ಕನ್ನಡ ನಾಡಿನ ಯುವರತ್ನಗಳು 2021-22: ಯುವಶಕ್ತಿದೇವೋಭವ

ಇಂದು ಸ್ವಾಮಿ ವಿವೇಕಾನಂದರ ಜಯಂತಿ

Team Udayavani, Jan 12, 2022, 6:50 AM IST

ಇಂದು ಸ್ವಾಮಿ ವಿವೇಕಾನಂದರ ಜಯಂತಿ: ಯುವಶಕ್ತಿದೇವೋಭವ

ಇಡೀ ಜಗತ್ತಿನಲ್ಲಿ ಯುವಶಕ್ತಿಯನ್ನು ಉದ್ದೀಪನಗೊಳಿಸಿದ ಧೀಮಂತ ಸಂತ ಸ್ವಾಮಿ ವಿವೇಕಾನಂದರ ಜಯಂತಿ ಇಂದು. ಅದಮ್ಯ ಆತ್ಮವಿಶ್ವಾಸಕ್ಕೆ ಅನ್ವರ್ಥರಾದ ವಿವೇಕಾನಂದರು ಹುಟ್ಟಿದ ದಿನವನ್ನು ಯುವದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ  ಕಳೆದ ಒಂದು ವರ್ಷದಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಮಟ್ಟದಲ್ಲಿ ಸಾಧನೆಗೈದ 12 ಮಂದಿ ಕರ್ನಾಟಕದ ಯುವ ಪ್ರತಿಭೆಗಳನ್ನು ಉದಯವಾಣಿ  ಇಲ್ಲಿ ಗುರುತಿಸಿದೆ. ಇವರ ಸಾಧನೆಯ ಹೆಜ್ಜೆಗಳು ಇಡಿ ಯುವಸಂಕುಲಕ್ಕೆ ಮಾದರಿಯಾಗಲಿ ಎನ್ನುವುದು ನಮ್ಮ ಆಶಯ.

ವಿಭಾ ಹರೀಶ್‌, ಬೆಂಗಳೂರು

ಕೊರೊನಾ ಹಲವಾರು ಸ್ಟಾರ್ಟ್‌ಅಪ್‌ ಗಳನ್ನು ಮುಚ್ಚುವಂತೆ ಮಾಡಿದೆ. ಆದರೆ ಬೆಂಗಳೂರಿನ 25 ವರ್ಷದ ಯುವತಿ ವಿಭಾ ಹರೀಶ್‌ ಮಾತ್ರ ಇದೇ ಸಮಯದಲ್ಲಿ ತಮ್ಮದೇ ಒಂದು ಸ್ಟಾರ್ಟ್‌ಅಪ್‌ ಆರಂಭಿಸಿ, ಒಂದೇ ವರ್ಷದಲ್ಲಿ ಅದರ ವಹಿವಾಟನ್ನು 2 ಕೋಟಿ ರೂ. ದಾಟಿಸಿದ್ದಾರೆ. ಅವರ ಸಾಧನೆಯನ್ನುಫೋರ್ಬ್ಸ್ ಕೂಡ ಗುರುತಿಸಿದ್ದು,ಫೋರ್ಬ್ಸ್ ಏಷ್ಯಾ ಅಂಡರ್‌ 30ಯ 30 ಸಾಧಕರ ಪಟ್ಟಿಯಲ್ಲಿ ವಿಭಾ ಹರೀಶ್‌ಗೂ ಸ್ಥಾನ ಕೊಟ್ಟಿದೆ. ವಿದ್ಯಾಭ್ಯಾಸದಲ್ಲಿ ಎಂಜಿನಿಯರಿಂಗ್‌ ಮುಗಿಸಿದ್ದು, ಏರೋಸ್ಪೇಸ್‌ ವಿಭಾಗದಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದ ವಿಭಾರಿಗೆ ಆ ಕೆಲಸ ಇಷ್ಟವಾಗಲಿಲ್ಲವಂತೆ. ಹಾಗಾಗಿ ಆ ಕೆಲಸ ಬಿಟ್ಟು, ಅಪ್ಪ-ಅಮ್ಮ ನಡೆಸುತ್ತಿದ್ದ ಆನ್‌ಲೈನ್‌ ಕ್ರಾಫ್ಟ್ ಸಂಸ್ಥೆಯಲ್ಲೇ ಕೆಲಸ ಆರಂಭಿಸಿದ ಅವರು, ಬಿಡುವಿನ ಸಮಯದಲ್ಲಿ ತನ್ನದೇ ಸಂಸ್ಥೆಯ ಬಗ್ಗೆ ಕನಸು ಕಂಡು, ಅದಕ್ಕಾಗಿ ಕೆಲಸ ಆರಂಭಿಸಿದರು. ಭಾರತದ ಆಸ್ತಿಯಾದ ಆಯುರ್ವೇದದಲ್ಲಿರುವ ಬೇರು, ಹಣ್ಣು, ಬೀಜ, ಎಲೆಗಳನ್ನೆಲ್ಲ ಬಳಸಿಕೊಂಡು ಆರೋಗ್ಯದಾಯಕ ಪುಡಿ ತಯಾರಿಸಿದರು. ಕೊರೊನಾ ಹೆಚ್ಚಾದ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿ ಸುವಂತಹ ಪುಡಿಗಳನ್ನು ತಯಾರಿಸಿ ಮಾರಾಟ ಆರಂಭಿಸಿದರು. ಅದರಿಂದ ಬಂದ ಹಣವನ್ನು ಬಡ ಮಕ್ಕಳಲ್ಲಿ ಪೌಷ್ಟಿಕಾಂಶ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಳಸಿದರು.

