ಮಾರುಕಟ್ಟೆಗಳ ಸ್ಥಿತ್ಯಂತರ; ಗ್ರಾಹಕನ ಬೇಡಿಕೆಗೆ ಸಂತೃಪ್ತಿ ಎಂಬುದಿಲ್ಲ!


Team Udayavani, May 3, 2017, 11:57 AM IST

MARKET-750.jpg

ಯಾವುದೋ ವಸ್ತುವಿಗೆ ಬೇಡಿಕೆ ಸಲ್ಲಿಸಿ ದಿನಗಳು ಅಥವಾ ತಿಂಗಳು‌ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇಂದಿಲ್ಲ. ಕಾರು, ಸ್ಕೂಟರನ್ನು ಕೂಡ ಸಂತೆಯಲ್ಲಿ ತರಕಾರಿ ಕೊಂಡಂತೆ ಖರೀದಿಸಿ ತರಬಹುದು. ಇದಕ್ಕೆ ತಕ್ಕಂತೆ ವಸ್ತುವೈವಿಧ್ಯ ಎಷ್ಟೇ ಇರಲಿ, ಮಾರುಕಟ್ಟೆ ಎಷ್ಟೇ ಬದಲಾಗಲಿ; ಗ್ರಾಹಕನ ಬೇಡಿಕೆಗೆ ಸಂತೃಪ್ತಿ ಎಂಬುದಿಲ್ಲ. ನಿಶ್ಚಿತ ಉದ್ದೇಶವಿಲ್ಲದೆ ಮಾರುಕಟ್ಟೆಯಲ್ಲಿ ತಿರುಗಾಡಿದರೂ ಒಂದಷ್ಟು ವಸ್ತುಗಳು, ಉತ್ಪನ್ನಗಳು ಮನೆ ಸೇರುವುದು ಸಾಮಾನ್ಯ..

ಅರ್ಥಶಾಸ್ತ್ರದಲ್ಲಿ ಮಾರುಕಟ್ಟೆ ಎಂದರೆ ಸರಕು ಮತ್ತು ಸೇವಾದಾತರು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ವಿನಿಮಯ ಮಾಡುವ ಸ್ಥಳ. ಈ ವ್ಯವಸ್ಥೆಯಲ್ಲಿ ಒಳಪಡುವ ಸಂಸ್ಥೆಗಳು, ವಿಧಿವಿಧಾನಗಳು, ಸಾಮಾಜಿಕ ಸಂಬಂಧಗಳು, ಮೂಲಭೂತ ಸೌಕರ್ಯಗಳು ಎಲ್ಲವೂ ಮಾರುಕಟ್ಟೆಯ ಅಂಶಗಳೇ ಆಗಿವೆ. ಭೌತಿಕ ಮಾರುಕಟ್ಟೆಯಲ್ಲಿ ಪರಸ್ಪರ ವಿನಿಮಯದ ಸಂದರ್ಭದಲ್ಲಿ ನಗದು ಕೈ ಬದಲಾಗುತ್ತದೆ. ತೀರಾ ಹಿಂದುಳಿದ ಮಾರುಕಟ್ಟೆಗಳಲ್ಲಿ ವಸ್ತುಗಳ ವಿನಿಮಯದ ಮೂಲಕವೂ ವ್ಯವಹಾರಗಳು ನಡೆಯುತ್ತವೆ. ಇದು ಮಾರುಕಟ್ಟೆಯ ಸ್ಥೂಲ ರೂಪ.

