ಕಳ್ಳಗಿವಿಯೆಂಬ ‘ಪಂಚ್’ ಇಂದ್ರಿಯದ ಪಂಚನಾಮೆ!
Team Udayavani, Aug 21, 2019, 5:26 AM IST
ನಮ್ಮ ಮನವಿಯನ್ನು ಯಾರೂ ಕಿವಿಗೇ ಹಾಕಿಕೊಳ್ಳುತ್ತಿಲ್ಲ ಎಂದು ಸಾಮಾನ್ಯ ಜನರು ಒಂದೇ ಸಮನೆ ರೋದಿಸುತ್ತಿದ್ದಾರೆ. ಈ ನಡುವೆ ಜನಪ್ರತಿನಿಧಿಗಳು ಎನಿಸಿಕೊಂಡ ಕೆಲವರ ಮೇಲೆ ಕದ್ದಾಲಿಕೆಯ ಆರೋಪಗಳು ಕೇಳಿಬರುತ್ತಿವೆ. ಕೇಳುವುದು ಎಷ್ಟು ಮುಖ್ಯ ಮತ್ತು ಸರಿಯೋ, ಕದ್ದು ಕೇಳುವುದು ಅಷ್ಟೇ ತಪ್ಪು ಹಾಗೂ ಕೆಟ್ಟದ್ದು ಎಂಬ ಅರಿವು ಅದರಲ್ಲಿ ತೊಡಗಿಸಿಕೊಂಡವರಲ್ಲಿ ಮೂಡಬೇಕಾಗಿದೆ! ಈ ಟೇಪ್ ಹಾಗೂ ಟ್ಯಾಪ್ಗ್ಳಲ್ಲಿ ಅತಿಯಾಗಿ ತೊಡಗಿಸಿಕೊಂಡವರೂ ಒಂದಲ್ಲ ಒಂದು ದಿನ ಟ್ರ್ಯಾಪ್ ಆಗುವುದಂತೂ ಶತಃಸಿದ್ಧ!
ಆಲಿಸುವಿಕೆಯು ಒಂದು ಮಹತ್ವದ ಭಾಷಾ ಕೌಶಲ್ಯವಾಗಿದೆ. ಭಾಷೆಯ ಮೇಲೆ ಹಿಡಿತ ಗಳಿಸಬೇಕಾದರೆ ಒಳ್ಳೆಯ ಆಲಿಸುವಿಕೆ ಅತ್ಯಗತ್ಯ. ಹಾಗೆಯೇ ರಾಜಕೀಯದಲ್ಲಿ ಹಿಡಿತ ಗಳಿಸಬೇಕೆಂದರೆ ಅಲ್ಲಿಯೂ ಆಲಿಸುವಿಕೆ ಇರಲೇಬೇಕು. ಭಾಷೆಗೆ ಹೇಗೆ ಆಲಿಸುವಿಕೆ ಮುಖ್ಯವೋ ಹಾಗೆಯೇ ಭಾಷಣ ಮಾಡುವ ರಾಜಕಾರಣಿಗಳೂ ಆಲಿಸುವಿಕೆಯ ಕಡೆಗೆ ಆದ್ಯ ಗಮನಹರಿಸಬೇಕು. ರಾಜಕಾರಣಿಗಳ ಮೂಲ ಕರ್ತವ್ಯವೇ, ಜನರ ದುಃಖ ದುಮ್ಮಾನಗಳನ್ನು ಆಲಿಸಿ, ಅವುಗಳನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಅದಕ್ಕೆ ಬೇಕಾದ ‘ಪಾಲಿಸಿ’ (policy) ತರುವುದು.
ಆದರೆ ಆಲಿಸುವುದಕ್ಕಿಂತಲೂ ಆಲಸ್ಯಕ್ಕೇ ಹೆಚ್ಚು ಪ್ರಾಧಾನ್ಯತೆ ಕೊಡುವ ಈ ಕಾಲದ ರಾಜಕಾರಣಿಗಳು ಈ ತತ್ವವನ್ನು ಪಾಲಿಸುತ್ತಾರೆಯೇ ಎನ್ನುವುದು ಮಾತ್ರ ಯಕ್ಷಪ್ರಶ್ನೆ! ಅದೇನೇ ಆದರೂ ಜನರ ಜೊತೆಗಿದ್ದು ಅವರ ಅಳಲನ್ನು ಆಲಿಸದ ಕೆಲವು ಆಳುಗರು ಇತರ ನಾಯಕರ ಫೋನ್ ಕರೆಗಳನ್ನು ಮಾತ್ರ ಚೆನ್ನಾಗಿಯೇ ಕದ್ದು ಆಲಿಸುತ್ತಾರೆ. ಸದ್ಯ ಫೋನ್ ಕದ್ದಾಲಿಕೆಯ ವಿಷಯವು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಆರೋಪಿತರ ಪಾಲಿಗೆ ತುಸು ತ್ರಾಸದಾಯಕವಾಗಿದೆ.
ಎಲ್ಲಾ ಮನುಷ್ಯರಂತೆ ರಾಜಕಾರಣಿಗಳಿಗೂ ದೇವರು ಎರಡು ಕಿವಿಗಳನ್ನು ನೀಡಿದ್ದರೂ, ಕೆಲವರಿಗೆ ಅದು ಸಾಕಾಗುತ್ತಿಲ್ಲ. ಅಧಿಕಾರದ ಸ್ಥಾನದಲ್ಲಿರುವವರು ಆದಷ್ಟೂ ಎಲ್ಲಾ ಕಡೆಗಳಲ್ಲಿಯೂ ತಮ್ಮ ಕಣ್ಣು, ಕಿವಿ ಇಡುವುದು ಆಡಳಿತದ ಹಿತದೃಷ್ಟಿಯಿಂದ ಒಳ್ಳೆಯದು ಎಂಬ ಅಭಿಪ್ರಾಯವಿದೆ. ಆದರೆ ಅದಕ್ಕೆಂದೇ ಕೊಟ್ಟ ಎರಡೂ ಕಿವಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದವರು, ಅಲ್ಲಲ್ಲಿ ತಮ್ಮ ಕಳ್ಳಗಿವಿಗಳನ್ನು ಇಡುವ ಮೂಲಕ ಅದರ ಮೊರೆ ಹೋಗುತ್ತಿದ್ದಾರೆ. ಪಂಚೇಂದ್ರಿಯಗಳಲ್ಲಿ ಒಂದಾದ ಕಿವಿಯ ಅಪ್ಡೇಟೆಡ್ ವರ್ಶನ್ ಎಂದೇ ಹೇಳಬಹುದಾದ ‘ಕಳ್ಳಗಿವಿ’ಯು ಆರನೇ ಇಂದ್ರಿಯವಾಗಿ, ಅದು ಒಮ್ಮೊಮ್ಮೆ ಅಂಥವರ ಪಾಲಿಗೆ ‘ಪಂಚ್’ ಇಂದ್ರಿಯವಾಗಿ ಪರಿಣಮಿಸುವುದಿದೆ. ಆಲಿಸುವುದೇನೋ ಒಳ್ಳೆಯ ಅಭ್ಯಾಸವೇ, ಆದರೆ ಕದ್ದಾಲಿಸುವುದಲ್ಲ ಎನ್ನುವುದು ಕೆಲವರಿಗೆ ಅರ್ಥವಾಗಬೇಕಿದೆಯಷ್ಟೇ!
ಉತ್ತಮವಾದ ಆಲಿಸುವ ಕೌಶಲ್ಯ ಹೊಂದಿದರೆ ಮಾತ್ರ, ಒಳ್ಳೆಯ ಮಾತುಗಾರ, ಓದುಗ ಹಾಗೂ ಬರಹಗಾರನಾಗಲು ಸಾಧ್ಯ ಎಂಬ ಅಭಿಪ್ರಾಯವಿದೆ. ಅದು ಭಾಷೆಯ ಸ್ವರೂಪ ಮತ್ತು ಲಕ್ಷಣ. ಇದೇ ರೀತಿಯಲ್ಲಿ, ‘ಕಳ್ಳಗಿವಿ’ ಉಳ್ಳವರು ತಮ್ಮ ವಿರೋಧಿಗಳು ಆಡುವ ಮಾತು, ಅಭಿಪ್ರಾಯ ಹಾಗೂ ತಂತ್ರಗಳನ್ನು ಕದ್ದು ಕೇಳಿಸಿಕೊಳ್ಳುತ್ತಾರೆ. ಅದರೊಂದಿಗೆ ತಮ್ಮ ಭಾಷಣ, ಹೇಳಿಕೆಗಳಲ್ಲಿ ಅವರ ಬಗ್ಗೆ ಹೆಚ್ಚು ನಿಖರವಾಗಿ ಮಾತನಾಡುವ, ಅವರ ತಂತ್ರ, ಪ್ರತಿತಂತ್ರ ಮತ್ತು (ಕುಟಿಲ)ಉಪಾಯಗಳು ಏನು ಎನ್ನುವ ಪಟ್ಟಿಯನ್ನು ಸಾರ್ವಜನಿಕವಾಗಿ ಓದುವ ಹಾಗೂ ಲಭ್ಯ ಮಾಹಿತಿಗಳ ಆಧಾರದಲ್ಲಿ ಆರೋಪಗಳನ್ನು ಮಾಡುತ್ತಾ ಅವರ ರಾಜಕೀಯ ಭವಿಷ್ಯದ ಹಣೆಬರಹವನ್ನು ಬರೆಯುವ ಕೃತ್ಯಕ್ಕೆ ಮುಂದಾಗುತ್ತಾರೆ. ಮಾತು, ಓದು, ಬರವಣಿಗೆಯು ಕದ್ದು ಆಲಿಸುವ ಮೂಲಕ ಸುಗಮವಾಗುತ್ತದೆ ಎಂಬ ಕಾರಣದಿಂದಲೇ ಕೆಲವರು ಈ ಕದ್ದಾಲಿಕೆಯನ್ನು ಅವಲಂಬಿಸಿರುತ್ತಾರೆ.
ಕೇಳಲೆಂದೇ ಇರುವ ಕಿವಿಯನ್ನು ಕಿವುಡಾಗಿಸಿ ಇಟ್ಟುಕೊಂಡಿರುವ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಂದಾಗಿ ವ್ಯವಸ್ಥೆಯೇ ಕಿವುಡಾಗಿದೆ, ನಮ್ಮ ಮನವಿಯನ್ನು ಯಾರೂ ಕಿವಿಗೇ ಹಾಕಿಕೊಳ್ಳುತ್ತಿಲ್ಲ ಎಂದು ಸಾಮಾನ್ಯ ಜನರು ಒಂದೇ ಸಮನೆ ರೋದಿಸುತ್ತಿದ್ದಾರೆ. ಈ ನಡುವೆ ಜನಪ್ರತಿನಿಧಿಗಳು ಎನಿಸಿಕೊಂಡ ಕೆಲವರ ಮೇಲೆ ಕದ್ದಾಲಿಕೆಯ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ, ಕೇಳುವುದು ಎಷ್ಟು ಪ್ರಧಾನವಾದುದು ಮತ್ತು ಸರಿಯೋ, ಅಷ್ಟೇ ತಪ್ಪು ಹಾಗೂ ಕೆಟ್ಟದ್ದು, ಕದ್ದು ಕೇಳುವುದು ಎಂಬ ಅರಿವು ಅದರಲ್ಲಿ ತೊಡಗಿಸಿಕೊಂಡವರಲ್ಲಿ ಮೂಡಬೇಕಾಗಿದೆ. ಇದು ಬಹಳ ಸರಳವಾದ ತತ್ವದ ಮೇಲೆ ನಿಂತಿದೆ. ಅದರಂತೆ ಎಲ್ಲವನ್ನೂ ಕೇಳಿಸಿಕೊಂಡರೆ, ಜನರು ಹಾಗೂ ಮಾಧ್ಯಮಗಳಿಂದ ಹೊಗಳಿಕೆ, ಅದೇ ಕದ್ದು ಕೇಳಿಸಿಕೊಂಡರೆ ಅವರಿಂದಲೇ ಸಿಗಲಿದೆ ಭಾರೀ ತೆಗಳಿಕೆ!
ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ತಮಗಿಷ್ಟವಾದ ಹಾಡು, ಮಾತು, ಹರಟೆ ಹಾಗೂ ಭಾಷಣಗಳನ್ನು ಕೇಳಿಸಿಕೊಳ್ಳುವುದು ಸರಿಯಾದ ನಡವಳಿಕೆ. ಆದರೆ ಬೇರೆಯವರ ಫೋನ್ ಸಂಭಾಷಣೆಗಳಿಗೆ ಕಳ್ಳ ಮಾರ್ಗಗಳ ಮೂಲಕ ತಮ್ಮ ಈಯರನ್ನು ತೂರಿಸುವುದು ಮಾತ್ರ ಅತ್ಯಂತ ಕೆಟ್ಟ ಚಾಳಿ. ಇದರ ಜಾಲಕ್ಕೆ ಸಿಕ್ಕಿಬಿದ್ದು ಎಷ್ಟೋ ರಾಜಕಾರಣಿಗಳು, ತಮ್ಮ ಪಾಳಿ ಮುಗಿಯುವ ಮುನ್ನವೇ ಅಧಿಕಾರದಿಂದ ಕೆಳಗೆ ಇಳಿದ ಉದಾಹರಣೆಗಳು ಸಾಕಷ್ಟಿವೆ. ಅಂದರೆ ಕಳ್ಳಗಿವಿಯ ಮೊರೆ ಹೋದರೆ ಒಂದಲ್ಲ ಒಂದು ದಿನ ಜನರಿಂದಲೇ ಚೆನ್ನಾಗಿ ಕಿವಿ ಹಿಂಡಿಸಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎನ್ನುವುದಂತೂ ಸುಸ್ಪಷ್ಟ!
ಆಳುಗರೇ ನೀವೊಳ್ಳೆಯ ಕೇಳುಗರಾಗಿ ಎಂಬ ನಿರೀಕ್ಷೆ ಜನಸಾಮಾನ್ಯರದ್ದು. ಅವರಿಗೋ ಅದನ್ನು ಕೇಳುವುದಕ್ಕಿಂತಲೂ, ಬೇರೆಯವರ ಮಾತುಗಳನ್ನು ಕೇಳಲು, ಬೇರೆಯವರು ಹೇಳಿದ್ದನ್ನು ಯಾರಿಗೂ ಗೊತ್ತಾಗದಂತೆ ಧ್ವನಿ ಮುದ್ರಿಸಿ ಜನರಿಗೆ ಕೇಳಿಸಲು ಹಾಗೂ ಕೊನೆಗೆ ಜನರ ಮುಂದೆ ಬಂದು ಮತ ಕೇಳುವುದು ಈ ಬಗೆಯ ಕೆಲಸಗಳಲ್ಲಿಯೇ ಅತಿಯಾದ ಆಸಕ್ತಿ. ಹೀಗಾಗಿರುವುದರಿಂದಲೇ ಜನರಿಗೆ ರಾಜಕೀಯದ ಬಗ್ಗೆ ನಿರಾಸಕ್ತಿ ಮೂಡಿರುವುದು ಎಂದು ಬೇರೆ ಹೇಳಬೇಕಾಗಿಲ್ಲ ನೋಡಿ. ಈ ಬಗೆಯ ಕೇಳುವಿಕೆಯ ಫಲವಾಗಿಯೇ ಅಲ್ಲವೇ, ಆ(ವೀ)ಡಿಯೋ ಟೇಪ್, ಫೋನ್ ಟ್ಯಾಪ್ ಇತ್ಯಾದಿಗಳು ರಾಜಕೀಯದಲ್ಲಿ ಈ ಮಟ್ಟಿಗೆ ಸುದ್ದಿಯಾಗುತ್ತಿರುವುದು!
ಈ ಟೇಪ್ ಹಾಗೂ ಟ್ಯಾಪ್ಗ್ಳಲ್ಲಿ ಅತಿಯಾಗಿ ತೊಡಗಿಸಿಕೊಂಡವರೂ ಒಂದಲ್ಲ ಒಂದು ದಿನ ಟ್ರ್ಯಾಪ್ ಆಗುವುದಂತೂ ಶತಃಸಿದ್ಧ! ‘ನೋಡಲು ಎರಡು ಕಣ್ಣು ಸಾಲದು’ ಎನ್ನುವಂತೆ ಕದ್ದಾಲಿಸುವವರದ್ದು ‘ಕೇಳಲು ಎರಡು ಕಿವಿ ಸಾಲದು’ ಎಂಬ ಸೂತ್ರ. ಇದರಲ್ಲಿಲ್ಲ ತನ್ನ ಪಾತ್ರ ಎಂದರೂ, ಸತ್ಯಾಂಶ ಬಹಿರಂಗವಾಗುವುದು ತನಿಖೆಯಿಂದ ಮಾತ್ರ. ‘ಮೈಯ್ಯೆಲ್ಲಾ ಕಿವಿಯಾಗಿ ಕೇಳುವುದು’, ‘ಗೋಡೆಗಳಿಗೂ ಕಿವಿಯಿದೆ’ ಎಂಬಿತ್ಯಾದಿ ಮಾತುಗಳ ಸುಧಾರಿತ ಹಾಗೂ ಆಧುನಿಕ ರೂಪವೇ ಈ ಕದ್ದಾಲಿಕೆಗೆ ಕಾರಣವಾಗುವ ಈ ಕಳ್ಳಗಿವಿಯೆಂಬ ‘ಪಂಚ್’ಇಂದ್ರಿಯ!
ಒಗ್ಗರಣೆ: ತನ್ನ ಗಂಡ ಏನು ಮಾತನಾಡುತ್ತಾನೆ ಎಂದು ಕಿವಿಗೊಡುವ ಹೆಂಡತಿಯರೇ ಈ ಕದ್ದಾಲಿಕೆಯ ಶಾಶ್ವತ ರಾಯಭಾರಿಗಳು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