ದೀಪಾವಳಿಯು ಸ್ವದೇಶಿ ಚಿಂತನೆಯ ದೀಪೋತ್ಸವವಾಗಲಿ
Team Udayavani, Nov 4, 2021, 10:38 AM IST
ಭಾರತ ತನ್ನ ಸಂಸ್ಕೃತಿಯ ಸಮೃದ್ಧತೆಯ ಕಾರಣಕ್ಕಾಗಿ ಜಗತ್ತೆಂಬ ಗೃಹದ ದೇವರಕೋಣೆ ಎಂದು ಸಂಬೋಧಿಸಲ್ಪಡುತ್ತದೆ. ಈ ನಾಡಿನ ಅಗಣಿತ ಆಚರಣೆಗಳು ತನ್ನತನವನ್ನು ಇಲ್ಲಿಯವರೆಗೂ ಉಳಿಸಿ, ಬೆಳೆಸಿ, ಬಳಸಿಕೊಂಡು ಬಂದಿದ್ದರಿಂದ ಈ ಮಣ್ಣಿನ ಸತ್ವ ಇನ್ನೂ ಶ್ರೀಮಂತವಾಗಿಯೇ ಉಳಿದಿದೆ. ನಾಡಿನ ಸಾಂಸ್ಕೃತಿಕ ಉತ್ಕೃಷ್ಟತೆಗೆ ಹಿಡಿದ ಕೈಗನ್ನಡಿಯಂತಿರುವ ಇಲ್ಲಿನ ಹಬ್ಬಗಳು ಒಂದು ಧ್ಯೇಯವನ್ನಿಟ್ಟುಕೊಂಡು, ಸಮಾಜಕ್ಕೆ ಆದರ್ಶಯುತ ಆಚರಣೆಗಳನ್ನು ಕೊಡುಗೆಯಾಗಿ ನೀಡುತ್ತ ಭಾರತೀಯತೆಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಆಧುನಿಕ ತಂತ್ರಜ್ಞಾನದ ಯುಗಕ್ಕೆ ಕಾಲಿಟ್ಟಿರುವ ಈ ಸಂದರ್ಭದಲ್ಲಿ ಬದಲಾವಣೆ ಜಗದ ನಿಯಮವೆಂಬಂತೆ ನಮ್ಮ ಹಬ್ಬಹರಿದಿನಗಳಲ್ಲೂ ಅನೇಕ ಮಾರ್ಪಾಡುಗಳಾಗಿವೆ. ಬಹುತೇಕ ಆಚರಣೆಗಳು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಾಪಾಡಿಕೊಳ್ಳುವುದಕ್ಕಿಂತ, ಆಡಂಬರದ ಆಚರಣೆಗಳಾಗಿ ಬದಲಾಗುತ್ತಿರುವುದು ಮತ್ತು ಆಚರಣೆಗಳ ಮಹತ್ವವನ್ನರಿಯುವ ಪ್ರಯತ್ನ ಮಾಡದೆ ಇರುವುದು ವಿಪರ್ಯಾಸದ ಸಂಗತಿ.
ನಮ್ಮ ಪ್ರತಿಯೊಂದು ಹಬ್ಬವೂ ವ್ಯಕ್ತಿತ್ವವನ್ನು ಅರಳಿಸುವ, ಗತವೈಭವವನ್ನು ಸ್ಮರಿಸುವ ಮತ್ತು ಸಾಮಾಜಿಕ ಸಂದೇಶವನ್ನು ರವಾನಿಸುವ ಕಾರ್ಯವನ್ನು ಸಮರ್ಥವಾಗಿಯೇ ನಿಭಾಯಿಸುತ್ತದೆ. ಅದರ ಜತೆ ಜತೆಗೆ ಪ್ರತಿ ಹಬ್ಬವೂ ತನ್ನತನವನ್ನೇ ಪ್ರತಿನಿಧಿಸುವುದರಿಂದ ಸ್ವದೇಶಿ ಚಿಂತನೆಯ ತಳಹದಿಯ ಮೇಲೆಯೇ ನಿಂತಿದೆ. ಆದರೆ ಅದನ್ನು ಇಂದಿನ ನಮ್ಮ ಪೀಳಿಗೆಗೆ ನೆನಪಿಸುವ ಅಗತ್ಯವಿದೆ. ಬೆಳಕಿನ ಹಬ್ಬವಾದ ದೀಪಾವಳಿ ಆಚರಣೆ ಮೌಲ್ಯದಲ್ಲಿಯೂ ಸಮೃದ್ಧವಾಗಿದ್ದು ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ, ಜ್ಞಾನದ ಬೆಳಕನ್ನು ಪಸರಿಸುತ್ತದೆ. ಎಲ್ಲ ಹಬ್ಬವೂ ತನ್ನ ಪ್ರಾದೇಶಿಕ ವಿಭಿನ್ನತೆಯನ್ನೊಳಗೊಂಡಿದೆ. ಈ ವಿಭಿನ್ನ ಆಚರಣೆಗಳನ್ನು ಅಲ್ಲಿನ ಯುವಜನತೆಗೆ ತಿಳಿಸುವ ಪ್ರಯತ್ನಗಳಾಗಬೇಕು ಮತ್ತು ತಿಳಿಸುವ ಮುನ್ನ ನಾವು ಅದನ್ನರಿಯುವ ಮನಸ್ಸು ಮಾಡಬೇಕಿದೆ. ಯಾಕೆಂದರೆ ಜಗತ್ತಿನ ಮಾರ್ಗದರ್ಶಕನ ಸ್ಥಾನದಲ್ಲಿ ನಿಂತಿರುವ ಭಾರತ, ಪ್ರಸ್ತುತ ದೀಪಾವಳಿ ಮತ್ತು ಇನ್ನಿತರ ಆಚರಣೆಗಳಲ್ಲಿ ಸಾಂಸ್ಕೃತಿಕ ದಿವಾಳಿತನವನ್ನು ಅನುಭವಿಸುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.
ದೀಪಾವಳಿ ಹಬ್ಬದಲ್ಲಿ ಬೆಳಕು ಪ್ರಾಧಾನ್ಯವಾದ್ದರಿಂದ, ಆ ಬೆಳಕನ್ನೇ ಕೃತಕವಾಗಿಸುವ ಪ್ರಯತ್ನಗಳೇಕೆ? ಜೀವನದಲ್ಲಿ ಕಷ್ಟಗಳೆಂಬ ಅಂಧಕಾರವನ್ನು ಹೋಗಲಾಡಿಸಿ ಸಂತಸದ ಬೆಳಕನ್ನು ತರುವುದಕ್ಕಾಗಿ ಆಚರಿಸುವ ದೀಪಾವಳಿ, ಕಷ್ಟದಲ್ಲಿರುವ ನಮ್ಮವರ ಬದುಕು ಬೆಳಗಿಸುವುದಕ್ಕೆ ಸಹಕಾರಿ ಆಗಬಾರದೇಕೆ? ನಮ್ಮ ಆಚರಣೆಗಳು ಆಡಂಬರವಾಗುವುದರ ಜತೆಗೆ ಹಬ್ಬಗಳ ಮೌಲ್ಯಾದರ್ಶಗಳ ಪಸರಿಸುವ ಕಾರ್ಯಗಳೂ ಆಡಂಬರದಿಂದಲೇ ಆಗುವುದು ಸೂಕ್ತವಲ್ಲವೆ? ಈ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡಿದಾಗ ಉತ್ತರಗಳೂ ನಮ್ಮೆದುರಿಗೇ ನಿಲ್ಲುತ್ತವೆ. ನಮ್ಮ ಹಬ್ಬಗಳ ಮೂಲ ಉದ್ದೇಶವನ್ನು ಮೊದಲು ನಾವು ಅರ್ಥೈಸಿಕೊಂಡು, ಆಚರಣೆಯ ಮಹತ್ವವನ್ನು ನಮ್ಮ ಕಿರಿಯ ಪೀಳಿಗೆಗೆ ತಿಳಿಸುವ ಪ್ರಯತ್ನಗಳಾಗಬೇಕು. ಹಬ್ಬಗಳಿಗಾಗಿ ನಡೆಸುವ ತಯಾರಿಗಳು ಸ್ವದೇಶಿ ವಸ್ತುಗಳನ್ನು ಒಳಗೊಂಡಿರಬೇಕು ಮತ್ತು ಅವುಗಳನ್ನು ಗುಡಿ ಕೈಗಾರಿಕೆ ಮತ್ತು ಬೀದಿ ಬದಿಯ ವ್ಯಾಪಾರಿಗಳಿಂದ ಖರೀದಿಸುವ ಮೂಲಕ ನಮ್ಮ ಆಚರಣೆ, ನಮ್ಮವರ ಜೀವನದಲ್ಲಿ ಬೆಳಕನ್ನು ತರುವಂತಿರಬೇಕು. ನಮ್ಮ ಎಲ್ಲ ಆಚರಣೆಗಳೂ ಪ್ರಕೃತಿಯನ್ನು ಒಳಗೊಂಡಿರುವುದರಿಂದ, ಇಂದು ನಾವು ಆಚರಿಸುವ ಹಬ್ಬಗಳು ಯಾವುದೇ ರೀತಿಯಲ್ಲಿ ಪರಿಸರಕ್ಕೆ ಹಾನಿಯನ್ನುಂಟು ಮಾಡಬಾರದು. ಹಬ್ಬ ಹರಿದಿನಗಳು ನಮ್ಮ ಚಿಂತನೆಗಳನ್ನು ಸಾರುವ ಜ್ಞಾನಕೇಂದ್ರಗಳಾಬೇಕು. ಆಗ ಎಲ್ಲ ನಮ್ಮ ಆಚರಣೆಗಳು ಸಾರ್ಥಕತೆಯನ್ನು ಪಡೆಯುತ್ತವೆ.
ಅರುಣ್ ಕಿರಿಮಂಜೇಶ್ವರ
ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