ಆಧುನಿಕ ಯಶಸ್ಸಿನ ಕಥೆಗಳಲ್ಲಿದೆ ಕೆಟ್ಟ ಪಾಠ


Team Udayavani, Dec 2, 2018, 6:00 AM IST

s-31.jpg

ಇಂದಿನ ಈ ಜಗತ್ತಿನಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ ನಿಜ. ಆದರೆ ಎಲ್ಲರಿಗೂ ಹಣ-ಖ್ಯಾತಿ ಗಳಿಸಲು, ಉನ್ನತ ಸ್ಥಾನಮಾನಕ್ಕೇರಲು ಸಾಧ್ಯವಿಲ್ಲ. ಕೆಲವೇ ಕೆಲವರಿಗೆ ಮಾತ್ರ ಈ ಸೌಭಾಗ್ಯ ದೊರೆಯುತ್ತದೆ. ಹಾಗೆಂದು, ಮೇಲಕ್ಕೇರಿದವನು ಎಲ್ಲರಿಗಿಂತ ಹೆಚ್ಚು ಶ್ರಮಪಟ್ಟನೆಂದೋ ಅಥವಾ ಕೆಳಕ್ಕಿರುವವನು ಕಡಿಮೆ ಶ್ರಮಪಟ್ಟನೆಂದೋ ಇದರರ್ಥವಲ್ಲ. 

ಯಶಸ್ಸು! 
ಮಾನವ ಜನಾಂಗವನ್ನು ಈ ಪದ ಯಾವ ಮಟ್ಟಕ್ಕೆ ಆವರಿಸಿಕೊಂಡುಬಿಟ್ಟಿದೆಯೆಂದರೆ, “ಒಂದು ತಿಂಗಳಲ್ಲಿ ಯಶಸ್ವಿಯಾಗುವುದು ಹೇಗೆ?’, “ಯೂ ಕ್ಯಾನ್‌ ಡೂ ಇಟ್‌’ “ಯಶಸ್ಸಿಗೆ 8 ಸೂತ್ರಗಳು’ ಎಂಬ ಶಿರೋನಾಮೆಯಲ್ಲಿ ಲಕ್ಷಾಂತರ ಪುಸ್ತಕಗಳು ಜಗತ್ತಿನಾದ್ಯಂತ ಪ್ರಕಟವಾಗುತ್ತವೆ. ಕೋಟ್ಯಂತರ ಪ್ರತಿಗಳು ಮಾರಾಟವಾಗುತ್ತದೆ. ಇಂಥ ಪುಸ್ತಕಗಳನ್ನು ಪ್ರಕಟಿಸಿಯೇ ಬದುಕು ಸಾಗಿಸುತ್ತಿರುವ ಪ್ರಕಾಶಕರಿದ್ದಾರೆ, ಲೇಖಕರಿದ್ದಾರೆ. ಪ್ರೇರಣಾದಾಯಕ ಭಾಷಣಗಳಲ್ಲಿ, ಕಾರ್ಪೊರೇಟ್‌ ಕಥೆಗಳಲ್ಲಿ, ಟ್ವೀಟುಗಳಲ್ಲಿ, ಕೋಟುಗಳಲ್ಲಿ, ಲೇಖನಗಳಲ್ಲಿ, ಗಾದೆ ಮಾತುಗಳಲ್ಲಿ, ಗೆಳೆಯರ ನಡುವಿನ ಹರಟೆಗಳಲ್ಲಿ, ಗುರುಗಳ ಪ್ರವಚನಗಳಲ್ಲಿ, ಶಾಲೆಯಲ್ಲಿ, ಕಚೇರಿಗಳಲ್ಲಿ…”ಯಶಸ್ಸು’ ಎನ್ನುವ ಪದ ಯಾವ ಮಟ್ಟಕ್ಕೆ ಹಾಸುಹೊಕ್ಕಾಗಿದೆಯೆಂದರೆ ಕಷ್ಟಪಟ್ಟವನಿಗೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬ ಖಚಿತತೆಯನ್ನೂ ಈ ಪದದ ಸುತ್ತಲಿನ ಕಥೆಗಳು ಹೇಳುತ್ತವೆ. 

