ಕೋವಿಡ್ ಲಸಿಕೆ ಪಡೆಯಲು ಸಿಕ್ಕಿತು ಆಹ್ವಾನ
Team Udayavani, May 22, 2021, 1:08 PM IST
ಕೊನೆಗೂ ಆ ದಿನ ಬಂದೇ ಬಿಟ್ಟಿತು. ಕಳೆದ ಒಂದು ವರ್ಷದಿಂದ ನಿರ್ಭಯವಾಗಿ ಇಡಿ ವಿಶ್ವವನ್ನೇ ಕಾಡುತ್ತಿರುವ ಪೋರಿಗೆ (ಹುಟ್ಟಿ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಅತಿ ವೆಗವಾಗಿ ತನ್ನ ಸಂತತಿಯನ್ನು ಬೆಳೆಸಿ ಅಡ್ಡ ಪರಿಣಾಮವನ್ನು ಮನುಕುಲಕ್ಕೆ ಹರಡುತ್ತಿರುವ ಅಸದೃಶ ಸುಂದರಿ ಕೊರೊನಾ ಮಹಾಮಾರಿ) ತಕ್ಕಮಟ್ಟಿಗೆ ಕಡಿವಾಣ ಹಾಕಲು ಕಂಡು ಹಿಡಿಯಲಾದ ಲಸಿಕೆಯನ್ನು ಹಾಕಿಸಿಕೊಳ್ಳಲು ಇಂಗ್ಲೆಂಡ್ನ ಆರೋಗ್ಯ ಇಲಾಖೆಯ ಅಧೀನ ಸಂಸ್ಥೆಗಳಲ್ಲಿ ಒಂದಾದ “ನ್ಯಾಷನಲ್ ಹೆಲ್ತ್ ಸರ್ವಿಸ್ ‘ ವತಿಯಿಂದ ನನಗೆ ಆಹ್ವಾನ ದೊರೆಯಿತು. ಸ್ಥಳೀಯ ಹಾಗೂ ಹತ್ತಿರದ ಯಾವುದಾದರೊಂದು ಚಿಕಿತ್ಸಾಲಯವನ್ನು ಆಯ್ದುಕೊಂಡು ದಿನಾಂಕವನ್ನು ನಮೂದಿಸಿ 2021ರ ಫೆ. 3ರಂದು ಲಸಿಕೆಯನ್ನು ತೆಗೆದುಕೊಳ್ಳುವಂತೆ ಸಂದೇಶ ನನ್ನ ಮೊಬೈಲ್ಗೆ ಬಂದಿತ್ತು.
ಇದನ್ನು ಓದಿದಾಗ ಮೊದಲು ಸಂತಸವಾದರೂ ಆ ಸಮಯಕ್ಕೆ ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದುದ್ದನು ನೋಡಿ ಸಣ್ಣ ಆತಂಕವೂ ಶುರುವಾಗಿತ್ತು. ಅಲ್ಲೆಲ್ಲೋ ಒಂದಿಬ್ಬರು ಲಸಿಕೆ ತೆಗೆದುಕೊಂಡ ಅನಂತರ ಮರಣ ಹೊಂದಿದ್ದು, ಮುಖಕ್ಕೆ ಪಾರ್ಶ್ವವಾಯು ಆಗಿದ್ದು, ಇತರ ಅಡ್ಡ ಪರಿಣಾಮಗಳ ಬಗ್ಗೆ ಯಥೇತ್ಛವಾಗಿ, ಪುಂಖಾನುಪುಂಖವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದರಿಂದ ಯಾರನ್ನಾದರೂ ವಿಚಾರಿಸಿ ನೋಂದಾಯಿಸಿಕೊಳ್ಳಲು ತೀರ್ಮಾನಿಸಿ ಆ ಕೆಲಸವನ್ನು ಪಕ್ಕಕ್ಕೆ ಇಡಲು ತೀರ್ಮಾನಿಸಿದೆ. ಅಭ್ಯಾಸದಂತೆ ನಿತ್ಯ ಕೆಲಸದಲ್ಲಿ ಬಿಡುವಿಲ್ಲದಂತೆ ತೊಡಗಿಸಿಕೊಂಡು ನೋಂದಾಯಿಸುವುದನ್ನು ಮುಂದೂಡತ್ತ ವಾರ ಕಳೆದದ್ದು ಗೊತ್ತೇ ಆಗಲಿಲ್ಲ.
