ಮೂರು ಭಾಷೆಗಳಲ್ಲಿ ಅಗೋಳಿ ಮಂಜಣ್ಣ
Team Udayavani, Dec 4, 2018, 11:31 AM IST
ಹೆಬ್ರಿ: ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅರ್ಪಿಸುವ ಮುಂಬಯಿಯ ಸಕ್ಸಸ್ ಫಿಲ್ಮ್ ಇಂಡಿಯಾ ಬ್ಯಾನರ್ನ ಅದ್ದೂರಿ ಬಜೆಟ್ನ ಅಗೋಳಿ ಮಂಜಣ್ಣೆ ಸುಪರ್ ಮ್ಯಾನ್ ಆಫ್ ತುಳುನಾಡು ಟ್ಯಾಗ್ಲೈನ್ನ ತುಳು -ಕನ್ನಡ -ಮರಾಠಿ ಭಾಷೆಯ ಚಿತ್ರ ಸಿದ್ಧಗೊಳ್ಳುತ್ತಿದ್ದು ಅಂತಾರಾಷ್ಟ್ರೀಯ ಕ್ರೀಡಾಪಟು ಕೋಟಿ ಚೆನ್ನಯ ಧಾರಾವಾಹಿ ಖ್ಯಾತಿಯ ರೋಹಿತ್ ಕುಮಾರ್ ಕಟೀಲು ಅಗೋಳಿ ಮಂಜಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಾಹಿತ್ಯ ಆಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕ ಸುಧೀರ್ ಅತ್ತಾವರ್ ಅವರ ಸಾಹಿತ್ಯ-ಸಂಭಾಷಣೆ ನಿರ್ದೇಶನದಲ್ಲಿ ಮೂರು ಭಾಷೆಗಳಲ್ಲಿ ಸಿನೆಮಾದ ಚಿತ್ರೀಕರಣ ಶೀಘ್ರದಲ್ಲಿ ಆರಂಭಗೊಳ್ಳಲಿದೆ.
ಒಂದೇ ಬಾರಿಗೆ ಹತ್ತು ಮುಡಿ ಅಕ್ಕಿ ಎತ್ತಬಲ್ಲ ಮಹಾ ಬಲಶಾಲಿ ಮಂಗಳೂರಿನ ಮೂಲ್ಕಿ ಸೀಮೆಯ ಅಧಿಪತಿ ಆಗಿದ್ದ ಅಗೋಳಿ ಮಂಜಣ್ಣ ಸುಮಾರು 200 ವರ್ಷಗಳ ಕೆಳಗೆ ಮಂಗಳೂರಿನ ಸುರತ್ಕಲ್ ಸಮೀಪದ ಚೇಳಾರ್ ಗುತ್ತಿನಲ್ಲಿ ಬದುಕಿ ಬಾಳಿದ ಕಥೆಯನ್ನು ಚಿತ್ರ ಒಳಗೊಂಡಿದ್ದು, ಈಗಾಗಲೇ ಮೂರು ದಿನಗಳ ಪ್ರೋಮೋ ಷೂಟಿಂಗ್ ನಡೆದಿದೆ.
ನಾಯಕಿಯಾಗಿ ಗುಜರಾತಿ ನಟಿ ಹಿಮಾಂಗಿನಿ ಅಭಿನಯಿಸುತ್ತಿದ್ದು, ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ್ ಆಳ್ವ ಪ್ರಮುಖ ಪಾತ್ರದಲ್ಲಿದ್ದಾರೆ.
ಬಾಲಿವುಡ್ ಮತ್ತು ಸ್ಯಾಂಡಲ್ವುಡ್ನ ಕಲಾವಿದರೂ ಇದ್ದಾರೆ. ಬಾಲಿವುಡ್ನ ಶಫಿ ಖಾನ್ ಕೆಮರಾ, ಚಂದ್ರಕಾಂತ್ ಸಂಗೀತ, ವಿದ್ಯಾಧರ್ ಸಂಕಲನ, ಸುಧೀರ್ ಜತೆ ಕಥೆ-ಚಿತ್ರಕಥೆಗೆ ಪ್ರೊ| ಜಯಪ್ರಕಾಶ ಮಾವಿನಕುಳಿ ಮತ್ತು ರಾಜಶೇಖರ್ ಸೇರಿಕೊಂಡಿದ್ದು ಆಗೋಳಿ ಮಂಜಣ್ಣ ತುಳು ಚಿತ್ರರಂಗದಲ್ಲಿ ಒಂದು ಅಪರೂಪದ ಮೈಲಿಗಲ್ಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.