ಯಶಸ್ವಿಯೆಂದು ಕರೆಸಿಕೊಳ್ಳುವವರ ಕಥೆಯಲ್ಲಿ ಒಂದು ಸಾಮ್ಯತೆ ಇರುತ್ತದೆ. ಮೊದಲು ಹೇಗೆ ಅವರು ಜೀವನದಲ್ಲಿ ಕಷ್ಟ ಎದುರಿಸಿದರು, ನಂತರ ಹೇಗೆ ಅವರು ಕಠಿಣ ಪರಿಶ್ರಮ, ಶ್ರದ್ಧೆ, ಬದ್ಧತೆಯಿಂದ ಮೇಲೆ ಬಂದರು ಎನ್ನುವ ಸಾಮ್ಯತೆಯದು. ದೊಡ್ಡ ಸ್ಟಾರ್‌ಗಳನ್ನು ಕೇಳಿದರೆ ತಮ್ಮ ಯಶಸ್ಸಿಗೆ ತಮ್ಮ ಕಠಿಣ ಪರಿಶ್ರಮವೇ ಕಾರಣ ಎಂದು, ತಾವು ಅನುಭವಿಸಿದ ಕಷ್ಟಗಳ ಕಥೆಗಳನ್ನು ಮನಮುಟ್ಟುವಂತೆ ಹೇಳುತ್ತಾರೆ. 

ಆದರೆ ಕಠಿಣ ಪರಿಶ್ರಮದಿಂದ ಯಶಸ್ಸು (ಹಣ-ಖ್ಯಾತಿ, ಉನ್ನತ ಸ್ಥಾನ ಅಂದುಕೊಳ್ಳೋಣ) ಸಿಗುತ್ತದೆ ಎನ್ನುವ ಪ್ರೇರಣಾದಾಯಿ ವ್ಯಾಖ್ಯಾನದಿಂದ ಇಂದಿನ ಸಮಾಜದ ಮೇಲೆ ಉಂಟಾಗುತ್ತಿರುವ ಬೃಹತ್‌ ಹಾನಿಯನ್ನು ನಾವು ಗಮನಿಸುತ್ತಲೇ ಇಲ್ಲ.  ಒಬ್ಬ ವ್ಯಕ್ತಿ ಹಣ ಗಳಿಸಿದಾಗ, ಉನ್ನತ ಸ್ಥಾನಕ್ಕೇರಿದಾಗ ಅದಕ್ಕೆ ಆತನ ಕಠಿಣ ಪರಿಶ್ರಮವೇ ಕಾರಣ ಎಂದು ನಾವು ನಂಬುವ ಜೊತೆಯಲ್ಲೇ, ಯಾವ ವ್ಯಕ್ತಿಯ ಬಳಿ ಹಣವಿಲ್ಲವೋ, ಯಾವುದೋ ಚಿಕ್ಕ ಕೆಲಸದಲ್ಲಿದ್ದಾನೋ ಅದಕ್ಕೆ ಅವನೇ ಕಾರಣ, ಅವನು ಪರಿಶ್ರಮ ಪಡುತ್ತಿಲ್ಲ ಎಂಬ ಭಾವನೆಯನ್ನೂ ಬೆಳೆಸಿಕೊಂಡುಬಿಟ್ಟಿದ್ದೇವೆ.  

