ಸಂವಿಧಾನಕ್ಕೆ ಈ ಹೊತ್ತು, 70!
Team Udayavani, Nov 26, 2019, 5:14 AM IST
ಪ್ರತಿಯೊಬ್ಬ ಭಾರತೀಯನೂ ಸಶಕ್ತನಾಗಬೇಕು, ಸಮಾನತೆ-ಸಹೋದರತ್ವ, ಸಾಮಾಜಿಕ ನ್ಯಾಯವೇದೇಶದ ಮಂತ್ರವಾಗಬೇಕು ಎಂಬ ಮಹೋನ್ನತ ಉದ್ದೇಶದೊಂದಿಗೆ ರಚನೆಯಾದ ಭಾರತೀಯ ಸಂವಿಧಾನಕ್ಕೆ 70ರ ಸಂಭ್ರಮ. ಸ್ವತಂತ್ರ ಭಾರತದ ಸದೃಢ ಬೆನ್ನೆಲುಬಾಗಿರುವ ಸಂವಿಧಾನದ ಮಹತ್ವವನ್ನು ಮನೆಮನೆಗೆ ಸಾರಲು ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿದಂತೆ, ಸಂವಿಧಾನ ರಚನೆಗಾಗಿ ಶ್ರಮಿಸಿದ ಮಹೋನ್ನತ ನಾಯಕರನ್ನು ಸ್ಮರಿಸಲು “ಸಂವಿಧಾನ ದಿವಸ’ವನ್ನು ಆಚರಿಸಲಾಗುತ್ತ¤ದೆ. ಭಾರತದ ಸಂವಿಧಾನ ರಚನೆಗೆ ಹಿರಿಯರು ಪಟ್ಟ ಪರಿಶ್ರಮ, ಯಶೋಗಾಥೆಯನ್ನು ಸ್ಮರಿಸುವ ಪುಟ್ಟ ಪ್ರಯತ್ನ ಇಲ್ಲಿದೆ.
ಭಾರತೀಯ ಸಂವಿಧಾನವು ವಿಶ್ವದಲ್ಲಿಯೇ ಬೃಹತ್ ಹಾಗೂ ಸದೃಢ ಸಂವಿಧಾನವಾಗಿದ್ದು. ಮೂಲ ಸಂವಿಧಾನದವು ಒಟ್ಟು 395 ವಿಧಿಗಳು, 8 ಅನುಸೂಚಿಗಳು ಮತ್ತು 8 ಭಾಗಗಳನ್ನು ಒಳಗೊಂಡಿತ್ತು. ಪ್ರಸ್ತುತ ಸಂವಿಧಾನವು ಒಟ್ಟು 448 ವಿಧಿಗಳು, 22 ವಿಭಾಗಗಳು ಮತ್ತು 103 ತಿದ್ದುಪಡಿಗಳನ್ನು ಒಳಗೊಂಡಿದೆ.
ಸೋಷಿಯಲಿಸ್ಟ್, ಸೆಕ್ಯುಲರ್ ಪದಗಳ ಸೇರ್ಪಡೆ!
ಸಂವಿಧಾನ ಪ್ರಸ್ತಾವನೆಯ ಮೂಲಪ್ರತಿಯಲ್ಲಿ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ ಎಂದಷ್ಟೇ ಇತ್ತು¤. 1976ರಲ್ಲಿ(ಇಂದಿರಾ ಅವಧಿಯಲ್ಲಿ) 42ನೇ ತಿದ್ದುಪಡಿಯಲ್ಲಿ ಸಮಾಜವಾದಿ -ಜಾತ್ಯತೀತ ಎಂಬ ಪದಗಳನ್ನು ಸೇರಿಸಲಾಯಿತು. ಆ ಸಮಯದಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿತ್ತು. ಹೀಗಾಗಿ, ಅಂಥ ಸಮಯದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ, ಸರ್ದಾರ್ ಸ್ವರ್ಣ ಸಿಂಗ್ ನೇತೃತ್ವದ ಸಮಿತಿಯು ತಿದ್ದುಪಡಿ ತರಬಹುದೆಂದು ಶಿಫಾರಸು ಮಾಡಿತು. 42ನೇ ತಿದ್ದುಪಡಿಯನ್ನು “ಪುಟ್ಟ ಸಂವಿಧಾನ’ ಎನ್ನಲಾಗುತ್ತದೆ.
ಫಾದರ್ ಜೆರೋಮ್ ಕೊಡುಗೆ
ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಕೆಲಸ ಮಾಡಿದವರಲ್ಲಿ ಮಂಗಳೂರಿನ ಕ್ರೈಸ್ತ ಗುರುವೊಬ್ಬರೂ ಇದ್ದರು. ಅವರೇ ಫಾದರ್ ಜೆರೋಮ್ ಡಿಸೋಜಾ. ಸಂವಿಧಾನದಲ್ಲಿ ತನ್ನ ಅಲ್ಪಸಂಖ್ಯಾತ ಸಮುದಾಯಕ್ಕೆ ಸರಿಯಾದ ಹಕ್ಕು ಸ್ಥಾಪಿಸುವುದರಲ್ಲಿ ಶ್ರಮಿಸಿದರು. ಪ್ರಖ್ಯಾತ ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡು, ಏಳು ಭಾರತೀಯ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಫಾದರ್ ಜೆರೋಮ್ ಫ್ರೆಂಚ್ ಮತ್ತು ಪೋರ್ಚುಗೀಸ್ ಸರಕಾರಗಳೊಂದಿಗೆ ಮಾತುಕತೆ ನಡೆಸಿ ಗೋವಾ ಮತ್ತಿತರ ಕಡೆಯ ಫ್ರೆಂಚ್ ವಸಾಹತುಗಳನ್ನು ಭಾರತದೊಂದಿಗೆ ವಿಲೀನಗೊಳಿಸುವಲ್ಲಿ ಮತ್ತು ಪೋರ್ಚುಗೀಸ್ ಸರಕಾರದ ಪ್ರಾಬಲ್ಯ ಕಡಿಮೆ ಮಾಡುವಲ್ಲಿ ನಿರ್ಣಾಯಕ ಕೆಲಸ ಮಾಡಿದವರು. ಇದಷ್ಟೇ ಅಲ್ಲದೆ, ಸಂವಿಧಾನ ರಚನಾ ಸಮಿತಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿÇÉೆಯ ಎಚ್. ವಿ. ಕಾಮತ್, ಯು. ಶ್ರೀನಿವಾಸ ಮಲ್ಯ, ಬೆನಗಲ್ ಶಿವರಾವ್ ಮತ್ತು ಬೆನಗಲ್ ನರಸಿಂಹ ರಾಯರು ಇದ್ದರು.
ಪ್ರಮುಖ 10 ತಿದ್ದುಪಡಿಗಳು
4ನೇ ತಿದ್ದುಪಡಿ(1951): ಇದು ಆಸ್ತಿ ಹಕ್ಕಿಗೆ ಸಂಬಂಧಿಸಿದ ತಿದ್ದುಪಡಿ. ಸರ್ಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಆಸ್ತಿಯನ್ನು ವಶಪಡಿ ಸಿಕೊಳ್ಳಬಹುದು, ಸರ್ಕಾರದ ಪರಿಹಾರವನ್ನು ಕೋರ್ಟ್ನಲ್ಲಿ ಪ್ರಶ್ನಿಸುವಂತಿಲ್ಲ ಎಂಬುದಾಗಿತ್ತು.
7ನೇ ತಿದ್ದುಪಡಿ(1956): ಕೇಂದ್ರಾಡಳಿತ ಪ್ರದೇಶಗಳನ್ನು ಸ್ಥಾಪಿಸುವ ಹಾಗೂ ರಾಜ್ಯಗಳನ್ನು ಭಾಷೆಯ ಆಧಾರದ ಮೇಲೆ ಪುನರ್ರಚಿಸುವ ಮಹತ್ತರ ತಿದ್ದುಪಡಿಗಳಾದವು.
12ನೇ ತಿದ್ದುಪಡಿ(1962): ಈ ತಿದ್ದುಪಡಿಯಿಂದಾಗಿ ಗೋವಾ, ದಮನ್ ಮತ್ತು ದೀವ್ ಭಾರತದ ಕೇಂದ್ರಾಡಳಿತ ಪ್ರದೇಶವಾದವು.
34ನೇ ತಿದ್ದುಪಡಿ(1974): ಕರ್ನಾಟಕ, ಆಂಧ್ರ, ಬಿಹಾರ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಂಗೀಕರಿಸಲ್ಪಟ್ಟ ಭೂಸುಧಾರಣಾ ಕಾಯ್ದೆಗಳನ್ನು 9ನೇ ಅನುಸೂಚಿಯಲ್ಲಿ ಸೇರಿಸಲಾಯಿತು.
42ನೇ ತಿದ್ದುಪಡಿ(1976): ಇದು ಅತ್ಯಂತ ವಿಸ್ತೃತ ತಿದ್ದುಪಡಿ ಎಂದು ಕರೆಸಿಕೊಳ್ಳುತ್ತದೆ. ಇದನ್ನು “ಪುಟ್ಟ ಸಂವಿಧಾನ’ ಎಂದೂ ಕರೆಯಲಾಗಿದೆ. ಸಂವಿಧಾನದ ಪ್ರಸ್ತಾವನೆಗೆ “ಸಮಾಜವಾದಿ’ “ಜಾತ್ಯತೀತ’ ಎಂಬ ಪದಗಳನ್ನು ಸೇರಿಸಲಾಯಿತು.
44 ನೇ ತಿದ್ದುಪಡಿ(1978): ಅಭಿವೃದ್ಧಿಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದಕ್ಕೆ , ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದುಹಾಕಲಾಯಿತು.
52 ನೇ ತಿದ್ದುಪಡಿ(1985): ಚುನಾಯಿತ ಪ್ರತಿನಿಧಿಗಳ ಪûಾಂತರವನ್ನು ಕಾನೂನು ಬಾಹಿರಗೊಳಿಸಿ, ಪûಾಂತರ ನಿಷೇಧ ಕಾಯ್ದೆಯನ್ನು, 10ನೇ ಅನುಸೂಚಿಗೆ ಸೇರಿಸಲಾಯಿತು.
61ನೇ ತಿದ್ದುಪಡಿ (1989): ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಯಿತು.
101ನೇ ತಿದ್ದುಪಡಿ(2016): ಒಂದು ದೇಶ ಒಂದು ತೆರಿಗೆ ಪರಿಕಲ್ಪನೆಯ ಐತಿಹಾಸಿಕ”ಜಿಎಸ್ಟಿ’ ಅನುಷ್ಠಾನಕ್ಕೆ ತರಲಾಯಿತು.
103ನೇ ತಿದ್ದುಪಡಿ(2019): ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ನೌಕರಿಗಳಲ್ಲಿ 10 ಪ್ರತಿಶತ ಮೀಸಲಾತಿ.