ಕಾಶ್ಮೀರದ ಮಾನಸಿಕ ಸಮರ


Team Udayavani, Apr 21, 2017, 3:52 PM IST

21-ANKAN-2.jpg

ಕಾಶ್ಮೀರದ ಸ್ವಾಯತ್ತೆಯನ್ನು ಬೆಂಬಲಿಸುವುದಾಗಿ ಹೇಳುತ್ತ ಪಾಕಿಸ್ಥಾನ ನಡೆಸುತ್ತಿರುವುದು ಶುದ್ಧ ನಯವಂಚನೆ. ಅದರ ಹೆದರಿಕೆಯೆಂದರೆ, ಚೀನ ಮತ್ತು ಕಾಶ್ಮೀರದಲ್ಲಿ ಹುಟ್ಟಿ ಪಾಕಿ ಸ್ಥಾನದಲ್ಲಿ ಹರಿಯುವ ಸಿಂಧೂ, ಬೀಸ್‌, ಝೀಲಂ, ರಾವಿ ಮತ್ತು ಚಿನಾಬ್‌ ನದಿಗಳು. ಪಾಕಿಸ್ಥಾನದ ಅರ್ಥವ್ಯವಸ್ಥೆ ಬದುಕಿರುವುದೇ ಈ ನದಿಗಳ ಅಸ್ತಿತ್ವದ ಆಧಾರದಲ್ಲಿ. ಕಾಶ್ಮೀರದ ಮೇಲೆ ಪೂರ್ಣ ಅಧಿಕಾರ ಹೊಂದಿ, ಭಾರತ ಈ ನದಿಗಳ ನೀರನ್ನು ನಿಯಂತ್ರಿಸಿದರೆ ಪಾಕಿಸ್ಥಾನ ಮರಳುಗಾಡಾಗುತ್ತದೆ ಅಷ್ಟೇ. ಈ ಭೀತಿಯಂದಲೇ ಪಾಕ್‌  ಕಾಶ್ಮೀರ ಸಮಸ್ಯೆ ಜೀವಂತವಾಗಿರಲು ಬಯಸುತ್ತಿದೆ.

ನಾನು ಕಾಶ್ಮೀರದಲ್ಲಿ ಬಹಳ ಕಾಲ ಸೇನಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಸೇನೆ ಮತ್ತು ನಾಗರಿಕರು – ಎರಡೂ ಕಡೆಗಳ ಆಳವಾದ ಅರಿವು ನನಗಿದೆ. ಯುವ ಕಾಶ್ಮೀರಿಗಳು ತಾವಾಗಿಯೇ ಕ್ರೋಧೋನ್ಮತ್ತರಾಗಿಲ್ಲ, ಆಕ್ರೋಶವನ್ನು ಅವರಲ್ಲಿ ಸೃಷ್ಟಿಸಲಾಗಿದೆ. ಅಲ್ಲಿ ಉಗ್ರವಾದಿ ಚಟುವಟಿಕೆ, ಕಲ್ಲುತೂರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವವರು ಶೇ.2ರಷ್ಟು ಯುವಕರು ಮಾತ್ರ. ಅವರಲ್ಲಿ ಭಾರತದ ವಿರುದ್ಧ ಆಕ್ರೋಶ ಮನೆ ಮಾಡಿದೆ ಅನ್ನುವುದನ್ನು ನಾನು ಒಪ್ಪುವುದಿಲ್ಲ. ಮಾನವ ಹಕ್ಕುಗಳ ಹೋರಾಟಗಾರರು, ರಾಜಕಾರಣಿಗಳು ಮತ್ತು ಮಾಧ್ಯಮಗಳು ಹಾಗೆ ಹೇಳಿಕೊಳ್ಳುತ್ತಿದ್ದಾರೆ ಅಷ್ಟೇ. ಸರಕಾರ ಪ್ರಾಮಾಣಿಕವಾಗಿ ಮತ್ತು ಕಠಿಣವಾಗಿ ನಡೆದುಕೊಳ್ಳಬೇಕು ಮತ್ತು ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕು. ವಿಧ್ವಂಸಕ ಕೃತ್ಯಗಳತ್ತ ಪರಿವರ್ತನೆಗೊಂಡಿರುವ ಮನಸ್ಸುಗಳನ್ನು ಬಂದೂಕಿನ ಮೂಲಕ ಬಗೆಹರಿಸಿದ ಉದಾಹರಣೆ ಜಗತ್ತಿನಲ್ಲೆಲ್ಲೂ ಇಲ್ಲ. ಶಾಂತಿಯ ಬಗ್ಗೆ ಚಿಂತಿಸುವಂತೆ ಆ ಕಾಶ್ಮೀರಿ ಯುವಕರ ಮನಸ್ಸನ್ನು ಬದಲಾಯಿಸುವುದೇ ಇದಕ್ಕೆ ಪರಿಹಾರ. 

