ಅಂಜನಿಪುತ್ರ ಪ್ರದರ್ಶನ ಮುಂದುವರೆದಿದೆ
Team Udayavani, Dec 25, 2017, 10:51 AM IST
“ಅಂಜನಿಪುತ್ರ’ ಚಿತ್ರ ಯಾವುದೇ ಅಡೆತಡೆಗಳಿಲ್ಲದೇ ಭಾನುವಾರ ಪ್ರದರ್ಶನ ಕಂಡಿದೆ. ಚಿತ್ರದಲ್ಲಿ ವಕೀಲರನ್ನು ಅವಮಾನಿಸುವ ಸಂಭಾಷಣೆ ಇದೆ ಎಂದು ಚಿತ್ರಕ್ಕೆ ತಡೆಕೋರಿ ವಕೀಲರೊಬ್ಬರು ನ್ಯಾಯಾಲಯದಿಂದ ಚಿತ್ರಕ್ಕೆ ತಡೆ ತಂದಿದ್ದರು. ಆದರೆ, ಚಿತ್ರ ಪ್ರದರ್ಶನ ಭಾನುವಾರವೂ ಮುಂದುವರೆದಿದೆ.
ಈ ಬಗ್ಗೆ ಮಾತನಾಡುವ ನಿರ್ದೇಶಕ ಎ.ಹರ್ಷ, “ನಾವು ಯಾರನ್ನೂ ನೋಯಿಸಬೇಕೆಂಬ ಉದ್ದೇಶದಿಂದ ಸಿನಿಮಾ ಮಾಡುವುದಿಲ್ಲ. ಅರಿವಿಲ್ಲದೇ ಯಾರಿಗಾದರೂ ನೋವಾಗುವ ಸಂಭಾಷಣೆ ಇದ್ದರೆ ಅದನ್ನು ತೆಗೆಯಲು ನಾವು ಸಿದ್ಧ. ಅದು ಬಿಟ್ಟು ಒಂದು ಸಿನಿಮಾವನ್ನು ನಿಲ್ಲಿಸಬೇಕೆನ್ನುವುದು ಸರಿಯಲ್ಲ.
ಸಿನಿಮಾವನ್ನು ಸೆನ್ಸಾರ್ ಮಾಡಿಸಿಯೇ ಬಿಡುಗಡೆ ಮಾಡಿರುತ್ತೇವೆ. ಹೀಗಾದರೆ ಮುಂದೆ ಸಿನಿಮಾ ಮಾಡೋದು ಕಷ್ಟವಾಗುತ್ತದೆ. ಸಿನಿಮಾವನ್ನು ಯಾರಿಗೆ ತೋರಿಸಬೇಕೆಂಬ ಸಹಜ ಗೊಂದಲ ಸೃಷ್ಟಿಯಾಗುತ್ತದೆ’ ಎಂದಿದ್ದಾರೆ. ಭಾನುವಾರವೂ ಚಿತ್ರಪ್ರದರ್ಶನವಾಗಿದ್ದು, ಜನ ಇಷ್ಟಪಟ್ಟು ಚಿತ್ರ ನೋಡುತ್ತಿರುವ ಬಗ್ಗೆ ಹರ್ಷ ಸಂತಸ ವ್ಯಕ್ತಪಡಿಸುತ್ತಾರೆ.
ಈ ನಡುವೆಯೇ ಚಿತ್ರಕ್ಕೆ ತಡೆ ತಂದಿರುವ ವಿಚಾರದಿಂದ ಬೇಸರಗೊಂಡು ನಟ ಪುನೀತ್ ರಾಜಕುಮಾರ್ ಅಭಿಮಾನಿಗಳು ಚಿತ್ರಮಂದಿರ ಮುಂದೆ ಪ್ರತಿಭಟನೆ ಮಾಡಲು ಕೂಡಾ ಮುಂದಾಗಿದ್ದರು. ಆದರೆ, “ಅಂಜನಿಪುತ್ರ’ ಭಾನುವಾರವೂ ಯಥಾಪ್ರಕಾರ ಪ್ರದರ್ಶನ ಕಂಡಿದೆ.