ಶ್ರೇಯ್‌ ಗುಪ್ತಾ, ಬೆಂಗಳೂರು

ಖಾಸಗಿ ಶಾಲೆಯ ಶಿಕ್ಷಣಕ್ಕೂ ಸರಕಾರಿ ಶಾಲೆಯ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಕಂಡು ಬೇಸತ್ತಿದ್ದ ಬೆಂಗಳೂರಿನ ಶ್ರೇಯ್‌ ಗುಪ್ತಾ(18) 2020ರಲ್ಲಿ ಆಕಾಂಶಾ ಹೆಸರಿನ ಹೊಸದೊಂದು ಶೈಕ್ಷಣಿಕ ಸಂಸ್ಥೆಯನ್ನು ಆರಂಭಿಸಿದರು.

ಬೆಂಗಳೂರಿನ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದೇ ತೆರನಾದ ಶಿಕ್ಷಣ ನೀಡುವ ಉದ್ದೇಶದಿಂದ ಈ ಸಂಸ್ಥೆ ಆರಂಭಿಸಲಾಗಿದೆ. ಅದರಲ್ಲಿ ಈಗಾಗಲೇ 200ಕ್ಕೂ ಅಧಿಕ ಮಂದಿ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ವತಃ ಶ್ರೇಯ್‌ ಹಲವು ಸರಕಾರಿ ಹಾಗೂ ಖಾಸಗಿ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ ವರ್ಚುವಲ್‌ ವರ್ಕ್‌ ಶಾಪ್‌ಗಳನ್ನು  ನಡೆಸಿದ್ದಾರೆ. ಈ ವೇದಿಕೆಯು ವಿದ್ಯಾರ್ಥಿಗಳಲ್ಲಿ ಕೌಶಲ ಅಭಿವೃದ್ಧಿಪಡಿಸಿ, ಅವರಲ್ಲಿ ಸಾಮಾಜಿಕ ಉದ್ಯಮಶೀಲತೆ ಹೆಚ್ಚಿಸುವ ಉದ್ದೇಶ ಹೊಂದಿದೆ. ಶ್ರೇಯ್‌ರ ಈ ಸಾಧನೆಯನ್ನು ಗುರುತಿಸಿ, ನವದೆಹಲಿಯ ಭಾರತದ ಸಾಧಕರ ಫೋರಂ “ಯುವ ಸಾಧಕ ಪ್ರಶಸ್ತಿ’ ಕೊಟ್ಟು ಗೌರವಿಸಿದೆ.

ಆಶ್ರಿತಾ ವಿ ಒಲೇಟಿ, ಬೆಂಗಳೂರು

ಬೆಂಗಳೂರಿನ ಎಚ್‌ಎಎಲ್‌ನಲ್ಲಿರುವ ಏರ್‌ಫೋರ್ಸ್‌ ಟೆಸ್ಟ್‌ ಪೈಲಟ್‌ ಸ್ಕೂಲ್‌ನಲ್ಲಿ ಫ್ಲೈಟ್‌ ಟೆಸ್ಟ್‌ ಎಂಜಿನಿಯರ್‌ ಪದವಿ ಪೂರೈಸುವ ಮೂಲಕ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೂಲದ ಆಶ್ರಿತಾ ವಿ ಒಲೇಟಿ ಭಾರತೀಯ ವಾಯುಪಡೆಯ ಮೊತ್ತಮೊದಲ ಮಹಿಳಾ ಫ್ಲೈಟ್‌ ಟೆಸ್ಟ್‌ ಎಂಜಿನಿಯರ್‌ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.  ಸ್ಕ್ವಾಡ್ರನ್‌ ಲೀಡರ್‌ ಆಶ್ರಿತಾ ವಿ ಒಲೇಟಿ ಪ್ರತಿಷ್ಠಿತ ಏರ್‌ಫೋರ್ಸ್‌ ಟೆಸ್ಟ್‌ ಪೈಲಟ್‌ ಸ್ಕೂಲಿನಲ್ಲಿ ಪದವೀಧರೆ. ಇಡೀ ವಿಶ್ವದಲ್ಲಿ ಈ ಹುದ್ದೆಗೆ ಉತ್ತರ ಭಾರತದ ಯುವ ಪುರುಷ ವಾಯುಸೇನೆ ಪೈಲಟ್‌ಗಳೇ ಆಯ್ಕೆಯಾಗುತ್ತಾರೆ. ದಕ್ಷಿಣ ಭಾರತದ ಮಂದಿ ತೀರಾ ಕಡಿಮೆ. ಮಹಿಳೆಯರಂತೂ ಇರಲೇ ಇಲ್ಲ. ಏರೋಸ್ಪೇಸ್‌ ಎಂಜಿನಿಯರ್‌ ಆಗಿರುವ ಆಶ್ರಿತಾ, 2014ರಲ್ಲಿ ವಾಯುಪಡೆಯ ತಾಂತ್ರಿಕ ವಿಭಾಗಕ್ಕೆ ಆಯ್ಕೆಯಾಗಿದ್ದರು. ಅತಿವೇಗವಾಗಿ ಸ್ಕ್ವಾಡ್ರನ್‌ ಲೀಡರ್‌  ಹುದ್ದೆ ಸಹ ಗಳಿಸಿ, ಕಠಿನ ಪರೀಕ್ಷೆ ಪಾಸು ಮಾಡಿ ಟೆಸ್ಟ್‌ ಪೈಲಟ್‌ ಎಂಜಿನಿಯರ್‌ ಆಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಏರ್‌ಕ್ರಾಫ್ಟ್ ಆ್ಯಂಡ್‌ ಸಿಸ್ಟಮ್ಸ್‌  ಎಸ್ಟಾಬ್ಲಿಷ್‌ಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಶ್ರಿತಾ ತಂದೆ ಒ.ವಿ. ವೆಂಕಟೇಶಬಾಬು ಜಿಲ್ಲೆಯ ಕೊಳ್ಳೇಗಾಲದಲ್ಲಿ ಆಭರಣ ವ್ಯಾಪಾರಿಯಾಗಿದ್ದು, ತಾಯಿ ಒ.ವಿ. ವಾಣಿ ಗೃಹಿಣಿಯಾಗಿದ್ದಾರೆ.