ಕಾಶ್ಮೀರಿ ಯುವಕನನ್ನು ಜೀಪಿಗೆ ಕಟ್ಟಿ ಚಲಾಯಿಸಿದ್ದು ಆ ಯುವ ಸೇನಾಧಿಕಾರಿಯ ಸಮಯಸ್ಫೂರ್ತಿಯ ತಂತ್ರವಾಗಿತ್ತು. ಆ ಕಾಶ್ಮೀರಿ ಯುವಕನನ್ನು ಜೀಪಿಗೆ ಕಟ್ಟಿ ಕರೆದೊಯ್ಯದೆ ಇರುತ್ತಿದ್ದರೆ ಅಲ್ಲಿ ಭಾರೀ ರಕ್ತಪಾತವಾಗುತ್ತಿತ್ತು ಅನ್ನುವುದು ನಿಸ್ಸಂಶಯ. ಆದರೆ ಇದನ್ನು ಬಹಳ ದೊಡ್ಡ ಪ್ರಮಾದವಾಗಿ ಬಿಂಬಿಸಲಾಗುತ್ತಿದೆ. ನಾನು ಆ ಅಧಿಕಾರಿಯನ್ನು ಬೆಂಬಲಿಸುವುದಿಲ್ಲ, ಹಾಗೆಯೇ ಟೀಕಿಸುವುದೂ ಇಲ್ಲ. ತನ್ನೊಂದಿಗಿದ್ದವರನ್ನು ಸುರಕ್ಷಿತವಾಗಿ ಕರೆತರಲು ಆ ಅಧಿಕಾರಿ ಸಮಯಸ್ಫೂರ್ತಿಯ ಯಾವುದಾದರೂ ಒಂದು ಉಪಾಯವನ್ನು ಹೂಡಲೇಬೇಕಾಗಿತ್ತು. 

ಭಾರತೀಯ ಸೇನೆ ಮಾತ್ರ ಚರ್ಚೆಯ ವಸ್ತು: ಕಾಶ್ಮೀರದಲ್ಲಿ ಸೇನೆ ತನ್ನ ಕೈಗಳನ್ನು ಕಟ್ಟಿ ಹಾಕಲ್ಪಟ್ಟ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದು ಬಹಳ ದೊಡ್ಡ ಸವಾಲು. ನಮ್ಮ ಜನರ ಜತೆಗೇ ಕಾರ್ಯನಿರ್ವಹಿಸಬೇಕಾದ್ದರಿಂದ ಭಾರತೀಯ ಸೇನೆ ಅತ್ಯಲ್ಪ ಬಲ ಪ್ರದರ್ಶನ ನಡೆಸಬೇಕೆಂಬ ಮಾರ್ಗದರ್ಶಿ ಸೂತ್ರದಡಿ ಕೆಲಸ ಮಾಡುತ್ತಿದೆ. ಪಾಕಿಸ್ಥಾನ ತನ್ನ ಶಕ್ತಿಮೀರಿ ಪ್ರಯತ್ನಿಸುತ್ತಿದ್ದರೂ 1947ರಿಂದ ಈಚೆಗೆ ಇಷ್ಟು ವರ್ಷಗಳ ಕಾಲ ಕಾಶ್ಮೀರ ನಮ್ಮ ಕೈತಪ್ಪಿಹೋಗದಂತೆ ನಮ್ಮ ಮಿಲಿಟರಿ ಕಾಪಾಡಿದೆ. ಆದರೆ, ವಾಯವ್ಯ ಗಡಿ ಪ್ರಾಂತ್ಯದಲ್ಲಿ ಪಾಕ್‌ ಸೇನೆ ಏನು ಮಾಡುತ್ತಿದೆ ನೋಡಿ. ತನ್ನವರ ವಿರುದ್ಧವೇ ಅದು ಎಲ್ಲ ಶಸ್ತ್ರಾಸ್ತ್ರ ಪ್ರಯೋಗ ನಡೆಸುತ್ತಿದೆ. ಈಚೆಗೆ ಅಮೆರಿಕ, ಸಿರಿಯದ ಮೇಲೆ ಬಲಶಾಲಿ ಬಾಂಬ್‌ ಹಾಕಿದೆ. ಅವರನ್ನೆಲ್ಲ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಭಾರತೀಯ ಸೇನೆ ಮಾತ್ರ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ವಸ್ತುವಾಗಿದೆ.

