
ಕಳೆದುಕೊಂಡ ಹಲವು,ಸೇರ್ಪಡೆಯಾದ ಹಲವು; ಬೆಳಗುತ್ತಿದೆ ಯಕ್ಷ ಲೋಕ
Team Udayavani, Sep 30, 2018, 4:25 PM IST

(ಕಳೆದ ಸಂಚಿಕೆಯಿಂದ ) ಯಕ್ಷಗಾನವೆನ್ನುವುದು ಈಗ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವ ಮಟ್ಟಿಗೆ ಬೆಳೆದಿದೆ ಆದರೆ ಅದರ ಮೂಲ ಆರಾಧನಾ ಕಲೆ. ಯಕ್ಷಗಾನದ ಮೂಲಕ ಅನಕ್ಷರಸ್ಥರಿಗೂ ಪೌರಾಣಿಕ ಪ್ರಜ್ಞೆ ಮೂಡಿಸುವ ಉದ್ದೇಶವೂ ಕಲೆಯ ಹುಟ್ಟಿನ ಹಿಂದೆ ಅಡಗಿದೆ ಎನ್ನುವುದು ಸಂಶೋಧನೆಯಿಂದ ತಿಳಿದು ಬಂದಿದೆ ಮತ್ತು ಹಲವು ವಿದ್ವಾಂಸರ ಅಭಿಪ್ರಾಯವೂ ಆಗಿದೆ.
ಪುಣ್ಯ ಕ್ಷೇತ್ರಗಳು, ದೇವಾಲಯಗಳಿಂದ ಹೊರಡುವ ಬಯಲಾಟದ ಮೇಳಗಳಿಗೆ ಹರಕೆಗಳ ಆಟಗಳೇ ಜೀವಾಳ. ಸಾಮಾನ್ಯವಾಗಿ ತೆಂಕು ಬಡಗಿನಲ್ಲಿ ಹಲವು ಹರಕೆ ಮೇಳಗಳಿವೆ.ಪ್ರಮುಖವಾಗಿ ಕಟೀಲು ಕ್ಷೇತ್ರದ ತೆಂಕು ತಿಟ್ಟಿನ 6 ಮೇಳಗಳು ಪ್ರಮುಖವಾದದ್ದು, ಈ ಎಲ್ಲಾ ಮೇಳಗಳಿಗೂ 6 ತಿಂಗಳ ಕಾಲ ಸಂಪೂರ್ಣವಾಗಿ ಹರಕೆ ಆಟಗಳಿವೆ. ಇನ್ನು ಬಡಗಿನಲ್ಲಿ ಶ್ರೀಕ್ಷೇತ್ರ ಮಂದಾರ್ತಿಯ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ 5 ಮೇಳಗಳಿಗೂ 6 ತಿಂಗಳುಗಳ ಕಾಲ ಹರಕೆ ಬಯಲಾಟಗಳಿವೆ. ಸುದೀರ್ಘ ಬುಕ್ಕಿಂಗ್ ಆಗಿರುವ ಹಿನ್ನಲೆಯಲ್ಲಿ ಈಗ ಮಳೆಗಾಲದಲ್ಲೂ ದೇವಾಲಯದ ಸಭಾಂಗಣದಲ್ಲಿ ದಿನಕ್ಕೆರಡು ಮಂದಿಯ ಹರಕೆಯ ಆಟಗಳನ್ನು ಕಾಲಮಿತಿಯ ರೂಪದಲ್ಲಿ ದೇವಿಗೆ ಸಲ್ಲಿಸಲಾಗುತ್ತಿದೆ.
ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳದ ಮೇಳ ತೆಂಕು ತಿಟ್ಟಿನ ಡೇರೆ ಮೇಳ ಆಗಿದ್ದರೆ ಈಗ ಸಂಪೂರ್ಣ ಹರಕೆ ಮೇಳವಾಗಿ ಬದಲಾಗಿದೆ. ನಾಡಿನ ವಿವಿಧೆಡೆ ಕಾಲಮಿತಿ ಪ್ರದರ್ಶನಗಳನ್ನು ನೀಡುತ್ತಿದೆ.
