ಬಾಕಾಹು ಆಂದೋಲನ: ಮರೆತ ವಿದ್ಯೆಗೆ ಮರುಜೀವ
Team Udayavani, Aug 1, 2021, 6:00 AM IST
ಈಗ ಕನ್ನಾಡಿನ ಅಮ್ಮಂದಿರು ಬಿರುಬಿಸಿಲಿಗೆ ಕಾಯುತ್ತಿದ್ದಾರೆ. ಇದು ಹಾಸ್ಯಾಸ್ಪದ ವಾಕ್ಯವಲ್ಲ, ವಾಸ್ತವ. ಕಳೆದೆರಡು ತಿಂಗಳುಗಳಿಂದ ಹಬ್ಬುತ್ತಿರುವ ಬಾಕಾಹು ಅಲೆಯು ಮಳೆಗಾಲದಲ್ಲೂ ಬಿರು ಬಿಸಿಲಿಗಾಗಿ ಪ್ರಾರ್ಥಿಸುವಂತೆ ಮಾಡಿದೆ!
ಹಲಸಿನಂತೆ ಬದುಕಿನೊಳಗಿದ್ದು ಮರೆವಿಗೆ ಜಾರಿದ ಉತ್ಪನ್ನ ಬಾಕಾಹು. ಇದೇನು, ಹೊಸದೆಂದು ಆಶ್ಚರ್ಯವಾಯಿತೇ? ಬಾಳೆ ಕಾಯಿಯ ಹುಡಿ ಬಾಕಾಹು. ಕೋವಿಡ್ ಲಾಕ್ಡೌನ್ ಅನ್ಲಾಕ್ ಆಗುತ್ತಿರುವಾಗ ಮರೆತ ವಿದ್ಯೆಗೆ ಮತ್ತೂಮ್ಮೆ ನೆನಪಿನ ಸ್ಪರ್ಶ. ಒಂದೆರಡು ಮನೆಯಲ್ಲಲ್ಲ, ಇಡೀ ಕನ್ನಾಡು ಹಾಗೂ ಕಾಸರಗೋಡು ಪ್ರದೇಶದ ಜಿಲ್ಲೆಗಳಲ್ಲಿ ತಂಗಾಳಿಯಂತೆ ಪಸರಿಸುತ್ತಿದೆ. ಹಿರಿಯರನ್ನು ಮಾತನಾಡಿಸಿದರೆ ಹಿಂದಿನಿಂದಲೂ ಬಾಳೆ ಕಾಯಿ ಹುಡಿಯು ಶಿಶು ಆಹಾರವಾಗಿ ಬಳಸಲ್ಪಡುತ್ತಿದ್ದುವು. ಇದು ತುಂಬಾ ಪೌಷ್ಟಿಕ ಆಹಾರ ಕೂಡಾ. ಮನೆಮಟ್ಟ ದಲ್ಲಿ ಮಾಡಬಹುದಾದ ಮೌಲ್ಯವರ್ಧಿತ ಉತ್ಪನ್ನ.
ಹಿರಿಯ ಪತ್ರಕರ್ತ ಶ್ರೀ ಪಡ್ರೆ ಅವರು ಎಡ್ಮಿನ್ ಆಗಿರುವ ವಾಟ್ಸ್ಆ್ಯಪ್ ಬಳಗ ಎಟಿವಿ (ಎನಿ ಟೈಮ್ ವೆಜಿಟೇಬಲ್). ಜೂನ್ ಕೊನೆ ವಾರ ತುಮಕೂರಿನ ಗೃಹಿಣಿ ನಯನಾ ಆನಂದ್ ಹಾಕಿದ ಒಂದು ಪೋಸ್ಟ್ ಬಾಕಾಹು ಆಂದೋಲನಕ್ಕೆ ಬೀಜಾಂಕುರವಾಯಿತು. ಅವರು ಬಾಳೆಕಾಯಿ ಹುಡಿ ಮತ್ತು ಅದರ ಕೆಲವು ಖಾದ್ಯಗಳನ್ನು ಚಿತ್ರ ಸಹಿತ ವಾಟ್ಸ್ಆ್ಯಪ್ಗೆ ಅಂಟಿಸಿದ್ದರು. ಅಲ್ಲಿಂದೀಚೆಗೆ ಹರಿದು ಬಂದ ಮಾಹಿತಿಗಳೆಲ್ಲವೂ ಕುತೂಹಲಕರ. ಬಾಕಾಹುವಿನ ಖಾದ್ಯಗಳ ವಿಶ್ವದರ್ಶನವಾಯತು. ಅವರವರು ಮಾಡಿ, ಸವಿದ ರಸರುಚಿಗಳನ್ನು ಹಂಚಿಕೊಂಡರು. ಒಬ್ಬರ ರುಚಿ ಫಾರ್ಮುಲಾ ಇನ್ನೊಬ್ಬರಿಗೆ ಸ್ಫೂರ್ತಿ ತುಂಬಿತು.
ಹೀಗೆ ಸಿದ್ಧವಾದ ಖಾದ್ಯಗಳು ಐವತ್ತಕ್ಕೂ ಮೀರಿವೆ. ತಾಲಿಪ್ಪಟ್ಟು, ರೊಟ್ಟಿ, ಕಡುಬು, ತೆಳ್ಳೇವು, ಉಪ್ಪಿಟ್ಟು, ಚಕ್ಕುಲಿ, ನಿಪ್ಪಟ್ಟು, ಪೂರಿ, ದೋಸೆ, ಬಿಸ್ಕೆಟ್, ಕುಕ್ಕೀಸ್ ಡ್ರೆç ಜಾಮೂನು, ಕೇಕ್, ಶಂಕರಪೊಳಿ, ಇಡ್ಲಿ, ದೂಡ್ಪೇಡಾ, ಗುಳಿಯಪ್ಪ, ಮಾಲ್ಟ್.. ಅಬ್ಟಾ, ಒಂದೇ ಎರಡೇ. ಬಾಳೆಕಾಯಿ ಹುಡಿಯು ನಮ್ಮ ಅಡುಗೆ ಮನೆಯಲ್ಲಿ ಇನ್ನು ತಪ್ಪದು. ಬಿಸಾಕು ಕ್ರಯದಿಂದಾಗಿ ಹಾಳಾಗಿ ಹೋಗುತ್ತಿದ್ದ, ದನಗಳ ಮೇವಿಗೆ ಬಳಕೆಯಾಗುತ್ತಿದ್ದ ಬಾಳೆಕಾಯಿ ಇನ್ನು ಹುಡಿಯಾಗಿ ನಮ್ಮ ಉದರ ಸೇರುತ್ತದೆ.. ಹೀಗೆ ಹತ್ತಾರು ಮಾತುಕತೆಗಳಿಗೆ ಚಾಲನೆ ದೊರಕಿತು.
ಇಡೀ ಬಾಳೆಕಾಯಿ ಅಥವಾ ಸುಲಿದ ಬಾಳೆಕಾಯಿಯನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿ, ಬಿಸಿಲಿನಲ್ಲಿ ಒಣಗಿಸಿ, ಪುಡಿ ಮಾಡಿದರೆ ಆಯಿತು. ಬಾಕಾಹು ರೆಡಿ. ಸುಲಿದ ಬಾಳೆಕಾಯಿ ಹುಡಿ ಅಚ್ಚ ಬಿಳಿಯದಾದರೆ, ಸಿಪ್ಪೆ ಸುಲಿಯದ್ದು ಕಂದು ಬಣ್ಣ. ಮನೆಮಟ್ಟದ ಬಳಕೆಗೆ ಈ ಮೇಲಿನ ಸಂಸ್ಕರಣೆ ಸಾಕು. ವಾಣಿಜ್ಯ ದೃಷ್ಟಿಯಿಂದ ಮಾಡುವುದಾದರೆ ಡ್ರೆçಯರ್, ಪಲ್ವರೈಸರ್ ಬೇಕಾದೀತು. “ಲೀಟರ್ ನೀರಿಗೆ ಕಾಲು ಲೀಟರ್ ಅನ್ನದಿಂದ ಬಸಿದ ತೆಳಿ, ಎರಡು ಚಮಚೆ ಉಪ್ಪು ಸೇರಿಸಿ. ಬಾಳೆಕಾಯಿಯ ಸಿಪ್ಪೆ ತೆಗೆದು ಈ ದ್ರಾವಣದಲ್ಲಿ ಕಾಲು ಗಂಟೆ ನೆನೆ ಹಾಕಿ. ಇದರಿಂದಾಗಿ ಅದರ ಅರುಚಿ ಮಾಯವಾಗಿ ಬಣ್ಣ ಬದಲದೆ ಉಳಿಯುತ್ತದೆ’ ಎನ್ನುವ ಸುಲಭ ಉಪಾಯವನ್ನು ಹಂಚಿಕೊಂಡವರು ಕೇರಳ ಕೃಷಿ ವಿಜ್ಞಾನ ಕೇಂದ್ರದ ಜೆಸ್ಸಿ ಜಾರ್ಜ್.
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾಕಾಹು ಆಂದೋಲನದ ಕಿಚ್ಚು ಹತ್ತಿಸಿದ್ದು 74 ರ ಹರೆಯದ ಹುಮ್ಮಸ್ಸಿಗ ಊರುತೋಟ ಸುಬ್ರಾಯ ಹೆಗಡೆ. ಇವರು ಬಾಕಾಹು ತಯಾರಿಸಿ ಅದರಿಂದ ತಾಲಿಪ್ಪಿಟ್ಟು, ರೊಟ್ಟಿ, ಶಂಕರ ಪೋಳಿ ಮಾಡಿದ ಸುದ್ದಿ ಜಿಲ್ಲೆಯ ಸಾಮಾಜಿಕ ಮಾಧ್ಯಮಗಳ ಮೂಲಕ ಒಂದೆರಡು ದಿನಗಳಲ್ಲೇ ಮನೆಮಾತಾಗಿಬಿಟ್ಟಿತ್ತು!
ಈ ಆಂದೋಲನ ಹಬ್ಬುತ್ತಿದ್ದಂತೆ ಆಗಲೇ ವಾಣಿಜ್ಯ ದೃಷ್ಟಿಯಿಂದ ಬಾಕಾಹು ಮಾಡುತ್ತಿರುವ ಕೃಷಿಕರ ಮಾಹಿತಿಗಳು ಗೋಚರವಾದುವು. ಶಿರಸಿ ಬಳಿಯ ಕಾನಳ್ಳಿಯ ಪ್ರಭಾಕರ ಹೆಗಡೆ-ವಸುಂಧರಾ ಹೆಗಡೆ ದಂಪತಿ ಬಾಕಾಹುವಿಗೆ ಉದ್ಯಮ ಸ್ವರೂಪ ನೀಡಿದ್ದಾರೆ. ಒಂದು ಕಿಲೋಗೆ ಇನ್ನೂರು ರೂಪಾಯಿ ಯಂತೆ ಮಾರಾಟ. ಆರು ತಿಂಗಳ ತಾಳಿಕೆ. ಬೆಳಗಾವಿ ಜಿಲ್ಲೆಯ ಕೃಷಿಕ ಅಜ್ಜಪ್ಪ ಕುಲಗೋಡು ಇವರದು ಇನ್ನೂ ಒಂದು ಹೆಜ್ಜೆ ಮುಂದೆ. ಅವರು ಮನೆಯಲ್ಲಿ ಉತ್ಪನ್ನವನ್ನು ತಯಾರಿಸಿದರೆ, ಅವರ ಅಮ್ಮ ಪಾರ್ವತವ್ವರಿಗೆ ಮಾರುಕಟ್ಟೆಯ ಹೊಣೆ. ತಾವು ಬೆಳೆದ ತರಕಾರಿಗಳ ಮಾರಾಟದ ಜತೆ ಬಾಕಾಹು ಹುಡಿಯನ್ನು ಜನರಿಗೆ ಪರಿಚಯಿಸುತ್ತಿದ್ದಾರೆ.
“ಒಂದು ಕೃಷಿ ವಿಶ್ವವಿದ್ಯಾನಿಲಯ ಈ ಕೆಲಸವನ್ನು ಮಾಡಬೇಕಾದರೆ ಅದೆಷ್ಟೋ ಕಾಲ ಬೇಕಾಗುತ್ತದೆ. ಲಾಕ್ಡೌನ್ ಕಾಲಘಟ್ಟದಲ್ಲಿ ಕೃಷಿಕರಿಗೆ ಒದಗಿದ ಈ ಬಾಳೆಕಾಯಿ ಹುಡಿ ತಯಾರಿಯ ತಿಳಿವಳಿಕೆಯು ಸಂಕಟ ಕಾಲದ ಸಹಾಯಿ’ ಎಂದು ಮೆಚ್ಚುಗೆ ಸೂಚಿಸಿದವರು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಪೊ›ಫೆೆಸರ್ ಡಾ| ಶ್ಯಾಮಲಮ್ಮ.
ಈ ಆಂದೋಲನದ ಸುದ್ದಿಯು ತಿರುಚಿರಾ ಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನ ಕೇಂದ್ರವನ್ನು ತಲಪಿತು. ಕೇಂದ್ರದ ನಿರ್ದೇಶಕಿ ಡಾ| ಉಮಾ ಸುಬ್ಬರಾಯ ಕರ್ನಾಟಕದ ಕೃಷಿ ಗೃಹಿಣಿಯರನ್ನು ಅಭಿನಂದಿಸಿ, “ಬಾಳೆಯ ಮೌಲ್ಯವರ್ಧಿತ ಉತ್ಪನ್ನದ ನಿಮ್ಮ ಆಂದೋಲನವು ರಾಜ್ಯ ಅಲ್ಲ, ದೇಶ ಮಟ್ಟವನ್ನು ತಲುಪಲಿ. ನಮ್ಮ ಸಂಸ್ಥೆಯಿಂದ ಸಹಕಾರ ನೀಡಲು ಸಿದ್ಧ’ ಎಂದು ಬೆನ್ನು ತಟ್ಟಿದರು.
“ಕೃಷಿಕರು ಮನೆಯಲ್ಲೇ ಸುಲಭದಲ್ಲಿ ಮಾಡಿ ಕೊಳ್ಳಬಹುದಾದ ತುಂಬ ಪೌಷ್ಟಿಕ ಉತ್ಪನ್ನ ಬಾಳೆ ಕಾಯಿ ಹುಡಿ. ವರ್ಷವಿಡೀ ಇದರ ಉತ್ಪಾದನೆ ಸಾಧ್ಯ. ಅದೊಂದು ಬಹೂಪಯೋಗಿ ಹಿಟ್ಟು. ಅದರಿಂದ ಡಜನ್ಗಟ್ಟಲೆ ವೈವಿಧ್ಯಮಯ ದಿನಬಳಕೆಯ ಆಹಾರ ತಯಾರಿಸಲು ಸಾಧ್ಯ. ಈ ಕಾರಣದಿಂದ ಈ ವಿದ್ಯೆ ತುಂಬಾ ರೈತಸ್ನೇಹಿ. ಮನೆಗಳಲ್ಲಿ, ಸಮಾರಂಭಗಳಲ್ಲಿ, ಹೊಟೇಲ್, ಟಿವಿ ಶೋಗಳಲ್ಲಿ ಬಾಕಾಹು ಬಳಕೆಯಾಗಬೇಕು. ಮನೆಮಟ್ಟದ ಬಾಕಾಹು ತಯಾರಿಯ ತರಬೇತಿ, ಉತ್ಪನ್ನಗಳ ಪ್ರದರ್ಶನದ ಮೇಳಗಳು, ಬಳಕೆಯ ರೀತಿಗಳು ಮತ್ತು ಇದರ ಪೌಷ್ಟಿಕಾಂಶಗಳ ಬಗ್ಗೆ ಅರಿವು ಮೂಡಿಸಬೇಕು. ಈಗ ಬಾಕಾಹು ಕನ್ನಾಡಿನ ಕೃಷಿ ಕೃಷಿ ವಿಜ್ಞಾನ ಕೇಂದ್ರಗಳ ಕದ ತಟ್ಟಿದೆ. ಸರಿಯಾಗಿ ಮುನ್ನಡೆಸಿದರೆ ಇದೊಂದು ದೇಶವ್ಯಾಪಿ ಆಂದೋಲನವಾಗುವ ಸಾಧ್ಯತೆ ಇದೆ; ಆಗುತ್ತದೆ. ಗೋಧಿ, ಮೈದಾಗಳಿಗೆ ಗಣನೀಯ ಪ್ರಮಾಣದಲ್ಲಿ ಬದಲಿ ಆಗುವ ಎಲ್ಲ ಲಕ್ಷಣಗಳು ಬಾಕಾಹುವಿಗಿದೆ. ಆಂದೋಲನವನ್ನು ಸರಿಯಾಗಿ ಮುನ್ನಡೆಸಿದರೆ ಇನ್ನು ಮುಂದೆ ಬಾಳೆಕಾಯಿಯ ಬೆಲೆ ಕುಸಿತ ಖಂಡಿತ ರೈತರನ್ನು ಹಿಂದಿನಷ್ಟು ಹತಾಶೆಗೆ ತಳ್ಳದು’ ಎನ್ನುವ ದೂರದೃಷ್ಟಿ ಶ್ರೀ ಪಡ್ರೆಯವರದು.
ಮೂರೇ ವಾರಗಳಲ್ಲಿ ಈ ಆಂದೋಲನದ ಸಾತ್ವಿಕ ಕಿಡಿಯು ಅಡುಗೆ ಮನೆಯೊಳಗೆ ಹಣತೆಯನ್ನು ಹಚ್ಚಿದೆ. ಮಳೆ ಕಡಿಮೆಯಾಗಿ ಬಿಸಿಲಿನ ದಿನಗಳಿಗಾಗಿ ಅಮ್ಮಂದಿರು ಕಾಯುತ್ತಿ ದ್ದಾರೆ! ನವಮಾಧ್ಯಮಗಳನ್ನು ಹೇಗೆ ಸಶಕ್ತವಾಗಿ ಮತ್ತು ಸುದೃಢವಾಗಿ ಬಳಸಬಹುದೆಂಬುದಕ್ಕೆ ಸಾಕ್ಷಿಯಾಗಿ ನಮ್ಮ ಮುಂದಿದೆ.
– ನಾ. ಕಾರಂತ ಪೆರಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