ಅಪೌಷ್ಟಿಕತೆಯ ಪೆಟ್ಟಿಗೆ ನಲುಗುವ ಮಕ್ಕಳು


Team Udayavani, Sep 8, 2018, 6:00 AM IST

14.jpg

ಭಾರತದ ಅಗಾಧವಾದ ಜನಸಂಖ್ಯೆ, ದೊಡ್ಡ ಪ್ರಮಾಣದ ಯುವ ಸಮೂಹ ಇಡೀ ಜಗತ್ತೇ ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿದೆ. ಹೌದು, ಇದೊಂದು ಅವಕಾಶಗಳ ಆಗರ. ಆದರೆ ಈ ಆಶಯ ನನಸಾಗುವಲ್ಲಿ ಇರುವ ದೊಡ್ಡ ಆತಂಕ ನಮ್ಮಲ್ಲಿ ಆಳವಾಗಿ ಬೇರು ಬಿಟ್ಟಿರುವ ಬಡತನ ಮತ್ತು ಅಪೌಷ್ಟಿಕತೆ. ನಮ್ಮಲ್ಲಿ ಯಾರಾದರೂ ಬಡಕಲು ವ್ಯಕ್ತಿಯನ್ನು ಕಂಡರೆ, ಆಫ್ರಿಕಾದಿಂದ ಬಂದವನ ಹಾಗಿದ್ದೀಯ ಎನ್ನುತ್ತಾರೆ. ಆದರೆ ವಾಸ್ತವವಾಗಿ ಆಫ್ರಿಕಾಕ್ಕಿಂತ (ಶೇ. 30) ಭಾರತದ ಮಕ್ಕಳಲ್ಲಿ ಅಪೌಷ್ಟಿಕತೆ ಮಟ್ಟ ಜಾಸ್ತಿ (ಶೇ. 37) ಎನ್ನುವುದು ನಮಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

ಜನಸಂಖ್ಯೆ ಒಂದು ಅವಕಾಶಗಳ ಆಗರ. ಆದರೆ ಆರ್ಥಿಕ ಅಭಿವೃದ್ಧಿಯ ವಿವಿಧ ಮಜಲುಗಳನ್ನು ದಾಟಿದ ಭಾರತದ ಬಡತನ ಮತ್ತು ಅಪೌಷ್ಟಿಕತೆಯ ಮಟ್ಟವು ನಮ್ಮನ್ನು ಬಹಳ ಚಿಂತಿತ­ರನ್ನಾಗಿಸುತ್ತದೆ. ಅಪೌಷ್ಟಿಕತೆಯಿಂದ ಮಕ್ಕಳ ದೇಹದ ಬೆಳವಣಿಗೆ, ರೋಗ ನಿರೋಧಕ ಶಕ್ತಿ ಹಾಗೂ ಕಲಿಕಾ ಶಕ್ತಿಗಳು ಕುಂದುತ್ತವೆ. ಜನಸಂಖ್ಯೆ ಒಂದು ಹೊರೆಯಲ್ಲ, ಅದೊಂದು ಅವಕಾಶಗಳ ಆಗರ ಎಂದು ಬೀಗುತ್ತಿರುವ ನಮಗೆ ಬಡತನ ಹಾಗೂ ಅಪೌಷ್ಟಿಕತೆಯೆಂಬ ಪೆಡಂಭೂತ ಕಾಡುತ್ತಿದೆ. ಅಪೌಷ್ಟಿಕತೆ ಎಂದರೆ ಕೆಲವೊಂದು ಪೋಷಕಾಂಶಗಳ ಕೊರತೆ ಅಥವಾ ಅತಿಯಾದ ಬಳಕೆಯಿಂದ ಉಂಟಾದ ಪೋಷಕಾಂಶಗಳ ಅಸಮತೋಲನ. 