40 ಕ್ಕೂ ಹೆಚ್ಚು ವೃತ್ತಿ ಮೇಳಗಳಲ್ಲಿ 500 ಕ್ಕೂ ಹೆಚ್ಚು ಕಲಾವಿದರು ಯಕ್ಷಗಾನದ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆಲ್ಲಾ ಯಕ್ಷಗಾನ ರಂಗದ ಕಲಾವಿದರು ತ್ಯಾಗಿಗಳಾಗುವುದು ಅನಿವಾರ್ಯವಾಗಿತ್ತು. ಕಾರಣ ಸಂಪರ್ಕ ಸಾಧನಗಳ ಕೊರತೆ, ವ್ಯವಸ್ಥೆಗಳ ಕೊರತೆ ,ಹಣದ ಕೊರತೆ ಇತ್ಯಾದಿಗಳು ಕಲಾವಿದರನ್ನು ಕಿತ್ತು ತಿನ್ನುತ್ತಿದ್ದವು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು ಕೆಲ ಕಲಾವಿದರು ಸ್ವಂತ ಕಾರಿನಲ್ಲಿ ದಿನಕ್ಕೆ 4 ಕಾರ್ಯಕ್ರಮದಲ್ಲಿ ಭಾಗಿಯಾಗಿ ಉತ್ತಮ ಸಂಭಾವನೆಯನ್ನು ಪಡೆಯುವ ಮಟ್ಟಿಗೆ ಬಂದು ನಿಂತಿದೆ.
ಈ ಮಟ್ಟಕ್ಕೆ ಯಕ್ಷರಂಗ ಬೆಳೆದ ನಡುವೆಯೂ ಕಳೆದುಕೊಂಡದ್ದು ಹಲವು ಇದೆ. ಕೆಲವು ಯಕ್ಷಗಾನೀಯ ಶೈಲಿಗಳು, ವೇಷಭೂಷಣಗಳು,ಅರ್ಥಗಾರಿಕೆ, ಹೊಸತರ ನಡುವೆ ಮರೆಯಾಗಿದೆ.
ಪ್ರಸಕ್ತ ಹಿರಿಯ ಅಭಿಮಾನಿಗಳ ಪ್ರಕಾರ ಹಿಂದಿನ ಆಟಗಳೇ ಚಂದ ಮರಾಯ್ರೇ..ಆ ವಾತಾವರಣ ಈಗ ಇಲ್ಲ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತವೆ. ಪ್ರೇಕ್ಷಕರ ವ್ಯವಧಾನದ ಕೊರತೆಯೋ , ಅಥವಾ ಕಲಾವಿದರ ನಿರಾಸಕ್ತಿಯೋ ತಿಳಿಯದು ಈಗ ಯಕ್ಷಗಾನಕ್ಕೆ ಅಡಿಪಾಯವಾಗಬೇಕಾದ ಪೂರ್ವ ರಂಗ ಪ್ರಸ್ತುತಿ, ಬಾಲಗೋಪಾಲ, ಪೀಠಿಕಾ ಸ್ತ್ರೀವೇಷ , ಕೊಡಂಗಿ ಇತ್ಯಾದಿಗಳು ಸೊಬಗು ಕಳೆದುಕೊಳ್ಳುತ್ತಿದೆ. ಡೇರೆ ಮೇಳಗಳಲ್ಲಿ ಪ್ರೇಕ್ಷಕರು ಹಣ ಕೊಟ್ಟು ಪ್ರಸಂಗ ನೋಡಲೆಂದೆ ಬರುವ ಕಾರಣ ಇದನ್ನೆಲ್ಲಾ ಮಾಡುವ ಅಗತ್ಯ ವಿಲ್ಲ ಎನ್ನುತ್ತಾರೆ ಕೆಲ ಕಲಾವಿದರು.
ಬಾಲಪಾಠ ಓರ್ವ ಕಲಾವಿದನಿಗೆ ಅಗತ್ಯ ಎನ್ನುತ್ತಾರೆ 99 ರ ಹರೆಯದ ಹಿರಿಯ ಯಕ್ಷಗಾನ ಕಲಾವಿದ ಹಿರಿಯಡಕ ಗೋಪಾಲ ರಾಯರು. ಅಂದರೆ ಭಾಗವತನಾಗುವವನು ಮೊದಲು ಲಯ, ತಾಳ,ರಾಗಜ್ಞಾನ , ಸಾಹಿತ್ಯ ಜ್ಞಾನ ರಂಗ ತಂತ್ರಗಳನ್ನು ಕಲಿತು ಹಂತ ಹಂತವಾಗಿ ಮೇಲೆ ಬರಬೇಕಾಗುತ್ತದೆ. ಸಮರ್ಥ ಗುರುವೊಬ್ಬನ ಮಾರ್ಗದರ್ಶನವಿಲ್ಲದೆ ಯಶಸ್ವಿ ಭಾಗವತನಾಗುವುದು, ಕಲಾವಿದನಾಗುವುದು ಯಕ್ಷರಂಗದಲ್ಲಿ ಅಸಾಧ್ಯ, ಹೀಗೆ ಪರಂಪರೆಯಿಂದ ಯಕ್ಷರಂಗವನ್ನು ಬೆಳಗಿದವರು ಹಲವು ಗುರುಗಳು ಮತ್ತು ಶಿಷ್ಯರು…
ಮುಂದುವರಿಯುವುದು…
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
