ಸ್ವಾತಂತ್ರ್ಯ ಅಮೃತ ಮಹೋತ್ಸವ; ಏಕತೆಯನ್ನು ಸಾಧಿಸಿಕೊಟ್ಟ ಅಖಂಡ ಸೇನಾಪತಿ ಸರ್ದಾರ್ ಪಟೇಲ್
ಬ್ರಿಟಿಷರ ಕಪಟದಿಂದ ಅದು ಒಡೆದು ಇಬ್ಭಾಗವಾಗಿ ಒಂದು ಹೋಳು ಪಾಕಿಸ್ಥಾನವಾಯಿತು.
Team Udayavani, Aug 13, 2022, 12:16 PM IST
ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ನೋಡಿದರೆ ಪರಕೀಯ ಆಕ್ರಮಣಗಳಿಂದ ಉಂಟಾದ ರಾಜಕೀಯ ಸ್ಥಿತ್ಯಂತರಗಳು (ಬ್ರಿಟಿಷ್, ಡಚ್, ಪೋರ್ಚುಗೀಸರು ಮೊದಲಾದ ವಸಾಹತುಗಾರಿಕೆ ಯಿಂದ) ನಮ್ಮ ಸ್ವಾಯತ್ತೆಗೆ ಧಕ್ಕೆ ತಂದವು. ಈ ಅವಧಿಯಲ್ಲಿ ನೂರಾರು ದೇಶೀ ಸಂಸ್ಥಾನಗಳಾಗಿ ಹಂಚಿಹೋದ ಭಾರತವನ್ನು ಗುಲಾಮಿಯಿಂದ ಮುಕ್ತಗೊಳಿಸಿ, ಅದು ಸರ್ವತಂತ್ರ ಸ್ವತಂತ್ರದ ಏಕೋ ಪ್ರಜಾ ಪ್ರಭುತ್ವ ರಾಷ್ಟ್ರವಾಗಿ ನಿರ್ಮಾಣವಾಗುವು ದಕ್ಕೆ ಕಾರಣರಾದ ಅನೇಕ ರಾಷ್ಟ್ರ ಪುರುಷರು ಪ್ರಾತಃಸ್ಮರಣೀಯರಾಗಿದ್ದಾರೆ.
ಅವರಲ್ಲಿ ಮಹಾತ್ಮಾ ಗಾಂಧೀಜಿ ಅವರ ಕಟ್ಟಾ ಅನುಯಾಯಿಗಳಲ್ಲಿ ಅಗ್ರಪಂಕ್ತಿಯಲ್ಲಿ ಬರುವ ಉಕ್ಕಿನ ಪುರುಷ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಕೊಡುಗೆ ಅಪೂರ್ವವಾದದ್ದು. ಛಿದ್ರವಾಗಿದ್ದ ಭಾರತವೆಲ್ಲ ಅಖಂಡ ಸ್ವರೂಪವಾಗಿ ನೆಲೆಗೊಳ್ಳುವುದರಲ್ಲಿ ಪಟೇಲರ ಮುತ್ಸದ್ದಿತನದ ಸಾಹಸವು ಐತಿಹಾಸಿಕವಾದ ಆತ್ಮಗೌರವದ ಚರಿತ್ರೆ. ಮಹಾತ್ಮಾ ಗಾಂಧೀಜಿ ರಾಷ್ಟ್ರಪಿತರಾದರೆ, ಪಟೇಲರು ರಾಷ್ಟ್ರ ನಿರ್ಮಾತೃ.
