ಗೆಳೆತನಕ್ಕೆ ಇನ್ನೊಂದು ಹೆಸರೇ ಅಂಬಿ
Team Udayavani, May 29, 2018, 12:03 PM IST
ಅಂಬರೀಷ್ ಅಭಿನಯದ “ಮಣ್ಣಿನ ದೋಣಿ’ ಚಿತ್ರದ ಮೂಲಕ ನಿರ್ಮಾಪಕರಾದ ಸಂದೇಶ್ ನಾಗರಾಜ್, ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕರೆಂದೇ ಹೆಸರಾದವರು. ಅಂಬರೀಷ್ ನಟನೆಯ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿರುವ ಸಂದೇಶ್ ನಾಗರಾಜ್, ಈಗ ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರನ್ನೂ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಅಂಬರೀಷ್ ಅಂದಾಕ್ಷಣ, ಕಣ್ಣ ಮುಂದೆ ದೊಡ್ಡ ಸ್ನೇಹ ಬಳಗ ಎದ್ದು ಕಾಣುತ್ತೆ. ಅಂಬರೀಷ್ ಗುಣವೇ ಅಂಥದ್ದು.
ಸದಾ ಗೆಳೆಯರೊಂದಿಗೆ ಕಾಲ ಕಳೆಯಬೇಕು, ಕಾಲೆಳೆಯಬೇಕು, ನಗಬೇಕು, ನಗಿಸಬೇಕು ಇದು ಅಂಬರೀಷ್ ಅವರ ಗುಣ. ನಿರ್ಮಾಪಕ ಸಂದೇಶ್ ನಾಗರಾಜ್ ಹೆಸರು ಬಂದರೆ, ಅಲ್ಲಿ ಅಂಬರೀಷ್ ಅವರ ಹೆಸರು ಪ್ರಸ್ತಾಪವಾಗಲೇಬೇಕು. ಕಾರಣ, ಅವರಿಬ್ಬರ ನಡುವೆ ಅಂಥದ್ದೊಂದು ಗಟ್ಟಿ ಗೆಳೆತನವಿದೆ. ತಮ್ಮ ಮತ್ತು ಅಂಬರೀಶ್ ಅವರ ಗೆಳೆತನದ ಬಗ್ಗೆ ಮಾತನಾಡುವ ಸಂದೇಶ್ ನಾಗರಾಜ್, “ನನಗೆ ಅಂಬರೀಷ್ ಸಿನಿಮಾ ಮತ್ತು ರಾಜಕೀಯದ ಗೆಳೆಯನಲ್ಲ.
ವಿದ್ಯಾರ್ಥಿ ದೆಸೆಯಿಂದಲೂ ನಾವಿಬ್ಬರೂ ಒಳ್ಳೆಯ ಗೆಳೆಯರು 1961 ರಲ್ಲಿ ನಮ್ಮ ಗೆಳೆತನ ಶುರುವಾಯ್ತು. ನಾನು ಆಗ ಸರಸ್ವತಿ ಪುರಂನಲ್ಲಿರುವ ಹಾಸ್ಟೆಲ್ನಲ್ಲಿದ್ದೆ. ಆ ಹಾಸ್ಟೆಲ್ ಪಕ್ಕ ಅಂಬರೀಷ್ ಅವರ ಮನೆ ಇತ್ತು. ಅವತ್ತಿನಿಂದ ಇಂದಿನವರೆಗೂ ನಮ್ಮ ಗೆಳೆತನ ಹಾಗೇ ಇದೆ. ಅಂಬಿ ಬೇರೆ ಪಕ್ಷ, ನಾನು ಬೇರೆ ಪಕ್ಷದಲ್ಲಿದ್ದರೂ ಸ್ನೇಹಕ್ಕೆ ಮಾತ್ರ ಯಾವತ್ತೂ ಧಕ್ಕೆಯಾಗಿಲ್ಲ. ಜನತಾದಳ ಪಕ್ಷದಲ್ಲಿ ಇಬ್ಬರೂ ಇದ್ದೆವು.
