ಮಳೆಬಿಲ್ಲು ಕರಗದೆ ಉಳಿದ ಬಣ್ಣ
Team Udayavani, Sep 12, 2021, 6:00 AM IST
ಬಿದ್ದು ಮಣ್ಣಾದರೂ ಸರಿ ಮರದಂತೆ ಎದ್ದು ನಿಲ್ಲಬೇಕು :
ಬದುಕಲ್ಲಿ ನಾವು ಬಿದ್ದು ಬಾಡಿ ಹೋಗುವ ಹೂಗಳಾಗಬಾರದು. ನೆಲಕ್ಕೆ ಬಿದ್ದರೂ ಬೀಜದಂತೆ ಬೀಳಬೇಕು, ಬಿದ್ದು ಮಣ್ಣಾದರೂ ಸರಿಯೇ ಮರದಂತೆ ಎದ್ದು ನಿಲ್ಲಬೇಕು.
ಈ ವಾಟ್ಸ್ಆ್ಯಪ್ನ ಅನುಪಮ ಮೌಲ್ಯಯುಕ್ತ ಸಂದೇಶ ಆತ್ಮ ಸ್ಥೆರ್ಯ – ಗುರಿ ಈಡೇರಿಕೆಗೆ ಪೂರಕವಾದ ಬಿಂದುಗಳು. ಸ್ವಾಮಿ ವಿವೇಕಾನಂದರ “ಎಳಿ ಎದ್ದೇಳಿ ಗುರಿ ಮುಟ್ಟುವ ತನಕ’ ಸ್ಫೂರ್ತಿ ಕಿರಣ ಮೇಲಿನ ಸಂದೇಶ ಓದುವಾಗ ಸ್ಮತಿಗೆ ಬರುತ್ತದೆ.
ಎಂತಹ ಸಂಕಷ್ಟ – ಕೋಟಲೆ ಬಂದರೂ ವಿಚಲಿತರಾಗದೇ ಪರಿಣಾಮಕಾರಿ- ಯುಕ್ತತೆಯಿಂದ ಎದುರಿಸಬೇಕು. ಬೀಜ ಹೇಗೆ ಮೊಳಕೆಯೊಡೆದು ಬೆಳೆದು ಮರವಾಗಿ ಎದ್ದು ನಿಲ್ಲುತ್ತದೋ ಹಾಗೆ ನಾವು ನಮ್ಮ ಗುರಿ ಮುಟ್ಟುವ ತನಕ ಪಲಾಯನಗೈಯದೆ ತಲುಪಬೇಕೇ ಹೊರತು ಬಾಡಿದ ಹೂಗಳಂತೆ ಜೀವನ, ನಮ್ಮ ಸಾಧನೆ ಮುದುಡದಂತೆ ಬಾಳನ್ನು ಸುಂದರ ಹೂಗಳಂತೆ ಅರಳಿಸಬೇಕು ಎನ್ನುವ ಮರ್ಮ- ತಿರುಳು ಹೊಂದಿರುವ ಈ ಯುಕ್ತಿ ಖಂಡಿತ ಸಾಧನೆಗೆ ಪ್ರೇರಣಾಸ್ರೋತವಾದದ್ದು. ಕಷ್ಟಗಳು ನಾನಾ ಪಾಠ, ಅನುಭವಗಳನ್ನು ಕಲಿಸಿ ನವ ಮನ್ವಂತರಗಳಿಗೆ ಮುನ್ನುಡಿ ತರುವ ಶಕ್ತಿ ಹೊಂದಿದವುಗಳಾಗಿವೆ ಎನ್ನುವ ಮೇಲಿನ ಭಾವಾರ್ಥದಲ್ಲಿ ಗೂಡಾರ್ಥವೂ ಅಡಗಿದೆ. – ಸಂದೀಪ್ ನಾಯಕ್ ಸುಜೀರ್, ಮಂಗಳೂರು
ನೆಮ್ಮದಿಯ ಬದುಕಿಗೆ ಹೊಂದಾಣಿಕೆ ಇರಲೇಬೇಕು:
ಬದುಕು ನಾವು ಅಂದುಕೊಂಡಷ್ಟು ಸುಲಭವಲ್ಲ. ನಮಗೆ ನೆಮ್ಮದಿ ಬೇಕಾದರೆ ನಾವೇ ಕೆಲವು ವಿಷಯಗಳಿಗೆ ಹೊಂದಾಣಿಕೆ ಮಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ಈ ಸಾಲುಗಳು ತುಂಬಾ ಇಷ್ಟವಾಯಿತು. ಯಾರಾದರೂ ನನಗೆ ಕೆಡುಕನ್ನು ಮಾಡಿದರೆ ಅದು ಅವರ ಕರ್ಮ. ನಾನು ಯಾರ ಕೆಡುಕನ್ನು ಬಯಸದೆ ಇರುವುದು ನನ್ನ ಧರ್ಮ. ನಿಯತ್ತು ಎನ್ನೋದು ಸುಂದರ ಹೂ. ಅದು ಎಲ್ಲರ ತೋಟದಲ್ಲೂ ಬೆಳೆಯುದಿಲ್ಲ. ನಮ್ಮ ನಡೆನುಡಿ ನಮ್ಮ ಆತ್ಮ ಸಾಕ್ಷಿಗೆ ಮೆಚ್ಚುಗೆಯಾದರೆ ಸಾಕು. ಅದನ್ನು ಮತ್ತೂಬ್ಬರಿಗೆ ಮನವರಿಕೆ ಮಾಡುವ ಆವಶ್ಯಕತೆ ಇಲ್ಲ. ಸಮಾಜದಲ್ಲಿ ಗೌರವವಾಗಿ ಬದುಕಲು ಪ್ರಯತ್ನ ಮಾಡೋಣ. – ಶೋಭಾ ಪ್ರಭಾಕರ್, ಉಡುಪಿ
ಒಳ್ಳೆಯ, ಕೆಟ್ಟ ಗುಣಗಳು ಎಲ್ಲರಲ್ಲೂ ಇರುತ್ತವೆ :
ನನ್ನ ಬದಲಾದ ವರ್ತನೆಯನ್ನು ಮಾತ್ರ ಗುರುತಿಸುವ ಜನ, ಅವರ ಯಾವ ವರ್ತನೆಯಿಂದ ನಾನು ಬದಲಾದೆ ಎಂದು ಗುರುತಿಸುವುದೇ ಇಲ್ಲ…
ಎಂಬ ಪುಟ್ಟ ಸಂದೇಶ ವಾಟ್ಸ್ಆ್ಯಪ್ ನಲ್ಲಿ ಹರಿದಾಡುತ್ತಿತ್ತು. ಎಷ್ಟು ನಿಜವಾದ ಮಾತು. ಒಂದು ಮಗು ನಮ್ಮ ಸುತ್ತಮುತ್ತ ಇರುವವರನ್ನೇ ಅನುಸರಿಸಿಯೇ ಎಲ್ಲವನ್ನು ಕಲಿಯುತ್ತದೆ. ಉತ್ತಮ ವರ್ತನೆ, ಸಂಸ್ಕಾರವನ್ನು ನಾವು ಹೇಳಿಕೊಟ್ಟರೆ ಮಗು ಅದನ್ನೇ ಕಲಿಯುತ್ತದೆ. ಎರಡು ಗಿಣಿಮರಿಗಳ ಕತೆಯನ್ನು ನೀವು ಕೇಳಿಲ್ಲವೇ. ಕಟುಕನ ಕೈ ಸೇರಿದ ಗಿಣಿ ಕೆಟ್ಟದನ್ನೇ ಕಲಿತರೇ, ಸಾಧುವ ಕೈ ಸೇರಿದ ಗಿಣಿ ಉತ್ತಮವಾದುದನ್ನು ಕಲಿಯುತ್ತದೆ. ಮನುಷ್ಯ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಾನೆ ಹೊರತು ಸ್ವಭಾವತ ಹಾಗೇ ಇರುವುದಿಲ್ಲ.
