ಅಂಬಾಸಿಡರ್ ಎಂಬ ‘ರಾಜ ರಥ’ ; ಜನಪ್ರಿಯತೆಯ ಉತ್ತುಂಗದಿಂದ ಕುಸಿದು ಬಿದ್ದ ಬಗೆ ಹೇಗೆ?
ಭಾರತದ ರಸ್ತೆಗಳ ರಾಜನ ಉತ್ಪಾದನೆ ಸ್ಥಗಿತಗೊಂಡಿದ್ದು ಹೇಗೆ?
Team Udayavani, Oct 22, 2019, 6:51 PM IST
ಅದೊಂದು ಕಾಲವಿತ್ತು. ಕಾರು ಎಂದಾಕ್ಷಣ ಮೊದಲು ನಮ್ಮ ಮನಸ್ಸಿನಲ್ಲಿ ಮೂಡಿ ಬರುತ್ತಿದ್ದುದೇ ಅಂಬಾಸಿಡರ್ ಕಾರು. ಸುಮಾರು 50ಕ್ಕಿಂತ ಹೆಚ್ಚು ವರ್ಷಗಳ ಕಾಲ ಭಾರತದ ರಸ್ತೆಯನ್ನಾಳಿದ ಹೆಗ್ಗಳಿಕೆ ಈ ಕಾರಿಗಿದೆ. ಭಾರತೀಯರ ಮನದಲ್ಲಿ ಅಚ್ಚಳಿಯದೇ ಉಳಿದಿರುವುದು ಮಾತ್ರವಲ್ಲದೇ ಒಂದು ರೀತಿಯ ಭಾವನಾತ್ಮಕ ನಂಟನ್ನು ಕೂಡ ಹೊಂದಿತ್ತು. ಈ ಕಾರಣದಿಂದ ಅಂಬಾಸಿಡರ್ ಕಾರನ್ನು ಭಾರತದ ರಸ್ತೆಗಳ ರಾಜ ಎಂದು ಕರೆಯುತ್ತಿದ್ದರು.
ಅದರಲ್ಲೂ ಆ ಕಾಲದ ಚಲನಚಿತ್ರಗಳನ್ನೇ ನೋಡಿಕೊಂಡು ಬೆಳೆದವರಿಗಂತೂ ಅಂಬಾಸಿಡರ್ ಕಾರಿನ ಪರಿಚಯ ಅಚ್ಚಳಿಯದೆ ಉಳಿದುಬಿಟ್ಟಿರುತ್ತದೆ. ವಿಲನ್ ಗಳಿಗೆ ಕಪ್ಪು ಬಣ್ಣದ ಅಂಬಾಸಿಡರ್, ಗಣ್ಯರಿಗೆ, ನಾಯಕನಿಗೆ ಬಿಳಿ, ನೀಲಿ ಬಣ್ಣದ ಅಂಬಾಸಿಡರ್ ಕಾರುಗಳು ಆ ಕಾಲದ ಚಿತ್ರಗಳ ಪರ್ಮನೆಂಟ್ ಗಿರಾಕಿಗಳಾಗಿದ್ದವು! ಅಂಬಾಸಿಡರ್ ಕಾರಿನಲ್ಲೇ ನಡೆಯುತ್ತಿದ್ದ ಫೈಟಿಂಗ್, ಚೇಸಿಂಗ್ ದೃಶ್ಯಗಳನ್ನು ಚಿತ್ರಪ್ರೇಮಿಗಳು ಮರೆಯುವುದುಂಟೇ?
ಇನ್ನು ವಾಸ್ತವದಲ್ಲೂ ನಮ್ಮ ರಾಜಕಾರಣಿಗಳು ಇದೇ ಅಂಬಾಸಿಡರ್ ನಲ್ಲಿ ಕುಳಿತೇ ಜುಮ್ಮೆಂದು ಸಾಗುತ್ತಿದ್ದರು. ಪ್ರಧಾನಮಂತ್ರಿಯಿಂದ ಹಿಡಿದು ಮುಖ್ಯಮಂತ್ರಿ ಹಾಗೂ ಮಂತ್ರಿಗಳು, ಜಿಲ್ಲಾಧಿಕಾರಿಗಳು, ಉನ್ನತ ಪೊಲೀಸ್ ಅಧಿಕಾರಿಗಳನ್ನೆಲ್ಲಾ ಕರೆದೊಯ್ಯುತ್ತಿದ್ದುದು ಇದೇ ಅಂಬಾಸಿಡರ್ ಎಂಬ ನಾಲ್ಕು ಚಕ್ರದ ರಾಜ ರಥ!
