವಲ ತಂದೆ ತಾಯಿ ಮಾತ್ರ ಊರಿನಲ್ಲಿ ಉಳಿದರು. ಬೆಂಗಳೂರಿನಲ್ಲಿ ಬದುಕಲು ಅವರಿಗೆ ಸಾಧ್ಯವೇ ಇಲ್ಲ. ಹೀಗಾಗಿ ತಾವು ಬರುವುದಿಲ್ಲ ಎಂದು ಮಕ್ಕಳಿಗೆ ಹೇಳಿದರು. ಮೊದಮೊದಲು ಕೆಲಸದವರು ಸಿಗುತ್ತಿದ್ದರು. ಆದರೆ ಕ್ರಮೇಣ ಕೆಲಸಗಾರರ ಮಕ್ಕಳು ಕೂಡ ಶಿಕ್ಷಣ ಪಡೆದು ಹೊರಗಡೆ ಹೋದರು. ಅಲ್ಲದೆ ರೇಟು ಸಿಕ್ಕಾಪಟ್ಟೆ. ಹೀಗಾಗಿ ಉತ್ಪನ್ನಕ್ಕಿಂತಲೂ ಖರ್ಚೆ ಹೆಚ್ಚಾಗಿ ಕೃಷಿ ಹಾಳು ಬೀಳಲಾರಂಭಿಸಿತು. ಅಷ್ಟೇ ಅಲ, ಊರುಗಳಲ್ಲಿ ಕೇವಲ ವೃದ್ಧರು ಉಳಿದು ಅವು ವೃದ್ಧಾಶ್ರಮಗಳಾಗಿ ಪರಿವರ್ತನೆಗೊಂಡವು. ಮೊದಲು ಕೊಟ್ಟಿಗೆಯಲ್ಲಿ ದನಗಳಿದ್ದವು. ಈಗ ಅವೆಲ್ಲ ಮಾರಾಟವಾಗಿ ಕೊಟ್ಟಿಗೆ ಖಾಲಿ ಆಯಿತು. ಕೃಷಿ ಆಧರಿತ ಹಳ್ಳಿ ಹೀಗೆ ಹಾಳು ಬೀಳಲಾರಂಭಿಸಿತು. ಇಂತಹ ಸ್ಥಿತಿಯಲ್ಲಿ ಹಲವು ಹಳ್ಳಿಗಳು ಒಂದೆರಡು ದಶಕಗಳ ಕಾಲ ಮುಂದುವರೆದವು. ಕೃಷಿ ಸಂಸ್ಕೃತಿ ಅವನತಿಯತ್ತ ಸಾಗುತ್ತಾ ಬಂತು. 

ಈಗ ತಂದೆ ತಾಯಿ ವೃದ್ಧರು. ಅವರನ್ನು ಇನ್ನು ಮುಂದೆ ಹಾಗೆಯೇ ಬಿಡಲಾಗುವುದಿಲ್ಲ. ಹೊರಗಿರುವವರಿಗೆ ತಂದೆ ತಾಯಿಯನ್ನು ನೋಡಿಕೊಳ್ಳುವುದು ಪ್ರತಿಷ್ಠೆಯ, ಗೌರವದ ಪ್ರಶ್ನೆ ಕೂಡ. ಅವರಿಗೆ ಆರ್ಥಿಕ ಸಮಸ್ಯೆಯೂ ಇಲ್ಲ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂಥವರು ಊರಿನಲ್ಲಿಯೇ ಸಿಕ್ಕರೆ ಅದಕ್ಕಾಗಿ ಅವರು