ಬದಲಾವಣೆ: ಕೋವಿಡ್ ಕಾರ್ಮೋಡಕ್ಕೆ ಬೆಳ್ಳಿಯಂಚು!
Team Udayavani, Oct 20, 2020, 6:16 AM IST
ಸಾಂದರ್ಭಿಕ ಚಿತ್ರ
ನಿರಂತರ ಅಧ್ಯಯನಗಳಿಂದ ಅದು ನ್ಯೂಮೋನಿಯಾ ಅಲ್ಲವೆಂದೂ, ವೈರಸ್ಗಳು ರೋಗಿಯ ರಕ್ತವನ್ನು ಪುಪ್ಪುಸಗಳಲ್ಲಿ ಹೆಪ್ಪುಗಟ್ಟಿಸುವುದರಿಂದ ಕಾಣುವ ಗುರುತುಗಳೆಂದೂ ಅರಿಯಲಾಯಿತು…
ವಿಶ್ವದ ಅತೀ ಬಲಾಡ್ಯ ರಾಷ್ಟ್ರದ ಅಧ್ಯಕ್ಷರನ್ನೂ ಬಿಡದೇ ಕಾಡಿದ ಕೋವಿಡ್ ಎಂಬ ವೈರಸ್ ತನ್ನ ಸಾಂಕ್ರಾಮಿಕತೆಯ ಪರಾಕಾಷ್ಠೆಯನ್ನು, ತನ್ಮೂಲಕ ತನ್ನ ಶಕ್ತಿಯ ಪಾರಮ್ಯವನ್ನು ಸಂಭ್ರಮಿಸತೊಡಗಿದ ಈ ಕ್ಷಣದಲ್ಲಿ ವಿಶ್ವವೇ ತಲ್ಲಣ ಗೊಂಡಿದೆ. ಸುಮಾರು ಒಂಬತ್ತು ತಿಂಗಳುಗಳ ಹಿಂದೆ ಆವಿರ್ಭವಿಸಿದ ಈ ವೈರಸ್ ಅಗಾಧ ಪ್ರಮಾಣದಲ್ಲಿ ಇಡೀ ಜಗದ ಜನರ ಜೀವನವನ್ನೇ ಛಿದ್ರಗೊಳಿಸಿದೆ. ಭಾರತದಲ್ಲಿ ಅದಾಗಲೇ ಒಂದು ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅದರಲ್ಲಿ ಪ್ರತಿಶತ ಹತ್ತರಷ್ಟನ್ನು ಕಾಯ್ದುಕೊಳ್ಳುವಲ್ಲಿ ಕರ್ನಾಟಕವೂ ಹಿಂದೆಬಿದ್ದಿಲ್ಲ !
ಜನರಲ್ಲಿ “ಇಲ್ಲಿ ಯಾರೂ ಸುರಕ್ಷಿತರಲ್ಲ’ ಎಂಬ ಭಾವನೆ ಮೂಡತೊಡಗಿದೆ. ಎಲ್ಲವೂ ಅಯೋಮಯ. ವೈದ್ಯ ವಿಜ್ಞಾನಿಗಳು ಈ ಅನಾಹುತಗಳನ್ನು ಮೊದಲೇ ಊಹಿಸಿ ದ್ದರು, ಮತ್ತೆ ಎಚ್ಚರಿಸಿದ್ದರು ಕೂಡ. ಆದರೆ ಬೇಕಾಬಿಟ್ಟಿ ವ್ಯವಹರಿಸದಿದ್ದರೆ ನಾವು ಜನಸಾಮಾ ನ್ಯರು ಹೇಗಾಗುತ್ತೇವೆ! ಈಗ ಅದು ನಿಜವಾಗಿಯೂ ಕಣ್ಣೆದುರು ಜರಗಿದಾಗ, ಅದರ ಕ್ರೂರ ಪರಿಣಾಮಗಳನ್ನು ಅನುಭವಿಸುವಾಗ ಆಗುವ ಸಂಕಷ್ಟಗಳು ಊಹಾತೀತ. ಲಾಕ್ಡೌನ್, ಕರ್ಫ್ಯೂ, ಕ್ವಾರಂಟೈನ್ ಇತ್ಯಾದಿಗಳಿಂದ ಇದನ್ನು ತಡೆಯಲಾಗಲೇ ಇಲ್ಲ. ಆದರೆ ಇಂತಹ ಕ್ರಿಯೆಗಳಿಂದಾಗಿಯೇ ಹಲವಾರು ಸಾವುಗಳನ್ನು ತಪ್ಪಿಸಲಾಯಿತು.