ಶ್ರೀನಿಧಿ, ಚಾಮರಾಜನಗರ

ಗ್ರಾಹಕರಿಗೆ ಶೇ.100ರಷ್ಟು ಸಾವಯವ ಉತ್ಪನ್ನವನ್ನೇ ನೀಡಬೇಕೆಂದು ಪಣತೊಟ್ಟು, ಬೆಲ್ಲ ತಯಾರಿಕೆಯಲ್ಲಿ ಬರುವ ನಾನಾ ರೀತಿಯ ತೊಡಕುಗಳನ್ನು ನಿವಾರಿಸಿಕೊಂಡು ಶುದ್ಧ ಸಾವಯವ ಬೆಲ್ಲವನ್ನು ನೀಡುತ್ತಿರುವ ಸಿ.ವಿ. ಶ್ರೀನಿಧಿ ಚಾಮರಾಜನಗರದ ಯುವ ರೈತ. 31 ವರ್ಷದ ಶ್ರೀನಿಧಿ ಓದಿದ್ದು ಕಂಪ್ಯೂಟರ್‌ ಸೈನ್ಸ್‌. ಆದರೆ ಸಾಧನೆ ಮಾಡಿದ್ದು ನೈಸರ್ಗಿಕ ಕೃಷಿಯಲ್ಲಿ. ಇವರದೇನೂ ಕೃಷಿಕ ಕುಟುಂಬವಲ್ಲ. ಸುಭಾಷ್‌ ಪಾಳೇಕರ್‌ ಅವರ ಪುಸ್ತಕ ಓದಿ ನೈಸರ್ಗಿಕ ಕೃಷಿಯತ್ತ ಆಕರ್ಷಿತರಾದರು. ಸ್ವಂತದ ಒಂದು ಎಕರೆ ಭೂಮಿಯ ಜತೆಗೆ ಇನ್ನೊಂದಿಷ್ಟು ಜಮೀನನ್ನು ಗುತ್ತಿಗೆಗೆ ಪಡೆದು ಸಹಜ ಕೃಷಿಯನ್ನು 2015ರಲ್ಲಿ ಆರಂಭಿಸಿದರು. ಬಾಳೆ, ಅರಿಶಿನ, ತರಕಾರಿ ಬೆಳೆದರು. ಅನಂತರ ಸಾವಯವ ಕೃಷಿ ಪದ್ಧತಿಯಲ್ಲಿ ಕಬ್ಬನ್ನು ಬೆಳೆದರು. ಇದೇ ಕಬ್ಬನ್ನು ಕಾರ್ಖಾನೆಗೆ ಕೊಡುವ ಬದಲು ಬೆಲ್ಲದ ಪುಡಿ ಮಾಡಿದರೆ ಹೇಗೆ ಎಂದು ಚಿಂತಿಸಿ ಬೆಲ್ಲದ ಪುಡಿ ತಯಾರಿಕೆ ಆರಂಭಿಸಿದರು. ಈಗಾಗಲೇ ಕೆಲವೆಡೆ ಬೆಲ್ಲದ ಪುಡಿ ತಯಾರಿಕೆ ಮಾಡುತ್ತಿದ್ದರೂ ಅದು ಸಂಪೂರ್ಣ ಸಾವಯವ ಹಾಗೂ ಶುದ್ಧ ಬೆಲ್ಲದ ಪುಡಿ ಆಗಿರಲಿಲ್ಲ. ಇದಕ್ಕಾಗಿ ಮಂಡ್ಯದಲ್ಲಿ ತರಬೇತಿ ಪಡೆದು, ತಮ್ಮದೇ ಪ್ರಯೋಗಗಳನ್ನು ನಡೆಸಿ ಮಡ್ಡಿಯಿಲ್ಲದಂತೆ ಪರಿಶುದ್ಧವಾದ ಬೆಲ್ಲದ ಪುಡಿಯ ತಯಾರಿಕೆ ಶೋಧ ಮಾಡಿದರು.

ಇವರ ಬೆಲ್ಲದ ಪುಡಿಯ ವಿಶೇಷವೆಂದರೆ ಕಬ್ಬು ಕೂಡ ರಾಸಾಯನಿಕ ಹಾಗೂ  ಕೀಟನಾಶಕ ಮುಕ್ತ, ಬೆಲ್ಲದ ಪುಡಿ ತಯಾರಿಕೆ ಕೂಡ ರಾಸಾಯನಿಕ ಮುಕ್ತ. ಈ ಪ್ರಯೋಗ ಯಶಸ್ವಿಯಾಗಲು ಶ್ರೀನಿಧಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಆದರೂ ಪ್ರಯತ್ನ ಬಿಡದೇ ಯಶಸ್ಸು ಸಾಧಿಸಿದ್ದಾರೆ.

