ಪೌರತ್ವ ಕಾಯ್ದೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ
Team Udayavani, Dec 18, 2019, 6:04 AM IST
ಇದರಲ್ಲಿ ಭಾರತೀಯ ಮುಸ್ಲಿಮರ ವಿರುದ್ಧ ಯಾವ ಅಂಶಗಳಿವೆ?
ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ
ಪೌರತ್ವ ತಿದ್ದುಪಡಿ ಕಾಯ್ದೆಯ ಕಾರಣಕ್ಕಾಗಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದು ದೇಶದ ಮುಸಲ್ಮಾನರು ಮತ್ತು ಹಿಂದೂ ಸಹೋದರರ ನಡುವೆ ಭೇದಭಾವ ಮಾಡುತ್ತದೆ ಎನ್ನಲಾಗುತ್ತಿದೆಯಲ್ಲ?
ನಾನು ಈ ಮಾತನ್ನು ಒಪ್ಪುವುದಿಲ್ಲ. ಕೆಲವು ರಾಜಕೀಯ ಪಕ್ಷಗಳಿವೆ. ಅವು ಹಿಂದೂ ಮತ್ತು ಮುಸಲ್ಮಾನರ ನಡುವೆ ವಿಭಜನೆ ಸೃಷ್ಟಿಸಲು ಬಯಸುತ್ತಿವೆ. ಈ ಕಾರಣದಿಂದಲೇ ಹೀಗೆ ಜನರ ಹಾದಿತಪ್ಪಿಸುತ್ತಿವೆ. ಇವುಗಳ ಅಪಪ್ರಚಾರಗಳಿಂದಾಗಿ ಒಂದು ರೀತಿಯ ಬ್ರಾಂತಿ ಸೃಷ್ಟಿಯಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಇದೆಯಲ್ಲ, ಇದರಲ್ಲಿ ಯಾವುದೇ ನಾಗರಿಕನ ಪೌರತ್ವ ಹಿಂಪಡೆಯುವ ಅಂಶವೇ ಇಲ್ಲ. ಬದಲಾಗಿ ಇದು, ಪೌರತ್ವ ಕೊಡುವ ಅಂಶಗಳನ್ನು ಒಳಗೊಂಡಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಹಿಂಸಾಚಾರಕ್ಕೆ ತುತ್ತಾಗಿ ಭಾರತಕ್ಕೆ ಬಂದಿರುವ ಆ ದೇಶಗಳ ಆರು ಅಲ್ಪಸಂಖ್ಯಾತ ಧರ್ಮೀಯರಿಗೆ ನಾವು ಪೌರತ್ವ ಕೊಡುತ್ತಿದ್ದೇವೆ. ಇವರೆಲ್ಲ ವರ್ಷಗಳಿಂದ ನರಕಸದೃಶ ಬದುಕನ್ನು ಬದುಕುತ್ತಿದ್ದಾರೆ.
ಇವತ್ತು ಕಾಂಗ್ರೆಸ್ ಪಾರ್ಟಿ ಸಿಎಬಿಯನ್ನು ವಿರೋಧಿಸುತ್ತಿದೆ. ನಾನು ಆ ಪಕ್ಷದ ಅಧ್ಯಕ್ಷರಿಗೆ ಹೇಳಲು ಬಯಸುವುದು ಇಷ್ಟೆ: ಜವಾಹರ್ಲಾಲ್ ನೆಹರೂ ಮತ್ತು ಲಿಯಾಖತ್ ಅಲಿ ಮಧ್ಯೆ ಒಪ್ಪಂದವಾಗಿತ್ತಲ್ಲ (ಆ ಒಪ್ಪಂದ ನೆಹರೂ-ಲಿಯಾಖತ್ ಒಪ್ಪಂದ ಎಂದೇ ಖ್ಯಾತವಾಗಿದೆ.) ಆ ಒಪ್ಪಂದದ ಮೊದಲ ಮೊದಲ ಉಪವಾಕ್ಯದಲ್ಲೇ, “”ಎರಡೂ ದೇಶಗಳು ತಮ್ಮತಮ್ಮಲ್ಲಿನ ಅಲ್ಪಸಂಖ್ಯಾತರ ದೇಖರೇಖೀ ನೋಡಿಕೊಳ್ಳಬೇಕು, ಸಮಾನ ಅಧಿಕಾರ ಕೊಡಬೇಕು” ಎಂದು ಹೇಳಲಾಗಿದೆ. ಆದರೆ ಇದು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಪಾಲನೆ ಆಗಲೇ ಇಲ್ಲ. ಪಾಕ್, ಬಾಂಗ್ಲಾ ಮತ್ತು ಅಫ್ಘಾನಿಸ್ತಾನ ತಮ್ಮನ್ನು ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸಿಕೊಂಡವು. ಅನೇಕಾನೇಕ ಜನರ ಮೇಲೆ ಧಾರ್ಮಿಕ ಹಿಂಸಾಚಾರಗಳು ನಡೆದವು, ಬಲವಂತದ ಮತಾಂತರ ಮಾಡಲಾಯಿತು, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವೆಸಗಲಾಯಿತು. ಈ ಹಿಂಸೆಯನ್ನು ತಾಳಲಾರದೆ ಭಾರತಕ್ಕೆ ಓಡಿಬಂದವರಿಗೆ ಪೌರತ್ವ ನೀಡುವ ಅಂಶ, ಈ ಕಾಯ್ದೆಯಲ್ಲಿ ಇದೆ.
ನನಗೆ ಅರ್ಥವಾಗದ ಸಂಗತಿಯೆಂದರೆ, ಈ ಕಾಯ್ದೆಯಲ್ಲಿ ಭಾರತೀಯ ಅಲ್ಪಸಂಖ್ಯಾತರು, ಅದರಲ್ಲೂ ಮುಖ್ಯವಾಗಿ ಭಾರತೀಯ ಮುಸ್ಲಿಮ್ ಸಮಾಜದ ವಿರುದ್ಧ ಯಾವ ಅಂಶಗಳಿವೆ?
ಜಾಮಿಯಾ ಮೀಲಿಯಾ ಸೇರಿದಂತೆ, ಹಲವು ವಿವಿಗಳಲ್ಲಿ ಪ್ರತಿಭಟನೆ ಆರಂಭವಾಗಿದೆಯಲ್ಲ?
ನಾನು ಇವರಿಗೆಲ್ಲ ಕೇಳುವುದಿಷ್ಟೆ: ನೀವು ಕಲ್ಲು ಎಸೆಯುತ್ತೀರಿ ಎಂದಾದರೆ, ಯಾರಧ್ದೋ ದ್ವಿಚಕ್ರ ವಾಹನಗಳಿಂದ ಪೆಟ್ರೊಲ್ ಹೊರತೆಗೆದು ಬಸ್ಗಳಿಗೆ ಬೆಂಕಿ ಹಚ್ಚುತ್ತೀರಿ ಎಂದರೆ, ನಾಗರಿಕರಿಗೆ ಲುಕ್ಸಾನು ಮಾಡುತ್ತೀರಿ ಎಂದಾದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೋ ಇಲ್ಲವೋ? ಇಲ್ಲದಿದ್ದರೆ, ಕಾನೂನು ಸುವ್ಯವಸ್ಥೆ ಕಂಟ್ರೋಲ್ಗೆ ಬರುವುದಾದರೂ ಹೇಗೆ? ನನಗೆ ನೀವು ಒಂದು ಮಾತು ಹೇಳಿ. ಜಾಮಿಯಾ ಮೀಲಿಯಾ ವಿವಿಯ ಒಳಗಿನಿಂದ ಕಲ್ಲು ಎಸೆಯುತ್ತಿದ್ದವರೆಲ್ಲ ಯಾರು? ಅವರೆಲ್ಲ ಯಾಕೆ ಹೀಗೆ ಮಾಡಿದರು? ಇದಕ್ಕೂ ಉತ್ತರ ಹುಡುಕಬೇಕಲ್ಲವೇ? ನಾನು ಈಗಲೂ ಹೇಳುತ್ತೇನೆ ಇದಕ್ಕೆಲ್ಲ ಮುಖ್ಯ ಕಾರಣ ಅಪಪ್ರಚಾರ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಪ್, ಕಮ್ಯುನಿಸ್ಟ್ ಪಾರ್ಟಿ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ನಡೆಸುತ್ತಿರುವ ಅಪಪ್ರಚಾರ.
