
ಒಂದರ ಬದಲು ಎರಡರ ಕೊಡುಗೆ
Team Udayavani, Jul 30, 2022, 6:05 AM IST

“ತಾನೊಂದು ನೆನೆದರೆ ಮಾನವ| ಬೇರೊಂದು ಬಗೆವುದು ದೈವ…|| ಆ ದೇವರ ಎದುರಿಸಿ ಜೀವ| ಪಡೆವುದು ನೂರೆಂಟು ನೋವ…|| “ಕುಂಕುಮ ರಕ್ಷೆ’ (1977) ಚಲನಚಿತ್ರದಲ್ಲಿರುವ ಹಾಡಿದು.
ಪ್ರೊ| ಅರವಿಂದ ಹೆಬ್ಟಾರ್ ಹೆಸರನ್ನು ಕೇಳರಿಯದ ಕರಾವಳಿಯ ಸಂಗೀತ ಕಲಾರಸಿಕರು ಇರಲಿಕ್ಕಿಲ್ಲ. ಇವರ ಪುತ್ರಿ ರಂಜನಿ ಹೆಸರನ್ನು ಕೇಳದ ಮಧ್ಯವಯಸ್ಸು ದಾಟಿದ ಪ್ರಸಿದ್ಧ ಕರ್ನಾಟಕ ಸಂಗೀತ ಕಲಾವಿದರು ಇಲ್ಲ. ಆದರೇನು? ರಂಜನಿಯನ್ನು ವಿಧಿ ಕರೆಯಿತು. ಅರವಿಂದ ಹೆಬ್ಟಾರ್ ಛಲಬಿಡದ ತ್ರಿವಿಕ್ರಮನಂತಹವರಾದ ಕಾರಣ ರಂಜನಿ ಸ್ತರದ ಇಬ್ಬರು ಕಲಾವಿದೆಯರನ್ನು ರೂಪಿಸಿದ್ದಾರೆ.
ಸಂಗೀತಕ್ಕೂ ಮನುಷ್ಯರಿಗೂ ಮಾತ್ರವಲ್ಲದೆ, ಸಸ್ಯಗಳಿಗೂ ಸಂಬಂಧವಿದೆ ಎಂಬ ವಾದವಿರುವುದರ ನಡುವೆ ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ಬೆಳೆಯುವ ಸಾಕಷ್ಟು ಮುನ್ನವೇ ಅರವಿಂದರಲ್ಲಿ ಸಂಗೀತದತ್ತಲೂ ಒಲವು ಹರಿದಿತ್ತು. 2-3 ವರ್ಷ ಆಗಿರುವಾಗಲೇ ಸಂಗೀತ ದಿಗ್ಗಜರ ಗ್ರಾಮಫೋನ್ ರೆಕಾರ್ಡ್ ಕೇಳಿ ಗುನುಗಿಸುತ್ತಿದ್ದರು. ಹೀಗೆ ಹರಿಯುತ್ತಿದ್ದ ಸಂಗೀತದ ಒಳಹರಿವು ಹಿಂದಿ ಚಲನಚಿತ್ರದ ಹಾಡುಗಳತ್ತ ಹರಿಯಿತು. ಆ ಹರಿವು ನಿಲ್ಲದೆ ಆ ಹಾಡುಗಳು ಹಿಂದೂಸ್ಥಾನೀ/ ಕರ್ನಾಟಕ ಸಂಗೀತದ ಯಾವ ರಾಗಕ್ಕೆ ಸರಿಹೊಂದುತ್ತದೆ ಎಂಬ ವಿಚಕ್ಷಣ ಬುದ್ಧಿಯತ್ತ ಹರಿಯಿತು. ಎಂಎಸ್ಸಿ ಕಲಿಯುವಾಗ ಈ ವಿಚಕ್ಷಣದ ಟಿಪ್ಪಣಿ ಬರೆಹ ಆರಂಭಗೊಂಡಿತು. ಯಾವ ಹಿಂದಿ ಚಲನಚಿತ್ರಗಳ ಹಾಡುಗಳು ಹಿಂದುಸ್ಥಾನಿ ಮತ್ತು ಕರ್ನಾಟಕ ಸಂಗೀತದ ಹಾಡುಗಳ ಆಧಾರದಲ್ಲಿವೆ ಎಂಬ 300 ಪುಟದ ಐದು ಪುಸ್ತಕಗಳ ಬೃಹತ್ ಸಂಗ್ರಹಾಗಾರವು ಆಕಾಶವಾಣಿಯ ಹಿರಿಯ ಅಧಿಕಾರಿ ಟಿ.