ಬಹದ್ದೂರ್ ಚೇತನ್ ಚಿತ್ರದಲ್ಲಿ ಧನ್ವೀರ್ ನಾಯಕ
Team Udayavani, Oct 25, 2018, 3:12 PM IST
ಕನ್ನಡದಲ್ಲಿ “ಬಹದ್ದೂರ್’, “ಭರ್ಜರಿ’ಯಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಬಹದ್ದೂರ್ ಚೇತನ್ ಸದ್ಯ ಶ್ರೀ ಮುರಳಿ ಅಭಿನಯದ “ಭರಾಟೆ’ ಚಿತ್ರದ ಭರದ ಚಿತ್ರೀಕರಣದಲ್ಲಿದ್ದಾರೆ. “ಭರಾಟೆ’ ಚಿತ್ರದ ಕೆಲಸಗಳು ಪೂರ್ಣಗೊಂಡು ಚಿತ್ರ ತೆರೆಗೆ ಬರೋದಕ್ಕೆ ಇನ್ನೂ ಅನೇಕ
ತಿಂಗಳುಗಳು ಬೇಕು. ಇವೆಲ್ಲದರ ನಡುವೆ ಚೇತನ್ ಅವರ ಮುಂದಿನ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಚರ್ಚೆ ಶುರುವಾಗಿದೆ. ಸಿಂಪಲ್ ಸುನಿ ನಿರ್ದೇಶನದ “ಬಜಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕ ನಟನಾಗಿ ಪರಿಚಯವಾಗುತ್ತಿರುವ ಧನ್ವೀರ್ ಗೌಡ ಅವರಿಗೆ
ಚೇತನ್ ನಿರ್ದೇಶನ ಮಾಡಲಿದ್ದಾರೆಂಬ ಸುದ್ದಿ ಹಬ್ಬಿದೆ.
ತಮ್ಮ ಪುತ್ರ ಧನ್ವೀರ್ಗಾಗಿ “ಬಜಾರ್’ ಚಿತ್ರವನ್ನು ನಿರ್ಮಿಸುತ್ತಿರುವ ತಿಮ್ಮೇಗೌಡ ಅವರೇ ತಮ್ಮ “ಭಾರತಿ ಫಿಲಂ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಈ ಹೊಸ ಚಿತ್ರವನ್ನು ನಿರ್ಮಿಸುವ ಯೋಜನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಚೇತನ್, “ಧನ್ ವೀರ್ಗೊಂದು ಸಿನಿಮಾ ಮಾಡುತ್ತಿರೋದು ನಿಜ. ಆ ಕುರಿತು ಈಗಾಗಲೇ ಮಾತುಕತೆಯಾಗಿದೆ.
ಆದರೆ, ಯಾವಾಗ ಎಂಬುದು ಇನ್ನೂ ಪಕ್ಕಾ ಆಗಿಲ್ಲ. ಎಲ್ಲವೂ “ಭರಾಟೆ’ ಮುಗಿದ ಮೇಲೆ ಅಂತಿಮವಾಗಲಿದೆ’ ಎನ್ನುವುದು ಚೇತನ್ ಮಾತು. ಇನ್ನು, “ಬಜಾರ್’ ಚಿತ್ರ ಚಿತ್ರೀಕರಣ ಮುಗಿಸಿದ್ದು, ಈಗ ಬಿಡುಗಡೆಯ ತಯಾರಿಯಲ್ಲಿದೆ.