ಯುವ ಸೇನಾಧಿಕಾರಿಗಳಿಗೆ ನನ್ನ ಕಿವಿಮಾತೇನೆಂದರೆ; ಕಾಶ್ಮೀರದಲ್ಲಿ ನಡೆಯುತ್ತಿರುವ ಈ ಪರೀಕ್ಷೆ ತಾತ್ಕಾಲಿಕವಾದದ್ದು, ಹಾಗಾಗಿ ಧೃತಿಗೆಡಬೇಡಿ. ಪಾಕಿಸ್ಥಾನವು ಬಾಂಗ್ಲಾದಂತೆ ಮತ್ತೆ ಒಡೆದು ಹೋಳಾಗುತ್ತದೆ. ಕಾಶ್ಮೀರದಲ್ಲಿ ನಡೆಯುತ್ತಿರುವುದು ಒಂದು ಮಾನಸಿಕ ಸಮರ. ಬಂದೂಕು ಅಥವಾ ಕ್ಷಿಪಣಿಯಿಂದ ಮಾನಸಿಕ ಯುದ್ಧವನ್ನು ಗೆಲ್ಲಲಾಗದು. ಅದನ್ನು ಮಾನಸಿಕ ಪರಿವರ್ತನೆ, ಸಂಧಾನದ ಮೂಲಕ ಬಗೆಹರಿಸಬೇಕು. ಅದು ಕಾಶ್ಮೀರದ ಶಾಲಾಕಾಲೇಜು ವಿದ್ಯಾರ್ಥಿಗಳ ಸಹಿತ ಬೇರೆ ಬೇರೆ ಸ್ತರಗಳಲ್ಲಿ ನಡೆಯಬೇಕು. ಭಾರತ ಸರಕಾರ ಇದರಲ್ಲಿ ಸಮಸ್ಯೆಯನ್ನು ನಿಜವಾಗಿ ಅನುಭವಿಸುತ್ತಿರುವ ಕಾಶ್ಮೀರದ ಜನಸಾಮಾನ್ಯರನ್ನು ಸಹಭಾಗಿಗಳನ್ನಾಗಿಸಬೇಕೇ ಹೊರತು ಹುರಿಯತ್‌ ಅಥವಾ ವಿಪಕ್ಷಗಳನ್ನಲ್ಲ. ಕಾಶ್ಮೀರದಲ್ಲಿ ಸಹಜ ದಿನಗಳು ಮರಳಲು ಹುರಿಯತ್‌ ಯಾವತ್ತಿಗೂ ಬಿಡುವುದಿಲ್ಲ, ಏಕೆಂದರೆ ಅಂಥ ದಿನಗಳು ಬಂದರೆ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ತಾನು ಪ್ರದರ್ಶಿಸುವ ಭಾರತ ವಿರೋಧಿ ಮನೋಭಾವಕ್ಕೆ ಸಂಭಾವನೆಯಾಗಿ ಪಾಕಿಸ್ಥಾನ ಮತ್ತು ಕೊಲ್ಲಿ ದೇಶಗಳಿಂದ ಹರಿದುಬರುವ ಹಣಕಾಸು ನೆರವಿನಿಂದ ಅದು ಬದುಕುತ್ತಿದೆ. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ಭಾರತ ಸರಕಾರ ಕೂಡ ಹುರಿಯತ್‌ ಬಗ್ಗೆ ಮೃದು ಧೋರಣೆ ಅನುಸರಿಸುತ್ತ ಬಂದಿರುವುದು. 

