ಬಡಗಿಯ ಮಗ ಅಖಿಲ ಧನಂಜಯ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದ್ದೆ ಒಂದು ಅಚ್ಚರಿ!
ಕೀರ್ತನ್ ಶೆಟ್ಟಿ ಬೋಳ, Sep 30, 2019, 6:00 PM IST
ದೇಶೀಯ ಕ್ರಿಕೆಟ್ , ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಸಾವಿರಾರು ರನ್ ಗುಡ್ಡೆ ಹಾಕಿದರೂ ಅದೆಷ್ಟೋ ಕ್ರಿಕೆಟಿಗರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುವುದೇ ಇಲ್ಲ . ಪ್ರತಿಭೆ ಇದ್ದರೂ ಅದ್ರಷ್ಠ ಮಾತ್ರ ಮರೀಚಿಕೆಯೇ ಇವರಿಗೆ. ಒಮ್ಮೆ ಅದೃಷ್ಟ ಖುಲಾಯಿಸಿದರೆ ಸಾಕು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸುತ್ತೇನೆ ಎಂದು ಹಲವು ವರ್ಷಗಳಿಂದ ಕಾಯುತ್ತಿರುವ ಅದೆಷ್ಟೋ ಆಟಗಾರರು ನಮ್ಮ ಮುಂದೆ ಇದ್ದಾರೆ. ಆದರೆ ಇಲ್ಲೊಬ್ಬ ಕ್ರಿಕೆಟಿಗ ಮಾತ್ರ ಇದ್ಯಾವುದೇ ಕ್ರಿಕೆಟ್ ಆಡದೇ ನೇರವಾಗಿ ರಾಷ್ಟ್ರೀಯ ತಂಡದ ಬುಲಾವ್ ಪಡೆದಿದ್ದ. ಅದೂ ವಿಶ್ವಕಪ್ ಗೆ..!
ಅವನೇ ಅಖಿಲ ಧನಂಜಯ. ದ್ವೀಪ ರಾಷ್ಟ್ರದ ಸ್ಪಿನ್ನರ್ . ಆರಂಭದಿಂದ ಇಲ್ಲಿಯವರೆಗೂ ಸದಾ ಒಂದಿಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಅಖಿಲ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಸಂಶಯಾಸ್ಪದ ಬೌಲಿಂಗ್ ಶೈಲಿಯ ಕಾರಣಕ್ಕೆ ಐಸಿಸಿ ಇವರಿಗೆ ಒಂದು ವರ್ಷದ ಮಟ್ಟಿಗೆ ನಿಷೇಧ ಹೇರಿದೆ. ಅಖಿಲ ಮತ್ತೆ ತಮ್ಮ ಶೈಲಿ ಬದಲಿಸಿ ಪರೀಕ್ಷೆಗೆ ಒಳಪಟ್ಟು ಬರಬೇಕಿದೆ. ಅಂದಹಾಗೆ ಧನಂಜಯ ಮೊದಲ ಬಾರಿಗೆ ತಂಡಕ್ಕೆ ಅಯ್ಕೆಯಾದಗಲೇ ದ್ವೀಪ ರಾಷ್ಟ್ರದ ಮಾಧ್ಯಮಗಳೆಲ್ಲ ಕೆಂಡ ಕಾರಿದ್ದವು. ಅದಕ್ಕೆ ಕಾರಣವೂ ಇದೆ.
ನಿಮಗೆ ರಾಹುಲ್ ಬೋಸ್ ಅಭಿನಯದ ‘ ಚೈನ್ ಖುಲಿ ಕೆ ಮೈನ್ ಖುಲಿ’ ಸಿನಿಮಾ ನೆನಪಿರಬಹುದು. ಅದರಲ್ಲಿ ಒಬ್ಬ ಹುಡುಗ ಮ್ಯಾಜಿಕ್ ಬ್ಯಾಟ್ ನಲ್ಲಿ ಭರ್ಜರಿ ಬ್ಯಾಟ್ ಮಾಡುವಾಗ ಕೋಚ್ ಕಣ್ಣಿಗೊ ಬಿದ್ದು ನೇರವಾಗಿ ತಂಡಕ್ಕೆ ಆಯ್ಕೆಯಾಗುತ್ತಾನೆ. ಅಂತಹದೇ ಘಟನೆ ಅಖಿಲ ಧನಂಜಯ ಬಾಳಿನಲ್ಲಿ ನಡೆದಿತ್ತು.
