ನನ್ನದೇ ಶೈಲಿ, ತಂತಿಯ ತಂತ್ರ ಮಾತ್ರ ಗುಟ್ಟು; ವೈಣಿಕ ಶಿಖಾಮಣಿ ರಾಜೇಶ್ ವೈದ್ಯ
Team Udayavani, Oct 6, 2022, 6:15 AM IST
ಉಡುಪಿಯೇ ಏಕೆ? ಸಾಂಸ್ಕೃತಿಕ ಕಾರ್ಯಕ್ರಮಗಳೇ ಏನು? ಇಡೀ ದೇಶ, ಜಗತ್ತು ಎರಡು ಮೂರು ವರ್ಷಗಳಿಂದ ಎಲ್ಲ ಕ್ಷೇತ್ರಗಳಲ್ಲಿ ಕುಕ್ಕುರುಗಾಲಿನಿಂದ ಚಲಿಸುತ್ತಿತ್ತು. ಅನಂತರದ ಕಾಲಘಟ್ಟದಲ್ಲಿ ಮೊದಲ ಬಾರಿ ಎಂಬಂತೆ ಇತ್ತೀಚೆಗೆ ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಅನುಗ್ರಹದಲ್ಲಿ ಗಂಗಾ ಕೆ. ರಾವ್ ಸವಿನೆನಪಿಗಾಗಿ ಪತಿ ಎಂ.ಕೇಶವ ರಾವ್ ಮತ್ತು ಮಕ್ಕಳು ಪ್ರಾಯೋಜಿಸಿದ ಹೆಸರಾಂತ ವೀಣಾ ವಾದಕ ಚೆನ್ನೈಯ ರಾಜೇಶ್ ವೈದ್ಯರ ವೀಣಾ ವಾದನ ಕಛೇರಿಗೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕ ವರ್ಗಕ್ಕೆ ಹಲವು ವರ್ಷಗಳ ಬಳಿಕ ಚಿಟ್ಟಿಬಾಬು ಅವರ ವೀಣಾವಾದನದ ವೈಖರಿಯನ್ನು ನೆನಪಿಸುವಂತೆ ಮಾಡಿತು.
ಚಿಟ್ಟಿಬಾಬು ಅವರ ಗರೋಡಿಯಲ್ಲಿ ಬೆಳೆದ ರಾಜೇಶ್ ವೈದ್ಯರು ಚಿಟ್ಟಿಬಾಬು ಅವರಂತೆ ವೀಣೆಯ ಸಹಜ ಧ್ವನಿಯಲ್ಲದೆ ಆಕರ್ಷಕ ಸ್ವರಮಾಧುರ್ಯಗಳನ್ನು ಪ್ರೇಕ್ಷಕ ವರ್ಗಕ್ಕೆ ಉಣಬಡಿಸಿದರು. ಒಮ್ಮೆ ಕೆಳಸ್ತರದಲ್ಲಿದ್ದ ಧ್ವನಿ ಒಮ್ಮೆಗೆ ಏರಿನ ಸ್ತರಕ್ಕೆ ಹೋಗುವುದು, ಪ್ರೇಕ್ಷಕರ ಜತೆ ಸಂವಹನಗೊಳಿಸುವಂತೆ ನುಡಿಸುವುದು, ವೀಣೆಯ ಸಾಮಾನ್ಯ ರೀತಿಯ ನಿಧಾನಗತಿಯ ನುಡಿಸುವಿಕೆ ಬದಲು ಕ್ಷಿಪ್ರಗತಿಯಲ್ಲಿ ಝೇಂಕಾರದಲ್ಲಿ ನುಡಿಸುವುದು ವೈದ್ಯರಿಗೆ ಕರತಲಾಮಲಕ. ಹೀಗಾಗಿಯೇ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಪುಗಾಲಿಡುತ್ತಿರುವ ಕಲಾವಿದರಲ್ಲಿ ಮುಂಚೂಣಿಯಲ್ಲಿದ್ದಾರೆ. “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ರಾಜೇಶ್ ವೈದ್ಯ ಅವರು “ನನ್ನ ವೀಣೆಯ ತಂತಿ ನನ್ನದೇ ಪರಿಕಲ್ಪನೆಯದ್ದಾಗಿದೆ. ಇದು ಗುಟ್ಟು. ಇದನ್ನು ಹೇಳಲಾಗದು. ಜನ ಸಂತೋಷ ಪಟ್ಟಿದ್ದಾರೋ? ಇಲ್ಲವೋ? ಮತ್ತೆ ಅದರ ಗುಟ್ಟು ಕೇಳಬೇಡಿ’ ಎನ್ನುತ್ತಾರೆ. ಸಂದರ್ಶನದ ಆಯ್ದ ಭಾಗ ಇಂತಿದೆ:
ನಿಮ್ಮ ತಂದೆ ವೈದ್ಯನಾಥನ್ ಹೆಸರಾಂತ ಮೃದಂಗ ಮತ್ತು ಘಟವಾದಕರು. ನಿಮಗೆ ವೀಣಾಕರ್ಷಣೆ ಹೇಗಾಯಿತು?
ನನ್ನ ತಾಯಿ ವಸಂತಾ ಅವರು ಹಾಡುಗಾರರಾಗಿದ್ದರು. ಅವರ ಪ್ರೋತ್ಸಾಹದಿಂದ ನಾನು ವೀಣೆಯನ್ನು ನುಡಿಸಲು ಆರಂಭಿಸಿದೆ.
ನೀವು ಸಾಂಪ್ರದಾಯಿಕತೆಯಿಂದ ನವನವೀನ ಮಾರ್ಗದಲ್ಲಿ ನುಡಿಸುತ್ತೀರುವಿರಲ್ಲ? ಇದನ್ನು ಜನರು ಹೇಗೆ ಸ್ವೀಕರಿಸಿದರು?
ಜನರು ಸಂತೋಷಪಟ್ಟದ್ದನ್ನು ನೋಡಲಿಲ್ಲವೆ? ನನ್ನ ಗುರು ಚಿಟ್ಟಿಬಾಬು ಅವರ ಮಾರ್ಗದರ್ಶನದಲ್ಲಿ ಆಧುನಿಕತೆಗೆ ತಕ್ಕಂತೆ ಮಾರ್ಪಾಡುಗಳನ್ನು ಮಾಡಿಕೊಂಡಿದ್ದೇನೆ.
ನಿಮ್ಮ ಸರಸ್ವತಿ ವೀಣಾ ಝೇಂಕಾರದ ತಂತ್ರವೇನು? ವೀಣಾ ವಾದನದಲ್ಲಿ ಅನೇಕ ಬಾನಿಗಳಿದ್ದು ನಿಮ್ಮದು ಯಾವುದು?
ನನ್ನದು ನನ್ನದೇ ಆದ ತಂತ್ರ. ನಾನು ನುಡಿಸುವ ವೀಣೆಯ ತಂತಿಗಳು ವಿಶೇಷವಾಗಿ ಇದಕ್ಕಾಗಿಯೇ ತಯಾರಿಸಿದ್ದಾಗಿದೆ. ನನ್ನ ವೈಣಿಕತೆಗೆ ಅವು ಶ್ರುತಿಬದ್ಧವಾಗಿವೆ. ನನ್ನದು ಚಿಟ್ಟಿಬಾಬು ವೀಣಾ ಶೈಲಿಯಾಗಿದೆ. ನನ್ನ ವೀಣೆಯ ತಂತಿಗಳು ಎಲೆಕ್ಟ್ರಿಕ್ ಮತ್ತು ಆಂಪ್ಲಿಫೈಡ್ನಿಂದ ಕೂಡಿವೆ. ನಾನು ಚಿಟ್ಟಿಬಾಬು ಅಲ್ಲದೆ ಎಲ್.ಶಂಕರ್ ಶೈಲಿಯನ್ನೂ ಮೈಗೂಡಿಸಿಕೊಂಡಿದ್ದೇನೆ. ಮೈಕೆಲ್ ಜಾಕ್ಸನ್ ಜತೆಗೂ ವೀಣೆ ನುಡಿಸಿದ್ದೇನೆ. ಅಂತಾರಾಷ್ಟ್ರೀಯ ಆಲ್ಬಮ್ “ಪ್ಲೇಯಿಂಗ್ ಫಾರ್ ಚೇಂಜ್’ನಲ್ಲಿ ಪಾಲ್ಗೊಂಡಿದ್ದೇನೆ.
ಕರ್ನಾಟಕ ಸಂಗೀತ ವಿರಳವಾಗಿರುವ ಉತ್ತರ ಭಾರತದಲ್ಲಿ ಕರ್ನಾಟಕ ಸಂಗೀತವನ್ನು ಜನಪ್ರಿಯಗೊಳಿಸಲು ನೀವು ಅನುಸರಿಸುವ ಮಾರ್ಗವೇನು? ವಿದೇಶೀ ಮೂಲದವರಲ್ಲಿ ವೀಣೆಯನ್ನು ಜನಪ್ರಿಯಗೊಳಿಸುವಲ್ಲಿ ನಿಮ್ಮ ಕಾರ್ಯ ಯೋಜನೆಗಳೇನು?
ಯಾರು ಹೇಳುವುದು ಉತ್ತರಭಾರತದಲ್ಲಿ ವೀಣಾವಾದನ ವಿರಳವೆಂದು? ನಾನು ಅನೇಕ ಜುಗಲ್ಬಂದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ವಿದೇಶಗಳಲ್ಲಿ ಭಾರತೀಯ ಮೂಲದವರಲ್ಲದೆ ವಿದೇಶೀ ಮೂಲದ ಯುವಕ/ಯುವತಿಯರು ವೀಣೆಯತ್ತ ಆಕರ್ಷಿತರಾಗುತ್ತಿದ್ದಾರೆ. ಅನೇಕ ವಿದೇಶೀ ಮೂಲದ (ಯೂರೋಪಿಯನ್/ ಅಮೆರಿಕನ್) ವಿದ್ಯಾರ್ಥಿಗಳು ಒಂದೋ ಆನ್ಲೈನ್ನಲ್ಲಿ ಇಲ್ಲವೆ ಸಂದರ್ಭ ಸಿಕ್ಕಿದಾಗ ಆಫ್ಲೈನ್ನಲ್ಲಿ ಪಾಠ ಕೇಳುತ್ತಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ ಕೂಡ ಕರ್ನಾಟಕ ಸಂಗೀತದ ಕುರಿತು ಜಾಗೃತಿ ಮೂಡಿಸಲು ಕಾರ್ಯಾಗಾರಗಳನ್ನು ನಡೆಸುತ್ತಿದ್ದೇನೆ.
ನೀವು ಚಲನಚಿತ್ರ ರಂಗದಲ್ಲೂ ಕೈಯಾಡಿಸಿದ್ದೀರಿ. ಹೊಸ ಚಿತ್ರ ಯಾವುದು? ಆಲ್ಬಮ್ ಜನಪ್ರಿಯತೆ?
ಶಾಟ್ ಬೂಟ್ 3 ಎಂಬ ತಮಿಳು ಚಲನಚಿತ್ರದಲ್ಲಿ ಸಂಗೀತ ನಿರ್ದೇಶಕನಾಗಿದ್ದೇನೆ. ಇದುವರೆಗೆ 52 ಆಲ್ಬಮ್ಗಳನ್ನು ರಚಿಸಿದ್ದು ಜನಪ್ರಿಯವಾಗಿವೆ.
ಒಂದ್ನಿಮಿಷ ಹಾಡು-ಸಾವಿರ ದಿನದ ದಾಖಲೆ
ಒಂದು ದಿನದಲ್ಲಿ ಒಂದು ನಿಮಿಷದ ಹಾಡನ್ನು 1,000 ದಿನ ನಿರೂಪಿಸಿ ವಿಶ್ವ ದಾಖಲೆ ನಿರ್ಮಿಸಿದ ಕೀರ್ತಿ ರಾಜೇಶ್ ವೈದ್ಯರಿಗೆ ಇದೆ.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