ನನ್ನ ಜೊತೆ ನೀನಿದ್ರೆ ಮಾತ್ರ ನಟಿಸುತ್ತೇನೆ ಅಂದಿದ್ದ ಶಂಕರ್ : ಉದಯವಾಣಿ ಜೊತೆ ‘ಅನಂತ’ಮಾತು
Team Udayavani, Sep 17, 2021, 5:30 PM IST
ಇವಳನ್ನೂ ಶಂಕ್ರನೇ ನನಗೆ ಪರಿಚಯ ಮಾಡ್ಸಿದ್ದು ಅಂತ ಹೆಂಡತಿ ಗಾಯತ್ರಿ ಕಡೆ ನಗುತ್ತಲೇ ಕೈ ಮಾಡಿ ತೋರಿಸಿದ ಅನಂತ್ ನಾಗ್ ತಮ್ಮ ಜೀವನದ ಕೆಲವೊಂದು ಘಟನೆಗಳನ್ನು ಉದಯವಾಣಿ ಜೊತೆ ಮೆಲುಕು ಹಾಕಿದ್ರು.
ಶಂಕರ್ ನಾಗ್ ಹುಟ್ಟಿದ್ದು ಉಡುಪಿಯಲ್ಲೇ
ನಾನು ಒಂದೆರಡು ವರ್ಷ ಉಡುಪಿಯಲ್ಲೇ ಬಾಲ್ಯದ ಜೀವನವನ್ನು ಕಳೆದೆ. ಶಂಕ್ರ ಕೂಡ ಉಡುಪಿಯಲ್ಲೇ ಜನಿಸಿದ್ದ. ಶಿರಾಲಿಯಲ್ಲಿ 2 ವರ್ಷ ಮತ್ತು ಹೊನ್ನಾವರದಲ್ಲಿ ನಾಲ್ಕು ವರ್ಷ ಇದ್ದೆವು. ಆನಂತರ ಮುಂಬೈ ಕಡೆ ಪಯಣ ಬೆಳೆಸಿದ ಮೇಲೆ ನಮ್ಮ ನಾಟಕ ಮತ್ತು ಸಿನಿಮಾ ಪಯಣ ಶುರುವಾಯ್ತು ಅಂತ ಕನ್ನಡದ ಎವರ್ ಗ್ರೀನ್ ಸ್ಟಾರ್ ಅನಂತ್ ನಾಗ್ ಹೇಳಿದ್ರು.
ಶಂಕ್ರನಿಗೆ ನಟನೆಗಿಂತ ನಿರ್ದೇಶನದಲ್ಲಿ ಆಸಕ್ತಿ ಇತ್ತು
ಎಂದಿನಂತೆ ಪ್ರೀತಿಯ ತಮ್ಮ ಬಗ್ಗೆಯೂ ಒಂದೆರಡು ಮಾತನಾಡಿದ ನಟ ಅನಂತ್ ನಾಗ್, ಶಂಕರ್ ಗೆ ಮೊದಲು ನಟನೆಗಿಂತ ನಿರ್ದೇಶನದ ಮೇಲೆ ತುಂಬಾ ಆಸಕ್ತಿ ಇತ್ತು. ನಟನೆಯನ್ನೂ ಮಾಡು ಅಂತ ನಾನು ಅವನಿಗೆ ಸಲಹೆಯೊಂದನ್ನು ಕೊಟ್ಟಿದ್ದೆ. ಆ ಮೇಲೆ ಮಾಡಿದ ಸಿನಿಮಾವೇ ‘ಒಂದಾನೊಂದು ಕಾಲದಲ್ಲಿ’. ಆ ಕಾಲಘಟ್ಟದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಶಂಕರನಿಗೆ ಯಶಸ್ಸು ತಂದುಕೊಟ್ಟವು.