ಅಂಬರೀಷ್ ಪಕ್ಷ ಬದಲಿಸಿ, ಸಚಿವರಾದರೂ ಸಹ ನನ್ನ ಹೋಟೆಲ್ನಲ್ಲೇ ಉಳಿದುಕೊಳ್ಳುತ್ತಿದ್ದರು. ಅವರಿಗೆ ಆ ಪಕ್ಷ, ಈ ಪಕ್ಷದವರು ಎಂಬುದಿಲ್ಲ. ಎಲ್ಲೆಡೆ ಒಳ್ಳೆಯ ಗೆಳೆಯರಿದ್ದಾರೆ. ನಮ್ಮಿಬ್ಬರ ಗೆಳೆತನದ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅಂಬರೀಷ್ಗೆ ನಾನು “ಮಣ್ಣಿನ ದೋಣಿ’ ಸಿನಿಮಾ ನಿರ್ಮಾಣ ಮಾಡಿದೆ. ಅಂದಿನಿಂದ “ಗೌಡ್ರು’ ಚಿತ್ರದವರೆಗೂ ಸಿನಿಮಾ ನಿರ್ಮಾಣ ಮಾಡಿಕೊಂಡು ಬಂದೆ.
ನಾನು ನಿರ್ಮಾಪಕ, ಅವರು ನಟ ಎಂಬ ಮಾತು ನಮ್ಮ ನಡುವೆ ಬಂದಿದ್ದೇ ಇಲ್ಲ. ಗೆಳೆತನದಲ್ಲೇ ಹೋಗೋ, ಬಾರೋ ಸ್ನೇಹಿತರಾಗಿದ್ದೇವೆ. ಅಂತಹ ಒಳ್ಳೆಯ ಗೆಳೆತನ ನಮ್ಮದು. ಒಮ್ಮೆ ಅಂಬರೀಷ್ ಜೊತೆಗೆ ಮಾತನಾಡುವಾಗ, ನನ್ನ ಮಗ ಸಂದೇಶ್ನನ್ನು ಕರೆಸಿ, “ನಾನು ಮಗನನ್ನು ಸಿನಿಮಾ ರಂಗಕ್ಕೆ ಪರಿಚಯಿಸಬೇಕೆಂದಿದ್ದೇನೆ. ನನ್ನ ಮಗನ ಚಿತ್ರವನ್ನು ನೀನೇ ನಿರ್ಮಾಣ ಮಾಡಪ್ಪ’ ಅಂದಾಗ, ನನ್ನ ಮಗ ಸಂದೇಶ್ ಅಷ್ಟೇ ಖುಷಿಯಿಂದ ಒಪ್ಪಿ, ಈಗ “ಅಮರ್’ ಚಿತ್ರ ಮಾಡುತ್ತಿದ್ದೇವೆ.
ಅಭಿಷೇಕ್ ಒಳ್ಳೆಯ ಹುಡುಗ. ಅವನನ್ನು ನನ್ನ ಬ್ಯಾನರ್ ಮೂಲಕ ಪರಿಚಯಿಸುತ್ತಿರುವುದು ಖುಷಿಯ ವಿಷಯ’ ಎನ್ನುತ್ತಾರೆ ಸಂದೇಶ್ ನಾಗರಾಜ್. ಅಂಬರೀಶ್ ಅಭಿನಯದಲ್ಲಿ ಸಂದೇಶ್ ನಾಗರಾಜ್ ಒಂದು ಚಿತ್ರ ಮಾಡಬೇಕು ಎಂದು ಹೊರಟಾಗ, ಮೊದಲು ಬೇಡ ಅಂತ ಹೇಳಿದ್ದು ಅಂಬರೀಶ್ ಅಂತೆ. “ನಾನು ಸಿನಿಮಾ ಮಾಡಬೇಕು ಅಂತ ಹೊರಟಾಗ, ಮೊದಲು ಬೇಡ ಅಂದವರು ಅವರೇ.