ಮಾರುಕಟ್ಟೆಯ ವಿಧಗಳು: ಮಾರುಕಟ್ಟೆ ಎಂದೊಡನೆ, ಶೇರು ಮಾರುಕಟ್ಟೆಯೋ ತರಕಾರೀ ಮಾರುಕಟ್ಟೆಯೋ ಮೀನು ಮಾರುಕಟ್ಟೆಯೋ ನೆನಪಾಗಬಹುದು. ಇವು ಪ್ರಾತಿನಿಧಿಕ ಮಾರುಕಟ್ಟೆಗಳೆನ್ನಬಹುದು. ಶೇರು ಮಾರುಕಟ್ಟೆಯು ನಿಯಮ, ನಿಯಂತ್ರಕ ವಿಧಿವಿಧಾನಗಳು, ದೇಶವ್ಯಾಪಿ ಹೂಡಿಕೆದಾರರಿರುವ ಮುಖ್ಯ ಮಾರುಕಟ್ಟೆ. ಉಳಿದೆರಡು ಸೀಮಿತ ವ್ಯಾಪ್ತಿ ಇರುವ ಸ್ಥಳೀಯ ಮಾರುಕಟ್ಟೆಗಳಾಗಿದ್ದು ಹೆಚ್ಚಿನ ನಿಯಮಾವಳಿಗಳಾಗಲೀ, ನಿಬಂಧನೆಗಳಾಗಲೀ ಇಲ್ಲದ ಮೂಲಭೂತ ವಸ್ತುಗಳನ್ನು ವಿನಿಮಯ ಮಾಡುವ ಸ್ಥಳಗಳು. ಒಂದು ರೀತಿಯಲ್ಲಿ ಅಸಂಘಟಿತ ಮಾರುಕಟ್ಟೆಗಳೆಂದರೂ ಸಲ್ಲುತ್ತದೆ.

ಮಾರುಕಟ್ಟೆಗಳನ್ನು ವಿನಿಮಯಗೊಳ್ಳುವ ವಸ್ತುಗಳು, ಅಪವರ್ತನ, ಮಾರುಕಟ್ಟೆಯ ಸ್ಥಳ, ಗುರಿಯಾಗಿರುವ ಗ್ರಾಹಕರು, ಮಾರಾಟದ ವಿಧಾನ, ಸರಕಾರೀ ನಿಬಂಧನೆಗಳು, ಕರಗಳು, ಬೆಲೆಯ ಮಿತಿ, ಬಾಧಿಸುವ ಕಾನೂನುಗಳು, ಸಟ್ಟಾ ವ್ಯಾಪಾರ ಸಾಧ್ಯತೆಗಳು, ಮಾರುಕಟ್ಟೆಯ ಗಾತ್ರ, ವ್ಯಾಪ್ತಿ ಇತ್ಯಾದಿಗಳ ಆಧಾರದ ಮೇಲೆ ವರ್ಗೀಕರಿಸಬಹುದು. ಆಹಾರ ವಸ್ತುಗಳ ಮಾರುಕಟ್ಟೆ ಒಂದು ಕಟ್ಟಡಕ್ಕೋ ಸಂಕೀರ್ಣಕ್ಕೋ ಹಲವು ಕೇಂದ್ರೀಕೃತ ಮುಂಗಟ್ಟುಗಳಿಗೋ ಸೀಮಿತವಾದರೆ, ರಿಯಲ್‌ ಎಸ್ಟೇಟ್‌ನ ಮಾರುಕಟ್ಟೆಯ ವ್ಯಾಪ್ತಿ ಆ ನಗರವನ್ನೇ ಹೊಂದಿರುತ್ತದೆ. ಉಪಭೋಗ ವಸ್ತುಗಳ ಮಾರುಕಟ್ಟೆ ಇನ್ನೂ ವಿಶಾಲವಾಗಿದ್ದು ದೇಶವ್ಯಾಪಿಯೂ, ಇನ್ನೂ ಕೆಲವು ಜಾಗತಿಕವೂ ಆಗಿರುತ್ತದೆ. ಉದಾಹರಣೆಗೆ ವಜ್ರ ವ್ಯಾಪಾರ ಜಾಗತಿಕ ಮಾರುಕಟ್ಟೆಯ ಸ್ಥರದಲ್ಲಿ ನಡೆಯುತ್ತದೆ. 