ಮನಸ್ಸು – ಹೃದಯಗಳ ಸಮರ: ಕಾಶ್ಮೀರದಲ್ಲಿ ಕಲ್ಲುತೂರಾಟದಲ್ಲಿ ತೊಡಗಿರುವುದು ಬ್ರೈನ್‌ವಾಶ್‌ಗೆ ಒಳಗಾಗಿರುವ ಯುವಕರು. ಭಾರತೀಯ ಸೈನಿಕರ ಮೇಲೆ ಕಲ್ಲೆಸೆಯುವುದು ಸೈತಾನನಿಗೆ ಕಲ್ಲೆಸೆಯುವುದಕ್ಕೆ ಸಮಾನ ಎಂದು ಹುರಿಯತ್‌ ಮತ್ತು ಪಾಕ್‌ ಪರ ಧರ್ಮಗುರುಗಳು ಅವರ ತಲೆಯೊಳಗೆ ವಿಷ ತುಂಬಿಸಿದ್ದಾರೆ. ಶ್ರೀನಗರಕ್ಕೆ ಕಲ್ಲುಗಳನ್ನು ಆಮದು ಮಾಡಲಾಗುತ್ತಿದೆ, ಮೂರು ತಾಸು ಕಲ್ಲೆಸೆದರೆ 500 ರೂ.ಗಳಂತೆ ಸಂಭಾವನೆ ಕೊಡುತ್ತಾರೆ. ಒಂದು ರೈಫ‌ಲ್‌ ಕಿತ್ತುಕೊಂಡರೆ 10,000 ರೂ. ನೀಡುತ್ತಾರೆ. ಇದರ ಹಿಂದೆ ಇರುವುದು ಕೇವಲ ವ್ಯಾಪಾರ, ಯಾವುದೇ ಸಿದ್ಧಾಂತವಲ್ಲ. ತಮ್ಮ ಮೇಲೆ ಕಲ್ಲೆಸೆಯುವವರ ಮೇಲೆ ಗುಂಡು ಹಾರಿಸಲು ಸೈನಿಕರಿಗೆ ಅನುಮತಿ ಇಲ್ಲ. ಹಾಗಾಗಿ ಅವರು ಕಡಿಮೆ ಶಕ್ತಿಯ ಶಸ್ತ್ರ ಪ್ರಯೋಗಿಸಬೇಕಾಗಿದೆ. ಪೊಲೀಸರು, ಬಿಎಸ್‌ಎಫ್, ಸಿಆರ್‌ಪಿಎಫ್ ಪ್ರಯೋಗಿಸುವ ಪೆಲೆಟ್‌ ಬಂದೂಕಿನ ಬಗ್ಗೆ ಸೃಷ್ಟಿಯಾದ ವಿವಾದವನ್ನೇ ನೋಡಿ. ಅದರ ಪ್ರಯೋಗ ಆರಂಭವಾದದ್ದು ಒಮರ್‌ ಅಬ್ದುಲ್ಲಾ ಅಧಿಕಾರಾವಧಿಯಲ್ಲಿ. ಈಗ ಅವರೇ ಅದರಿಂದ ಕಾಶ್ಮೀರಿ ಯುವಕರ ಕಣ್ಣು, ಮುಖ ಹಾನಿಗೀಡಾಗುತ್ತಿವೆ ಎಂದು ಬೊಬ್ಬಿಡುತ್ತಿದ್ದಾರೆ. ಸೊಂಟದಿಂದ ಕೆಳಕ್ಕೆ ಮಾತ್ರ ಪೆಲೆಟ್‌ ಸಿಡಿಸಬೇಕೆಂದು ಆದೇಶವಿದೆ. ಯುವಕರು ಕಲ್ಲು ಎತ್ತಿಕೊಳ್ಳಲು ಕೆಳಕ್ಕೆ ಬಗ್ಗಿದಾಗ ಪೆಲೆಟ್‌ ಗನ್‌ ಸಿಡಿದರೆ ಮುಖಕ್ಕೆ ಗಾಯವಾಗದೆ ಇನ್ನೇನಾಗುತ್ತದೆ! 

