ಕೆಲವೊಮ್ಮೆ ನಾನು ಈ ಹೋರಾಟದಲ್ಲಿ ಏಕಾಂಗಿಯಾಗಿದ್ದೆ…
Team Udayavani, Jul 4, 2019, 5:10 AM IST
ಕಾಂಗ್ರೆಸ್ ಪಕ್ಷದ ಮೌಲ್ಯಗಳು ಮತ್ತು ಆದರ್ಶಗಳು ನಮ್ಮ ಈ ಸುಂದರ ರಾಷ್ಟ್ರದ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇಂಥ ಪಕ್ಷಕ್ಕಾಗಿ ಸೇವೆ ಸಲ್ಲಿಸುವುದು ನನಗೆ ಹೆಮ್ಮೆಯ ಸಂಗತಿ. ದೇಶಕ್ಕೆ ಮತ್ತು ಪಕ್ಷಕ್ಕೆ ನಾನು ಅಪಾರ ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ಅವುಗಳ ಪ್ರೀತಿಗೆ ಚಿರ ಋಣಿಯಾಗಿದ್ದೇನೆ.
ಕಾಂಗ್ರೆಸ್ ಅಧ್ಯಕ್ಷನಾಗಿ ನಾನು 2019ರ ಲೋಕಸಭಾ ಚುನಾ ವಣೆಯ ಸೋಲಿಗೆ ಹೊಣೆ ಹೊರುತ್ತೇನೆ. ಹೊಣೆಗಾರಿಕೆಯೆನ್ನುವುದು ಪಕ್ಷದ ಭವಿಷ್ಯದ ಬೆಳವಣಿಗೆಗೆ ನಿರ್ಣಾಯಕ ಅಂಶ. ಈ ಕಾರಣಕ್ಕಾಗಿ ನಾನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.
ಪಕ್ಷವನ್ನು ಪುನರ್ನಿಮಿಸಲು ಕಠಿಣ ನಿರ್ಧಾರಗಳ ಅಗತ್ಯವಿರುತ್ತದೆ ಮತ್ತು 2019ರ ವೈಫಲ್ಯಕ್ಕಾಗಿ ಅನೇಕರನ್ನು ಉತ್ತರದಾಯಿಯಾಗಿಸ ಬೇಕಾಗುತ್ತದೆ. ಆದರೆ ಇತರರನ್ನು ಹೊಣೆಗಾರರನ್ನಾಗಿಸಿ, ನಾನು ನನ್ನ ಸ್ವಂತ ಜವಾಬ್ದಾರಿಯನ್ನು ನಿರ್ಲಕ್ಷಿಸುವುದು ಅನ್ಯಾಯ ಎನಿಸಿಕೊಳ್ಳುತ್ತದೆ.
ನಾನೇ ಕಾಂಗ್ರೆಸ್ನ ಮುಂದಿನ ಅಧ್ಯಕ್ಷರ ನಾಮನಿರ್ದೇಶನ ಮಾಡಬೇಕು ಎಂದು ಪಕ್ಷದ ಅನೇಕ ಸಹೋದ್ಯೋಗಿಗಳು ಸೂಚಿಸಿದ್ದಾರೆ. ನಮ್ಮ ಪಕ್ಷವನ್ನು ಯಾರಾದರೂ ಹೊಸಬರು ಮುನ್ನಡೆಸಬೇಕು ಎನ್ನುವುದು ಮುಖ್ಯ, ಆದರೆ ಆ ವ್ಯಕ್ತಿಯನ್ನು ನಾನೇ ಆಯ್ಕೆ ಮಾಡಬೇಕು ಎನ್ನುವುದು ಸರಿಯಲ್ಲ. ನಮ್ಮ ಪಕ್ಷವು ಹೋರಾಟ ಮತ್ತು ಘನತೆಯ ವಿಚಾರದಲ್ಲಿ ದೀರ್ಘ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದ್ದು, ನಾನದನ್ನು ಬಹಳ ಗೌರವಿಸುತ್ತೇನೆ. ಈ ಪರಂಪರೆಯು ಭಾರತದ ಆಂತರ್ಯದೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ ನಮ್ಮನ್ನು ಧೈರ್ಯ, ಪ್ರೀತಿ ಮತ್ತು ನಿಷ್ಠೆಯಿಂದ ಮುನ್ನಡೆಸುವಂಥ ವ್ಯಕ್ತಿಯನ್ನು ಆಯ್ಕೆ ಮಾಡುವಲ್ಲಿ ಪಕ್ಷವು ಉತ್ತಮ ನಿರ್ಧಾರ ಕೈಗೊಳ್ಳಲಿದೆ ಎಂಬ ಭರವಸೆ ನನಗಿದೆ. ನವ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವನ್ನು ನಾನವರಿಗೆ ನೀಡಿದ್ದೇನೆ ಮತ್ತು ಈ ಪ್ರಕ್ರಿಯೆಯು ಯಾವುದೇ ತೊಂದರೆಯಿಲ್ಲದೆ ಸುಗಮವಾಗಿ ನಡೆಯುವುದಕ್ಕೆ ನಾನು ಪೂರ್ಣ ಬೆಂಬಲ ಕೊಡಲು ಬದ್ಧನಾಗಿದ್ದೇನೆ.
ನನ್ನ ಹೋರಾಟಗಳೆಂದಿಗೂ ಕೇವಲ ರಾಜಕೀಯ ಅಧಿಕಾರಕ್ಕಾಗಿ ನಡೆದಿಲ್ಲ. ಬಿಜೆಪಿಯೆಡೆಗೆ ನನಗೆ ಸಿಟ್ಟು ಅಥವಾ ದ್ವೇಷ ಇಲ್ಲವಾದರೂ, ನನ್ನ ದೇಹದಲ್ಲಿನ ಕಣಕಣವೂ ಭಾರತದ ಕುರಿತ ಬಿಜೆಪಿಯ ಪರಿಕಲ್ಪನೆಗೆ ಸಹಜವಾಗಿಯೇ ಪ್ರತಿರೋಧ ಒಡ್ಡುತ್ತವೆ. ಈ ಪ್ರತಿರೋಧಕ್ಕೆ ಕಾರಣವೂ ಇದೆ. ಏಕೆಂದರೆ ನನ್ನ ಅಸ್ತಿತ್ವದ ಭಾರತದ ಕಲ್ಪನೆಯು, ಮೊದಲಿನಿಂದಲೂ ಅವರ(ಬಿಜೆಪಿ) ಭಾರತದ ಪರಿಕಲ್ಪನೆಯೊಂದಿಗೆ ಸದಾ ನೇರ ಸಂಘರ್ಷದಲ್ಲೇ ಇರುತ್ತದೆ. ಇದೇನೂ ಹೊಸ ಯುದ್ಧವಲ್ಲ, ಸಾವಿರಾರು ವರ್ಷಗಳಿಂದ ನಮ್ಮ ನೆಲದಲ್ಲಿ ಇಂಥ ಯುದ್ಧಗಳಾಗುತ್ತಲೇ ಬಂದಿವೆ. ಅವರಿಗೆ ಎಲ್ಲಿ ಭಿನ್ನತೆ ಕಾಣಿಸುತ್ತದೋ, ನನಗಲ್ಲಿ ಸಾಮ್ಯತೆ ಗೋಚರಿಸುತ್ತದೆ. ಅವರಿಗೆ ದ್ವೇಷ ಕಂಡಲ್ಲಿ, ನನಗೆ ಕಾಣಿಸುವುದು ಪ್ರೀತಿ. ಅವರು ಯಾವುದಕ್ಕೆ ಅಧೀರರಾಗುತ್ತಾರೋ, ನಾನದನ್ನು ಆಲಂಗಿಸುತ್ತೇನೆ.
ಈ ರೀತಿಯ ಸಹಾನುಭೂತಿಯ ಗುಣವು ನಮ್ಮ ದೇಶದಲ್ಲಿನ ಲಕ್ಷೋಪಲಕ್ಷ ನಾಗರಿಕರ ಹೃದಯಗಳಲ್ಲೂ ವ್ಯಾಪಿಸಿದೆ. ಭಾರತದ ಈ ಪರಿಕಲ್ಪನೆಯನ್ನೇ ನಾವಿಂದು ಉತ್ಕಟವಾಗಿ ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ.
ನಮ್ಮ ದೇಶ ಮತ್ತು ಸಂವಿಧಾನದ ಮೇಲೆ ನಡೆಯುತ್ತಿರುವ ಈ ದಾಳಿಯ ಹಿಂದೆ, ದೇಶದ ಆಧಾರ ಸ್ತಂಭವನ್ನು ಕೆಡಹುವ ಹುನ್ನಾರವಿದೆ. ಹೀಗಾಗಿ, ನಾನು ಯಾವುದೇ ಕಾರಣಕ್ಕೂ ಮತ್ತು ಯಾವುದೇ ರೀತಿಯಲ್ಲೂ ಈ ಹೋರಾಟದಿಂದ ಹಿಂದೆ ಸರಿಯಲಾರೆ. ನಾನು ಕಾಂಗ್ರೆಸ್ನ ನಿಯತ್ತಿನ ಸೈನಿಕನಾಗಿ, ಭಾರತದ ನಿಷ್ಠಾವಂತ ಮಗನಾಗಿ ಕೊನೆಯುಸಿರು ಇರುವವರೆಗೂ ದೇಶಸೇವೆ ಮಾಡುತ್ತೇನೆ, ಮತ್ತದನ್ನು ರಕ್ಷಿಸುತ್ತೇನೆ.
ನಾವು ಬಹಳ ಘನತೆಯಿಂದ ಚುನಾವಣೆಯಲ್ಲಿ ಹೋರಾಡಿದೆವು. ನಮ್ಮ ಪ್ರಚಾರವು ಭಾರತೀಯ ನಾಗರಿಕರ, ಧರ್ಮಗಳ ಮತ್ತು ಸಮುದಾಯಗಳ ನಡುವಿನ ಸಹೋದರತ್ವ, ಸಂಯಮ ಮತ್ತು ಗೌರವಾದರಕ್ಕೆ ಮೀಸಲಾಗಿತ್ತು. ನಾನು ನನ್ನೆಲ್ಲ ಶಕ್ತಿಯನ್ನೂ ಒಗ್ಗೂಡಿಸಿ ಪ್ರಧಾನ ಮಂತ್ರಿಗಳು, ಆರ್ಎಸ್ಎಸ್ ಮತ್ತು ಇವರು ಹಿಡಿದಿಟ್ಟುಕೊಂಡಿರುವ ಸಂಸ್ಥೆಗಳ ವಿರುದ್ಧ ಹೋರಾಡಿದೆ-ಏಕೆಂದರೆ ನಾನು ಭಾರತವನ್ನು ಪ್ರೀತಿಸುತ್ತೇನೆ. ಭಾರತವನ್ನು ನಿರ್ಮಿಸಿದ ಆದರ್ಶಗಳನ್ನು ರಕ್ಷಿಸಲು ನಾನು ಹೋರಾಡಿದೆ. ಈ ಹೋರಾಟದಲ್ಲಿ ಕೆಲವೊಮ್ಮೆ ನಾನು ಸಂಪೂರ್ಣವಾಗಿ ಏಕಾಂಗಿಯಾಗಿದ್ದೆ. ಆ ಬಗ್ಗೆ ನನಗೆ ಅತೀವ ಹೆಮ್ಮೆಯೂ ಇದೆ. ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಸದಸ್ಯರ ಚೈತನ್ಯ ಮತ್ತು ಸಮರ್ಪಣಾ ಗುಣದಿಂದ ನಾನು ಎಷ್ಟೋ ಕಲಿತಿದ್ದೇನೆ. ಅವರು ನನಗೆ ಪ್ರೀತಿ ಮತ್ತು ಸಭ್ಯತೆಯ ಪಾಠ ಕಲಿಸಿದ್ದಾರೆ.
ದೇಶದ ಸಂಸ್ಥೆಗಳು ತಟಸ್ಥವಾಗಿದ್ದಾಗ ಮಾತ್ರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಸಾಧ್ಯವಿದೆ. ಮುಕ್ತ ಮಾಧ್ಯಮ, ಸ್ವತಂತ್ರ ನ್ಯಾಯಾಂಗ ಮತ್ತು ಪಾರದರ್ಶಕ-ತಟಸ್ಥ ಚುನಾವಣಾ ಆಯೋಗದಂಥ ಮಧ್ಯಸ್ಥಗಾರರಿಲ್ಲದೇ ದೇಶದಲ್ಲಿ ಚುನಾವಣೆಗಳು ನಾಯಯುತವಾಗಿ ನಡೆಯಲು ಸಾಧ್ಯವಿಲ್ಲ. ಅಲ್ಲದೆ, ಯಾವುದೇ ಪಕ್ಷವೂ ವಿತ್ತ ಸಂಪನ್ಮೂಲಗಳ ಮೇಲೆ ಏಕಸ್ವಾಮ್ಯ ಹೊಂದಿದಾಗಲೂ ಮುಕ್ತ ಚುನಾವಣೆ ನಡೆಯಲಾರದು.
ನಾವು 2019ರ ಚುನಾವಣೆಯಲ್ಲಿ ಕೇವಲ ಒಂದು ರಾಜಕೀಯ ಪಕ್ಷದ ವಿರುದ್ಧವಷ್ಟೇ ಹೋರಾಡಲಿಲ್ಲ, ಬದಲಾಗಿ, ಪ್ರತಿಪಕ್ಷಗಳನ್ನು ತುಳಿಯಲು ಸಜ್ಜುಗೊಳಿಸಲಾದ ದೇಶದ ಸಂಪೂರ್ಣ ಯಂತ್ರ ಮತ್ತು ಸಂಸ್ಥೆಗಳ ವಿರುದ್ಧ ಹೋರಾಡಿದೆವು. ಒಂದಂಶವಂತೂ ಸ್ಫಟಿಕ ಸ್ಪಷ್ಟವಾಗಿದೆ- ಒಂದು ಕಾಲಕ್ಕೆ ಭಾರತದ ಪ್ರಮುಖ ಗುಣವಾಗಿದ್ದ ‘ಸಾಂಸ್ಥಿಕ ತಾಟಸ್ಥ್ಯ’ವು ಇಂದು ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ .
ದೇಶದ ಸಾಂಸ್ಥಿಕ ರಚನೆಯನ್ನು ಸೆರೆಹಿಡಿಯಬೇಕೆಂಬ ಆರ್ಎಸ್ಎಸ್ನ ಉದ್ದೇಶವು ಈಗ ಪೂರ್ಣಗೊಂಡಿದೆ. ನಮ್ಮ ಪ್ರಜಾಪ್ರಭುತ್ವವು ಮೂಲಭೂತವಾಗಿ ದುರ್ಬಲಗೊಂಡಿದೆ. ಇನ್ಮುಂದೆ ದೇಶದಲ್ಲಿ ಚುನಾವಣೆಗಳೆಲ್ಲ ಭಾರತದ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಬದಲು, ಕೇವಲ ಆಚರಣೆಯಾಗಿ ಸೀಮಿತವಾಗುವ ನಿಜವಾದ ಅಪಾಯ ಎದುರಾಗಿದೆ.
ಶಕ್ತಿಯ ಮೇಲಿನ ಈ ಹಿಡಿತವು, ಭಾರತದ ಪಾಲಿಗೆ ಊಹಿಸಲಾಗದಷ್ಟು ಹಿಂಸಾಚಾರ ಮತ್ತು ನೋವನ್ನು ತಂದೊಡ್ಡಲಿದೆ. ರೈತರು, ನಿರುದ್ಯೋಗಿ ಯುವಕರು, ಮಹಿಳೆಯರು, ಬುಡಕಟ್ಟು ಜನರು, ದಲಿತರು ಮತ್ತು ಅಲ್ಪಸಂಖ್ಯಾತರು ಹೆಚ್ಚು ಬಳಲಲಿದ್ದಾರೆ. ನಮ್ಮ ಆರ್ಥಿಕತೆಯ ಮೇಲೆ ಮತ್ತು ದೇಶದ ಘನತೆಯ ಮೇಲಾಗುವ ಪ್ರತಿಕೂಲ ಪರಿಣಾಮವು ವಿನಾಶಕಾರಿಯಾಗಿ ಇರಲಿದೆ. ಪ್ರಧಾನಮಂತ್ರಿಗಳು ಗೆಲುವು ಸಾಧಿಸಿದ್ದಾರೆ ಎಂದಾಕ್ಷಣ, ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳೇನೂ ಕಾಣೆಯಾಗುವುದಿಲ್ಲ: ಎಷ್ಟೇ ಪ್ರಮಾಣದ ಹಣ ಮತ್ತು ಪ್ರೊಪಗಾಂಡಾದಿಂದಲೂ ಸತ್ಯವೆಂಬ ಬೆಳಕನ್ನು ಮುಚ್ಚಿಡಲು ಸಾಧ್ಯವೇ ಇಲ್ಲ.
ಒಂದು ದೇಶವಾಗಿ ಭಾರತವು ಕೈಜಾರಿದ ತನ್ನ ಸಂಸ್ಥೆಗಳನ್ನು ಹಿಂಪಡೆಯಲು ಮತ್ತು ಪುನರುಜ್ಜೀವಗೊಳಿಸಲು ಒಂದಾಗಬೇಕಿದೆ. ಈ ಪುನರುಜ್ಜೀವನಕ್ಕೆ ಕಾಂಗ್ರೆಸ್ ಪಕ್ಷವೇ ಸಾಧನವಾಗಲಿದೆ.
ಈ ಪ್ರಮುಖ ಗುರಿಯನ್ನು ತಲುಪಬೇಕಾದರೆ, ಕಾಂಗ್ರೆಸ್ ಪಕ್ಷವು ಆಮೂಲಾಗ್ರವಾಗಿ ಬದಲಾಗಬೇಕಿದೆ. ಇಂದು ಬಿಜೆಪಿಯು ಭಾರತೀಯ ನಾಗರಿಕರ ಧ್ವನಿಯನ್ನು ವ್ಯವಸ್ಥಿತವಾಗಿ ಹೊಸಕಿಹಾಕುತ್ತಿದೆ. ಈ ಧ್ವನಿಗಳನ್ನು ರಕ್ಷಿಸುವುದು ಕಾಂಗ್ರೆಸ್ನ ಜವಾಬ್ದಾರಿ. ಭಾರತವು ಎಂದಿಗೂ ಕೂಡ ಕೇವಲ ಏಕ ಸ್ವರವಾಗಿಲ್ಲ, ಮುಂದೆಯೂ ಆಗುವುದಿಲ್ಲ. ಅದೆಂದಿಗೂ ಹಲವಾರು ಧ್ವನಿಗಳ ಸ್ವರಮೇಳವಾಗಿರುತ್ತದೆ. ಭಾರತ ಮಾತೆಯ ನಿಜವಾದ ಸಾರವಿದು.
ನನಗೆ ಬೆಂಬಲ ಸೂಚಿಸುವ ಪತ್ರಗಳನ್ನು ಮತ್ತು ಸಂದೇಶಗಳನ್ನು ಕಳುಹಿಸಿದ ದೇಶ ಮತ್ತು ವಿದೇಶದ ಸಾವಿರಾರು ಭಾರತೀಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷದ ಆದರ್ಶಗಳಿಗಾಗಿ ನನ್ನ ಸಂಪೂರ್ಣ ಶಕ್ತಿಯೊಂದಿಗೆ ಹೋರಾಡುತ್ತೇನೆ. ಪಕ್ಷಕ್ಕಾಗಿ ನನ್ನ ಸೇವೆ ಮತ್ತು ಸಲಹೆ ಅಗತ್ಯವಿದ್ದಾಗಲೆಲ್ಲ ನಾನು ಲಭ್ಯವಿರುತ್ತೇನೆ. ಕಾಂಗ್ರೆಸ್ನ ಐಡಿಯಾಲಜಿಯ ಬೆಂಬಲಿಗರಿಗೆ, ಅದರಲ್ಲೂ ಮುಖ್ಯವಾಗಿ ನಮ್ಮ ನಿಷ್ಠಾವಂತ ಕಾರ್ಯಕರ್ತರಿಗೆ ನಾನು ಹೇಳುವುದಿಷ್ಟೆ- ನಮ್ಮ ಭವಿಷ್ಯದ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ, ನಿಮ್ಮ ಬಗ್ಗೆ ನನಗೆ ಅಪಾರ ಪ್ರೀತಿಯಿದೆ. ಭಾರತದಲ್ಲಿರುವ ಒಂದು ಸಾಮಾನ್ಯ ಗುಣವೇನೆಂದರೆ, ಬಲಿಷ್ಠರು ಅಧಿಕಾರಕ್ಕೆ ಜೋತು ಬಿದ್ದಿರುತ್ತಾರೆ, ಯಾರೂ ಅಧಿಕಾರವನ್ನು ತ್ಯಾಗ ಮಾಡುವುದಿಲ್ಲ. ಆದರೆ ನಾವು ಅಧಿಕಾರದ ಮೇಲಿನ ಆಸೆಯನ್ನು ತ್ಯಾಗ ಮಾಡದೆಯೇ, ಆಳವಾದ ಸೈದ್ಧಾಂತಿಕ ಹೋರಾಟಗಳನ್ನು ನಡೆಸದೆಯೇ ವಿರೋಧಿಗಳನ್ನು ಸೋಲಿಸುವುದಿಲ್ಲ. ನಾನು ಹುಟ್ಟಾ ಕಾಂಗ್ರೆಸ್ಸಿಗ, ಈ ಪಕ್ಷವು ಎಂದೆಂದಿಗೂ ನನ್ನ ಜತೆಗಿದೆ. ಕಾಂಗ್ರೆಸ್ ಪಕ್ಷವೇ ನನ್ನ ಜೀವನಾಡಿಯಾಗಿದ್ದು, ಅದು ಎಂದೆಂದಿಗೂ ಹಾಗೆಯೇ ಇರಲಿದೆ…
ಜೈ ಹಿಂದ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