ಕಪ್ಪು ಮಾರುಕಟ್ಟೆ ನಿರ್ಬಂಧಿತ ವಸ್ತುಗಳನ್ನು ವಿನಿಮಯ ಮಾಡುತ್ತದೆ. ಚೋರ್‌ ಬಜಾರಿನಲ್ಲಿ ಕದ್ದು ತಂದ ಮಾಲುಗಳ್ಳೋ, ಬಿಡಿಭಾಗಗಳ್ಳೋ ವಿನಿಮಯವಾಗುತ್ತವೆ. ಇವು ಕುಖ್ಯಾತಿಯ ಮಾರುಕಟ್ಟೆಗಳಾದರೆ ತಾತ್ವಿಕ ಮಾರುಕಟ್ಟೆ ಇತ್ತೀಚೆಗೆ ಬಹುಬೇಗ ಬೆಳೆಯುತ್ತಿರುವ ವಿನಿಮಯ ವ್ಯವಸ್ಥೆ, ಇ-ಬೇ, ಅಮೆಜಾನ್‌, ಫ್ಲಿಪ್‌ಕಾರ್ಟ್‌ ಇಂತಹ ತಾತ್ವಿಕ ಮಾರುಕಟ್ಟೆಗಳಿಗೆ ಉದಾಹರಣೆಯಾಗಿ ನೋಡಬಹುದು. ಈ ವ್ಯವಸ್ಥೆಯಲ್ಲಿ ಮಾರುವವರ ಮತ್ತು ಕೊಳ್ಳುವವರ ಪರಸ್ಪರ ಭೇಟಿ ಆಗುವುದಿಲ್ಲ; ಬೆಲೆಯ ಬಗ್ಗೆ ಚೌಕಾಶಿ ನಡೆಯುವುದಿಲ್ಲ-ಆದರೂ ಸರಕುಗಳ ಪೂರ್ಣ ವಿವರಗಳ ಆಧಾರದ ಮೇಲೆ ಇಂಟರ್‌ನೆಟ್‌ ಮುಖಾಂತರ ಆರ್ಡರುಗಳು ಮಾರಾಟ ಮಾಡುವವರಿಗೆ ತಲುಪಿ, ಗ್ರಾಹಕರಿಗೆ ಕೊರಿಯರ್‌ ಮುಖಾಂತರ ವಸ್ತು ಅಥವಾ ಸರಕುಗಳ ಬಟವಾಡೆ ನಡೆಯುತ್ತದೆ. ಪಾವತಿ ನಗದು ರಹಿತವಾಗಿ ಇಂಟರ್‌ನೆಟ್‌ ಮೂಲಕವೋ ಅಥವಾ ಸರಕಿನ ಬಟವಾಡೆಯ ಸಂದರ್ಭದಲ್ಲಿ ರೊಕ್ಕದ ರೂಪದಲ್ಲೋ ನಡೆಯುತ್ತದೆ. 