ಬೂಟಾಟಿಕೆ ಬಯಲಿಗೆಳೆಯಿರಿ: ನಾನು ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾಗ ಹುರಿಯತ್‌ ಬಗ್ಗೆ ತೀರಾ ಕಠಿಣವಾಗಿ ವರ್ತಿಸಿದ್ದೆ. ನೀವು ಕಾಶ್ಮೀರದಲ್ಲಿ ಸಮಸ್ಯೆ ಸೃಷ್ಟಿಸಿದರೆ ನಾನು ಸುಮ್ಮನುಳಿಯಲಾರೆ ಎಂದು ಸ್ಪಷ್ಟಪಡಿಸಿದ್ದೆ. ಶುಕ್ರವಾರದ ಪ್ರಾರ್ಥನೆಯ ಸಮಯವನ್ನು ಕೋಮುವಾದಿ ಅಥವಾ ಭಾರತ ವಿರೋಧಿ ಭಾಷಣ ಬಿಗಿಯಲು ಉಪಯೋಗಿಸಬಾರದು ಎಂದು ಎಚ್ಚರಿಸಿದ್ದೆ. ನನ್ನ ಕರ್ತವ್ಯದ ಅವಧಿಯಲ್ಲಿ ನಾನು ನಡೆಸಿದ್ದು ಜನರ ಹೃದಯ ಮತ್ತು ಮನಸ್ಸನ್ನು ಗೆಲ್ಲುವ ಯುದ್ಧ. ಕಾಶ್ಮೀರದಲ್ಲಿ ಉಗ್ರವಾದಿ ಚಟುವಟಿಕೆ ಆರಂಭವಾದ 1990ರ ದಶಕದಲ್ಲಿ ನಾನಲ್ಲಿದ್ದೆ. ಉಗ್ರವಾದಿಗಳು ಮತ್ತು ಅವರ ಪ್ರೇರಕರಾದ ಹುರಿಯತ್‌ ಆರಂಭದಲ್ಲಿ ಶಾಲೆಗಳನ್ನು ಮತ್ತು ಆಡಳಿತ ಕಚೇರಿಗಳನ್ನು ನಾಶ ಮಾಡಿದರು. ಶಿಕ್ಷಣಕ್ಕೆ ತಡೆಯೊಡ್ಡಿ ಮದರಸ ಸಂಸ್ಕೃತಿ ಬೆಳೆಸಿದರು, ಮದರಸಕ್ಕೆ ಬರುವ ಕಾಶ್ಮೀರಿ ಮಕ್ಕಳಲ್ಲಿ ಭಾರತ ವಿರೋಧಿ ಭಾವನೆ ಬಿತ್ತಿದರು. ಆಗ ಮದರಸಗಳಲ್ಲಿ ಕಲಿತ ಮಕ್ಕಳು ಈಗ 15-20 ವರ್ಷ ವಯಸ್ಸಿನವರಾಗಿದ್ದಾರೆ. ಆಗ ಯುವ ಉಗ್ರರಾಗಿದ್ದವರು ಈಗ ಉಗ್ರವಾದಿ ನಾಯಕರಾಗಿದ್ದಾರೆ – ವಿಷವರ್ತುಲ ಪೂರ್ಣವಾಗಿದೆ!  

ಹೃದಯಕ್ಕೆ ಆಪರೇಶನ್‌ ಮಾಡಬಹುದು, ಮಿದುಳಿಗೂ ಮಾಡಬಹುದು. ಆದರೆ, ಅವೆರಡರ ನಡುವೆ ಇರುವ ಮನಸ್ಸನ್ನು ಹಾಗೆ ಬಿಚ್ಚಿ ರಿಪೇರಿ ಮಾಡಲಾಗುವುದಿಲ್ಲ. ಮನಸ್ಸನ್ನು ಕೆಡಿಸಲು ಅಥವಾ ಕಟ್ಟಲು ದೀರ್ಘ‌ಕಾಲ ಬೇಕು. ಒಮ್ಮೆ ಕೆಟ್ಟರೆ ಅದನ್ನು ಯಾವ ಅಣ್ವಸ್ತ್ರದಿಂದಲೂ ಸರಿಪಡಿಸಲಾಗದು. ಕಾಶ್ಮೀರದಲ್ಲಿ ಉಗ್ರವಾದವನ್ನು ಜೀವಂತವಾಗಿಟ್ಟಿರುವುದು ಇದೇ. 

