ಅದಿತಿ ಕೈಯಲ್ಲಿ ಗಾಳಿಪಟ
ಭಟ್ಟರ ತಂಡದಲ್ಲಿ ದಾವಣಗೆರೆ ಹುಡುಗಿ
Team Udayavani, Jul 3, 2019, 3:00 AM IST
“ಧೈರ್ಯಂ’ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅದಿತಿ ಪ್ರಭುದೇವ, ಈಗ ಕನ್ನಡ ಚಿತ್ರರಂಗದ ಬಿಝಿ ನಟಿಯರ ಸಾಲಿನಲ್ಲಿ ನಿಂತಿದ್ದಾರೆ. ಅದಕ್ಕೆ ಕಾರಣ, ಅವರಿಗೆ ಸಿಗುತ್ತಿರುವ ಅವಕಾಶಗಳು. ಸದ್ಯ, ಅದಿತಿ ಹೊಸ ಸಿನಿಮಾವೊಂದನ್ನು ಒಪ್ಪಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಅದು “ಗಾಳಿಪಟ-2′.
ಹೌದು, ಯೋಗರಾಜ್ ಭಟ್ ನಿರ್ದೇಶನದ “ಗಾಳಿಪಟ-2′ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿಯಾಗಿ ಸೇರ್ಪಡೆಯಾಗಿದ್ದಾರೆ. ಈಗಾಗಲೇ ಚಿತ್ರದಲ್ಲಿ ಸೋನಾಲ್ ಮೊಂತೆರೋ ಹಾಗೂ ಶರ್ಮಿಳಾ ಮಾಂಡ್ರೆ ಆಯ್ಕೆಯಾಗಿದ್ದಾರೆ. ಚಿತ್ರತಂಡ ಮತ್ತೂಬ್ಬ ನಾಯಕಿಗಾಗಿ ಹುಡುಕಾಟ ನಡೆಸುತ್ತಿತ್ತು. ಈಗ ಅದಿತಿ ಪ್ರಭುದೇವ ಅವರಿಗೆ ಆ ಅವಕಾಶ ಸಿಕ್ಕಿದೆ.
ಪಾತ್ರಕ್ಕೆ ಆಡಿಷನ್ ಕೊಟ್ಟ ಅದಿತಿಯ ಪರ್ಫಾರ್ಮೆನ್ಸ್ ಇಷ್ಟಪಟ್ಟ ಭಟ್ಟರು ಓಕೆ ಅಂದಿದ್ದಾರೆ. ಈ ಬಗ್ಗೆ ಮಾತನಾಡುವ ಅದಿತಿ, “ತುಂಬಾ ಖುಷಿಯಾಗುತ್ತಿದೆ. ನನಗೆ ಸಿಕ್ಕಿರುವ ಪಾತ್ರದಲ್ಲಿ ಎಲ್ಲಾ ರೀತಿಯ ಭಾವನೆಗಳಿವೆ. ಗಂಭೀರ, ಬೋಲ್ಡ್, ಫನ್ನಿ, ಬಬ್ಲಿ …ಹೀಗೆ ಪಾತ್ರ ತುಂಬಾ ಚೆನ್ನಾಗಿದೆ’ ಎಂದು ಖುಷಿಯಿಂದ ಹೇಳುತ್ತಾರೆ ಅದಿತಿ.
ಸದ್ಯ ಅದಿತಿ ನಟಿಸಿರುವ “ಆಪರೇಷನ್ ನಕ್ಷತ್ರ’ ಚಿತ್ರ ಜುಲೈ 12ಕ್ಕೆ ತೆರೆಕಾಣುತ್ತಿದೆ. ಅದರ ಬೆನ್ನಲ್ಲೇ ಅಂದರೆ ಜುಲೈ 19ಕ್ಕೆ “ಸಿಂಗ’ ಬರುತ್ತಿದೆ. ಈ ನಡುವೆಯೇ “ಬ್ರಹ್ಮಚಾರಿ’, “ರಂಗನಾಯಕಿ’ ಚಿತ್ರಗಳು ಕೂಡಾ ಅದಿತಿ ಕೈಯಲ್ಲಿವೆ.