ಮಾರುಕಟ್ಟೆ – ಒಂದು ಸಮರ್ಥ ವ್ಯವಸ್ಥೆ: ಸ್ವತ್ಛಂದ ಮಾರುಕಟ್ಟೆ (frಛಿಛಿ ಞಚrkಛಿಠಿ) ಸಂಪನ್ಮೂಲಗಳ ವಿತರಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಬಂಡವಾಳಶಾಹೀ ದೇಶಗಳಲ್ಲಿ ಇಂತಹ ಮಾರುಕಟ್ಟೆಗಳೇ ಕಾರ್ಯವೆಸಗುತ್ತವೆ. ಇಂತಹ ಮಾರುಕಟ್ಟೆಗಳು ಬಂಡವಾಳದ ಕೈಗೊಂಬೆಗಳೆಂಬ ಅಪಖ್ಯಾತಿ ಇದ್ದರೂ ಇದು ವಿವಾದಿತ ವಿಚಾರ. ಮಾರುಕಟ್ಟೆಯ ಪರಸ್ಪರ ಶಕ್ತಿಗಳೇ ಸರಕು ಅಥವಾ ಸೇವೆಗಳ ಮೌಲ್ಯವನ್ನು ನಿರ್ಧರಿಸುವುದರಿಂದ ಬಂಡವಾಳ ಈ ಶಕ್ತಿಗಳ ಅಧೀನವಾಗುವುದು ವಾಸ್ತವ-ಆದ್ದರಿಂದ ಬಂಡವಾಳ ತನ್ನ ಮೇಲುಕೈ ಸಾಧಿಸಲು ಅಸಾಧ್ಯ ಎನ್ನುವುದೇ ಈ ಚರ್ಚಿತ ವಿಚಾರ. ಇಂತಹ ಮುಕ್ತ ಮಾರುಕಟ್ಟೆಗಳಲ್ಲಿ ಉತ್ಪಾದಕರು ಮತ್ತು ಗ್ರಾಹಕರ ನಡುವೆ ತೀವ್ರಪೈಪೋಟಿ ನಡೆಯುತ್ತಲೇ ಇರುತ್ತದೆ. ಹೀಗಾಗಿ ಗ್ರಾಹಕರನ್ನು ನಿಗ್ರಹಿಸಿ ಸರಕುಗಳ ಬೆಲೆಗಳನ್ನು ನಿರ್ಧರಿಸಲು ಸಾಧ್ಯವಿಲ್ಲ. ಆದ್ದರಿಂದ ಯಾರ ಆಧಿಪತ್ಯವೂ ಮಾರುಕಟ್ಟೆಯಲ್ಲಿ ಸಾಧ್ಯವಿಲ್ಲ. ಸದಾ ಗುಣಮಟ್ಟ, ಕನಿಷ್ಠ ಬೆಲೆ ಸಾಧಿಸುವುದು ಅನಿವಾರ್ಯ. ಯಾವ ಉತ್ಪಾದಕನನ್ನು ಬಳಸಿ ಕೊಳ್ಳಬೇಕೆಂಬುದನ್ನು ಗ್ರಾಹಕನೇ ನಿರ್ಧರಿಸುವುದು ಇಂತಹ ಮಾರುಕಟ್ಟೆಗಳ ಮುಖ್ಯ ಲಕ್ಷಣ! ಬಂಡವಾಳದ ಕ್ರೊಢೀಕರಣ, ವಿನಿಮಯದ ವಿಚಾರದಲ್ಲೂ ಗ್ರಾಹಕನದೇ ಮೇಲುಗೈ. ಇಲ್ಲಿ ಗ್ರಾಹಕರೆಂದರೆ ಹೂಡಿಕೆದಾರರು ಎನ್ನಬಹುದು. ಕ್ಷಮತೆಯಿಂದ ಕಾರ್ಯವೆಸಗುವ ಉದ್ಯಮಗಳಲ್ಲಿ ಮಾತ್ರ ಹೂಡಿಕೆದಾರರು ತಮ್ಮ ಉಳಿತಾಯದ ಹಣವನ್ನು ತೊಡಗಿಸುತ್ತಾರೆ. ಇದರಿಂದ ಬಂಡವಾಳದ ಸಮರ್ಪಕ ಉಪಯೋಗ/ಬಟವಾಡೆ ನಡೆಯುತ್ತದೆ. ಮುಕ್ತ ಮಾರುಕಟ್ಟೆಗಳಲ್ಲಿ ಬಂಡವಾಳ ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ಹರಿದಾಡುವುದರಿಂದ ಜಾಗತಿಕ ನೆಲೆಯಲ್ಲಿ ಬಂಡವಾಳದ ಸಮರ್ಥಕ ಬಳಕೆಯೂ ಸಾಧ್ಯವಾಗಿರುವುದು ಮಾರುಕಟ್ಟೆಯ ಒಂದು ಸಾಧನೆಯೆನ್ನಬಹುದು.

