ಕಷ್ಟಗಳನ್ನು ತಿರುಗಿ ನಿಂತು ಎದುರಿಸೋಣ
Team Udayavani, Dec 27, 2021, 6:00 AM IST
ಈ ಭೂಮಿಯ ಮೇಲಣ ಪ್ರತಿ ಯೊಂದೂ ಜೀವಿಯೂ ಹತ್ತು ಹಲವಾರು ಸವಾಲುಗಳನ್ನು ಎದುರಿಸಿಯೇ ಜೀವನ ನಡೆಸುತ್ತಿರುತ್ತವೆ. ಹಾಗೆಂದ ಮೇಲೆ ಈ ಭೂಮಿಯ ಮೇಲೆ ಬುದ್ಧಿವಂತ, ಜ್ಞಾನವಂತ ಎಂದು ಕರೆಸಿಕೊಳ್ಳುವ ಮನು ಷ್ಯನಿಗೆ ಸವಾಲುಗಳು ಎದುರಾಗದೇ ಇರಲು ಸಾಧ್ಯವೇ?. ಈ ಸವಾಲುಗಳೇ ಮಾನವನನ್ನು ಆತನ ಜೀವನದ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತವೆಯೇ ವಿನಾ ಸವಾಲುರಹಿತ ಜೀವನ ಎಂದಿಗೂ ಪರಿ ಪೂರ್ಣ ಎಂದೆನಿಸಿಕೊಳ್ಳಲಾರದು.
ಸವಾಲು ಎದುರಾದಾಗಲೆಲ್ಲ ಅದನ್ನು ಮೆಟ್ಟಿ ನಿಲ್ಲಬೇಕೆಂದೇನಿಲ್ಲ. ಈ ಪ್ರಯತ್ನ ದಲ್ಲಿ ಹಲವಾರು ಬಾರಿ ನಾವು ಸೋತಿರ ಬಹುದು. ಆದರೆ ಆ ಸೋಲುಗ ಳಿಂದಲೂ ನಾವು ಜೀವನದ ಒಂದಲ್ಲ ಒಂದು ಪಾಠ ಕಲಿತಿರುತ್ತೇವೆ. ಈ ಸೋಲುಗಳೇ ಭವಿಷ್ಯದ ಸವಾಲುಗಳನ್ನು ಎದುರಿಸಲು ನಮ್ಮನ್ನು ಅಣಿಗೊಳಿಸುತ್ತವೆ. ಇದರಿಂದ ನಾವು ಜೀವನವೆಂಬ ಸಾಗರದಲ್ಲಿ ಈಜಲು ಸಾಧ್ಯವಾಗುತ್ತದೆ.
ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ಪರ್ಯಟನೆ ಮಾಡುತ್ತಿದ್ದ ಸಂದ ರ್ಭವದು. ಒಂದು ದಿನ ಕಾಶಿಯ ದೇವಾಲಯವೊಂದರ ಪ್ರಾಂಗಣದಿಂದ ಹೊರಟಿದ್ದರು. ತುಂಟ ಕೋತಿಗಳ ಹಿಂಡೊಂದು ಅವರನ್ನು ಅಟ್ಟಿಸಿಕೊಂಡು ಬಂದಿತು. ಅವರು ಆದಷ್ಟು ವೇಗವಾಗಿ ಓಡಿದರು. ಕೋತಿಗಳೂ ಸಹ ವೇಗವಾಗಿ ಸ್ವಾಮೀಜಿಯವರ ಬೆನ್ನು ಬಿಡದೇ ಅವರ ಹಿಂದೆಯೇ ಓಡಿಸಿಕೊಂಡು ಹೋದವು. ಸ್ವಾಮೀಜಿ ವೇಗವಾಗಿ ಓಡಿದಂತೆಲ್ಲ ಕೋತಿ ಗಳೂ ಮತ್ತಷ್ಟು ವೇಗವಾಗಿ ಅವರನ್ನು ಬೆನ್ನಟ್ಟಿದವು. ಅವರಿಗೆ ಸುಸ್ತಾಯಿತು. ಏನು ಮಾಡಬೇಕೆಂದು ತೋಚಲಿಲ್ಲ.
ಆಗ ಆ ಕಡೆ ಹೋಗುತ್ತಿದ್ದ ವೃದ್ಧ ಸನ್ಯಾಸಿ ಯೊಬ್ಬರು ಕೂಗಿ “ಓಡಬೇಡಿ, ತಿರುಗಿ ನಿಂತು ಎದುರಿಸಿರಿ’ ಎಂದು ಹೇಳಿದರು. ಆ ಕೂಗನ್ನು ಕೇಳಿ ದೊಡನೆ ಸ್ವಾಮೀಜಿಗೆ ಮಿಂಚಿನ ಸಂಚಲನವಾ ದಂತಾಯಿತು. ತತ್ಕ್ಷಣ ತಿರುಗಿ ನಿಂತರು. ಆಗ ಕೋತಿ ಗಳು ಕಕ್ಕಾಬಿಕ್ಕಿ ಯಾಗಿ ಹೆದರಿ ಪಲಾಯನ ಮಾಡಿದವು. ಆಗ ಸ್ವಾಮೀಜಿ ಜೋರಾಗಿ ನಕ್ಕರು.