ಎಂದಿನಂತೆ ಸೋಮವಾರ ಅಂದರೆ ಫೆ. 8ರಂದು ಮುಂಜಾನೆ ಮತ್ತೆ ಕೆಲಸ ಶುರು ಮಾಡಿದಾಗ ಸಹೋದ್ಯೋಗಿಯೊಬ್ಬರು ಟೀಮ್ನಲ್ಲಿ ಪಿಂಗ್ ಮಾಡಿ ಇನ್ನೊಬ್ಬ ಸಹೋದ್ಯೋಗಿಯ ಬಗ್ಗೆ ವಿಚಾರಿಸಲು ಶುರು ಮಾಡಿದರು. ಅವರ ಬಗ್ಗೆ ನನಗೆ ಪರಿಚಯವಿಲ್ಲದ್ದರಿಂದ ವಿಷಯದ ಬಗ್ಗೆ ಅಷ್ಟು ಅರಿವಿಲ್ಲವೆಂದು ತಿಳಿಸಿದಾಗ ಆ ಕಡೆಯಿಂದ ಮಿತ್ರ ತಿಳಿಸಿದೆ ಸಂಗತಿ ಮಾತ್ರ ಅತ್ಯಂತ ಖೇದಕರವಾದದ್ದು.
ಮರುದಿನ ಬೆಳಗ್ಗೆ ವಾರದ ಮೀಟಿಂಗ್ನಲ್ಲಿ ತಿಳಿದು ಬಂದಿದ್ದು ಏನೆಂದರೆ ಕಳೆದ ವರ್ಷವಷ್ಟೇ ಯುಕೆಗೆ ಬಂದು ತಮ್ಮ ಕುಟುಂಬವನ್ನು ಕೆಲವು ತಿಂಗಳುಗಳ ಹಿಂದಷ್ಟೆ ಕರೆತಂದಿದ್ದ ಸಂಸ್ಥೆಯ ಸಹೋದ್ಯೋಗಿಯೊಬ್ಬರು ಹಿಂದಿನ ವಾರ ಕೊರೊನಾ ಗುಣಲಕ್ಷಣಗಳು ಕಂಡುಬಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಅವರು ಗುಣಮುಖರಾಗುವ ಎಲ್ಲ ಲಕ್ಷಣಗಳು ಕಂಡುಬಂದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಕೊರೊನಾ ಗೆದ್ದು ಮನಗೆ ಬರುತ್ತಾರೆ ಎನ್ನುವ ಆಶಯದಿಂದ ಕಾಯುತ್ತಿದ್ದಾಗ ಶನಿವಾರ ಮುಂಜಾನೆ ವಿಪರೀತ ಜ್ವರ ಬಂದು ತಾಳಲಾರದೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ತಿಳಿಸಿದರು. ಅದನ್ನು ಕೇಳಿ ಒಂದು ಕ್ಷಣ ಏನೂ ತಿಳಿಯದೆ ಮೀಟಿಂಗ್ ಮುಗಿಯುವುದನ್ನು ಕಾಯುತ್ತಾ ಸುಮ್ಮನೆ ಕುಳಿತೆ. ಅಲ್ಲಿಂದ ತಲೆಯಲ್ಲಿ ಏನೇನೋ ಇಲ್ಲಸಲ್ಲದ ವಿಚಾರಗಳು ಓಡುತ್ತಿದ್ದಾಗ ಮತ್ತೆ ನೆನಪಿಗೆ ಬಂದದ್ದು ಲಸಿಕೆಯನ್ನು ತೆಗೆದುಕೊಳ್ಳಲು ಬಂದಂತಹ ಆಹ್ವಾನದ ಸಂದೇಶ.