ಭಾರತದಲ್ಲಿ ಜನವರಿ 30ರಂದು ಮೊದಲ ಕೋವಿಡ್ ಸಂಭವಿಸಿದಾಗ ನಮ್ಮ ಆಸ್ಪತ್ರೆಗಳು, ವೈದ್ಯರು ಅದನ್ನು ಎದುರಿಸಲು ಸಜ್ಜುಗೊಂಡಿರಲಿಲ್ಲ. ಯಾಕೆಂದರೆ ಅದೊಂದು “ನಾವೆಲ್’ ಅಂದರೆ “ಹೊಸ’ ರೀತಿಯ ವೈರಸ್ ಆಗಿದ್ದರಿಂದ ಹಿಂದೆಂದೂ ಕಾಣದಂತಹ ಸಾಂಕ್ರಾ ಮಿಕತೆ ಅದರ ಭೀಕರತೆಗೆ ಕಾರಣವಾಗಿತ್ತು. ಸಾವಿನ ಪ್ರಮಾಣ ಬರೀ ಎರಡೇ ಪ್ರತಿಶತ ಆಗಿದ್ದರೂ ಕೂಡ, ಅದು ಹರಡುವ ಪ್ರಕ್ರಿಯೆಯಿಂದಾಗಿ ತುಂಬ ಭೀಕರ ರೋಗವಾಗಿ ಬಿಟ್ಟಿತು. ಆದ್ದರಿಂದಲೇ ಆಗ ಸರಕಾರ ತೆಗೆದುಕೊಂಡ ಕಟ್ಟು ನಿಟ್ಟಿನ ಕ್ರಮಗಳಿಂದಾಗಿ ಆಸ್ಪತ್ರೆಗಳನ್ನು ಸುಸಜ್ಜಿತವಾಗಿಸಲು, ವೈದ್ಯರಿಗೆ ಹಾಗೂ ವೈದ್ಯೋಪಚಾರ ಸಿಬಂದಿಗೆ ತರ ಬೇತಿ ನೀಡಲು ಸಹಕಾರಿ ಯಾಯಿತು. ಈಗ ರೋಗದ ಬಗೆಗಿನ ಒಂದು ಹಂತದ ಜ್ಞಾನ ಹಾಗೂ ತಿಳಿವಳಿಕೆ ದೊರೆತಿದೆ. ಔಷಧೋಪಚಾರ ಹಾಗೂ ರೋಗಿ ಗಳನ್ನು ಆಸ್ಪತ್ರೆಗೆ ಸೇರಿಸುವ ಶಿಷ್ಟಾಚಾರಗಳನ್ನು ರೂಪಿಸ ಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲದೆ ಅನೇಕ ಖಾಸಗಿ ಆಸ್ಪತ್ರೆಗಳೂ ಧೈರ್ಯ ದಿಂದ ಕೋವಿಡ್ ರೋಗಿಗಳನ್ನು ಉಪಚರಿಸಲು ತಯಾರಾಗಿ ನಿಂತುಬಿಟ್ಟಿವೆ. ಇದೀಗ ಕೋವಿಡ್ ಕಾರ್ಮೋ ಡಕ್ಕೆ ಒಂದಿಷ್ಟು ಬೆಳ್ಳಿಗೆರೆಗಳು ಮೂಡತೊಡಗಿವೆ.