ಕಾಳಹಂಡಿ ಸಿಂಡ್ರೋಮ್‌ 
ಸತತ ಬರದಿಂದ ಕಂಗೆಟ್ಟ ಒಡಿಶಾದ ಕಾಳಹಂಡಿ ಜಿಲ್ಲೆಯಲ್ಲಿ 1986ರ ಸುಮಾರಿಗೆ ತೀವ್ರ ಅಪೌಷ್ಟಿಕತೆಯಿಂದ ಎಳೆಗೂಸುಗಳು ಅಮ್ಮನ ಮಡಿಲಲ್ಲೇ ಕೊನೆಯುಸಿರೆಳೆಯತೊಡಗಿದ್ದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿ ವಿಶೇಷ ಪ್ಯಾಕೇಜ್‌ಗಳು ಘೋಷಣೆ ಯಾಯಿತು. ಇದಾಗಿ ಮೂರು ದಶಕಗಳೇ ಸಂದಿವೆ. ಕಳೆದ 32 ವರ್ಷಗಳಲ್ಲಿ ಭಾರತ ಭೌತಿಕ ಪ್ರಗತಿ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಸಾಕಷ್ಟು ಮುನ್ನಡೆದಿದೆ.  ಉತ್ತಮ ಆರೋಗ್ಯದಿಂದ ವ್ಯಕ್ತಿ ಮಾತ್ರವಲ್ಲದೆ ಇಡೀ  ರಾಷ್ಟ್ರವೇ ಪ್ರಯೋಜನ ಪಡೆಯುತ್ತದೆ. ಜಗತ್ತಿನ ಅನೇಕ ದೇಶಗಳಲ್ಲಿ ಇಂದು ಹೆಚ್ಚಿನ ಜನರಿಗೆ ಗುಣಮಟ್ಟದ ಆರೋಗ್ಯ ಹೊಂದಲು ಬಹಳ ಕಷ್ಟಸಾಧ್ಯವಾಗಿದೆ. ಬಡ ರಾಷ್ಟ್ರಗಳಲ್ಲಿ ಜನರು ಆದಾಯದ ಗಣನೆಗೆ ನಿಲುಕದ ವಿವಿಧ ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಅವರಿಗೆ ಅಭಿವೃದ್ಧಿಯ ಲಾಭವನ್ನು ಅನುಭವಿಸಲೂ ಸಾಧ್ಯವಾಗದೆ, ದೇಶದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡಲೂ ಸಾಧ್ಯವಾಗದೆ ವಿಲಿವಿಲಿ ಒದ್ದಾಡುವಂತಾದುದು ದುರದೃಷ್ಟಕರ. 

ಸಾರ್ವತ್ರಿಕ ಬಡತನ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ 
ಅಪೌಷ್ಟಿಕತೆ ಎನ್ನುವ ಶಬ್ದವೇ ನಮ್ಮ ಮನಸ್ಸಿಗೆ ಬೇಸರ ಮತ್ತು ಕಸಿವಿಸಿ ಉಂಟುಮಾಡುತ್ತದೆ. ಮಕ್ಕಳ ಅಪೌಷ್ಟಿಕತೆಯು ಅಭಿವೃದ್ಧಿ ಹೊಂದುತ್ತಿರುವ ಯಾವುದೇ ರಾಷ್ಟ್ರಕ್ಕೂ ಮಾರಕ ಎನ್ನುವುದು ನಿರ್ವಿವಾದ. ಭಾರತ ಇಂದು ಕೂಡಾ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 188 ರಾಷ್ಟ್ರಗಳ ಪೈಕಿ 131ನೇ ಸ್ಥಾನದಲ್ಲಿದೆ. ಭಾರತದಲ್ಲಿ 11ನೇ ಮತ್ತು ದಕ್ಷಿಣ ಭಾರತದಲ್ಲಿ ಕೊನೇ ಸ್ಥಾನವನ್ನು ಪಡೆದುಕೊಂಡಿದೆ ಕರ್ನಾಟಕ. ದೇಶದಲ್ಲಿ ಪ್ರತಿ ವರ್ಷ 10.30 ಲಕ್ಷ ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ. ಬಡ ದೇಶಗಳಲ್ಲಿ ನಾಲ್ಕರಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ನರಳುತ್ತಿದೆ. 

ಒಂದು ದೇಶದ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ ಆ ದೇಶದ ಅಭಿವೃದ್ಧಿಯ ದ್ಯೋತಕ. ನಮ್ಮ ದೇಶದಲ್ಲಿ ಮೂರು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಶೇ.47 ಮಕ್ಕಳು ಅಪೌಷ್ಟಿಕತೆ ಮತ್ತು ಕಡಿಮೆ ತೂಕದಿಂದ ಬಳಲುತ್ತಿದ್ದಾರೆ. ವಿಶ್ವ ಬ್ಯಾಂಕಿನ ಅಂದಾಜಿನ ಪ್ರಕಾರ ಪ್ರಪಂಚದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 14.6 ಕೋಟಿ ಮಕ್ಕಳಲ್ಲಿ 6 ಕೋಟಿ ಮಕ್ಕಳು ಭಾರತದಲ್ಲೇ ಇದ್ದಾರಂತೆ.

