ಯುಗಾದಿ ಅಂದರೇ, ಆರಂಭ ಅಷ್ಟೇ ಅಲ್ಲ..! ಹೊಸ ಶಕ್ತಿ ತುಂಬಿಸುವ ಸೂಚ್ಯ ದಿನ
ಶಾರ್ವರೀ ನಾಮ ಸಂವತ್ಸರ ಮುಗಿದು, ಪ್ಲವನಾಮ ಸಂವತ್ಸರ ಅಡಿಯಿಟ್ಟಿದೆ
Team Udayavani, Apr 13, 2021, 10:56 AM IST
‘ಆರಂಭ’ ಎಂಬ ಸಂಗತಿಗೆ ವಿಶೇಷ ಅರ್ಥವಿದೆ, ಮನ್ನಣೆಯಿದೆ. ಯಾವುದೇ ಧರ್ಮವಿರಲಿ, ದೇಶವಿರಲಿ, ಕೈಗೆತ್ತಿಕೊಳ್ಳಲಿರುವ ಹೊಸ ಕಾರ್ಯಗಳಿರಲಿ, ವಿಶೇಷ ಸಂದರ್ಭಗಳಿರಲಿ…… ಎಲ್ಲದರಲ್ಲಿಯೂ ಈ ಆರಂಭ ಎಂಬ ಮೊದಲ ಹಂತಕ್ಕಿರುವ ಮಹತ್ವವೇ ಅಪೂರ್ವವಾದುದು.
ಆರಂಭ ಚೆನ್ನಾಗಿತ್ತು ಎಂದರೆ ಇಡೀ ಕೆಲಸ ಚೆನ್ನಾಗಿಯೇ ಸಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಹಾಸುಹೊಕ್ಕಾಗಿ ಬಂದಿದೆ. ಈ ನಂಬಿಕೆಯ ಆಧಾರದಲ್ಲಿಯೇ ನಮ್ಮಲ್ಲಿ ಹಲವಾರು ಆಚರಣೆಗಳು ನಡೆದುಕೊಂಡೂ ಬಂದಿವೆ.
ಇಂತಹ ಆಚರಣೆಗಳಲ್ಲಿ ಮುಖ್ಯವೆನಿಸುವುದೇ ಯುಗಾದಿ. ಪ್ರತೀ ಧರ್ಮ- ಸಂಸ್ಕೃತಿಯಲ್ಲಿ ಅವರವರ ನಂಬಿಕೆ ಪರಂಪರೆಗಳನ್ನಾಧರಿಸಿ ಬೇರೆ ಬೇರೆ ದಿನಗಳಂದು ಹೊಸ ವರ್ಷಾಚರಣೆಯನ್ನು ಮಾಡುವುದು ರೂಢಿ. ಹಿಂದೂ ಪಂಚಾಂಗದ ಪ್ರಕಾರ ‘ಯುಗಾದಿ’ ಸಂವತ್ಸರ ಬದಲಾಗುವ ಮುಖ್ಯ ಕಾಲಘಟ್ಟ. ಸಂವತ್ಸರ ಬದಲಾಗುವುದರ ಜೊತೆಗೆ ಸಾಕಷ್ಟು ಪ್ರಾಕೃತಿಕ ಬದಲಾವಣೆಗಳನ್ನೂ ತರುವ ವಿಶೇಷ ಸಂದರ್ಭ ಯುಗಾದಿ.
ಓದಿ : ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.
ಬಾಡಿ ಹೋಗಿ, ಎಲೆಗಳುದುರಿ ಜೀವಂತಿಕೆ ಕಳೆದುಕೊಂಡ ಪ್ರಕೃತಿಯಲ್ಲಿ ಹೊಸ ಚಿಗುರು ಮೂಡುವ ಸುಸಮಯ ಇದು. ಹೊಸ ಚಿಗುರಿನ ಸದಾಶಯದೊಂದಿಗೆ ಫಲಪುಷ್ಪಗಳು ಅರಳಿ ಪ್ರಕೃತಿ ಮರಳಿ ಜೀವಂತಿಕೆಯನ್ನು ಪಡೆದುಕೊಳ್ಳುವ ಮಹತ್ವದ ಕಾಲಘಟ್ಟ ಇದು. ಪ್ರಕೃತಿಯಲ್ಲಾಗುವ ಈ ಅರ್ಥಗರ್ಭಿತ ಬದಲಾವಣೆ ಮಾನವನ ಜೀವನದೊಂದಿಗೆ ನೇರ ಸಂಬಂಧ ಹೊಂದಿದೆ ಎಂಬುದು ಸುಳ್ಳಲ್ಲ. ಹಸಿರು ಕಳೆದುಕೊಂಡು ನಿರ್ಜಿವ ವಸ್ತುವಿನಂತಾಗುವ ಪ್ರಕೃತಿ
ಹೊಸ ಚಿಗುರನ್ನು, ಫಲಪುಷ್ಪಗಳನ್ನು ಹಸಿರಾಗಿ, ಹಸನಾಗಿ ಸೇರಿಸಿಕೊಂಡು ಹೇಗೆ ಜೀವಂತಿಕೆಯ ಸೆಲೆಯಾಗುವುದೋ ಅಂತೆಯೇ ಜೀವನದ ಅರ್ಥಗಳು, ಆಶಯಗಳು ಹೊಸ ಆಯಾಮವನ್ನು ಪಡೆದುಕೊಳ್ಳುವ ಬದಲಾವಣೆಯ ವಿಪ್ಲವ ಕಾಲ ಇದು. ವರ್ಷ ಬದಲಾಗುವುದರ ಜೊತೆಗೆ ಹೊಸ ಅನುಭವಗಳು, ಆಲೋಚನೆಗಳು, ನಲಿವುಗಳು ಬರುವ ವರ್ಷದ ಆದಿಕಾಲ ಇದು. ಹಳೆಯ ನೀರು ಹೋಗಿ ಹೊಸ ನೀರು ಬರುವಂತೆ ಸಂಕಟ, ದು:ಖ-ದುಮ್ಮಾನಗಳು ಕಳೆದು ಹೊಸ ಆಶಾಕಿರಣಗಳಕ ಮೂಡಿಬರುವ ಸಂವತ್ಸರದಾದಿ ದಿನ ಇದು. ಹೊಸ ಚಿಂತನೆಗಳನ್ನು ಹೊಂದಲು, ಸವಾಲುಗಳನ್ನು ಎದುರಿಸಲು ಹೊಸ ಶಕ್ತಿಯನ್ನು ನೀಡುವ ಸೂಚ್ಯದಿನ ಈ ಯುಗಾದಿ.
ಯುಗಾದಿ ಹಬ್ಬಕ್ಕೆ ಮಾತ್ರವಲ್ಲ ಅಂದು ಸೇವಿಸುವ ಪ್ರಸಾದಕ್ಕೂ ವಿಶೇಷ ಅರ್ಥವಿದೆ. ಯುಗಾದಿಯಂದು ಬೇವು ಬೆಲ್ಲ ಸ್ವೀಕರಿಸುವ ಪ್ರತಿಯೊಬ್ಬ ತನ್ನ ಜೀವನದಲ್ಲಿ ಬರುವ ನೋವು ನಲಿವುಗಳನ್ನು ಸಮಾನ ಮನಸ್ಕನಾಗಿ ಸ್ಥಿತಪ್ರಜ್ಞೆಯಿಂದ ಸ್ವೀಕರಿಸುವುದನ್ನು ಕಲಿಯಬೇಕೆನ್ನುವ ಸಾಂಕೇತಿಕ ಅರ್ಥ ಈ ಆಚರಣೆಯ ಹಿಂದಿದೆ.
ಇದೇ ಆಶಯದೊಂದಿಗೆ ಯುಗಾದಿ ಮತ್ತೆ ಬಂದಿದೆ. ಶಾರ್ವರೀ ನಾಮ ಸಂವತ್ಸರ ಮುಗಿದು, ಪ್ಲವನಾಮ ಸಂವತ್ಸರ ಅಡಿಯಿಟ್ಟಿದೆ. ಕಳೆದ ಯುಗಾದಿಯನ್ನು ಮಾತ್ರವಲ್ಲ, ಇಡೀ ವರ್ಷವನ್ನು ಕೊರೊನಾ ಮಹಾಮಾರಿಯ ಕರಿನೆರಳು ಆವರಿಸಿಕೊಂಡಿತ್ತು. ಯುಗಾದಿ ಸಮಯದಲ್ಲಿ ಆದ ಲಾಕ್ ಡೌನ್ ತಿಂಗಳುಗಳ ಕಾಲ ಮುಂದುವರೆದು ಇಡೀ ದೇಶದ ಚಿತ್ರಣವನ್ನು ಬದಲಿಸಿತ್ತು. ಈ ಮೂಲಕ ಮನುಷ್ಯನ ಯಾಂತ್ರೀಕೃತ ಜೀವನದ ಶರವೇಗದ ಓಟಕ್ಕೆ, ಅಭಿವೃದ್ಧಿಯ ಆಟಾಟೋಪಕ್ಕೆ, ದುರಾಸೆಯ ಹಪಾಹಪಿತನಕ್ಕೆ ಎಲ್ಲೋ ಒಂದು ಕಡೆ ಕಡಿವಾಣ ಬಿದ್ದಿತ್ತು. ‘ ನಾನೇ ಎಲ್ಲ, ನನ್ನಿಂದಲೇ ಎಲ್ಲ’ ಎಂಬ ಮಾನವನ ಅಹಮಿಕೆಗೆ ಪ್ರಕೃತಿ ದೊಡ್ಡ ಪೆಟ್ಟು ನೀಡಿತ್ತು. ಎಲ್ಲ ರೀತಿಯಿಂದಲೂ ಅತಿವೇಗವಾಗಿ ಓಡುತ್ತಿದ್ದ ಮನುಷ್ಯನ ಜೀವನಕ್ಕೆ ‘ಲಾಕ್ ಡೌನ್’ ಮೂಲಕ ಜೀವನ ಸ್ತಬ್ಧವಾಗುವುದೆಂದರೇನೆಂದು ಪ್ರಕೃತಿ ತಿಳಿಸಿತ್ತು. ಈ ಮೂಲಕ 2020ರ ಮನುಷ್ಯನ ಜೀವನವನ್ನು ಬೇರೆ ನೆಲೆಗೆ ಹೋಗಿ ಹುಟ್ಟಿಸಿತ್ತು ಆ ಯುಗಾದಿ.
ಶಾರ್ವರಿ ಸಂವತ್ಸರ ಮುಗಿದು, ಕೊರೊನಾ ಕಾಲ ಕಳೆದು ಮತ್ತೆ ಹೊಸ ಯುಗಾದಿಯ ಹೊಸ್ತಿಲಲ್ಲಿ ನಾವು ನಿಂತಿದ್ದೇವೆ. ಹಳೆಯ ಅನುಭವಗಳ ಆಧಾರದಲ್ಲಿ ಹೊಸ ಆಶಯಗಳನ್ನು ಯೋಜಿಸಿ ಜೀವನವನ್ನು ಮರುರೂಪಿಸಿಕೊಳ್ಳಲು ನಾವು ಮತ್ತೆ ಸಜ್ಜಾಗಬೇಕಿದೆ. ಹೊಸ ವಿಚಾರಧಾರೆ, ಜೀವನ ರೀತಿಯೊಂದಿಗೆ ಪ್ಲವನಾಮ ಸಂವತ್ಸರವನ್ನು ಸ್ವಾಗತಿಸಬೇಕಿದೆ. ‘ಪ್ಲವ’ ಎಂಬುದಕ್ಕೆ ಈಜುವಿಕೆ ಎಂಬರ್ಥವಿದೆ. ಬರಲಿರುವ ಈ ನೂತನ ಸಂವತ್ಸರವು ಸುಂದರ ನಾಳೆಗಳನ್ನು ರೂಪಿಸಿಕೊಳ್ಳುವ ತಾಕತ್ತನ್ನು ನಮಗೆ ನೀಡಲಿ. ಜೀವನದ ಹೊಸ ಸವಾಲುಗಳನ್ನು ಎದುರಿಸುವ, ಅದರ ವಿರುದ್ಧ ಈಜಿ ಜಯಿಸುವ ಶಕ್ತಿಯನ್ನು ಕರುಣಿಸಲಿ. ಕಹಿಯನ್ನೆಲ್ಲ ನೀಗಿಕೊಂಡು ಸಿಹಿಯಾದ ಬದುಕನ್ನು ಅನುಭವಿಸುವ ಸಂಭ್ರಮ ನಿಮ್ಮದಾಗಲಿ.
ಶ್ರೀಗೌರಿ ಎಸ್. ಜೋಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