ಸುಹಾಸ್‌, ಹಾಸನ

ಎಲ್‌.ಸುಹಾಸ್‌ 2016ರಲ್ಲೊಮ್ಮೆ ಭಾರೀ ಸದ್ದು ಮಾಡಿದ್ದರು. ಅಲ್ಲವರು ಬ್ಯಾಡ್ಮಿಂಟನ್‌ ಚಿನ್ನ ಗೆದ್ದಿದ್ದರು. 2021ರಲ್ಲಿ ಹೆಚ್ಚು ಕಡಿಮೆ ಭಾರತದಾದ್ಯಂತ ಪರಿಚಿತರಾದರು. ಇದಕ್ಕೆ ಕಾರಣವೂ ಇದೆ. ಅವರು ಟೋಕಿಯೊದಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ನ ಎಸ್‌ಎಲ್‌-4 ವಿಭಾಗದಲ್ಲಿ ಬೆಳ್ಳಿ ಗೆದ್ದರು. ಇದು ಅದ್ಭುತ ಸಾಧನೆಯೇ ಸರಿ. ಆದರೆ ಇದಕ್ಕಿಂತ ಮಹತ್ವದ ಸಂಗತಿಯಿದೆ. ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಐಎಎಸ್‌ ಅಧಿಕಾರಿ. ಉತ್ತರಪ್ರದೇಶದ ಗೌತಮಬುದ್ಧ ನಗರದ ಜಿಲ್ಲಾಧಿಕಾರಿಯಾಗಿ, ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸುತ್ತಲೇ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಸಣ್ಣ ಮಾತೇ? ನಿಜಕ್ಕೂ ಅವರೊಬ್ಬ ಸ್ಫೂರ್ತಿಸೆಲೆ. ಸುಹಾಸ್‌ ಹುಟ್ಟಿದ್ದು ಹಾಸನದಲ್ಲಿ. ಅವರ ಪೂರ್ವಜರ ಊರು ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ಲಾಳನಕೆರೆ ಗ್ರಾಮ. ಸುಹಾಸ್‌ ಅವರ ತಂದೆ ದಿವಂಗತ ಯತಿರಾಜ್‌ ಅವರು ಎಂಜಿನಿಯರ್‌. ತಾಯಿ ಜಯಶ್ರೀ ಅವರು ಹಾಸನದವರು. ಸುಹಾಸ್‌ ಮಂಡ್ಯ ಸಮೀಪದ ದುದ್ದ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಅನಂತರ ಅವರು ದ್ವಿತೀಯ ಪಿಯುವರೆಗೂ ಶಿವಮೊಗ್ಗದಲ್ಲಿ ಶಿಕ್ಷಣ ಪಡೆದರು. ಸುಹಾಸ್‌ ತಾಯಿ ಈಗಲೂ ಶಿವಮೊಗ್ಗದಲ್ಲಿಯೇ ನೆಲೆಸಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ಸುಹಾಸ್‌ ಒಬ್ಬ ಅಪ್ಪಟ ಕನ್ನಡಿಗ, ಕುವೆಂಪು ಅವರ ಅಭಿಮಾನಿ. ಅವರ ಪತ್ನಿ ರಿತು ಉತ್ತರಪ್ರದೇಶದ ಘಾಜಿಯಾಬಾದ್‌ನವರು. ಸದ್ಯ ಅಪರ ಜಿಲ್ಲಾಧಿಕಾರಿ. ದಂಪತಿಗೆ ಸಾನ್ವಿ (10) ವಿವಾನ್‌ (7) ಎಂಬ ಮಕ್ಕಳಿದ್ದಾರೆ.

ಈಶ್ವರ ಶರ್ಮ, ಮೈಸೂರು

ಮೈಸೂರಿನ ಈ ಕಿರಿಯ ಯೋಗಿ, ದೂರದ ಲಂಡನ್‌ನಲ್ಲಿ ಯೋಗದ ಅಂಬಾಸಿಡರ್‌ ಆಗಿದ್ದಾರೆ. ಹೌದು, ಈಶ್ವರ ಶರ್ಮ ಎಂಬ 12 ವರ್ಷದ ಪೋರ 14 ದೇಶಗಳಲ್ಲಿ 40ಕ್ಕೂ ಹೆಚ್ಚು ಮಕ್ಕಳಿಗೆ ಯೋಗ ತರಬೇತಿ ನೀಡುತ್ತಿದ್ದಾನೆ. ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚಳ ಮಾಡುವ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದಾನೆ.

ಸದ್ಯ ಕೆಂಟ್‌ನಲ್ಲಿ ವಾಸವಿರುವ ಈತ, ನಾಲ್ಕು ಬಾರಿ ಯೋಗ ಚಾಂಪಿಯನ್‌ ಆಗಿದ್ದಾನೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದ ಯೋಗ ಪ್ರದರ್ಶಕನಾಗಿದ್ದು, ಮನಸೋಲ್ಲಾಸಕ್ಕೆ ಭಾಷಣವನ್ನೂ ಮಾಡುತ್ತಾನೆ.

ಮೈಸೂರು ಮೂಲದ ಡಾ| ಎನ್‌.ವಿಶ್ವನಾಥ್‌ ಅವರ ಮಗನಾದ ಈಶ್ವರ್‌, ತನಗೆ ಮೂರು ವರ್ಷವಾಗಿದ್ದಾಗಲೇ ಯೋಗ ತರಬೇತಿ ಆರಂಭಿಸಿದ್ದ. ತಂದೆ ರೇಡಿಯೋಲಾಜಿಸ್ಟ್‌ ಆಗಿದ್ದು, ಇವರು ಯೋಗದ ಜತೆಗೆ ಆಧುನಿಕ ಚಿಕಿತ್ಸೆಯನ್ನು ಸಮ್ಮಿಳಿತಗೊಳಿಸಿದ್ದಾರೆ. ಇದನ್ನೇ ಸ್ಫೂರ್ತಿಯಾಗಿ ಪಡೆದ ಈಶ್ವರ್‌, ಚಿಕ್ಕ ವಯಸ್ಸಿನಿಂದಲೇ ವಿವಿಧ ಆಸನಗಳ ತರಬೇತಿ ಪಡೆದಿದ್ದಾನೆ. ಹೀಗಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಗಳಿಸಿ ನಾಲ್ಕು ಬಾರಿ ಜಾಗತಿಕ ಚಾಂಪಿಯನ್‌ ಆಗಿದ್ದಾನೆ.

