ನಟ ಸಂಚಾರಿ ವಿಜಯ್ ಜಾತಿ ನಿಂದನೆ ಎದುರಿಸಿದ್ದರಾ ? ಅವರ ಸಹೋದರ ನೀಡಿದ ಸ್ಪಷ್ಟನೆ ಏನು ?
Team Udayavani, Jun 23, 2021, 12:29 PM IST
ಬೆಂಗಳೂರು: ದಿವಂಗತ ನಟ ಸಂಚಾರಿ ವಿಜಯ್ ಕುರಿತು ಹರಿದಾಡುತ್ತಿದ್ದ ಸಂಗತಿಯೊಂದಕ್ಕೆ ಅವರ ಸಹೋದರ ವಿರೂಪಾಕ್ಷ ಸ್ಪಷ್ಟನೆ ನೀಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಸಂಚಾರಿ ವಿಜಯ್ ಜಾತಿ ನಿಂದನೆ ಎದುರಿಸಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ವಿಜಯ್ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಅವರು ಜಾತಿ ನಿಂದನೆಯನ್ನೂ ಅನುಭವಿಸಿದ್ದಾರೆ ಎಂಬಿತ್ಯಾದಿ ಮಾತುಗಳು ಕೇಳಿಬಂದಿತ್ತು. ಸ್ವತಃ ನಟ ನೀನಾಸಂ ಸತೀಶ್ ಈ ರೀತಿಯಾಗಿ ಹೇಳಿಕೆ ನೀಡಿದ್ದರು.
ಆದರೆ ಈ ಬಗ್ಗೆ ವಿಜಯ್ ಸಹೋದರ ವಿರೂಪಾಕ್ಷ ಸ್ಪಷ್ಟನೆ ನೀಡಿದ್ದು, ನಮ್ಮ ಇಡೀ ಊರು ನಮ್ಮನ್ನು, ನಮ್ಮ ತಂದೆ-ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ. ನಮಗಾಗಲೀ, ನಮ್ಮ ಕುಟುಂಬಕ್ಕಾಗಲೀ ಯಾವುದೇ ಜಾತಿ ನಿಂದನೆಯಾಗಿಲ್ಲ. ಇಂತಹ ಸುದ್ದಿಯಿಂದ ಪಂಚನಹಳ್ಳಿ ಗ್ರಾಮಸ್ಥರಿಗೆ ನೋವಾಗಿದ್ದರೆ ಕ್ಷಮೆಯಿರಲಿ. ಇಂತಹ ಸುದ್ದಿಗಳು ಹೇಗೆ ಹರಡುತ್ತವೋ ಗೊತ್ತಿಲ್ಲ ಎಂದು ವಿರೂಪಾಕ್ಷ ಸ್ಪಷ್ಟನೆ ನೀಡಿದ್ದಾರೆ.