ನೀನು ಚೆನ್ನಾಗಿದ್ದೀಯ, ಚೆನ್ನಾಗಿರು, ಸಿನಿಮಾ ಸಹವಾಸ ಬೇಡ ಎಂದು ಹೇಳಿದರು. ಆದರೆ, ನಾನು ಸಿನಿಮಾ ಮಾಡಲೇಬೇಕು ಅಂತ ನಿರ್ಧಾರ ಮಾಡಿದ್ದೆ. ಕೊನೆಗೆ ಅಂಬರೀಶ್ ನನ್ನ ಮೊದಲ ನಿರ್ಮಾಣದ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರು. ಸರಿ, “ಮಣ್ಣಿನ ದೋಣಿ’ ಚಿತ್ರ ಶುರು ಮಾಡಿದೆವು. ನನಗೆ ಸಿನಿಮಾ ಬಗ್ಗೆ ಎಬಿಸಿಡಿ ಗೊತ್ತಿರಲಿಲ್ಲ. ಅಂಬರೀಶ್ ಹೀರೋ ಆದರೂ, ಎಲ್ಲವನ್ನೂ ಅವರೇ ಮುಂದೆ ನಿಂತು ಮಾಡಿದರು.
ಹಂಸಲೇಖ ಅವರನ್ನು ಕರೆಸಿ, ಸಂಗೀತ ಮಾಡಿಸಿದರು. ಚಿತ್ರದ ಐದೂ ಹಾಡುಗಳು ಸೂಪರ ಹಿಟ್ ಆದವು. ಚಿತ್ರ ನೂರು ದಿನ ಓಡಿತ್ತು. ಚಿತ್ರದ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಈಗ ಅವರ ಮಗನನ್ನ ಹೀರೋ ಮಾಡಿ ಚಿತ್ರ ಮಾಡೋಣ ಅಂದೆ. ಅವರು ಒಪ್ಪಿ, ಅಭಿಷೇಕ್ ಅಭಿನಯದ ಮೊದಲ ಚಿತ್ರವನ್ನು ನಿರ್ಮಿಸುವ ಜವಾಬ್ದಾರಿ ಕೊಟ್ಟಿದ್ದಾರೆ’ ಎಂದು ನೆನಪಿಸಿಕೊಳ್ಳುತ್ತಾರೆ ಸಂದೇಶ್ ನಾಗರಾಜ್.
ಅಮರವಾದ ಕಥೆ-ಚಿತ್ರ: ಅಭಿಷೇಕ್ ಚಿತ್ರ ಮಾಡುತೀನಿ ಎಂದಾಗ ಅಂಬರೀಧ್ ಮತ್ತು ಸುಮಲತಾ ಇಬ್ಬರೂ, “ನಾವು ಯಾವುದಕ್ಕೂ ಎಂಟ್ರಿ ಆಗಲ್ಲ. ಅವನು ನಿಮ್ಮ ಚಿತ್ರದ ಹೀರೋ. ನೀವು ಆ ಚಿತ್ರದ ನಿರ್ಮಾಪಕರು’ ಎಂದು ಹೇಳಿದರಂತೆ. ಈ ಕುರಿತು ಮಾತನಾಡು ಅವರು, “ನಾನೊಬ್ಬ ನಿರ್ಮಾಪಕನಾಗಿ, ನನ್ನ ಸಿನಿಮಾದ ಹೀರೋ ಎಂಬ ಕಾರಣಕ್ಕೆ, ಅಭಿಷೇಕ್ ಅವರಿಗೆ ಒಂದು ಚೆಕ್ ಕೊಟ್ಟೆ.
ಆ ಸಂದರ್ಭದಲ್ಲಿ ಅಲ್ಲೇ ಇದ್ದ ಅಂಬರೀಷ್, “ಲೋ ಅವನಿಗ್ಯಾಕೋ ಚೆಕ್ ಕೊಡ್ತೀಯೋ, ನಂಗೆ ಕೊಡೋ …’ ಎಂದರು. ಆಗ, ಚೆಕ್ ಪಡೆದಿದ್ದ ಅಭಿಷೇಕ್, ತಕ್ಷಣ ಅವರ ತಂದೆಗೆ ಕೊಡಲು ಹೋದಾಗ, ಆ ಚೆಕ್ ಅನ್ನು ನಿನ್ನಮ್ಮನಿಗೆ ಕೊಡು ಎಂದು ಹೇಳಿಬಿಟ್ಟರು. ಅಂಬರೀಶ್ ಯಾವತ್ತೂ ಹಣಕ್ಕೆ ಆಸೆ ಪಟ್ಟವರೇ ಅಲ್ಲ. ಆದರೆ, ಸಿನಿಮಾ ಚೆನ್ನಾಗಿ ಮಾಡಪ್ಪ ಅಂದ್ರು. ಅದೇ ಕಾರಣಕ್ಕೆ, ಚಿತ್ರವನ್ನು ಭರ್ಜರಿಯಾಗಿ ಮಾಡುತ್ತಿದ್ದೇನೆ.