ಈತನೇ ಪರಿಚಯಿಸಿರುವ ಆಕ್ರೋ ಯೋಗ, ಆರ್ಟಿಸ್ಟಿಕ್‌ ಯೋಗ ಬಹಳಷ್ಟುr ಪ್ರಸಿದ್ಧಿಯಾಗಿವೆ. ಈತನಿಗೆ ಗ್ಲೋಬಲ್‌ ಚೈಲ್ಡ್‌ ಪ್ರೋಡಿಜಿ ಪ್ರಶಸ್ತಿ 2020 ಪಡೆದಿದ್ದಾನೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರು ಆಯೋಜಿಸಿದ್ದ ಜಾಗತಿಕ ಯೋಗ ಚಾಂಪಿಯನ್‌ಶಿಪ್‌ ಅನ್ನೂ ಗೆದಿದ್ದಾನೆ. ಅಷ್ಟೇ ಅಲ್ಲದೇ ಯುಕೆ ಪ್ರಧಾನಿ ಪಾಯಿಂಟ್ಸ್‌ ಆಫ್ ಲೈಟ್‌, 2018ರಲ್ಲಿ ಬ್ರಿಟಿಷ್‌ ಸಿಟಿಜನ್‌ ಯೂತ್‌ ಅವಾರ್ಡ್‌, ಯಂಗ್‌ ಅಚೀವರ್‌ ಆಫ್ ದಿ ಇಯರ್‌ ಸೇರಿದಂತೆ ಇನ್ನೂ ಹಲವಾರು ಪ್ರಶಸ್ತಿ ಗೆದ್ದಿದ್ದಾನೆ.

 ವಿಶ್ವನಾಥ ಗಾಣಿಗ, ಉಡುಪಿ

ಆರು ಬಾರಿ ವಿಶ್ವ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ, ಕೆನಡಾದಲ್ಲಿ ನಡೆದ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನ ಡೆಡ್‌ಲಿಫ್ಟ್‌ನಲ್ಲಿ 327.5 ಕೆ.ಜಿ. ಭಾರ ಎತ್ತುವ ಮೂಲಕ ಹೊಸ ಕೂಟ ದಾಖಲೆ ಮಾಡಿದ ಸಾಧಕ. 2019ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪವರ್‌ ಲಿಫ್ಟರ್‌ ಕುಂದಾ ಪುರದ ದೇವಲ್ಕುಂದ ಗ್ರಾಮದ ಬಾಳಿಕೆರೆಯ ವಿಶ್ವನಾಥ್‌ ಗಾಣಿಗ. ಬಾಳಿಕೆರೆಯ ಭಾಸ್ಕರ ಗಾಣಿಗ ಹಾಗೂ ಪದ್ಮಾವತಿ ದಂಪತಿ ಪುತ್ರ. ವಿಶ್ವನಾಥ್‌ ಸದ್ಯ ಬೆಂಗಳೂರಿನ ಖಾಸಗಿ ಕಂಪೆನಿಯೊಂದರ ಸಿಸ್ಟಂ ಎಂಜಿನಿಯರ್‌ ಆಗಿದ್ದಾರೆ.

2018ರ ಮಾರ್ಚ್‌ನಲ್ಲಿ ರಸ್ತೆ ಅಪಘಾತ ವೊಂದರಲ್ಲಿ ಗಂಭೀರವಾಗಿ ಗಾಯಗೊಂಡು, ಆರು ದಿನಗಳ ಕಾಲ ಕೋಮಾ ದಲ್ಲಿದ್ದ ವಿಶ್ವನಾಥ್‌ ಮುಂದಿನ ವರ್ಷದ ಸೆಪ್ಟಂಬರ್‌ನಲ್ಲಿ ಕೆನಡಾದಲ್ಲಿ ನಡೆದ ಪವರ್‌ ಲಿಫ್ಟಿಂಗ್‌ ಕಾಮನ್‌ವೆಲ್ತ್‌ ಚಾಂಪಿಯನ್‌ ಶಿಪ್‌ನಲ್ಲಿ ಹೊಸ ದಾಖಲೆಯೊಂದಿಗೆ ಪಡೆದ ಬಂಗಾರದ ಸಾಧನೆ ಅದ್ವಿತೀಯವಾದುದು. ಅವರ ಅಚಲ ನಂಬಿಕೆ ಹಾಗೂ ದೃಢವಾದ ಆತ್ಮವಿಶ್ವಾಸಕ್ಕೆ ಸಿಕ್ಕ ಗೆಲುವಿದು. ಈ ಕೂಟದಲ್ಲಿ 327.5 ಕೆಜಿ ಭಾರ ಎತ್ತಿ ಕೂಟದ ಹೊಸ ದಾಖಲೆ ನಿರ್ಮಿಸಿದ್ದಾರೆ. ಸ್ನ್ಯಾಚ್‌ ನಲ್ಲಿ 295.1 ಕೆಜಿ, ಬೆಂಚ್‌ಪ್ರಸ್‌ನಲ್ಲಿ 180 ಕೆಜಿ ಭಾರವೆತ್ತಿ 2 ಬೆಳ್ಳಿ ಪದಕವನ್ನೂ ಗೆದ್ದಿದ್ದಾರೆ. ಒಟ್ಟಾರೆ ಅಲ್ಲಿ 802.5 ಕೆಜಿ ಎತ್ತಿದ ಸಾಧನೆಯೊಂದಿಗೆ ಸಮಗ್ರ ಚಿನ್ನದ ಪದಕವೂ ಮುಡಿಗೇರಿತ್ತು.

ನಿರಂಜನ ಕಾರಗಿ, ಬೆಳಗಾವಿ

ಬೆಳಗಾವಿ ಖಾಸಬಾಗನ ನಿರಂಜನ ಕಾರಗಿ ಎಂಬ 25 ವರ್ಷದ ಯುವ ಉದ್ಯಮಿ ನಿರ್ನಲ್‌ ಫಿಲ್ಟರ್‌ ತಯಾರಿಸಿದ್ದಾರೆ. ಕಲುಷಿತ ನೀರು ಶುದ್ಧಗೊಳಿಸುವ ಈ ಫಿಲ್ಟರ್‌ ಅತೀ ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಯಲ್ಲಿದೆ. ನೀರಿನ ಬಾಟಲಿ, ನಲ್ಲಿಗೆ ಈ ಸಾಧನ ಹಚ್ಚಿದರೆ ಸಾಕು ನೀರು ಶುದ್ಧವಾಗಿ ಬರುತ್ತದೆ. ಸಮುದ್ರದ ನೀರನ್ನು ಶುದ್ಧೀಕರಿಸುವ ಫಿಲ್ಟರ್‌ ಶೋಧಿಸಿದ್ದು, ಇನ್ನು ಕೆಲವೇ ತಿಂಗಳಲ್ಲಿ ಅದನ್ನು ಮಾರುಕಟ್ಟೆಗೆ ತರುವ ತಯಾರಿಯಲ್ಲಿದ್ದಾರೆ.