ಇದೊಂದು ಘಟನೆ ಮಾತ್ರವಲ್ಲ. ಪ್ರತಿಯೊಬ್ಬರ ಬದುಕಿಗೆ ಒಂದು ರೀತಿಯಲ್ಲಿ ಪ್ರೇರಣಾಬಿಂದು, ಜೀವನ ಸ್ಫೂರ್ತಿ ಎಂದರೆ ತಪ್ಪಾಗಲಾರದು. “ಓಡಬೇಡಿ, ಎದುರಿಸಿ’ ಎಂಬುದು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾದ ಜೀವನ ಸೆಲೆ. ಇದು ನಮಗೆ ಜೀವ ನೋತ್ಸಾಹದ ಮಂತ್ರವಾಗಿ ಯಶದ ನಗೆ ಬೀರುವಂತಾಗಬೇಕು.
ಪ್ರಕೃತಿಯೂ ಕೂಡ ಇಂತಹ ಅನೇಕ ಜೀವನ ಪಾಠವನ್ನು, ಚೈತನ್ಯ ಶಕ್ತಿಯನ್ನು ನಮಗೆ ನೀಡುತ್ತಲೇ ಇರುತ್ತದೆ. ಹರಿಯುವ ನದಿ ಸಲಿಲವಾಗಿ ಶರಧಿಯನ್ನು ಸೇರಲು ಸಾಧ್ಯವೇ ಇಲ್ಲ. ನಡುವೆ ಅನೇಕ ಬಂಡೆಗಳನ್ನು ಹಾದು, ಗಿಡಗಂಟಿಗಳನ್ನು ಸೀಳಿಕೊಂಡು, ಅಡ್ಡ ಬಂದಿರುವ ಅಡೆತಡೆಗಳನ್ನು ಹಿಮ್ಮೆಟ್ಟಿ, ಅಂಕುಡೊಂಕಾಗಿ ಹೊಸ ಮಾರ್ಗದಲ್ಲಿ ಹರಿದ ಅನಂತರವೇ ಶರಧಿಯನ್ನು ಸೇರುವುದು. ತನ್ನ ಹರಿವಿಗೆ ಅರ್ಥ ಕಂಡುಕೊಳ್ಳುವುದು. ನದಿ ಹೊಸ ಮಾರ್ಗದ ಹರಿವಿನಿಂದ ಯಶಸ್ವಿಯಾಗಿ ಕಡಲನ್ನು ಸೇರುವಂತೆಯೇ ನಾವು ಕೂಡ ಜೀವನವೆಂಬ ನದಿಯ ಹರಿವಿನಲ್ಲಿ ನಮ್ಮನ್ನು ಬೆಂಬತ್ತಿದ ಸಮಸ್ಯೆಗಳನ್ನು ಎದು ರಿಸಿ,ಧೃತಿಗೆಡದೆ ಮುನ್ನುಗ್ಗಿ, ಕಷ್ಟಗಳಿಗೆ ತಿರುಗಿ ನಿಂತು ಸುಖ, ನೆಮ್ಮದಿಯೆಂಬ ಸಾಗರವನ್ನು ತಲುಪಬೇಕು.
ಜೀವನದ ಪಯಣದಲಿ ಅನೇಕ ಸಮಸ್ಯೆಗಳು, ಕಷ್ಟ ಕಾರ್ಪಣ್ಯಗಳು ನಮ್ಮ ಬೆನ್ನಟ್ಟುತ್ತವೆ. ಅವುಗಳಿಂದ ತಪ್ಪಿಸಿ ಕೊಳ್ಳಲು ನಾವು ವೇಗವಾಗಿ ಓಡಲು ಪ್ರಾರಂಭಿಸುತ್ತೇವೆ. ಅವು ಬೆಂಬಿಡದೆ ಕಾಡಿದಾಗ “ಜೀವನ’ ಎಂಬ ಓಟದಲ್ಲಿ ಬಳಲಿ ಬೆಂಡಾಗುತ್ತೇವೆ. ಬೆನ್ನಟ್ಟಿದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ದಾರಿ ಕಾಣದಷ್ಟು ಬಸವಳಿಯುತ್ತೇವೆ. ಆಗ “ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ’ ಎಂಬಂತೆ ನಮ್ಮನ್ನು ಬೆಂಬತ್ತಿ ರುವ ಸಮಸ್ಯೆಯನ್ನು ಎದುರಿಸಲೆಂದೇ ಏನಾದರೂ ಒಂದು ಸಕಾರಾತ್ಮಕ ಶಕ್ತಿ ಮಿಂಚಿನಂತೆ ಬರಲೂಬಹುದು. ಮಿಂಚಂತೆ ಬಂದ ಪರಿಹಾರ ಸೂತ್ರಗಳನ್ನು ಬಿಗಿದಪ್ಪಿಕೊಳ್ಳಬೇಕು. ಸಮಸ್ಯೆಗೆ ಬೆನ್ನು ಹಾಕಿ ಓಡದೆ, ಸಡ್ಡು ಹೊಡೆದು ನಿಲ್ಲಬೇಕು. ಬಂದಿರುವ ಅಡೆತಡೆಗಳ ನಿವಾರಣೆಗಾಗಿ ಹೊಸ ಮಾರ್ಗೋಪಾಯಗಳನ್ನು ಕಂಡು ಕೊಳ್ಳಬೇಕು. ಆಗ ಮಾತ್ರ ಕತ್ತಲಾಗಿ ಬೆದರಿಸಿದ ಕಷ್ಟಗಳು ಮಾಯವಾಗಿ, ಭರವಸೆ ಎಂಬ ಬೆಳಕು ಮೂಡುತ್ತದೆ.
– ಭಾರತಿ ಎ., ಕಮಲಶಿಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