ಕೆ.ಗೋವಿಂದ ರಾವ್ ಅವರನ್ನೂ ಆಕರ್ಷಿಸಿತ್ತು. ಆ ಕಾಲದಲ್ಲಿಯೇ ಸುಮಾರು 300 ರಾಗಗಳ ಪರಿಚಯವಿದ್ದ ಹೆಬ್ಟಾರ್ ಅವರಿಗೆ ಸಂಗೀತದ ಪರಿಭಾಷೆ ಗೊತ್ತಿರಲಿಲ್ಲ. ಉಡುಪಿಯ ಎಂಜಿಎಂ ಕಾಲೇಜಿಗೆ ಪ್ರಾಧ್ಯಾಪಕರಾಗಿ ಸೇರಿದ ಬಳಿಕ ಮಧೂರು ಬಾಲಸುಬ್ರಹ್ಮಣ್ಯಂ ಅವರಲ್ಲಿ ಕರ್ನಾಟಕ ಸಂಗೀತವನ್ನು ಶಾಸ್ತ್ರಬದ್ಧವಾಗಿ ಕಲಿಯಲು ಆರಂಭಿಸಿದರು. ವೇದಿಕೆಯೇರಿದಾಗ ಕಂಪನ ಉಂಟಾಗುತ್ತಿತ್ತು. ಹೀಗಾಗಿ ಶ್ರುತಿ, ತಾಳ-ಲಯ ಇತ್ಯಾದಿ ಸಂಗೀತಶಾಸ್ತ್ರದತ್ತ (ಮ್ಯೂಸಿಕಾಲಜಿ) ಗಮನ ಹರಿಸಿದರು.
ಆಗ ಪುತ್ರಿ ರಂಜನಿ ಜನಿಸಿದ್ದಳು. ಹೆಬ್ಟಾರರ ಪತ್ನಿ ವಸಂತಲಕ್ಷ್ಮೀಯವರೂ ಸಂಗೀತ ಬಲ್ಲವರಾದ ಕಾರಣ ರಂಜನಿಗೆ ಆರಂಭದಲ್ಲಿಯೇ ಪಾಠ ಹೇಳಿದರು. ಒಂದೂವರೆ ವರ್ಷದವಳಾಗಿದ್ದಾಗಲೇ ಶ್ರುತಿಯನ್ನು ಶುದ್ಧವಾಗಿ ಹಿಡಿಯುತ್ತಿದ್ದ ಆಕೆ ಮೂರು ವರ್ಷವಾಗುವಾಗ ತಂದೆ ವಾರ ಕಾಲ ಕಷ್ಟಪಟ್ಟು ಕಲಿತದ ನಾಡಿಯನ್ನು ಕ್ಷಣಾರ್ಧದಲ್ಲಿ ಹಿಡಿಯುತ್ತಿದ್ದಾಗ ಸಂಗೀತದಲ್ಲಿಯೇ ಪಳಗಿಸಬೇಕೆಂದು ತಂದೆಗೆ ಅನಿಸಿತು. ಇದರ ಪರಿಣಾಮವೇ ಆ 15-20 ವರ್ಷಗಳಲ್ಲಿ ರಾಷ್ಟ್ರೀಯ- ಅಂತಾರಾಷ್ಟ್ರೀಯ ಸ್ತರದ ಸಂಗೀತ ಸ್ಪರ್ಧೆಗಳಲ್ಲಿ ಸುಮಾರು 2,000 ಬಹುಮಾನಗಳು ಬಂದವು. ಕರ್ನಾಟಕ ಸಂಗೀತದ ರಾಜಧಾನಿ ಎನಿಸಿದ ಚೆನ್ನೈಯಲ್ಲಿ ಕಛೇರಿ ಕೊಡುವ ಮಟ್ಟಕ್ಕೆ ಬೆಳೆದಳು. ಇನ್ನೂ ಎತ್ತರೆತ್ತರಕ್ಕೆ ಹೋಗುವ ದಾರಿಯಲ್ಲಿರುವಾಗಲೇ 30ನೆಯ ವಯಸ್ಸಿನಲ್ಲಿ (2013) ಇಹಲೋಕವನ್ನು ತ್ಯಜಿಸಬೇಕಾದುದು ಅಪಾರ ನಷ್ಟ.