ಎಷ್ಟು ಖರ್ಚು ಮಾಡಲೂ ಸಿದ್ಧ. ಆದರೆ ಸಮಸ್ಯೆಯೆಂದರೆ ನೋಡಿಕೊಳ್ಳುವಂಥವರು ದುಡ್ಡುಕೊಟ್ಟರೂ ಸಿಗುವುದಿಲ್ಲ. ಈಗಿರುವ ಕೊನೆಯ ಉಪಾಯವೆಂದರೆ ತೀವ್ರ ವೃದ್ಧರಾಗಿರುವ ತಂದೆ ತಾಯಿಯನ್ನು ತಾವಿದ್ದಲ್ಲಿಗೇ ಕರೆದುಕೊಂಡು ಹೋಗುವುದು. ಸ್ವತಃ ತಾವೇ ತಿರುಗಿ ಬರೋಣವೆಂದರೆ ಇಲ್ಲಿ ಅದಕ್ಕೆ ಪೂರಕ ವಾತಾವರಣವಿಲ್ಲ. ಹಾಗಾಗಿ ಅನಿವಾರ್ಯವಾಗಿ ಹಳ್ಳಿಗಳಲ್ಲಿ ಮನೆಗಳಿಗೆ ಬೀಗ ಹಾಕುವ ಸ್ಥಿತಿ ಬಂದಿದೆ. ತೋಟವಂತೂ ಹಾಳಾಗಿಯೇ ಹೋಗಿದೆ. ಇರಲಿ. ಜಮೀನು ಹೇಗೂ ಅಲ್ಲೇ ಬಿದ್ದಿರುತ್ತದಲ್ಲ! ಮುಂದೆ ನೋಡಿದರಾಯಿತು. ಆ ಜಮೀನು ಮಾರಿಕೊಂಡು ಹಣ ತಿನ್ನುವ ಅಗತ್ಯವೇನೂ ಅವರಿಗೆ ಇಲ್ಲ. ಪ್ರತಿಯೊಂದು ಕುಟುಂಬದ್ದೂ ಹೀಗೆಯೇ ಯೋಚನೆ. ಹಾಗಾಗಿ ಮನೆ ಮನೆಗೂ ಬೀಗ ಬೀಳುತ್ತಿದೆ. ಮೊದಲು ಆಸ್ತಿವಂತರಾಗಿದ್ದ ದೊಡ್ಡ ದೊಡ್ಡ ಮನೆಗಳಿಗೂ ಈಗ ಬೀಗ ಮುದ್ರೆ. ಸಾಲು ಸಾಲಾಗಿ ಕೇರಿಗಳ ಮನೆ ಮನೆಗಳಿಗೆ ಬೀಗ ಬೀಳುತ್ತಿದೆ.

ಈಗಿನ ಹಳ್ಳಿಯ ನಾಗರಿಕತೆಯ ಹಂತವೆಂದರೆ ಮನೆಗೆ ಬೀಗ! ಇದು ಕೇವಲ ಒಂದು ಹಳ್ಳಿಯ ಕಥೆಯಲ್ಲ. ಘಟ್ಟದ ಕೆಳಗಿನ ತಾಲೂಕುಗಳಲ್ಲಿ ಇದು ಹೆಚ್ಚು ಕಡಿಮೆ ಪ್ರತಿಯೊಂದು ಹಳ್ಳಿಯದೂ ಹೌದು. ಹಳ್ಳಿಗಳು ಸಂಪೂರ್ಣವಾಗಿ ಬೀಗ ಹಾಕಲ್ಪಡುತ್ತಿವೆ. ಈ ವ್ಯಾಧಿ ಇಂದು ಜಿಲ್ಲೆಯಲ್ಲಿ ಹರಡುತ್ತಿರುವ ಸಾಂಕ್ರಾಮಿಕ ರೋಗ. 