ಮಾರುಕಟ್ಟೆಗಳ ಆರೋಗ್ಯ:  ಮಾರುಕಟ್ಟೆಗಳು ಸಂಪನ್ಮೂಲಗಳ ವಿಲೆವಾರಿಯಲ್ಲಿ ಮುಖ್ಯ ಪಾತ್ರ ವಹಿಸುವುದೇನೋ ಸರಿಯೇ. ಆದರೆ ಅವುಗಳು ತಮ್ಮ ವಿಶ್ವಾರ್ಸಾಹತೆಯನ್ನು ಉಳಿಸಿಕೊಂಡು ಆರೋಗ್ಯಕರವಾಗಿ ಕಾರ್ಯ ನಿರ್ವಹಿಸುವುದು ಅತೀ ಅಗತ್ಯ. ಜಾಗತೀಕರಣದಿಂದಾಗಿ ಮಾರುಕಟ್ಟೆಗಳು ಹಾಸುಹೊಕ್ಕಾಗುತ್ತಿವೆ. ಮಾರುಕಟ್ಟೆಗಳಲ್ಲಿ ಸ್ಪರ್ಧೆಯೇ ಮುಖ್ಯವಾಗುವಾಗ, ಮಾರುಕಟ್ಟೆಯ ಆಧೀನ ಸಂಸ್ಥೆಗಳು, ಘಟಕಗಳು ತಮ್ಮ ಉಳಿವಿಗಾಗಿ ಸದಾ ಪೈಪೋಟಿಯಲ್ಲಿ ತೊಡಗುತ್ತವೆ. ತಮ್ಮ ಪಾರಮ್ಯವನ್ನು ಉಳಿಸಿಕೊಳ್ಳಲು ಕೆಲವೊಮ್ಮೆ ಅಡ್ಡ ದಾರಿ ಹಿಡಿಯುವುದು, ಹಿಚ್ಚಿನ ರಿಸ್ಕ್ ತೆಗೆದುಕೊಳ್ಳುವುದು, ದೂರದೃಷ್ಟಿಯಿಂದ ಸದ್ಯ ಭವಿಷ್ಯದ ನಿರ್ವಹಣೆಗೆ ತೊಡಗುವುದು, ಕರವಂಚನೆ, ಗತಿ ನಿಯಂತ್ರಕ (rಛಿಜulಚಠಿಟ್ಟ) ವಿಧಿ ವಿಧಾನಗಳ ಉಲ್ಲಂಘನೆ, ನಿರ್ಲಕ್ಷ್ಯ ಮಾಡುವುದು ಸಾಮಾನ್ಯ ಆಮಿಷಗಳು.  ಮಾರುಕಟ್ಟೆಗಳು ಸ್ಥಿಮಿತದಲ್ಲಿರಬೇಕಾದರೆ ಸನ್ನಡತೆ, ಜಾಗರೂಕತೆ, ಸತ್ಯಸಂಧತೆ, ವಿಶ್ವಾಸಾರ್ಹತೆಗಳನ್ನು ಉಳಿಸಿಕೊಳ್ಳುವುದು ಅತೀ ಅಗತ್ಯ. ಮಾರುಕಟ್ಟೆಗಳು ಅದರ ಭಾಗವಾದ ಘಟಕಗಳ ಒಳಸಂಚಿಗೆ ಬಲಿಯಾಗುತ್ತವೆ. 2008ರ ಜಾಗತಿಕ ಧ್ರುವೀಕರಣ ಇದಕ್ಕೊಂದು ಜ್ವಲಂತ ಉದಾಹರಣೆ. ಮಾರುಕಟ್ಟೆಗಳು ಎಷ್ಟೇ ಮುಕ್ತವಾಗಿದ್ದರೂ ದೇಶೀಯ ಮತ್ತು ಅಂತಾರಾಷ್ಟ್ರೀಯ ನೆಲೆಯಲ್ಲಿ ಗತಿ ನಿಯಂತ್ರಕರು ಸೂಕ್ತ ವಿಧಿವಿಧಾನಗಳನ್ನು ರೂಪಿಸಿ ಮಾರುಕಟ್ಟೆಗಳನ್ನು ಆರೋಗ್ಯಕರವಾಗಿ ಉಳಿಸಿಕೊಳ್ಳುವುದು ಅತೀ ಅಗತ್ಯ. ಮಾರುಕಟ್ಟೆಗಳು ಹೊಸ-ಹೊಸ ರೂಪಗಳನ್ನು ಆವಿಷ್ಕರಿಸುತ್ತಿರುವುದರಿಂದ ಮಾರುಕಟ್ಟೆಯ ಕಾನೂನುಗಳು, ವಿಧಾನಗಳು ಗ್ರಾಹಕರ ಹಿತರಕ್ಷಣೆಯ ದೃಷ್ಟಿಯಿಂದ ಸಮರ್ಥವಾಗಿರಬೇಕು. ತಾತ್ವಿಕ ಮಾರುಕಟ್ಟೆಗಳು ವೇಗವಾಗಿ ಬೆಳೆಯುತ್ತಿರುವುದರಿಂದ ಆ ದಿಶೆಯಲ್ಲಿ ನಿಯಂತ್ರಕರ ಗಮನಹರಿಯಬೇಕಾಗಿದೆ.