ಆದರೆ ಜನರು ಹೇಳುತ್ತಿರುವುದೇ ಬೇರೆ. ಸಿಎಬಿ ಅನ್ನುವುದು ಆರಂಭವಷ್ಟೇ, ಸಿಎಬಿ ಮೂಲಕ ಹಿಂದೂಗಳನ್ನೆಲ್ಲ ದೇಶದಲ್ಲಿ ಉಳಿಸಿಕೊಳ್ಳುತ್ತೀರಿ, ನಂತರ ಎನ್ಆರ್ಸಿ ಮೂಲಕ ಮುಸಲ್ಮಾನರನ್ನೆಲ್ಲ ಹೊರಗೆ ಕಳುಹಿಸಲಾಗುತ್ತದೆ ಎನ್ನುವ ಭಯ ಜನರಿಗಿದೆಯಲ್ಲ? ನಾನು ಈಗಲೂ ಸ್ಪಷ್ಟಪಡಿಸುತ್ತೇನೆ- ಈ ದೇಶದ ಒಬ್ಬೇ ಒಬ್ಬ ಮುಸಲ್ಮಾನನಿಗೂ ಎನ್ಆರ್ಸಿ ಮತ್ತು ಸಿಎಬಿಯಿಂದ ಅನ್ಯಾಯವಾಗುವುದಿಲ್ಲ. ಮುಂದೆಯಲ್ಲ, ಯಾವತ್ತೂ ಅನ್ಯಾಯವಾಗುವುದಿಲ್ಲ. ಅಲ್ಲಾ ರೀ, ಈ ಎನ್ಆರ್ಸಿಯನ್ನು ತಂದವರು ಯಾರು? ಬಿಜೆಪಿಯೇ? ಖಂಡಿತ ಅಲ್ಲ. ಇದನ್ನು ರೂಪಿಸಿದ್ದು ಕಾಂಗ್ರೆಸ್. 1985ರ ಅಸ್ಸಾಂ ಒಪ್ಪಂದದ ಅನ್ವಯ ಎನ್ಆರ್ಸಿಯನ್ನು ಅಸ್ಸಾಂನಲ್ಲಿ ಜಾರಿ ಮಾಡಲಾಗುವುದೆಂದು ಅಂದು ರಾಜೀವ್ ಗಾಂಧಿ ಒಪ್ಪಂದ ಮಾಡಿಕೊಂಡಿದ್ದರು. ಇನ್ನು, “ನಾಗರಿಕತೆ ಕಾನೂನು 1955’ಗೆ ಅಧಿನಿಯಮ 14(ಎ) ಸೇರಿಸಿ, 3 ಡಿಸೆಂಬರ್ 2004ರಲ್ಲಿ ನೋಟಿಫೈ ಮಾಡಲಾಯಿತು. ಆಗ ಯಾರ ಸರ್ಕಾರವಿತ್ತು? ಯುಪಿಎ ಸರ್ಕಾರವೇ ಅಲ್ಲವೇ? ಕಾಂಗ್ರೆಸ್ ಪಕ್ಷವೇ ತಂದ ಅಧಿನಿಯಮ 14(ಎ)ದಿಂದಲೇ ಅಲ್ಲವೇ ಎನ್ಆರ್ಸಿಗೆ ಪ್ರಸಕ್ತ ರೂಪ ಸಿಕ್ಕಿರುವುದು? ತದನಂತರ ಇದೇ ಕಾಂಗ್ರೆಸ್ 2009ರಲ್ಲಿ ಇದರ ಶೆಡ್ನೂಲ್ನಲ್ಲಿ 4(ಎ) ಸೇರಿಸಿತು.
ಇಷ್ಟೆಲ್ಲ ಮಾಡಿದ ಕಾಂಗ್ರೆಸ್, ಈಗ ಎನ್ಆರ್ಸಿ ಯಾಕೆ ಮಾಡುತ್ತಿದ್ದೀರೆಂದು ನಮ್ಮನ್ನು ಪ್ರಶ್ನಿಸುತ್ತಿದೆ. ನಾನು ಕಾಂಗ್ರೆಸ್ಗೆ ಕೇಳುವುದಿಷ್ಟೆ-ನೀವೇಕೆ ಎನ್ಆರ್ಸಿಯನ್ನು ರೂಪಿಸಿದಿರಿ? ಇದರ ಹಿಂದಿನ ತರ್ಕವೇನಿತ್ತು? ಎನ್ಆರ್ಸಿ ರೂಪ ಪಡೆದದ್ದು ಕಾಂಗ್ರೆಸ್ನ ಅವಧಿಯಲ್ಲಿಯೇ ಎನ್ನುವುದು ಸತ್ಯ. ಅಲ್ಲದೇ ಹೀಗೆ ರೂಪಿಸಿರುವುದು ಸರಿಯಾಗಿಯೇ ಇದೆ ಎನ್ನುವುದನ್ನೂ ನಾನು ಒಪ್ಪುತ್ತೇನೆ. ಇನ್ನು ಎನ್ಆರ್ಸಿಗೂ ಸಿಎಬಿಗೂ ಸಂಬಂಧವೇ ಇಲ್ಲ. ಮೊದಲು ಎನ್ಆರ್ಸಿಯೆಂದರೆ ಏನು ಎಂದು ತಿಳಿದುಕೊಳ್ಳಿ. ಎನ್ಆರ್ಸಿ ಎಂದರೆ ಈ ದೇಶದ ನಾಗರಿಕರ ನೋಂದಣಿ ಮಾಡುವುದು ಎಂದಷ್ಟೇ ಅರ್ಥ. ಪ್ರಪಂಚದಲ್ಲಿ ಯಾವ ದೇಶದಲ್ಲಿ ಈ ರೀತಿಯ ನಾಗರಿಕ ನೋಂದಣಿಯಿಲ್ಲ? ಭಾರತದಲ್ಲಿ ಯಾರು ಬೇಕಾದರೂ ಬಂದು ಇರಬಹುದೇ?
ಹಾಗಿದ್ದರೆ ಈ ಆಧಾರ್, ಮತದಾರ ಚೀಟಿ ಇವೆಲ್ಲ ಭಾರತೀಯ ನಾಗರಿಕರ ಗುರುತುಗಳಲ್ಲವೇನು?
ಅಲ್ಲಾ, ಖಂಡಿತ ಇಲ್ಲ. ಇದರಿಂದ ಪೌರತ್ವ ನಿರ್ಧಾರವಾಗುವುದಿಲ್ಲ. ಅದರಲ್ಲೂ ಆಧಾರ್ನಿಂದ ಒಂದಿಷ್ಟೂ ಆಗುವುದಿಲ್ಲ. ಆಧಾರದ ಉದ್ದೇಶವೇ ಬೇರೆ. ನೋಡಿ, ಎನ್ಆರ್ಸಿ ತಂದರೆ ಅದ್ಯಾರಿಗೆ ಅನ್ಯಾಯವಾಗುತ್ತದೆ? ಯಾಕೆ ಇದಕ್ಕೆ ಹೆದರಬೇಕು? ಯಾರು ಈ ದೇಶದ ನಾಗರಿಕರೋ ಅವರಿಗೆ ಇದರಿಂದ ಏನೂ ಅನ್ಯಾಯವಾಗದು.
ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿವೆ. ವಾಪಸ್ ಪಡೆಯುತ್ತೀರಾ? ಸಾಧ್ಯವೇ ಇಲ್ಲ. ಒಂದಿಷ್ಟೂ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಯಾರು ಈ ಮೂರೂ ರಾಷ್ಟ್ರಗಳಲ್ಲಿ ಧಾರ್ಮಿಕ ಹಿಂಸಾಚಾರಕ್ಕೆ ತುತ್ತಾಗಿ ಭಾರತಕ್ಕೆ ಶರಣಾರ್ಥಿಯಾಗಿ ಬಂದಿದ್ದಾರೋ, ಅವರಿಗೆಲ್ಲ ನೆಹರೂ -ಲಿಯಾಖತ್ ಒಪ್ಪಂದದನ್ವಯ, ನಾವು ಪೌರತ್ವ ಕೊಡುತ್ತೇವೆ. ಈ ವಿಷಯವನ್ನೆಲ್ಲ ನೀವು ಲೋಕಸಭೆಯಲ್ಲೂ ಹೇಳಿದ್ದೀರಿ. ಆದರೂ ಇಂದು ದೇಶದ ವಿಶ್ವವಿದ್ಯಾಲಯಗಳಲ್ಲೆಲ್ಲ ಪ್ರತಿಭಟನೆ ತೀವ್ರವಾಗುತ್ತಿದೆಯಲ್ಲ? ನೀವು ಒಂದಕ್ಕೆ ಹತ್ತು ಸೇರಿಸಿ ಮಾತಾಡಬೇಡಿ. ದೇಶದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ. ಅವುಗಳಲ್ಲಿ ಪ್ರತಿಭಟನೆ ನಡೆಯುತ್ತಿರುವುದು 5 ವಿಶ್ವವಿದ್ಯಾಲಯಗಳಲ್ಲಿ. ಇನ್ನು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ, ಇನ್ನೂ ಕೆಲವು ವಿವಿಗಳಲ್ಲಿ ಸಾಂಕೇತಿಕ ಪ್ರತಿಭಟನೆ ನಡೆದಿದೆ.
ಜಾಮಿಯಾ ಮೀಲಿಯಾ ವಿಶ್ವವಿದ್ಯಾಲಯದ ಒಳಕ್ಕೆ ದೆಹಲಿ ಪೊಲೀಸರು ಹೀಗೆ ನುಗ್ಗಬಹುದಿತ್ತೇ? ಅಲ್ಲಿನ ಗ್ರಂಥಾಲಯವನ್ನು ಪ್ರವೇಶಿಸಿ ಥಳಿಸಿದ್ದು ಸರಿಯೇ? ನಾನು ಈಗಲೂ ಹೇಳುತ್ತೇನೆ. ಯಾರು ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಾರೋ, ಯಾರು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಾರೋ ಅವರ ವಿರುದ್ಧ ಕ್ರಮ ಜರುಗಿಸಲೇಬೇಕಾಗುತ್ತದೆ. ಆದರೆ, ಅನುಮತಿಯಿಲ್ಲದೇ ವಿಶ್ವವಿದ್ಯಾಲಯಗಳೊಳಗೆ ಪೊಲೀಸರು ನುಗ್ಗಬಾರದಿತ್ತಲ್ಲವೇ? ಹಾಗಿದ್ದರೆ ಕಲ್ಲುಗಳು ತೂರಿಬಂದದ್ದು ಎಲ್ಲಿಂದ? ವಿ.ವಿಯೊಳಗಿಂದಲೇ ಅಲ್ಲವೇ? ವಿವಿಯೊಳಗೆ ವಿದ್ಯಾರ್ಥಿಗಳಲ್ಲದವರೂ ನುಸುಳಿದ್ದರು ಎನ್ನುವುದು ಈಗ ಸಾಬೀತಾಗುತ್ತಲೂ ಇದೆ. ವಿಶ್ವವಿದ್ಯಾಲಯದಲ್ಲಿ ಹೊರಗಿನವರು ಇದ್ದರು ಎನ್ನುವುದಕ್ಕೆ ವೀಡಿಯೋ ಪುರಾವೆಯೂ ಸಿಗುತ್ತಿದೆ. ಅದರ ಜತೆಗೆ, ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಚ್ ಮಾಡಿದರು ಎನ್ನುವುದನ್ನು ಸಾಬೀತುಮಾಡುವ ವಿಡಿಯೋ ಪುರಾವೆಗಳೂ ಸಿಗುತ್ತಿವೆಯಲ್ಲ?
ಈ ಗದ್ದಲಕ್ಕೆ ಮುಖ್ಯ ಕಾರಣ ಅಪಪ್ರಚಾರ. ಕಾಂಗ್ರೆಸ್, ತೃಣಮೂಲ , ಆಪ್, ಕಮ್ಯುನಿಸ್ಟ್ ಪಾರ್ಟಿಗಳು ನಡೆಸುತ್ತಿರುವ ಅಪಪ್ರಚಾರ.
ಪ್ರಪಂಚದಲ್ಲಿ ಯಾವ ದೇಶದಲ್ಲಿ ಈ ರೀತಿಯ ನಾಗರಿಕ ನೋಂದಣಿಯಿಲ್ಲ? ಭಾರತದಲ್ಲಿ ಯಾರು ಬೇಕಾದರೂ ಬಂದು ಇರಬಹುದೇ?
– ಅಮಿತ್ ಶಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
MUST WATCH
ಹೊಸ ಸೇರ್ಪಡೆ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