 ನೀವು ಯಾವುದೋ ಪಾರ್ಟಿ ಅಟೆಂಡ್‌ ಮಾಡುವಾಗ, ನಿಮಗೆ ಅಪರಿಚಿತರಿಂದ ಮೊದಲು ಎದುರಾಗುವ ಪ್ರಶ್ನೆಯೇನು? “”ನೀವೇನು ಕೆಲಸ ಮಾಡ್ತೀರಿ?” ಎನ್ನುವುದೇ ಅಲ್ಲವೇ? ನಿಮ್ಮ ಉತ್ತರ ಎಷ್ಟು ಪ್ರಭಾವಶಾಲಿಯಾಗಿರುತ್ತದೆ, ಎಷ್ಟು ಆಕರ್ಷಕ ಕೆಲಸದಲ್ಲಿ ನೀವಿದ್ದೀರಿ ಎನ್ನುವುದರ ಆಧಾರದ ಮೇಲೆ, ಜನ ನಿಮ್ಮೆಡೆಗೆ ಆಸಕ್ತಿ ತೋರಿಸುತ್ತಾರೆ. ಇಲ್ಲವೇ, ಒಂದಿಷ್ಟು ನೆಪಕ್ಕೆಂಬಂತೆ ಮಾತನಾಡಿ ಮುಂದೆ ಸಾಗುತ್ತಾರೆ. ವೃತ್ತಿ ಎನ್ನುವುದು ನಮ್ಮ ಬದುಕಿನ ಒಂದು ಚಿಕ್ಕ ಭಾಗವಷ್ಟೇ, ಅದನ್ನು ಹೊರತುಪಡಿಸಿ ನಾವು ಬೇರೆಯೇ ವ್ಯಕ್ತಿಯಾಗಿರುತ್ತೀವಿ. ಆದರೆ ಜನರು ನಮ್ಮನ್ನು ತುಲನೆ ಮಾಡುವುದು ಮತ್ತು ನಾವು ಇತರರ ಮೌಲ್ಯವನ್ನು ಲೆಕ್ಕಹಾಕುವುದು ಆತ ಯಾವ ವೃತ್ತಿಯಲ್ಲಿದ್ದಾನೆ, ಎಷ್ಟು ಹಣ ಗಳಿಸಿದ್ದಾನೆ, ಅವನ ಬಳಿ ಕಾರಿದೆಯೋ ಅಥವಾ ಸೈಕಲ್ಲಲ್ಲಿ ಅಡ್ಡಾಡುತ್ತಾನೋ ಎನ್ನುವುದರ ಆಧಾರದಲ್ಲಿಯೇ. ಈ ಕಾರಣಕ್ಕಾಗಿಯೇ “ಈ ರೀತಿಯ’ ಯಶಸ್ಸಿನ ಕೊರತೆಯು ನಮ್ಮಲ್ಲಿ ಕೀಳರಿಮೆ, ಒತ್ತಡ, ಖನ್ನತೆಯನ್ನು ಹುಟ್ಟುಹಾಕುತ್ತಲೇ ಇರುತ್ತದೆ. ಏನಾದರೂ ಮಾಡಿ ಸಮಾಜದಿಂದ ಗೌರವ ಗಿಟ್ಟಿಸಿಕೊಳ್ಳಲೇಬೇಕು ಎನ್ನುವ ಜನರಲ್ಲಿನ ಈ ಒತ್ತಡವನ್ನೇ ಬಂಡವಾಳವಾಗಿ ಮಾಡಿಕೊಳ್ಳುತ್ತದೆ “ಮೋಟಿವೇಷನಲ್‌ ಉದ್ಯಮ’. 

