ರೂಪಾಂತರದ ಯುಗಾದಿ
Team Udayavani, Mar 18, 2018, 1:30 AM IST
ಎಲ್ಲ ಮನಸ್ಸುಗಳು ಒಂದೇ ದಿಕ್ಕಿಗೆ ರೂಪಾಂತರವಾದರೆ..? ನಾವು ಮಿತ್ರರೊಳಗೆ, ಕಚೇರಿಯ ಸಿಬ್ಬಂದಿಯೊಳಗೆ, ದೇಶದ ಹಿತಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳೊಳಗೆ ಸಮನ್ವಯ ನಡೆದರೆ ಆ ಫಲಿತಾಂಶ ಅಗಾಧವಲ್ಲವೇ?
ಜಗತ್ತಿನ ಹೊಸವರ್ಷದ ಗುಂಗು ಇನ್ನೂ ಮುಗಿದಿಲ್ಲವೇನೋ ಎನ್ನುವಷ್ಟರಲ್ಲಿ ಭಾರತೀ ಯರ ಹೊಸ ಸಂವತ್ಸರ ಆರಂಭದ ಹೊಸ ಯುಗಾದಿ ಹೊಸ್ತಿಲಲ್ಲಿದೆ. ಮಾವಿನ ತೋರಣ ಏರಿಸಿಕೊಂಡ ಬಾಗಿಲೂ ತನ್ನ ಕೆಲಸವೇ ಬರಮಾಡಿಕೊಳ್ಳುವುದು ಎನ್ನುವಂತೇ ಯುಗಾದಿಯನ್ನು ಬರಮಾಡಿಕೊಳ್ಳುತ್ತಿದೆ. ಹೇವಿಳಂಬಿಯೋ ಹೇಮಲಂಬಿಯೋ ಎನ್ನುವ ಚರ್ಚೆಯೇ ಇನ್ನೂ ಮುಗಿದಿಲ್ಲ ಅಷ್ಟರಲ್ಲಿ ವಿಳಂಬಿ ಸಂವತ್ಸರ ಬಂದುಬಿಟ್ಟಿದೆ. ಅದೆಷ್ಟು ವೇಗ, ಅದೇನು ರಭಸ, ಕಾಲಚಕ್ರಕ್ಕೆ! ಮೊನ್ನೆಯಷ್ಟೇ ರಾಶಿ ಎಲೆಯುದುರಿಸಿ ನಿಂತಿದ್ದ ಮರಗಿಡಗಳು ಹಸಿರು ಚಿಗುರನ್ನು ಹುಟ್ಟಿಸಿಕೊಂಡು ಯುಗಾದಿಗಾಗಿ ಹೊಸಬಟ್ಟೆ ಹಾಕಿಕೊಂಡಂತೆ ಮೈಪೂರ್ತಿ ಎಲೆಗಳಿಂದ ಅಲಂಕೃತವಾಗಿವೆ. ಮಾವಿನ ಮರದ ತುಂಬ ಜಾತ್ರೆಯ ತೇರು, ಪತಾಕೆ ಹಚ್ಚಿಸಿ ಕೊಂಡು ಸಿದ್ಧವಾದಂತೆ ಹೂ ಅರಳಿಸಿಕೊಂಡಿದೆ. ಪ್ರಕೃತಿಯಲ್ಲಿ ಹೊಸತನ ಆರಂಭವಾಯಿ ತೆಂದರೆ ಹೊಸ ಯುಗ, ಹೊಸ ವರ್ಷ ಶುರುವಿಟ್ಟುಕೊಂಡಿತು ಎಂದೇ ಅರ್ಥ. ಹೊಸ ಯುಗವೆಂದರೆ ಹೊಸ ಭರವಸೆ. ಹೊಸಹುಟ್ಟು. ಮತ್ತೂಂದು ರೂಪಾಂತರಕ್ಕೆ ನಾವು ಸಿದ್ಧ.