ದೇಶದಲ್ಲಿ ಪ್ರತಿ ವರ್ಷ 13.50 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಸಾವಿಗೀಡಾಗುತ್ತಿರುವುದು ದೊಡ್ಡ ದುರಂತವೇ ಸರಿ. ಪ್ರತಿ ವರ್ಷ ಜನಿಸುವ 2.7 ಕೋಟಿ ಶಿಶುಗಳ ಪೈಕಿ ಶೇ.30 ಮಕ್ಕಳು ಕಡಿಮೆ ತೂಕದವರು- ಅಪೌಷ್ಟಿಕತೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಹಲವು ರೋಗ ರುಜಿನಗಳಿಗೆ ಗುರಿಯಾಗುತ್ತಾರೆ. ವಿವಿಧ ರಂಗಗಳಲ್ಲಿ ಉತ್ಕೃಷ್ಟ ಸಾಧನೆ ಮಾಡಿರುವ ಭಾರತಕ್ಕೆ ಇಷ್ಟೊಂದು ಬೃಹತ್‌ ಪ್ರಮಾಣದ ಮಕ್ಕಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ವ್ಯಥೆ ಕಾಡುತ್ತಿದೆ. 

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.20ರಷ್ಟು ಮಕ್ಕಳು ದುರ್ಬಲವಾದ ಅಪೌಷ್ಟಿಕತೆಯಿಂದಾಗಿ ನರಳುತ್ತಿದ್ದಾರೆ. ವಿಶ್ವದ ಇಂತಹ ಮಕ್ಕಳಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಭಾರತದಲ್ಲಿ ವಾಸಿಸುತ್ತಿದ್ದಾರೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ. 43(61 ಮಿಲಿಯನ್‌) ಅತಿ ಕಡಿಮೆ ತೂಕದ ಮಕ್ಕಳು ಹಾಗೂ ಶೇ.48 ಮಕ್ಕಳು ದೀರ್ಘ‌ಕಾಲಿಕ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಜಗತ್ತಿನಲ್ಲಿ ಬೆಳವಣಿಗೆ ಕುಂಠಿತಗೊಂಡ 10 ಮಕ್ಕಳಲ್ಲಿ ಮೂರು ಮಂದಿ ಭಾರತೀಯರು. ಅಪೌಷ್ಟಿಕತೆಯು ಹಳ್ಳಿ ಪ್ರದೇಶಗಳಲ್ಲಿ ನಗರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಮಕ್ಕಳ ನಡುವೆ ಕಡಿಮೆ ಅಂತರವಿರುವವರಲ್ಲಿ ಅಪೌಷ್ಟಿಕತೆ ಪ್ರಮಾಣವೂ ಜಾಸ್ತಿ. ಅನಕ್ಷರಸ್ಥ ತಾಯಂದಿರ ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣವು ಸಾಕ್ಷರತೆಯ ತಾಯಂದಿರ ಮಕ್ಕಳಿಂದ ಐದು ಪಟ್ಟು ಜಾಸ್ತಿ ಇದೆ. ಅಪೌಷ್ಟಿಕ ತಾಯಂದಿರ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ದುರ್ಬಲ ವರ್ಗದ ಮಕ್ಕಳಲ್ಲಿ ಅಪೌಷ್ಟಿಕತೆ ಅತಿ ಹೆಚ್ಚು.

