ವಿಶ್ವಾಸ ನಮ್ಮೊಳಗಿದ್ದರೆ ನಾವ್ಯಾಕೆ ಗೆಲ್ಲಲಾರೆವು?
Team Udayavani, Dec 6, 2021, 5:30 AM IST
ಇದು ನನ್ನಿಂದ ಆಗುತ್ತಾ? ನಾನಿದನ್ನು ಮಾಡಬಲ್ಲೆನಾ? ಈ ತೆರನಾದ ಪ್ರಶ್ನೆಗಳು ಒಂದಲ್ಲ ಒಂದು ಹಂತದಲ್ಲಿ ನಮ್ಮನ್ನು ಕಾಡಿರುತ್ತವೆ. ಹೀಗೆಲ್ಲ ನಮ್ಮನ್ನ ನಾವೇ ಪ್ರಶ್ನಿಸಿಕೊಂಡಿರುತ್ತೇವೆ. ನಿಜ ತಾನೇ?
ಹೌದು. ಪ್ರತಿಯೊಬ್ಬರೂ ತಮ್ಮ ಜೀವ ನದ ಒಂದಲ್ಲ ಒಂದು ಹಂತದಲ್ಲಿ ಈ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮೂಲಕ ಸ್ವವಿಮರ್ಶೆ ಮಾಡಿಕೊಂಡಿರುತ್ತಾರೆ. ಆದರೆ ಈ ನಕಾರಾತ್ಮಕ ಪ್ರಶ್ನೆಗಳ ಬದಲಾಗಿ ಅವನ್ನು ಸಕಾರಾತ್ಮಕ ವಾಗಿಸಿಕೊಂಡರೆ ನಮ್ಮ ಗುರಿಯತ್ತ ಸ್ಪಷ್ಟ ಹೆಜ್ಜೆಗಳನ್ನಿರಿ ಸಲು ಸಾಧ್ಯ. ಧನಾತ್ಮಕ ಚಿಂತನೆಗಳು, ಪ್ರಶ್ನೆಗಳು ನಮ್ಮ ಆತ್ಮಬಲವನ್ನು ಹೆಚ್ಚಿ ಸುವ ಜತೆಯಲ್ಲಿ ನಮ್ಮನ್ನು ಪ್ರಯತ್ನಶೀಲ ಮತ್ತು ಪರಿಶ್ರಮಿಗಳನ್ನಾಗಿಸುತ್ತವೆ. ಇದನ್ನೇ ನೆಪೋಲಿಯನ್ ಹಿಲ್ ಪಾಸಿ ಟಿವ್ ಶೈಲಿಯಲ್ಲಿ ಹೇಳುತ್ತಾನೆ “yes i can’-ಇದು ನನ್ನಿಂದ ಸಾಧ್ಯ ಎನ್ನುವ ಆತ್ಮವಿಶ್ವಾಸವೇ ನಮ್ಮ ಗೆಲುವಿನ ಮೊದಲ ಮೆಟ್ಟಿಲು. ನನ್ನಿಂದಲೂ ಇದು ಸಾಧ್ಯವಿದೆಯಾ? ಎನ್ನುವ ಅವಿಶ್ವಾಸ ವಿದೆಯಲ್ಲ; ಅದೇ ಪತನದ ಕಂದರಕ್ಕೆ ಧುಮುಕುವ ಕೊನೆಯ ಅಂಚು!
ಸೋಲುಗಳ ಮೇಲೆ ಸೋಲುಗಳ ಸರಮಾಲೆ ಕಂಡರೂ ಅವಮಾನಗಳ ಮೇಲೆ ಅವಮಾನಗಳನ್ನು ಅನುಭವಿಸಿ ದರೂ ತನ್ನ ಅತ್ಯಂತ ಅಮೂಲ್ಯ ಜೀವನ ವನ್ನೇ ಮುಡಿಪಾಗಿಟ್ಟು ಸಂಶೋಧನೆ ನಡೆಸಿದ ಲ್ಯಾಬ್ ಅದೊಂದು ದಿನ ಕಣ್ಣ ಮುಂದೆ ಬೆಂಕಿಗೆ ಆಹುತಿಯಾಗಿ ಸುಟ್ಟು ಬೂದಿಯಾಗಿ ಹೋದರೂ ಮತ್ತೆ ಪ್ರಯತ್ನಿಸಿ ಗುರಿ ಸಾಧಿಸಿ ಗೆಲುವಿನ ನಗೆ ಬೀರಿ ಜಗತ್ತಿಗೇ ಬೆಳಕು ನೀಡಿದ ವಿದ್ಯುತ್ ಬಲ್ಬ್ ನ ಸಂಶೋಧಕ ಥಾಮಸ್ ಆಲ್ವಾ ಎಡಿಸನ್ ನಮಗೆ ಪ್ರೇರಣೆಯಾಗಬೇಕು. ಸೋಲುಗಳನ್ನು ಗೆಲುವಿನ ಕಡೆ ನೆಗೆಯುವ ಚಿಮ್ಮು ಹಲಗೆಯಾಗಿಸಿಕೊಂಡು ಗೆದ್ದು ಬಿಡ ಬೇಕು. ಇಂದಲ್ಲ ನಾಳೆ ಗೆದ್ದೇ ಗೆಲ್ಲುವೆ ಎನ್ನುವ ಅಗಾಧ ವಿಶ್ವಾಸ ನಮ್ಮೊಳಗಿದ್ದರೆ ನಾವ್ಯಾಕೆ ಗೆಲ್ಲಲಾರೆವು?
ಇದನ್ನೂ ಓದಿ:ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್ನಲ್ಲಿ ಘಟನೆ
ಗೆಲುವಾಗಲಿ, ಯಶಸ್ಸಾಗಲಿ ಅಷ್ಟೊಂದು ಸುಲಭ ರೀತಿಯಲ್ಲಿ ಒಲಿಯದು. ಸುಮ್ಮನೆ ಜಗತ್ತಿನ ನೂತನ ಆವಿಷ್ಕಾರಗಳ ಬಗ್ಗೆ ಗಮನ ಹರಿಸಿ. ಇಂದು ಸಾವಿರ ಸಾವಿರ ಕೋಟಿ ಮೊತ್ತದ ವ್ಯವಹಾರ ನಡೆಸುವ ಅದೆಷ್ಟೋ ಕಂಪೆನಿಗಳು ಹುಟ್ಟಿದ್ದು ಪುಟ್ಟದೊಂದು ಕೋಣೆಯಲ್ಲಿಯೋ, ಕಾರು ಗ್ಯಾರೇಜ್ನಲ್ಲಿಯೋ. ಪುಟ್ಟ ಪುಟ್ಟ ಜಾಗದಲ್ಲಿ ಆರಂಭಗೊಂಡು ಯಶ ಕಂಡವೇ ಹೆಚ್ಚು. ವಿಶ್ವದ ಎಲ್ಲ ಸಾಧಕರ ಕಥನಗಳನ್ನು ಅವಲೋಕಿಸಿದಾಗ ಅವರ ಪ್ರತಿಯೊಂದೂ ಯಶಸ್ಸು, ಸಾಧನೆಗಳ ಹಿಂದೆ ಬಹಳಷ್ಟು ಪರಿಶ್ರಮ, ಪ್ರಯತ್ನ, ಸೋಲು, ಅವಮಾನಗಳೆಲ್ಲವೂ ನಮಗೆ ಕಾಣಸಿಗುತ್ತವೆ. ಆದರೆ ಇವೆಲ್ಲ ಸವಾಲು ಗಳನ್ನು ಧೈರ್ಯದಿಂದ ಎದುರಿಸಿ ತಮ್ಮ ಗುರಿಯತ್ತ ಏಕಾಗ್ರ ಚಿತ್ತದಿಂದ ಪ್ರಯತ್ನಶೀಲರಾದ ಪರಿಣಾಮ ಅವರು ಸಾಧಕರಾಗಿ ಜಗದ ಮುಂದೆ ನಿಲ್ಲಲು ಸಾಧ್ಯವಾಯಿತು. ಆದರೆ ಅದೆಷ್ಟೋ ಜನರು ತಮ್ಮ ಜೀವನದಲ್ಲಿ ಯಶಸ್ಸು ಕಾಣಲು ಯಾಕೆ ಸಾಧ್ಯವಾಗಿಲ್ಲ ಎಂದರೆ ಅವರೊಳಗಿನ ಭಯ.
ಆ ಭಯವನ್ನು ಮೀರುವುದೇ ಒಂದು ಸವಾಲು. ಆ ಸವಾಲು ಸ್ವೀಕರಿಸಿದರೆ ಸೋಲಿನ ಭಯವಿಲ್ಲ. ಗೆಲುವಿಗೆ ಪ್ರಯತ್ನಿಸುವ ಮೊದಲೇ ಸೋಲಿನ ಸೊಲ್ಲು ನುಡಿ ದವ ಎಂದಾದರೂ ಗೆಲ್ಲುವುದು ಸಾಧ್ಯ ವಿದೆಯೇ?. ಇಂಥ ನಕಾರಾತ್ಮಕ ಮನೋಭಾವವೇ ನಮ್ಮ ಅರ್ಧ ಶಕ್ತಿ, ಆತ್ಮವಿಶ್ವಾಸವನ್ನು ಕುಗ್ಗಿಸಿಬಿಡುತ್ತದೆ. ಈ ಮನೋಭಾವದಿಂದ ಹೊರಬಂದು ಧನಾತ್ಮಕವಾಗಿ ಚಿಂತಿಸಲು ಆರಂಭಿಸಿ ದಾಗ ನಾವು ಗೆಲುವಿನ ಶಿಖರದ ಮಧ್ಯಭಾಗವನ್ನು ಏರಿದಂತೆ.
ನಾನೇನು ಮಾಡಬಲ್ಲೆ?, ನನ್ನಲ್ಲಿ ಯಾವ ಬಂಡವಾಳವೂ ಇಲ್ಲ ಎಂದು ನಿರಾಸೆಯ ಮಾತನಾಡುವವರು ಕೇವಲ ತನ್ನ ಹೊಸ ಯೋಚನಾ ಶಕ್ತಿಯ ಮೇಲೆ ಅತೀ ಪುಟ್ಟ ಬಂಡವಾಳದೊಂದಿಗೆ ತನ್ನ ತಲೆಯನ್ನೇ ಬಂಡವಾಳ ಮಾಡಿಕೊಂಡು ಗೆದ್ದ ಯಶಸ್ವೀ ಸಾಧಕರ ಜಗತ್ತಿನ ಬಗ್ಗೆ ಒಮ್ಮೆ ನೋಡಬೇಕು. ಇಂದು ನಮ್ಮ ಸುತ್ತಮುತ್ತ ಅಂಥ ಕಂಪೆನಿಗಳೇ ಇವೆ.
ಗೆಲುವು ಒಂದು ಧ್ಯಾನ, ಅದೊಂದು ತಪಸ್ಸು, ಅದೊಂದು ದೀಕ್ಷೆ, ಯಶಸ್ಸು ಎಂಬುದು ಜೀವನದ ಮಹತ್ತರವಾದ ಗುರಿ. ಅದಕ್ಕಿರುವ ಮೊದಲ ಅರ್ಹ ತೆಯೇ ಪರಿಶ್ರಮ, ಸಣ್ಣ ಸಣ್ಣ ಯಶಸ್ಸಿನ ಗೋಲು ಬಾರಿಸುತ್ತಾ ಗೆಲುವಿನ ಗುರಿ ತಲುಪುವ ಅಂತರಂಗದ ವಿಶ್ವಾಸದ ಗಂಗೆ ನಮ್ಮಲ್ಲಿ ಪುಟಿದೇಳಲಿ.
- ಶ್ರೀಲತಾ ಹರ್ಷವರ್ಧನ್ ಶೆಟ್ಟಿ, ವಂಡ್ಸೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