ಆರಂಭದಲ್ಲಿ ಕೇವಲ 30 ರೂ.ಗೆ ಈ ಫಿಲ್ಟರ್‌ 100 ಲೀಟರ್‌ ವರೆಗೆ ಶುದ್ಧೀಕರಿಸುತ್ತಿತ್ತು. ಈಗ ಅದನ್ನು ಮತ್ತಷ್ಟು ಆವಿಷ್ಕರಿಸಿ 299 ರೂ.ಗೆ 1,500 ಲೀಟರ್‌ ವರೆಗೆ ನೀರು ಶುದ್ಧೀಕರಿಸಬಹುದಾಗಿದೆ. ಈ ಫಿಲ್ಟರ್‌ಗೆ ವಿದ್ಯುತ್‌ ಆವಶ್ಯಕತೆ ಇಲ್ಲ. ನೀರು ವ್ಯರ್ಥ ಆಗುವುದಿಲ್ಲ. ಎಷ್ಟೇ ಕಲುಷಿತ ನೀರು ಇದ್ದರೂ ಬಾಟಲಿ, ನಲ್ಲಿಗೆ ಈ ಫಿಲ್ಟರ್‌ ಅಳವಡಿಸಿದರೆ ಸಾಕು ನೀರು ಶುದ್ಧವಾಗಿ ಬರುತ್ತದೆ. ಶೇ.99.9ರಷ್ಟು ಬ್ಯಾಕ್ಟೀರಿಯಾ ಕೊಲ್ಲುತ್ತದೆ.

ಸದ್ಯ ನಿರಂಜನ ಕಾರಗಿ ಅವರ ನಿರ್ನಲ್‌ ಫಿಲ್ಟರ್‌ ಸಾಧನಕ್ಕೆ ಭಾರತ ಸರಕಾರದಿಂದ ಡಿಸೈನ್‌ ಪೇಟೆಂಟ್‌ ಸಿಕ್ಕಿದೆ. ಇನ್ನು ಪ್ರೊಸೆಟ್‌ ಪೇಟೆಂಟ್‌ ಬರಬೇಕಾಗಿದೆ. 299 ರೂ.ಗೆ 1,500 ಲೀ. ನೀರು ಶುದ್ಧೀಕರಿಸುವ ಟ್ರಾವೆಲ್‌ ಬಾಟಲ್‌ ಫಿಲ್ಟರ್‌, 599 ರೂ.ಗೆ 4 ಸಾವಿರ ಲೀ., 2,500 ರೂ.ಗೆ ಅಲ್ಟ್ರಾ ಫಿಲೆóàಶನ್‌ ಯುನಿಟ್‌ 30 ಸಾವಿರ ಲೀ. ನೀರು ಹೀಗೆ ಕಡಿಮೆ ಬೆಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ನೀರು ಶುದ್ಧೀಕರಿಸುವ ಸಾಧನ ಇದಾಗಿದೆ.

ರಶ್ಮಿಕಾ ಮಂದಣ್ಣ, ಕೊಡಗು

2016ರಲ್ಲಿ “ಕಿರಿಕ್‌ ಪಾರ್ಟಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕೊಡಗು ಮೂಲದ ರಶ್ಮಿಕಾ ಮಂದಣ್ಣ, ಬಹುಬೇಗನೇ ಸಿನೆರಸಿಕರನ್ನು ಸೆಳೆದ ನಟಿ. ಕನ್ನಡದಲ್ಲಿ ಬೆರಳೆಣಿಕೆಯ ಚಿತ್ರ ಮಾಡುತ್ತಲೇ ತೆಲುಗು ಚಿತ್ರರಂಗದ ಕಣ್ಣಿಗೆ ಬಿದ್ದ ರಶ್ಮಿಕಾ ಈ ವರ್ಷ ನ್ಯಾಶನಲ್‌ ಕ್ರಶ್‌ ಆಗಿ ಹೊರಹೊಮ್ಮಿದ್ದಾರೆ. ಅವರನ್ನು ಸೋಶಿಯಲ್‌ ಮೀಡಿಯಾದಲ್ಲಿ ಫಾಲೋ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ಕನ್ನಡದಿಂದ ತೆಲುಗಿಗೆ ಹೋದಷ್ಟೇ ವೇಗದಲ್ಲಿ ಬಾಲಿವುಡ್‌ ಮಂದಿಯ ಕಣ್ಣಿಗೆ ಬಿದ್ದ ರಶ್ಮಿಕಾ, ಹಿಂದಿಯಲ್ಲಿ “ಮಿಷನ್‌ ಮಜು°’ ಹಾಗೂ “ಗುಡ್‌ ಬೈ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ “ಗುಡ್‌ ಬೈ’ ಚಿತ್ರದಲ್ಲಿ ಬಾಲಿವುಡ್‌ನ‌ ಲೆಜೆಂಡ್‌ ಅಮಿತಾಭ್‌ ಬಚ್ಚನ್‌ ಜತೆ ನಟಿಸುವ ಅವಕಾಶವನ್ನು ರಶ್ಮಿಕಾ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ಬಿಗ್‌ಬಜೆಟ್‌ ಹಾಗೂ ಬಹುನಿರೀಕ್ಷಿತ “ಪುಷ್ಪ’ದಲ್ಲೂ ಅಭಿಮಾನಿಗಳ ಗಮನ ಸೆಳೆದ ರಶ್ಮಿಕಾ, ಸದ್ಯ ದಕ್ಷಿಣ ಭಾರತೀಯ ಚಿತ್ರರಂಗದ ಮುಂಚೂಣಿ ಸ್ಟಾರ್‌ ನಟಿ. ತಮಿಳು, ತೆಲುಗಿನ ಸ್ಟಾರ್‌ ನಟರ ಚಿತ್ರಗಳಲ್ಲಿ ಬಹುಬೇಗನೇ ಅವಕಾಶ ಗಿಟ್ಟಿಸಿಕೊಂಡ ಕನ್ನಡತಿ ರಶ್ಮಿಕಾ ಈಗ ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ.