ಇದಕ್ಕೆ ಕಾರಣಗಳನ್ನು  ಅರಸಿಕೊಳ್ಳಬೇಕು.  ಖಂಡಿತವಾಗಿಯೂ ಇದೆಲ್ಲ ಆರಂಭವಾಗಿದ್ದು ಸಾಮಾಜಿಕ-ಆರ್ಥಿಕ ಕಾರಣಗಳ ಹಿನ್ನೆಲೆಯಲ್ಲಿ. ಅಂದರೆ ನಮ್ಮ ಯೋಜನೆಗಳಲ್ಲಿನ ಅಸಮಾನತೆ ಯಿಂದಾಗಿ, ಶಹರಗಳು ವೇಗವಾಗಿ ಬೆಳೆದು ಹಳ್ಳಿಗಳ ಬೆಳವಣಿಗೆ ಕುಂಠಿತವಾದದ್ದರಿಂದ. ಇದಕ್ಕೆ ಇನ್ನೂ ಒಂದು ಕಾರಣ ನಮ್ಮ ಉಚ್ಚ ಶಿಕ್ಷಣದ ಸ್ವರೂಪ. ಉನ್ನತ ಶಿಕ್ಷಣದ ದುರಂತವೆಂದರೆ ಹೆಚ್ಚು ಕಲಿತಂತೆ ವ್ಯಕ್ತಿಯೊಬ್ಬ ತನ್ನ ಪ್ರದೇಶದಿಂದ ಹೆಚ್ಚು ದೂರ ನೌಕರಿಗಾಗಿ ಹೋಗಬೇಕಾಗುತ್ತದೆ. ಶಿಕ್ಷಣ ತನ್ನ ಸುತ್ತ-ಮುತ್ತಲ ಪ್ರದೇಶಗಳಿಗೆ ಸ್ಪಂದಿಸುವುದೇ ಇಲ್ಲ. ಹೀಗೆ ಒಂದು ಸಂಕೀರ್ಣ ರಾಜಕೀಯ, ಸಾಮಾಜಿಕ ಪ್ರಕ್ರಿಯೆ ಈ ರೀತಿಯ ಘಟನಾವಳಿಗಳಿಗೆ  ಕಾರಣ. ಆಗಿದ್ದು ಆಗಿ ಹೋಗಿದೆ. ಈಗ ನಾವು ವಿಚಾರ ಮಾಡಬೇಕಿದ್ದು ಇಂತಹ ಹಳ್ಳಿಗಳನ್ನು ಚೈತನ್ಯಶೀಲ ಹಳ್ಳಿಗಳನ್ನಾಗಿ ಹೇಗೆ ಮಾರ್ಪಡಿಸಬಹುದು ಎನ್ನುವುದನ್ನು. ಏಕೆ ಬದುಕಿಸಬೇಕು ಎನ್ನುವ ಪ್ರಶ್ನೆಗೆ ಉತ್ತರ ಹೇಳುವ ಅವಶ್ಯಕತೆ ಇಲ್ಲವೆಂದೇ ಭಾವನೆ ಅಥವಾ ಒಂದೇ ವಾಕ್ಯದಲ್ಲಿ ಉತ್ತರ ಹೇಳಬೇಕಾದರೆ ಹಳ್ಳಿಗಳು ನಾಶವಾದರೆ ದೇಶದಆತ್ಮವೇ ನಾಶವಾಗುತ್ತದೆ. ಅಲ್ಲದೆ ಹಳ್ಳಿಗಳ ಭೂಮಿ ಕೂಡ ಅತ್ತ ಮಾರಾಟವೂ ಆಗದೆ ಇತ್ತ ಅಭಿವೃದ್ಧಿಯೂ ಆಗದೆ ಹಾಳು ಬೀಳುತ್ತದೆ.