ನಮ್ಮ ಮಾರುಕಟ್ಟೆಗಳು ಮತ್ತು ನಾವು: ಕಳೆದ ಅರ್ಧ ಶತಮಾನದಲ್ಲಿ ಮಾರುಕಟ್ಟೆಗಳಲ್ಲಿ ಆಮೂಲಾಗ್ರ ಬದಲಾವಣೆಗಳಾಗಿರುವುದನ್ನು ನಾವು ಕಾಣಬಹುದು. ಹಳ್ಳಿಗಳಲ್ಲೂ ಅರೆ ನಗರಗಳಲ್ಲೂ ವಾರಕ್ಕೊಮ್ಮೆ ನಡೆಯುವ ಸಂತೆಗಳಿಂದ ನಾವೀಗ “ಮಾಲ್‌’ಗಳೆಂಬ ಹೊಸ ತರಹದ ಮಾರುಕಟ್ಟೆಗಳನ್ನು ಕಾಣುತ್ತಿದ್ದೇವೆ. ನಮ್ಮ ಜೀವನಕ್ರಮ ಅದಕ್ಕೆ ಒಗ್ಗಿಕೊಂಡಿದೆ. ನಮ್ಮ ಜೀವನಶೈಲಿಯು ಮೂಲ ಆವಶ್ಯಕತೆಗಳನ್ನು ಮೀರಿ ದೂರ ಸಾಗಿದೆ. ಇಂದಿನ ವಾಣಿಜ್ಯ ಮತ್ತು ಉದ್ಯಮಗಳು ಹೊಸ ಹೊಸ ಮಾರುಕಟ್ಟೆಗಳನ್ನು ಹುಟ್ಟು ಹಾಕಿವೆ. ಭಾರತದ ಮಟ್ಟಿಗೆ ಮಾರುಕಟ್ಟೆಗಳು ಮೂಲ ಲಕ್ಷಣಗಳನ್ನು ಬದಲಿಸಿ ಜಾಗತಿಕ ಮಾರುಕಟ್ಟೆಯ ಲಕ್ಷಣಗಳನ್ನು ತನ್ನದಾಗಿಸಿಕೊಳ್ಳುತ್ತಿವೆ. ಕೆಲವು ದಶಕಗಳ ಹಿಂದೆ ನಿಯಂತ್ರಿತ ಆರ್ಥಿಕತೆಯಲ್ಲಿ ಉತ್ಪನ್ನಗಳ ಕೊರತೆ ಇತ್ತು. ಆದ್ದರಿಂದ ಮಾರಾಟಕ್ಕೆ ಹೆಚ್ಚಿನ ಒತ್ತು ಬೇಕಿರಲಿಲ್ಲ. ಆದರೆ ಈಗ ತಯಾರಿ-ಉತ್ಪಾದನೆಗೆ ಕಡಿವಾಣಗಳಿಲ್ಲ. ಆದ್ದರಿಂದ ಉತ್ಪನ್ನಗಳು ಬೇಡಿಕೆಯನ್ನು ಮೀರಿವೆ. ಆದ್ದರಿಂದ ಮಾರಾಟ ಆದ್ಯತೆ ಪಡೆದಿದೆ. ಇದು ವಿವಿಧ ಮಾರುಕಟ್ಟೆಗಳನ್ನು ಹುಟ್ಟು ಹಾಕಿ ಉತ್ಪಾದನೆಯನ್ನು ಪ್ರಚೋದಿಸಿದೆ.  ವಸ್ತು ಬಾಹುಳ್ಯದ ಇಂದಿನ ದಿನಗಳಲ್ಲಿ ಗ್ರಾಹಕರದೇ ಮೇಲುಗೈ; ಆಯ್ಕೆಗೆ ಸಾಕಷ್ಟು ಅವಕಾಶಗಳು. ಒಂದು ಸ್ಕೂಟರ್‌ ಖರೀದಿಗೆ ಐದೋ ಹತ್ತೋ ವರ್ಷಗಳಷ್ಟು ಕಾಯಬೇಕಾದ ಆ ದಿನಗಳೆಲ್ಲಿ! ಅವೇ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸುತ್ತಾಡಿ ಖರೀದಿಸಬಹುದಾದ ಇಂದಿನ ದಿನಗಳೆಲ್ಲಿ! ಇದು ಉದಾರೀಕರಣದ ಒಂದು ಕೊಡುಗೆಯೇ? ಶಾಪವೇ? ಹೇಗೆ ಉತ್ತರಿಸಬೇಕು!?