ಹಬ್ಬ ಎನ್ನುವ ಶಬ್ದವೇ ಮಿಶ್ರಭಾವಗಳ ಹೂರಣ. ಕುಟುಂಬದ ಸದಸ್ಯರೆಲ್ಲರೂ ಜೊತೆಯಲ್ಲಿ ಕೂತು ಉಣ್ಣುವ, ಮಾತಾಡುವ ಸಮಯ. ಕಳೆದುಹೋದ ಹೊತ್ತಿನ ಮಾತೂ ನುಸುಳುವ ಸಮಯ. ಒಂದೊಂದು ಸಂವತ್ಸರ ಕಳೆದಂತೆ ಒಂದೊಂದು ವರ್ಷ ಹೆಚ್ಚಾಗುವ ಆತಂಕ, ಜವಾಬ್ದಾರಿಯ ಭಾವ ಮನದಲ್ಲಿ ಮೂಡಿದಂತೆ ಬದುಕಿಂದ ಕಣ್ಮರೆಯಾದ ಹಿರಿಯರ ನೆನಪೂ ನುಸುಳಿ ಮೌನ ತಬ್ಬುವಂತೆ ಆಗುವ ಸಮಯ. ಸಿನಿಮಾ ರೀಲಿನಂತೆ ಕಣ್ಣಮುಂದೆ ಚಿತ್ರಗಳು ಹಾದುಹೋಗುತ್ತಿದ್ದಂತೇ ಅಮ್ಮನ ಸ್ಥಾನದಲ್ಲಿ ಮಗಳು ಬಂದು ಕೂತಿರುತ್ತಾಳೆ. ಹಾಗಾದರೆ ಇದು ಬರೀ ರೂಪಾಂತರವಷ್ಟೇ! ಎನ್ನುತ್ತದೆ ಕಾಲ. ಸಮಯ, ಸರಿದಷ್ಟು ವೇಗವಾಗಿ ನಾವು ನಮ್ಮ ಯೋಚನೆಗಳನ್ನು ಕ್ರಿಯೆಗಳನ್ನು ವಿಕಸಿತಗೊಳಿಸುತ್ತಿದ್ದೇ ವೆಯೇ? ವಿಕಾಸ, ಅತ್ಯಂತ ಧನಾತ್ಮಕ ಲಕ್ಷಣವುಳ್ಳದ್ದು. ಜಗತ್ತನ್ನು ನಡೆಸುವ ಶಕ್ತಿ ಇರುವುದು ಧನಾತ್ಮಕತೆಗೆ ಮಾತ್ರ. ಸಮನ್ವಯಕ್ಕೆ ಮಾತ್ರ. ಯುಗಾದಿ, ಈ ಹೊತ್ತಿನಲ್ಲಿ ಇಂಥದೊಂದು ಸಮನ್ವಯದ ಯೋಚನೆಗೆ ನಾಂದಿ ಹಾಡಬೇಕು. ಈ ಹೊತ್ತಿನ ತುರ್ತಿನ ಅಗತ್ಯವೆಂದರೆ ಸಮನ್ವಯ. ಈ ಜಗತ್ತು ಪ್ರಕೃತಿಯಂತೆ ವೈವಿಧ್ಯಮಯ. ನೂರಾರು ಸಿದ್ಧಾಂತಗಳು, ಹಲ ವಾರು ಮತಧರ್ಮಗಳು. ಭಿನ್ನಭಿನ್ನ ಮನಸ್ಥಿತಿಗಳು. ಕಚೇರಿಯಿಂದ, ಬೇರೆಬೇರೆ ಕಂಪನಿ ಗಳು, ಅಷ್ಟೇ ಅಲ್ಲ. ರಾಜಕೀಯ ಪಕ್ಷಗಳಿಂದ ಸರ್ಕಾರದವರೆಗೆ ಇದು ಅನ್ವಯವಾಗುತ್ತದೆ. ಎಲ್ಲ ಮನಸ್ಸುಗಳು ಒಂದೇ ದಿಕ್ಕಿಗೆ ರೂಪಾಂತರವಾದರೆ..? ನಾವು ಮಿತ್ರರೊಳಗೆ, ಕಚೇರಿಯ ಸಿಬ್ಬಂದಿಯೊಳಗೆ, ದೇಶದ ಹಿತಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳೊಳಗೆ ಸಮನ್ವಯ ನಡೆದರೆ ಆ ಫಲಿತಾಂಶ ಅಗಾಧವಲ್ಲವೇ?
ಪ್ರಕೃತಿಯಲ್ಲಿ ಕಂಡುಬರುವ ಅಷ್ಟೂ ಭಿನ್ನತೆ ಮನುಷ್ಯ ಮನುಷ್ಯನಲ್ಲೂ ಇದೆ. ಸಹಜೀವನದ ಪಾಠ, ನಾವು ಪ್ರಕೃತಿಯಿಂದ ಕಲಿತು ಶಾಂತಿ ನೆಮ್ಮದಿಯನ್ನು ಮೂಡಿಸುವಲ್ಲಿ ಸಹಕರಿಸುವುದೇ ಹೊಸಹುಟ್ಟು. ಹಕ್ಕಿಗಳ ಬದುಕೇ ನಮಗೆ ಎಷ್ಟೋ ಬಾರಿ ಮಾದರಿ ಯಾಗುತ್ತದೆ. ರೂಪಾಂತರವಾದರೂ ಸಮನ್ವಯದ ಬದುಕನ್ನು ನಾವು ಅವುಗಳಿಂದ ಕಲಿಯಬೇಕಾಗಿದೆ.ಹಕ್ಕಿಗಳ ಛಾಯಾಗ್ರಹಣದಲ್ಲಿ ಈ ಒಳನೋಟ ಕಾಣುತ್ತದೆ.
ಹಬ್ಬಗಳೆಂದರೆ ಒಂದಷ್ಟು ಡಿಸ್ಕೌಂಟ್ ಸೇಲುಗಳು, ಒಂದಷ್ಟು ವಿಶೇಷಾಂಕಗಳು… ಖರೀದಿಗಳು, ಹಳತು ಕೊಟ್ಟು ಹೊಸತು ಖರೀದಿಸುವ ಎಕ್ಸ್ಛೇಂಜ್ ಮೇಳಗಳು ಇಷ್ಟೇ ಎಂದು ಹಬ್ಬಗಳನ್ನು ಚೌಕಟ್ಟಿನಲ್ಲಿ ನೋಡುವ ಜಮಾನಾ ಆದರೂ ನಮ್ಮೊಳಗೆ ನಾವು ಹೊಸ ಯುಗಾದಿಯನ್ನು ರೂಪಿಸಿಕೊಳ್ಳುವ ಅಗತ್ಯವಿದೆ. ಬಿಡುವಿಲ್ಲದಂತೆ ದುಡಿಯುವ ಎಲ್ಲರಿಗೂ, ಅಂದರೆ ಅಧಿಕಾರಿಗಳಿಂದ ಕಾರಕೂನನವರೆಗೂ ಯುಗಾದಿಯೆಂದರೆ ಒಂದು ರಜೆ, ಒಂದು ಹಬ್ಬದೂಟ, ಜೊತೆಯಲ್ಲಿ ಸ್ವಲ್ಪ ಬೇವು ಮತ್ತು ಸ್ವಲ್ಪ ಬೆಲ್ಲ. ಹೊಸ ಸಂವತ್ಸರದ ಆರಂಭದಲ್ಲಿಯೇ ಎಚ್ಚರಿಕೆಯಂತೇ ಬೇವುಬೆಲ್ಲವನ್ನು ಹಂಚಿ ತಿನ್ನುವ ನಮ್ಮೆಲ್ಲರಲ್ಲೂ ಎರಡೂ ಇಲ್ಲದಿಲ್ಲ. ತುಂಡು ಬೆಲ್ಲದ ಸಿಹಿ, ಬೇವಿನೆಲೆಯ ಕಹಿ ಎಷ್ಟು ಮಾರ್ಮಿಕವಾದ ರಸಮಿಶ್ರಣ. ನಮ್ಮ ಬದುಕಿ ನಂತೆಯೇ. ಪ್ರಾಯಶಃ ಇಷ್ಟು ಮಾರ್ಮಿಕ ಸಂದೇಶ ಯಾವ ಹಬ್ಬದಲ್ಲೂ ಸಿಗದೇನೋ. ಕಹಿಸಿಹಿಗಳಿಲ್ಲದ ಬದುಕೇ ಇಲ್ಲ. ಇದ್ದರೆ ಅದು ಬದುಕಲ್ಲ. “ಬಾಗಿಲ ತೋಳಿಗೆ ಮಾವಿನ ತೋರಣ, ಮರೆಗಿದೆ ಬೇವಿನ ಚಿಗುರು, ನೋವಿನ ಜೊತೆಗೇ ನಲಿವಿದೆ ಕಥೆಗೆ ಹೊಂಗೆಯ ತುಂಬಾ ಹಸಿರು ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರು ಹೇಳಿದ ಸಾಲುಗಳು ನಮ್ಮ ಬದುಕಿಗೆ ಸೊಗಸಾದ ಹದತುಂಬಿದ ಸಂದೇಶದಂತೆ ಭಾಸವಾಗುತ್ತದೆ. ಪ್ರತೀ ಬದುಕಿಗೂ ಒಂದಷ್ಟು ಕಹಿ, ಮತ್ತಿನ್ನೊಂದಿಷ್ಟು ಸಿಹಿ ಕಟ್ಟಿಟ್ಟ ಬುತ್ತಿ. ಸೂರ್ಯನ ಸುತ್ತ ಸುತ್ತುವ ಭೂಮಿಗೆ ಬೀಳುವ ಬೆಳಕು ಕತ್ತಲೆಯಂತೆ ಸಿಹಿ ಮತ್ತು ಕಹಿ. ಎರಡೂ ಅನಿವಾರ್ಯ ಮತ್ತು ಸತ್ಯ.
ಯುಗಾದಿ ಬರುವ ಮುನ್ನವೇ ಪ್ರಕೃತಿಯಲ್ಲಿ ಕಾಣುವ ಬದಲಾವಣೆಗಳು ಮುಂಬರುವ ದಿನಗಳಿಗೆ ಸೂಚನೆಯಂತೆ ನೋಡುವಾಗ ಬದಲಾವಣೆ ಅದೆಷ್ಟು ಸಹಜ ಅನಿಸುತ್ತದೆ. ಕೊರೆಯುವ ಚಳಿಯಿಂದ ಈಚೆ ಬಂದು ಬಿಸಿಲಿನ ಕಾಲಕ್ಕೆ ಬಂದು ನಿಂತಿದ್ದೇವೆ. ನಮ್ಮಿಂದಲೂ ಮೊದಲೇ ನಮ್ಮ ಸುತ್ತಮುತ್ತಲಿನ ಗಿಡಮರಗಳಲ್ಲಿ ಬದಲಾವಣೆ ಗಮನಾರ್ಹವಾಗಿ ನಡೆದುಬಿಟ್ಟಿದೆ.
ಮೊನ್ನೆ ಮೊನ್ನೆ ಬಿಸಿಲಿನಲ್ಲೂ ಬೀಸುಗಾಳಿಗೆ ಎಲೆಗಳು ಉದುರುತ್ತಿದ್ದುದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೆ. ಕೆಲವೇ ದಿನಗಳಲ್ಲಿ ಬೋಳಾಗಿದ್ದ ಮರ ಈಗ ಹಸಿರಿನಿಂದ ಕಂಗೊಳಿಸುತ್ತಿದೆ. ಬೋಳಾದಂತೆ ಕಂಡು ಬಂದ ಬೃಹತ್ ಅಶ್ವತ್ಥ ಮರಗಳಲ್ಲಿ ಕೆಂಪು ಕೆಂಪು ಎಲೆಗಳು ಸೂರ್ಯೋದಯದ ಸ್ವರ್ಣ ಬೆಳಕಿಗೆ ಕಂಗೊಳಿಸುತ್ತಿದೆ. ಅದೇ ಮರದ ಕೆಳಗೆ ಸಾಗುವಾಗ ಕ್ಷಣಕ್ಷಣವೂ ನೆನಪಾಗುತ್ತಿದೆ.