ಸುಮಾರು 7.4 ಮಿಲಿಯನ್‌ ಕಡಿಮೆ ತೂಕದ ಮಕ್ಕಳು ವಾರ್ಷಿಕವಾಗಿ ಜನಿಸುವುದು ಭಾರತದಲ್ಲಿ. ಹುಟ್ಟಿದ ಒಂದು ತಾಸಿನೊಳಗೆ ಕೇವಲ ಶೇ.25 ಮಕ್ಕಳಿಗೆ ಅಗತ್ಯವಾದ ಸ್ತನ್ಯಪಾನ ಮಾಡಲಾಗುತ್ತದೆ. ಆರು ತಿಂಗಳೊಳಗಿನ ಕೇವಲ ಶೇ. 46 ಮಕ್ಕಳಗೆ ಎದೆ ಹಾಲನ್ನು ನೀಡಲಾಗುತ್ತದೆ. 6 ರಿಂದ 23 ತಿಂಗಳಿನ ಒಳಗಿನ ಮಕ್ಕಳಲ್ಲಿ ಕೇವಲ ಶೇ. 20 ಮಕ್ಕಳಿಗೆ ಶಿಫಾರಸು ಮಾಡಲಾದ ರೀತಿಯಲ್ಲಿ ಸೂಕ್ತ ಆಹಾರವನ್ನು ನೀಡಲಾಗುತ್ತದೆ. 6-59 ತಿಂಗಳಿನ ಪ್ರತಿಶತ 70 ಮಕ್ಕಳು ರಕ್ತಹೀನತೆಯಿಂದ ನರಳುತ್ತಿದ್ದಾರೆ. ಕೇವಲ ಶೇ. 51 ಕುಟುಂಬಗಳಲ್ಲಿ ಅಯೋಡೈಸ್ಡ್ ಉಪ್ಪನ್ನು ಬಳಸಲಾಗುತ್ತದೆ. ಕೇವಲ 1/3 ಮಕ್ಕಳು ಅಂಗನವಾಡಿ ಸೇವೆಯನ್ನು ಪಡೆಯುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಪಡೆದ ಭಾರತದ ತಳಮಟ್ಟದಲ್ಲಿ ಈ ಪರಿಯ ತಳಮಳ ಮೂಡಿಸುವ ಅಂಕಿ ಅಂಶಗಳು ನಮ್ಮನ್ನು ಬೆಚ್ಚಿ ಬೀಳಿಸಿವೆ.

ಸಮಸ್ಯೆಯ ಮೂಲ 
ಮಹಿಳೆಯರ ಶಿಕ್ಷಣದ ಮಟ್ಟ, ಕಡಿಮೆ ಸಾಮಾಜಿಕ ಸ್ಥಾನಮಾನ, ನಿಕೃಷ್ಟ ಆರ್ಥಿಕ ಸ್ಥಿತಿ, ಪರಾವಲಂಬನೆ. ಕಡಿಮೆ ಸ್ವಾಯತ್ತತೆ ಅಪೌಷ್ಟಿಕತೆಗೆ ಇರುವ ಋಣಾತ್ಮಕ ಸಂಬಂಧವನ್ನು ಅಧ್ಯಯನಗಳು ಎತ್ತಿಹಿಡಿದಿವೆ. ಸಾಮಾಜಿಕ, ಆರ್ಥಿಕ, ಆಹಾರ, ಜೀವನಶೈಲಿ, ಸಾಂಸ್ಥಿಕ ಮತ್ತು ತಿಳುವಳಿಕೆ ಅಂಶಗಳು ಮುಖ್ಯವಾಗಿ ವ್ಯಕ್ತಿಯ ಆರೋಗ್ಯ ಅಂಶವನ್ನು ನಿರ್ಧರಿಸುತ್ತದೆ. ಆದರೆ ಬಡತನವು ಈ ಸಮಸ್ಯೆಯನ್ನು ತೀವ್ರಗೊಳಿಸುತ್ತದೆ. 

ಮಕ್ಕಳಲ್ಲಿ ಅಪೌಷ್ಟಿಕತೆಗೆ ಪಾಲಕರ ಬಡತನ ಮತ್ತು ಅನಕ್ಷರತೆಯೂ ಮುಖ್ಯ ಕಾರಣವಾಗಿದೆ. ಆರೋಗ್ಯ ಹಾಗೂ ಅಗತ್ಯ ಆಹಾರ ಪದ್ಧತಿಯ ಬಗ್ಗೆ ಕಾಳಜಿ ವಹಿಸದಿರುವುದು, ಮಕ್ಕಳ ಪಾಲನೆಯಲ್ಲಿ ಗಮನವಿಲ್ಲದಿರುವುದು, ರೋಗಗಳಿಂದ ನರಳು ವುದು, ಪೌಷ್ಟಿಕ ಅಭದ್ರತೆ, ಅಹಾರದ ಪೋಷಕಾಂಶಗಳ ಬಗ್ಗೆ ಅರಿವಿಲ್ಲದಿರುವುದು, ಸ್ವತ್ಛತೆಯ ಕೊರತೆ ಸಮಸ್ಯೆ ಹೆಚ್ಚಾಗಲು ಕಾರಣ.  ಎರಡು ವರ್ಷದೊಳಗಿನ ಮಕ್ಕಳು, ಹದಿಹರೆಯದ ಹುಡುಗಿಯರು, ಗರ್ಭಾವಸ್ಥೆಯಲ್ಲಿರುವ ಮತ್ತು ಎದೆ ಹಾಲು ನೀಡುವ ಮಹಿಳೆಯರಿಗೆ ಅಗತ್ಯ ಪೌಷ್ಟಿಕಾಂಶಗಳನ್ನು ಒದಗಿಸುವುದೇ ಅಪೌಷ್ಟಿಕತೆಯನ್ನು ತಡೆಗಟ್ಟುವಲ್ಲಿ ಏಕೈಕ ದಾರಿ. 