ನನಗೆ ಅಂಬರೀಷ್ ಪುತ್ರನನ್ನು ಹೀರೋ ಮಾಡ್ತೀನಿ ಅಂತ ಅನಿಸಿದಾಗ, ಮೊದಲು ಕಾಡಿದ್ದು ಒಳ್ಳೆಯ ಕಥೆ ಸಿಗಬೇಕು ಎಂಬುದು. ಒಂದಿಬ್ಬರು ನಿರ್ದೇಶಕರು ಬಂದು, ಕಥೆ ಹೇಳಿ ಆಮೇಲೆ ಅವರು ನಾನಾ ಕಾರಣಗಳಿಂದ ಹೊರ ನಡೆದರು. ಆದರೆ, ಒಳ್ಳೆಯ ಕಥೆ, ನಿರ್ದೇಶಕ ಬೇಕು ಎಂಬ ಹುಡುಕಾಟದಲ್ಲಿದ್ದೆ. ಆಗ ಸಿಕ್ಕಿದ್ದೇ ನಾಗಶೇಖರ್. ನಿಜವಾಗಿಯೂ ನಾನು ಅಂದುಕೊಂಡಿದ್ದಕ್ಕಿಂತಲೂ ಒಳ್ಳೆಯ ಕಥೆಯೇ ಸಿಕ್ಕಿತು.
ನಿರ್ದೇಶಕ ನಾಗಶೇಖರ್ ಇದು ನನ್ನ ಚಿತ್ರ ಅಂದುಕೊಂಡೇ ಕೆಲಸ ಮಾಡುತ್ತಿದ್ದಾರೆ. ಅಭಿಷೇಕ್ಗೆ ನಾನು ಸಿನಿಮಾ ಮಾಡುತ್ತಿರೋದೇ ಅದೃಷ್ಟ. ಅಂಥದರಲ್ಲಿ ಒಳ್ಳೆಯ ಕಥೆ, ತಂಡ ಸಿಕ್ಕಿದ್ದು ಇನ್ನೊಂದು ಅದೃಷ್ಟ. ನಾನು ನಾಗಶೇಖರ್ ಹೇಳಿದ ಒನ್ಲೈನ್ ಕಥೆ ಕೇಳಿದೆ. ಕೊನೆಗೆ ಚೆನ್ನೈನ ಕೆಲವು ಬರಹಗಾರರನ್ನು ಕರೆಸಿ, ಸಾಕಷ್ಟು ಚರ್ಚೆ ಮಾಡಿ, ಕಥೆಗೊಂದು ಅಂತಿಮ ರೂಪ ಕೊಟ್ಟು ಶುರುವಿಗೆ ಸಿದ್ಧವಾದೆ.
ಈಗಾಗಲೇ ಎಲ್ಲವೂ ರೆಡಿಯಾಗಿದೆ. ಸಂಭಾಷಣೆ ಅಂತಿಮ ಹಂತದಲ್ಲಿದೆ. ಕಥೆ ವಿಚಾರದಲ್ಲಿ ಸುಮಲತಾ, ಅಂಬರೀಷ್, ನಾನು ಮತ್ತು ನಿರ್ದೇಶಕರು ಕುಳಿತು ಸಾಕಷ್ಟು ಚರ್ಚೆ ಮಾಡಿದ್ದೇವೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಸತ್ಯಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ನನಗೆ ಒಳ್ಳೆಯ ತಂಡ ಸಿಕ್ಕಿರುವ ಖುಷಿ ಇದೆ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾಳೆ ಎಂಬ ನಂಬಿಕೆಯೂ ಇದೆ’ ಎಂದು ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ ಸಂದೇಶ್ ನಾಗರಾಜ್.