ಎಲ್ಲರಲ್ಲಿಯೂ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಇದ್ದೇ ಇರುತ್ತವೆೆ. ಸಂದರ್ಭಕ್ಕೆ ಅನುಗುಣವಾಗಿ ಆತ ಪ್ರತಿಕ್ರಿಯಿಸುತ್ತಾನೆ. ಎಲ್ಲವನ್ನು ನಿಗ್ರಹಿಸುವ, ಸಮಚಿತ್ತದಲ್ಲಿ ನಡೆಯುವ ಶಕ್ತಿ ಎಲ್ಲರಲ್ಲಿಯೂ ಇರುವುದಿಲ್ಲ. ಅದನ್ನು ಅಳವಡಿಸಿಕೊಂಡಾಗ ಮಾತ್ರ ಬದುಕು ಸೊಗಸಾಗುವುದರಲ್ಲಿ ಸಂಶಯವಿಲ್ಲ.- ಸರಸ್ವತಿ, ಕುಂದಾಪುರ
ಹಸಿದವನಿಗೆ ನೀಡುವ ಅನ್ನ ದೇವರಿಗೆ ಸಲ್ಲುವ ನೈವೇದ್ಯ:
ಹಸಿದವರಿಗೆ ನೀಡುವ ಒಂದು ಹಿಡಿ ಅನ್ನ ದೇವರಿಗೆ ಸಲ್ಲುವ ನೈವೇದ್ಯವೇ ಸರಿ. ಮಾನವ ಹುಟ್ಟುತ್ತಲೇ ಹಸಿವೂ ಹುಟ್ಟಿತು ಎಂದೆನಿಸುತ್ತದೆ. ಈ ಹಸಿವು ಎರಡು ರೀತಿಯದ್ದು. ಒಂದು ಮಾನಸಿಕ, ಇನ್ನೊಂದು ದೈಹಿಕ. ಎಲ್ಲ ಹಸಿವಿಗಿಂತಲೂ ದೈಹಿಕ ಹಸಿವು ದೇಹ ಇರುವವರೆಗೆ ನಮ್ಮೊಂದಿಗಿರುತ್ತದೆ. ಇದು ಮೊದಲಿಗೆ ತುಂಬಿದರೆ ಉಳಿದೆಲ್ಲ ಹಸಿವನ್ನು ನಿಧಾನವಾಗಿಯಾದರೂ ನೀಗಿಸಬಹುದು. ಈ ನಿಟ್ಟಿನಲ್ಲಿ ಪ್ರಪಂಚದಲ್ಲಿ ಯಾರೂ ಹಸಿವಿನಿಂದ ಕೂಡಿರಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಒಂದೆಡೆ ಘೋಷಿಸಿದೆ. ಹಿಂದೆಲ್ಲ ಯಾರೇ ಮನೆಗೆ ಮಧ್ಯಾಹ್ನದ ಹೊತ್ತಿಗೆ ಬಂದರೆ ಊಟ ಕೊಡದೇ ಕಳುಹಿಸುವ ಸಂಪ್ರದಾಯವಿರಲಿಲ್ಲ. ಇದು ದೇವರಿಗೆ ಸಲ್ಲುವ ನೈವೇದ್ಯವೆಂದೇ ತಿಳಿಯಲಾಗಿತ್ತು. ಬಂದವರನ್ನು ಅತಿಥಿಗಳೆಂದೇ ಅರಿತು ಸತ್ಕರಿಸಲಾಗುತಿತ್ತು. “ಅತಿಥಿ ದೇವೋ ಭವ’ ಎಂಬ ವೇದೋಕ್ತಿ ಇದೇ ಕಾರಣದಿಂದ ಹುಟ್ಟಿರಬಹುದೆ? ಏನಿದ್ದರೂ ಹಸಿವಿನಿಂದ ಮುಕ್ತಗೊಳ್ಳುವ ಹೋರಾಟ ಹಸಿದವನಿಗೇ ಗೊತ್ತು.–ಉಮೇಶ್, ಮಂಗಳೂರು
ಸಾಮಾಜಿಕ ಮಾಧ್ಯಮಗಳು ನಮ್ಮ ಇಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ದಿನಕ್ಕೆ ನೂರಾರು, ಸಾವಿರಾರು ಸಂದೇಶಗಳು ವಾಟ್ಸ್ ಆ್ಯಪ್, ನಮ್ಮ ಫೇಸ್ಬುಕ್ ವಾಲ್ಗಳಲ್ಲಿ ಹರಿದಾಡುತ್ತವೆ. ನೀವು ನಿಮಗೆ ಖುಷಿಕೊಟ್ಟ ಮೆಸೇಜ್ಗಳನ್ನು 76187 74529 ಈ ಸಂಖ್ಯೆಗೆ ವಾಟ್ಸ್ ಆ್ಯಪ್ ಮಾಡಿ. ಸೂಕ್ತ ಬರಹಗಳನ್ನು ಪ್ರಕಟಿಸುತ್ತೇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್