ಆ ದಿನ ಬಂದೇ ಬಿಟ್ಟಿತು
ಎಲ್ಲ ಆತಂಕಗಳನ್ನು ಬದಿಗಿಟ್ಟು ಯಾವುದೇ ವಿಚಾರವನ್ನು ಮಾಡಿದೆ ನೇರವಾಗಿ ಫೆ. 2ರಂದು ಲಸಿಕೆ ಪಡೆಯಲು ನೋಂದಾಯಿಸಲು ಮುಂದಾದೆ. ಸಂದೇಶದೊಂದಿಗೆ ಲಗತ್ತಿಸಿದ ಮಾಹಿತಿಗಳನ್ನು ಗಮನಿಸುತ್ತ ಹೋದೆ. ಆರೋಗ್ಯಕ್ಕೆ ಸಂಬಂಧಿಸಿದ ನನ್ನ ಎಲ್ಲ ಮಾಹಿತಿಗಳು ಅದಾಗಲೆ Nಏಖಗೆ ಲಭ್ಯವಿರುವುದರಿಂದ, ಕೇವಲ ಜನ್ಮದಿನಾಂಕವನ್ನು ನಮೂದಿಸುವುದರ ಮೂಲಕೆ ಪರಿಶೀಲಿಸಿ, ಫೆ. 13ರಂದು ಬೆಳಗ್ಗೆ 8.40ರ ಸಮಯವನ್ನು ಮತ್ತು ಹತ್ತಿರದ ಚಿಕಿತ್ಸಾಲಯವನ್ನು ಆನ್ಲೈನ್ ಮೂಲಕ ನೋಂದಾಯಿಸಿಕೊಂಡೆ. ನೋಂದಣಿ ಪೂರ್ಣಗೊಳಿಸಲು ತೆಗೆದುಕೊಂಡ ಸಮಯ 2- 3 ನಿಮಿಷ.
ಆ ದಿನ ಬಂದೇ ಬಿಟ್ಟಿತು. ಸ್ವಲ್ಪ ಆತಂಕ, ಖುಷಿ, ಕುತೂಹಲದೊಂದಿಗೆ ಆಸ್ಪತ್ರೆಗೆ ಹೊರಟು ನಿಂತೆ. ಮನೆಯಿಂದ 20- 25 ನಿಮಿಷ ದೂರದಲ್ಲಿದ್ದ ಆಸ್ಪತ್ರೆಗೆ ನಡೆದುಕೊಂಡೇ ಹೋದೆ. ಎಂದಿನಂತೆ ಮುಗುಳ್ನಗೆಯ ಸ್ವಾಗತ ಕೋರುತ್ತ ನೋಂದಣಿಯ ವಿವರದ ಕಡತದೊಂದಿಗೆ ಕುಳಿತುಕೊಂಡಿದ್ದ ಸಿಬಂದಿ ನನಗೆ ನನ್ನ ಮತ್ತು ಕೋವಿಡ್ ಲಸಿಕೆಗೆ ಸಂಬಂಧಿಸಿದ ವಿವರಗಳನ್ನು ಹೊಂದಿರುವ ಮುದ್ರಿತ ಹಾಳೆಗಳನ್ನು ನೀಡಿ ಕುಳಿತುಕೊಳ್ಳಲು ಹೇಳಿದರು. ಹಾಗೆ ಅದರ ಮೇಲೆ ಕಣ್ಣಾಡಿಸುತ್ತ ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಿದ ಲಸಿಕೆಯಲ್ಲಿನ ರಾಸಾಯನಿಕ ಮಿಶ್ರಣದ ವಿವರ ಜತೆಗೆ ಇಲ್ಲಿಯವರೆಗೂ ಗಮನಕ್ಕೆ ಬಂದ ಅದರ ಅಡ್ಡ ಪರಿಣಾಮಗಳ ಮಾಹಿತಿ ಮತ್ತು ಲಸಿಕೆ ಹಾಕುವುದಕ್ಕಿಂತ ಮುಂಚೆ ಪರಿಶೀಲಿಸಬೇಕಾದ ವಿವರಗಳನ್ನು ಹಂಚಿಕೊಳ್ಳಲಾಗಿತ್ತು. ಅದೆಲ್ಲವನ್ನು ಓದಿದ ಅನಂತರ ಲಸಿಕೆ ನೀಡುವುದಕ್ಕಾಗಿಯೆ ಏರ್ಪಡಿಸಿದ ವ್ಯವಸ್ಥೆಯನ್ನು ಗಮನಿಸಿದೆ. ನನ್ನಂತೆಯೆ ಹಲವಾರು ಜನರು ಬಂದು ವಿವರಗಳನ್ನು ಪಡೆದು ನಿರ್ದೇಶಿಸಿದ ಸ್ಥಳಗಳಲ್ಲಿ ಕುಳಿತುಕೊಳ್ಳುತ್ತಿದ್ದರು. ಹಾಗೆ ಒಳಗಡೆಯಿಂದ ಅಷ್ಟೇ ಜನ ಸಿಬಂದಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾ ಹೊರನಡೆಯುತ್ತಿದ್ದರು.
