ಹಾಸ್ಯ ಕಲಾವಿದ ನರಸಿಂಹರಾಜು ಹೆಸರಲ್ಲಿ ಪ್ರಶಸ್ತಿ
ಭಾರತದಲ್ಲೇ ಮೊದಲ ಸಲ ಕಾಮಿಡಿ ಶಾರ್ಟ್ ಫಿಲ್ಮ್ ಫೆಸ್ಟಿವಲ್
Team Udayavani, Jul 25, 2019, 3:01 AM IST
ಚೇತೋಹಾರಿ ಹಾಸ್ಯಕ್ಕೆ ಮತ್ತೊಂದು ಹೆಸರೇ ತಿಪಟೂರು ರಾಮರಾಜು ನರಸಿಂಹರಾಜು. ಇವರು ಕನ್ನಡದ “ಚಾರ್ಲಿಚಾಪ್ಲಿನ್’ಎಂದೇ ಹೆಸರಾದವರು. ಸದಾ ನೆನಪಾಗುವ ಅಪರೂಪದ ಹಾಸ್ಯ ಕಲಾವಿದ. ಕಪ್ಪು-ಬಿಳುಪು ಕಾಲದಲ್ಲೇ ಕನ್ನಡ ಚಿತ್ರರಂಗದ ವೇಗ ಹೆಚ್ಚಿಸಿದ ಕೀರ್ತಿ ಅವರದು. ಅವರೀಗ ನಮ್ಮೊಂದಿಗಿಲ್ಲ. ಆದರೆ, ಹಾಸ್ಯ ಪಾತ್ರಗಳ ಮೂಲಕ ಇಂದಿಗೂ ಅವರು ನಮ್ಮೊಂದಿಗಿದ್ದಾರೆ. ಜುಲೈ 24 ಅವರ ಹುಟ್ಟುಹಬ್ಬ.
97ನೇ ಹುಟ್ಟುಹಬ್ಬದ ಸವಿನೆನಪಿಗೆ ಅವರ ಅಭಿಮಾನಿ ವರ್ಗ ಹುಟ್ಟುಹಬ್ಬ ಆಚರಿಸಿದೆ, ಕುಟುಂಬದವರೂ ಸಂಭ್ರಮಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಚಿತ್ರರಂಗದ ಹಲವು ಮಂದಿ ನರಸಿಂಹರಾಜು ಕುಟುಂಬ ವರ್ಗದೊಂದಿಗೆ ಸವಿನೆನಪು ಹಂಚಿಕೊಂಡಿದೆ. ಈ ವರ್ಷದ ವಿಶೇಷವೆಂದರೆ, ನರಸಿಂಹರಾಜು ಹುಟ್ಟುಹಬ್ಬದ ನೆನಪಿಗೆ ಇನ್ನು ಮುಂದೆ ಪ್ರತಿ ವರ್ಷ ಹೊಸ ಕಾರ್ಯಕ್ರಮ ನಡೆಸಲು ಕುಟುಂಬ ವರ್ಗ ತೀರ್ಮಾನಿಸಿದೆ.
ಹೌದು, “ಬೆಂಗಳೂರು ಇಂಟರ್ನ್ಯಾಷನಲ್ ಕಾಮಿಡಿ ಶಾರ್ಟ್ಸ್’ ಇನ್ ಮೆಮೋರಿ ಆಫ್ ನರಸಿಂಹರಾಜು’ ಹೆಸರಲ್ಲಿ ಅವಾರ್ಡ್ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ. ಈ ಕುರಿತು ವಿವರ ಕೊಡುವ ಅವರ ಮೊಮ್ಮಗ ನಿರ್ದೇಶಕ, ನಿರ್ಮಾಪಕ ಅರವಿಂದ್, “ಇಷ್ಟು ವರ್ಷ ನರಸಿಂಹರಾಜು ಅವರ ಹುಟ್ಟಹಬ್ಬದ ಆಚರಣೆ ಮತ್ತು ನೆನಪಷ್ಟೇ ಇರುತ್ತಿತ್ತು. ಆದರೆ, ಅವರ ನೆನಪು ಸದಾ ಇರಬೇಕು ಎಂಬ ಕಾರಣಕ್ಕೆ ಕಾಮಿಡಿ ಶಾರ್ಟ್ಸ್ ಫಿಲ್ಮ್ ಫೆಸ್ಟಿವಲ್ ನಡೆಸಲು ತೀರ್ಮಾನಿಸಲಾಗಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಚರ್ಚೆ ಆಗುತ್ತಿತ್ತು. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಈ ವರ್ಷದಿಂದ ಅದಕ್ಕೆ ಚಾಲನೆ ಕೊಡಲು ಕುಟುಂಬ ತೀರ್ಮಾನಿಸಿದೆ. ಈ ಮೂಲಕ ನರಸಿಂಹರಾಜು ಅವರ ಹೆಸರನ್ನು ಇನ್ನಷ್ಟು ಶೋಕೇಸ್ ಮಾಡಲು ಅನುಕೂಲವಾಗುತ್ತಿದೆ. ಭಾರತದಲ್ಲಿ ಕಾಮಿಡಿ ಶಾರ್ಟ್ ಫಿಲ್ಮ್ ಫೆಸ್ಟಿವಲ್ ನಡೆಸುತ್ತಿರುವುದು ಇದೇ ಮೊದಲು. 5 ರಿಂದ 30 ನಿಮಿಷ ಅವಧಿಯ ಕಾಮಿಡಿ ಶಾರ್ಟ್ ಫಿಲ್ಮ್ಗಳನ್ನು ಆಹ್ವಾನಿಸಿ, ಉತ್ತಮ ಹಾಸ್ಯ ಕಿರುಚಿತ್ರಗಳಿಗೆ ಪ್ರಶಸ್ತಿ ನೀಡುವ ಉದ್ದೇಶವಿದೆ.
ಈ ಮೂಲಕ ಕನ್ನಡ ಚಿತ್ರರಂಗವನ್ನೂ ಬೆಸೆಯುವ ಕೆಲಸವಾಗುತ್ತಿದ್ದು, ಆ ವರ್ಷದ ಬೆಸ್ಟ್ ಕಾಮಿಡಿ ಚಿತ್ರ, ಕಾಮಿಡಿ ಸಿನಿಮಾ ಡೈರೆಕ್ಟರ್, ಕಾಮಿಡಿ ಆ್ಯಕ್ಟರ್ ಅವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಇಲ್ಲಿ ಹೊಸಬರು ಮತ್ತು ಹಳಬರಿಗೂ ಅವಕಾಶವಿದೆ ಎಂದು ಹೇಳುವ ಅರವಿಂದ್, ಇನ್ನು, ಭಾರತದ ಎಲ್ಲಾ ಭಾಷೆ ಚಿತ್ರರಂಗದ ಮೇರು ಹಾಸ್ಯ ನಟರನ್ನು ಗುರುತಿಸಿ ಅವರಿಗೆ ನರಸಿಂಹರಾಜು ಅವರ ಹೆಸರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಬೇಕು ಎಂಬ ತೀರ್ಮಾನ ಮಾಡಲಾಗಿದೆ.
ಈಗಾಗಲೇ ಕಾಮಿಡಿ ಶಾರ್ಟ್ ಫಿಲ್ಮ್ಗಳ ಆಯ್ಕೆಗಾಗಿ ಒಂದು ಸಮಿತಿ ರಚನೆ ಇದ್ದು, ಅದರೊಂದಿಗೆ ನಮ್ಮ ಕುಟುಂಬವೂ ಸೇರಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಈ ನವೆಂಬರ್ನಲ್ಲೇ ಕಾಮಿಡಿ ಶಾರ್ಟ್ ಫಿಲ್ಮ್ ಫೆಸ್ಟಿವಲ್ಗೆ ಚಾಲನೆ ಸಿಗಲಿದೆ. ಜಕ್ಕೂರು ಬಳಿ ಇರುವ ಆಡಿಟೋರಿಯಂವೊಂದರಲ್ಲಿ ಈ ಕಾರ್ಯಕ್ರಮ ರೂಪಿಸಲು ಯೋಚಿಸಲಾಗುತ್ತಿದೆ ಎನ್ನುತ್ತಾರೆ ಅರವಿಂದ್.
ನರಸಿಂಹರಾಜು ಅವರು ನಮ್ಮ ತಾತ ಎನ್ನುವುದಕ್ಕಿಂತ ಹೆಚ್ಚಾಗಿ ಅವರೊಬ್ಬ ಒಳ್ಳೆಯ ಹಾಸ್ಯ ಕಲಾವಿದರು. ಇಂದಿಗೂ ಅವರು ಚಿತ್ರಗಳ ಮೂಲಕ ಜೀವಂತವಾಗಿದ್ದಾರೆ ಎಂದು ಹೇಳುತ್ತಾರೆ ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