ದಕ್ಷಿಣದಲ್ಲಿ ಸ್ತ್ರೀ- ಉತ್ತರದಲ್ಲಿ ಪುರುಷ ಪರಾಕ್ರಮ
Team Udayavani, May 28, 2022, 6:00 AM IST
ಕರ್ನಾಟಕ ಕರಾವಳಿಯ ತೀರ 320 ಕಿ.ಮೀಟರ್. ಇಷ್ಟು ಸಣ್ಣ ಪ್ರದೇಶದ ಮೇಲೆ ಆಕ್ರಮಣ ನಡೆಸಿದ, ಈಗಿನ ಜಾಗತಿಕ ಭಯೋತ್ಪಾದಕರಿಗೆ ಮಿಗಿಲಾದ ಪೋರ್ಚುಗೀಸರನ್ನು ಉಳ್ಳಾಲದ ರಾಣಿ ಅಬ್ಬಕ್ಕ ಸದೆ ಬಡಿದದ್ದು, ಶಿವಾಜಿ ಮಹಾರಾಷ್ಟ್ರದಿಂದ ಬಂದು ಬಸ್ರೂರಿನಲ್ಲಿ ಪೋರ್ಚುಗೀಸರನ್ನು ಬಗ್ಗು ಬಡಿದದ್ದು ಸಾಮಾನ್ಯವೆ? ಮೇ 28 ಸ್ವಾತಂತ್ರ್ಯವೀರ ಸಾವರ್ಕರ್ ಅವರ ಜನ್ಮದಿನ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಇಂದು “ಅಮೃತಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮ ರಾಜ್ಯದ ವಿವಿಧೆಡೆಗಳಲ್ಲಿ ನಡೆಯುತ್ತಿರುವಾಗ ಅಬ್ಬಕ್ಕ ಮತ್ತು ಶಿವಾಜಿಯ ಕೆಚ್ಚೆದೆಯನ್ನು ಲೇಖನದಲ್ಲಿ ಸ್ಮರಿಸಿಕೊಳ್ಳಲಾಗಿದೆ.
1498ರಲ್ಲಿ ವಾಸ್ಕೋಡಗಾಮ ಭಾರತಕ್ಕೆ ಸಮುದ್ರ ಮಾರ್ಗ ಕಂಡು ಹಿಡಿದ ಬಳಿಕ ವಿದೇಶೀಯರ ಕಣ್ಣು ಭಾರತದ ಅದರಲ್ಲೂ ಕರ್ನಾಟಕದ ಕರಾವಳಿಯ ಸಂಪತ್ತಿನ ಮೇಲೆ ಬಿತ್ತು. ಆಧುನಿಕ ವಿದೇಶೀಯರ ಆಕ್ರಮಣವನ್ನು ಪರಿಗಣಿಸುವುದಾದರೆ ಪೋರ್ಚುಗೀಸರು ಮೊದಲು ದಾಳಿ ನಡೆಸಿದವರು. ಇವರದು ಏನಿದ್ದರೂ ಕಡಲ ಕಿನಾರೆಯ ಮೇಲಿನ ಆಧಿಪತ್ಯ. ಇಲ್ಲಿನ ಕರಿಮೆಣಸು, ತೆಂಗು, ಅಕ್ಕಿ, ಅಡಿಕೆ, ಶುಂಠಿಯೇ ಮೊದಲಾದ ಸಂಬಾರ ಪದಾರ್ಥಗಳನ್ನು ಕಡಿಮೆ ಬೆಲೆಯಲ್ಲಿ (ಮೋಸ ಮಾರ್ಗ) ಖರೀದಿಸಿ ವಿದೇಶಗಳಿಗೆ ಕೊಂಡೊಯ್ದು ಹಣ ದೋಚುವುದು ಇವರ ಉದ್ದೇಶ.
ಕರಾವಳಿಯ ಬಂದರು ಪ್ರದೇಶಗಳನ್ನು ಹಿಡಿತಕ್ಕೆ ತೆಗೆದುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪೋರ್ಚುಗೀಸರಿಗೆ ಇಲ್ಲಿನ ಆಳರಸರೇ ಕಪ್ಪ ಕೊಡಬೇಕೆಂದು ನಿಯಮ ಮಾಡಿದರು. ಕಪ್ಪ ಕೊಡದಿದ್ದರೆ ಕೊಲ್ಲುವುದು, ಊರಿಗೆ ಬೆಂಕಿ ಇಡುತ್ತಿದ್ದರು. ಈಗಿನ ಕಾಲಕ್ಕೆ ಹೋಲಿಸುವುದಾದರೆ ಇದು ಮಾನವ ಹಕ್ಕುಗಳ ಘೋರ ಉಲ್ಲಂಘನೆ. ಈ ಉಲ್ಲಂಘನೆಯನ್ನು ದಿಟ್ಟವಾಗಿ ಎದುರಿಸಿದವಳು ಉಳ್ಳಾಲದ ರಾಣಿ ಅಬ್ಬಕ್ಕ ದೇವಿ. ಈಕೆ ಜೈನರಾದ ಚೌಟ ಮನೆತನಕ್ಕೆ ಸೇರಿದವಳು, ಬಂಗಾಡಿಯ ಅರಸು ಮನೆತನಕ್ಕೆ ಮದುವೆಯಾದವಳು.
1556ರಲ್ಲಿ ಪೋರ್ಚುಗೀಸ್ ಸೈನ್ಯಾಧಿಕಾರಿ ಅಲ್ವಾರೋ ಡೇ ಸಿಲ್ವೇರಾ ಮಂಗಳೂರಿನಲ್ಲಿ ಲೂಟಿ ಮಾಡಿ ಅನೇಕ ಜನರ ಪ್ರಾಣ ಹಾನಿ ಮಾಡಿದ್ದ. 1558ರಲ್ಲಿ ಲೂಯಿಸ್ ಡೇ ಮೆಲೊ ಮಂಗಳೂರು ಬಂದರಿಗೆ ಮುತ್ತಿಗೆ ಹಾಕಿದಾಗ ಅಬ್ಬಕ್ಕ ಹತ್ತಿಕ್ಕಿದಳು. ಕುಪಿತನಾದ ಆತ ನಗರಕ್ಕೆ ಬೆಂಕಿ ಹಾಕಿ ಸಿಕ್ಕವರನ್ನು ಕೊಂದ. 1562ರಲ್ಲಿ ಎರಡು ತುಕಡಿಯನ್ನು ಕಳುಹಿಸಿ ಯುದ್ಧ ಮಾಡಿದ. ರಾಣಿಯ ಕಡೆಯವರು ಸೈನ್ಯಾಧಿಕಾರಿ ಪೆಕ್ಸೆಟೊ ಸಹಿತ 70 ಜನರನ್ನು ಕೊಂದರು. 1568ರಲ್ಲಿ ಇನ್ನೂ ಹೆಚ್ಚಿನ ತುಕಡಿಗಳೊಂದಿಗೆ ಯುದ್ಧ ಮಾಡಿದರು.
ರಾಣಿಗೆ ಲಕ್ಷ್ಮಪ್ಪ ಎಲ್ಲ ನೆರವು ಕೊಟ್ಟರೂ ಅಧಿಕಾರದಾಸೆಯಿಂದ ಸೋದರಿ ಮಗ, ಅಳಿಯ ರಾಮರಾಯ ಪೋರ್ಚುಗೀಸರೊಂದಿಗೆ ಸೇರಿಕೊಂಡು ದ್ರೋಹ ಬಗೆದ, ಇದರಿಂದಾಗಿ ದಂಪತಿಯಲ್ಲಿ ವಿರಸ ಉಂಟಾಗಿತ್ತೆಂದೂ ಇತಿಹಾಸ ಹೇಳುತ್ತದೆ. 1555ರಲ್ಲಿ ಪೋರ್ಚುಗೀಸ್ ಸೈನ್ಯಾಧಿಕಾರಿ ಡೊವೆಲ್ ಅಲ್ವಾರಿಸ್ ಡಿ’ಸಿಲ್ವಿರನು 21 ಹಡಗುಗಳಿಂದ ಉಳ್ಳಾಲದ ಮೇಲೆ, ಬಳಿಕ 1566ರಲ್ಲಿ ಜೋಪೀಕ್ಷೋಟೊ ನೇತೃತ್ವದಲ್ಲಿ ಆಕ್ರಮಣ ನಡೆಯಿತು. ಆರಂಭದಲ್ಲಿ ಪೋರ್ಚುಗೀಸರಿಗೆ ಜಯ ಸಿಕ್ಕಿದರೂ ಕೊನೆಗೆ ಜೋಪೀಕ್ಷೋಟೊ ಸಾವಿನೊಂದಿಗೆ ಪರಾಜಯ ಅನುಭವಿಸಿದರು. ಕುಪಿತನಾದ ಪೋರ್ಚುಗೀಸ್ ವೈಸರಾಯ್ ಡೊಮ್ ಇಂಟಾವೊ ಡಿ’ನೊರೊನ್ಹಾ ನೇರವಾಗಿ ಯುದ್ಧಕ್ಕಿಳಿದ. ದಂಡನಾಯಕ ಡಾನ್ ಫ್ರಾನ್ಸಿಸ್ ಮಸ್ಕರೇನಸ್ ಗಂಭೀರವಾಗಿ ಗಾಯಗೊಂಡ. ಅಬ್ಬಕ್ಕನ ಜಯ ಪರದೇಶಗಳಲ್ಲಿಯೂ ಸುದ್ದಿಯಾಯಿತು. 1568ರ ಜ. 21ರಂದು ವೈಸರಾಯ್ ಪಣತೊಟ್ಟು ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡಿದಾಗ ಆಗಷ್ಟೇ ದಣಿದ ರಾಣಿಯ ಸೈನಿಕರು ಸೋತರು. 1581ರಲ್ಲಿ ಉಳ್ಳಾಲವನ್ನು ಸುಟ್ಟು ಹಾಕಿದರು. ಆ ಯುದ್ಧದಲ್ಲಿ ಗಾಯಗೊಂಡ ಅಬ್ಬಕ್ಕ 1582ರಲ್ಲಿ ನಿಧನ ಹೊಂದಿದಳು. ಅಬ್ಬಕ್ಕನ ಮರಣಾನಂತರ ಡಾನ್ ಜುವಾನ್ ಕುಟಿನ್ಹೊ, ಫ್ರಾನ್ಸಿಸ್ ಡಿ ಮಿರಿಂಡಾ ನೇತೃತ್ವದ ಪೋರ್ಚುಗೀಸ್ ಸೇನೆ ಮಂಗಳೂರು, ಉಳ್ಳಾಲವನ್ನು ದೋಚಿ ಸುಟ್ಟು ಹಾಕಿತ್ತು.
ದಶಕಗಳ ಕಾಲ ಸ್ವಾಭಿಮಾನಿಯಾಗಿ ಹೋರಾಡಿದ್ದ ಈಕೆಯನ್ನು “ನಲ್ವತ್ತು ವರ್ಷ ವಯಸ್ಸಿನ ಗಡಸಿನ ಹೆಣ್ಣು’ ಎಂದು ವಿದೇಶಿ ಪ್ರವಾಸಿಯೊಬ್ಬನು ಕರೆದಿದ್ದಾನೆ. ಸ್ಥಳೀಯ ರಾಣಿಯ ಹೋರಾಟವನ್ನು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ ಎಂದು ಇತಿಹಾಸಕಾರರು ಪರಿಗಣಿಸುವುದು, ಪೋರ್ಚುಗೀಸರ ಚರಿತ್ರೆಯಲ್ಲೂ ಅಬ್ಬಕ್ಕನ ಹೆಸರು ಶಾಶ್ವತವಾಗಿರುವುದು ಕರಾವಳಿಗರಿಗೆ ಚೇತೋಹಾರಿ.
15-16ನೆಯ ಶತಮಾನದಲ್ಲಿ ಬಸ್ರೂರು ಕೇರಳದಿಂದ ಮಹಾ ರಾಷ್ಟ್ರದವರೆಗಿನ ಕಡಲತೀರದಲ್ಲಿ ನಂಬರ್ 1 ವ್ಯಾಪಾರ ಕೇಂದ್ರ ವಾಗಿತ್ತು. ಇಲ್ಲಿ ವಿದೇಶೀಯರ ವ್ಯಾಪಾರವೂ ಭರದಿಂದ ಸಾಗುತ್ತಿತ್ತು.
1510ರಲ್ಲಿ ಗೋವೆಯ ಪೋರ್ಚುಗೀಸ್ ವೈಸರಾಯ್ ಬಸ್ರೂರಿನ ಮಹತ್ವ ಅರಿತಿದ್ದನು. 1525ರಲ್ಲಿ ಪೋರ್ಚುಗೀಸರು ಬಂದು 1569ರ ವರೆಗೆ ಇಲ್ಲಿಯ ವರ್ತಕರಿಂದ ಅಕ್ಕಿ ಪಡೆದು ವ್ಯಾಪಾರ ನಡೆಸಿದರು. ಅನಂತರ ವ್ಯಾಪಾರದ ಹೆಸರಿನಲ್ಲಿ ಕೊಳ್ಳೆ ಹೊಡೆಯುವುದು ಆರಂಭವಾಯಿತು. 1583ರಲ್ಲಿ ಸಮುದ್ರ ಕಿನಾರೆಯ ಕೊಡಂಡೇಶ್ವರದೇವ
ಸ್ಥಾನಕ್ಕೆ ಬೆಂಕಿ ಇಟ್ಟಾಗ ಸ್ಥಳೀ ಯರು ಪೋರ್ಚುಗೀಸರನ್ನು ಹೊರದಬ್ಬಲು ಯತ್ನಿಸಿದ್ದರು.
ಶಿವಾಜಿ 1674ರಲ್ಲಿ ಮರಾಠಾ ಸಾಮ್ರಾಜ್ಯ ಸ್ಥಾಪನೆ ಮಾಡುವ 9 ವರ್ಷ ಮುಂಚೆ ತನ್ನ 35ನೆಯ ವಯಸ್ಸಿನಲ್ಲಿ 4,000 ನಾವಿಕರ ಸೈನ್ಯದಿಂದ ಬಸ್ರೂರು ದಾಳಿ ಯಂತಹ ಅಸಾಮಾನ್ಯ ಸಾಹಸಕ್ಕೆ ಕೈಹಾಕಿ ಯಶಸ್ವಿಯಾದ. ಇತಿಹಾಸ ದಲ್ಲಿ ಐರೋಪ್ಯರೇ ನೌಕಾಬಲದಲ್ಲಿ ಅಪ್ರತಿಮರು ಎಂದು ಬೋಧಿ ಸುತ್ತಿರುವ ಸಂದರ್ಭ ದೇಸೀ ನೌಕಾಬಲದ ಪರಾಕ್ರಮವನ್ನೂ ಬೋಧಿಸಬೇಕಾಗಿದೆ.
ಅಫಲ್ಖಾನ್ ವಿರುದ್ಧ ಗೆಲುವು ಸಾಧಿ ಸಿದ್ದು 1659ರಲ್ಲಿ. ಹೆಚ್ಚಾ ಕಡಿಮೆ ಇದೇ ವೇಳೆ ಕಲ್ಯಾಣ್ನಲ್ಲಿ ಪೋರ್ಚುಗೀಸರಮೇಲೆ ದಾಳಿ ನಡೆಸಲು ನೌಕಾಪಡೆಯ ಸಿದ್ಧತೆ ಆರಂಭವಾಯಿತು. 1664ರ ನವೆಂಬರ್ 25ರಂದು ಸಿಂಧುದುರ್ಗದ ಕೋಟೆಗೆ ಶಂಕುಸ್ಥಾಪನೆ ನಡೆಯಿತು. 1665ರ ಫೆಬ್ರವರಿ 8ರಂದು ಮಲಾಡ್ನಿಂದ ಬಸೂÅರಿಗೆ ಶಿವಾಜಿಯ ದಿಗ್ವಿಜಯ ಮೂರು ದೊಡ್ಡ ನೌಕೆ, 85 ಸಣ್ಣ ನೌಕೆಗಳೊಂದಿಗೆ ಆರಂಭವಾಯಿತು. ಗೋವಾದಲ್ಲಿ ಯಾವುದೇ ಅಡೆತಡೆ ಇಲ್ಲದೆ ಉತ್ತರ ಕನ್ನಡದ ಕರಾವಳಿಯನ್ನು (ಕಾರವಾರ, ಹೊನ್ನಾವರ, ಭಟ್ಕಳ) ದಾಟಿ ಬಸ್ರೂರಿಗೆ ತಂದು ತಲುಪಿದ. ಫೆ. 13 ಅಥವಾ 14ರಂದು ಆಕ್ರಮಣ ನಡೆಯಿತು.
ಅಮಾವಾಸ್ಯೆ ಸಮಯದಲ್ಲಿ ಬೆಳ್ಳಂಬೆಳಗ್ಗೆ ಶಿವಾಜಿಯ ಸೈನ್ಯ ದಾಳಿ ನಡೆಸುತ್ತದೆ. ದಾಳಿ ನಡೆಸಿದ ಬಳಿಕವೇ ಅಲ್ಲಿದ್ದವರಿಗೆ ತಿಳಿದದ್ದು. ಇದನ್ನು ಇತ್ತೀಚಿಗೆ ಭಾರತದ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ಗೆ ಹೋಲಿಸಬಹುದು. ಗೋಕರ್ಣಕ್ಕೆ (ಫೆ. 18?) ಹೋಗಿ ಪೂಜೆ ನಡೆಸಿದ. ವಾಪಸು ಹೋಗುವಾಗ ಅಂಕೋಲಕ್ಕೆ ಭೂಮಾರ್ಗದಲ್ಲಿ ತೆರಳಿದ. ಹೋಳಿ ಹಬ್ಬ ಮುಗಿದು ಕಾರವಾರಕ್ಕೆ ಫೆ. 22ರಂದು ತೆರಳಿ ಮರುದಿನವೇ ಮಹಾರಾಷ್ಟ್ರಕ್ಕೆ ಹಿಂದಿರುಗಿದ.
ವ್ಯಾಪಾರದಲ್ಲಿದ್ದ ಪೋರ್ಚುಗೀಸರು ಮತ್ತು ಡಚ್ಚರ ಪ್ರಭಾವವನ್ನು ಹತ್ತಿಕ್ಕುವುದೂ ಶಿವಾಜಿ ಉದ್ದೇಶಗಳಲ್ಲಿ ಒಂದಾಗಿತ್ತು. ಶಿವಾಜಿಯ ಮೊದಲ ಭರ್ಜರಿ ಇನ್ನಿಂಗ್ಸ್ ಆರಂಭವಾದದ್ದುಬಸ್ರೂರಿನಿಂದ ಎನ್ನುವುದು ಕರಾವಳಿಗರಿಗೆ ಹೆಮ್ಮೆ.
-ಮಟಪಾಡಿ ಕುಮಾರಸ್ವಾಮಿ