ಪ್ರತಿಯೊಬ್ಬ ಸಿಬಂದಿಯ ಮುಗುಳ್ನಗೆ ಮತ್ತು ಏನೋ ಒಳ್ಳೆಯದನ್ನು ಮಾಡುತ್ತಿದ್ದೇವೆ ಎನ್ನುವ ಧನ್ಯತಾಭಾವ ಒಂದು ಕಡೆಯಾದರೆ ಇನ್ನೊಂದು ಕಡೆ ಲಸಿಕೆಯನ್ನು ಪಡೆದವರು ಸಂತಸದಿಂದ ಅಭಿನಂದಿಸಿ ಹೊರನಡೆಯುತ್ತಿದ್ದದ್ದು ಯಾವ ಹಬ್ಬದ ವಾತಾವರಣಕ್ಕಿಂತ ಕಡಿಮೆಯೇನಿರಲಿಲ್ಲ. ಸಮಯಕ್ಕೆ ಸರಿಯಾಗಿ, ಸರದಿಯಂತೆ ನನ್ನನ್ನು ಒಳಗೆ ಕರೆದುಕೊಂಡು ಹೋಗಿ ಲಸಿಕೆಯನ್ನು ಹಾಕಲು ಏರ್ಪಡಿಸಿದ ಪ್ರತ್ಯೇಕ ವಿಭಾಗದಲ್ಲಿ ಕುಳಿತುಕೊಳ್ಳಲು ಹೇಳಿಕೊಟ್ಟಿರುವ ವಿವರಗಳನ್ನು ಪರಿಶೀಲಿಸುವಂತೆ ಕೇಳಿಕೊಂಡು ಲಸಿಕೆಯನ್ನು ಹಾಕಲು ಬೇಕಾಗುವ ಸಾಮಗ್ರಿಗಳನ್ನು ಇಟ್ಟಿರುವ ಒಂದು ಚಿಕ್ಕ ತಳ್ಳುಗಾಡಿಯನ್ನು ಹಿಡಿದುಕೊಂಡು ನಿಂತಿರುವ ಸಿಬಂದಿಗೆ ಸೂಚಿಸಿದಾಗ ಆ ಸಿಬಂದಿ ಹೊರನಡೆದರು. ಆ ಸಮಯದಲ್ಲಿ ಸುತ್ತಲು ಗಮನಿಸಿದಾಗ ಕಂಡುಬಂದಿದ್ದು 20ಕ್ಕೂ ಹೆಚ್ಚು ಪ್ರತ್ಯೇಕವಾಗಿ ಲಸಿಕೆಯನ್ನು ಹಾಕಲು ಏರ್ಪಡಿಸಿದ್ದ ವಿಭಾಗಗಳು. ಆ ವ್ಯವಸ್ಥೆಯಲ್ಲಿ ಅಲ್ಲಿನ ಸಿಬಂದಿ ಚಿಕ್ಕ ಚಿಕ್ಕ ಗುಂಪುಗಳಾಗಿ ಮಾಡಿಕೊಂಡು ಮಾಡಬೇಕಾದ ಕೆಲಸಗಳನ್ನು ಹಂಚಿಕೊಂಡು ಸ್ಪಷ್ಟವಾಗಿ ನಿರ್ದೇಶನಗಳನ್ನು ಕೊಡುತ್ತ ಮುಂದಿನ ಕೆಲಸ ಮಾಡಬೇಕಾದವರಿಗೆ ತಮ್ಮ ಕೆಲಸ ಮುಗಿದ ಸೂಚನೆಯನ್ನು ನೀಡುತ್ತ ಬಂದವರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನೋಡಿಕೊಂಡು ಲಸಿಕೆಯನ್ನು ಹಾಕಿ 15 ನಿಮಿಷಗಳ ಕಾಲ ಪ್ರತಿಯೊಬ್ಬರನ್ನು ಪರೀಕ್ಷಿಸಿ ಎಲ್ಲವು ಸರಿಯಾಗಿದೆ ಎಂದಲ್ಲಿ ಅವರನ್ನು ಹೊರಗಡೆ ಕಳುಹಿಸಿಕೊಡುತ್ತಿದ್ದರು. ಇದು ನನಗೆ ಕಾರ್ಖಾನೆಯಲ್ಲಿನ ಉತ್ಪಾದನೆ ಘಟಕದಲ್ಲಿ ನಡೆಯುವ ಚಟುವಟಿಕೆಯಂತೆ ಕಂಡಿತು.
