ಯಕ್ಷರಂಗದ ಮೇರು ಗಿರಿ ದಶಾವತಾರಿ ಮಟಪಾಡಿ ವೀರಭದ್ರ ನಾಯಕರು!
Team Udayavani, Apr 29, 2018, 10:45 AM IST
ಬಡಗುತಿಟ್ಟು ಯಕ್ಷಗಾನದಲ್ಲಿ ನಡುತಿಟ್ಟು ತನ್ನದೇ ಆದ ವಿಭನ್ನ ಶೈಲಿಯಾಗಿದ್ದು, ಅದರಲ್ಲೂ ಹಾರಾಡಿ- ಮಟಪಾಡಿ ಶೈಲಿ ಪ್ರಮುಖವಾದದ್ದು. ಪರಂಪರೆಯ ಚೌಕಟ್ಟಿನಲ್ಲಿ ಕಲೆಯನ್ನು ಬೆಳಗಿದ ಹಲವು ಮೇರು ಯಕ್ಷಗಾನ ಕಲಾವಿದರಲ್ಲಿ ಹಾರಾಡಿ ರಾಮಗಾಣಿರು ಮತ್ತು ಮಟಪಾಡಿ ವೀರಭದ್ರ ನಾಯಕರು ಸ್ಮರಣೀಯರು, ಸದಾ ನೆನಪಿಗೆ ಬರುವವರು . ಹಿರಿಯ ಕಲಾವಿದರೂ ಕೆಲ ಪಾತ್ರಗಳ ವಿಮರ್ಶೆಗಳಿಗಿಳಿದಾಗಲೋ, ನಾಟ್ಯದ ಕುರಿತಾಗಿ ಮಾತನಾಡುವ ವೇಳೆ ದಶಾವತಾರಿ ದಿವಂಗತ ವೀರಭದ್ರ ನಾಯ್ಕರ ಹೆಸರು ಇಂದಿಗೂ ಕೇಳಿ ಬರುತ್ತಿರುವುದು ಅವರ ಕೊಡುಗೆಗೆ , ಸಾಧನೆಗೆ ಸಾಕ್ಷಿಯಾಗಿದೆ.
ಯಕ್ಷಗಾನದ ಭೂಮಿಯಾದ ಬ್ರಹ್ಮಾವರದ ಸಮೀಪದ ಮಟಪಾಡಿ ಎಂಬಲ್ಲಿ 1906 ರ ಜೂನ್ 21 ರಂದು ಮಟಪಾಡಿ ನಾರಾಯಣ ನಾಯಕರ ಸುಪುತ್ರನಾಗಿ ಜನಿಸಿದ ವೀರಭದ್ರ ನಾಯಕರು 6 ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿರುವುದು, ಆದರೆ ಯಕ್ಷರಂಗಕ್ಕೆ ಅವರ ಕೊಡುಗೆ ಅಪಾರ.
ಬಾಲ್ಯದಲ್ಲಿ ಕಲೆಯತ್ತ ಆಸಕ್ತರಾಗಿದ್ದ ಅವರು ತಂದೆಯೊಂದಿಗೆ ಊರಿನ ಸುತ್ತಮುತ್ತಲು ಆಗುತ್ತಿದ್ದ ಆಟಗಳನ್ನು ನೋಡಲು ತೆರಳಿ ಕಲೆಯ ಬಗೆಗೆ ಅಪಾರ ಅಸಕ್ತಿ ತಳೆದವರಂತೆ ವೀರಭದ್ರ ನಾಯಕರು . ಇವರ ಕುಟುಂಬದಲ್ಲೂ ಕಲಾವಿದರಿದ್ದುದು ಇವರಲ್ಲಿ ಅಡಗಿದ್ದ ಮೇರು ನಾಟ್ಯಗಾರ, ನಟ ಲೋಕಮುಖಕ್ಕೆ ಪ್ರಕಟಗೊಳ್ಳಲು ಸಾಧ್ಯವಾಯಿತು.
ಚಿಕ್ಕಪ್ಪ ಚಂದು ನಾಯಕ ಮತ್ತು ಮುಕುಂದ ನಾಯಕ್ ಅವರ ಪ್ರಭಾವದಿಂದ ಪ್ರೇರೇಪಿತ ರಾದ ನಾಯಕರು ಸಣ್ಣ ವಯಸ್ಸಿನಲ್ಲೇ ಮೇಳಕ್ಕೆ ಸೇರಿಕೊಂಡು ಹಂತ ಹಂತವಾಗಿ ಮಹಾನ್ ಕಲಾವಿದನಾಗಿ ರೂಪುಗೊಂಡವರು.
ಯಕ್ಷಗಾನ ಕೇಂದ್ರಗಳಿಲ್ಲದ ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲವನ್ನೂ ಮೇಳದ ತಿರುಗಾಟದಲ್ಲೇ ಕಲಿಯಬೇಕಿತ್ತು. ಮಾರಣಕಟ್ಟೆ ಮೇಳಕ್ಕೆ ಸೇರಿಕೊಂಡ ಅವರು ಅದೇ ಮೇಳದಲ್ಲಿ ಬಹುಕಾಲ ತಿರುಗಾಟ ಮಾಡಿರುವುದು ವಿಶೇಷ .
ಪಾಂಡೇಶ್ವರ ಪುಟ್ಟಯ್ಯ ಎನ್ನುವ ಆ ಕಾಲದ ಶ್ರೇಷ್ಠ ಯಕ್ಷಗಾನ ನಾಟ್ಯಗಾರರಿಂದ ಹೆಜ್ಜೆ ಕಲಿತ ವೀರಭದ್ರ ನಾಯಕರು ಸಕ್ಕಟ್ಟು ಗಣಪತಿ ಪ್ರಭುಗಳಿಂದ ಮಾತುಗಾರಿಕೆಯನ್ನು ಕಲಿತರಂತೆ.
ಹಿಮ್ಮೇಳದ ಬಗೆಗೂ ಆಸಕ್ತಿ ತಳೆತ ನಾಯಕರು ದಿವಂಗತ ಕುಂಜಾಲು ಶೇಷಗಿರಿ ಕಿಣಿ ಅವರಲ್ಲಿ ಭಾಗವತಿಕೆಯ ಬಗೆಗೆ ಅಭ್ಯಸಿಸಿದರು. ಹೆಜ್ಜೆಗಾರಿಕೆಯಲ್ಲಿ ಹೊಸತನವನ್ನು ಕಂಡುಕೊಂಡ ನಾಯಕರು ವಿನೂತನ ಮಟಪಾಡಿ ಶೈಲಿಯ ನಾಟ್ಯ ಶೈಲಿಯನ್ನು ಯಕ್ಷರಂಗಕ್ಕೆ ನೀಡಿದವರು . ಆ ಶೈಲಿ ಇಂದು ಬೆರಳೆಣಿಕೆಯ ಕಲಾವಿದರಲ್ಲಿ ಕಾಣಬೇಕಾಗಿರುವುದು ನೋವಿನ ಸಂಗತಿ.
ಆ ಕಾಲದ ಪ್ರಸಿದ್ಧ ವಾಗ್ಮಿ ಮಲ್ಪೆ ಶಂಕರನಾರಾಯಣ ಸಾಮಗರೊಂದಿಗೆ ತಿರುಗಾಟ ಮಾಡಿದ ಅವರು ಮಾತುಗಾರಿಕೆಯಲ್ಲಿ ಹೆಚ್ಚುಗಾರಿಕೆಯನ್ನು ಸಾಧಿಸಲು ಕಾರಣವಾಯಿತು ಮತ್ತು ಪ್ರದರ್ಶನಗಳ ಸೊಬಗು ಹೆಚ್ಚಲು ಕಾರಣವಾಯಿತು ಎನ್ನುವುದು ಹಲವು ಹಿರಿಯ ಪ್ರೇಕ್ಷಕರ ಅಭಿಪ್ರಾಯವಾಗಿದೆ.
ಯಾವ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದ ವೀರಭದ್ರ ನಾಯಕರು ಶಶಿಪ್ರಭೆಯಂತಹ ಸ್ತ್ರೀ ವೇಷವನ್ನೂ ನಿರ್ವಹಿಸಿದ್ದರಂತೆ . ನೃತ್ಯದಲ್ಲೇ ಹೆಸರುವಾಸಿಯಾದ ಇವರ ಅತಿಕಾಯ, ತಾಮ್ರಧ್ವಜ, ಮೈರಾವಣ, ಸುಧನ್ವ, ಬಬ್ರುವಾಹನ , ಶುಕ್ರಾಚಾರ್ಯ, ಲಂಕಾದಹನದ ಹನುಮಂತ, ರುಕ್ಮಾಂಗದ ಮೊದಲಾದ ಪಾತ್ರಗಳು ಅಪಾರ ಖ್ಯಾತಿ ತಂದುಕೊಟ್ಟಿದ್ದವು.
ಗುರು ಕುಂಜಾಲು ಶೇಷಗಿರಿ ಕಿಣಿ, ಶ್ರೀನಿವಾಸ ಉಪ್ಪೂರ, ನಾರಣಪ್ಪ ಉಪ್ಪೂರ, ಜಾನುವಾರುಕಟ್ಟೆ ಗೋಪಾಲ ಕೃಷ್ಣ ಕಾಮತ್, ಹಿರಿಯಡಕ ಗೋಪಾಲ ರಾಯರು, ತಿಮ್ಮಪ್ಪ ನಾಯ್ಕ ಮೊದಲಾದ ದಿಗ್ಗಜರೊಡನೆ ಒಡಾನಾಟವನ್ನು ವೀರಭದ್ರ ನಾಯಕರು ಹೊಂದಿದ್ದವರು.
ಮಾರಣಕಟ್ಟೆಯಲ್ಲಿ ಸುದೀರ್ಘ ತಿರುಗಾಟದ ಬಳಿಕ ಮಂದಾರ್ತಿ, ಹಿರಿಯಡಕ, ಸಾಲಿಗ್ರಾಮ ಡೇರೆ ಮೇಳದಲ್ಲೂ ತನ್ನ ಪಾತ್ರಗಳನ್ನು ಮೆರೆಸಿದವರು.
ತನ್ನ ಸಾಧನೆಗೆ ತಕ್ಕಂತೆ ರಾಷ್ಟ್ರ ಪ್ರಶಸ್ತಿ, ರಾಜ್ಯಪ್ರಶಸ್ತಿ, ನೂರಾರು ಸನ್ಮಾನಗಳನ್ನು ಪಡೆದಿದ್ದ ವೀರಭದ್ರ ನಾಯಕರು 1982 ರ ಮಾರ್ಚ್ 14 ರಂದು ಇಹಲೋಕ ತ್ಯಜಿಸಿದರು.
ಬೇಡರ ಕಣ್ಣಪ್ಪ ಪ್ರಸಂಗವನ್ನು ಯಕ್ಷಗಾನ ರಂಗಕ್ಕೆ ತಂದ ಕೀರ್ತಿ ವೀರಭದ್ರ ನಾಯಕರಿಗೆ ಸಲ್ಲುತ್ತದೆ. ಪ್ರಸಂಗದಲ್ಲಿನ ಕೈಲಾಸ ಶಾಸ್ತ್ರಿ ಪಾತ್ರ ಅವರಲ್ಲಿನ ಹಾಸ್ಯಗಾರರನ್ನು ಅಭಿಮಾನಿಗಳ ಮುಂದೆ ತಂದಿಟ್ಟಿತ್ತು.
ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರುವಾಗಿ ಸೇವೆ ಸಲ್ಲಿಸಿದ ವೀರಭದ್ರ ನಾಯಕರು ದಿಗ್ಗಜ ಶಿಷ್ಯರನ್ನೂ ಸಿದ್ದಪಡಿಸಿರುವುದು ಮಟಪಾಡಿ ಶೈಲಿ ಮುಂದುವರಿಯಲು ಕಾರಣವಾಗಿದೆ. ಮಾರ್ಗೋಳಿ ಗೋವಿಂದ ಸೇರಿಗಾರ್, ಹೆರಂಜಾಲು ವೆಂಕಟರಮಣ ಮತ್ತು ಬನ್ನಂಜೆ ಸಂಜೀವ ಸುವರ್ಣ ಅವರು ಶಿಷ್ಯರಲ್ಲಿ ಪ್ರಮುಖರು.
ಅಳಿವುದೇ ಕಾಯ.ಉಳಿಯುವುದೇ ಕೀರ್ತಿ ಎಂಬಂತೆ ಮಟಪಾಡಿ ವೀರಭದ್ರ ನಾಯಕರು ಇಂದಿಗೂ ಯಕ್ಷಗಾನ ರಂಗದಲ್ಲಿ ನೆನಪಿಗೆ ಬರುವ ದಿವ್ಯ ಚೇತನವಾಗಿದ್ದಾರೆ.
(ಪುಸ್ತಕದಿಂದ ಆಯ್ದ ಭಾಗ)
ಚಿತ್ರ ಕೃಪೆ : http://bayalata.com/
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