ಬೆಳೆಸಿದ ಒಂದು ಕುಡಿ ನಷ್ಟವಾಯಿತು. ಇದೇ ವೇಳೆ ಮೂರು ಪ್ರತಿಭೆಗಳನ್ನು 2008ರಿಂದ ಪ್ರಾಥಮಿಕ ಹಂತದಿಂದ ಬೆಳೆಸಿದರು. “ಉದಯವಾಣಿ’ ದೈನಿಕದ ಹಿರಿಯ ಉಪಸಂಪಾದಕ ಶಂಕರನಾರಾಯಣರ ಪುತ್ರಿ ಸಮನ್ವಿ, ಹಿರಿಯ ಉಪಸಂಪಾದಕರಾಗಿದ್ದು ನಿವೃತ್ತರಾದ ಗೋವಿಂದ ಉಪಾಧ್ಯಾಯರ ಪುತ್ರಿ ಅರ್ಚನಾ ಒಂದನೆಯ ತರಗತಿಯಲ್ಲಿರುವಾಗಲೇ ಹೆಬ್ಟಾರರ ಮನೆ ಸೇರಿದರು. ಇನ್ನೊಬ್ಬಳು ಯಕ್ಷಗಾನ ಭಾಗವತ ನಾರಾಯಣ ಶಬರಾಯರ ಪುತ್ರಿ ಗಾರ್ಗಿ ಇವರಿಬ್ಬರಿಗಿಂತ ಹಿರಿಯಳು. ಸಂಗೀತದ ಜತೆ ಚಿತ್ರಕಲೆಯಲ್ಲಿಯೂ ಪ್ರಾವೀಣ್ಯ ಪಡೆದು ಈಗ ಚೆನ್ನೈನಲ್ಲಿ ನೆಲೆಸಿದ್ದಾರೆ. ಇಂತಹ ವ್ಯಕ್ತಿ ನಿರ್ಮಾಣಕ್ಕೆ ಸುದೀರ್ಘ ಜೀವನವನ್ನೇ ಕೊಡಬೇಕಾಗುತ್ತದೆ. ಈ ನಿರಂತರತೆ ಮತ್ತು ನಿತ್ಯ ಎಂಟು ಹತ್ತು ಗಂಟೆ ಸಂಗೀತಾಭ್ಯಾಸ ಮಾಡಿದ್ದರಿಂದಲೇ ಸಮನ್ವಿ ಮತ್ತು ಅರ್ಚನಾ ಅವಳಿ ಜವಳಿಗಳಂತೆ ಚೆನ್ನೈನಲ್ಲಿಯೂ ಸಂಗೀತ ಕಛೇರಿ ಕೊಡುವ ಸ್ತರದಲ್ಲಿ ಬೆಳೆದಿದ್ದಾರೆ.
ಅರ್ಚನಾ ಈಗ ಸಂಗೀತಾಧ್ಯಯನಕ್ಕಾಗಿ ಚೆನ್ನೈಯಲ್ಲಿದ್ದು ವೈಯಕ್ತಿಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕಛೇರಿ ಕೊಡುವಾಗ ಇವರು ಜತೆಯಾಗುತ್ತಾರೆ. ಹೆಬ್ಟಾರರು ಈ ಮಕ್ಕಳನ್ನು ಕರೆದೊಯ್ದ ಸ್ಥಳಗಳಿಗೆ ಲೆಕ್ಕವಿಲ್ಲ. ಯಾವುದೇ ಪ್ರತಿಭೆ ಬಾಲ್ಯದಲ್ಲಿಯೇ ಗೋಚರಿಸುತ್ತದೆ ಎನ್ನುವುದಕ್ಕೆ ಆರೇಳನೆಯ ತರಗತಿಯಲ್ಲಿರುವಾಗ ಇವರಿಬ್ಬರ ಸಂಗೀತ ಕಛೇರಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದಾಗ ಶ್ರೋತೃವರ್ಗ ಎದ್ದುನಿಂತು ಗೌರವ ಸಲ್ಲಿಸಿತು, ಸಂಗೀತಜ್ಞೆ ಪ್ರತಿಭಾ ಸಾಮಗ “ಇವರು ರಂಜನಿಯ ಹೆಸರನ್ನು ಉಳಿಸಲು ಬಂದವರು’ ಎಂದು ಮೆಚ್ಚುಗೆ ನುಡಿಯಾಡಿದ್ದು ಉದಾಹರಣೆ. ಹೆಬ್ಟಾರ್ ಅವರು ಸಂಗೀತಾಸಕ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಕಮ್ಮಟ-ಕಛೇರಿಗಳ ಆಯೋಜನೆ, ಆಸಕ್ತರಿಗೆ ಸೂಕ್ತ ಗುರುಗಳ ಜೋಡಣೆ ಇತ್ಯಾದಿಗಳನ್ನು ರಂಜನಿ ಮೆಮೋರಿಯಲ್ ಟ್ರಸ್ಟ್ ಮೂಲಕ ನಡೆಸುತ್ತಿದ್ದಾರೆ.
“ಕುಂಕುಮ ರಕ್ಷೆ’ ಚಿತ್ರದ ಹಾಡಿಗೆ ಸ್ವಲ್ಪ ತಿದ್ದುಪಡಿ ತಂದು “ತಾನೊಂದು ನೆನೆದರೆ ಮಾನವ| ಬೇರೊಂದು ಬಗೆವುದು ದೈವ|| ಅದರಿಚ್ಛೆಯ ಸ್ವೀಕರಿಸಿ ಜೀವ| ಪಡೆವುದು ನಿರ್ಲಿಪ್ತ ಸುಖವ||’ ಎಂದು ಹಾಡಬಹುದಲ್ಲವೆ?
ಪ್ರಪಂಚವೆಂಬ ಪಾತ್ರೆ!