ಅಷ್ಟರಲ್ಲಿ ವಿವರಗಳನ್ನು ಪರಿಶೀಲಿಸಿ ಅಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಂಡು ಲಸಿಕೆಯನ್ನು ಹಾಕಲು ಅಣಿಮಾಡುವ ಕೆಲಸವನ್ನು ವಹಿಸಿಕೊಂಡ ಸಿಬಂದಿ ಬಂದು ನನ್ನನ್ನು ಪ್ರಶ್ನಿಸುತ್ತ ಉತ್ತರಗಳನ್ನು ಪಡೆದುಕೊಂಡು ಎಲ್ಲವೂ ಸರಿಯಾಗಿವೆ ಎಂದು ಖಾತ್ರಿ ಪಡಿಸಿಕೊಂಡು ಲಸಿಕೆ ಹಾಕುವ ಸಿಬಂದಿಗೆ ಸೂಚನೆಯನ್ನು ಕೊಟ್ಟು ಮುನ್ನಡೆದರು.
ಕೆಲವು ನಿಮಿಷಗಳಲ್ಲಿ ಲಸಿಕೆಯೊಂದಿಗೆ ಬಂದು ಸಿಬಂದಿ ಲಸಿಕೆಯ ವಿವರವನ್ನು ನೀಡಿ ಖಚಿತ ಪಡಿಸಿಕೊಂಡ ಅನಂತರ ಲಸಿಕೆಯನ್ನು ಹಾಕಿ 15 ನಿಮಿಷಗಳ ಕಾಲ ಕುಳಿತುಕೊಳ್ಳುವಂತೆ ಹೇಳಿ ಲಸಿಕೆ ಹಾಕಿದ ಅನಂತರ ಗಮನಿಸುವ ತಂಡದ ಸಿಬಂದಿಗೆ ಸೂಚಿಸಿ ಮುಂದಿನ ವಿಭಾಗಕ್ಕೆ ಹೋದರು.
15 ನಿಮಿಷಗಳವರೆಗೆ ಗಮನಿಸಿ ಯಾವುದೇ ರೀತಿಯ ಆತಂಕವಿಲ್ಲವೆಂದು ಖಚಿತಪಡಿಸಿಕೊಂಡು ಎರಡನೇಯ ಹಂತದ ಲಸಿಕೆಗಾಗಿ 8 ವಾರಗಳ ಅನಂತರ ಮತ್ತೆ ಸಂದೇಶವನ್ನು ಕಳುಹಿಸುವುದಾಗಿ ತಿಳಿಸಿ ಶುಭಾಶಯಗಳನ್ನು ಕೋರಿ ಮನೆಗೆ ತೆರಳಲು ಸೂಚಿಸಿದರು. ಒಟ್ಟಾರೆಯಾಗಿ ನಾನು ಅಲ್ಲಿ ಕಳೆದ 20 ರಿಂದ 25 ನಿಮಿಷಗಳಲ್ಲಿ ಈ ಚಟುವಟಿಕೆಗಳು ಸಿಬಂದಿಯವರ ಕಡೆಯಿಂದ ಎಡೆಬಿಡದೆ ನಡಿಯುತ್ತಿದ್ದವು ಹಾಗೂ ಕನಿಷ್ಠ 10 ರಿಂದ 15 ಜನ ಲಸಿಕೆಯನ್ನು ಹಾಕಿಸಿಕೊಂಡು ಹೊದರೆ ಅಷ್ಟೇ ಜನ ಹೊಸದಾಗಿ ಲಸಿಕೆಯನ್ನು ಹಾಕಲು ಒಳಗೆ ಕರೆದು ತಂದು ಕೂಡಿಸಿದರು. ಇವೆಲ್ಲದರ ಮಧ್ಯೆ ಆ ಸಿಬಂದಿಯ ಮುಖದಲ್ಲಿದ್ದ ಮುಗುಳ್ನಗೆ, ಪ್ರತಿಯೊಬ್ಬರನ್ನು ಉತ್ಸಾಹದಿಂದ ಮಾತಾನಾಡಿಸುತ್ತಿದ್ದ ರೀತಿ ಆತಂಕಕ್ಕೆ ಒಳಗಾದವರಿಗೆ ಅವರು ಹೇಳುತ್ತಿದ್ದ ಸಾಂತ್ವಾನ, ಕೊಡುತ್ತಿದ ಭರವಸೆ ಕಣ್ಣಿಗೆ ಕಟ್ಟಿದಂತಿದೆ. ಇದಿಷ್ಟು ಮೊದಲನೇ ಹಂತದ ಲಸಿಕೆಯನ್ನು ಹಾಕಿಸಿಕೊಳ್ಳಲು