ಭಾರತೀಯರ ಪಾಲಿಗೆ ಅಂಬಾಸಿಡರ್ ಕಾರು ಯಾವಾಗಲೂ ಅಚ್ಚು ಮೆಚ್ಚಿನ ಕಾರಾಗಿದ್ದರಿಂದ ಇದನ್ನು ಪ್ರೀತಿಯಿಂದ ಆಂಬಿ ಎಂದು ಕರೆಯುತ್ತಿದ್ದರು. ಬೆಲೆ, ನಿರ್ವಹಣೆ, ನಿರ್ಮಾಣ ಗುಣಮಟ್ಟ, ಅರಾಮಾದಾಯಕ, ಅನುಕೂಲ ಹೀಗೆ ಕಾರಿನ ಎಲ್ಲಾ ವಿಭಾಗದಲ್ಲೂ ಸೈ ಎನಿಸಿಕೊಂಡಿದೆ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳ ನೆಚ್ಚಿನ ಕಾರೆನಿಸಿಕೊಂಡಿದ್ದ ಐಕಾನಿಕ್ ಅಂಬಾಸಿಡರ್ ಕಾರುಗಳಿಗೆ ಶೇ. 16ರಷ್ಟು ಆದಾಯ ಸರಕಾರದಿಂದಲೇ ಹರಿದುಬರುತ್ತಿತ್ತು. ಅಂಬಾಸಿಡರ್ ಕಾರನ್ನೇ ಒಂದು ದಶಕದ ಹಿಂದಿನವರೆಗೂ ದೇಶದ ಪ್ರಧಾನ ಮಂತ್ರಿಗಳ ಅಧಿಕೃತ ವಾಹನವಾಗಿ ಬಳಕೆ ಮಾಡಲಾಗುತ್ತಿತ್ತು.
ಈ ಕಾರಿನ ಮಾದರಿಯನ್ನು ಮೊದಲು ಇಂಗ್ಲೆಂಡ್ನಲ್ಲಿರುವ ಆಕ್ಸ್ ಫರ್ಢ್ ಕೌಲೆಯಲ್ಲಿರುವ ಮೋರಿಸ್ ಮೋಟಾರ್ ಕಂಪೆನಿ 1957 ರಿಂದ 1959ರವರೆಗೆ ತಯಾರಿಸುತ್ತಿತ್ತು. ಇದೇ ಮೋರಿಸ್ ಆಕ್ಸ್ ಫರ್ಢ್ 3 ಮೊಡೆಲ್ ಅನ್ನು ಸ್ವಲ್ಪ ಬದಲಾವಣೆ ಮಾಡಿ 1957-58ರ ಅಸುಪಾಸಿನಲ್ಲಿ ಭಾರತದಲ್ಲಿ ಅಂಬಾಸಿಡರ್ ಕಾರ್ ಆಗಿ ರೂಪಿಸಲಾಯಿತು. ಸಿ.ಕೆ ಬಿರ್ಲಾ ಒಡೆತನದಲ್ಲಿ ಪಶ್ಮಿಮಬಂಗಾಳದ ಉತ್ತರಪಾರದಲ್ಲಿ ಅಂಬಾಸಿಡರ್ ಘಟಕವನ್ನು ಕೂಡ ತೆರೆಯಲಾಗಿತ್ತು. ಸ್ವಾತಂತ್ರ್ಯಕ್ಕೂ ಮುನ್ನ ಗುಜರಾತ್ನಲ್ಲಿ ಮೋರಿಸ್ ಕಂಪೆನಿ ಕಾರುಗಳ ಜೋಡಣಾ ಘಟಕವನ್ನು ಹೊಂದಿತ್ತು. ನಂತರದಲ್ಲಿ ಅದೇ ಉದ್ದಿಮೆ ಹಿಂದೂಸ್ಥಾನ ಮೋಟಾರ್ಸ್ ಹೆಸರಿನಲ್ಲಿ ಅಂಬಾಸಿಡರ್ ಕಾರಿನ ಜನ್ಮಕ್ಕೆ ಕಾರಣವಾಯಿತು.
ಬ್ರಿಟೀಷ್ ಮೂಲದ ಹೊರತಾಗಿಯೂ ಅಂಬಾಸಿಡರ್ ಅನ್ನು ಭಾರತೀಯರ ವಿಶ್ವಾಸಾರ್ಹ ಕಾರೆಂದು ಪರಿಗಣಿಸಲಾಗುತ್ತದೆ. ಯಾವುದೇ ಭೂಪ್ರದೇಶಗಳಿಗೆ ಹೊಂದುವಂತಹ ಕಾರು ಇದು. ದೃಢವಾದ ನಿರ್ಮಾಣ, ಗುಣಮಟ್ಟವನ್ನು ಕಾಯ್ದುಕೊಂಡಿರುವ ಅಂಬಾಸಿಡರ್ ಈಗಲೂ ಅತ್ಯಂತ ಸುರಕ್ಷಿತ ಕಾರೆನಿಸಿಕೊಂಡಿದ್ದು, ಕಾರಿನೊಳಗೆ ಹೆಚ್ಚು ಸ್ಥಳವಕಾಶ ಕಲ್ಪಿಸಿರುವುದು ಆರಾಮ ಹಾಗೂ ಹೆಚ್ಚು ಅನುಕೂಲ ಪ್ರಯಾಣವನ್ನು ಖಾತ್ರಿ ಪಡಿಸುತ್ತದೆ.
ಕಾಲಕಾಲಕ್ಕೆ ತನ್ನ ವಿನ್ಯಾಸದಲ್ಲಿ ಬದಲಾವಣೆ ಪಡೆದುಕೊಳ್ಳುತ್ತಿದ್ದ ಅಂಬಾಸಿಡರ್, 1957ರಲ್ಲಿ ಮಾರ್ಕ್ 1, 1962ರಲ್ಲಿ ಮಾರ್ಕ್ 2, 1977ರಲ್ಲಿ ಮಾರ್ಕ್ 3, 1979ರಲ್ಲಿ ಮಾರ್ಕ್ 4, 1990ರಲ್ಲಿ ಹೆಚ್ಚು ಪ್ರಿಮೀಯಂ ಸೌಲಭ್ಯಗಳುಳ್ಳ ಅಂಬಾಸಿಡರ್ ನೋವಾ, 1992ರಲ್ಲಿ ಅಂಬಾಸಿಡರ್ 1800 ಐಎಸ್ಝಡ್ ವರ್ಷನ್ಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡಿತ್ತು. ಅಧುನಿಕ ಕಾಲಘಟ್ಟದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೆಚ್ಚು ಪರಿಷ್ಕೃತ ಅಂಬಾಸಿಡರ್ ಕ್ಲಾಸಿಕ್ ಮಾರುಕಟ್ಟೆಗೆ ತಂದಿತ್ತು. 2003ರಲ್ಲಿ ಅದು ಅಂಬಾಸಿಡರ್ ಗ್ರ್ಯಾಂಡ್, 2004 ಅವಿಗೊ, 2013ರಲ್ಲಿ ಅಂಬಾಸಿಡರ್ ಎನ್ಕೋರ್ ಪರಿಚಯಸಿತ್ತು.
ಈ ಕಾರಿನ ಇನ್ನೊಂದು ವಿಶೇಷತೆಯೆಂದರೇ ದೇಶಕ್ಕೆ ಮೊದಲ ಡೀಸೆಲ್ ಇಂಜಿನ್ ಅನ್ನು ಪರಿಚಯಿಸಿದ್ದು ಅಂಬಾಸಿಡರ್. ಹಿಂದೂಸ್ಥಾನ್ ಮೋಟಾರ್ಸ್ ಸತತ 56 ವರ್ಷಗಳ ಕಾಲ ಈ ಕಾರುಗಳ ಉತ್ಪಾದನೆ ಮಾಡಿತ್ತು. ಅಷ್ಟು ಕಾರುಗಳ ಪೈಕಿ ಶೇ.16% ನ್ನು ಭಾರತ ಸರ್ಕಾರವೇ ಕೊಂಡುಕೊಂಡಿತ್ತು. ಈ ಕಾರು ಭಾರತದ ಘಟಾನುಘಟಿ ನಾಯಕರ ಮೆಚ್ಚಿನ ಕಾರು ಕೂಡ ಆಗಿತ್ತು. ಭಾರತದಲ್ಲಿ ಅತೀ ಹೆಚ್ಚು ವರುಷಗಳ ಕಾಲ ಉತ್ಪಾದನೆಯಾದ ಕಾರೆಂದರೇ ಅಂಬಾಸಿಡರ್ ಮಾತ್ರ. ಸಮೀಕ್ಷೆ ಪ್ರಕಾರ ಭಾರತದ ಕಾರು ಅಪಘಾತ ಪ್ರಕರಣಗಳಲ್ಲಿ ಅತೀ ಹೆಚ್ಚು ಜನರ ಪ್ರಾಣವನ್ನು ಉಳಿಸಿರುವ ಕಾರು ಇದು. 2013ರಲ್ಲಿ ವರ್ಲ್ಡ್ ಬೆಸ್ಟ್ ಟ್ಯಾಕ್ಸಿ ಎಂಬ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿತು. ಆ ಮೂಲಕ ವಿಶ್ವದಲ್ಲೇ ಮನೆ ಮಾತಾಗಿತ್ತು.
ಈ ಕಾರುಗಳ ಉತ್ಪಾದನೆ ಸ್ಥಗಿತಗೊಂಡಿದ್ದು ಹೇಗೆ?
ಕಾರು ಎಂದರೆ ಅಂಬಾಸಿಡರ್ ಎಂಬ ಕಲ್ಪನೆಯನ್ನು ಅಂಬಾಸಿಡರ್ ಮೂಡಿಸಿತ್ತು. 1990ರ ನಂತರ ಭಾರತಕ್ಕೆ ವಿದೇಶಿ ಕಾರುಗಳು ಬರಲು ಆರಂಭಿಸಿದಾಗ ಹಳೆ ವಿನ್ಯಾಸವನ್ನು ಹೊಂದಿದ್ದ ಅಂಬಾಸಿಡರ್ ಕ್ರಮೇಣ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳಲಾರಂಭಿಸಿತು. ಹಣಕಾಸಿನ ಕೊರತೆ ಕೂಡ ಅಂಬಾಸಿಡರ್ ಕಾರು ನೇಪತ್ಯಕ್ಕೆ ಸರಿಯಲು ಪ್ರಮುಖ ಕಾರಣ.
ನಂತರದ ದಿನಗಳಲ್ಲಿ ನಿರ್ದಿಷ್ಟ ಮಟ್ಟದ ಗ್ರಾಹಕರನ್ನು ಸೆಳೆಯುವಲ್ಲಿ ಇದು ವಿಫಲವಾಯಿತು. ಹಿಂದೂಸ್ಥಾನ್ ಮೋಟಾರ್ ಸಂಸ್ಥೆ 2000ದಿಂದ ಈಚೇಗೆ ಭಾರೀ ನಷ್ಟವನ್ನು ಅನುಭವಿಸಿತು. ತನ್ನ ನೌಕರರಿಗೆ ಸಂಬಳವನ್ನು ಕೂಡ ಕೊಡಲಾಗಲಿಲ್ಲ. ಅಂತಿಮವಾಗಿ 2014ರಲ್ಲಿ ಅಂಬಾಸಿಡರ್ ಕಾರುಗಳ ಉತ್ಪಾದನೆಗೆ ಹಿಂದೂಸ್ಥಾನ್ ಮೋಟಾರ್ಸ್ ಗುಡ್ ಬೈ ಹೇಳಿತು. ಆದರೇ ಭಾರತೀಯರ ಮನದಲ್ಲಿ ಇವತ್ತಿಗೂ ಈ ಕಾರು ಅಚ್ಚಳಿಯದೇ ಉಳಿದಿದೆ. ಇಂದಿಗೂ ಕೂಡ ಕಾರುಗಳನ್ನು ಟ್ಯಾಕ್ಸಿಗಳ ರೂಪದಲ್ಲಿ ರೈಲ್ವೇ ನಿಲ್ದಾಣಗಳಲ್ಲಿ ಕಾಣಬಹುದಾಗಿದೆ.
– ಮಿಥುನ್ ಮೊಗೇರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು