ಅತೃಪ್ತ ಆತ್ಮದ ಓಡಾಟ ಶುರು
Team Udayavani, Mar 21, 2018, 11:29 AM IST
ಮತ್ತೆ ಹಾರರ್ ಸಿನಿಮಾಗಳ ಹವಾ ಶುರುವಾಗಿದೆ. ಈ ಮೂರು ತಿಂಗಳಿನಲ್ಲಿ ದೊಡ್ಡ ಮಟ್ಟದಲ್ಲಿ ಯಾವ ಹಾರರ್ ಸಿನಿಮಾವೂ ಪ್ರೇಕ್ಷಕರನ್ನು ಹೆದರಿಸಿಲ್ಲ. ಈಗ “ಅತೃಪ್ತ’ ಬರುತ್ತಿದೆ. ಹೆಸರು ಹೇಳಿದ ಮೇಲೆ ಇದೊಂದು ಹಾರರ್ ಸಿನಿಮಾವೆಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಈ ವಾರ ಬಿಡುಗಡೆಯಾಗುತ್ತಿದೆ.
ನಾಗೇಶ್ ಶ್ಯಾಲನೂರು ಈ ಚಿತ್ರದ ನಿರ್ದೇಶಕರು. ನಿರ್ದೇಶಕ ನಾಗೇಶ್ ಕೇವಲ ನಾಲ್ಕು ತಿಂಗಳಲ್ಲೆ ಒಂದು ಚಿತ್ರ ಮಾಡಿ ತೋರಿಸ್ತೀನಿ ಅಂತ ಚಾಲೆಂಜ್ ಮಾಡಿದರಂತೆ. ಹಾಗೆ ಚಾಲೆಂಜ್ ಮಾಡಿದ್ದರಿಂದಲೇ ಅವರು ಕೇವಲ 3 ತಿಂಗಳು 17 ದಿನದಲ್ಲಿ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ.ನಿರ್ಮಾಪಕ ರಘನಾಥರಾವ್ ಅವರಿಗೆ ಇದು ಮೊದಲ ಚಿತ್ರವಂತೆ.
ಚಿತ್ರ ಶುರುಮಾಡಿದಾಗ, ಹಣದ ಸಮಸ್ಯೆ ಇತ್ತು. ಆದರೆ, ಒಳ್ಳೇ ಕಥೆ, ಟೀಮ್ ಸಿಕ್ಕಿದ್ದರಿಂದ ಎಲ್ಲವೂ ಚೆನ್ನಾಗಿ ನಡೆಯಿತು. ನಿರ್ದೇಶಕರು ರಾತ್ರಿ-ಹಗಲು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಚಿತ್ರ ಮಾಡುವಾಸೆ ಇದೆ ಎಂಬುದು ಅವರ ಮಾತು. ಚಿತ್ರದಲ್ಲಿ ಸೌಂಡ್ ಎಫೆಕ್ಟ್ ಹಾಗೂ ಹಿನ್ನೆಲೆ ಸಂಗೀತ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆಯಂತೆ.
ಚಿತ್ರದಲ್ಲಿ ಅರ್ಜುನ್ ಯೋಗಿ ಹಾಗೂ ಶ್ರುತಿ ರಾಜ್ ನಾಯಕಿ. ನಾಯಕ ಅರ್ಜುನ್ ಅವರಿಗೆ ಇದು ಎರಡನೇ ಚಿತ್ರ. “ಏನೆಂದು ಹೆಸರಿಡಲಿ’ ಬಳಿಕ ಹಲವು ಕಥೆ ಕೇಳಿ, ಇದನ್ನು ಒಪ್ಪಿದರಂತೆ. ಕಥೆ ಕೇಳಿದಾಗ, ಮಿಸ್ ಮಾಡಬಾರದು ಖುಷಿಯಿಂದ ಮಾಡಿದ್ದಾರಂತೆ. ಈಗ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರ ಪ್ರೇಕ್ಷಕರ ಮನಸ್ಸು ಗೆಲ್ಲುತ್ತದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.