ಗಾಂಧೀಜಿ ಅವರ ಭುಜಬಲ: ಮಹಾತ್ಮಾ ಗಾಂಧೀಜಿ ಅವರು ಇಂಗ್ಲೆಂಡಿನಲ್ಲಿ ನಡೆದ ದುಂಡುಮೇಜಿನ ಪರಿಷತ್ತಿನಿಂದ ಭಾರತಕ್ಕೆ ಮರಳಿದ ಮೇಲೆ, ಬ್ರಿಟಿಷ್ ಸರಕಾರವು ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತೆ ಬಂಧಿಸತೊಡಗಿತು. ಇದಕ್ಕೆ ದುಂಡು ಮೇಜಿನ ಪರಿಷತ್ತಿನಲ್ಲಿ ಸಂಧಾನವು ಬಹುಮಟ್ಟಿಗೆ ವಿಫಲ ಗೊಂಡುದೇ ಕಾರಣ. ಈ ಸಂದರ್ಭದಲ್ಲಿ ಬ್ರಿಟಿಷ್ ಸರಕಾರವು ಮಹಾತ್ಮಾ ಗಾಂಧೀಜಿ ಹಾಗೂ ಪಟೇಲರನ್ನು ಬಂಧಿಸಿ ಯರವಾಡಾ ಜೈಲಿನಲ್ಲಿ ಇರಿಸಿತು. ಆಗಿನ ನಿರ್ದಾಕ್ಷಿಣ್ಯ, ನಿಷ್ಕರುಣಿ ಸರಕಾರ ಪಟೇಲರ ಅಣ್ಣನ ಅಂತ್ಯ ಸಂಸ್ಕಾರಕ್ಕೂ ಅವರನ್ನು ಮನೆಗೆ ಬಿಡಲಿಲ್ಲ. ಅದರಿಂದ ಧೃತಿಗೆಡದ ಪಟೇಲರು ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿಗೆ ಬೆನ್ನೆಲು ಬಾಗಿಯೇ ನಿಂತರು. ಅದರಲ್ಲಿಯೂ ಕ್ವಿಟ್ ಇಂಡಿಯಾ ಚಳವಳಿಗಂತೂ ಅವರದು ಅಭೂತ ಪೂರ್ವ ಬೆಂಬಲ. ಆಗ ಎರಡನೇ ಮಹಾಯುದ್ಧವು ನಿಲ್ಲುವ ಸ್ಥಿತಿಗೆ ಬಂದಿತ್ತು. ಬ್ರಿಟಿಷರು ನೀಡಿದ ಆಶ್ವಾಸ ನೆಯು ಈಡೇರುವ ಉಷಃಕಾಲವದು. ಹಿಂದೂ ಸ್ಥಾನಕ್ಕೆ ಸ್ವಾತಂತ್ರ್ಯ ನೀಡದಿದ್ದರೆ ಉಳಿ ಗಾಲ ಇಲ್ಲವೆಂದು ಮನಗಂಡ ಬ್ರಿಟಿಷ್ ಸಾಮ್ರಾಜ್ಯ ಆಡಳಿತಾಧಿ ಕಾರವನ್ನು ಹಿಂದೂ ದೇಶೀಯರಿಗೆ ವಹಿಸಿಕೊಡಲು ಮುಂದಾಯಿತು. 1947ರ ಆ.15ರಂದು ಭಾರತೀ ಯರಿಗೆ ಸ್ವಾಯತ್ತತೆ ಮರಳಿಬಂದಿತು.
ಏಕತೆಯನ್ನು ಸಾಧಿಸಿಕೊಟ್ಟ ಅಖಂಡ ಸೇನಾಪತಿ: ಬ್ರಿಟಿಷರು ನಮ್ಮ ದೇಶದಿಂದ ತೆರಳುವಾಗ ಸುಮ್ಮನೆ ಹೋಗಲಿಲ್ಲ. ದೇಶೀಯ ಸಂಸ್ಥಾನಿಕರನ್ನು ಎತ್ತಿಕಟ್ಟುವ ರೀತಿಯಲ್ಲಿ “ಯಥಾ ಸ್ಥಿತಿ ಒಪ್ಪಂದ’ದ ಸೂತ್ರವನ್ನು ಬಿಟ್ಟುಹೋದರು. ಒಂದೇ ದೇಶವಾಗಿದ್ದ ಹಿಂದೂ ಸ್ಥಾನವನ್ನು ಭಾರತ ಮತ್ತು ಪಾಕಿಸ್ಥಾನ ಎಂಬ ಎರಡು ಹೋಳು ಮಾಡಿದರು. ಯಥಾಸ್ಥಿತಿ ಒಪ್ಪಂದ ಸೂತ್ರದಡಿ 556 ಸಂಸ್ಥಾನಗಳು ತಮಗೆ ಬೇಕಾದರೆ ಹೋಳಾದ ದೇಶದ ಯಾವ ಭಾಗಕ್ಕೂ ಸೇರಬಹುದು. ಇಲ್ಲವೇ ಸ್ವತಂತ್ರ ರಾಷ್ಟ್ರವಾಗಿಯೇ ಇರಬಹು ದೆಂಬುದೇ ಆ ಸೂತ್ರ ನೀಡಿದ ಪಠ್ಯಾರ್ಥ. ಇದು ಏಕತೆಗೆ ಅಪಾಯಕಾರಿ ಎಂಬುದನ್ನು ಊಹಿಸಿಕೊಂಡ ಗೃಹ ಸಚಿವ ಸರ್ದಾರ್ ಪಟೇಲರು ಅತ್ಯಂತ ಮುತ್ಸದ್ದಿತನದಿಂದ ಭಾರತ ಒಕ್ಕೂಟಕ್ಕೆ ಅಖಂಡತೆಯ ಪ್ರಜಾ ಸಾರ್ವಭೌಮತ್ವ ಒದಗಿಸಿ ಕೊಟ್ಟರು.
