ನೆರೆಯಲ್ಲಿ ಜನರಿಗೆ ನೆರವಾದ ಸಾಮಾಜಿಕ ಮಾಧ್ಯಮ
Team Udayavani, Aug 23, 2018, 12:30 AM IST
ಅವರ ಒಬ್ಬಳೇ ಮಗಳು ಬೆಂಗಳೂರಲ್ಲಿ. ಆಕೆ ಉದ್ಯೋಗದಲ್ಲಿರುವುದು ಯಾವ ಕಂಪೆನಿಯಲ್ಲಿ? ಆಕೆಯ ಪಿ.ಜಿ. ಎಲ್ಲಿ ? ಮೊಬೈಲ್ ನಂಬರ್ ಯಾವುದು ಒಂದೂ ತಾಯಿಗೆ ಗೊತ್ತಿಲ್ಲ. ಅಮ್ಮನಿಗೆ ಗೊತ್ತಿರಲಿ ಎಂದು ಮಗಳು ಗೋಡೆಯ ಮೇಲೆ ಬರೆದಿಟ್ಟು ಹೋಗಿದ್ದಾಳೆ. ಆ ಮನೆ, ಗೋಡೆ, ಕಪಾಟಿನಲ್ಲಿರುವ ಈ ಅಮ್ಮನ ಮೊಬೈಲ್ ಉಳಿದಿದೆಯಾ ಗೊತ್ತಿಲ್ಲ. ಯಾರೋ ಸ್ನೇಹಿತರು ಅಮ್ಮನಿಂದ ಮಗಳ ಹೆಸರು ಕೇಳಿ ಪತ್ತೆ ಮಾಡಿ ಎಂದು ಬೆಂಗಳೂರಿನ ನಾಗರಿಕರಿಗೆ ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಹಾಕಿದ್ದಾರೆ.
ವಾಟ್ಸ್ಆ್ಯಪ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಬಗ್ಗೆ ಏನೇ ಆರೋಪಗಳಿರಲಿ ಇದೀಗ ಕೇರಳ- ಕೊಡಗು ಜಲಪ್ರಳಯ ಸಂದರ್ಭದಲ್ಲಿ ಅವುಗಳಿಂದಾದ ಪ್ರಯೋಜನ ಗಮನಾರ್ಹ. ಯಾವುದೇ ಮನೆ, ದ್ವೀಪ, ನಡುಗಡ್ಡೆ, ಬೆಟ್ಟ, ಬಯಲಲ್ಲಿ ಸಿಕ್ಕಿಹಾಕಿಕೊಂಡ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು, ಸಿಕ್ಕಿ ಹಾಕಿಕೊಂಡ ಜಾಗವನ್ನು ಜಿಲ್ಲಾಡಳಿತಕ್ಕೋ ಇತರ ರಿಗೋ ಸಂದೇಶ ಕಳಿಸಿ ಪಾರಾದ ನೂರಾರು ಉದಾಹರಣೆಗಳಿವೆ. ತೆಂಗಮಾರು, ಪಾಲ್ಗಾಟ್ ಮುಂತಾದ ಕಡೆ ಸಿಕ್ಕಿಹಾಕಿಕೊಂಡ ನತದೃಷ್ಟರು ನೇರವಾಗಿ ಕೇರಳದ ಚಾನೆಲ್ಗಳಿಗೆ ವಾಟ್ಸ್ಆ್ಯಪ್ ಮೂಲಕ ದೃಶ್ಯ ಸಂದೇಶ ಕಳುಹಿಸಿದಾಗ ಅದನ್ನು ಮನೋರಮಾ, ಮಾತೃಭೂಮಿಗಳಂಥ ವಾಹಿನಿಗಳು ಸ್ಥಳೀಯ ಎಸಿ, ಡಿಸಿಗಳಿಗೆ ತಿಳಿಸಿ ಆಡಳಿತಾಂಗ ಆ ಜಾಗಕ್ಕೆ ಹೆಲಿಕಾಪ್ಟರ್ ಕಳಿಸಿ ಸಿಕ್ಕಿಹಾಕಿಕೊಂಡವರನ್ನು ಪಾರು ಮಾಡಿದ್ದೂ ಆಗಿದೆ. ರೇಂಜ್ ಇರುವ ಕಡೆ ಮೊಬೈಲ್ನಲ್ಲಿ ಚಾರ್ಜ್ ಇರುವಷ್ಟು ಹೊತ್ತು ಇದು ಸಾಧ್ಯವಾಗಿದೆ. ಮೊಬೈಲ್ ವ್ಯಾಪ್ತಿ ಮೀರಿ ನಿರ್ಜನವಾಗಿ ಉಳಿ ಯುವ ಅಂಥ ಜಾಗಗಳು ಕೊಡಗು-ಕೇರಳದಲ್ಲಿಲ್ಲ ಎನ್ನಲಾಗದು. ಆದರೆ ಅಂಥ ವ್ಯಾಪ್ತಿ ಸೀಮಿತ.
ರೇಂಜ್ ಇರುವ ಕಡೆ ಕ್ಷಣಾರ್ಧದಲ್ಲಿ ಸುದ್ದಿ ತಲುಪಿಸುವ ಸಾಮಾಜಿಕ ಜಾಲತಾಣ ಆಧರಿತ ಮಾಹಿತಿ ಬಳಕೆ ಎಷ್ಟಾಗಿದೆ ಎಂದರೆ ಬಹುಪಾಲು ಎಲೆಕ್ಟ್ರಾನಿಕ್ ಮಾಧ್ಯಮಗಳು 24/7 ಸುದ್ದಿ ಪ್ರಸಾರದಲ್ಲಿ ಬಿತ್ತರಿಸಿದ ಸುದ್ದಿ ತುಣುಕುಗಳು ವಾಟ್ಸ್ಆ್ಯಪ್ ಆಧರಿತ ಮಾಹಿತಿಗಳೇ. ಕನ್ನಡದ ವಾಹಿನಿಗಳು ಮತ್ತೆ ಮತ್ತೆ ತೋರಿಸುತ್ತಿದ್ದ ಕೊಡಗಿನಲ್ಲಿ (ಮಡಿಕೇರಿ) ಎತ್ತರದಿಂದ ಕಟ್ಟಡ ವೊಂದು ಜಾರಿ ಕೆಳಗಡೆ ಕುಸಿದ ದೃಶ್ಯಾವಳಿ ವಾಹಿನಿಯ ಕ್ಯಾಮೆರಾ ಚಿತ್ರಿಸಿದ್ದಲ್ಲ, ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿ ದದ್ದು. ಪ್ರತಿಯೊಬ್ಬನ ಕೈಯಲ್ಲೂ ಮೊಬೈಲ್ ಇರುವುದರಿಂದ ಮತ್ತು ಇಂಥ ಪ್ರಕೃತಿ ವಿಕೋಪದ ಭಯದ ಕಾಲದಲ್ಲಿ ಅದು ಕೈಯಲ್ಲೇ ತೆರೆದಿರುವುದರಿಂದ ಭಯಾನಕ ದೃಶ್ಯಗಳೆಲ್ಲಾ ರೆಕಾರ್ಡ್ ಆಗಿಯೇ ಆಗುತ್ತವೆ. ಸಮಸ್ಯೆ ಅಂದರೆ ಕೊಡಗಿನ ದೃಶ್ಯಗಳೊಂದಿಗೆ, ಕೇರಳ ದೃಶ್ಯಗಳು ಮತ್ತು ಉತ್ತರ ಭಾರತದ ಪ್ರಳಯ ದೃಶ್ಯಗಳೂ ಸೇರಿಕೊಂಡು ಹರಿದಾಡಿದ್ದು. ಪ್ರಸಾರದ ಅವಸರದಲ್ಲಿ ಅವುಗಳನ್ನು ವಿಂಗಡಿಸುವುದಕ್ಕೆ ತಾಳ್ಮೆ-ಸಮಯವಿಲ್ಲದ ವಾಹಿನಿಗಳು ಎಲ್ಲವನ್ನೂ ತೋರಿಸಿ ನೋಡುಗರಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸಿದ್ದಾಗಿದೆ.
ಜಲಪ್ರಳಯಕ್ಕೆ ಒಂದು ನಿಗದಿತ ಆದಿ-ಅಂತ್ಯ ಇರುವುದಿಲ್ಲ. ಮಳೆ-ನೀರು ಭೂಪಟ, ದಾರಿ ನೋಡಿ ಹರಿಯುವುದಿಲ್ಲ. ಅದಕ್ಕೆ ಮನುಷ್ಯರೂ ಒಂದೇ, ಮರದ ಮೇಲಿನ ಕೋಗಿಲೆಯೂ ಒಂದೇ. ಎಲ್ಲವನ್ನೂ ಮಟ್ಟಸ ಮಾಡಿಯೇ ಮಾಡುತ್ತದೆ. ಆದೆಲ್ಲಾ ಕ್ಷಣದಲ್ಲಿ ನಡೆದು ಮುಗಿದು ಹೋಗುವ ಕಥೆ. ಇಂಥ ಜೀವನ್ಮರಣ ಸ್ಥಿತಿಯಲ್ಲಿ ದಾಖಲಾಗುವ ಬಹುಪಾಲು ದೃಶ್ಯಗಳು ಮನುಷ್ಯ ಕೇಂದ್ರಿತವಾಗಿಯೇ ಇರುತ್ತವೆ. ಕೇರಳದಲ್ಲಿ ಚಿತ್ರಿತ ಗೊಂಡ ಆ ಒಂದು ಘಟನೆ ಮನ ಕರಗಿಸುವಂತಿದೆ. ನೀರಿನಲ್ಲಿ ಸಿಕ್ಕಿ ಹಾಕಿಕೊಂಡ ನಾಯಿಮರಿಯನ್ನು ಅದರಮ್ಮ ಆ ನೀರಿನಲ್ಲಿ ಈಜಿ ಬಾಯಿಯಲ್ಲಿ ಕಚ್ಚಿಕೊಂಡು ಎತ್ತರದ ರಸ್ತೆಗೆ ಬಂದು ಸುರಕ್ಷಿತ ಜಾಗವನ್ನು ಹುಡುಕಿಕೊಂಡು ಓಡುವುದು. ಭೂಮಿಯ ಮೇಲೆ ಮನುಷ್ಯರಷ್ಟೇ ಒಂದು ಜೀವಿಯೂ ಅಸ್ತಿತ್ವಕ್ಕಾಗಿ ಹೋರಾಡುತ್ತದೆ ಮತ್ತು ಭೂಮಿಯ ಪ್ರಕೃತಿಯ ಪೂರ್ಣತೆಗೆ ಇಲ್ಲಿ ಮನುಷ್ಯನಷ್ಟೇ ಪ್ರತಿ ಜೀವಿಯ ಅಗತ್ಯವಿದೆ ಎಂಬ ಸಂದೇಶ ಆ ವಾಟ್ಸ್ಆ್ಯಪ್ ದೃಶ್ಯದಲ್ಲಿತ್ತು. ಅದು ಒಂದು ಸುದ್ದಿ-ಘಟನೆ ಎಂಬುದಕ್ಕಿಂತ ಒಂದು ಸಾಕ್ಷ್ಯ ಚಿತ್ರದಂತೆ ಕಂಡಿತು.
ಕೇರಳದ ಯಾವುದೋ ಶಾಲೆಯೊಂದರ ಗಂಜಿ ಕೇಂದ್ರ ಸೇರಿದ್ದ ನೂರಾರು ಜನ ಮನೆ ಮಠ ಕಳೆದುಕೊಂಡವರು. ಮಾರ್ಕ್ಸ್ ಕಾರ್ಡು, ಆಧಾರ್, ಭೂಮಿ ಆರ್.ಟಿ.ಸಿ. ಯಾವುದೂ ಅವರಲ್ಲಿಲ್ಲ. ಮಳೆ ಬಿಟ್ಟು ತಿರುಗಿ ಹೋಗುವಾಗ ತಮ್ಮ ಮನೆ ಮಠ, ತೋಟ, ದಾರಿ ಇರುತ್ತದೋ ಇಲ್ಲವೋ ಎಂಬ ಗ್ಯಾರಂಟಿ ಯಿಲ್ಲ. ನಿನ್ನೆಯ ಶ್ರೀಮಂತರು ಇವತ್ತಿನ ಬಡವರು. ಎಲ್ಲರೂ ನೆಲ ಹಾಸಿನ ಮೇಲೆ ಭವಿಷ್ಯದ ಚಿಂತನೆಯಲ್ಲಿ ಮುರುಟಿ ಮಲಗಿದ್ದಾರೆ. ಅದೇ ರಾಶಿ ರಾಶಿ ಜನರ ಮಧ್ಯೆ ಇದ್ದ ಮೊಬೈಲ್ ಮನಸ್ಸೊಂದು ಪುಟ್ಟ ಚಿತ್ರವೊಂದನ್ನು ಚಿತ್ರಿಸಿ ಮನೋರಮಾ ವಾಹಿನಿಯ ರಿಪೋರ್ಟರ್ ಕೈಗೆ ನೀಡುತ್ತದೆ. ಮನೆ, ಭೂಮಿ, ಹಣ ಎಲ್ಲವೂ ಇರುತ್ತಿದ್ದರೆ ಜಾತಿ ಮತ್ತು ಧರ್ಮ ಮರೆತು ಒಂದೇ ಹಾಸಿನಲ್ಲಿ ಇವರೆಲ್ಲ ಮಲಗುತ್ತಿದ್ದರೆ? “ಜಲಪ್ರಳಯ ಮನುಷ್ಯರನ್ನು ಕೂಡಿಸುತ್ತದೆ’ ಎಂಬುದು ಆ ವಾಟ್ಸ್ಆ್ಯಪ್ ಸಂದೇಶ.
ಜೋಡುಪಾಲದ ಗೃಹಿಣಿಯೊಬ್ಬರು ಜಲಕಂಟಕದಿಂದ ಹೇಗೋ ಪಾರಾಗಿ ಸುಳ್ಯದ ಗಂಜಿ ಕೇಂದ್ರವೊಂದರಲ್ಲಿದ್ದಾರೆ. ಅವರ ಒಬ್ಬಳೇ ಮಗಳು ಬೆಂಗಳೂರಲ್ಲಿ. ಆಕೆ ಉದ್ಯೋಗದಲ್ಲಿ ರುವುದು ಯಾವ ಕಂಪೆನಿಯಲ್ಲಿ? ಆಕೆಯ ಪಿ.ಜಿ. ಎಲ್ಲಿ? ಮೊಬೈಲ್ ನಂಬರ್ ಯಾವುದು ಒಂದೂ ತಾಯಿಗೆ ಗೊತ್ತಿಲ್ಲ. ಅಮ್ಮನಿಗೆ ಗೊತ್ತಿರಲಿ ಎಂದು ಮಗಳು ಗೋಡೆಯ ಮೇಲೆ ಬರೆದಿಟ್ಟು ಹೋಗಿದ್ದಾಳೆ. ಆ ಮನೆ, ಗೋಡೆ, ಕಪಾಟಿನಲ್ಲಿರುವ ಈ ಅಮ್ಮನ ಮೊಬೈಲ್ ಉಳಿದಿದೆಯಾ ಗೊತ್ತಿಲ್ಲ. ಯಾರೋ ಸ್ನೇಹಿತರು ಅಮ್ಮನಿಂದ ಮಗಳ ಹೆಸರು ಕೇಳಿ ಪತ್ತೆ ಮಾಡಿ ಎಂದು ಬೆಂಗಳೂರಿನ ನಾಗರಿಕರಿಗೆ ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಹಾಕಿದ್ದಾರೆ.
ವ್ಯಾಪ್ತಿ ತಪ್ಪಿದ, ಸಂಬಂಧ – ಊರು ತಪ್ಪಿ ಕಳೆದು ಹೋದ ಎಷ್ಟೋ ಕುಟುಂಬಿಕರು, ಊರವರು ಬರೀ ಜಾಲತಾಣಗಳ ಮೂಲಕ ಬದುಕಿರುವ, ನೆಲೆ ಇರುವ ತಾಣಗಳ ಸಾಕ್ಷಿ, ಗುರುತು ಕೊಡುತ್ತಿದ್ದಾರೆ. ದುಬೈಯಲ್ಲಿರುವ ಕೇರಳಿಗ, ಜಮ್ಮುವಿನಲ್ಲಿರುವ ಕೊಡಗು ಮೂಲದ ಯೋಧ, ಬೆಂಗಳೂರಿನಲ್ಲಿರುವ ಮಡಿಕೇರಿಯ ನಟಿ ಇವರೆಲ್ಲಾ ತನ್ನೂರವರಿಗೆ ಸಹಾಯ ಯಾಚಿಸಿದ್ದಕ್ಕೆ ಲೋಕದ ಜನ ಸ್ಪಂದಿಸುವ ರೀತಿ ಮನುಷ್ಯ ಇನ್ನೂ ಕೆಟ್ಟಿಲ್ಲ, ಮಾನವೀಯತೆ ಉಳಿದಿದೆ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದೆ. ಇಷ್ಟಾದರೂ ಕೊಡಗಿನಲ್ಲಿ ಇನ್ನೂ ನಿರಾಶ್ರಿತರು ನಡುಗಡ್ಡೆಗಳಲ್ಲಿ ದಿಕ್ಕಿಲ್ಲದೆ ಉಳಿದಿರುವ ಸಾಧ್ಯತೆ ತುಂಬಾ ಇದೆ. ಉನ್ನತ ಶಿಕ್ಷಣ ಸಂಸ್ಥೆಗಳು, ತಾಂತ್ರಿಕ – ವೈದ್ಯಕೀಯ ಕಾಲೇಜು ಗಳಿಲ್ಲದ ಕೊಡಗಿನ ಸಾಕಷ್ಟು ವಿದ್ಯಾರ್ಥಿ ಯುವ ಸಮುದಾಯ ಕಲಿಕೆಗಾಗಿ ಜಿಲ್ಲೆಯಿಂದ ಹೊರಗಿದೆ. ವಯಸ್ಸಾದ ತಂದೆ ತಾಯಿ, ಅಜ್ಜ ಅಜ್ಜಿಯರನ್ನುಳಿದು ಕೆಲವು ಮನೆಗಳಲ್ಲಿ ಬೇರೆ ಯಾವುದೇ ಹಿರಿಯರಿಲ್ಲ. ಓದುವ ಮಕ್ಕಳು ಮಂಗಳೂರು, ಪುತ್ತೂರು, ಮೈಸೂರು, ಬೆಂಗಳೂರುಗಳಲ್ಲಿದ್ದಾರೆ. ಇಂಥವರೊಂದಿಗೆ ಸಂಪರ್ಕ ಸಾಧ್ಯವಾಗದೆ ಬೆಟ್ಟ ಗುಡ್ಡಗಳ ಸಂದಿ, ನಡುಗಡ್ಡೆಗಳಲ್ಲಿ ಇನ್ನೂ ಉಳಿದಿರುವ ಸಾಧ್ಯತೆಗಳಿವೆ. ಮಾಧ್ಯಮದ ಕ್ಯಾಮೆರಾ, ಪತ್ರಕರ್ತನ ಕಣ್ಣು, ಜಾಲತಾಣಗಳ ದೃಷ್ಟಿ ತಾಗದ ಜಾಗ ಕೇರಳಕ್ಕಿಂತ ಕೊಡಗಿನಲ್ಲಿ ಹೆಚ್ಚಿರುವ ಸಾಧ್ಯತೆ ಇದೆ. ಇಲ್ಲೆಲ್ಲಾ ವೈಮಾನಿಕ ಸಮೀಕ್ಷೆಗಳೇ ನಿರಾಶ್ರಿತರನ್ನು ಪತ್ತೆ ಹಚ್ಚುವ ದಾರಿ. ಕೊಡಗು-ಕೇರಳ ಜಲಪೀಡಿತರ ನೋವು ಈ ಲೋಕದ ಎಲ್ಲರ ನೋವಾಗಿ ಬದಲಾಗಲು, ಎಲ್ಲರೂ ಅತ್ಯಂತ ವೇಗವಾಗಿ ಸ್ಪಂದಿಸಲು ಸಾಧ್ಯವಾದುದರಲ್ಲಿ ಸಾಮಾಜಿಕ ಮಾಧ್ಯಮಗಳ ಪಾಲು ಹಿರಿದಾದುದು ಎಂದು ಗಮನೀಯ ಮತ್ತು ಅಭಿವಂದನೀಯ.
ನರೇಂದ್ರ ರೈ ದೇರ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