ಇಂತಹ ಹಳ್ಳಿಗಳ ಪುನರುಜ್ಜೀವನ ಸಾಧ್ಯವಾಗುವುದು ಜಿಲ್ಲೆಯಿಂದ ಹೊರಗಡೆ ಹೋದವರ ಮರು ವಲಸೆ ಆರಂಭವಾದರೆ ಮಾತ್ರ. ಈ ದಿಸೆಯಲ್ಲಿ ಆಶಾಕಿರಣಗಳೂ ಇವೆ. ಹೊರಗಡೆ ಹೋಗಿರುವ, ಈಗ ನಿವೃತ್ತಿ ಹಂತದಲ್ಲಿರುವ ಹಲವರಿಗೆ ತಮ್ಮ ಊರುಗಳ ಕುರಿತು ಪ್ರೀತಿ ಇದೆ. ಮರಳಿ ಹೋಗೋಣ ಎನ್ನುವ ರೀತಿಯ ಅರೆ ಮನಸ್ಸು ಇದೆ.ಅವರು ಆರ್ಥಿಕವಾಗಿ ಸಬಲರು. ಮರಳಿ ಊರಿಗೆ ಬಂದರೆ ಊರಿಗೇ ಜೀವಕಳೆ ತುಂಬುವ ಸಾಮರ್ಥ್ಯ ಅವರಿಗಿದೆ. ಇಲ್ಲಿ ಹೊಸ ಆರ್ಥಿಕ, ಸಾಮಾಜಿಕ ಅವಕಾಶಗಳನ್ನು ತರುವ ಶಕ್ತಿಯೂ ಅವರಿಗಿದೆ. ಬಹುಶಃ ಈ ಹಿನ್ನೆಲೆಯಲ್ಲಿ ಆಗಬೇಕಿರುವುದು ಹಳ್ಳಿಗಳ ಮೂಲಭೂತ ಸೌಕರ್ಯ ಅಭಿವೃದ್ಧಿ. ವಿದ್ಯುತ್‌ ಪೂರೈಕೆ, ನೀರಿನ ವ್ಯವಸ್ಥೆ, ರಸ್ತೆಗಳು ಕೂಡ ಹೆಚ್ಚು ಕಡಿಮೆ ಹಾಗೆಯೇ ಉಳಿದು ಹೋಗಿವೆ. ಶೈಕ್ಷಣಿಕ, ವೈದ್ಯಕೀಯ, ಹೋಟೆಲ್‌ ಅಲ್ಲಿಯೇ ನಿಂತಿವೆ. ಇದಕ್ಕೆಲ್ಲ ಕಾರಣ ಭಾರಿ ಪ್ರಮಾಣದ ವಲಸೆ. ಯಾವ ಪ್ರಮಾಣದಲ್ಲಿ ಎಂದರೆ ಈ ಹಳ್ಳಿಗಳ ಅಭಿವೃದ್ಧಿಗೆ ಏನು ಬೇಕು ಎಂದು ಹೇಳಲು ಕೂಡ ಜನ ಉಳಿದ ಹಾಗೆ ಕಾಣಿಸುವುದಿಲ್ಲ. ಜನ ಎದ್ದು ನಿಂತು ಏನು ಬೇಕು ಎನ್ನುವುದನ್ನು ಕೇಳದಿದ್ದರೆ ಸಹಜವಾಗಿಯೇ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಇಲ್ಲಿ ಆಗಿದ್ದು ಹಾಗೆ. ಉತ್ತರ ಕರ್ನಾಟಕ ಹೇಗೆ ಎದ್ದು ನಿಂತು ಕೇಳುತ್ತಿದೆಯೋ ಹಾಗೆ ಉತ್ತರ ಕನ್ನಡ ಜಿಲ್ಲೆ ಮಾಡುತ್ತಿಲ್ಲ ಎಂದೇ ಭಾವನೆ.