ಪ್ರಪಂಚವೆಂದರೆ ಒಂದು ದೊಡ್ಡ ಪಾತ್ರೆ ಇದ್ದಂತೆ. ಪಾತ್ರೆಯಲ್ಲಿ ನಾನಾ ವಿಧದ ಸಾಮಗ್ರಿಗಳು, ಒಂದೇ ಜಾತಿಯ ಅಸಂಖ್ಯ ಧಾನ್ಯಗಳು ಜತೆಗೂಡಿ ಸಾವಿರಾರು, ಲಕ್ಷಾಂತರ ಜನರ ಹಸಿವನ್ನು ಇಂಗಿಸುತ್ತದೆ. ಈ ಧವಸಧಾನ್ಯಗಳು ಎಲ್ಲೆಲ್ಲೋ ಬೆಳೆದಿರುತ್ತವೆ, ತಿನ್ನುವವರಿಗೂ ಇದು ಯಾವ ಊರಿನದ್ದು? ಯಾರು ಎಷ್ಟು ಕಷ್ಟ ಪಟ್ಟು ಬೆಳೆಸಿದ್ದು ಎಂಬ ಕಲ್ಪನೆ ಇರುವುದಿಲ್ಲ, ಅಗತ್ಯವೂ ಇರುವುದಿಲ್ಲವೆನ್ನಿ. ಮಾನವ ಕುಲದ ಎಲ್ಲ ಮನೆಯ ಸದಸ್ಯರು ಸೇರಿದಾಗ ವಿಶಾಲ ಪ್ರಪಂಚದಲ್ಲಿದ್ದಂತೆ. ನಾವು ಭಾವಿಸುವುದು ನಮ್ಮ ಮಗಳು, ಅವರ ಮಗ, ನಮ್ಮ ಜಾತಿ, ನಮ್ಮ ಊರು, ರಾಜ್ಯ, ದೇಶ ಎಂದು. ಜಗತ್ತಿನ ಪಾತ್ರೆಯಲ್ಲಿ ಮಿಶ್ರಣಗೊಂಡೇ ಎಲ್ಲರ ಫಲ ವಿವಿಧ ಜನ-ಪ್ರಾಣಿ-ಸಸ್ಯ ಕುಲಕ್ಕೆ ಸಿಗುವಂತಾಗುತ್ತದೆ. ಇದನ್ನು ಪ್ರಜ್ಞಾಪೂರ್ವಕ ಅಳವಡಿಸುವುದು ಕಷ್ಟ. ಹೆಬ್ಟಾರ್ ಪುತ್ರಿ ರಂಜನಿಯನ್ನು ವಿಧಿ ಕರೆದೊಯ್ದರೂ ಇತರ ಕುಡಿಗಳನ್ನು ಬೆಳೆಸಿ ಸಮಾಜಕ್ಕೆ ಅರ್ಪಿಸಿ ಲೋಕದ ನಡೆಗೆ ಮಾದರಿಯಾಗಿದ್ದಾರೆ. ಅಲ್ಲಿಲ್ಲಾದರೂ ಈ ತೆರನಾದ ಮನಃಸ್ಥಿತಿ ಇರುವುದರಿಂದಲೇ ಜಗತ್ತಿನಲ್ಲಿ ಇನ್ನೂ ಉತ್ತಮಾಂಶಗಳು ತಲೆ ಎತ್ತಿ ನಿಂತಿವೆ ಎನ್ನಬಹುದು. ಹೆಬ್ಟಾರರ ಕೊಡುಗೆಯನ್ನು ಗಮನಿಸಿ ಖಾಸಗಿ ವಿ.ವಿ. ಬೆಂಗಳೂರಿನಲ್ಲಿ ಜು. 30ರಂದು ಗೌರವ ಉಪಾಧಿಯನ್ನು ಪ್ರದಾನ ಮಾಡುತ್ತಿದೆ.
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಹಳೆಯಂಗಡಿ ರೈಲ್ವೇ ಗೇಟ್ನಲ್ಲಿಯೇ ಉಳಿದ ಗೂಡ್ಸ್ ಡಬ್ಬಿಗಳು…!

ಸಿ.ಟಿ ರವಿ ವಿರುದ್ಧ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋಟಿ ರೂ ಕೊಡುತ್ತೇನೆ: ಸಿದ್ದರಾಮಯ್ಯಗೆ ಆಹ್ವಾನ

‘ಟಿಪ್ಪು ನಿಜ ಕನಸು’ ನಾಟಕದ ವಿರುದ್ದದ ದೂರು ಹಿಂಪಡೆದ ಅರ್ಜಿದಾರ: ಅಡ್ಡಂಡ ಸಂತಸ

‘ನಟ ಭಯಂಕರ’ನಿಗೆ ತಲೆಬಿಸಿ ತಂದ ರಾಸಲೀಲೆ ಸಿಡಿ..!

ಪ್ರತಿಭಾವಂತ ಕ್ರಿಕೆಟ್ ಪಟುಗಳ ತವರು ಕರ್ನಾಟಕ: ಕೆ.ವೈ.ವೆಂಕಟೇಶ್