ತುಂಬಿದ ಗೋದಾಮು-ಅರೆ ಹೊಟ್ಟೆ 
ಕಳೆದೆರಡು ದಶಕಗಳಲ್ಲಿ ಭಾರತವೂ ಸೇರಿದಂತೆ ಇಡೀ ಜಗತ್ತು ನಾವು ನಂಬಲಾರದ ವೇಗದಲ್ಲಿ ಬದಲಾವಣೆಯತ್ತ ಸಾಗಿದೆ. ತೆರೆದುಕೊಂಡ ಮಾರುಕಟ್ಟೆಯ ಮೂಲಕ ಸೃಷ್ಟಿಯಾದ ಕೊಳ್ಳುಬಾಕ ಸಂಸ್ಕೃತಿಯ ಪ್ರಭಾವದಿಂದ ನಾಗರಿಕ ಜಗತ್ತು ಅನುಭೋಗ ಮತ್ತು ಲೋಲುಪತೆಯ ತುತ್ತ ತುದಿಯಲ್ಲಿ ತೇಲಾಡುತ್ತಿದೆ.  ಆರ್ಥಿಕ ತಜ್ಞ ಅಮರ್ತ್ಯ ಸೇನ್‌ರ ಪ್ರಕಾರ ಇತ್ತೀಚಿನ ದಶಕಗಳಲ್ಲಿ ಇಡೀ ವಿಶ್ವದ ಜನಸಂಖ್ಯೆಗೆ ಸಾಕಾಗುವಷ್ಟು ಆಹಾರವು ಲಭ್ಯ ವಿರುವುದರಿಂದ ಆಹಾರ ವಿತರಣೆ ಮತ್ತು ಖರೀದಿ ಸಾಮರ್ಥ್ಯದ ಸಮಸ್ಯೆಗಳು ಬಡತನ ಹಾಗೂ ಅಪೌಷ್ಟಿಕತೆಗೆ ಕಾರಣ.

ಮನುಷ್ಯ ತಾನೇ ನಿರ್ಮಿಸಿಕೊಂಡಿರುವ ಈ ಕೃತಕ, ಭ್ರಮಾತ್ಮಕ ಮತ್ತು ವಿಸ್ಮಯಕಾರಿ ಜಗತ್ತಿನಲ್ಲಿ ಕಣ್ಣಿಗೆ ರಾಚುವ ಬಡತನ ಮತ್ತು ಅಪೌಷ್ಟಿಕತೆ ಸೃಷ್ಟಿಸುವ ಭಯಾನಕ ಭವಿಷ್ಯದ ಬಗ್ಗೆ ಜಾಗೃತರಾಗಿ ಕಾರ್ಯೋನ್ಮುಖರಾಗಬೇಕು. ಭಾರತ ಆರ್ಥಿಕ ಅಭಿವೃದ್ಧಿಯಲ್ಲಿ ಮುನ್ನುಗ್ಗುತ್ತಿದ್ದರೂ ಎರಡು ಹೊತ್ತಿನ ಊಟಕ್ಕೆ ಪರದಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂಬುದು ವಿಪರ್ಯಾಸ. ಹೊಟೇಲ್‌, ಹಾಸ್ಟೆಲ್‌, ಮದುವೆ ಮನೆಗಳ ಊಟದ ತಟ್ಟೆಗಳಲ್ಲಿ ಆಗುವ ಆಹಾರದ ಪೋಲನ್ನು ತಡೆದರೆ ಅದರಿಂದ ಹಸಿದ ಅದೆಷ್ಟೋ ಉದರಗಳನ್ನು ತುಂಬಿಸಬಹುದು. ಏನೊಂದು ವಿಪರ್ಯಾಸ- ತುಂಬಿದ ಗೋದಾಮುಗಳು ಒಂದೆಡೆಯಾದರೆ ಕರುಣಾ­ಜನಕವಾದ ಅರೆಬರೆ ತುಂಬಿದ ಖಾಲಿ ಹೊಟ್ಟೆಗಳು. ಸರಿಯಾಗಿ ಬೆಲೆ ಸಿಗದೆ ರೈತ ಹೈರಾಣ ಆದರೆ, ಕೈಗೆಟುಕದ ದುಬಾರಿ ಬೆಲೆಯಿಂದ ಸಾಮಾನ್ಯ ಗ್ರಾಹಕ ಸೋತು ಸುಣ್ಣವಾಗಿದ್ದಾನೆ. 

ಪ್ರತಿ ಆಹಾರದ ಕಣ ಉಪಯೋಗವಾಗಲಿ
ಕೃಷಿ ಹಾಗೂ ಮಾರುಕಟ್ಟೆ ಕ್ಷೇತ್ರದ ಗೋಜಲುಗಳನ್ನು ಸರಿಯಾಗಿ ಅಧ್ಯಯನ ಮಾಡಿ ಸೂಕ್ತ ಕಾರ್ಯ ಯೋಜನೆಗಳ ಮೂಲಕ ರೈತ ಬೆಳೆದ ಪ್ರತಿ ಕಣ ಉಣ್ಣಬೇಕಾದವರಿಗೆ ತಲುಪಿದಾಗ ಮಾತ್ರ ನಿಜವಾದ ಅರ್ಥದಲ್ಲಿ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಆಹಾರ ಉತ್ಪಾದನೆಯಲ್ಲೂ ಏಕದಳ ಧಾನ್ಯದ ಪಾಲು ಅತೀ ಹೆಚ್ಚು. ದ್ವಿದಳ ಧಾನ್ಯ ಸೇರಿದಂತೆ ಇತರ ಧಾನ್ಯಗಳ ಉತ್ಪಾದನೆಯತ್ತ ಗಮನ ಹರಿಸಲಾಗದೆ ಆಹಾರ ಭದ್ರತೆ ಒದಗಿಸಲು ಸಾಧ್ಯವಾಗಿಲ್ಲ. 

ನ ಭಯಂಚ ಅಸ್ತಿ ಜಾಗೃತಃ
ಮಕ್ಕಳಿಗೆ ಆಸ್ತಿ ಮಾಡುವ ಪೋಷಕರಿಗಿಂತ ಮಕ್ಕಳನ್ನು ಆಸ್ತಿ ಯನ್ನಾಗಿ ಬೆಳೆಸುವ ಪೋಷಕರನ್ನು ಗುರುತಿಸಿ ಬೆಂಬಲಿಸುವ ಮನೋವೃತ್ತಿ ಉದ್ದೀಪನಗೊಳ್ಳಬೇಕು. ಅಪೌಷ್ಟಿಕತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳದಿದ್ದರೆ ಜನಸಂಖ್ಯೆ ಲಾಭವಾಗುವ ಬದಲು ದೊಡ್ಡ ದುರಂತವೇ ಆದೀತು. ಪೌಷ್ಟಿಕ ಆಹಾರದ ಅರಿವು ಮತ್ತು ಲಭ್ಯತೆ ಸ್ವಸ್ಥ ಸಮಾಜಕ್ಕೆ ಕಾರಣ. ಜನರ ಆರೋಗ್ಯ ಮತ್ತು ಆರೋಗ್ಯಕರ ಜೀವನವನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರಕಾರವು 1982ರಿಂದ ಪ್ರತಿ ವರ್ಷ ಸೆಪ್ಟಂಬರ್‌ 1 ರಿಂದ 7 ರವರೆಗೆ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹವನ್ನು ಆಯೋಜಿಸುತ್ತದೆ. ಸರಕಾರದ ಕಾರ್ಯಕ್ರಮಗಳು ಯಶಸ್ವಿ ಆಗಬೇಕಾದರೆ ಸಮಾಜ ಧನಾತ್ಮಕವಾಗಿ ಸ್ಪಂದಿಸಬೇಕು.

ಡಾ| ಎ.ಜಯ ಕುಮಾರ ಶೆಟ್ಟಿ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.