ಅದ್ರಲ್ಲೂ ಶಂಕರನ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿ ಸೂಪರ್ ಹಿಟ್ ಆಯ್ತು. ಈ ಧಾರಾವಾಹಿಯಲ್ಲಿ ನಾನು ಕೂಡ ನಟಿಸಿದ್ದೆ. ವಿಚಿತ್ರ ಏನಂದ್ರೆ ಶಂಕ್ರ ನೀನೆ ಇದ್ರಲ್ಲಿ ನಟನೆ ಮಾಡೋ ಅಂಥ ನಾನು ಹೇಳುವಾಗ ಅಣ್ಣ ನೀನು ನನ್ನ ಜೊತೆ ಇದ್ರೆ ಮಾತ್ರ ನಾನು ನಟನೆ ಮಾಡ್ತೀನಿ ಅಂದಿದ್ದ. ಆ ನಂತರ ನಾವಿಬ್ಬರೂ ಆ ಧಾರಾವಾಹಿಯಲ್ಲಿ ನಟಿಸಿದೆವು ಅಂತ ಅನಂತ್ ನಾಗ್ ಹೇಳಿಕೊಂಡ್ರು.
ಇವಳನ್ನು ಹೊಂಚು ಹಾಕಿ ಮದುವೆಯಾದೆ
ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶಂಕರ್ ‘ಆಟೋರಾಜ’ ಸಿನಿಮಾದಲ್ಲಿ ಕೆಲಸ ಮಾಡ್ತಿದ್ದ. ಅದೇ ವೇಳೆ ನಾನು ‘ನಾರದ ವಿಜಯ’ ಸಿನಿಮಾದಲ್ಲಿ ನಟಿಸುತ್ತಿದ್ದೆ. ಈ ವೇಳೆ ಗಾಯತ್ರಿ ಶಂಕರ ಜೊತೆ ಆಟೋ ರಾಜ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಳು. ಆಗ ನನ್ನ ಬಳಿ ಗಾಯತ್ರಿಯನ್ನು ಕರೆತಂದ ಶಂಕರ ಇವಳನ್ನು ಪರಿಚಯ ಮಾಡಿಸಿದ. ಆ ಮೇಲೆ ‘ಸುಖ ಸಂಸಾರಕ್ಕೆ 12 ಸೂತ್ರಗಳು’ ಸಿನಿಮಾ ವೇಳೆ ಹೊಂಚು ಹಾಕಿ ಇವಳನ್ನು ಮದುವೆಯಾದೆ ಎಂದು ಅನಂತ್ ನಾಗ್ ನಗುತ್ತಲೇ ಹೇಳಿಕೊಂಡರು.
ಸಿನಿಮಾಗಳಲ್ಲಿ ಬರೀ ಮನರಂಜನೆ ಇದ್ರೆ ಜಾಸ್ತಿ ದಿನ ಉಳಿಯಲ್ಲ
ಚಿತ್ರಗಳ ಬಗ್ಗೆ ಮಾತನಾಡಿದ ಅನಂತ್ ನಾಗ್, ಸಿನಿಮಾಗಳಲ್ಲಿ ಶಿಕ್ಷಣ ಕೂಡ ಇರಬೇಕು.. ಯಾವಾಗಲೂ ನಾವು ಮನರಂಜನೆಯನ್ನೇ ನೀಡುತ್ತ ಹೋದ್ರೆ ಸಿನಿಮಾ ಜಾಸ್ತಿ ದಿನ ಉಳಿಯಲ್ಲ ಮತ್ತು ಜನರು ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ರು.
ಕೋವಿಡ್ ನಮಗೆ ನಿಜವಾದ ಚಾಲೆಂಜ್ ಕೊಟ್ಟಿದೆ
ಸುಮಾರು 2 ವರ್ಷಗಳಿಂದ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಆಗಿಲ್ಲ. ಕೋವಿಡ್ ಇರುವ ಕಾರಣ ರೆಡಿ ಆಗಿರುವ ಸಿನಿಮಾಗಳು ತೆರೆ ಕಂಡಿಲ್ಲ. OTT ಹಾವಳಿ ಜಾಸ್ತಿ ಇದೆ. ಚಿತ್ರಮಂದಿರಗಳು ಪೂರ್ಣಪ್ರಮಾಣದಲ್ಲಿ ತೆರೆದಿಲ್ಲ. ಇದ್ರಿಂದಾಗಿ ನಮಗೆಲ್ಲ ನಿಜವಾದ ಜಾಲೆಂಜ್ ಇದೆ ಎಂದು ಅನಂತ್ ನಾಗ್ ಹೇಳಿದ್ರು.