ಈ ಸಂದರ್ಭದಲ್ಲಿ ಪ್ರತ್ಯೇಕವಾಗಿ ಉಳಿಯಬೇ ಕೆಂದಿದ್ದ ಜುನಾಗಢ, ಭವಾಲ್ಪುರ, ಬರೋಡಾ, ಜಮ್ಮು-ಕಾಶ್ಮೀರ ಮತ್ತು ಹೈದರಾಬಾದ್ ಸಂಸ್ಥಾನಗಳೂ ಭಾರತ ಒಕ್ಕೂಟವನ್ನು ಒಪ್ಪಿಕೊಂಡದ್ದು ಪಟೇಲರ ದೂರದರ್ಶಿತ್ವದಲ್ಲಿದ್ದ ಪ್ರಜಾವಾತ್ಸಲ್ಯ ಮತ್ತು ಪ್ರಜಾಪ್ರಭುತ್ವದಲ್ಲಿದ್ದ ದಾರ್ಶನಿಕತೆಯ ಫಲವೆಂದೇ ಹೇಳಬೇಕು.
ಯಥಾಸ್ಥಿತಿ ಒಪ್ಪಂದ ಸೂತ್ರ ಮುಕ್ತಾಯ: ದೇಶಕ್ಕೆ ಏಕತೆಯ ಸ್ವರೂಪವನ್ನು ಪಡೆಯಲು ಸ್ವಾತಂತ್ರ್ಯ ಅನಂತರ ಒಂದು ವರ್ಷ, ಒಂದು ತಿಂಗಳು, ಎರಡು ದಿವಸ ಕಾಯಬೇಕಾಯಿತು. ಹೈದರಾಬಾದ್ ನಿಜಾಮ್ ಸಂಸ್ಥಾನದ ಸುಲ್ತಾನ ಮೀರ್ ಉಸ್ಮಾನ್ ಅಲಿಖಾನ್ 1934ರವರೆಗೆ ಸಾರ್ವಜನಿಕರ ಹಿತದೃಷ್ಟಿ ಯಿಂದಲೇ ಆಡಳಿತ ನೀಡಿದವರು. ಆದರೆ ಯಥಾಸ್ಥಿತಿ ಒಪ್ಪಂದ ಸೂತ್ರದಲ್ಲಿದ್ದ ದೇಶೀ ಸಂಸ್ಥಾ ನಗಳು ಬೇಕಾದರೆ ಸರ್ವಾಧಿಕಾರಿ ಸ್ವತಂತ್ರ ಸಾರ್ವ ಭೌಮ ರಾಗಬಹುದೆಂಬ ಸೂಚನೆಯು ನಿಜಾಮನ ಕನಸಿಗೆ ಉತ್ತೇಜನ ನೀಡಿತು. ಅದನ್ನು ಜಾತಿ-ಧರ್ಮ ಪಕ್ಷಪಾತಕ್ಕೆ ತಿರುಗಿಸಿ ದಳ್ಳುರಿ ಏಳಿಸಲು ಕಾಶೀಂ ರಜ್ವಿಯ ಪ್ರಚೋದನೆಯು ನಿಜಾಂ ಸುಲ್ತಾನರ ಕಣ್ಣುಗಳ ಬಣ್ಣಗೆಡಿಸಿದವು. ಆಗ ಹೈದರಾಬಾದ್ ಸಂಸ್ಥಾನವು ಹದಗೆಟ್ಟು ಸಾಮರಸ್ಯವನ್ನು ಕಳೆದು ಕೊಂಡಿತು. ಸಾರ್ವಜ ನಿಕರ ಸ್ಥಿತಿ ದಾರುಣಗೊಂಡಿತು. ಅಷ್ಟೇ ಅಲ್ಲ 1948ರ ಸೆಪ್ಟೆಂಬರ್ನಲ್ಲಿ ಸಂಸ್ಥಾನೀ ವಿರೋಧಿ ಗಳಿಂದ ಮೃತ್ಯು ದಿನ (ಡೈಯಿಂಗ್ ಡೇ) ಸಹ ನಿಶ್ಚಿತಗೊಂಡಿತು!
ಹದಗೆಟ್ಟ ನಿಜಾಮ್ ಸಂಸ್ಥಾನದ ಶ್ವೇತ ಪತ್ರವನ್ನು ಹೈದರಾಬಾದ್ ಸಂಸ್ಥಾನದ ಗಾಂಧೀಜಿ ಎನ್ನಿಸಿಕೊಂಡಿದ್ದ, ಸ್ಟೇಟ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸ್ವಾಮಿ ರಮಾನಂದ ತೀರ್ಥರು ಭಾರತ ಸರಕಾರಕ್ಕೆ ಸಲ್ಲಿಸಿದರು. ಅಲ್ಲದೆ ಕೇಂದ್ರ ಗೃಹ ಮಂತ್ರಿಗಳಾಗಿದ್ದ ಸರ್ದಾರ್ ಪಟೇಲರಿಗೂ ಪ್ರತ್ಯೇಕವಾಗಿ ನಿವೇದನೆ ಸಲ್ಲಿಸಿದ್ದರು. ಪರಿಣಾಮವಾಗಿ ಪಟೇಲರು ಪೊಲೀಸ್-ಸೇನಾ ಕಾರ್ಯಾಚರಣೆಗೆ ಆದೇಶ ನೀಡಿ, ನಿಜಾಮ್, ದೇಶೀಯ ಹೋರಾಟಗಾರರಿಗೆ ನಿಶ್ಚ ಯಿಸಿದ ಡೈಯಿಂಗೆ ಡೇ ಗಂಡಾಂತರವನ್ನು ತಪ್ಪಿಸಿದರು. ಪರಿಣಾಮವಾಗಿ 1948ರ ಸೆಪ್ಟಂಬರ್ 17ರಂದು ಹೈದರಾಬಾದ್ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನಗೊಂಡು, ಸ್ವತಂತ್ರ ಭಾರತದ ಹೈದರಾಬಾದ್ ರಾಜ್ಯವಾಗಿ ರೂಪ ತಳೆಯಿತು.
ಏಕತಾ ಭಾರತ ರಾಷ್ಟ್ರ ನಿರ್ಮಾಪಕ
ರಾಷ್ಟ್ರಪಿತನ ಕನಸು ಅಖಂಡ ಭಾರತವಾಗಿತ್ತು. ಬ್ರಿಟಿಷರ ಕಪಟದಿಂದ ಅದು ಒಡೆದು ಇಬ್ಭಾಗವಾಗಿ ಒಂದು ಹೋಳು ಪಾಕಿಸ್ಥಾನವಾಯಿತು. ಅದರಿಂದ ಹಬ್ಬಿದ ಕೋಮು ದಳ್ಳುರಿಯನ್ನು ನಂದಿಸಲು ಗಾಂಧೀಜಿಯವರಿಗೂ ಕಷ್ಟ ವಾಯಿತು. ಹೈದರಾಬಾದ್, ಜುನಾಗಢ, ಭವಾಲ್ಪುರ, ಜಮ್ಮು-ಕಾಶ್ಮೀರ ಸಂಸ್ಥಾನಗಳು ಸ್ವತಂತ್ರ ರಾಷ್ಟ್ರಗಳಾಗಿ ಎದ್ದೇಳುತ್ತವೆಂಬ ಅಪಾಯವನ್ನರಿತ ಪಟೇಲರು ರಕ್ತದೋಕುಳಿಗೆ ಅವಕಾಶ ಕೊಡದೆ, ಅವೆಲ್ಲವೂ ಭಾರತ ಒಕ್ಕೂಟದ ರಾಜ್ಯಗಳಾಗುವಂತೆ ಮಾಡಿದರು. ಹೀಗಾಗಿ ಭಾರತ ಒಕ್ಕೂಟವು ಏಕತೆಯಲ್ಲಿ ಐಕ್ಯತೆಯ ಮಂತ್ರದ ಅರ್ಥವಾಗಿ ಏಕೋ ರಾಷ್ಟ್ರವಾಗಿ ರೂಪುಗೊಂಡಿದೆ. ಅಂತೆಯೇ ಪಟೇಲರನ್ನು ಏಕತಾ ಭಾರತದ ನಿರ್ಮಾಪಕ – ಏಕತಾ ಭಾವೈಕ್ಯದ ಹರಿಕಾನೆಂದು ಬಣ್ಣಿಸಲಾಗಿದೆ ಮತ್ತು ಅವರ ಜನ್ಮದಿನ ಅಕ್ಟೋಬರ್ 31ನ್ನು ರಾಷ್ಟ್ರದ ಏಕತಾ ದಿನವೆಂದು ಸ್ಮರಿಸಲಾಗುತ್ತದೆ.
ಪ್ರೊ.ವಸಂತ ಕುಷ್ಟಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