ಅರ್ಥಿಕಲ್ಪಿತಕಲ್ಪೋಯಂ ಪ್ರತ್ಯರ್ಥಿಗಜಕೇಸರಿ -ಶ್ರೀ ವ್ಯಾಸತೀರ್ಥರು


Team Udayavani, Apr 1, 2021, 5:50 AM IST

ಅರ್ಥಿಕಲ್ಪಿತಕಲ್ಪೋಯಂ ಪ್ರತ್ಯರ್ಥಿಗಜಕೇಸರಿ -ಶ್ರೀ ವ್ಯಾಸತೀರ್ಥರು

ವ್ಯಾಸತೀರ್ಥಗುರುಭೂìಯಾದಸ್ಮದಿಷ್ಟಾರ್ಥಸಿದ್ಧಯೇ ||

– ಬೇಡಿದವರಿಗೆ ಇಷ್ಟಾರ್ಥವನ್ನು ಕರುಣಿಸುವ ಕಲ್ಪವೃಕ್ಷವಾಗಿ, ಪ್ರತಿಪಕ್ಷಿಗಳೆಂಬ ಆನೆಗಳಿಗೆ ಸಿಂಹಸ್ವರೂಪವಾಗಿರುವ ವ್ಯಾಸತೀರ್ಥಗುರುಗಳು ನಮ್ಮ ಪ್ರಾರ್ಥನೆಗಳನ್ನು ಈಡೇರಿಸಲಿ ಎಂದು ಗುರುವಂದನ ಶ್ಲೋಕದ ಪಾಠ.

ಆಚಾರ್ಯ ಮಧ್ವ, ಶ್ರೀ ಜಯತೀರ್ಥರ ಬಳಿಕ ಪ್ರಸಿದ್ಧರಾದವರು ಶ್ರೀ ವ್ಯಾಸತೀರ್ಥರು. (ಕ್ರಿ.ಶ 1460 – 1539) ಶ್ರೀ ಮಧ್ವಾಚಾರ್ಯರು (1238- 1317) ಕಲ್ಪವೃಕ್ಷ, ಜಯತೀರ್ಥ ರು(1365- 1388) ಕಾಮಧೇನು, ವ್ಯಾಸತೀರ್ಥರು ಅಭೀಷ್ಟಪ್ರದ ಚಿಂತಾಮಣಿಯಂತಿರುವ ಮುನಿತ್ರಯರೆಂದೇ ಪ್ರಸಿದ್ಧಿ. “ಈಸು ಮುನಿಗಳಿದ್ದೇನು ಮಾಡಿದರು, ವ್ಯಾಸಮುನಿ ಮಧ್ವಮ ತವನುದ್ಧರಿಸಿದ’ ಎಂದು ಪುರಂದರದಾಸರು ಶ್ರೀವ್ಯಾಸತೀರ್ಥರನ್ನು ಬಣ್ಣಿಸಿದ್ದಾರೆ. ಅವರು ಮಧ್ವಸಿದ್ಧಾಂತದ ಮೇರು ಸ್ತಂಭ. ನ್ಯಾಯಾಮೃತ, ಚಂದ್ರಿಕಾ ಮತ್ತು ತರ್ಕತಾಂಡವ ಎಂಬ ಶ್ರೇಷ್ಠ ಕೃತಿಗಳನ್ನು ರಚಿಸಿ, ಮಧ್ವಮತ ಎಂಬ ಕಲ್ಲಂಗಡಿ ಹಣ್ಣನ್ನು ಉಳಿಸಿದವರು ಎಂದು ಅಪ್ಪಯ್ಯ ಧೀಕ್ಷಿತರು ಕೊಂಡಾಡಿದ್ದಾರೆ.

ಯತಿರಾಜ ವ್ಯಾಸರಾಜನಾದುದು :   

ಸೋಮನಾಥ ವಿರಚಿತ ವ್ಯಾಸಯೋಗಿ ಚರಿತೆಯಲ್ಲಿ ವ್ಯಾಸರಾ ಯರ ಪೂರ್ವಾಶ್ರಮದ ತಂದೆ ಸೋಸಲೆ ಸನಿಹದ ಬನ್ನೂರಿನ ಸುಮತಿ ಬಲ್ಲಣ್ಣ. ಬಲ್ಲಣ್ಣನ ತಂದೆ ರಾಮಾಚಾರ್ಯ ಎಂದು ಉಲ್ಲೇಖವಿದೆ. ಶ್ರೀ ರಾಮಾಚಾರ್ಯ ಮತ್ತು ಲಕ್ಷ್ಮೀದೇವಿಯರ ಪುತ್ರ ಎಂದೂ ಬೇರೆ ಕಡೆ ಹೆಸರಿದೆ. ಬಹುಕಾಲ ಮಕ್ಕಳಿಲ್ಲದಿದ್ದ ಬಲ್ಲಣ್ಣನಿಗೆ ಚೆನ್ನಪಟ್ಟಣದ ಅಬ್ಬೂರಿನ ಶ್ರೀಸುಬ್ರಹ್ಮಣ್ಯತೀರ್ಥರ ಅನುಗ್ರಹದಿಂದ ಒಂದು ಹೆಣ್ಣು, ಎರಡು ಗಂಡು ಮಕ್ಕಳು ಹುಟ್ಟಿದರು. ಎರಡನೆಯ ಮಗನಿಗೆ ಯತಿರಾಜ (ಕ್ರಿ.ಶ 1460 ಜನನ) ಎಂದು ನಾಮಕರಣ ಮಾಡಿದರು. ಅಕ್ಷರಾಭ್ಯಾಸ, ಉಪನಯನ, ಗುರುಕುಲ ವಾಸವನ್ನು ದಾಟಿಬಂದ ಯತಿರಾಜ ಕಾವ್ಯ, ನಾಟಕ, ಅಲಂಕಾರಗಳನ್ನು ಕರಗತಮಾಡಿಕೊಂಡ. ಮೊದಲೇ ಕೊಟ್ಟ ಮಾತಿನಂತೆ ಬಲ್ಲಣನು ಯತಿರಾಜನನ್ನು ಗುರು ಬ್ರಹ್ಮಣ್ಯತೀರ್ಥರಿಗೆ ಒಪ್ಪಿಸಿದರು. ಗುರುಗಳು ಏಳು ವರ್ಷದ ಯತಿರಾಜನಿಗೆ ಸನ್ಯಾಸ ದೀಕ್ಷೆಯನ್ನಿತ್ತು ವ್ಯಾಸತೀರ್ಥರೆಂದು ಅಭಿದಾನಗೈದರು. 12 ವರ್ಷಗಳ ಕಾಲ ಶ್ರೀಪಾದರಾಜರಲ್ಲಿ ವಿದ್ಯಾಭ್ಯಾಸ ನಡೆಯಿತು. ವ್ಯಾಸರಾಜ ಗುರುಗಳು ಕಂಚಿಗೆ ತೆರಳಿ ಉದ್ಧಾಮ ವಿದ್ವಾಂಸರಲ್ಲಿ ಕುಮಾರಿಲ ಭಟ್ಟ, ಶಂಕರ, ರಾಮಾನುಜರ ಗ್ರಂಥಗಳನ್ನು, ನವೀನ ನ್ಯಾಯವನ್ನೂ ಕಲಿತು, ದ್ವೆ„ತದರ್ಶನದ ಅಭ್ಯಾಸಕ್ಕಾಗಿ ಮುಳಬಾಗಿಲಿನ ವೈಷ್ಣವ ಯತಿಗಳಾಗಿದ್ದ ಶ್ರೀಪಾದರಾಯರ ಶಿಷ್ಯರಾದರು ಎಂದು ವ್ಯಾಸಯೋಗಿ ಚರಿತೆಯ ಉಲ್ಲೇಖ.

ತಿರುಪತಿಯಲ್ಲಿ ಪೂಜೆ ಮತ್ತು ಬದಲಾವಣೆ  :

ತಿರುಪತಿ ವೆಂಕಟೇಶ್ವರ ಸನ್ನಿಧಿಯಲ್ಲಿ ಶ್ರೀವೈಷ್ಣವ‌ ಪೂಜಾರಿಗಳ ಅವ್ಯವಹಾರದಿಂದ ಬೇಸತ್ತ ಚಂದ್ರಗಿರಿಯ ಅರಸ ನರಸಿಂಹನು ಮುಳಬಾಗಿಲು ಮಠದ ಶ್ರೀಪಾದರಾಜರನ್ನು ತಿರುಪತಿ ದೇವಾಲಯ ಪೂಜೆಗೆ ಸಹಕಾರ ವನ್ನು ಕೋರಿದ ಮೇರೆಗೆ ಶ್ರೀಪಾದರಾಜರು ವ್ಯಾಸತೀರ್ಥರನ್ನು ಅಲ್ಲಿಗೆ ಕಳುಹಿಸಿದರು. ವ್ಯಾಸತೀರ್ಥರು 12 ವರ್ಷ ಪೂಜೆಗೈದರು. ವೈಖಾನಸ ಪೂಜಾ ಪದ್ಧತಿಯನ್ನು ಬದಲಿಸಿ ಪಂಚರಾತ್ರಾ ಕ್ರಮವನ್ನು ಆರಂಭಿಸಿದರು. ತನ್ನ ಅವಧಿ ಮುಗಿದು ಶ್ರೀವೈಷ್ಣವರಿಗೇ ಪೂಜೆಯನ್ನು ಒಪ್ಪಿಸಿ ತೆರಳಿದರು.

ಶ್ರೀವ್ಯಾಸರಾಜರು ಮತ್ತು ದ್ವೈತ ತಣ್ತೀಜ್ಞಾನ :

ವ್ಯಾಸರಾಜರು ದ್ವೈತ ವಿಭಾಗದ ತರ್ಕ ಚತುರರ ರಾಜಕುಮಾರ ಎಂದು ಖ್ಯಾತ ವಿದ್ವಾಂಸ ಬಿ. ಎನ್‌. ಕೆ. ಶರ್ಮರು ಹೇಳುತ್ತಾರೆ. ವ್ಯಾಸತೀರ್ಥರು ಶ್ರೀ ಮಧ್ವಾಚಾರ್ಯರು ಮತ್ತು ಜಯತೀರ್ಥರು ಬಿಟ್ಟು ಹೋದ ಜ್ಞಾನ ಪರಂಪರೆಯನ್ನು ಮುಂದುವರಿಸಿದರು. ಡಾ| ದಾಸಗುಪ್ತರು ವ್ಯಾಸತೀರ್ಥರಿಗೆ ಗರಿಷ್ಠ ಗೌರವವನ್ನು ನೀಡು ತ್ತಾರೆ. ಅವರ ಕೃತಿಗಳಾದ ನ್ಯಾಯಾಮೃತ, ತಾತ್ಪರ್ಯಚಂದ್ರಿಕಾ, ತರ್ಕತಾಂಡವ, ಮಂದಾರ ಮಂಜರಿ ಸಂಸ್ಕೃತ ಸಾಹಿತ್ಯದ ಮುತ್ತುಗಳು, ಮಧ್ವ ತಣ್ತೀಜ್ಞಾನದ ಸ್ತಂಭಗಳೆಂದು ಪರಿಗಣಿಸಲ್ಪಟ್ಟಿವೆ. ಸುಮಾರು 21 ಗ್ರಂಥಗಳನ್ನು ಅವರು ರಚಿಸಿದ್ದಾರೆ. ಆಚಾರ್ಯ ಮಧ್ವರ ಸಿದ್ಧಾಂತವು ಕರಾವಳಿ ಕರ್ನಾಟಕಕ್ಕೆ ಮಾತ್ರ ಸೀಮಿತಗೊಂಡಿದ್ದ ಕಾಲವದು. 16 ನೇ ಶತಮಾನದ ಕಾಲಘಟ್ಟದಲ್ಲಿ ದ್ವೈತ ಚಿಂತನಾ ಶಾಲೆಯು ಒಂದು ಪ್ರಮುಖ ಸಾಮಾಜಿಕ, ಭೌದ್ಧಿಕ, ರಾಜಕೀಯ ಶಕ್ತಿಯಾಗಿ ದಕ್ಷಿಣ ಭಾರತದಲ್ಲೆಲ್ಲ ವ್ಯಾಪಿಸಿತು. ಇದು ವ್ಯಾಸತೀರ್ಥರ ತರ್ಕ, ಚರ್ಚೆ ಮತ್ತು ವಿಜಯನಗರ ಅರಸರ ಆಶ್ರಯ ಕಾರಣ ಎಂದಿದ್ದಾನೆ ಇತಿಹಾಸಕಾರ ಪ್ರವಾಸಿಗ ವೆಲೆರಿ ಸ್ಟೋಕರ್‌.

ಕನಕ, ಪುರಂದರರನ್ನು  ನೀಡಿದ ಮುನಿವರ್ಯ! :

ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಪುರಂದರದಾಸ ( ಕ್ರಿ.ಶ. 1484-1564) ಎಂಬ ಹೆಸರನ್ನು ಶ್ರೀನಿವಾಸ ನಾಯಕನಿಗೆ ಇಟ್ಟವರೇ ಶ್ರೀ ವ್ಯಾಸತೀರ್ಥರು. ಪುರಂದರದಾಸರು ಸುಮಾರು ನಾಲ್ಕೂವರೆ ಲಕ್ಷಕ್ಕೂ ಮಿಕ್ಕಿ ಕೀರ್ತನೆಗಳನ್ನು ರಚಿಸಿದ್ದಾರೆ. ಅದರಲ್ಲಿ 700 ಮಾತ್ರ ಲಭ್ಯ. “ದಾಸರೆಂದರೆ ಪುರಂದರ ದಾಸರಯ್ಯ’ ಎಂದು ತನ್ನ ಶಿಷ್ಯನನ್ನೇ ವ್ಯಾಸತೀರ್ಥರು ಕೀರ್ತನರೂಪದಲ್ಲಿ ಹೊಗಳಿದ್ದಾರೆ. ವ್ಯಾಸತೀರ್ಥರ ಮತ್ತೋರ್ವ ಶಿಷ್ಯ ಕುರುಬ ಸಮಾಜದ ಕನಕದಾಸರು (ಕ್ರಿ.ಶ. 1509-1609). ಕನಕನ ಭಕ್ತಿಗೆ ಒಲಿದ ಉಡುಪಿ  ಶ್ರೀಕೃಷ್ಣನ  ಕಥೆಯನ್ನು ಕೇಳದ ವರಿಲ್ಲ. ಸುಮಾರು 240 ಕೀರ್ತನೆಗಳನ್ನು ಕನಕರು ರಚಿಸಿದ್ದಾರೆ. ವ್ಯಾಸಕೂಟ ದಾಸ ಕೂಟವನ್ನು ಸ್ಥಾಪಿಸಿದವರೇ ವ್ಯಾಸತೀರ್ಥರು. ದ್ವೆ„ತ ಸಂಪ್ರದಾಯದಲ್ಲಿ ಹರಿದಾಸ ಚಳವಳಿಯನ್ನು ಸ್ಥಾಪಿಸಿದವರು ಶ್ರೀಪಾದರಾಯರು.(ಲಕ್ಷ್ಮೀನಾರಾಯಣತೀರ್ಥ) ಮುಳಬಾಗಿಲು. ಅವರ ಶಿಷ್ಯ ವ್ಯಾಸತೀರ್ಥರ ಕಾಲದಲ್ಲಿ ಚಳವಳಿ ವೇಗವನ್ನು ಪಡೆಯಿತು. ವಾದಿರಾಜರು, ಪುರಂದರ, ಕನಕರಿಂದಾಗಿ ಹರಿದಾಸ ಪರಂಪರೆ ಶ್ರೀಮಂತಗೊಂಡಿತು.

ವಿಜಯನಗರ ಅರಸರ ಕುಲದೇವರು! :

ಸಾಳುವ ನರಸಿಂಹದೇವರಾಯ(1431-1491) ಕರ್ನಾಟಕ ಸಾಮ್ರಾಜ್ಯದ ಅಧಿಪತಿಯಾಗಿದ್ದ ಕಾಲದಲ್ಲೇ ಗುರುಗಳ ಆದೇಶದ ಮೇರೆಗೆ ಚಂದ್ರಗಿರಿಗೆ ವ್ಯಾಸತೀರ್ಥರ ಪ್ರವೇಶವಾಯಿತು. ಅನಂತರ ಬಂದುಹೋದ ಎಲ್ಲ ರಾಜರಿಗೂ ಗುರು ಸ್ಥಾನದಲ್ಲಿ ನಿಂತರು ವ್ಯಾಸರಾಯರು. ತುಳುವ ನರಸ ನಾಯಕನ ಕಾಲದಲ್ಲಿ (1491-1503) ವ್ಯಾಸತೀರ್ಥರು ಹೊಸ ರಾಜಧಾನಿ ವಿಜಯನಗರದ ಹಂಪಿಗೆ ಆಗಮಿಸಿದರು. ತನ್ನುಳಿದ ಸಮಯವನ್ನು ಆಧ್ಯಾತ್ಮಿಕ ಸಲಹೆಗಾರರಾಗಿ, ಗಾರ್ಡಿಯನ್‌ ಸೈಂಟ್‌ ಆಫ್ ದಿ ಸ್ಟೇಟ್‌ ಎಂಬ ಪಟ್ಟದೊಂದಿಗೆ ಅಲ್ಲೇ ಕಳೆದರು. ವೀರ ನರಸಿಂಹನಾಯಕನ ಮರಣಾನಂತರ ಕೃಷ್ಣದೇವರಾಯ(1509-1529) ಸಿಂಹಾಸನವೇರಿದ ಮೇಲೆ ವಿಜಯನಗರ ಸಾಮ್ರಾಜ್ಯ ಪರಮ ವೈಭವವನ್ನು ಕಂಡಿತು. “ಬಿಸ್ನಗದ ರಾಜನು ಪ್ರತೀ ದಿನ ಬ್ರಾಹ್ಮಣ ವಿದ್ವಾಂಸನಿಂದ ಬೋಧನೆ ಯನ್ನು ಕೇಳುತ್ತಿದ್ದನು. ಆ ಬ್ರಾಹ್ಮಣನು ಅವಿವಾಹಿತನಾಗಿದ್ದು ಸ್ತ್ರೀಯರನ್ನು ಮುಟ್ಟುತ್ತಿರಲಿಲ್ಲ’ ಎಂದು ಪೋರ್ಚುಗೀಸ್‌ ಪ್ರವಾಸಿಗ ಫೆರ್ನೋ ನುನಿಜ್‌ ವ್ಯಾಸತೀರ್ಥರನ್ನು ಕುರಿತು ದಾಖಲಿಸಿದ್ದಾನೆ. ಕೃಷ್ಣದೇವರಾಯನಿಗೆ ಅಪಾಯವನ್ನುಂಟುಮಾಡಬಹುದಾದ ಕುಹು ಯೋಗದಿಂದ ಪಾರು ಮಾಡಲು ವ್ಯಾಸತೀರ್ಥರು ಒಂದು ಮಹೂರ್ತ ಕಾಲ ಸಿಂಹಾಸನಾರೂಢರಾಗಿ  ಮೆರೆದರು.

ವಿಜಯನಗರ ಸಾಮ್ರಾಜ್ಯ ವ್ಯಾಸರಾಜರ ಕಾಲದಲ್ಲಿ ಶಿಕ್ಷಣ ರಂಗದಲ್ಲೂ ಪ್ರಸಿದ್ಧವಾಗಿತ್ತು. ಸೋಮನಾಥರ ಶ್ರೀವ್ಯಾಸಯೋಗಿ ಚರಿತಂ ನ ಮೇಲೆ ಬರೆದ ಭಾಷ್ಯದಲ್ಲಿ ವೆಂಕೋಬರಾಯರು  ವ್ಯಾಸರಾಜರು ವಿಜಯನಗರ ಸಾಮ್ರಾಜ್ಯದ ಕೇಂದ್ರ ವಿವಿ ಯ ಕುಲಪತಿಗಳಾಗಿದ್ದರು. ಭಾರತದ ಎಲ್ಲ ಕಡೆಗಳಿಂದ ವಿದ್ಯಾರ್ಥಿಗಳು ಕಲಿಯಲು ಅಲ್ಲಿಗೆ ಬರುತ್ತಿದ್ದರು ಎಂದು ಬರೆದಿದ್ದಾರೆ. ವ್ಯಾಸರಾ ಯರು ನ್ಯಾಯಾಮೃತ ಪಾಠವನ್ನು ಕಲಿಸುತ್ತಿರುವಾಗ, ಸಾûಾತ್‌ ವಿಷ್ಣುವೇ ಶಿಕ್ಷಣ ಎಂಬ ಸಮುದ್ರದಿಂದ ದೊರೆತ ಅಮೃತವನ್ನು ಹಂಚುತ್ತಿದ್ದಂತೆ ಭಾಸವಾಗುತ್ತಿತ್ತು ಎಂದು ಸೋಮನಾಥ ಕವಿಯು ವರ್ಣಿಸುತ್ತಾನೆ. ಪುರಂದರ ಮತ್ತು ಹರಿದಾಸ ಚಳವಳಿಯ ಕಾಲ ದಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣಕ್ಕಾಗಿ ಹತ್ತಿರದ ಮಠಕ್ಕೆ ಕಳುಹಿಸುತ್ತಿದ್ದರು. ಆದರೆ ಅವರ ಮೊದಲ ಆಯ್ಕೆ ವ್ಯಾಸ ರಾಯ ಮಠವಾಗಿದ್ದಿತು ಎಂದು ಡಾ| ಕೃಷ್ಣರಾವ್‌ ಬರೆಯುತ್ತಾರೆ.

ಮುಖ್ಯಪ್ರಾಣ ಆರಾಧನೆ ಸಂಪ್ರದಾಯದ ಹರಿಕಾರ! :

15 ನೇ ಶತಮಾನದವರೆಗೆ ಶಿವ, ವಿಷ್ಣು, ದುರ್ಗಾ ಮತ್ತಿತರ ದೇವಾಲಯಗಳನ್ನು ಕಾಣಬಹುದಿತ್ತು. ಗೋಸ್ವಾಮಿ ತುಲಸೀದಾಸರು ಅದಕ್ಕೂ ಪೂರ್ವದಲ್ಲಿ ಮಧ್ವಾಚಾರ್ಯರು ವಾಯು ಮತ್ತದರ ಅವತಾರಗಳಾದ ಹನುಮ, ಭೀಮರ ವಿಶೇಷ ಆರಾಧಕರಾಗಿದ್ದರು. ಹಂಪಿಯ ಯಂತ್ರೋದ್ಧಾರ ಹನುಮ ಸಹಿತ ಸುಮಾರು 732 ಹನುಮ ದೇವಾಲಯಗಳನ್ನು ವ್ಯಾಸತೀರ್ಥರು ಸ್ಥಾಪಿಸಿದ್ದರು. 800 ವರ್ಷಗಳ ಮೊಘಲರ ಮತ್ತು 200 ವರ್ಷ ಬ್ರಿಟಿಷರ ಆಳ್ವಿಕೆಯ ಹೊರತಾಗಿಯೂ ಸನಾತನ ಹಿಂದೂ ಸಂಸ್ಕೃತಿ ಅಳಿಯದೇ ಉಳಿದಿದೆ ಎಂದರೆ ನಿಸ್ಸಂಶಯವಾಗಿ ವ್ಯಾಸತೀರ್ಥರಂತಹ ಮಹಾನ್‌ ಸಂತರು, ಮುನಿಗಳ ಸಂಚಯಿತ ತಪಸ್‌ ಶಕ್ತಿಯ ಧಾರೆಯೇ ಕಾರಣ. ಕ್ರಿ.ಶ 1539 ರ ವಿಳಂಬಿ ಸಂವತ್ಸರ ಪಾಲ್ಗುಣ ಕೃಷ್ಣ ಚತುರ್ಥಿಯಂದು ಶ್ರೀ ವ್ಯಾಸತೀರ್ಥರು ವೃಂದಾವನಸ್ಥರಾದರು. ಹಂಪಿಯ ಆನೆಗುಂದಿಯಲ್ಲಿ ಅವರ ಮೂಲ ಬೃಂದಾವನವಿದೆ. ಒಂಬತ್ತು ಯತಿಗಳ ವೃಂದಾವನವಿರುವ ಆ ಸ್ಥಳ ನವ ವೃಂದಾವನ ಎಂದೇ ಪ್ರಸಿದ್ಧ.

 

ಜಲಂಚಾರು ರಘುಪತಿ ತಂತ್ರಿ, ಉಡುಪಿ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.