ಶತಶತಮಾನಗಳ ಹಿಂದೆ ಕೊಟ್ಟ ಆ ಮಾತು…
Team Udayavani, Dec 3, 2022, 5:55 AM IST
ಪರ್ಷಿಯಾದ ಬಹುಭಾಗದಲ್ಲೀಗ ಇರಾನ್ ಇದೆ. ಅಲ್ಲಿ ಇಸ್ಲಾಂ ಕಾಲಿಟ್ಟ ಬಳಿಕ ಪರ್ಷಿಯನ್ನರಿಗೆ ತಮ್ಮ ಜರಾತುಷ್ಟ್ರ ಧರ್ಮದಲ್ಲಿರಲು ಸಾಧ್ಯವಿಲ್ಲವೆಂದು ವಿವಿಧ ದೇಶಗಳಿಗೆ ವಲಸೆ ಹೋದರು. ಒಂದು ಗುಂಪು ಭಾರತದ ಗುಜರಾತಿನ ಕಡಲ ತೀರಕ್ಕೆ ಬಂದು ರಾಜನಿಂದ (ಜಾಧವ್ -ಜಾಡಿ ರಾಣ) ಸಹಾಯ ಅಪೇಕ್ಷಿಸಿದರು.
ಆಗಂತುಕರಲ್ಲಿ ಪರ್ಷಿಯಾದ ಬಡಗಿ, ಅರ್ಚಕ, ಅಕ್ಕಸಾಲಿಗರು ಹೀಗೆ 16 ವಿವಿಧ ಕುಟುಂಬಗಳಿಂದ ತಂದ ಅಗ್ನಿ ಇತ್ತು. ಅಗ್ನಿ ಅವರ ಆರಾಧ್ಯದೇವ. ತಂಡದ ನಾಯಕ ಪರ್ಷಿಯಾದಲ್ಲಿಯಾದ ತೊಂದರೆಗಳನ್ನು ವಿವರಿಸಿ ವಾಸಿಸಲು ಅವಕಾಶ ಕೋರಿದ. ಧಾರ್ಮಿಕ ಸ್ವಾತಂತ್ರ್ಯ, ಜೀವನ ನಿರ್ವಹಣೆಗೆ ಜಮೀನು ಕೇಳಿದ. ಪುರೋಹಿತ “ನಾವು ಯಾವುದೇ ಮತಧರ್ಮಗಳಿಗೆ ಮತಾಂತರ ವಾಗುವುದಿಲ್ಲ, ಇತರರನ್ನು ತಮ್ಮ ಮತಕ್ಕೆ ಸೆಳೆಯಲು ಯತ್ನಿಸುವುದಿಲ್ಲ’ ಎಂದು ಭರವಸೆ ನೀಡಿದ. ಮೊದಲ ತಂಡ ಬಂದ ತಾಣವೇ ಸಂಜಾನ್. ಈ ಹೆಸರಿನ ಊರು ಈಗಿನ ತುರ್ಕಮೆನಿಸ್ಥಾನದಲ್ಲಿ ಇರುವುದರಿಂದ ಅಲ್ಲಿಂದ ಆಗಂತುಕರು ವಲಸೆ ಬಂದಿರಬಹುದು ಎಂಬ ವಾದವಿದೆ.
“ನೀವು ಈ ದೇಶಕ್ಕೆ ಏನನ್ನು ಕೊಡುತ್ತೀರಿ?’ ಎಂದು ರಾಜ ಕೇಳಿದಾಗ ಪುರೋಹಿತ ಒಂದು ಲೋಟ ಹಾಲು ತರಲು ಹೇಳಿ ಸ್ವಲ್ಪ ಸಕ್ಕರೆ ಬೆರೆಸಿದ. ಸಕ್ಕರೆ ಕಾಣಿಸುತ್ತದೆಯೆ? ಎಂದು ಪುರೋಹಿತ ಪ್ರಶ್ನಿಸಿದ. ಕಾಣಿಸುವುದಿಲ್ಲ. ಹಾಲಿನಲ್ಲಿ ಸಕ್ಕರೆ ಸೇರಿ ಹಾಲನ್ನು ಹೇಗೆ ಸಿಹಿ ಮಾಡಿತೋ ಹಾಗೆಯೇ ರಾಜಾನುಗ್ರಹವೆಂಬ ಹಾಲಿನಲ್ಲಿ ನಿರಾಶ್ರಿತರಾದ ನಾವು ಬೆರೆತು ಈ ನೆಲದ ಜನರ ಬದುಕನ್ನು ಸಿಹಿ ಮಾಡುತ್ತೇವೆ ಎಂದು ಪುರೋಹಿತ ಭರವಸೆ ನೀಡಿದ. ರಾಜನಿಗೆ ತೃಪ್ತಿ ಯಾಯಿತು, ಮುಂದೆ ದೇಶಕ್ಕೇ ತೃಪ್ತಿಯಾಗುವಂತೆ ನಡೆದುಕೊಳ್ಳುತ್ತಲೇ ಬಂದರು…
ಆಗ ತಂದ ಅಗ್ನಿಯನ್ನು ಈಗಲೂ ಮುಂಬಯಿ, ಸೂರತ್, ನೌಸಾರಿಯ ಅಗ್ನಿಮಂದಿರಗಳಲ್ಲಿ ಕಾಪಾಡಿ ಕೊಂಡಿದ್ದಾರೆ. ಇಲ್ಲಿಯೇ ಇವರ ಮುಖ್ಯ ನೆಲೆ ಇದೆ. ಝೆಂಡಾಅವಸ್ಥಾ ಧರ್ಮಗ್ರಂಥ ವೇದ ಕಾಲದ ಸಂಸ್ಕೃತಕ್ಕೆ ಸಾಮ್ಯ ಹೊಂದಿದ ಅವಸ್ಥಾ ಭಾಷೆಯಲ್ಲಿದೆ. ದೇವ “ಅಹುರಾ ಮಜ್ದಾ’ ಸೂಚನೆಯಂತೆ ಸತ್ ಚಿಂತನೆ, ಸತ್ಕಾರ್ಯ, ಸದ್ವಚನ (ಒಳ್ಳೆಯ ಮಾತು) ಮೂಲ ಧ್ಯೇಯ. ಮಾಂಸಾಹಾರಿಗಳಾದ ಇವರು ದನ, ಹಂದಿ ಮಾಂಸ ತಿನ್ನುವುದಿಲ್ಲ. ಮಾರ್ಚ್ 21ರಂದು ಹೊಸ ವರ್ಷವನ್ನು (ನವರೋಜ್) ಆಚರಿಸುತ್ತಾರೆ. ಇವರ ತಿಂಗಳಿಗೆ 30 ದಿನ. ವರ್ಷದಲ್ಲಿ ಉಳಿಕೆಯಾಗುವ ಐದು ದಿನಗಳಲ್ಲಿ ಅಗಲಿದ ಪಿತೃಗಳಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮೃತ ಶರೀರವನ್ನು “ಟವರ್ ಆಫ್ ಸೈಲೆನ್ಸ್’ ಎಂಬ ಎತ್ತರದ ಜಾಗದಲ್ಲಿರಿಸುತ್ತಾರೆ. ಅದು ಹದ್ದುಗಳಿಗೆ ಆಹಾರವಾಗುತ್ತದೆ. ಇವರ ದೇವಸ್ಥಾನಕ್ಕೆ ಬೇರೆ ಯಾರನ್ನೂ ಬಿಡುವುದಿಲ್ಲ. ಮತಾಂತರ ಮಾಡುವುದಿಲ್ಲ ವೆಂದು ಭರವಸೆ ಕೊಟ್ಟಿದ್ದಾರಲ್ಲ? ಈ ಮಾತನ್ನು ಉಡುಪಿ ಬ್ರಹ್ಮಗಿರಿಯ ಎ.ಕೆ.ಪೈ ಕೊಚ್ಚಿಕಾರ್ ಅವರ ಮನೆಗೆ ಆಗಮಿಸಿದ ಕುಟುಂಬದ ಸ್ನೇಹಿತರಾದ ನಾಶಿಕದ ರೂಸ್ಬೇಕ್ ಪಟೇಲ್, ಹುಫ್ರಿಶ್ ಪಟೇಲ್ ದಂಪತಿ ಇತಿಹಾಸಗಳನ್ನು ನೆನಪಿಸಿ, ಇರಾನ್ನಲ್ಲಿ ಪೂರ್ವಜರ ನೆಲೆಗಳ ಇರುವಿಕೆ ಇದೆ. ಅಲ್ಲಿನ ಮುಸ್ಲಿಮರು ಮನೆಗಳಲ್ಲಿ ಖಾಸಗಿಯಾಗಿ ಮೂಲಗುರು ಜರಾತುಷ್ಟ್ರನನ್ನು ಪ್ರತೀವರ್ಷ ನೆನೆಯುತ್ತಾರೆ ಎಂದು ಹೆಮ್ಮೆಯಿಂದ ಹೇಳಿದರು.
ಕ್ರಿಸ್ತಪೂರ್ವ 2,000 ವರ್ಷಗಳ ಹಿಂದೆ (ಕ್ರಿ.ಪೂ. 6-7ನೆಯ ಶತಮಾನದವರು ಎನ್ನುವವರಿದ್ದಾರೆ) ಜರಾ ತುಷ್ಟ್ರ ಮತವನ್ನು (ಜರಾತುಷ್ಟ್ರಿಯನಿಸಂ) ಜರಾತುಷ್ಟ್ರ ಸ್ಥಾಪಿಸಿದರು. ಅನುಯಾಯಿಗಳು ಭಾರತಕ್ಕೆ ಬಂದದ್ದು ಏಳನೆಯ ಶತಮಾನದಲ್ಲಿ. ಪರ್ಷಿಯಾದಿಂದ ಬಂದ ಕಾರಣ ಪಾರಸಿ, ಪಾರ್ಸಿಗಳು ಎನ್ನುತ್ತಾರೆ.
ಲೆಕ್ಕಕ್ಕಿಲ್ಲದ-ಲೆಕ್ಕವಿಡಲಾಗದ ಸಂಖ್ಯೆ!
1971ರಲ್ಲಿ 91,266 ಪಾರಸಿಗರು ಇದ್ದರೆ, 1981ರಲ್ಲಿ 71,630ಕ್ಕೆ ಇಳಿಯಿತು (- ಶೇ. 21.52), 2001ರಲ್ಲಿ 69,601ಕ್ಕೆ, 2011ರಲ್ಲಿ 57,264ಕ್ಕೆ ತಲುಪಿತು (- ಶೇ.17.73). ಈಗ ಭಾರತದಲ್ಲಿ 50,000 ಇರಬಹುದು. ಜಗತ್ತಿನಲ್ಲಿ ಅಬ್ಬಬ್ಬವೆಂದರೆ 1.5 ಲಕ್ಷ ದಾಟದು. ಈ ಜನಸಂಖ್ಯೆಯನ್ನು ನ. 15ರಂದು ವಿಶ್ವಸಂಸ್ಥೆಯಿಂದ ಪ್ರಕಟವಾದ ಜಾಗತಿಕ ಜನಸಂಖ್ಯೆ 800 ಕೋಟಿ (ಶೇ.001), ಭಾರತದ ಜನಸಂಖ್ಯೆ 141 ಕೋಟಿಯೊಂದಿಗೆ (ಶೇ.003) ಹೋಲಿಸಿದರೆ ದುರ್ಬೀನು ಹಾಕಿ ನೋಡಬೇಕಾಗ ಬಹುದು. ಈ ಸ್ಥಿತಿಯಲ್ಲಿಯೂ ಆಗ ಕೊಟ್ಟ ಮಾತನ್ನು ಸಮುದಾಯ ಉಳಿಸಿಕೊಂಡಿದೆ. ಸಂತೃಪ್ತಿ ಎನ್ನುವುದು ವ್ಯಕ್ತಿಗತ, ಇಲ್ಲಿ ಸಮುದಾಯಕ್ಕೇ ಸಂತೃಪ್ತಿ. ಒಂದೆಡೆ ನಾನಾ ಮಾರ್ಗಗಳಿಂದ ಜನ ಸಂಖ್ಯೆಗಳನ್ನು ಏರಿಸಿಕೊಳ್ಳುವವರು, ಜನಸಂಖ್ಯೆ ಕುಸಿತವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸುವವರ ನಡುವೆ ಈ ಜನಾಂಗದ ಸಂಖ್ಯೆ ಯಾವ ಲೆಕ್ಕಕ್ಕೆ ಇಲ್ಲದಿದ್ದರೂ ಜನ-ಧನಸಂಖ್ಯಾಬಲ
ದವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಇವರ ಕೊಡುಗೆಗಳ ಫಲಾನುಭವಿಗಳು ಎಂಬ ಅಹಮಿಕೆಯೂ ಅವರಿಗಿಲ್ಲ.
ಎಂತೆಂಥ ಮಹಾನುಭಾವರು…!
ದಾದಾಬಾಯಿ ನವರೋಜಿ, ಮೇಡಮ್ ಕಾಮಾ (ಸ್ವಾತಂತ್ರ್ಯ ಹೋರಾಟಗಾರರು), ಸರ್ ದೊರಬ್ಜಿ ಟಾಟಾ (ಟಾಟಾ ಸಂಸ್ಥೆಯ ಸ್ಥಾಪಕ), ಜೆಮ್ಶೆಡ್ಜಿ ಟಾಟಾ (ಟಾಟಾ ಸಮೂಹದ ಸ್ಥಾಪಕ), ರತನ್ ಟಾಟಾ (ಟಾಟಾ ಸಮೂಹದ ಮಾಜಿ ಅಧ್ಯಕ್ಷ, ದತ್ತಿ ಸಂಸ್ಥೆಗಳ ಅಧ್ಯಕ್ಷ), ನುಸ್ಲಿ ವಾಡಿಯಾ (ವಾಡಿಯ ಸಮೂಹದ ಅಧ್ಯಕ್ಷರಾಗಿ ದ್ದರು), ಬಿ.ಪಿ.ವಾಡಿಯಾ (ಕಾರ್ಮಿಕ ಸಂಘಟನೆ ಗಳ ಪ್ರವರ್ತಕ), ಫಿರೋಜ್ಶಾ (ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಹ ಸಂಸ್ಥಾಪಕ), ಫಿರೋಜ್ ಗಾಂಧಿ (ಇಂದಿರಾ ಗಾಂಧಿಯವರ ಪತಿ), ಜೆಆರ್ಡಿ ಟಾಟಾ (ಏರ್ ಇಂಡಿಯಾ ಸ್ಥಾಪಕ), ಸೈರಸ್ ಪೂನಾವಾಲಾ (ಸೈರಸ್ ಪೂನಾವಾಲಾ ಸಮೂಹದ ಅಧ್ಯಕ್ಷ), ಹೋಮಿ ಜಹಾಂಗೀರ್ ಭಾಭಾ (ಅಣುಶಕ್ತಿ ಆಯೋಗದ ಪ್ರಥಮ ಅಧ್ಯಕ್ಷ), ಅರ್ಡೆಶಿರ್ ಗೋದ್ರೆಜ್ (ಗೋದ್ರೆಜ್ ಸಮೂಹದ ಸ್ಥಾಪಕ), ಅರುಣ ಇರಾನಿ (ನಟಿ, ನೃತ್ಯಪಟು), ದಿನ್ಶಾ ಪೆಟಿಟ್ (ಜವುಳಿ ಕಾರ್ಖಾನೆಗಳ ಸ್ಥಾಪಕ), ಡಯಾನ ಫ್ರಮ್ ಎದುಲ್ಜಿ (ಪ್ರಥಮ ಮಹಿಳಾ ಕ್ರಿಕೆಟ್ ತಂಡದ ನಾಯಕಿ), ಫಾಲಿ ಎಸ್. ನಾರಿಮನ್, ರೋಹಿಂಗ್ಟನ್ ನಾರಿಮನ್, ಎಸ್.ಎಚ್. ಕಪಾಡಿಯ, ನಾನೀ ಪಾಲ್ಕಿವಾಲಾ, ಸೋಲಿ ಸೊರಾಬ್ಜಿ (ನ್ಯಾಯವೇತ್ತರು), ಪಾಲಿ ಉಮ್ರಿಗಾರ್, ಫಾರೂಕ್ ಮಾಣಿಕ್ಶಾ, ನಾರಿಮನ್ ಕಂಟ್ರಾಕ್ಟರ್ (ಕ್ರಿಕೆಟಿಗರು), ಹೋಮಿ ವ್ಯಾರಾವಾಲಾ (ಭಾರತದ ಮೊದಲ ಮಹಿಳಾ ಛಾಯಾಚಿತ್ರ ಪತ್ರಕರ್ತೆ), ಸೊರಾಬ್ಜಿ ನುಸರ್ವಂಜಿ ಪೊಖನ್ವಾಲಾ (ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ ಸ್ಥಾಪಕ), ಮಾಣಿಕ್ ಶಾ (ಸೇನಾಪಡೆ ಮಾಜಿ ಮುಖ್ಯಸ್ಥ), ಫಾಲಿ ಹೋಮಿ ಮೇಜರ್ (ವಾಯುಪಡೆ ಮಾಜಿ ಮುಖ್ಯಸ್ಥ), ಜುಬಿನ್ ಇರಾನಿ (ಕೇಂದ್ರ ಸಚಿವೆ ಸ್ಮತಿ ಇರಾನಿ ಪತಿ), ಫ್ರೆಡಿ ಮಕ್ಯುìರಿ (ಬ್ರಿಟಿಷ್ ಹಾಡುಗಾರ) ಮೊದಲಾದ ಪಾರಸಿ ಜನಾಂಗದವರು ಕೊಟ್ಟ ಕೊಡುಗೆಗಳನ್ನು ಲೆಕ್ಕ ಇಡುವುದು ಹೇಗೆ?
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