ಮಹಾಮರಕ್ಕಲ ಕುರುಕುಲಸೂರಿಯ ಪತಬೆಂಡಿಗೆ ಅಖಿಲ ಧನಂಜಯ ಪೆರೆರ- ಇದು ಅಖಿಲ ಧನಂಜಯರ ಪೂರ್ಣ ಹೆಸರು. ಜನಿಸಿದ್ದು 4 ಅಕ್ಟೋಬರ್ 1993 ರಲ್ಲಿ ಪಣದುರ ಎಂಬಲ್ಲಿ. ತಂದೆ ಒಬ್ಬ ಬಡಗಿ. ದೊಡ್ಡ ಶಾಲೆಗೇನು ಹೋಗುವಷ್ಟು ಸೌಕರ್ಯ ಧನಂಜಯ ಮನೆಯಲ್ಲಿ ಇರಲಿಲ್ಲ. ಹಾಗಾಗಿ ಯಾವುದೇ ಕ್ಲಬ್ ಕ್ರಿಕೆಟ್ ಆಡುವ ಅವಕಾಶಗಳು ಧನಂಜಯಗೆ ಇರಲಿಲ್ಲ. ಹೀಗಾಗಿ ಅಂಡರ್ 19, ದೇಶೀಯ ಕ್ರಿಕೆಟ್, ಪ್ರಥಮ ದರ್ಜೆ ಕ್ರಿಕೆಟ್ ಎಲ್ಲೂ ಈತ ಆಡಿರಲಿಲ್ಲ.
ಅದು 2012. ಟಿ ಟ್ವೆಂಟಿ ವಿಶ್ವ ಕಪ್ ಗೆ ಎಲ್ಲಾ ದೇಶಗಳು ಸಿದ್ದತೆ ನಡೆಸುತ್ತಿದ್ದವು. ಪಾಕಿಸ್ತಾನದ ಸ್ಪಿನ್ನರ್ ಸಯೀದ್ ಅಜ್ಮಲ್ ಅದ್ಭುತ ಫಾರ್ಮ್ ನಲ್ಲಿದ್ದ ಸಮಯವದು. ಹಾಗಾಗಿ ಅಜ್ಮಲ್ ಸ್ಪಿನ್ ಜಾಲ ಭೇದಿಸಲು ಬ್ಯಾಟ್ಸ ಮನ್ ಗಳು ವಿವಿಧ ಉಪಾಯಗಳನ್ನು ಹುಡುಕುತ್ತಿದ್ದರು. ಲಂಕಾ ಆಟಗಾರರು ನೆಟ್ಸ್ ನಲ್ಲಿ ಅಭ್ಯಾಸ ನಡೆಸುವಾಗ ಸ್ಥಳೀಯ ಬೌಲರ್ ಗಳನ್ನು ಬಳಸುತ್ತಿದ್ದರು. ಆ ಪಟ್ಟಿಯಲ್ಲಿ ಇದ್ದ ಒಬ್ಬ ಅನನುಭವಿ ಯುವ ಬೌಲರ್ ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾನೆಂದು ಸ್ವತಃ ಆತನಿಗೆ ಗೊತ್ತಿರಲಿಲ್ಲ. ಆದರೆ ಇನ್ನೂ 18ರ ಹರೆಯದ ಚಿಗುರು ಮೀಸೆಯ ಧನಂಜಯನ ಜೀವನದ ಅದೃಷ್ಟದ ಬಾಗಿಲು ಆಗಲೇ ಅಗಲವಾಗಿ ತೆರೆದಿತ್ತು.
ಅಖಿಲ ಧನಂಜಯನ ಬೌಲಿಂಗ್ ವಿಶೇಷತೆ ಏನೆಂದರೆ ಎಡಗೈ ಆಫ್ ಬ್ರೇಕ್ ಬೌಲರ್ ಆಗಿರುವ ಆತ ಏಳು ರೀತಿಯಲ್ಲಿ ಚೆಂಡನ್ನು ತಿರುಗಿಸಬಲ್ಲ. ಲೆಗ್ ಸ್ಪಿನ್, ಗೂಗ್ಲಿ, ಕೆರಮ್ ಬಾಲ್, ದೂಸ್ರಾಗಳಿಂದ ಈತ ಬ್ಯಾಟ್ಸ್ ಮನ್ ಗಳಿಗೆ ಚಮಕ್ ನೀಡುತ್ತಿದ್ದ. ಲಂಕಾ ನಾಯಕ ಮಹೇಲ ಜಯವರ್ಧನೆ ನೆಟ್ಸ್ ನಲ್ಲಿ ಈತನ ಎಸೆತಗಳನ್ನು ಎದುರಿಸಲಾಗದೆ ಚಡಿಪಡಿಸಿದ್ದರು. ಆಗಲೇ ಜಯವರ್ಧನೆ ವಿಶ್ವ ಕ್ರಿಕೆಟ್ ಗೆ ಹೊಸ ಸ್ಪಿನ್ನರ್ ಒಬ್ಬನನ್ನು ಪರಿಚಯಿಸಲು ನಿರ್ಧರಿಸಿದ್ದು. ಹೀಗೆ ಶ್ರೀಲಂಕಾ ಕ್ರಿಕೆಟ್ ತಂಡದ ಆಯ್ಕೆಗಾರರ ಪಟ್ಟಿಯಲ್ಲಿ ಅಖಿಲ ಧನಂಜಯ ಎಂಬ ಅಪರಿಚಿತ ಹೆಸರು ಕಾಣಿಸಿಕೊಂಡಿತು.