ಹೋದಾಗ ಆದ ಅನುಭವವಾದರೆ, ಎರಡನೇ ಹಂತದ ಲಸಿಕೆಯನ್ನು ಹಾಕಿಸಿಕೊಳ್ಳಲು ಸರಿಯಾಗಿ 8 ವಾರಗಳ ಅನಂತರ ಅಂದರೆ ಎ. 13ರಂದು ಆಹ್ವಾನದ ಸಂದೇಶ ಬಂದಿತು. ಈ ಎಂಟು ವಾರಗಳಲ್ಲಿ ಯುಕೆಯಾದ್ಯಂತ ಕೊರೊನಾ ಹರಡುವಿಕೆಯ ತೀವ್ರತೆ ಸ್ವಲ್ಪ ಇಳಿಮುಖವಾಗಿದ್ದು, ಲಾಕ್ಡೌನ್ ಅನ್ನು ಸಡಿಲಿಸಲಾಗಿದೆ.
ಆದರೆ ದುರಾದೃಷ್ಟವಶಾತ್ ಅವಳು ಭಾರತದಲ್ಲಿ ತನ್ನ ಕಬಂಧ ಬಾಹುಗಳನ್ನು ತೆರೆದುಕೊಂಡು ತನ್ನ ಹರಡುವಿಕೆಯನ್ನು ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಮುಖ ಮಾಡಿರುವುದು ಆತಂಕಕ್ಕೆ ಈಡುಮಾಡಿದೆ. ಈ ಮಧ್ಯೆ ನನ್ನ ಸಹೋದರ ಅವಳ ಬಲೆಗೆ ಬಿದ್ದು ಪಡಬಾರದ ಕಷ್ಟಗಳನ್ನು ಪಟ್ಟು ಅವಳಿಂದ ಬಿಡಿಸಿಕೊಳ್ಳವತ್ತ ನಿಧಾನವಾಗಿ ಮುಖಮಾಡಿರುವುದು ಸಮಾಧಾನಕರ ಸಂಗತಿ.
ಅಪೇಕ್ಷಿಸಿದ ರೀತಿಯಲ್ಲಿ ಎರಡನೇ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳಲು ನೋಂದಾಯಿಸಿಕೊಂಡು ಮತ್ತೆ ಹೋದಾಗ ಅದೇ ಮುಗುಳ್ನಗೆಯ ಸ್ವಾಗತ, ಉತ್ಸಾಹ ಭರಿತ ಮಾತುಗಳು, ಲವಲವಿಕೆಯಿಂದ ಓಡಾಡಿಕೊಂಡಿದ್ದ ಸಿಬಂದಿಯ ಕಾರ್ಯತತ್ಪರತೆ ಮನ ಮುಟ್ಟಿದ್ದಲ್ಲದೆ ಅದನ್ನು ಎಲ್ಲರೊಂದಿಗೆ ಹಂಚಿಕೊಂಡು ಅವರೆಲ್ಲರಿಗೂ ತನ್ಮೂಲಕ ಜಗತ್ತಿನಾದ್ಯಂತ ತಮ್ಮ ಜೀವದ ಹಂಗನ್ನು ತೊರೆದು ಕರೋನಾಹ್ವಾನಿತರನ್ನು ಅವಳ ಕಬಂಧ ಬಾಹುಗಳಿಂದ ಮುಕ್ತಗೊಳಿಸಲು ಶ್ರಮಿಸುತ್ತಿರುವ ಸರ್ಕಾರ, ಆಡಳಿತ ವರ್ಗಗಳು, ವೈದ್ಯಕೀಯ ಸಿಬಂದಿ ಹಾಗೂ ಶುಶ್ರೂಷಕ ವರ್ಗದವರೆಲ್ಲರಿಗೂ ವೈಯಕ್ತಿಕವಾಗಿ ಮತ್ತು ಎಲ್ಲರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಹೇಳಲೇಬೇಕು.
ಗೋವರ್ಧನ ಗಿರಿ ಜೋಷಿ, ಲಂಡನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!