“ಕಠಿಣ ಪರಿಶ್ರಮದಿಂದಲೇ ಯಶಸ್ಸು’ ಎನ್ನುವ ವ್ಯಾಖ್ಯಾನಕ್ಕೆ ಗಂಟುಬಿದ್ದು ನಾವು ಶ್ರಮಪಡುತ್ತಲೇ ಹೋಗುತ್ತೇವೆ. ಅದು ದಕ್ಕದೇ ಹೋದಾಗ ಒತ್ತಡ, ಕೀಳರಿಮೆ ಹೆಚ್ಚಾಗುತ್ತಲೇ ಹೋಗುತ್ತದೆ. ಇದೆಲ್ಲದರ ಅರ್ಥವಿಷ್ಟೆ, ನಾವೆಲ್ಲ ಇಂದು ಶ್ರಮಪಡುತ್ತಿರುವುದು ನೇರವಾಗಿ ಹಣಕ್ಕೆ ಅಥವಾ ಉನ್ನತ ಸ್ಥಾನಗಳಿಗಲ್ಲ, ಬದಲಾಗಿ, ಅದು ತಂದುಕೊಡಬಹುದಾದ ಗೌರವಕ್ಕೆ ಮತ್ತು ಆ ಸ್ಥಾನಮಾನ ಇರುವವರು ಗಳಿಸುವಂಥ “ಪ್ರೀತಿ’ಯನ್ನು ಪಡೆಯುವುದಕ್ಕೆ. ಇಂದಿನ ಈ ಜಗತ್ತಿನಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ ನಿಜ. ಆದರೆ ಎಲ್ಲರಿಗೂ ಹಣ-ಖ್ಯಾತಿ ಗಳಿಸಲು, ಉನ್ನತ ಸ್ಥಾನಮಾನಕ್ಕೇರಲು ಸಾಧ್ಯವಿಲ್ಲ. ಕೆಲವೇ ಕೆಲವರಿಗೆ ಮಾತ್ರ ಈ ಸೌಭಾಗ್ಯ ದೊರೆಯುತ್ತದೆ. ಹಾಗೆಂದು, ಮೇಲಕ್ಕೇರಿದವನು ಎಲ್ಲರಿಗಿಂತ ಹೆಚ್ಚು ಶ್ರಮಪಟ್ಟನೆಂದೋ ಅಥವಾ ಕೆಳಕ್ಕಿರುವವನು ಕಡಿಮೆ ಶ್ರಮಪಟ್ಟನೆಂದೋ ಇದರರ್ಥವಲ್ಲ. 

ಇಲ್ಲಿ ನಾವು ಲಕ್‌ ಅಥವಾ ಅದೃಷ್ಟದಾಟವನ್ನು  ಕಡೆಗಣಿಸುತ್ತಿದ್ದೇವೆ. ಒಬ್ಬ ಕ್ರೀಡಾಪಟುವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಂಥ ಎಲ್ಲಾ ರೀತಿಯ ಪ್ರತಿಭೆಯಿರಬಹುದು. ಅಂತಾರಾಷ್ಟ್ರೀಯ ಕ್ರೀಡಾಪಟುಗಳಷ್ಟೇ ಅಥವಾ ಅವರೆಲ್ಲರಿಗಿಂತಲೂ ಅವನು ಹೆಚ್ಚು ಪರಿಶ್ರಮಪಡುತ್ತಿರಬಹುದು. ಆದರೆ, ಆಯ್ಕೆಯ ಸಮಯದಲ್ಲಿ ಅವನು ಕಳಪೆ ಪ್ರದರ್ಶನ ನೀಡಿ, ಯಶಸ್ಸಿನಿಂದ ವಂಚಿತನಾಗಬಹುದು, ಯಾವುದೋ ದುರ್ಘ‌ಟನೆ ಅವನ ಮುಖ್ಯ ಅಂಗಾಗಳನ್ನೇ ಕಸಿದುಹಾಕಬಹುದು. ಹಾಗೆಂದು ಅವನು ಸೋಲಿಗೆ ಅರ್ಹ ಎಂದರ್ಥವೇನು? ಅವನ ವೈಫ‌ಲ್ಯಕ್ಕೆ ಅವನೇ ಕಾರಣನೇನು? ಸೋತವನಿಗೆ ಲಕ್‌ ಎಷ್ಟು ಕೈಕೊಟ್ಟಿರುತ್ತದೋ, ಗೆದ್ದವನಿಗೆ ಲಕ್‌ ಅಷ್ಟೇ ಕೈಗೂಡಿರುತ್ತದೆ.

ಚಿಕ್ಕ ಗ್ಯಾರೇಜ್‌ ಒಂದರಲ್ಲಿ ಬಿಲ್‌ಗೇಟ್ಸ್‌ ತಮ್ಮ ಮೈಕ್ರೋಸಾಫ್ಟ್ ಕಂಪೆನಿ ಆರಂಭಿಸಿದರು, ನಂತರ ಅವರು ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾದರು. ದೃಢ ಮನಸ್ಸು, ಒಳ್ಳೆಯ ಐಡಿಯಾ ಇದ್ದರೆ ನೀವು ಮತ್ತೂಬ್ಬ ಬಿಲ್‌ಗೇಟ್ಸ್‌ ಆಗಬಹುದು ಎನ್ನುವುದು ಈ ಆಧುನಿಕ ಯುಗದ ವಾದ. ಆದರೆ ಜಗತ್ತಿನಲ್ಲಿಂದು ಅದ್ಭುತ ಐಡಿಯಾಗಳನ್ನು ಹೊತ್ತ ಅಗಣಿತ ಕಂಪನಿಗಳಿವೆ. ಅವು ಎಲ್ಲೂ ಸಲ್ಲದೇ ವಿಫ‌ಲವಾಗಿ ಬಾಗಿಲು ಹಾಕುತ್ತಿವೆ.  ಆದರೆ ನಮಗೆ ಕಾಣಿಸುವುದು ಒಬ್ಬ ಸಫ‌ಲ ಬಿಲ್‌ಗೇಟ್ಸ್‌ ಅಷ್ಟೇ ಹೊರತು, ಅಷ್ಟೇ ಪ್ರತಿಭೆಯಿರುವ ಕೋಟ್ಯಂತರ  ವಿಫ‌ಲ ಜನರಲ್ಲ.

ಶತಮಾನಗಳ ಹಿಂದೆ ಒಬ್ಬ ವ್ಯಕ್ತಿ ಬಡವನಾಗಿದ್ದರೆ ಆ ಸ್ಥಿತಿಗೆ ಅವನೇ ಪೂರ್ಣಜವಾಬ್ದಾರನೆಂದು ಜನ ಪಟ್ಟಕಟ್ಟುತ್ತಿರಲಿಲ್ಲ. ಅವನನ್ನು “ದುರ್ದೈವಿ’ ಎನ್ನುತ್ತಿದ್ದರಷ್ಟೆ. ಅದೃಷ್ಟದೇವತೆ ಅವನ ಜೊತೆಗಿಲ್ಲ ಎಂದೂ ಭಾವಿಸುತ್ತಿದ್ದರು. ಅದೃಷ್ಟ-ದುರಾದೃಷ್ಟ ಎನ್ನುವುದನ್ನು ಇಂದು ನಂಬುವವರೇ ಇಲ್ಲದಾಗಿದೆ. ಹೀಗಾಗಿ, ಒಬ್ಬನ ಕೆಟ್ಟ ಪರಿಸ್ಥಿತಿಯನ್ನು ನಾವು ಅವನ ವೈಫ‌ಲ್ಯವೆಂದೇ ಪರಿಗಣಿಸುತ್ತೇವೆ. ತನ್ನ ಸೋಲಿಗೆ ತಾನೇ ಕಾರಣ ಎಂದು ವ್ಯಕ್ತಿಯೊಬ್ಬ ಭಾವಿಸಲಾರಂಭಿಸಿದರೆ, ತಾನು ಯಾವುದಕ್ಕೂ ಪ್ರಯೋಜನ ವಿಲ್ಲದವನು ಎಂಬ ಖನ್ನತೆ ಅವನಲ್ಲಿ ಮನೆಮಾಡುತ್ತದೆ. ಈ ಎಲ್ಲಾ ಕಾರಣಕ್ಕಾಗಿಯೇ, ಅತ್ಯಾಧುನಿಕ ತಂತ್ರಜ್ಞಾನದ ಈ ಯುಗದಲ್ಲಿಯೇ ಒತ್ತಡ, ಖನ್ನತೆ, ಆತ್ಮಹತ್ಯೆಗಳ ಸಂಖ್ಯೆ ಹೆಚ್ಚು! 

ಹಾಗಿದ್ದರೆ, ಯಶಸ್ವಿಯಾಗಲು ಯಾರೂ ಪ್ರಯತ್ನಿಸಬಾರದೇ? ಪ್ರಯತ್ನಿಸಬಾರದು, ಕಠಿಣ ಪರಿಶ್ರಮ ಪಡಬಾರದು ಎಂದು ನಾನಿಲ್ಲಿ ಹೇಳುತ್ತಿಲ್ಲ. ಹಣ-ಅಂತಸ್ತು-ಉನ್ನತ ಸ್ಥಾನ ದಕ್ಕಿದರೆ ಒಳ್ಳೆಯದೇ. ಆದರೆ ಒಬ್ಬ ವ್ಯಕ್ತಿಯ ಯಶಸ್ಸಿನಲ್ಲಿ ಕೇವಲ ಅವನ ಕಠಿಣ ಪರಿಶ್ರಮವಷ್ಟೇ ಅಲ್ಲ, ಲಕ್‌ ಕೂಡ ಕೆಲಸ ಮಾಡಿರುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಇದರ ಜೊತೆಗೇ ಒಬ್ಬ ವ್ಯಕ್ತಿ ಹಣ-ಅಂತಸ್ತು ಗಳಿಸಲು ವಿಫ‌ಲನಾದರೆ, ಉನ್ನತ ಹುದ್ದೆ ಗಳಿಸದೇ ಇದ್ದರೆ ಅವನನ್ನು ಕೀಳಾಗಿ ಕಾಣುವುದನ್ನು ನಿಲ್ಲಿಸಬೇಕು. ಗೌರವಾದರಕ್ಕೆ ಬಾಸ್‌ ಅಷ್ಟೇ ಅಲ್ಲ, ಕಚೇರಿಯ ಜವಾನನೂ ಅರ್ಹ ಎಂಬ ಭಾವನೆ ನಮ್ಮಲ್ಲಿ ಬೆಳೆಯಬೇಕು. 

ಎರಡನೆಯದಾಗಿ, ಯಶಸ್ಸಿಗೆ ನಮ್ಮದೇ ಆದ ವ್ಯಾಖ್ಯಾನವನ್ನು ಕೊಟ್ಟುಕೊಳ್ಳೋಣ. ಔದ್ಯೋಗಿಕ ಬಂಡವಾಳಶಾಹಿ ಪ್ರಪಂಚ ಯಾವುದನ್ನು ಯಶಸ್ಸು ಅನ್ನುತ್ತದೋ ಅದರ ಹೊರತಾಗಿಯೂ ಯಶಸ್ಸು ಎನ್ನುವುದು ಇದೆ. ಒಬ್ಬ ಒಳ್ಳೆಯ ಅಪ್ಪನಾಗಿ, ಒಬ್ಬ ಸಮಾಜಮುಖೀ ವ್ಯಕ್ತಿಯಾಗಿ, ಅದ್ಭುತ ಪ್ರೇಮಿಯಾಗಿ, ಪ್ರಾಮಾಣಿಕ ಸ್ನೇಹಿತನಾಗಿ, ಜೀವನದ ಚಿಕ್ಕ ಪುಟ್ಟ ರಸಾಸ್ವಾದಗಳನ್ನು ಅನುಭವಿಸುವ ಚೈತನ್ಯವಾಗಿ ನೀವು ಯಶಸ್ವಿಯಾಗಬಹುದು. ನಮ್ಮ ಬ್ಯುಸಿನೆಸ್‌ ಕಾರ್ಡ್‌ಗಳ ಮೇಲೆ, ನಮ್ಮ ರೆಸ್ಯೂಮ್‌ಗಳ ಮೇಲೆ ಕಾಣಿಸಿಕೊಳ್ಳುವ ಅಂಶಗಳಷ್ಟೇ ನಾವಲ್ಲ. ನಮ್ಮ ಸಂಬಳ, ನಮ್ಮ ಕಾರು, ನಮ್ಮ ವಾಚು ನಾವಲ್ಲ. ಅದರ ಹೊರತಾಗಿಯೂ ನಾವಿದ್ದೇವೆ, ಆ ನಾವನ್ನು ಮರೆಯದಿರೋಣ. 

ಎಲೆನಾ ಸ್ಯಾಂಟರೆಲಿ
ಮನಃಶಾಸ್ತ್ರಜ್ಞರು, ಉದ್ಯಮಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.