ಫೆಬ್ರವರಿಯಲ್ಲಿ ಕೋವಿಡ್ ಸೋಂಕು ಹೊಂದಿದವರಿಗೂ ಅಕ್ಟೋಬರ್ನಲ್ಲಿ ಸೋಂಕು ಪಡೆದವರಿಗೂ ನಡುವೆ ಎಂಟೇ ತಿಂಗಳ ವ್ಯತ್ಯಾಸವಿದ್ದರೂ ಕೂಡ ಗಂಭೀರ ಸ್ಥಿತಿ ಮುಟ್ಟಿದ ರೋಗಿಗಳು ಗುಣವಾಗುವ ಪ್ರಮಾಣ ಈಗ ಹೆಚ್ಚಾಗಿದೆ. ಆರಂಭಿಕ ದಿನಗಳಲ್ಲಿ ಸರಿಯಾಗಿ ಚಿಕಿತ್ಸೆ ನೀಡಲು ವೈರಸ್ ಬಗೆಗಿನ ಅತೀ ಕಡಿಮೆ ತಿಳಿವಳಿಕೆ ಯಿಂದಾಗಿ ಕತ್ತಲಲ್ಲಿ ಕಲ್ಲು ಎಸೆದಂತಹ ಪರಿಸ್ಥಿತಿ. ಈ ಮೊದಲು ಕೊರೊನಾ ವೈರಸ್ನಿಂದ ಹರಡಿದಂತಹ ಸಾರ್ಸ್ ರೋಗದ ಹಾಗೆ ಇದೂ ಇರಬಹುದೆಂದೇ ಭಾವಿಸಲಾಗಿತ್ತು. ಆದರೆ ಮಾಡಿದ ಆರೈಕೆಗಳೆಲ್ಲ ವ್ಯರ್ಥ ವಾಗಿ ಸಾವಿನ ಪ್ರಮಾಣ ಹೆಚ್ಚಾಗತೊಡಗಿದಾಗ ಅದರ ತೀವ್ರತೆಯ ಅರಿವಾಗತೊಡಗಿತು.
ಕೋವಿಡ್ ಗಂಭೀರ ಸ್ಥಿತಿ ಮುಟ್ಟಿದ ರೋಗಿಗಳ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗುವುದು, ರೋಗತೀವ್ರತೆಯ ಲಕ್ಷಣಗಳಲ್ಲೊಂದು. ಎದೆಯ ಎಕ್ಸ್ರೇ, ಹಾಗೂ ಸಿ.ಟಿ . ಸ್ಕ್ಯಾನ್ನಲ್ಲಿ ಕಾಣುವ ಗುರುತುಗಳು ವೈರಸ್ನಿಂದಾದ ನ್ಯೂಮೋನಿಯಾದಿಂದ ಎಂದು ತಿಳಿಯಲಾಗಿತ್ತು. ಹೀಗಾಗಿ ಕೃತಕ ಉಸಿರಾಟ ಯಂತ್ರಗಳನ್ನು ಅಳವಡಿಸುವ ಆವಶ್ಯಕತೆ ಇದೆ, ಎಂದು ನಂಬ ಲಾಗಿತ್ತು. ಆದರೆ ನಿರಂತರ ಅಧ್ಯಯನ ಗಳಿಂದ ಅದು ನ್ಯೂಮೋನಿಯಾ ಅಲ್ಲವೆಂದೂ, ವೈರಸ್ಗಳು ರೋಗಿಯ ರಕ್ತವನ್ನು ಪುಪ್ಪುಸಗಳಲ್ಲಿ ಹೆಪ್ಪುಗಟ್ಟಿಸು ವುದ ರಿಂದ ಕಾಣುವ ಗುರುತುಗಳೆಂದೂ ಅರಿಯಲಾಯಿತು. ಅದರಿಂದಾಗಿ ಪುಪ್ಪುಸಗಳಲ್ಲಿ ಆಮ್ಲಜನಕ ವಿನಿಮಯ ಕ್ರಿಯೆಯಲ್ಲಿ ಏರು ಪೇರಾಗಿ ರೋಗಿಗೆ ಉಬ್ಬಸ ಕಾಣಿಸಿಕೊಳ್ಳುತ್ತದೆ, ಎಂಬುದನ್ನು ಗುರುತಿಸಲಾಯಿತು. ಹೀಗಾಗಿ ಆಮ್ಲಜನಕ ಪೂರೈಕೆಯೊಂದಿಗೆ, ರಕ್ತ ತಿಳಿಗೊಳಿಸುವ ಆಸ್ಪಿರಿನ್ನಂತಹ ಮಾತ್ರೆ ಗಳು, ಹಿಪ್ಯಾರಿನ್ನಂಥ ಇಂಜೆಕ್ಷನ್ಗಳು ತುಂಬಾ ಪರಿಣಾಮ ಕಾರಿ ಚಿಕಿತ್ಸೆಯಾಗಿಬಿಟ್ಟವು. ರೋಗ ಉಲ್ಬಣ ಗೊಳ್ಳುವ ಮೊದಲೇ ಈ ಔಷಧಿಗಳನ್ನು ನೀಡಿದಾಗ ಗುಣವಾಗುವ ಪ್ರಮಾಣ ಹೆಚ್ಚಾಯಿತು.
ಎರಡನೆಯ ಅತ್ಯಂತ ಕ್ಲಿಷ್ಟಕರವಾದ ಸಮಸ್ಯೆ ಎಂದರೆ ಮಾನವ ಶರೀರದ ರಕ್ಷಣಾ ವ್ಯವಸ್ಥೆ ಉದ್ರೇಕಗೊಂಡು ತನ್ನದೇ ಶರೀರದ ಅಂಗಾಂಗಗಳೊಡನೆ ಹೋರಾಟ ಕ್ಕಿಳಿಯುವ ವಿಪರ್ಯಾಸ. ವೈದ್ಯಕೀಯ ಪರಿಭಾಷೆಯಲ್ಲಿ “ಸೈಟೋ ಕೈನ್ ಸ್ಟಾರ್ಮ್’ ಎಂದು ಕರೆಯಲ್ಪಡುವ ಇದು ವೈರಸ್ಗಳ ವಿರುದ್ಧ ಶರೀರದ ಬಿಳಿ ರಕ್ತ ಕಣಗಳು ರಚಿಸುವ ಉರಿಯೂತದಲ್ಲಿ ಸ್ವಂತ ಅಂಗಾಂಗಗಳೇ ಊನ ಗೊಳ್ಳು ತ್ತವೆ. ಆವಶ್ಯಕತೆಗಿಂತ ಹೆಚ್ಚಿನ ಶಕ್ತಿಯ ಶಸ್ತ್ರಗಳು ತನ್ನದೇ ಪ್ರದೇಶವನ್ನು ನಾಶಮಾಡುವ ಕ್ರಿಯೆಯಂತೆ ಇವು ಪ್ರಾಣಾ ಪಾಯಕ್ಕೂ ಕಾರಣವಾಗುತ್ತದೆ; ಬ್ರಹ್ಮಾಸ್ತ್ರ ಶತ್ರು ವನ್ನಲ್ಲದೆ ತಮ್ಮವರನ್ನೂ ನಾಶಮಾಡಿ ದಂತೆ! ಆಶ್ಚರ್ಯಕರ ಸಂಗತಿ ಎಂದರೆ ತುಂಬಾ ಆರೋಗ್ಯವಂತರಾದ, ರೋಗ ನಿರೋ ಧಕ ಶಕ್ತಿ ಹೆಚ್ಚಾಗಿರುವ ಐವತ್ತು ವರ್ಷಕ್ಕಿಂತ ಕಡಿಮೆ ವಯೋಮಾನದವರಲ್ಲಿ ಈ ಸ್ಥಿತಿ ಕಾಣುತ್ತದೆ. ಪ್ರಾರಂಭಿಕ ದಿನಗಳಲ್ಲಿ ಈ ಅಪಾಯಕ್ಕೆ ಔಷಧಿಗಳ ಹುಡುಕಾಟಕ್ಕೆ ಜಯ ದೊರಕಿರಲಿಲ್ಲವಾದರೂ ಈಗ ಸರಿಯಾದ ವೇಳೆಯಲ್ಲಿ ಬಳಸಿದ ಸ್ಟಿರಾಯಿಡ್ಗಳು ಅತ್ಯಂತ ಪರಿ ಣಾಮಕಾರಿ ಎಂಬುದನ್ನು ಅರಿಯಲಾಗಿದೆ. ಮತ್ತು ವ್ಯಾಪಕವಾಗಿ ಬಳಸಲ್ಪಡುತ್ತಿವೆ. ಅಲ್ಲದೆ ಟೊಸಿಲಿಜು ಮಾಬ್ ಎಂಬ ಔಷಧಿಯೂ ಕೂಡ ಸೈಟೋಕೈನ್ ಸ್ಟಾರ್ಮ್ ಗೆ ಪರಿಣಾಮಕಾರಿಯಾಗಿದೆ.