ಸಂಚಿತ್‌ ಹೆಗ್ಡೆ, ಬೆಂಗಳೂರು

ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ “ಸರಿಗಮಪ ಸೀಸನ್‌-13′ ರಿಯಾಲಿಟಿ ಶೋ ಮೂಲಕ ಸಂಗೀತ ಲೋಕಕ್ಕೆ ಪರಿಚಯವಾದ ಸಂಚಿತ್‌ ಹೆಗ್ಡೆ, ಈಗ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗಿನಲ್ಲೂ ಜನಪ್ರಿಯ ಗಾಯಕ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಜತೆಗೆ ಪಾಪ್‌ ಸಾಂಗ್ಸ್‌ ಮತ್ತು ರಾಕ್‌ ಸಾಂಗ್ಸ್‌ ಮೂಲಕವೂ ಕೇಳುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಸಂಚಿತ್‌ ಹೆಗ್ಡೆ, ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ಧ್ವನಿಯಾಗಿದ್ದು, ಬಹುತೇಕ ಹಾಡುಗಳು ಹಿಟ್‌ ಲಿಸ್ಟ್‌ನಲ್ಲಿವೆ. ಗಾಯನದ ಜತೆಗೆ “ಪಿಟ್ಟ ಕಥಾಲು’ ವೆಬ್‌ ಸೀರಿಸ್‌ ಮೂಲಕ ನಟನಾಗಿಯೂ ಪರಿಚಯವಾಗಿರುವ ಸಂಚಿತ್‌ ಹೆಗ್ಡೆ, ಈ ವೆಬ್‌ ಸೀರಿಸ್‌ನಲ್ಲಿ ಶ್ರುತಿ ಹಾಸನ್‌ ಜತೆಗೆ ರೊಮ್ಯಾಂಟಿಕ್‌ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. 2019ರ ಅತ್ಯುತ್ತಮ ಹಿನ್ನೆಲೆ ಗಾಯಕ ಫಿಲಂ ಫೇರ್‌ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಸಂಚಿತ್‌ ಹೆಗ್ಡೆ, ಸದ್ಯ ಗಾಯನ ಮತ್ತು ಅಭಿನಯ ಎರಡರಲ್ಲೂ ತೊಡಗಿಸಿಕೊಂಡಿದ್ದು, ದಕ್ಷಿಣ ಭಾರತದ ಯುವ ಗಾಯಕರ ಸಾಲಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ, ಈ ತಲೆಮಾರಿನ ಅಪ್ಪಟ ಕನ್ನಡದ ಹುಡುಗ.

ಪುನೀತ್‌ ಬಣಕಾರ, ಹಾವೇರಿ

ಹಾವೇರಿಯ ರಟ್ಟಿಹಳ್ಳಿ ತಾಲೂಕಿನ ಯುವಕನೊಬ್ಬ ಭಾರತೀಯ ವಾಯುಪಡೆ ಪೈಲಟ್‌ ಆಗಿ ಆಯ್ಕೆಯಾಗಿದ್ದು, ಗ್ರಾಮೀಣ ಯುವಕರಿಗೆ ಸೂ#ರ್ತಿಯಾಗಿದ್ದಾರೆ. ಭಾರತೀಯ ವಾಯುಪಡೆ ಪೈಲಟ್‌ ಆಗಿ ಆಯ್ಕೆಗೊಂಡಿರುವ ರಟ್ಟಿಹಳ್ಳಿ ತಾಲೂಕಿನ ಹೊಸಳ್ಳಿ ಗ್ರಾಮದ ಪುನೀತ್‌ ಬಣಕಾರ ಗ್ರಾಮದ ಹಿರಿಮೆ ಹೆಚ್ಚಿಸುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಗ್ರಾಮದ ರಾಜಶೇಖರ ಹಾಗೂ ಗೌರಮ್ಮ ದಂಪತಿ ಪುತ್ರನಾಗಿರುವ ಪುನೀತ್‌, 2019ರಲ್ಲಿ ಯುಪಿಎಸ್‌ಸಿ (ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿ) ಪರೀಕ್ಷೆಯ 140ನೇ ಬ್ಯಾಚ್‌ನಲ್ಲಿ ತೇರ್ಗಡೆ ಹೊಂದಿ ವಾಯುಪಡೆ ಪೈಲಟ್‌ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರ ಸಾಧನೆ ಜಿಲ್ಲೆಯ ಯುವಕರಿಗೆ ಮಾದರಿಯಾಗಿದ್ದು, ಅನೇಕರಿಗೆ ಸ್ಫೂರ್ತಿ ನೀಡಿದೆ.

ಪುನೀತ್‌ ಅವರು ಮಹಾರಾಷ್ಟ್ರದ ಪುಣೆಯ ಕಡಕ ವಾಸ್ಲಾದಲ್ಲಿ ವಾಯುಪಡೆ ಪೈಲಟ್‌ 3 ವರ್ಷಗಳ ತರಬೇತಿ ಪಡೆದಿದ್ದಾರೆ. ಮೇ 29ರಂದು ನಡೆದ ಪಾಸಿಂಗ್‌ ಔಟ್‌ ಪರೇಡ್‌ನ‌ಲ್ಲಿ ಮತ್ತೂಮ್ಮೆ ತೇರ್ಗಡೆ ಹೊಂದಿದ್ದು, ಸದ್ಯ ಒಂದು ವರ್ಷದ ಫೈಟರ್‌ ಪೈಲಟ್‌ ವಿಶೇಷ ತರಬೇತಿ ಪಡೆಯಲು ಹೈದರಾಬಾದ್‌ಗೆ ತೆರಳಿದ್ದು, ಮೇ 30ಕ್ಕೆ ತರಬೇತಿ ಅಂತ್ಯಗೊಳ್ಳಲಿದೆ

ಆವೇಜ್‌ ಅಹಮದ್‌, ಚಿಕ್ಕಮಗಳೂರು

ಕಾಫಿನಾಡಿನ ಹಚ್ಚ ಹಸುರಿನ ಪರಿಸರದಲ್ಲಿ ಬೆಳೆದ ಅವೇಜ್‌ ಅಹಮದ್‌ ಎಂಬ 23 ವರ್ಷದ ಯುವಕ ಬೆಂಗಳೂರಿನಲ್ಲಿ ಸ್ವಂತ ಏರೋಸ್ಪೇಸ್‌ ಪಿಕ್ಸೆಲ್‌ ಕಂಪೆನಿ ಕಟ್ಟಿ ಉಪಗ್ರಹ ತಯಾರಿಸುವ ಮೂಲಕ ಮಲೆನಾಡಿಗೆ ಕೀರ್ತಿ ತಂದಿದ್ದಾರೆ.

ಆಲ್ದೂರಿನ ರಾಯಲ್‌ ಮೆಡಿಕಲ್‌ ಮಾಲಕ ನದೀಮ್‌ ಅವರ ಪುತ್ರನಾದ ಅವೇಜ್‌, ಬಾಲ್ಯದಿಂದಲೂ ವಿಶೇಷ ಸಾಧನೆ ಮಾಡಬೇಕೆಂದು ಕನಸು ಕಂಡು ಆ ನಿಟ್ಟಿನಲ್ಲಿ ಪ್ರಯತ್ನ ಮಾಡಿ ಗುರಿ ತಲುಪಿದ್ದಾರೆ. ಆಲ್ದೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದು ಮಂಗಳೂರಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದ ಅನಂತರ ರಾಜಸ್ಥಾನದಲ್ಲಿರುವ ಬಿಟ್ಸ್‌-ಪಿಲಾನಿ ಕಾಲೇಜಿನಲ್ಲಿ ಎಂಎಸ್ಸಿ ಮ್ಯಾಥೆಮೆಟಿಕ್ಸ್‌ ಪದವಿ ಪಡೆದರು. ಪದವಿ ಬಳಿಕ ಬೆಂಗಳೂರಿನಲ್ಲಿ ಪಿಕ್ಸೆಲ್‌ ಎಂಬ ಏರೋಸ್ಪೇಸ್‌ ಕಂಪೆನಿ ಆರಂಭಿಸಿದರು.

ಕಾಲೇಜು ದಿನಗಳಲ್ಲಿ ಅಮೆರಿಕ ಸ್ಪೆಸೆಕ್ಸ್‌ ಕಂಪೆನಿಯ ಸ್ಪೆಸೆಕ್ಸ್‌ ಹೈಪರ್‌ ಲೂಪ್‌ ಸ್ಪರ್ಧೆಗೆ ಆಯ್ಕೆಯಾಗಿ ಅಮೆರಿಕಕ್ಕೆ ತೆರಳಿದರು. ಸರ್ಧೆಯಲ್ಲಿ ಗೆಲುವು ಸಾಧಿಸಿದರು. ಬಾಲ್ಯದಿಂದಲೂ ಬಾಹ್ಯಾಕಾಶದ ಬಗ್ಗೆ ಕುತೂಹಲ ಹೊಂದಿದ್ದ ಅವರು, ಎಲಾನ್‌ ಮಾಸ್ಕ್ನ ಎರೋಸ್ಪೇಸ್‌ ಕಂಪೆನಿ ಸ್ಪೆಸೆಕ್ಸ್‌ನಿಂದ ಪ್ರಭಾವಿತರಾಗಿದ್ದರು. ಇದೇ ತರಹದ ಕಂಪೆನಿ ಕಟ್ಟುವ ಕನಸು ಕಂಡಿದ್ದರು. ಇವರು ಸಂಶೋಧಿಸಿರುವ ಉಪಗ್ರಹ ಉಡಾವಣೆಗೆ ಸಿದ್ಧವಿದ್ದು, ಈ ಉಪಗ್ರಹ ಬೇರೆ ಉಪಗ್ರಹಗಳಿಗಿಂತ ಶೇ.50ರಷ್ಟು ಡೇಟಾವನ್ನು ಬಿಡುಗಡೆಗೊಳಿಸುವ ಸಾಮರ್ಥ್ಯ ಹೊಂದಿದೆ. ಭೂಮಿಯ ಚಲನವಲನ, ಕೃಷಿ, ಹವಾಮಾನ ಮಾಹಿತಿ ನೀಡುವ ವಿಶಿಷ್ಟ ಶಕ್ತಿಯನ್ನು ಹೊಂದಿದೆ.

ಈ ಉಪಗ್ರಹವನ್ನು ರಷ್ಯಾದಿಂದ ಉಡಾವಣೆ ಮಾಡಲು ಸಿದ್ಧತೆ ನಡೆಸ ಲಾಗಿತ್ತು. ಅವೇಜ್‌ ಅಹಮದ್‌ ತಮ್ಮ ಮೊದಲ ಉಪಗ್ರಹವನ್ನು ಇಸ್ರೋದಿಂದ ಉಡಾವಣೆ ಮಾಡುವ ಕನಸು ಕಂಡಿದ್ದು, 2020ನೇ ಡಿಸೆಂಬರ್‌ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ, ಖಾಸಗಿ ಸ್ಪೇಸ್‌ ಕಂಪೆನಿಗಳ ಜತೆ ನಡೆಸಿದ ವೀಡಿಯೋ ಸಂವಾದದಲ್ಲಿ ಅಮೇಜ್‌ ಅಹಮದ್‌ ಭಾಗವಹಿಸಿದ್ದರು.

ಟಾಪ್ ನ್ಯೂಸ್

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.