ಈ ಮಾನಸಿಕ ಸಮರವನ್ನು ಗೆಲ್ಲಬೇಕಾದರೆ ಅಂಥದ್ದೇ ಪ್ರತಿತಂತ್ರವನ್ನು ಹೂಡಬೇಕು. ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳದಂತೆ, ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳದಂತೆ ಕಾಶ್ಮೀರಿಗಳಿಗೆ ತಿಳಿಹೇಳಬೇಕು. ಕಾಶ್ಮೀರದ ಬುದ್ಧಿವಂತ, ಆಲೋಚಿಸಬಲ್ಲ ಯುವಕ-ಯುವತಿಯರನ್ನು ಅಲ್ಲಿಂದ ಹೊರಕ್ಕೆ ತಂದು ಒಳ್ಳೆಯ ಶಿಕ್ಷಣ ಕೊಡಿಸಿ ಕಾಶ್ಮೀರಕ್ಕೆ ಮರಳಿ ಕಳುಹಿಸಬೇಕು. ಮೂರನೆಯದಾಗಿ; ಹಿಜ್ಬುಲ್‌ ಮುಜಾಹಿದೀನ್‌ ನಾಯಕ ಸಯ್ಯದ್‌ ಸಲಾಹುದ್ದೀನ್‌ನ ಪುತ್ರ ವೈದ್ಯನಾಗಿದ್ದಾನೆ, ಅವನು ಉಗ್ರನಾಗಿಲ್ಲ ಎಂದಾದರೆ ಇತರ ಕಾಶ್ಮೀರಿ ಯುವಕರೂ ಯಾಕೆ ಉಗ್ರವಾದದಿಂದ ದೂರವಿರಬಾರದು ಎಂಬ ಪ್ರಶ್ನೆಯನ್ನು ಅಲ್ಲಿ ಹುಟ್ಟು ಹಾಕಬೇಕು. ಕಾಶ್ಮೀರಕ್ಕಾಗಿ ಹೋರಾಡುವ ಪ್ರತ್ಯೇಕತಾವಾದಿ ನಾಯಕರ ಇಂತಹ ಠಕ್ಕುಗಳನ್ನು ಭಾರತ ಸರಕಾರ ಮತ್ತು ಮಾಧ್ಯಮಗಳು ಅಲ್ಲಿನ ಜನರ ಮುಂದೆ ಒತ್ತಿ ಹೇಳಬೇಕು. ನಿಮ್ಮ ಮಕ್ಕಳು ಮಾತ್ರ ಯಾಕೆ ಉಗ್ರವಾದಿಗಳಾಗಬೇಕು ಎಂದು ಕಾಶ್ಮೀರಿ ಜನಸಾಮಾನ್ಯರನ್ನು ಪ್ರಶ್ನಿಸಬೇಕು. 

ಲೆ| ಜ| ಡಿ. ಬಿ. ಶೇಖತ್ಕರ್‌ ದೀರ್ಘ‌ಕಾಲ ಕಾಶ್ಮೀರದಲ್ಲಿ ಸೇನಾಧಿಕಾರಿ ಯಾಗಿದ್ದವರು. ಉಗ್ರರು ಉಗ್ರವಾದಿ ಸಂಘಟನೆಗಳನ್ನು ನಡೆಸುವುದು ಮತ್ತು ನಿಯಂತ್ರಿಸುವುದು ಹೇಗೆ ಎಂಬ ಬಗ್ಗೆ ಜಗತ್ತಿನ ಸಾವಿರಕ್ಕೂ ಅಧಿಕ ಉಗ್ರರನ್ನು ಅಧ್ಯಯನ ಮಾಡಿದ್ದಾರೆ. ತನ್ನ ಸೇನಾ ಕರ್ತವ್ಯದ ಅವಧಿಯಲ್ಲಿ ದಾಖಲೆಯ 1,267 ಮಂದಿ ಕಾಶ್ಮೀರಿ ಉಗ್ರರನ್ನು ಶರಣಾಗತಗೊಳಿಸಿದ ಹೆಗ್ಗಳಿಕೆ ಅವರದು. “21ನೆಯ ಶತಮಾನದಲ್ಲಿ ಮಾನಸಿಕ ಸಮರ ತಂತ್ರ ಮತ್ತು ಮಾಧ್ಯಮಗಳ ಪಾತ್ರ’ ಎಂಬುದೇ ಅವರ ತೃತೀಯ ಪಿಎಚ್‌ಡಿ ಅಧ್ಯಯನದ ವಸ್ತು.

ಲೆ|ಜ| ಡಿ. ಬಿ. ಶೇಖತ್ಕರ್‌ ನಿವೃತ್ತ ಸೇನಾಧಿಕಾರಿ

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.