ಆರಂಭಿಕ ದಿನಗಳಲ್ಲಿ ಕೊರೊನಾ ವೈರಸ್ಗಳನ್ನು ಹತೋಟಿಯಲ್ಲಿಡಲು ಆವಶ್ಯಕವಾದ ಔಷಧಿಗಳು ಇರಲಿಲ್ಲ. ಅದಾಗಲೇ ಲಭ್ಯವಿರುವ ಹಲವು ಔಷಧಿಗಳನ್ನು ಅನೇಕ ಸಂಸ್ಥೆ ಗಳು ಪರೀಕ್ಷಾರ್ಥವಾಗಿ ಪ್ರಯೋಗಿಸಿ ನೋಡಿದಾಗ ಎಬೊಲಾ ರೋಗಕ್ಕೆ ಬಳಸಲ್ಪಡುವ ರೆಮೆxಸಿವೀರ್ ಎಂಬ ಇಂಜೆಕ್ಷನ್ ಹಾಗೂ ಜಪಾನ್ನಲ್ಲಿ ಫ್ಲ್ಯೂಗಾಗಿ ಬಳಸಲ್ಪಡುವ ಫ್ಲಾವಿಪಿರವೀರ್ ಎಂಬ ಮಾತ್ರೆ ಗಳಿಂದ ಕೊರೊನಾ ಸೋಂಕು ಪ್ರಾರಂಭಿಕ ಹಂತದಲ್ಲಿ¨ªಾಗ ಹತೋಟಿಯಲ್ಲಿಡ ಬಹುದು, ಎನ್ನುವುದು ವೇದ್ಯ ವಾಯಿತು. ಈ ಔಷಧಿಗಳು ಕೊರೊನಾ ವೈರಸ್ನ್ನು ಸಂಪೂರ್ಣ ನಿರ್ನಾಮ ಮಾಡದಿದ್ದರೂ ಅವು ಘಾತೀಯ ಬೆಳ ವಣಿಗೆ ಆಗದಂತೆ ತಡೆಯುತ್ತವೆ.
ರೋಗಿ ಕೆಲವೊಮ್ಮೆ ಯಾವುದೇ ರೋಗ ಲಕ್ಷಣ ಗಳಲ್ಲದೆ ಒಮ್ಮೆಲೇ ಜ್ಞಾನ ತಪ್ಪಿದ ಉದಾಹರಣೆಗಳಿವೆ. “ಹ್ಯಾಪಿ ಹೈಪೊಕ್ಷಿಯಾ’ ಎಂದು ಕರೆಯಲ್ಪಡುವ ಈ ಸ್ಥಿತಿಗೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ರೋಗಿಗೆ ಅರಿವಾಗದೇ ಕುಸಿ ಯುವುದೇ ಕಾರಣ. ಹೀಗೆ ಮಾರಣಾಂತಿಕ ವಾಗುವ ಸಾಧ್ಯತೆ ಇರುತ್ತದೆ. ಭಾರತ ಮತ್ತು ಜಗತ್ತಿನಾದ್ಯಂತ ಎರಡು ನೂರಕ್ಕೂ ಹೆಚ್ಚು ಸಂಶೋಧನ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಸಿದ್ಧ ಪಡಿಸಲಾಗುತ್ತಿದೆ. ಅಲ್ಲಿಂದ ಆಶಾದಾಯಕ ಸುದ್ದಿಗಳು ಬರುತ್ತಿವೆಯಾದರೂ ನಿಜವಾದ ಅರ್ಥದಲ್ಲಿ ಪರಿ ಣಾಮಕಾರಿ ಲಸಿಕೆ ಸಿಕ್ಕಿ ಜನಸಾಮಾನ್ಯರನ್ನು ತಲುಪುವುದು ಬಹಳ ಕಾಲವಾದೀತು.
ಇನ್ನು ಮುಂದೆ ಭಾರತದಲ್ಲಿ ಹಬ್ಬಗಳ ಸಾಲು ಸಾಲು. ಜನ ಗುಂಪು ಗೂಡುವುದು ಸರ್ವೇ ಸಾಮಾನ್ಯ. ಆದರೆ ಒಂದು ನೆನಪಿರಲಿ, ಬಹುತೇಕ ಸಂದರ್ಭ ಕೊರೊನಾ ರೋಗ ತಗಲಿದ್ದು ಬಂಧು ಬಾಂಧವರಿಂದ ಹಾಗೂ ಸ್ನೇಹಿತ ರಿಂದ. ಯಾಕೆಂದರೆ ಅವರ ಜತೆ ವ್ಯವಹರಿಸು ವಾಗ ನಾವು ಮಾಸ್ಕ್ ತೆಗೆದಿರುತ್ತೇವೆ ಮತ್ತು ಅಂತರ ಕಾಪಾ ಡಿರುವುದಿಲ್ಲ..!! ಅವರಲ್ಲಿ ಅನೇಕರು ಆರೋಗ್ಯ ವಂತರಾಗಿಯೇ ಇರುತ್ತಾರೆ, ಯಾವುದೇ ರೋಗಲಕ್ಷಣ ಗಳಿಲ್ಲದೆ..!! ಯಾಕೆಂದರೆ ಹಲವು ಜನರಲ್ಲಿ ಕೊರೊನಾ ಹೀಗೆ ಬಂದು ಹಾಗೆ ಹೋಗಿಬಿಡುತ್ತದೆ, ಅತಿಥಿಗಳ ಹಾಗೆ.
ಅಲ್ಲದೇ ಈಗ ಕೊರೊನಾ ಹರಡಲು ಸೂಕ್ತವಾದ ಚಳಿಗಾಲ ಬೇರೆ. ಎಚ್ಚರ ನಮ್ಮ ಮಂತ್ರವಾಗದಿದ್ದರೆ ಮರಣಗಳು ಇನ್ನೂ ವ್ಯಾಪಕವಾಗುತ್ತವೆ. ಏಕಚಕ್ರ ನಗರಕ್ಕೆ ಬಕಾಸು ರನಂತೆ, ದೇಶಕ್ಕಂಟಿದ ಕೋವಿಡ್ ಮನೆಗೊಂದು ಬಲಿ ಪಡೆ ಯುವ, ಆಸ್ಪತ್ರೆಯ ಖರ್ಚು ಎಂಬ ಬಂಡಿಗಟ್ಟಲೇ ಅನ್ನ ಬೇಡುವ ಸಂದರ್ಭ ನಿರ್ಮಾಣವಾದೀತು. ಬಕಾಸುರನನ್ನು ದೂರವಿಡಲು ಇರುವ ಭೀಮೋ ಪಾಯಗಳು ತುಂಬಾ ಸರಳ. ಮಾಸ್ಕ್ ಧರಿಸುವುದು. ಅಂತರ ಕಾಪಾಡುವುದು, ಅಗತ್ಯಬಿದ್ದರೆ ಮಾತ್ರ ಹೊರಗೆ ಹೋಗುವುದು ಮುಂತಾದ ಅತೀ ಸುಲಭದ ಉಪಾಯಗಳೇ ಸಾಕು. ಮತ್ತೆ ಸ್ವಲ್ಪವೇ ಜ್ವರ, ಮೈ ಕೈ ನೋವು, ನೆಗಡಿ, ಕೆಮ್ಮು, ಮುಂತಾದ ಲಕ್ಷಣಗಳಿದ್ದರೆ ಶೀಘ್ರವೇ ಆಸ್ಪತ್ರೆಗೆ ಹೋಗಿ. ಮೊದಲ ವಾರದಲ್ಲಿ ಕೊರೊನಾ ಗುರುತಿಸಿದರೆ ಮಾರಣಾಂತಿಕ ವಾಗದಂತೆ ತಡೆ ಯ ಬಹುದು. ಕೊರೊನಾ ದೊಂದಿಗೆ ಬದುಕುವುದನ್ನು ಮತ್ತು ಸಾಧ್ಯವಿದ್ದಷ್ಟೂ ದಿನ ಅದನ್ನು ದೂರವಿಡುವುದನ್ನು ನಾವು ಕಲಿಯಬೇಕಿದೆ. ಯಾಕೆಂದರೆ ಕೊರೊನಾ ನಮ್ಮೊಂದಿಗೆ ಇನ್ನೂ ಹಲ ವಾರು ವರ್ಷಗಳವರೆಗೆ ಜತೆಯಾಗಿರುತ್ತದೆ..!!
ಡಾ| ಶಿವಾನಂದ ಕುಬಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು