ಆ್ಯಕ್ಷನ್ನತ್ತ ಧರ್ಮ ಕೀರ್ತಿರಾಜ್
Team Udayavani, Feb 14, 2019, 9:37 AM IST
ನಟ ಧರ್ಮ ಕೀರ್ತಿರಾಜ್ ಅಭಿನಯದ “ಚಾಣಾಕ್ಷ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದರ ಬೆನ್ನಲ್ಲೇ ಧರ್ಮ ಕೀರ್ತಿರಾಜ್, ಮತ್ತೂಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅಂದಹಾಗೆ, ಅವರು ಒಪ್ಪಿಕೊಂಡಿರುವ ಹೊಸ ಚಿತ್ರಕ್ಕೆ ಇನ್ನೂ ನಾಮಕರಣ ಮಾಡಿಲ್ಲ. ಆ ಚಿತ್ರವನ್ನು ರಾಜರತ್ನ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರಿಗೆ ಮೊದಲ ಚಿತ್ರ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ.
ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿದ್ದು, ಇಲ್ಲಿ ಕಮರ್ಷಿಯಲ್ ಅಂಶಗಳೊಂದಿಗೆ ಒಂದು ಸಂದೇಶವೂ ಇಲ್ಲಿರಲಿದೆ ಎಂಬುದು ಧರ್ಮಕೀರ್ತಿರಾಜ್ ಅವರ ಹೇಳಿಕೆ. “ಒಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಈ ಕಥೆಯಲ್ಲಿದೆ. ಕಥೆಯ ಬಗ್ಗೆ ಹೇಳುವುದಾದರೆ, ಒಬ್ಬ ಪೊಲೀಸ್ ಕಮೀಷನರ್ ಜೊತೆ ಚಿತ್ರದ ನಾಯಕ ಹೋರಾಡುವ ಕಥೆ ಇಲ್ಲಿದೆ. ಚಿತ್ರದಲ್ಲಿ ಅವರಿಬ್ಬರಿಗೂ ಒಂದು ರೀತಿಯ ಜುಗಲ್ಬಂಧಿ ನಡೆಯಲಿದೆ. ನನ್ನ ಇಷ್ಟು ದಿನಗಳಲ್ಲಿ ಬಂದಂತಹ ಚಿತ್ರಗಳ ಪೈಕಿ ಈ ಚಿತ್ರ ಹೊಸದಾಗಿ ಕಾಣಲಿದೆ. ಕಾರಣ, ಇಲ್ಲಿ ಭರ್ಜರಿ ನಾಲ್ಕು ಆ್ಯಕ್ಷನ್ ಇದೆ. ಚಿತ್ರದಲ್ಲಿ ಮಾಸ್ ಡೈಲಾಗ್ಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ. ನನ್ನ ಪಾತ್ರ ಕೂಡ ವಿಭಿನ್ನವಾಗಿದ್ದು, ಹೊಸ ಮ್ಯಾನರಿಸಂನಲ್ಲಿ ನಾನು ಕಾಣಿಸಿಕೊಳ್ಳಲಿದ್ದೆನೆ. ಇನ್ನು, ಹಾಡುಗಳು ಸಹ ಪಕ್ಕಾ ಕಮರ್ಷಿಯಲ್ ಆಗಿಯೇ ಇರಲಿವೆ.
ಟಪ್ಪಾಂಗುಚ್ಚಿ ಸಾಂಗ್ ಸೇರಿದಂತೆ ಕಥೆಗೆ ಪೂರಕವಾಗಿರುವಂತಹ ಹಾಡುಗಳು ಚಿತ್ರದಲ್ಲಿವೆ. ಇನ್ನು, ಪ್ರೀತಿ, ಗೆಳೆತನ ಮತ್ತು ಸೆಂಟಿಮೆಂಟ್ ಚಿತ್ರದಲ್ಲಿದೆ. ಸದ್ಯಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ’ ಎಂದಷ್ಟೇ ಹೇಳುತ್ತಾರೆ ಅವರು. ಈ ಚಿತ್ರವನ್ನು ವಲ್ಲಿ ಮತ್ತು ಸಿದ್ಧರಾಮಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಶಂಕರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ಕೃಪಾಕರ್ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ರಾಕ್ಲೈನ್ ಸುಧಾಕರ್ ಸೇರಿದಂತೆ ಇನ್ನಿತರೆ ಕಲಾವಿದರು ನಟಿಸಲಿದ್ದಾರೆ. ಮಾರ್ಚ್ 18ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಬೆಂಗಳೂರು ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಯಲಿದೆ.