ಕೋಲು ಹಿಡಿದು ಪರಿಪೂರ್ಣತೆಯತ್ತ ನಡೆದ ಗಾಂಧಿ


Team Udayavani, Oct 2, 2019, 11:26 AM IST

Gandhi-New

“ನನ್ನ ಜೀವನವೇ ನನ್ನ ಸಂದೇಶ’ ಎಂದು ಹೇಳಿಹೋದ ಮಹಾತ್ಮಾ ಗಾಂಧಿ ಆತ್ಮವಿಕಸನ ಕ್ಕೊಂದು ಶ್ರೇಷ್ಠ ಮಾದರಿ. ದಿನ ನಿತ್ಯದಲ್ಲಿ ಸಂತೋಷದ, ಸಂತೃಪ್ತಿಯ ಜೀವನ ಸಾಗಿಸುವುದರಿಂದ ಹಿಡಿದು, ಚತುರ  ರಾಜಕಾರಣಿಯಾಗಬಲ್ಲ, ಮೇರು ನಾಯಕನಾಗಬಲ್ಲ/ಕೌಟುಂಬಿಕ ನಾಗಿಯೇ ತಾತ್ವಿಕತೆಯ ಮೇರು ಪರ್ವತ ವಾಗಬಲ್ಲ, ಸಾರ್ವಜನಿಕ ಬದುಕಿನಲ್ಲಿ ದಾರಿದೀಪವಾಗಬಲ್ಲ ಸಾಧ್ಯತೆಗಳನ್ನು ಕಲಿಸಿ ಹೋದವರು ಅವರು.

ಗಾಂಧೀಜಿ ನಮಗೆ ಕಲಿಸಿಹೋದ ಪ್ರಥಮ ಪಾಠ ಶುಚಿತ್ವಕ್ಕೆ ವ್ಯಕ್ತಿತ್ವದ ನಿರೂಪಣೆಯಲ್ಲಿ ಇರುವ ಮಹತ್ವದ ಪಾತ್ರ. ದೈಹಿಕ ಮತ್ತು ಮಾನಸಿಕ ಶುಚಿತ್ವಕ್ಕೆ ಗಾಂಧಿ ಮಹತ್ವ ನೀಡುತ್ತಿದ್ದರು. ಸರಳ, ಸ್ವತ್ಛ ಬಟ್ಟೆಗಳನ್ನು ಧರಿಸುತ್ತಿದ್ದರು. ತಮ್ಮ ಟಾಯ್ಲೆಟ್‌ಗಳನ್ನು ಅಷ್ಟೇ ಅಲ್ಲ, ಬೇರೆಯವರ
ಟಾಯ್ಲೆಟ್‌ಗಳನ್ನು ಕೂಡಾ ತೊಳೆಯುತ್ತಿದ್ದರು. ತಮ್ಮ ಆಶ್ರಮದ ಸ್ವತ್ಛತೆಯ ಕುರಿತು ಅವರಿಗೆ ವಿಶೇಷ ಕಾಳಜಿ. ಪ್ರವಾಸ ಹೋದಲ್ಲೆಲ್ಲ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಉಳಿದು ಆ ಪ್ರದೇಶವನ್ನು ಓರಣವಾಗಿರಿಸಿಕೊಳ್ಳಲು ಜನರಿಗೆ ಕಲಿಸಿ ಬರುತ್ತಿದ್ದರು. ಅವರಿಗೆ ತಿಳಿದಿದ್ದೆಂದರೆ ಶುಭ್ರತೆ ಇರುವಲ್ಲಿ ಧನಾತ್ಮಕ ಶಕ್ತಿ ಇರುತ್ತದೆ. ಮನಸ್ಸು ಪ್ರಫ‌ುಲ್ಲಿತ ವಾಗುತ್ತದೆ. ಇಂಥ ಆಹ್ಲಾದಕರತೆಯ ಶಕ್ತಿಯನ್ನು ವ್ಯಕ್ತಿಯೊಬ್ಬ ಯಶಸ್ವಿ ಜೀವನಕ್ಕಾಗಿ ಪಡೆದು ಕೊಳ್ಳುವ ಅಗತ್ಯತೆ ಗಾಂಧೀಜಿಗೆ ಗೊತ್ತಿತ್ತು.

ಗಾಂಧೀಜಿ ತಮ್ಮ ದೈಹಿಕ ಆರೋಗ್ಯದ ಕುರಿತೂ ತುಂಬ ಕಾಳಜಿ ವಹಿಸುತ್ತಿದ್ದರು. ಅವರ ದಿನ ಆರಂಭ ವಾಗುತ್ತಿದ್ದುದು ಒಂದು ಸುದೀರ್ಘ‌ ವಾಕ್‌ನಿಂದ. ವೇಗವಾಗಿ ನಡೆಯುತ್ತಿದ್ದ ಅವರು ತಮ್ಮ ಇಡೀ ದಿನದ ಕೆಲಸಕ್ಕೆ ಬೇಕಾಗುವ ಶಕ್ತಿಯನ್ನು ವಾಕಿಂಗ್‌ನಿಂದ ಪಡೆಯುತ್ತಿದ್ದರು. ಆರೋಗ್ಯಕ್ಕಾಗಿ ಏನು ಆಹಾರ ತಿನ್ನಬೇಕು ಎನ್ನುವುದರ ಕುರಿತೂ ಗಾಂಧೀಜಿ ಸ್ವತಃ ಅಧ್ಯಯನ ನಡೆಸಿದ್ದರು. ಆಡಿನ ಹಾಲು, ನೆಲಗಡಲೆ ಬೀಜ, 75 ಗ್ರಾಂ ಸೊಪ್ಪು, 150 ಗ್ರಾಂ ಅಕ್ಕಿ, ಅಥವಾ ಗೋದಿ, ಹಣ್ಣುಗಳು ಅವರ ಆಹಾರ. ದುಶ್ಚಟಗಳು ಮನುಷ್ಯನನ್ನು ದೈಹಿಕವಾಗಿ, ಮಾನಸಿಕವಾಗಿ ಹಾಳುಮಾಡುತ್ತವೆ ಎನ್ನುವುದು ಅವರಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವುಗಳಿಂದ ಎಲ್ಲರೂ ದೂರ ಉಳಿಯಬೇಕೆಂದು ಹೇಳುತ್ತಿದ್ದುದು.

ನೈತಿಕ ಶಕ್ತಿಗಿಂತ ದೊಡ್ಡದು ಬೇರೇನೂ ಇಲ್ಲ ಎನ್ನುವುದೂ ಅವರಿಗೆ ತಿಳಿದಿತ್ತು. ಧೈರ್ಯದ ಮೂಲಸೆಲೆಯಿರುವುದು ನೈತಿಕತೆಯಲ್ಲಿ ಎನ್ನುವುದನ್ನು ಅರಿತಿದ್ದರು. ಹೀಗೆ ನೈತಿಕಪ್ರಜ್ಞೆಯಿರುವ ವ್ಯಕ್ತಿಗೆ ಅಪಾರ ಶಕ್ತಿ ಪ್ರಾಪ್ತವಾಗುತ್ತದೆ. ಋಷಿ-ಮುನಿಗಳಂತಹ ಶಕ್ತಿ. ಆ ಶಕ್ತಿಯನ್ನು ವರ್ಧಿಸಿ ಕೊಳ್ಳುವುದು ಹೇಗೆ? ಮನುಷ್ಯ ತನ್ನ ನೈತಿಕತೆಯ ಮೂಲ ಮೌಲ್ಯಗಳನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ಹಾಗೆಯೇ ನಡೆಯುತ್ತ ಹೋಗಬೇಕು. ಇದು ಶಾರ್ಟ್‌-ಟರ್ಮ್ನಲ್ಲಿ ಕಷ್ಟವೆಂದು ಅನಿಸಿದರೂ ದೀರ್ಘ‌ ಕಾಲದಲ್ಲಿ ಜಾಣತನದ ವಿಷಯ ಕೂಡ. ಏಕೆಂದರೆ ಈ ಶಕ್ತಿ ನೀಡುವ ನೈತಿಕ ಬಲ ವ್ಯಕ್ತಿ, ಕುಟುಂಬ ಮತ್ತು ಸಾಮಾಜಿಕ ಸಂಬಂಧ ಗಳಲ್ಲಿನ ಗೊಂದಲಗಳನ್ನು ನಿವಾರಿಸುತ್ತದೆ. ನೈತಿಕ ಶಕ್ತಿಗೆ ಶ್ರೇಷ್ಠ ಉದಾಹರಣೆ ಗಾಂಧಿ. ಅವರ ವೈಯಕ್ತಿಕ ನೈತಿಕ ಬಲವೇ ಕ್ರಮೇಣ ಬಾಹ್ಯ, ಸಾಮಾಜಿಕ ಸ್ವರೂಪ ಪಡೆದು ಸತ್ಯ-ಅಹಿಂಸೆ ಎಂಬ ಪ್ರಚಂಡ ರಾಜಕೀಯ ಅಸ್ತ್ರಗಳಾಗಿ ನಿರೂಪಣೆಗೊಂಡಿದ್ದು. ಈ ಅಸ್ತ್ರಗಳು ಸೂರ್ಯ ಎಂದೆಂದೂ ಮುಳುಗದ ಸಾಮ್ರಾಜ್ಯವಾದ ಬ್ರಿಟಿಷ್‌ ದೇಶದ ಶಕ್ತಿಯನ್ನು ಕಳೆಗುಂದಿಸಿದ್ದು.

ಹಾಗೆಯೇ ಮನುಷ್ಯ ತನ್ನ ಜ್ಞಾನದ ಮತ್ತು ಕರ್ಮದ ಕ್ಷಿತಿಜಗಳನ್ನು ಹೇಗೆ ವಿಸ್ತಾರ ಮಾಡಿಕೊಳ್ಳುತ್ತಾ ಹೋಗಬಹುದು ಎನ್ನುವುದನ್ನೂ ಗಾಂಧೀಜಿಯವರಿಂದ ಕಲಿಯಬೇಕು. ಗಾಂಧಿ ಭಗವದ್ಗೀತೆ, ಬೈಬಲ್‌, ಖುರಾನ್‌, ಟೊಲ್‌ಸ್ಟಾಯ್‌-ರಸ್ಕಿನ್‌ನ ಕೃತಿಗಳು ಇತ್ಯಾದಿಗಳನ್ನು ಆಳವಾಗಿ ಓದಿದ್ದರು. ಪುಸ್ತಕಗಳು ಅವರ ಜೀವನವನ್ನು ಗಾಢವಾಗಿ ಪ್ರಭಾವಿಸಿದ್ದವು. ಜೊತೆಗೇ ಅವರ ವಿಸ್ತಾರವಾದ, 3ನೆಯ ದರ್ಜೆಯ ರೈಲ್ವೆ ಸಂಚಾರಗಳು ಅವರಿಗೆ ನಿಜ ಜೀವನದ ಪಾಠಗಳನ್ನು ಕಲಿಸಿ ಕೊಟ್ಟಿದ್ದವು. ದೇಶದ ಬಡತನ, ಮೂಢ ನಂಬಿಕೆ ಇತ್ಯಾದಿ ಸಮಸ್ಯೆಗಳನ್ನು ಪ್ರಯಾಣಗಳ ಮೂಲಕ ಅರಿತು ಕೊಂಡರೆ ಅವುಗಳಿಗೆ ಪರಿಹಾರಗಳನ್ನು ತಮ್ಮ ಆಳವಾದ ಅಧ್ಯಯನಗಳಿಂದ ಪಡೆದಿದ್ದರು.

ಅವರು ದೃಢವಾಗಿ ನಂಬಿದ್ದೆಂದರೆ ಜೀವನಕ್ಕೆ ಸಾರ್ಥಕತೆ ಯನ್ನು ತಂದುಕೊಡುವುದು ವ್ಯಕ್ತಿಯ ಕ್ರಿಯಾಶೀಲತೆ. ಮನುಷ್ಯ ಕೇವಲ ಪುಸ್ತಕದ ಬದನೆಕಾಯಿಯಾಗಿ ಅಥವಾ ಬೇರೆ ಜಗತ್ತಿಗೆ ಮುಖಮಾಡಿ ಈ ಜಗತ್ತಿಗೆ ಸಂಬಂಧಿಸಿದ ಕ್ರಿಯಾಶೀಲತೆಯನ್ನು ಕಳೆದುಕೊಂಡು ಬಾಳಬಾರದು. ಅಂತಹ ಬದುಕು ಅರ್ಥಹೀನ. ವ್ಯಕ್ತಿ ಸಕ್ರಿಯವಾಗಿ ಸುತ್ತ-ಮುತ್ತಲಿನ ಜೀವನದ ಪ್ರಕ್ರಿಯೆಗಳಿಗೆ ಸ್ಪಂದಿಸುತ್ತಲೇ ಇರಬೇಕು. ಇಂತಹ ಕ್ರಿಯಾಶೀಲತೆಗೊಂದು ಗುರಿಯನ್ನು ಕೂಡ ಕಂಡುಕೊಂಡಿದ್ದರು ಗಾಂಧಿ. ಗಾಂಧೀಜಿಯ ರಾಜಕೀಯ ಪ್ರವೇಶ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾದದ್ದು ವರ್ಣಬೇಧ ನೀತಿಯ ವಿರುದ್ಧವಾಗಿ. ಹಾಗೆಯೇ ಅದು ವೇಗ ಪಡೆದುಕೊಂಡಿದ್ದು ಮಾನವ ವ್ಯಕ್ತಿಗಳಿಗೆ ಬದುಕಲು ಬೇಕಾದ ವೈಯಕ್ತಿಕ ಘನತೆಯನ್ನು ವ್ಯವಸ್ಥೆಗಳು ಕಸಿದುಕೊಂಡಿದ್ದನ್ನು ಮರಳಿ ಪಡೆದುಕೊಳ್ಳುವ ಹೋರಾಟವಾಗಿ.

ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ಹೊರಹಾಕಿದ್ದನ್ನು ಗಾಂಧೀಜಿ ಕಂಡಿದ್ದು ಕೇವಲ ವೈಯಕ್ತಿಕ ನೋಟದಿಂದ ಅಲ್ಲ. ಅದನ್ನು ಅವರು ಕಂಡುಕೊಂಡಿದ್ದು ಇಡೀ ಒಂದು ಮಾನವತೆಯ ಅವಮಾನದ ಸಂಕೇತವಾಗಿ. ಗಾಂಧೀಜಿ ಅಂದುಕೊಂಡಂತೆ ಮಾನವತೆಗೆ ಒಳ್ಳೆಯ ಬದುಕನ್ನು ಸೃಷ್ಟಿಸುವ ಸಲುವಾಗಿ ಧ್ವನಿ ಎತ್ತುವುದೇ ವ್ಯಕ್ತಿಯೊಬ್ಬನ ಜೀವನದ ಕ್ರಿಯಾಶೀಲತೆಯ ಅರ್ಥ. ಅಸಹಾಯಕರ ಕಣ್ಣೀರಿಗೆ ಸ್ಪಂದಿಸುವುದೇ ನಿಜವಾದ ದೇವರ ಸೇವೆ. ಈ ಪ್ರಕ್ರಿಯೆ ಯಲ್ಲಿ ಅನ್ಯಾಯದ ವಿರುದ್ಧ ಹೋ ರಾಡಬೇಕಾಗಬಹುದು ಎನ್ನುವುದು ಗಾಂಧಿಗೆ ತಿಳಿದಿತ್ತು. ಇಂತಹ ನೈತಿಕ ಹೋರಾಟಕ್ಕೆ ವ್ಯಕ್ತಿಯೊಬ್ಬ ಬೆನ್ನು ಹಾಕದಂತಹ ಧೈರ್ಯ ಬೆಳೆಸಿಕೊಳ್ಳಬೇಕು ಎನುವುದು ಅವರ ಅಭಿಪ್ರಾಯ ವಾಗಿತ್ತು. ಹೀಗೆ ನೈತಿಕವಾದ, ಭಯವನ್ನು ಮೀರಿದ ಕ್ರಿಯೆ ಶ್ರೇಷ್ಠ ವಾದುದು. ಇಲ್ಲಿ ಇನ್ನೂ ಒಂದು ವಿಷಯ ಹೇಳಬೇಕು. ಕೇವಲ ಪ್ರಾಮಾಣಿಕತೆಯೊಂದೇ ಸಾಲದು, ಬುದ್ಧಿವಂತಿಕೆ ಇರಲೇಬೇಕು ಎನ್ನವುದು ಗಾಂಧಿಗೆ ತಿಳಿದಿತ್ತು. ಈ ಕುರಿತಾಗಿ ಚಿಕ್ಕ ಕಥೆಯೊಂದನ್ನು ಗಾಂಧಿಯೇ ಹೇಳಿಕೊಳ್ಳುತ್ತಾರೆ.

ಏನೆಂದರೆ ವಿದ್ಯಾರ್ಥಿಯಾಗಿದ್ದಾಗ ಮಧ್ಯಾಹ್ನ ಮೂರು ಗಂಟೆಗೆ ಕ್ಲಾಸಿಗೆ ಹಾಜರಾಗಬೇಕಿತ್ತು. ಗಡಿಯಾರ ತಪ್ಪು ಸಮಯ ತೋರಿಸಿದ ಕಾರಣ ಗಾಂಧೀಜಿಗೆ ಸಮಯಕ್ಕೆ ತರಬೇತಿಗೆ ಹೋಗಲಾಗಲಿಲ್ಲ.

ಪ್ರಾಮಾಣಿಕರಾಗಿದ್ದ ಗಾಂಧಿ ಶಿಕ್ಷಕರಿಗೆ ಅದೇ ಮಾತನ್ನು ಹೇಳಿಕೊಂಡು ಕ್ಷಮೆ ಕೋರಿದರು. ಆದರೆ ಶಿಕ್ಷಕರು ಗಾಂಧಿಯ ಮಾತನ್ನು ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಗಾಂಧಿ ಶಿಕ್ಷೆ ಅನುಭವಿಸಬೇಕಾಯಿತು. ಆ ಸಂದರ್ಭದಲ್ಲಿ ಶಿಕ್ಷಕರು ಹೇಳಿದ ಮಾತನ್ನು ಗಾಂಧಿ ಜೀವನದುದ್ದಕ್ಕೂ ಸ್ಮರಿಸುತ್ತಲೇ ಇದ್ದರು. ಅದೇನೆಂದರೆ “ಪ್ರಾಮಾಣಿಕನಾಗಿರುವ ವ್ಯಕ್ತಿ ತುಂಬ ಬುದ್ಧಿವಂತನಾಗಿರಬೇಕು’ ಕೂಡ. ಅಲ್ಲದೆ ಆತ ನೈತಿಕವಾಗಿ ಅಥವಾ ಕಾನೂನಾತ್ಮಕವಾಗಿ ತಪ್ಪು ಕೆಲಸ ಮಾಡಬಾರದು. ಬೇರೆಯವರು ಬೆರಳು ತೋರಿಸದಂತಿರಬೇಕು. ಹೀಗೆ ಇರಬೇಕಾದರೆ ವ್ಯಕ್ತಿಯೊಬ್ಬನಿಗೆ ತನ್ನ ನೈತಿಕ ಮೌಲ್ಯಗಳ ಸ್ಪಷ್ಟ ಅರಿವು ಮತ್ತು ಕಾನೂನಿನ ಅರಿವು ಕೂಡ ಇರಬೇಕಾಗುತ್ತದೆ. ತಾನು ಏನು ಮಾಡುತ್ತಿದ್ದೇನೆ ಎನ್ನುವುದರ ಕುರಿತಾದ ಸ್ಪಷ್ಟ ಅರಿವು ಇರಬೇಕಾಗುತ್ತದೆ. ಅಪಾರ ಬುದ್ಧಿವಂತಿಕೆ ಬೆಳೆಸಿ ಕೊಳ್ಳ ಬೇಕಾಗುತ್ತದೆ. ಪ್ರಾಮಾಣಿಕತೆ ಎಂದರೆ ಮುಗ್ಧತೆಯಲ್ಲ, ಅಜ್ಞಾನವಲ್ಲ. ಜ್ಞಾನದ ಅರಿವು.

ಬ್ರಿಟಿಷ್‌ ಸರ್ಕಾರದೊಂದಿಗೆ ನೆಗೋಶಿಯೇಟ್‌ ಮಾಡಬಲ್ಲ ಅಥವಾ ಒಂದು ದೊಡ್ಡ ಪ್ರಮಾಣದ ಚಳವಳಿಯನ್ನು ಲೀಡ್‌ ಮಾಡಬಲ್ಲ ಎಲ್ಲ ಜ್ಞಾನ ಮತ್ತು ಅರಿವು ಗಾಂಧಿಗೆ ಇತ್ತು. ಬಹಳ ಜನ ತಪ್ಪಾಗಿ ಭಾವಿಸುವಂತೆ ಮಗುವಿನ ಮನಸ್ಸು ಹೊಂದಿದ್ದರೂ ಅಜ್ಞಾನಿಗಳು ಅಥವಾ ಏನೂ ಅರಿಯದ ಮುಗ್ಧರೇನೂ ಆಗಿರಲಿಲ್ಲ ಗಾಂಧೀಜಿ. ಗಾಂಧಿ ಸಮಗ್ರ ವ್ಯಕ್ತಿಯಾಗುವುದು ಹೀಗೆ. ತುಂಬ ಚತುರ ರಾಜಕಾರಣಿ ಅವರು. ಸುಭಾಶ್‌ಚಂದ್ರ ಬೋಸ್‌ ಅವರನ್ನು ಕಟ್ಟಿ ಹಾಕಿದ ರೀತಿ ಮತ್ತು ಪ್ರಧಾನಿಯಾಗುವ ಸ್ಪರ್ಧೆಯಿಂದ ಪಟೇಲ್‌ ಅವರನ್ನು ಗಾಂಧಿ ಹಿಂದೆ ಸರಿಸಿದ ರೀತಿ ಅವರ ರಾಜಕೀಯ ಚಾತು  ರ್ಯದ ಪರಿಚಯ ನೀಡುತ್ತವೆ. ಭಾರತ ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಗಾಂಧಿ ಜಿನ್ನಾಗೆ “ನಾನು ನಿಮಗೆ ವಿಭಜನೆಯ ದುಷ್ಪರಿಣಾಮಗಳ ಕುರಿತಾಗಿ ಹೇಳಲು ಭೇಟಿಯಾಗಬೇಕಿದೆ. ನಿಮ್ಮ ಸಮಯ ತಿಳಿಸಿ’ ಎಂದು ಸಂದೇಶ ಕಳಿಸಿದ್ದರಂತೆ. ಆದರೆ ಇದನ್ನು ನಿರಾಕರಿಸಿದ ಜಿನ್ನಾ “ಆತ ಪ್ರಚಂಡ ಬುದ್ಧಿವಂತ. ಆತನೊಂದಿಗೆ ಮಾತನಾಡಿ ಗೆಲ್ಲುವುದು ಕಷ್ಟ. ಹಾಗಾಗಿ ನಾನು ಅವರನ್ನು ಭೇಟಿಯಾಗಲಾರೆ’ ಎಂದು ಹೇಳಿದ್ದರಂತೆ. ಗಾಂಧಿ ಅಂತಹ ರಾಜಕೀಯ ಪಟು ಕೂಡ ಹೌದು. ಹೇಳಬೇಕಾದದ್ದೆಂದರೆ ಗಾಂಧಿಗೆ ಈ ಜಗತ್ತು ತಿಳಿದಿತ್ತು.

ಗಾಂಧೀಜಿ ಸ್ಪಷ್ಟವಾಗಿ ಗ್ರಹಿಸಿದ್ದೆಂದರೆ ಹೀಗೆ ವ್ಯಕ್ತಿಯೊಬ್ಬ ತನ್ನೊಳಗೆ ಬೆಳೆಯುತ್ತ ಸಮಾಜದ ಬೆಳವಣಿಗೆಯ ಭಾಗವಾಗಬೇಕು. ಹಾಗೆ ಬದುಕಿದಾಗ ಸಂತೃಪ್ತಿ, ಸಂತೋಷ, ಧನ್ಯತೆ ಜೀವನವನ್ನು ಆವರಿಸಿಕೊಳ್ಳುತ್ತವೆ. ನಾವು ಅರ್ಥ ಮಾಡಿಕೊಳ್ಳಬೇಕಾದದ್ದೆಂದರೆ ವ್ಯಕ್ತಿಯ ತಾತ್ವಿಕ ಬೆಳವಣಿಗೆಯ ಅಗತ್ಯತೆ ಕೂಡ ಗಾಂಧಿಗೆ ಅರಿವಿತ್ತು. ತಮ್ಮೊಳಗೇ ತಾವು ಮಾನವೀಯತ್ವವನ್ನು ಮಿರಿಕೊಂಡು ದೈವತ್ವವನ್ನು ಸಾಧಿಸುವ ಹಂಬಲ ಕೂಡ ಅವರಿಗಿತ್ತು. ತಮ್ಮೊಳಗಿನ ಅರಿಷಡ್ವರ್ಗಗಳನ್ನು ಅಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ತಾನು ಗೆದ್ದುಕೊಂಡಿದ್ದೇನೆಯೇ ಎಂಬ ಪರೀಕ್ಷೆಗಳನ್ನು ಗಾಂಧಿ ನಡೆಸಲಾರಂಭಿಸಿದ್ದು ಎಲ್ಲರಿಗೂ ಗೊತ್ತು. ತಮ್ಮ ರಾಜಕೀಯ ಗುರಿ ಮುಗಿಸಿದ್ದ ಅವರು ಜೀವನದ ಕೊನೆಯ ಹಂತಗಳಲ್ಲಿ ಸಂತರಾಗಿ ಹೋಗಿದ್ದೂ ಎಲ್ಲರಿಗೂ ತಿಳಿದ ವಿಷಯ. ಜೊತೆಯಲ್ಲಿಯೇ ಯಾವುದೇ ಸಾಮಾನ್ಯ ವ್ಯಕ್ತಿ ಕೂಡ ಪಾಠಗಳನ್ನು ಕಲಿತು ಬದ್ಧನಾಗುವುದರ ಮೂಲಕ, ಅಸಾಧಾರಣ ವ್ಯಕ್ತಿಯಾಗಿ ಬೆಳೆಯಬಹುದಾದ ಸಾಧ್ಯತೆಗಳನ್ನು ನಮ್ಮೆಲ್ಲರ ಮುಂದೆ ತೆರೆದಿಟ್ಟು ಬೆಳಕಿನ ದೀವಿಗೆಯಾಗಿ ಬದುಕಿದವರು ಗಾಂಧಿ.

*ಡಾ. ಆರ್‌.ಜಿ.ಹೆಗಡೆ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.