ಗೆಲುವೇ ಸೋಲಾಗಬಾರದು; ಮಕ್ಕಳು ಸೋಲಲಿ ಬಿಡಿ
Team Udayavani, Feb 8, 2020, 6:00 AM IST
ತಂದೆ ತಾಯಂದಿರ ಯೋಚನಾ ಕ್ರಮವೇ ಮಕ್ಕಳ ಅಭಿರುಚಿ, ಆಸಕ್ತಿಯನ್ನು ರೂಪಿಸುತ್ತದೆ. ಮುಂದೆ ಅವರ ಭವಿಷ್ಯವನ್ನು ಕೂಡ. ಮಕ್ಕಳನ್ನು ಹೇಗೆ ಮತ್ತು ಯಾವುದಕ್ಕಾಗಿ ಬೆಳೆಸಬೇಕು ಎನ್ನುವ ಸ್ಪಷ್ಟತೆ ತಂದೆ ತಾಯಂದಿರಿಗಿರಬೇಕು. ಬದುಕೆಂದರೆ ದೊಡ್ಡ ಮನೆ, ದೊಡ್ಡ ಕಾರು, ಸಂಪತ್ತು ಎನ್ನುವ ಕಲ್ಪನೆಯಿಂದ ಹೊರಬರಬೇಕಿದೆ.
ಸ್ವಾಮಿ ವಿವೇಕಾನಂದರ ಮಾತುಗಳನ್ನು ನೆನಪಿಸುವುದಾದರೆ ಪ್ರಪಂಚದಲ್ಲಿ ಶ್ರೀಮಂತಿಕೆಗಿಂತ ಬಡತನವೇ ಹೆಚ್ಚು ಪಾಠ ಕಲಿಸುತ್ತದೆ. ಸಂತೋಷದ ಸಂದರ್ಭಗಳಿಗಿಂತ ಕಷ್ಟದ ಸಂದರ್ಭಗಳು ಮನುಷ್ಯನ ವಿವೇಕವನ್ನು ಬೆಳಗಿಸುತ್ತವೆ. ಸಮ್ಮಾನಕ್ಕಿಂತ ಅವಮಾನ ವ್ಯಕ್ತಿಯಲ್ಲೊಂದು ಬೆಂಕಿಯನ್ನೆ ಬ್ಬಿಸುತ್ತದೆ. ನಾವೆಲ್ಲಾ ಸೋಲನ್ನು ದ್ವೇಷಿಸುತ್ತೇವೆ. ನಮ್ಮ ಮಕ್ಕಳು ಯಾವುದೇ ಸೋಲಿಗೆ ಒಳಗಾಗಬಾರದೆಂದು ಎಚ್ಚರ ವಹಿಸುತ್ತೇವೆ. ವಿಪರ್ಯಾಸವೆಂದರೆ ಜೀವನದಲ್ಲಿ ಹೆಚ್ಚಿನವರು ಸೋತು ಸುಣ್ಣವಾಗಿ ಯಶಸ್ಸಿನ ಶಿಖರವೇರಿದವರೇ. KG ಕ್ಲಾಸಿನಿಂದಲೇ A+ಪಡೆಯುತ್ತಿದ್ದ ಮಗು ಯಾವುದೇ ಕ್ಲಾಸಿನಲ್ಲಿ ಯಾವುದೇ ವಿಷಯದಲ್ಲಿ B ಗ್ರೇಡ್ ಸಿಕ್ಕಿದರೆ ಗೊಂದಲಕ್ಕೊಳಗಾಗುತ್ತದೆ (ಹೆತ್ತವರಂತೂ ತಮ್ಮ ಮಕ್ಕಳಿಗಿಂತ ಗ್ರೇಡ್ಗಳನ್ನು ಹೆಚ್ಚು ಪ್ರೀತಿಸುತ್ತಾರೆ). ಮಗು ದೊಡ್ಡವನಾಗಿ ಯಾವುದೇ ವಿಷಯದಲ್ಲಿ ಫೇಲಾದರೆ ಮುಗಿಯಿತು. ಇನ್ನು ಬದುಕೇ ಇಲ್ಲದಂತೆ ಕೆಲವರಂತೂ ತುಂಬಾ ವಿಪರೀತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಶಾಲೆ ಕಾಲೇಜುಗಳಲ್ಲಿ ಮಕ್ಕಳನ್ನು ಯಶಸ್ಸಿಗಾಗಿ ಮಾತ್ರ ತಯಾರು ಮಾಡುತ್ತೇವೆ. ಕೆಲವು ತಂದೆ ತಾಯಂದಿರು KG ಕ್ಲಾಸಿನಿಂದಲೇ IIT foundation courseಗೆ ಮಕ್ಕಳನ್ನು ಸೇರಿಸಿ ಬಿಟ್ಟಿರುತ್ತಾರೆ. ತಪ್ಪಲ್ಲ, ಐಐಟಿ ಸೇರಿದರೆ ಮಾತ್ರ ಯಶಸ್ಸು ಎಂಬ ಮಿತಿಯನ್ನು ಮಗುವಿನ ತಲೆಯಲ್ಲಿ ತುಂಬಿದರೆ ಅದು ಅಪರಾಧ.
ಅನೇಕ ಸಂದರ್ಭಗಳಲ್ಲಿ ನಮ್ಮ ಜೀವನದ ಅಭದ್ರತೆಯ ಭಾವನೆಯನ್ನು ನಮ್ಮ ಮಕ್ಕಳಿಗೆ ಹೇರಿ ಬಿಡುತ್ತೇವೆ. ಜೀವನದಲ್ಲಿ ಸೋಲೇ ಬರಬಾರದು ಎನ್ನುವ ಮನಃಸ್ಥಿತಿ ತುಂಬಾ ಅಪಾಯಕಾರಿ. ನಡೆಯುವಾಗ ಬೀಳಲೇಬಾರದು ಎಂದು ನಿರ್ಧರಿಸಿದರೆ ನಡೆಯಲು ಪ್ರಯತ್ನಿಸುವುದಾದರೂ ಹೇಗೆ?. ನಡೆಯುವಾಗ ಬೀಳುವುದು ಸಹಜ. ಬಿದ್ದಾಗ ಪೆಟ್ಟಾಗದಂತೆ ನೋಡಿಕೊಳ್ಳುವ, ಬಿದ್ದರೂ ಎದ್ದು ನಡೆಯುವ ಆತ್ಮವಿಶ್ವಾಸವನ್ನು ಮಕ್ಕಳಿಗೆ ತುಂಬಬೇಕಿದೆ. ನಾವು ಮಕ್ಕಳನ್ನು ಯಾವ ರೀತಿ ಯಶಸ್ಸಿಗಾಗಿ ತಯಾರು ಮಾಡುತ್ತೇವೆಯೋ ಅದೇ ರೀತಿ ಜೀವನದಲ್ಲಿ ಬರುವ ಸೋಲಿಗೂ ತಯಾರು ಮಾಡುವ ಮನಃಸ್ಥಿತಿ ಹೆತ್ತವರದಾಗಬೇಕು. ಹಲವಾರು ಸಂದರ್ಭಗಳಲ್ಲಿ ತಥಾಕಥಿತ ಸೋಲೇ ಮುಂದೆ ತನ್ನ ಅತ್ಯುತ್ತಮ ಸಾಧನೆಗೆ ದಾರಿಯಾಗುತ್ತಯೆಂಬ ಬಲವಾದ ನಂಬಿಕೆಯಿರಬೇಕು. ಒಬ್ಬ ಸಾಮಾನ್ಯ, ಸಂಕೋಚದ ಹುಡುಗ ಮೋಹನದಾಸ, ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ತನ್ನನ್ನು ಹೊರದಬ್ಬಿದ ಅವಮಾನದ ಕಾವಿನಲ್ಲೆ ಮಹಾತ್ಮನಾಗಿ ರೂಪುಗೊಳ್ಳುವುದಕ್ಕೆ ಸಾಧ್ಯವಾಯ್ತು.
ಹಲವು ಸೋಲುಗಳ ಬಳಿಕ ಥಾಮಸ್ ಆಲ್ವ ಎಡಿಸನ್ ಬಲ್ಬ್ ಕಂಡು ಹಿಡಿದ. ಅದನ್ನು ಹೋಲ್ಡರ್ಗೆ ಜೋಡಿಸುವಾಗಲೂ ತನ್ನ ನೌಕರರಿಗೆ ಬದುಕಿನ ಪಾಠ ಮಾಡಿದ. ಹೊಸದಾಗಿ ತಯಾರಿಸಿದ ಬಲ್ಬನ್ನು ಜೋಡಿಸಲು ಎಡಿಸನ್ ಆರಿಸಿದ್ದು ತನ್ನ ಕಂಪೆನಿಯ ಅತ್ಯಂತ ಕಡಿಮೆ ಆತ್ಮವಿಶ್ವಾಸದ ಹುಡುಗನನ್ನು. ಆ ಹುಡುಗ ನಡುಗುವ ಕೈಯಲ್ಲಿ ಬಲ್ಬ್ ಜೋಡಿಸಲು ಮುಂದಾದ. ಬಲ್ಬ್ ಕೈಯಿಂದ ಜಾರಿ ಕೆಳಗೆ ಬಿದ್ದು ಚೂರಾಯಿತು. ಎರಡನೇ ಬಾರಿಯು ಎಡಿಸನ್ ಅದೇ ಹುಡುಗನ್ನು ಕರೆದ. ಎರಡನೇ ಬಾರಿಯೂ ಬಲ್ಬ್ ಕೆಳಗೆ ಬಿತ್ತು. ಆದರೂ ಎಡಿಸನ್ ಮತ್ತೆ ಮತ್ತೆ ಅದೇ ಹುಡುಗನಿಗೆ ಹೇಳಿದ. ಕಂಪೆನಿ ನೌಕರರು ಎಡಿಸನ್ಗೆ ತಲೆ ಕೆಟ್ಟಿರಬೇಕೆಂದು ಆಡಿಕೊಂಡರು. ಮೊದಲ ಬಾರಿಗೆ ಕಂಡು ಹಿಡಿದ ಅತ್ಯಮೂಲ್ಯ ಬಲ್ಬನ್ನು ನಿಷ್ಪ್ರಯೋಜಕನೊಬ್ಬನ ಕೈಯಲ್ಲಿ ಕೊಟ್ಟು ಸಮಯ ಮತ್ತು ಶ್ರಮ ವ್ಯರ್ಥಮಾಡುತ್ತಿದ್ದಾನೆೆಂದುಕೊಂಡರು. ಎಡಿಸನ್ ಪಟ್ಟು ಸಡಿಲಿಸಲಿಲ್ಲ. ಈ ಬಾರಿಯೂ ಅವನನ್ನೇ ಕರೆದ. ಎಲ್ಲರೂ ತಮಾಷೆ ನೋಡುತಿದ್ದರು. ಹುಡುಗ ಬಲ್ಬ್ ಹಿಡಿದು ಮೇಲೆತ್ತಿದ. ಕೊನೆಗೂ ಜೋಡಿಸಿಯೇ ಬಿಟ್ಟ. ಬಲ್ಬ್ ಉರಿಯಿತು. ಅದಕ್ಕಿಂತಲೂ ಪ್ರಕಾಶಮಾನವಾಗಿ ಹುಡುಗನ ಮುಖದಲ್ಲಿ ನಗು ಮಿನುಗುತ್ತಿತ್ತು. ಎಡಿಸನ್ ಹೇಳಿದ ಬಲ್ಬ್ ಒಡೆದರೆ ಬೇರೆ ತಯಾರಿಸಬಹುದು ಅದರೆ ಮನುಷ್ಯನ ಆತ್ಮವಿಶ್ವಾಸವೇ ಒಡೆದರೆ ಜೋಡಿಸುವುದು ಕಷ್ಟ. ಆತ್ಮವಿಶ್ವಾಸ ಕೊಡುವುದೇ ನಿಜವಾದ ಶಿಕ್ಷಣ.
ಜೀವನವನ್ನು ತುಂಬಾ ಸ್ಟ್ರಕ್ಚರ್ಡ್ ಆಗಿ ರೂಪಿಸಿದಾಗ ಹಣಕಾಸಿನ ಯಶಸ್ಸು ಬಹುತೇಕ ಖಾತರಿ. ಆದರೆ ಜೀವನದ ಯಶಸ್ಸಿನ OUTLINE ಇಲ್ಲದಿದ್ದಾಗ ಜೀವನ ಹೆಚ್ಚು ಚೇತೋಹಾರಿ, ಸೃಜನಾತ್ಮಕ. ಗೆಲುವಿಗಾಗಿ ಒದ್ದಾಟವೇ ಒಂದು ಅನುಭವ. ರೆಡಿಮೇಡ್ ಯಶಸ್ಸು ಅಪಾಯಕಾರಿ. ಒಂದೆರಡು ಸೋಲುಗಳ ನಂತರ ಬರುವ ಗೆಲುವು ಪ್ರಬುದ್ಧ.
ಹಲವಾರು ಸಂದರ್ಭಗಳಲ್ಲಿ ತಂದೆ ತಾಯಂದಿರ ಯೋಚನಾ ಕ್ರಮವೇ ಮಕ್ಕಳ ಅಭಿರುಚಿ, ಆಸಕ್ತಿಯನ್ನು ರೂಪಿಸುತ್ತದೆ. ಮುಂದೆ ಅವರ ಭವಿಷ್ಯವನ್ನು ಕೂಡ. ಮಕ್ಕಳನ್ನು ಹೇಗೆ ಮತ್ತು ಯಾವುದಕ್ಕಾಗಿ ಬೆಳೆಸಬೇಕು ಎನ್ನುವ ಸ್ಪಷ್ಟತೆ ತಂದೆ ತಾಯಂದಿರಿಗಿರಬೇಕು. ಬದುಕೆಂದರೆ ದೊಡ್ಡ ಮನೆ, ದೊಡ್ಡ ಕಾರು, ಮುಗಿಯದ ಸಂಪತ್ತು ಎನ್ನುವ ಕಲ್ಪನೆಯಿಂದ ನಾವು ಹೊರಬರಬೇಕಿದೆ. ದೊಡ್ಡ ದೊಡ್ಡ ಗಣಿತದ (ವಿಜ್ಞಾನದ) ಸಮಸ್ಯೆಗಳನ್ನು ಬಿಡಿಸಿ ನೂರಕ್ಕೆ ನೂರು ಮಾರ್ಕ್ ತೆಗೆಯುವ, ಭಾಷಣ, ಸಾಮಾನ್ಯ ಜ್ಞಾನಗಳಲ್ಲಿ ಪ್ರಥಮ ಸ್ಥಾನವನ್ನೇ ಪಡೆಯುವ ಮಗು, ಕ್ಲಾಸ್ನಲ್ಲಿ ಉನ್ನತ ಗ್ರೇಡ್ಗಳನ್ನು ಪಡೆಯುವ ಮಗು, ತನ್ನ ಭಾವನೆಗಳನ್ನು ನಿಭಾಯಿಸಲು, ಆಂತರಿಕ ಗೊಂದಲಗಳನ್ನು ಪರಿಹರಿಸಲು, ಒತ್ತಡಗಳನ್ನು ನಿಭಾಯಿಸಲು ಸೋತರೆ ಉಳಿದವುಗಳೆಲ್ಲ ಗೌಣವಾಗಿ ಬಿಡುತ್ತವೆ. ತಂದೆ ತಾಯಂದಿರು ಮಕ್ಕಳೆದುರು ತಮ್ಮನ್ನು ತಾವು ಸೂಪರ್ಮ್ಯಾನ್ ಅಥವಾ ಸೂಪರ್ವುಮನ್ ಆಗಿ ಬಿಂಬಿಸಿಕೊಳ್ಳದೆ ತಾವೂ ಜೀವನದಲ್ಲಿ ಸೋತಿದ್ದೇವೆ, ಎಡವಿದ್ದೇವೆ ಎನ್ನುವುದನ್ನು ತಿಳಿಸಬೇಕು. ಜೀವನದಲ್ಲಿ ಸೋಲುಗಳು ನಮ್ಮನ್ನು ಪರಿಪಕ್ವವಾಗಿಸುತ್ತವೆ ಮತ್ತು ಸೋಲುಗಳು ಜೀವನದಲ್ಲಿ ಅತ್ಯಂತ ಸಹಜ ಎನ್ನುವುದು ಅವರಿಗೆ ಮನವರಿಕೆಯಗಬೇಕು. ಸೋಲಿನ ಭೀತಿಯಿಂದ ಹೊರಬರುವುದೇ ಅತಿ ದೊಡ್ಡ ಶಿಕ್ಷಣ.
ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ರ ಕತೆ ಇನ್ನೂ ರೋಚಕ. ಲಿಂಕನ್ ಅಧ್ಯಕ್ಷರಾಗಿ ಸಂಸತ್ ಪ್ರವೇಶ ಮಾಡಿದಾಗ ಅಲ್ಲೇ ಇದ್ದ ಶ್ರೀಮಂತನೊಬ್ಬ ಅವರಿಗೆ ಅವಮಾನ ಮಾಡಲು ಬಯಸಿದ. ಲಿಂಕನ್ ನೀವೀಗ ಅಧ್ಯಕ್ಷರಾಗಿರಬಹುದು, ಆದರೆ ನೆನಪಿರಲಿ, ನೀವೊಬ್ಬ ಚಮ್ಮಾರನ ಮಗ ಅಂದ. ಲಿಂಕನ್ ಶ್ರೀಮಂತನ ಕಡೆಗೆ ತಿರುಗಿ ಮುಗುಳ್ನಗುತ್ತ ಉತ್ತರಿಸಿದರು, ಹೌದು ನನ್ನ ತಂದೆ ಒಬ್ಬ ಚಮ್ಮಾರ, ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಆತನೊಬ್ಬ ಅದ್ಭುತ ಕಲಾಗಾರ. ಆತ ಪ್ರತಿಯೊಂದು ಶೂವನ್ನು ಅದಮ್ಯ ತಾದಾತ್ಮತೆಯಿಂದ ಮಾಡುತ್ತಿದ್ದ. ಆತನಿಗೆ ಅದೊಂದು ತಪಸ್ಸು. ಹಾಗಾಗಿ ಆತನ ಕೆಲಸವನ್ನು ಯಾರೂ ಬೊಟ್ಟುಮಾಡಿ ತೋರಿಸುವಂತಿರಲಿಲ್ಲ. ನಿಮ್ಮಂತಹ ಎಲ್ಲಾ ಶ್ರೀಮಂತರ ಶೂಗಳನ್ನು ಅವನೇ ಮಾಡಿದ್ದಾನೆ. ನನಗೂ ಸ್ವಲ್ಪ ಶೂ ಮಾಡೋದ್ ಗೊತ್ತಿದೆ. ನಿಮ್ಮ ಶೂನಲ್ಲೇದರೂ ಸಮಸ್ಯೆಯಿದ್ದರೆ ತಿಳಿಸಿ, ನಾನೇ ನಿಮಗೊಂದು ಜೊತೆ ಹೊಸ ಶೂ ಮಾಡಿಕೊಡುತ್ತೇನೆ’. ಇಡೀ ಸಂಸತ್ನಲ್ಲಿ ನೀರವ ಮೌನ. ಕಿತ್ತು ತಿನ್ನುವ ಬಡತನ, ಸಾಮಾಜಿಕ ನಿಂದನೆ, ಸರಣಿ ರಾಜಕೀಯ ಸೋಲುಗಳಲ್ಲಿ ಬೆಂದು ಅಪ್ಪಟ ಚಿನ್ನವಾದವರು ಲಿಂಕನ್. ಸೋಲಿನಿಂದ ಪರಿಪಕ್ವನಾದವನನ್ನು ಸೋಲಿಸುವುದಾಗಲಿ, ಆವಮಾನಿಸುವುದಾಗಲಿ ಅಸಾಧ್ಯ.
ಮಗುವಿನಲ್ಲಿ ತನ್ನ ಪರಂಪರೆ, ಸಂಸ್ಕೃತಿ, ಕಸುಬು, ದೇಶ, ಭಾಷೆ, ಅಪ್ಪ ಅಮ್ಮನ ಬಗ್ಗೆ ಅತೀವ ಗೌರವ ಮತ್ತು ಹೆಮ್ಮೆಯನ್ನು ಬೆಳೆಸುವುದು ಶಿಕ್ಷಣದ ಮುಖ್ಯ ಭಾಗವಾಗಬೇಕು. ಶಿಕ್ಷಣ ನಮ್ಮ ಪದವಿ, ಕೆಲಸ, ಹುದ್ದೆ, ಶ್ರೀಮಂತಿಕೆ, ಕೀರ್ತಿಗಳ ಕಡೆಗಿನ ಓಟದ ಮಧ್ಯದಲ್ಲಿ ಬದುಕಿಗೆ ಮಹತ್ವ ಕೊಡಬೇಕಿದೆ. ಸೋಲು ಬೀಳಿನ ಜೊತೆಗೆ ನಗುನಗುತಾ ಸುಂದರ ಜೀವನ ಕಟ್ಟಿಕೊಳ್ಳುವುದನ್ನು ಕಲಿಸಬೇಕಿದೆ. ಅದಕ್ಕಾಗಿಯೇ ಮಕ್ಕಳನ್ನು ಸೋಲುವುದಕ್ಕೆ ಬಿಡಿ. ಬದುಕಲ್ಲಿ ಸೋಲೇ ಗೆಲುವು. ಗೆಲುವು ಸೋಲಾಗಬಾರದು.
– ಡಾ| ರಾಜೇಶ್ ಕುಮಾರ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