ಹೃದಯ ನಾಲಗೆ ಎರಡೂ ಒಂದೇ ಆಗಿತ್ತು
Team Udayavani, Nov 26, 2018, 11:40 AM IST
ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಕೂಡಾ ಅಂಬರೀಷ್ ಅವರ ನಿಧನದಿಂದ ದುಃಖೀತರಾಗಿದ್ದಾರೆ. ತಮ್ಮೊಂದಿಗಿನ ಅಂಬರೀಷ್ ಅವರ ಒಡನಾಟವನ್ನು ಮೆಲುಕು ಹಾಕುತ್ತಲೇ ದ್ವಾರಕೀಶ್ ಗದ್ಗದಿತರಾಗುತ್ತಾರೆ. “ಆತ ದಾನಶೂರ ಕರ್ಣ. ಅಂಬರೀಷ್ನಂತ ನೇರವ್ಯಕ್ತಿತ್ವದ ವ್ಯಕ್ತಿಯನ್ನು ನಾನು ನೋಡಿಲ್ಲ. ಸಹಾಯ ಮಾಡೋದರಲ್ಲಿ ಆತ ನಂಬರ್ ಒನ್.
ಅವನು ನನ್ನ “ಮಜ್ನು’ ಸಿನಿಮಾಕ್ಕೆ ಎಲ್ಲಾ ರೀತಿಯ ಸಹಾಯ ಮಾಡಿದ್ದಾನೆ. “ಜೈ ಕರ್ನಾಟಕ’ ಎಂಬ ಒಂದು ಸಿನಿಮಾವನ್ನು ನಾನು ತೆಗೆದೆ. ಅದರ ಸಂಭಾವನೆ ಕೂಡಾ ಆತ ಕೇಳಲಿಲ್ಲ. “ಚೆನ್ನಾಗಿ ಓಡಿ ನಿನಗೆ ಕಾಸು ಬಂದ ನಂತರ ಕೊಡು ಅದಕ್ಕೆ ಮುಂಚೆ ಏನ್ ಕೊಡೋದು ನೀನು’ ಎಂದು ಹೇಳುತ್ತಿದ್ದ. ಆತನ ಹೃದಯ ನಾಲಗೆ ಎರಡೂ ಒಂದೆ. ಕೆಟ್ಟಧ್ದೋ ಒಳ್ಳೆಯದೋ ಏನೇ ಆದರೂ ಅಲ್ಲೇ ಮಾತನಾಡಿ ಮುಗಿಸುತ್ತಿದ್ದ.
ಆತ ಕನ್ನಡ ಚಿತ್ರರಂಗದ ಒಬ್ಬ ಯಜಮಾನ ಎಂದರೂ ತಪ್ಪಾಗಲಾರದು. “ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದ ಪ್ರದರ್ಶನಕ್ಕೆ ಕರೆದಿದ್ದ. ನಾನು ಅವನು ಸೇರಿ ಒಂದು ಹಿಂದಿ ಸಿನಿಮಾ ಮಾಡಬೇಕಾಗಿತ್ತು. ಕಾರಣಾಂತರದಿಂದ ಅದು ಆಗಲಿಲ್ಲ. ನನಗೆ ತಿಳಿದ ಮಟ್ಟಿಗೆ ಅವನಿಗೆ ಶತ್ರುಗಳಿಲ್ಲ. ಅಂತಹ ವ್ಯಕ್ತಿತ್ವವನ್ನು ಅಂಬಿ ಹೊಂದಿದ್ದ’ ಎಂದು ಅಂಬರೀಷ್ ಅವರನ್ನು ನೆನಪಿಸಿಕೊಳ್ಳುತ್ತಾರೆ ದ್ವಾರಕೀಶ್.