ಎಲ್ಲಿ ನೋಡಿದರೂ ಹಸಿರು, ಹಸಿರು. ಹಸಿರಾದ ಮಾವು ಬೇವು ಕೊಯ್ದು ತಂದು ಗುಡ್ಡೆ ಹಾಕಿ ಮಾಡುವ ಸಂಭ್ರಮ ಬೇಕೇ? ಮನಸ್ಸಿಗೆ ಯುಗಾದಿ ಬಂದರೆ ಸಾಲದೇ ಎಂದು ಅನಿಸದೇ ಇರಲಾರದು. ಕೊಯ್ದಷ್ಟೂ ಚಿಗುರುವ ಸಾಮರ್ಥ್ಯವಿರುವ ಪ್ರಕೃತಿಯ ಶಕ್ತಿಗೆ ಶರಣಾ ಗುತ್ತಾ ತೋರಣ ಕಟ್ಟಿ ಬೇವನ್ನೂ ಸಿಕ್ಕಿಸಿ ಸಂಭ್ರಮಿಸುತ್ತೇವೆ. ಇರಲಿ, ಸಂಭ್ರಮದ ಜೊತೆಗೆ ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ನಾವೂ ನಮ್ಮಿಂದ ಸಾಧ್ಯವಾದಷ್ಟು ಪ್ರಕೃತಿಯ ಸಮತೋಲನಕ್ಕೆ ಶ್ರಮಿಸುವ ಪಣ ಈ ಯುಗಾದಿಯಿಂದಾದರೂ ಆರಂಭವಾ ಗಲಿ. ನೀರು, ಗಿಡಮರಗಳ ಸಂರಕ್ಷಣೆ ನಮ್ಮ ಅಗತ್ಯ ಮತ್ತು ಅನಿವಾರ್ಯವಾದ ಆದ್ಯತೆಯಾಗ ಬೇಕಿದೆ. ಅಗತ್ಯಕ್ಕೆ ತಕ್ಕಷ್ಟು ನೀರು ಬಳಸಿ ನೀರನ್ನು ಅದರ ಮಹತ್ವವನ್ನು ಗೌರವಿಸೋಣಾ. ನಮಗೆ ನೆಮ್ಮದಿಯ ಜೀವನಕ್ಕೆ ಆಮ್ಲಜನಕ ನೀಡುವ ಮರಗಿಡಗಳನ್ನು ರಕ್ಷಿಸುವ ದೊಡ್ಡ ಪೂಜೆಯಂತಹ ಕಾರ್ಯವಾಗಲೇಬೇಕು. ಇತ್ತಿಚೇಗಷ್ಟೇ ಪುಟ್ಟ ಹುಡುಗನೊಬ್ಬ ತಾನಿರುವ ಬಡಾವಣೆಯ ಕೆರೆ ಪಕ್ಕದಲ್ಲಿ ಏಳು ಗಿಡಗಳನ್ನು ನೆಟ್ಟು ದಿನಾ ನೀರುಣಿಸಿ ಪೋಷಿಸುತ್ತಿರುವ ಸುದ್ದಿ ಓದಿ ಸಮಾಧಾನವಾಗಿತ್ತು. ಯುಗಾದಿಯೆಂದರೆ ಇದೇ. ಸಾಮರಸ್ಯ, ತಾನೂ ಬದುಕಿ ಇನ್ನೊಬ್ಬರನ್ನೂ ಬದುಕಿಸುವ ದೊಡ್ಡತನ. ಪ್ರಕೃತಿಯಿಂದ ಕಲಿಯಬೇಕಾದ ಸದ್ಗುಣಗಳು ಬೇಕಾದಷ್ಟಿವೆ. ಈ ಯುಗಾದಿ ಅಂಥ ಹೊಸತನಗಳಿಗೆ ನಾಂದಿ ಹಾಡಲಿ.
ಕವಿ ಎಚ್ಚೆಸ್ವಿಯವರ ಕವಿತೆಯ ಸಾಲುಗಳು ಹಿತವೆನ್ನಿಸುತ್ತಿವೆ.-
“ನಿತ್ಯದ ನಡೆಗೆ ನರ್ತನ ಗತಿಯ ನೀಡುವ ಗೆಳೆಯ ಯುಗಾದಿ|
ಯಾವುದು ಮೊದಲೊ? ಯಾವುದು ಕಡೆಯೊ?
ಪ್ರತಿವರ್ಷಕು ಇದೆ ಆದಿ.
ಶಿವಸುಬ್ರಹ್ಮಣ್ಯ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