 ಹಾಗೆ ನೋಡಿದರೆ ಕೇವಲ ಅದು ಒಂದೇ ಕಾರಣವೂ ಅಲ್ಲ ಎಂದು ಅನಿಸುತ್ತದೆ. ಹೊಸ ತಲೆಮಾರಿನ ಯುವಕ ಯುವತಿಯರಿಗೆ ಖಾಸಗಿತನದ ತೀವ್ರ ಒಲವು ಇರುವುದೂ ಮತ್ತು ಅಂತಹ ಖಾಸಗಿತನ ಬೆಂಗಳೂರಿನಲ್ಲಿ ಸಿಗುವುದು ಕೂಡ ಮುಖ್ಯಕಾರಣ ಇರಬಹುದು. ಮೂಲಭೂತ ಸೌಕರ್ಯದ ಅಭಿವೃದ್ಧಿಯ ಅವಶ್ಯಕತೆ ಖಂಡಿತಕ್ಕೂ ಇದೆ. ಹಾಗಾದಲ್ಲಿ ಮರು ವಲಸೆ ಆರಂಭವಾಗಬಹುದು.ಇಂತಹ ಮರು ವಲಸೆಗೆ ಕ್ರಮಗಳನ್ನು ಈಗ ಇಲ್ಲಿ ಉಳಿದಿರುವವರು ಮತ್ತು ವಲಸೆ ಹೋಗಿರುವವರು ಕೂಡ ಯೋಚಿಸಬೇಕಿದೆ ಮತ್ತು ಕ್ರಮ ತೆಗೆದುಕೊಳ್ಳಬೇಕಾಗಿದೆ. 

ಮುಖ್ಯವಾಗಿ ಜಿಲ್ಲೆಗೆ ಗುಡ್ಡದ ಮೇಲಿರುವ ಅಣೆಕಟ್ಟುಗಳಿಂದ ಸರ್ವಋತು ನೀರಾವರಿ ಮತ್ತು ಕುಡಿಯುವ ನೀರು. ಹುಬ್ಬಳ್ಳಿ, ಅಂಕೋಲಾ, ತಾಳಗುಪ್ಪಾ, ಖಾನಾಪುರ, ಹಾವೇರಿ, ಶಿರಸಿ  ರೇಲ್ವೆ ಅಭಿವೃದ್ಧಿ. ಹಾಗೆಯೇ ಶೈಕ್ಷಣಿಕ, ವೈದ್ಯಕೀಯ ಮತ್ತು ಕಿರು ಉದ್ದಿಮೆ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗಾಗಿ ಆಮಂತ್ರಣ. ಜಿಲ್ಲೆಯಲ್ಲಿ ತಂತ್ರಜ್ಞಾನ ಪಾರ್ಕ್‌ಗಳ ಅವಶ್ಯಕತೆ ಕೂಡ ಇದೆ. ಒಂದು ವಿಶ್ವವಿದ್ಯಾಲಯಕ್ಕಾಗಿ ಕೇಳಿ ಬರುತ್ತಿರುವ ಧ್ವನಿ ಇನ್ನಷ್ಟು ಗಟ್ಟಿ ಆಗಬೇಕಾಗಿದೆ. ಇವೆಲ್ಲವುಗಳ ಜತೆಗೆ ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯ ಕೃಷಿ ವ್ಯವಸ್ಥೆಯನ್ನು ಬಲ ಪಡಿಸುವುದು.

ಜಿಲ್ಲೆಯ ಅಭಿವೃದ್ಧಿ ಮಾತು ಆಡಿದ ಕೂಡಲೇ ಎದುರಾಗುವ ಪ್ರಶ್ನೆ ಪರಿಸರದ ಸಮತೋಲನದ್ದು. ಆ ಪ್ರಶ್ನೆಯನ್ನು ಗೌರವಿಸಬೇಕು. ಆದರೆ ಎಲ್ಲ ಯೋಜನೆಗಳಿಗೆ ನಾವು ಪರಿಸರದ ಹೆಸರಲ್ಲಿ ವಿಘ್ನವೊಡ್ಡುತ್ತ ಬಂದರೆ ಜಿಲ್ಲೆಯ ಹಳ್ಳಿಗಳು ಒಂದೊಂದಾಗಿ ಕೀಲಿ ಹಾಕಿಕೊಳ್ಳುತ್ತವೆ. ಹಳ್ಳಿಗಳಲ್ಲಿ ದೀಪ ನಂದಿ ಹೋಗುತ್ತದೆ. ಇಂದಲ್ಲ ನಾಳೆ.

ಡಾ. ಆರ್‌.ಜಿ. ಹೆಗಡೆ, ದಾಂಡೇಲಿ 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.