ಆದರೆ ಈ ಆಯ್ಕೆ ಅಷ್ಟು ಸುಲಭದ್ದಾಗಿರಲಿಲ್ಲ. ಅದೆಷ್ಟೋ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದವರಿಗೆ ಈ ಆಯ್ಕೆಯನ್ನು ಒಪ್ಪಲಾಗಲಿಲ್ಲ. ಲಂಕಾ ನೆಲದ ಮಾಧ್ಯಮಗಳು ಕೂಡಾ ಆಯ್ಕೆ ಸಮಿತಿ ಮತ್ತು ನಾಯಕನ ವಿರುದ್ಧ ತಿರುಗಿ ಬಿದ್ದವು. ಹೀಗೆ ಸದ್ದಿಲ್ಲದೇ ಆಯ್ಕೆಯಾದ ಧನಂಜಯ ದೊಡ್ಡ ಸುದ್ದಿಯಾಗಿದ್ದರು.
2012 ಟಿ ಟ್ವೆಂಟಿ ವಿಶ್ವ ಕಪ್ . ಪಲ್ಲೆಕಲೆ ಮೈದಾನದಲ್ಲಿನ್ಯೂಜಿಲೆಂಡ್ ವಿರುದ್ದ ಅಂತಾರಾಷ್ಟೀಯ ಕ್ರಿಕೆಟ್ ಗೆ ಅಖಿಲ ಧನಂಜಯ ಪದಾರ್ಪಣೆ ಮಾಡಿದರು. ಆದರೆ ಕಿವೀಸ್ ಆಟಗಾರ ರಾಬ್ ನಿಕೋಲಸ್ ಹೊಡೆದ ಚೆಂಡು ಧನಂಜಯ ಎಡಕೆನ್ನೆಗೆ ಬಡಿದು ರಕ್ತ ಒಸರಿತ್ತು. ಆದರೂ ತನ್ನ ನಾಲ್ಕು ಓವರ್ ಕೋಟಾ ಮುಗಿಸಿದ ಧನಂಜಯ ಎರಡು ವಿಕೆಟ್ ಪಡೆದಿದ್ದರು. ಮೊದಲ ಪಂದ್ಯದಲ್ಲೇ ದವಡೆಯ ಮೂಳೆ ಮುರಿದಿತ್ತು. ಹೀಗಾಗಿ ಮುಂದಿನೆರಡು ಪಂದ್ಯಗಳಿಗೆ ಧನಂಜಯ ಅಲಭ್ಯರಾದರು.
ಅದೇ ವರ್ಷ ಏಕದಿನ ತಂಡಕ್ಕೂ ಪದಾರ್ಪಣೆ ಮಾಡಿದ ಧನಂಜಯ ನಂತರ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಲು ವಿಫಲವಾದರು. 2017ರಲ್ಲಿ ಮತ್ತೆ ತಂಡಕ್ಕೆ ಕಮ್ ಬ್ಯಾಕ್ ಮಾಡಿದ ಧನಂಜಯ ಮಿಂಚಲಾರಂಭಿಸಿದರು. ಭಾರತದ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಪಡೆದರು. ಆ ಪಂದ್ಯ ಭಾರತ ಗೆದ್ದರೂ ಅಖಿಲ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡ ಅಖಿಲ ಧನಂಜಯ 2019ರ ಐಸಿಸಿ ವರ್ಷದ ಏಕದಿನ ಬೌಲರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು.
2018ರಲ್ಲಿ ಒಮ್ಮೆ ಬೌಲಿಂಗ್ ಶೈಲಿಯ ಕಾರಣಕ್ಕೆ ನಿಷೇಧ ಅನುಭವಿಸಿದ್ದ ಧನಂಜಯ ಈಗ ಮತ್ತೆ ಅದೇ ಕಾರಣಕ್ಕೆ ನಿಷೇಧಕ್ಕೆ ಒಳಗಾಗಿದ್ದಾರೆ. ಅದೂ ಒಂದು ವರ್ಷದವರೆಗೆ . ನಿಷೇಧ ಮುಗಿಸಿ ಬೌಲಿಂಗ್ ಶೈಲಿ ಬದಲಾಯಿಸಿ ಧನಂಜಯ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವರೇ? ಕಾದು ನೋಡಬೇಕು .
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್