ಮಾರುಕಟ್ಟೆಗಳು ಬೆಳೆದಂತೆಲ್ಲ ಜನರ ಆವಶ್ಯಕತೆಗಳೂ ಬೆಳೆಯುತ್ತಿರುವುದು ವಿಶೇಷ. ಮಾರುಕಟ್ಟೆಗಳು ಎಷ್ಟೇ ಬೆಳೆಯಲಿ, ಎಷ್ಟೇ ವಸ್ತುವೈವಿಧ್ಯಗಳು ಮಾರುಕಟ್ಟೆಯಲ್ಲಿ ಕಾಣಬರಲಿ; ಗ್ರಾಹಕನ ಬೇಡಿಕೆಗಳು ಎಂದಿಗೂ ಸಂತೃಪ್ತವಾಗುವುದಿಲ್ಲ. ಯಾವುದೇ ನಿಖರವಾದ ಕೊಳ್ಳುವ ಉದ್ದೇಶವಿಲ್ಲದೆ ಮಾರುಕಟ್ಟೆಯಲ್ಲಿ ತಿರುಗಾಡಿದರೆ ಒಂದಷ್ಟು ವಸ್ತುಗಳೂ ಉತ್ಪನ್ನಗಳೂ ಮನೆ ಸೇರುವುದು ಸಾಮಾನ್ಯವಾಗಿಬಿಟ್ಟಿದೆ. ಇದು ಸಕಾರಾತ್ಮಕವೋ ನಕಾರಾತ್ಮಕವೋ ನಮ್ಮ ವಿವೇಚನೆಗೆ ಬಿಟ್ಟದ್ದು. ಮಾರುಕಟ್ಟೆಗಳು ನಮ್ಮ ಮೇಲೆ ಪ್ರಭಾವ ಬೀರುತ್ತಿರುವುದಂತೂ ಸತ್ಯ.

– ಡಾ| ಕೊಳ್ಚಪ್ಪೆ ಗೋವಿಂದ ಭಟ್‌

ಟಾಪ್ ನ್ಯೂಸ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.